''ಕುರುಡು ಕಾಂಚಾಣ ಕುಣಿಯುತಲಿತ್ತು''
ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.
ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.
ದಿನದ ಊಟದ ಖರ್ಚು, ಉಡುವ ಬಟ್ಟೆಯ ವೆಚ್ಚ , ನಲಿದು ಆಡುವ ಮಕ್ಕಳ ಆಸೆ ಇವಿಷ್ಟನ್ನು ದೊರಕಿಸಿಕೊಡುವಷ್ಟು ಹಣ ನಮ್ಮಲ್ಲಿದ್ದರೆ ನಾವೇ ಸುಖಿಗಳು. ಕಾರಣ ಹಣ ಹೆಚ್ಚಾದಂತೆ ಇನ್ನೂ ಹೆಚ್ಚು ಮಾಡುವ ತವಕ. ಕಡಿಮೆ ಸಂಬಳ ಬರುವವನಿಗೆ ಹೆಚ್ಚು ಸಂಬಳ ಪಡೆಯುವ ಆಸೆ, ಹೆಚ್ಚು ಸಂಬಳ ಪಡೆಯುವಗೆ ಇನ್ನೂ ಹೆಚ್ಚು ಪಡೆಯುವ ಆಸೆ. ಮಾನವನಿಗೆ ತ್ರಪ್ತಿ ಎನ್ನುವುದು ಇರುವುದೇ ಇಲ್ಲ. ಸಣ್ಣ ಟಿ ವಿ ತೆಗೆದುಕೊಂಡವನಿಗೆ ದೊಡ್ಡ ಟಿ ವಿ ಬೇಕು, ದೊಡ್ಡ ಟಿ ವಿ ತೆಗೆದುಕೊಳ್ಳುವವವನಿಗೆ ಫ್ಲಾಟ್ ಟಿ ವಿ ಬೇಕು, ಹೀಗೆ ಪ್ರತಿಯೊಂದರಲ್ಲೂ ಮನುಷ್ಯ ಇದ್ದಿದ್ದರಲ್ಲಿ ಸಂತ್ರಪ್ತನಾಗುವುದೇ ಇಲ್ಲ. ಆ ಅಸಂತ್ರಪ್ತ ಮನಸ್ಸೇ ಜಗತ್ತಿನ ಅನೇಕ ಅವಘಡಗಳಿಗೆ ಕಾರಣವೂ ಕೂಡಾ.
''ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ''
ಎಂಬ ಹಾಡು ಅಂದಿಗೂ ಇಂದಿಗೂ ಎಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?
ಉಡುಪಿಯ ಆ ದಿನಗಳಲ್ಲಿ ಆದದ್ದು ಅದೇ, ಮೊದಲ ಗಳಿಕೆ ಎಂದಿಗೂ ವಿಶೇಷ ತ್ರಪ್ತಿ ನೀಡುತ್ತದೆ. ಆದರೆ ಅಲ್ಲಿ ಗಳಿಕೆ ನನ್ನ ಉದ್ದೇಶ ಆಗಿರಲಿಲ್ಲ. ಕಲಿಕೆ ಉದ್ದೇಶವಾಗಿತ್ತು. ಮೊದಲ ''ಪೆಟ್ಟು'' ಹೋಗಿ ಬಂದ ನಂತರ ಬಡಿಸುವುದರಲ್ಲಿ ವಿಶ್ವಾಸ ವೂ ಬಂತು. ಮೊದಲ ಪೆಟ್ಟು, ಎರಡಾಯಿತು, ಎರಡು ಮೂರಾಯಿತು, ಮೂರು ನಾಲಕ್ಕು......... ಹೀಗೆ ಪೆಟ್ಟಿಗೆ ಹೋಗಲು ಆರಂಬಿಸಿದೆ. ಹೋಗಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗುವಷ್ಟರ ಮಟ್ಟಿಗೆ ಅದು ಬೆಳೆಯಿತು. ಬದುಕೇ ಹಾಗೇ, ಅದನ್ನು ಎಷ್ಟರ ಮಟ್ಟಿಗೆ ಬೇಕೋ ಅಷ್ಟರ ಮಟ್ಟಿಗೆ ಇಟ್ಟರೆ ಸ್ವರ್ಗ, ಇಲ್ಲದಿರೆ ಆ ಬದುಕೇ ಕುತ್ತಿಗೆಯೇ ಮೇಲೆ ಹತ್ತಿ ಕುಣಿಯಲು ಆರಂಬಿಸುತ್ತದೆ. ಅದಕ್ಕೆ ಇರಬೇಕು, ಸಾಧು ಸಂತರು ಸತತ ಯೋಗ ಧ್ಯಾನ ದ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರು ಎನಿಸುತ್ತದೆ.
