Monday, December 5, 2011

ಮದುವೆಯಾಗಿ 4 ವರುಷ, ನೋಡಿರಣ್ಣ ಹೇಗಿದೆ....





ಮನದ ಗೆಳತಿಗೆ,
ಮನೆಯಂಗಳದಿ ಬೆಳದಿಂಗಳಿಗೆ ಚಂದಿರನೆ ಬರಬೇಕಾಗಿಲ್ಲ, ಮನದಂಗಳದಿ ಬೆಳಗುವ ಚಂದಿರಗೆ ನಗುವೊಂದೇ ಸಾಕಲ್ಲ. ನಮ್ಮಿಬ್ಬರ ಮನೆಯಂಗಳದ, ಮನದಂಗಳದ ಚಂದಿರ ಆಗಲೇ ಬೆಳೆಯುತ್ತಿದ್ದಾನೆ, ಅವನ ನಗು, ಅವನ ಅಳು, ಅವನ ನೋವು, ನಲಿವು ಎಲ್ಲವು ಕಣ್ಣೆದುರಿಗೆ ಸುಳಿಯುತ್ತಿದೆ. ಸಂಭ್ರಮಕ್ಕೆ ಎಣೆಯುಂಟೆ ಗೆಳತಿ.....

4  ವರುಷದ ಹಿಂದೆ 6  ನೆ ಡಿಸೆಂಬರ್ ಗೆ ಹಸೆಮಣೆ ಏರಿದ್ದ ನಿನಗೆ ತಾಳಿ  ಕಟ್ಟಿದ್ದೆ. ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ ನೋಡು, ಇಬ್ಬರು ನಕ್ಕಿದ್ದು, ನಕ್ಕಾಗ ನೆನಪಿಗೆ ಬಂದ ಆ ಹಾಡು...

''ನೆನಪಿದೆಯೇ ಗೆಳತಿ , ನಿನಗೆ ನೆನಪಿದೆಯೇ?
ನಾವಿಬ್ಬರೂ ಬಂದು, ನದಿಯ ದಡದಾಗೆ ನಿಂದು ''

ಎಲ್ಲವೂ ಇಂದು ಮನದ ಅಂಚಿನಲ್ಲಿ ಸುಳಿದಿದೆ. ನಿನ್ನೊಂದಿಗೆ ಎಷ್ಟು ನಕ್ಕಿದ್ದೇನೆ ಹಾಗೆಯೇ ಜಗಳ ಕೂಡಾ ಆಡಿದ್ದೇವೆ. ಸರಸ ವಿರಸ ಇರದ ಬದುಕು ಬದುಕೆನೇ ಗೆಳತಿ....ಪ್ರತಿ ಜಗಳಕ್ಕೂ ಒಂದು ಅದ್ಭುತ ಬೆಸೆಯುವ ಶಕ್ತಿಯಿದೆ. ಪ್ರತಿ ನಗುವಿಗೂ ಒಂದು ಅದ್ಭುತ ಜೀವ ನೀಡುವ ಚೈತನ್ಯವಿದೆ. ಆ 4  ವರುಷಗಳು ಹೇಗೆ ಕಳೆದವೋ ಗೊತ್ತಾಗಲೇ ಇಲ್ಲ. ಇಂದು ಮದುವೆಯ 4  ನೆ ವರುಷದ ಹರುಷಕ್ಕೆ ಸಾಕ್ಷಿ ಆಗುತ್ತಿದ್ದೇವೆ.

4  ನೆ ವರುಷದಲ್ಲಿ ಬದುಕಿಗೆ ಬೆಳಕಂತೆ ಅಭಿನವ ಬಂದಿದ್ದಾನೆ. ಅವನ ಲಾಲನೆ ಪಾಲನೆಯಲ್ಲಿ ನೀನು ನಿರತಳಾಗಿ ನನ್ನಿಂದ ದೂರ ದಲ್ಲಿ ಇದ್ದೀಯ. ಇಂದು ನಮ್ಮಿಬ್ಬರ ಮದುವೆಯ 4  ನೆ ವರುಷದ ಸಂಭ್ರಮಕ್ಕೆ ನೀನಿಲ್ಲ. ಒಬ್ಬನೇ ಕುಳಿತು ನಿನ್ನ ದಾರಿ ಕಾಯುತ್ತಿದ್ದೇನೆ. ನೀ ಬರದ ಈ ದಿನಕ್ಕೆ ಎಲ್ಲಿಯ ಮೆರಗು ಹೇಳು?

ಈ ಪತ್ರ ನಿನಗಾಗಿ....

