Tuesday, January 27, 2009

ಕರುನಾಡ ಕಂಪು..

ಕರುನಾಡ ಕಂಪು..


-ಗುರು ಬಬ್ಬಿಗದ್ದೆ


ನಮ್ಮ ನಾಡು, ನಮ್ಮ ನುಡಿ, ನಮ್ಮ ಭಾಷೆ, ನಮ್ಮ ನೆಲ

ಕನ್ನಡದ ಸಿರಿಗಂಪು ಪಸರಿಸಲಿ ಉದ್ದಗಲ ೧


ಬೇಲೂರಿನ ಶಿಲ್ಪಕಲೆ, ಹಳೆಬೀಡಿನ ಕೆತ್ತನೆ

ಶೃಂಗೇರಿಯ ಶಾರದೆಗೆ, ಶಿರಬಾಗಿ ವಂದನೆ

ಶ್ರೀರಂಗನ ಸನ್ನಿಧಿ, ಮೈಸೂರಿನ ಅರಮನೆ

ಕೃಷ್ಣರಾಜಸಾಗರದ, ಸುಮನೋಹರ ನರ್ತನೆ ೨


ಕಾವೇರಿ, ಕಾಳಿಯು, ತುಂಗಭದ್ರೆ ನಾಲೆಯು

ಮಲೆನಾಡಿನ ತಪ್ಪಲಲಿ ಹಚ್ಚ ಹಸಿರು ಛಾಯೆಯು

ಜೋಗದ ಸಿರಿವೈಭವ, ಖಗಸಂಕುಲ ಕಲರವ

ಐಹೊಳೆ ಬಾದಾಮಿಯ, ನೆನಪುಳಿಯುವ ಅನುಭವ ೩


ವಿಜ್ಞಾನದ ದೇಗುಲ, ತಂತ್ರಜ್ಞಾನದಾಲಯ

ಎಲ್ಲರನೂ ಕೈ ಬೀಸಿ ಸೆಳೆವ ಪ್ರೇಮದಾಲಯ

ಅತಿಥಿ ದೇವರೆಂಬ ನಮ್ಮ ಮನದಿ ಇರಲಿ ಆಶಯ

ನಾಡಿಗಾಗಿ ದುಡಿಯುತಲಿ ಬದುಕು ನೀ ಮಹಾಶಯ ೪


ರನ್ನ ಪಂಪ ಮಾಸ್ತಿ ಬೇಂದ್ರೆ ಮೆರೆಸಿದಾ ಭೂಮಿಯು

ವರನಟನ ಕಲೆಯ ಬಲೆಗೆ ಬೆರಗಾದ ಊರಿದು

ಬನವಾಸಿ, ಧರ್ಮಸ್ಥಳ, ಭಗವಂತನ ತವರಿದು

ನಮ್ಮನೆಲ್ಲ ಉಳಿಸಿ ಬೆಳೆಸೋ ಕನ್ನಡದ ನಾಡಿದು ೫

1 comment:

ಮನಸು said...

ಕರುನಾಡ ಕಂಪು ಚೆನ್ನಾಗಿ ವಿಶ್ಲೇಷಿಸಿದ್ದೀರಿ ನಿಜಕ್ಕೂ ಕರುನಾಡು ಚೆಂದದ ಬೀಡು , ಕವಿಗಳ ನೆಲೆ ಬೀಡು...

ಹೀಗೆ ಬರೆಯುತ್ತಲಿರಿ ಅಭಿನಂದನೆಗಳೊಂದಿಗೆ....

ವಂದನೆಗಳು....