''ಪೆಟ್ಟು'' ಮೊದ ಮೊದಲು ಸುಂದರವಾಗಿಯೇ ಇತ್ತು. ಮೊದಲು ಹಣ ಬರಲು ಆರಂಬಿಸಿದಾಗ ಹಾಗೇ ಆಗುತ್ತದೆ ಅಲ್ಲವೇ? ಆದರೆ ಅದೊಂದು ದಿನ ಮಾತ್ರ ಪೆಟ್ಟಿಗೆ ಬಿದ್ದಿತ್ತು ದೊಡ್ಡ ''ಪೆಟ್ಟು''. ಕಾಲೇಜಿನಲ್ಲಿ ಪ್ರತಿದಿನ 12 -30 ಗೆ ಕ್ಲಾಸ್ ಮುಗಿಯುತ್ತಿತ್ತು. ಮತ್ತೆ ಮಧ್ಯಾನ್ಹ 2 ಘಂಟೆಗೆ ಆರಂಬವಾಗುತ್ತಿತ್ತು. ಆ ದಿನವೂ 12 -30 ಗೆ ಕ್ಲಾಸ್ ಮುಗಿಸಿ ಊಟಕ್ಕೆ ಹೋಗುವ ಪ್ಲಾನ್ ಎಂದಿನಂತೆಯೇ ಇತ್ತು. ಪ್ರತಿದಿನ 12 -30 ಕ್ಕೆ ಊಟಕ್ಕೆ ಕ್ರಷ್ಣ ಮಠ ಕ್ಕೆ ಹೋಗುತ್ತಿದ್ದೆವು. ಆದರೆ ಆ ದಿನ ಬೆಳಿಗ್ಗೆ ಪೆಟ್ಟಿನ ಸ್ನೇಹಿತರು ಬಂದು ಇಂದು ಮಧ್ಯಾನ್ಹ ಪೆಟ್ಟು ಇದೆ. 12 -30 ಕ್ಕೆ ಹೋಗಿ 2 ಘಂಟೆಗೆ ಬರುವುದು ಎಂದರು. ನಾನು ನನಗೆ ಎರಡು ಘಂಟೆಗೆ ರಸಾಯನ ಶಾಸ್ತ್ರ (Chemistry) ದ ಕ್ಲಾಸ್ ಇದೆ, ಬರಲು ಆಗುವುದಿಲ್ಲ ಎಂದೆ. ಆದರೆ ಅವರು ಕೇಳಬೇಕಲ್ಲ. 12 -30 ಗೆ ಹೊರಟೆ ಬಿಟ್ಟಿತ್ತು ದಂಡು.
ಮದುವೆ ಮನೆ, ವಧು ವರರು ಹಾರ ಬದಲಾಯಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದರು. ಬಂದ ಬಂಧು ಬಳಗ ಅವರನ್ನೆಲ್ಲ ಹರಸಿ ಊಟಕ್ಕೆ ಹೋಗುತ್ತಿದ್ದರು. ನಮ್ಮ ಕೆಲಸ ಆರಂಭವಾಗುವುದೇ ಈಗ, ನಾವು ಬಡಿಸಲು ಆರಂಬಿಸಿದೆವು. ಕೆಲವೊಮ್ಮೆ ಮುಂದೆ ಆಗುವ ಸಮಸ್ಯೆ ಮೊದಲೇ ತಿಳಿಯುತ್ತದಂತೆ. ಆ ದಿನ ಬಡಿಸುವಾಗಲೂ ಏನೋ ಒಂದು ತರ ಬೇರೆಯೇ ತರನಾದ ವಿಚಿತ್ರ ಅನುಭವ ಆಗುತ್ತಿತ್ತು. ಇದೇಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿದರೂ ಹೊಳೆಯಲಿಲ್ಲ. ಸಮಯ ಹೋಗುತ್ತಿತ್ತು. 2 ಘಂಟೆ ಸಮೀಪಿಸುತ್ತಿತ್ತು. ರಸಾಯನ ಶಾಸ್ತ್ರ ಕ್ಲಾಸ್ ಇದೆ ಬೇರೆ. ಅದು ರಸಾಯನ ಶಾಸ್ತ್ರದ ಅದ್ಭುತ ಪ್ರೊಫೆಸರ್ ಕ್ಲಾಸ್ ಆಗಿತ್ತು. ಮಿಸ್ ಮಾಡಿಕೊಳ್ಳೋ ಚಾನ್ಸ್ ಇರಲೇ ಇಲ್ಲ,