''ಪತ್ರ ಬರೆಯಲ ಗೆಳತಿ, ಚಿತ್ರ ಬಿಡಿಸಲ,
ಹೇಗೆ ಹೇಳಲಿ ನನ್ನ ಎದೆಯ ತಳಮಳ''

4  ನೆ ವರುಷದ ಸಂಭ್ರಮಕ್ಕೆ ನಿನಗೆ ಹಾರ್ದಿಕ ಶುಭಾಶಯಗಳು. 4  ನೆ ವರುಷಕ್ಕೆ ''ಅಭಿನವ್'' ಕೊಡುಗೆ ಆಗಿ ಸಿಕ್ಕಿದ್ದಾನೆ, ಅದಕ್ಕೆ ನಾನು ನಿನಗೆ ಋಣಿ.

ಈ 4  ವರುಷಗಳಲ್ಲಿ ನಿನ್ನ ಮನಸನ್ನು ನಗಿಸಿದ್ದೆಷ್ಟೋ ಅಷ್ಟೇ ನೋಯಿಸಿದ್ದೇನೆ. ಕ್ಷಮಿಸುವೆಯಲ್ಲ ಗೆಳತಿ....

ನಿನ್ನ ದಾರಿ ಕಾಯುತ್ತಿದ್ದೇನೆ

ಈ ದಿನದ ಸಂಭ್ರಮಕ್ಕೆ ಶುಭಾಶಯಗಳು.

ನಿನ್ನ

ಗೆಳೆಯ

Monday, October 3, 2011

ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು...

ಬದುಕಿನ ತುಂಬಾ ನೋವುಗಳಿವೆ, ಆಸೆಗಳಿವೆ, ಕೊಳಕು ಮನಸುಗಳಿವೆ, ಮೋಸದ ಮುಖಗಳಿವೆ. ಯಾರನ್ನು ನಂಬುವುದು, ಯಾರನ್ನು ಮೆಚ್ಚುವುದು, ಮುತ್ತುಗಳ ಆಸೆಯಲ್ಲಿ ಎಲ್ಲರೂ ಮತ್ತೇರಿದಂತೆ ನಶೆಯಲ್ಲಿ ಮುಳುಗಿದ್ದಾರೆ. ಎಷ್ಟು ಹಣ ಇದ್ದರೂ ಸುಖವಿಲ್ಲ. ಎರಡಗಲ ಭೂಮಿಯಲ್ಲಿ ಮಣ್ಣಾಗುವ ದೇಹವಿದು, ಅಂಥಹ ದೇಹ ಮಣ್ಣಾಗುವ ಮುನ್ನ, ಬಾಯಿ ತುಂಬಾ ನಗಲು ಕೂಡಾ ಹಿಂದೆ ಮುಂದೆ ನೋಡುವ ನಾವು ಸಾಧಿಸುವುದಾದರೂ  ಏನನ್ನು? 

ಇಲ್ಲಿ ಸಖ ತನ್ನ ಸಖಿಗೆ ಹೇಳುತ್ತಿದ್ದಾನೆ,  ನಿನ್ನ ಮುಖದಲ್ಲಿ ನನಗೆ ನಗು ಕಂಡರೆ ಅದಕ್ಕೆ ಕಾರಣ ನಾ ಹುಡುಕುವುದಿಲ್ಲ, ನಿನ್ನ ಸುಂದರ ಮಾತುಗಳಿಗೆ ನನಗೆ ಟಿಪ್ಪಣಿ ಬೇಕಾಗಿಲ್ಲ, ಆದರೆ ನೀನು ಬಿಕ್ಕಳಿಸದಿರು ಗೆಳತಿ, ಅದು ನನಗೆ ಹಿಂಸೆ ನೀಡುತ್ತದೆ. ಬತ್ತದ ಅದೆಷ್ಟೋ ನದಿಗಳು, ಅವುಗಳ ದಂಡೆಯಲ್ಲಿ ಬೆಳೆಯ ಬೆಳೆಯುತ್ತ ಇರುವ ಅದೆಷ್ಟೋ ಜನರಿದ್ದಾರೆ. ಎಲ್ಲೆಡೆ ಭತ್ತದ ಬಿತ್ತನೆ ಮುಗಿದು ತೆನೆ ಹಸನಾಗಿ ತೋರುತ್ತಿದೆ, ಮತ್ತೆ ಚಿಂತೆ ಬೇಡ, ಸದಾ ನಗುವಿರಲಿ ಮುಖದಿ, ಎನ್ನುತ್ತಿದ್ದಾನೆ. ಮೇಲುನೋಟಕ್ಕೆ ಇದು ಕೇವಲ ಗೆಳತಿಯ ಸಮಾಧಾನ ನೀಡುವ ಗೆಳೆಯನ ಪ್ರೀತಿಯೇ ಆದರೂ ಇದು ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಇಲ್ಲಿ ಬತ್ತದ ನದಿಗಳೆಂದರೆ, ''ಮನಸು''. ಬಿತ್ತಿದ ಬೆಳೆ ''ಪ್ರೀತಿ''. ಹುಟ್ಟಿ ನಳ ನಳಿಸುತ್ತಿರುವ ತೆನೆಗಳೆಂದರೆ ''ನಾಳೆಯ ಕಂದಮ್ಮಗಳು''. ಅವುಗಳಿಗೆ ಸರಿಯಾದ ನೀರಿನ ಪೋಷಣೆ ಸಿಕ್ಕರೆ ನಾಳಿನ ಉತ್ತಮ ಫಸಲಿಗೆ ಚಿಂತಿಸುವ ಅಗತ್ಯವಿಲ್ಲ. ಹಾಗೆಯೇ ಪ್ರೀತಿ, ನಗು ತುಂಬಿದ್ದರೆ ಅಲ್ಲಿ ಬಿಕ್ಕಳಿಸುವ ಪ್ರಮೇಯವಿಲ್ಲ ಎಂದು ತನ್ನ ಸಖಿಗೆ ಪ್ರಿಯ ಸಖ ಹೇಳುತ್ತಿದ್ದಾನೆ.




ನಿನ್ನ ನಗು ಕಂಡಾಗ ಕಾರಣವು ಬೇಕಿಲ್ಲ
ಅಂದದ ಮೊಗದಲ್ಲಿ, ಗೆರೆಗಳೇಕೆ
ಅಕ್ಕರೆಯ ನುಡಿಗಳಿಗೆ ಒಕ್ಕಣಿಕೆ ಬೇಕಿಲ್ಲ
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಮುತ್ತಿನ ಮಾತುಗಳ ಮಾಲೆಯ ಹೆಣೆಯುವರು
ಕಿತ್ತಾಡುತಿಹರೆಲ್ಲ ಜಗದ ಒಳಗೆ
ಮುತ್ತುಗಳ ಆಸೆಯಲಿ ಮತ್ತೇರಿಹರೆಲ್ಲ
ಬಿಕ್ಕಳಿಸು ಗೆಳತಿ ಸುಖವು ಬೇಕೇ?


ಬತ್ತದ ನದಿಗಳಿವು ಬಿತ್ತುತಿರು ಬೆಳೆಯ
ಹೊತ್ತಲ್ಲದೊತ್ತಿನಲಿ ಹಸನು ಹಸನು
ಬಿತ್ತಿರುವ ಭತ್ತದ ತೆನೆಗಳಿವು ಎಲ್ಲೆಡೆಯು
ಬಿಕ್ಕಳಿಸದಿರು ಗೆಳತಿ, ಚಿಂತೆಯೇಕೆ?

ಅಡಿಯಗಲ ಭೂಮಿಯಲಿ ಮಣ್ಣಾಗುವ ಮುನ್ನ
ಮನದಗಲ ನಗುವಿಗೆ ಸುಂಕ ಯಾಕೆ?
ನಿನ್ನ ನಗುವಿನಲೆನಗೆ ಕಾರಣವು ಬೇಕಿಲ್ಲ 
ಮಗುವಿನ  ಮೊಗವಿರಲಿ, ಬದುಕಿರುವುದ್ಯಾಕೆ?

Sunday, September 25, 2011

ನಿಮ್ಮ ಬೈಗುಳ ತಾಗದೆ ಇದ್ದಿದ್ದರೆ ....