ಆದರೆ ಬಂದ ಮೇಲೆ ಬಡಿಸಿ ಮುಗಿಸದೆ ಹೋಗೋ ಚಾನ್ಸ್ ಕೂಡಾ ಇರಲಿಲ್ಲ. ಹಾಗೇ ಸಾಲಿನಲ್ಲಿ ಬಡಿಸುತ್ತ ಬಡಿಸುತ್ತ ಹೋಗುತ್ತಿದ್ದವನಿಗೆ ಎದೆ ಧಸಕ್ ಅಂದಿತು ಒಮ್ಮೆ. ತಲೆ ಎತ್ತಿ ನೋಡುತ್ತೇನೆ, ರಸಾಯನ ಶಾಸ್ತ್ರದ ಸರ್ವ ಪ್ರೊಫೆಸರ್ ಗಳೂ ಸಾಲಿನಲ್ಲಿ ಸಪ್ತ ಋಷಿಗಳು ತಪಸ್ಸಿಗೆ ಕುಳಿತ ಹಾಗೇ ಕುಳಿತಿದ್ದಾರೆ. ಕೈಯಲ್ಲಿ ರಸಂ (ಸಾರು), ಎದುರುಗಡೆ ರಸಾಯನ ಶಾಸ್ತ್ರ, ಮೈಯೆಲ್ಲಾ ಬೆವರಿನ ರಸ ಒಟ್ಟಿನಲ್ಲಿ ಭೂಮಿ, ಆಕಾಶ ಒಟ್ಟಿಗೆ ಬೆರೆತು ತಲೆಯ ಮೇಲೆ ಬಿದ್ದ ಅನುಭವ. ಅದರಲ್ಲೂ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಒಬ್ಬರು ಪ್ರೊಫೆಸರ್ ಇದ್ದರು. ಅವರು ಹಾಸ್ಯ ಮಾಡುತ್ತಲೇ ಚಾಟಿ ಬೀಸುವ ಪ್ರವ್ರತ್ತಿಯವರು. ನಾ ಕಂಡ ಅತ್ಯುತ್ತಮ ಪ್ರೊಫೆಸರ್ ಗಳಲ್ಲಿ ಒಬ್ಬರು ಅವರು.
ನನ್ನ ನೋಡಿ, ಸಮಯ ನೋಡಿದರು, ಮತ್ತೆ ನನ್ನ ನೋಡಿದರು, ನನಗೆ ವಿಚಿತ್ರ ತಳಮಳ. ಪೆಟ್ಟಿಗೆ ಬಂದು ಅಂದು ದೊಡ್ಡ ''ಪೆಟ್ಟು'' ಬಿದ್ದಿತ್ತು. ಅದಕ್ಕೆ ಮೊದಲು ಹೇಳಿದ್ದು, ಹಣ ಬೇಕು ನಿಜ, ಅತಿಯಾದ ಹಣ ಒಳ್ಳೆಯದಲ್ಲ ಎಂದು. ಪಾಪ, ನನಗೇನು ಗೊತ್ತಿತ್ತು ನಾನು ಹೋಗಿದ್ದು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯ ಮದುವೆಗೆ ಎಂದು :)
ಮರುದಿನ ಕ್ಲಾಸ್ ನಲ್ಲಿ ಅವರು ರಸಾಯನ ಶಾಸ್ತ್ರ ಕಲಿಸುವ ಬದಲು ರಸಂ ಮಾಡುವ ವಿಧಾನ, ಬಡಿಸುವ ವಿಧಾನ ಗಳ ಬಗೆಗೆ ಹೇಳಿದರು, ಕ್ಲಾಸ್ ನ ಉಳಿದ ವಿಧ್ಯಾರ್ಥಿಗಳಿಗೆ ಇದ್ಯಾಕೆ ರಸಂ ಬಗ್ಗೆ ರಸಾಯನ ಶಾಸ್ತ್ರದ ಪ್ರೊಫೆಸರ್ ಮಾತನಾಡುತ್ತಿದ್ದಾರೆ ಎಂದು. ನನಗೆ ಮಾತ್ರ ರಸಂ ಬೇಗ ಮುಗಿದು ಹೋದರೆ ಸಾಕೆಂದು ಅನ್ನಿಸುತ್ತಿತ್ತು. ಆ ಪ್ರೊಫೆಸರ್ ಗೆ ನನ್ನ ಮೇಲೆ ಇದ್ದ ವಿಶೇಷ ಪ್ರೀತಿಯಿಂದ ಅವರು ಒಂದು ತಾಸು ರಸಂ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅದರ ನಂತರ ಪೆಟ್ಟು ಕೇವಲ ವಾರಾಂತ್ಯದ ಕೆಲಸವಾಗಿತ್ತೆ ಹೊರತು ವಾರದ ಮಧ್ಯದ ಕೆಲಸವಾಗಿರಲಿಲ್ಲ.
ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ ಅಂದು ನನ್ನೊಂದಿಗೆ ಪೆಟ್ಟಿಗೆ ಬರುತ್ತಿದ್ದ ಎಷ್ಟೋ ಮಂದಿ ಅಂದಿನ ಕ್ಷಣಿಕ ಗಳಿಕೆಯನ್ನೇ ಮಹಾ ಗಳಿಕೆ ಎಂದು ತಿಳಿದು ಕಲಿಯುವುದ ಅರ್ಧ ದಲ್ಲೇ ಬಿಟ್ಟು ಇಂದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಸ್ವಾಭಿಮಾನ, ಸ್ವಂತ ದುಡಿಮೆ ಎಲ್ಲವೂ ಅವಶ್ಯ ನಿಜ, ಆದರೆ ಅದು ಬದುಕನ್ನೇ ನುಂಗಬಾರದು. ನನ್ನೊಂದಿಗೆ ಪೆಟ್ಟಿಗೆ ಬಂದ ಕೆಲವು ಸ್ನೇಹಿತರು ಇಂದು ಬೆಂಗಳೂರಿನಲ್ಲಿ Chartered Accountant ಆಗಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯ ಹುದ್ದೆಯಲ್ಲಿದ್ದಾರೆ. ಪ್ರತಿ ಸಲ ಬೆಂಗಳೂರಿಗೆ ಹೋದಾಗ ಅವರನ್ನೆಲ್ಲ ಭೆಟ್ಟಿಯಾಗುತ್ತೇನೆ. ಸಾಹಸಮಯ ಬದುಕಿನ ಉದಾಹರಣೆಯಂತೆ ಇರುವ ಅವರ ಜೀವನ ದ ಮೇಲೆ ನನಗೆ ಬಹಳ ಹೆಮ್ಮೆಯಿದೆ, ಅಂತಹ ಸ್ನೇಹಿತರ ಪರಿಚಯ ಈ ಬದುಕಿಗೆ ಸಿಕ್ಕ ಬಹುದೊಡ್ಡ ಆಸ್ತಿ.
ನನ್ನ ಬದುಕಿನೊಂದಿಗೆ ಹೆಜ್ಜೆ ಹಾಕಿದ ನನ್ನ ಬದುಕಿನ ಪ್ರತಿ ಘಟ್ಟದಲ್ಲೂ ನೋವಿಗೆ ಸಾಂತ್ವನ ನೀಡುವ ತಾಯಿಯಂತೆ, ನಲಿವಿಗೆ ಹುರಿದುಂಬಿಸುವ ಅಣ್ಣನಂತೆ, ಸಾಧನೆಗಳಿಗೆ ಪ್ರೋತ್ಸಾಹಿಸುವ ತಂದೆಯಂತೆ, ತಪ್ಪಿದಲ್ಲಿ ತಿದ್ದುವ ಸ್ನೇಹಕ್ಕೆ ಅರ್ಥವಾದ ಗೆಳೆಯನೊಬ್ಬನ ಪ್ರೀತಿ ಉಡುಪಿಯಲ್ಲಿ ಅಷ್ಟೇ ಅಲ್ಲ ನನ್ನ ಬದುಕಿನಲ್ಲಿಯೇ ಮರೆಯಲಾರದ್ದು. ಮುಂದೆ ಅವನ ಬಗ್ಗೆ ಬರೆಯುತ್ತೇನೆ.
ಮತ್ತೆ ಸಿಗುತ್ತೇನೆ
ನಿಮ್ಮವ
ಗುರು
ಮೊದಲ ಹಾಗೂ ಎರಡನೇ ಭಾಗ ಓದದವರು ಕೆಳಗೆ ಕ್ಲಿಕ್ ಮಾಡಿ ಓದಿ
ಬದುಕಿನ ಪುಟಗಳಿಂದ http://gurumurthyhegde.blogspot.com/2011/01/1.html ಭಾಗ 1
ಅದು ಕೇವಲ ೫೦ ರೂಪಾಯಿ ಆಗಿರಲಿಲ್ಲ http://gurumurthyhegde.blogspot.com/2011/02/50.html ಭಾಗ 2