ಆ ದಿನಗಳೇ ಹಾಗಿತ್ತು, ಒಂದು ಬೈದರೆ ಕಡಿಮೆ , ಎರಡು ಬೈದರೆ ಹೆಚ್ಚು. ಕ್ಲಾಸಿನ ಬಾಗಿಲ ತುದಿಯಲ್ಲಿ ಹುಡುಗಿಯೊಬ್ಬಳು ನಕ್ಕರೆ ಅವಳು ನಮ್ಮನ್ನೇ ನೋಡಿ ನಕ್ಕಳೋ? ಅವಳಿಗೆ ನಮ್ಮ ಕಂಡರೆ ಇಷ್ಟವೇನೋ? ಎಂದೆಲ್ಲ ಚಿಂತಿಸಿ ಅವಳಿಗೆ ನಮ್ಮ ಮೇಲೆ ಪ್ರೀತಿ ಬಂದಿದೆ ಎಂದು ತರ್ಕಿಸಿ ಅದನ್ನು ಎಲ್ಲ ಗೆಳೆಯರಲ್ಲಿ ಟಂ ಟಂ ಮಾಡುವ ವಯಸ್ಸದು. ತರಗತಿಯಲ್ಲಿ ಉಪನ್ಯಾಸಕರು ಸಿಟ್ಟಿನಿಂದ ನಮಗೆ ಅವಮಾನ ಮಾಡಿದರೆ ಅವರು ನಮ್ಮ ಆಜನ್ಮ ಶತ್ರುಗಳು ಎಂದು ಭಾವಿಸಿ ಅವರ ಮೇಲೆ ಸೇಡು ಹೇಗೆ ತೀರಿಸಿಕೊಳ್ಳಬೇಕು ಎಂದು ಮನದೊಳಗೆ ಲೆಕ್ಕ ಹಾಕುವ ಮನಸ್ಸದು. ರಸ್ತೆಯಲ್ಲೆಲ್ಲೋ ಮಂತ್ರಿ ಮಾಗಧರು ಭಾಷಣ ಮಾಡುತ್ತಿದ್ದರೆ ನಾವೇ ಮಂತ್ರಿಗಳೆನೋ ಎಂದು ಭಾವಿಸಿ ಮನದೊಳಗೆ ಮಂತ್ರಿಯಾದಂತೆ ಭವಿಷ್ಯದ ರಾಷ್ಟ್ರ ರೂಪಿಸುವ ಹೊಸ ಕನಸ್ಸದು. ಒಟ್ಟಿನಲ್ಲಿ ಬದುಕಿಗೆ ಸರ್ವಸ್ವವನ್ನೂ ಬಯಸುವ ತುಂಟ ಮನಸಿನ ಸೊಗಸು ಅದು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ದಿನಗಳ ನೆನಪು ನನಗೆ ಸದಾ ಮನದಲ್ಲಿ ಉಳಿಯುವಂತಾದ್ದು. ಅದಕ್ಕೆ ಅನೇಕ ಕಾರಣಗಳಿವೆ. ಆ ದಿನಗಳಲ್ಲಿ ಕಷ್ಟವಿತ್ತು, ಸುಖವಿತ್ತು, ಸಾಧನೆಯಿತ್ತು , ನೋವಿತ್ತು, ನಲಿವಿತ್ತು, ಕಲಿಯುವ ಅದಮ್ಯ ಉತ್ಸಾಹವಿತ್ತು. ಬಹುಶ: ಉಡುಪಿಗೆ ನಾನು ಅಂದು ಹೋಗದೇ ಇದ್ದಿದ್ದರೆ ಇಂದು ಇಲ್ಲಿ ನಾನು ಇರುತ್ತಿರಲಿಲ್ಲ. ಪೂರ್ಣಪ್ರಜ್ಞ ಕಾಲೇಜು ನೆನಪಾದ ಕೂಡಲೇ ನೆನಪಾಗುವ ವ್ಯಕ್ತಿತ್ವ ಪ್ರೊಫೆಸರ್ ಡಿ ಜಿ ಹೆಗಡೆ ಅವರದ್ದು. ನಾನು ಅಲ್ಲಿರುವಷ್ಟು ಕಾಲ ನನ್ನನ್ನು ಮಗನಂತೆ ಅವರು ನೋಡಿಕೊಂಡಿದ್ದರು. ಅನೇಕ ಸಂದರ್ಭಗಳಲ್ಲಿ ನನಗೆ ಬಹಳಷ್ಟು ಸಹಾಯ ಮಾಡಿದ ಮಹಾನ್ ವ್ಯಕ್ತಿತ್ವ ಅವರದ್ದು. ಉಡುಪಿಯ ಕಾಲೇಜಿನ ನೆನಪಾದಾಗಲೆಲ್ಲ ನಮ್ಮನ್ನಗಲಿದ ಅವರ ನೆನಪು ಕಾಡುತ್ತದೆ. ನನ್ನ ವ್ಯಕ್ತಿತ್ವ ರೂಪಿಸುವಲ್ಲಿ ಅವರ ಪಾಲು ಬಹು ದೊಡ್ಡದು. ಕಾಲೇಜಿನ ದಿನಗಳೆಂದರೆ ಒಂಥರಾ ಮರ ಹತ್ತುವ ಮಂಗನ ಮನಸ್ಸು. ಎಲ್ಲ ಮರವೂ ನಮ್ಮದೇ ಎನ್ನುವ ಹುಂಬತನ. ಎಲ್ಲ ವಿಷಯಗಳಲ್ಲೂ ಪ್ರಾವೀಣ್ಯತೆ ಸಾಧಿಸುವ ಭಂಡತನ. ಅದು ಸರಿಯಾಗಿ ಅರ್ಥ ಆಗುವಷ್ಟರಲ್ಲಿ ನಾವು ಇಳಿಯುವ station ಬಂದಿರುತ್ತದೆ. ತಿರುಗಿ ಹೋಗುವಂತಿಲ್ಲ.ಮುಂದುವರೆಯಲು ಬೇರೆ ರಸ್ತೆಗಳು ಹೆಚ್ಚಿಲ್ಲ ಎನ್ನುವ ಸ್ಥಿತಿ. ಆದರೆ ಸಾಂಸ್ಕ್ರತಿಕ ರಾಜಧಾನಿ ಉಡುಪಿಯಲ್ಲಿ ಶಿಕ್ಷಣದ ಜೊತೆಗೆ ಕಲಿಯುವ ಪಾಠವಿದೆಯಲ್ಲ ಅದನ್ನು ಬೇರೆ ಎಲ್ಲಿಯೂ ಕಲಿಯುವುದು ಕಷ್ಟ. ಉಡುಪಿ ಶಿಕ್ಷಣದ ಜೊತೆ ಬದುಕನ್ನು ಕಲಿಸುತ್ತದೆ. ಪ್ರತಿದಿನ ಬರುವ  ಲಕ್ಷಾಂತರ ಭಕ್ತಾದಿಗಳು,  ಶ್ರೀ ಕ್ರಷ್ಣನ ಸನ್ನಿಧಾನದಲ್ಲಿ ಭಕ್ತಿ ಪರವಶರಾಗಿ ತಮ್ಮನ್ನು ಆ ಜಗನ್ನಿಯಾಮಕನಿಗೆ ಅರ್ಪಿಸಿಕೊಳ್ಳುವ ಪರಿ, ಅವನಿಗಾಗಿ ಮಾಡುವ ಸೇವೆ ಇವೆಲ್ಲವೂ ನೋಡಿಯೇ ಕಣ್ಣು ತಣಿಸಿಕೊಳ್ಳಬೇಕು. 

ಕಾಲೇಜಿನ ಆ ದಿನಗಳಲ್ಲಿ ನಾನು ಬಹಳಷ್ಟು ಚರ್ಚಾ ಸ್ಪರ್ಧೆಗಳಲ್ಲಿ , ಭಾಷಣ ಸ್ಪರ್ಧೆಗಳಲ್ಲಿ, ಭಾಗವಹಿಸಿದ್ದೇನೆ. ನನ್ನೊಂದಿಗೆ ನನ್ನ ಆತ್ಮೀಯ ಸ್ನೇಹಿತರಾದ ಅಶ್ವಥ್ ಭಾರದ್ವಾಜ ಮತ್ತು ಕಮಲಾಕರ್ ಕೂಡಾ ಇದ್ದರು. ನಾವು ಮೂರು ಜನ ಬಹಳಷ್ಟು ಪ್ರಶಸ್ತಿ ಗೆದ್ದಿದ್ದೇವೆ. ಇಂದಿಗೂ ಅಲ್ಲಿಗೆ ಹೋದರೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಉಪನ್ಯಾಸಕರ ಸಮೂಹವಿದೆ, ಅದಕ್ಕೆ ನಾನು ಋಣಿ. ತಿಂಗಳಿಗೆ ಸುಮಾರು 7 -8  ದಿನ ಕೇವಲ ಅದು ಇದು ಸ್ಪರ್ಧೆಗಳಲ್ಲೇ ಕಾಲ ಕಳೆಯುವ ನಾನು ನಮ್ಮ ವಿಜ್ಞಾನ ವಿಭಾಗದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೆ.  ನಮ್ಮಲ್ಲಿ ಒಂದು ಮಾತಿದೆ ''ವಿಜ್ಞಾನದ ವಿಧ್ಯಾರ್ಥಿಯೆಂದರೆ ಆತ ಪುಸ್ತಕ ಬಿಟ್ಟು ಏಳುವಂತಿಲ್ಲ, ಅವನಿಗೆ ಆಟ ಅಲರ್ಜಿ, ಊಟ ಬೇಕಿದ್ದರೆ ಮಾತ್ರ, ಸದಾ ಪುಸ್ತಕದ ಬದನೇಕಾಯಿ ತಿಂದೆ ಆತ ಬದುಕಬೇಕು, 90 % ಗಿಂತ ಕಡಿಮೆ ಬಂದರೆ ಆತ ಬದುಕಲು ಅನರ್ಹ'' ಹೀಗೆಯೇ ಪಟ್ಟಿ ಸಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತಕ್ಕೆ ಭೆಟ್ಟಿ ಕೊಟ್ಟಾಗ ಎಲ್ಲ ತಂದೆ ತಾಯಿಗಳ ಮಾನಸಿಕ ಒತ್ತಡ ಗಮನಿಸಿದ್ದೇನೆ. ಅವರ ಮಾತುಗಳೇನು    ಗೊತ್ತ ''ನನ್ನ ಮಗಳು/ಮಗ ಓದುತ್ತಿಲ್ಲ, ಅವರು ಇಂಜಿನಿಯರ್ ಅಥವಾ ವೈದ್ಯರು ಆಗಬೇಕು. ಆದರೆ ಹಿಂದಿನ ಸಲದ ಪರೀಕ್ಷೆಯಲ್ಲಿ 95 % ಮಾತ್ರ ತೆಗೆದುಕೊಂಡಿದ್ದಾರೆ. ಹೀಗಾದರೆ ನಾವು ದುಡಿದದ್ದು ವ್ಯರ್ಥ. ಇಡೀ ದಿನ ಟ್ಯುಶನ್ ಗೆ ಹೋದರು ಮಾರ್ಕ್ಸ್ ತೆಗೆಯುವುದಿಲ್ಲ ಎಂದು'' ನಾವು ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಿಲ್ಲ ಬದಲಿಗೆ ಹಣದ ಪಾಠ ಹೇಳುತ್ತಿದ್ದೇವೆ. ಅವರಿಗೆ ಆಡುವ ಮನಸ್ಸು ಹೋಗುತ್ತಿದೆ, ಪಾಲಕರ ಒತ್ತಾಯಕ್ಕೆ ಓಡುವ ಕುದುರೆಗಳು ಆಗಿವೆ ಅವೆಲ್ಲ. ಇಂಥಹ ಒತ್ತಡವೇ ಅವರನ್ನು ಆತ್ಮಹತ್ಯೆ ಯಂತ ಹೇಡಿತನಕ್ಕೆ ದಾರಿ ಮಾಡಿಕೊಡುತ್ತದೆ. ಮೊದಲಿಗೆ ಬದುಕನ್ನು ಅವರು ಕಲಿಯಲಿ, ನಂತರ ಬದುಕೇ ಅವರಿಗೆ ಎಲ್ಲವನ್ನು ಕಲಿಸುತ್ತದೆ.

ಉಡುಪಿಯ ಕಾಲೇಜಿನ ರಸಾಯನ ಶಾಸ್ತ್ರದ ಉಪನ್ಯಾಸಕರಲ್ಲಿ ಕೆಲವರಿಗೆ ನನ್ನ ಮೇಲೆ ಬಹಳ ಕೋಪವಿತ್ತು. ಸದಾ ಭಾಷಣಕ್ಕೆ  ಹೋಗುವ ನಾನು ನನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತೇನೆ, ನಾನು ಏನು ಸಾಧಿಸುವುದಿಲ್ಲ ಎಂಬ ಕೊರಗಿತ್ತು. ಸಿಟ್ಟು ಯಾವಾಗಲೂ ಪ್ರೀತಿ ಇರುವವರಲ್ಲಿ ಹೆಚ್ಚಾಗಿ ಸುಳಿಯುತ್ತದೆ. ಆ ಮಟ್ಟಿಗೆ ನಾನು ತುಂಬಾ ಅದ್ರಷ್ಟವಂತ. ಆ ಎಲ್ಲ ರಸಾಯನ ಶಾಸ್ತ್ರ ದ ಉಪನ್ಯಾಸಕರಿಗೆ ನನ್ನ ಮೇಲೆ ಕೋಪ, ಸೊ ನಾನು ಅಂದುಕೊಂಡೆ ನನ್ನ ಮೇಲೆ ವಿಪರೀತ ಪ್ರೀತಿ ಅದಕ್ಕೆ ಕೋಪ ಎಂದು :)
 ಕೆಲವೊಮ್ಮೆ ಹೀಗೆ ಅಂದುಕೊಳ್ಳೋದು ಮನಸನ್ನ ಹಗುರ ಮಾಡತ್ತೆ. ಇಲ್ದೆ ಇದ್ರೆ ಚಿಂತೇನೆ ತಲೆ ಹೊಕ್ಕಿ ನಮ್ಮನ್ನ ಚಿತೆ ಮಾಡಿ ಹಾಕುತ್ತೆ. ನನಗೆ ಇನ್ನು ನೆನಪಿದೆ, ನಾನಾಗ ಬಿ ಎಸ್ಸ್ ಸಿ ಕೊನೆಯ ವರ್ಷದಲ್ಲಿದ್ದೆ. ಪರೀಕ್ಷೆ ಹತ್ತಿರ ಬರ್ತಾ ಇತ್ತು. ಜನವರಿ  ತಿಂಗಳ ಅನಿಸತ್ತೆ. ರಸಾಯನ ಶಾಸ್ತ್ರದ ಉಪನ್ಯಾಸಕರು  (chemistry ಗೆ ನಾನು ಕರೆಯೋದು ಕೆಮ್ಮು ಎಷ್ತ್ರಿ ಅಂತಾನೆ ಯಾವಾಗಲು) ಪ್ರಾಕ್ಟಿಕಲ್ ತಗೋತ ಇದ್ರು. ಆ ದಿನಗಳಲ್ಲಿ ನನ್ನ ಮೇಲೆ ಅವ್ರಿಗೆಕೋ ವಿಪರೀತ ಕೋಪ. ತುಂಬಾ ಸಿಡುಕ್ತ ಇದ್ರು, ಬಹುಶ: ಈಗ ಆಗಿದ್ರೆ ಅವರ ಸಿಡುಕಿನ ಮುಖ ಫೋಟೋ ತೆಗೆದು facebook  ನಲ್ಲಿ ಹಾಕ್ತಿದ್ನೇನೋ. ಆದರೆ ಆ ದಿನಗಳು ಹಾಗಿರಲಿಲ್ಲ. ನಾನು ಭಾಷಣಕ್ಕೆ ಹೋಗೋದು ಬೇಡಾ ಅಂತ ತುಂಬಾ ಸಲ ಕ್ಲಾಸಿನಲ್ಲಿ ಹೇಳಿದ್ರು. ಆದ್ರೂನು ಅವರ ಮಾತನ್ನ ಮೀರಿ ನಾನು ತುಂಬಾ ಸಲ ಹೋಗಿದ್ದೆ. ಅದು ಒಂತರ ಗಣಪತಿ ದೇವಸ್ಥಾನಕ್ಕೆ ಹೋಗಿ ಆಮೇಲೆ, ದೇವಿ, ದುರ್ಗೆ, ಶ್ರೀ ಹರಿ ಹೀಗೆ ಬೇರೆ ಬೇರೆ ದೇವಸ್ಥಾನಕ್ಕೆ ಹೋದ ಹಾಗೆ, ಇವರು ಬೈದರು ಅಂತ ಇನ್ನೊಂದು ಕಡೆ ಹೋಗೋದು ಬಿಡೋಕೆ ಆಗುತ್ತ ಅನ್ನೋ ಹುಂಬ ಮನಸ್ಸು ಅದು. 

ಪ್ರಾಕ್ಟಿಕಲ್ ಪ್ರಾರಂಭ ಆಗಿತ್ತು. ಎಲ್ಲರ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡ್ತಾ ಬಂದ್ರು. ನಾನು ಎಷ್ಟೇ ಭಾಷಣಕ್ಕೆ ಹೊದ್ರುನು ಕ್ಲಾಸಿನ ಕೆಲಸನ ಕರೆಕ್ಟ್ ಆಗಿ ಮಾಡಿರ್ತಿದ್ದೆ. ಆ ದಿನ ನನ್ನ ಪ್ರಾಕ್ಟಿಕಲ್ ಬುಕ್ ಚೆಕ್ ಮಾಡೋಕೆ ತಗೊಂಡ್ರು. ಏನೋ, ಅದು ಇದು ಅಂತ 4  ಪೇಜ್ ತಿರುಗಿಸಿ ಕಸದ ಬುಟ್ಟಿಯ ಕಡೆ ಬಿಸಾಕಿ ಬಿಟ್ರು. ನನಗೆ ಥರ ಥರ ನಡುಕ. ಇದೇನಾಯ್ತು ಇವರಿಗೆ ಅಂತ. ಅವರಿಗೆ ಅದೆಲ್ಲಿಂದ ಸಿಟ್ಟು ಬಂದಿತ್ತೋ ಗೊತ್ತಿಲ್ಲ, ''ನೀನು ಇನ್ನು ಮೇಲೆ ನನ್ನ ಕ್ಲಾಸ್ ಗೆ ಆಗಲಿ, ಲ್ಯಾಬ್ ಗೆ ಆಗಲಿ ಬರಬೇಡ. ಇದೇನು ಪ್ರಾಕ್ಟಿಕಲ್ ಬುಕ್, ಗಬ್ಬೆದ್ದು ಹೋಗಿದೆ, ನೀನು ಬದುಕಲ್ಲಿ ಉದ್ದಾರ ಆಗಲ್ಲ, ಹಾಳಾಗಿ ಹೋಗ್ತಿಯ, ನಿನಗೆ ವಿಜ್ಞಾನ ದ ವಿಷಯ ಯಾಕೆ ಬೇಕಿತ್ತು, ಹೋಗು ಎಲ್ಲಾದರು ಭಾಷಣ ಮಾಡ್ಕೊಂಡೆ ಜೀವನ ಮಾಡು'' ಅಂತ ಒಂದೇ ಸಮನೆ ರುದ್ರಾಭಿಷೇಕ ಮಾಡೋಕೆ ಆರಂಭ್ಸಿದ್ರು. ನನಗೋ ಏನು ಹೇಳಬೇಕು ಅಂತ ಗೊತ್ತಾಗ್ಲಿಲ್ಲ. ಕೆಲವೊಮ್ಮೆ ಧೋ ಅಂತ ಸುರಿಯೋ ಮಳೇನ ನಿಲ್ಲಿಸಿದರೆ ಮತ್ತೆ ಅದು ತನ್ನ ಆಟ ತೋರಿಸತ್ತೆ. ಅದ್ಕೆ ಎಷ್ಟು ಬೇಕಾದರು ಬೈಕೊಳ್ಳಿ ಅಂತ ಬೈಸ್ಕೊತ ಇದ್ದೆ, ತಿರುಗಿ ಒಂದೇ ಒಂದು ಮಾತು ಹೇಳಲಿಲ್ಲ. ಹಾಗೆಯೇ ಅವರು 20  ನಿಮಿಷ ಉಗಿದು ನನ್ನ ಪ್ರಾಕ್ಟಿಕಲ್ ಬುಕ್ ನ 4  ಪೇಜ್ ಹರಿದು ಲ್ಯಾಬ್ ನಿಂದ ಹೊರಗೆ ಹಾಕಿದ್ರು. 

ಹೊರಗೆ ಬಂದವನಿಗೆ ನಿಜವಾಗಿ ನಡುಕ ಆರಂಬವಾಯ್ತು. ನನ್ನ ಬದುಕನ್ನ ಸರ್ವನಾಶ ಮಾಡಿಕೊಂಡು ಬಿಟ್ನ ಅಂತ. ಗುರುವಿನ ಶಾಪ ಒಳ್ಳೇದಲ್ಲ ಅಂತಾರೆ ನಮ್ಮ ಹಿರಿಯರು. ಅವತ್ತು ಅವರು ಉಪಯೋಗಿಸಿದ ಶಬ್ದಗಳು ಇನ್ನು ನೆನಪಾದಾಗ ಕಿವಿಯ ಮೇಲೆ ಬಿಳತ್ವೆ. ಅವರು ಯಾವತ್ತು ಯಾರಿಗೂ ಅಷ್ಟೊಂದು ಬೈದಿರಲಿಲ್ಲ ಅಂತೆ. ನಾನೇ ಫಸ್ಟ್ ಮತ್ತು ನಾನೇ ಲಾಸ್ಟ್. ಮನಸ್ಸಿಗೆ ತುಂಬಾನೇ ಬೇಜಾರು ಆಗಿ ಹೋಯ್ತು. ಇಲ್ಲಿ ಯಾರು ಸರಿ, ಯಾರು ತಪ್ಪು ಅಂತ ಹೇಳೋದು ಕಷ್ಟ, ಒಬ್ಬ ಭಾಷಣಕ್ಕೆ ಹೋದ ವಿಧ್ಯಾರ್ಥಿಯನ್ನು ಬೈದಿದ್ದು ಅವರದು ತಪ್ಪು ಹಾಗೆ ಓದೋಕೆ ಅಂತ ಬಂದ ನಾನು ಭಾಷಣಕ್ಕೆ ಹೋಗಿದ್ದು ನನ ತಪ್ಪು. ಅಂತೂ ಎಲ್ಲ ರಸಾಯನ ಶಾಸ್ತ್ರದ ಉಪನ್ಯಾಸಕರು ಸೇರಿ ನನಗೆ ಅವರಿಗೆ ರಾಜಿ ಮಾಡಿಸಿ ಕೊಟ್ರು. ಅದಾದ ಮೇಲೆ ಅವರು ನನ್ನನ್ನು ಅಷ್ಟೊಂದು ಬಯ್ಯಲಿಲ್ಲ. ಅಷ್ಟೊಂದು ವಿಚಾರಿಸಲು ಇಲ್ಲ.

ಆದರೆ ಪೂರ್ಣಪ್ರಜ್ಞ ಕಾಲೇಜು ಬಿಟ್ಟು ಬಂದ ಎಷ್ಟೋ ದಿನಗಳ ನಂತರ ಅವರ ಬೈಗುಳದ ನಿಜ ಅರ್ಥ ತಿಳಿಯಿತು. ಕೊನೆಗೆ ಅವರಿಷ್ಟದಂತೆ ಪಿ ಎಚ್ ಡಿ ಮಾಡಿ ಕೆಲಸದಲ್ಲಿದ್ದೇನೆ, ಈಗ ಆ ಗುರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಅಂದು ಅವರ ''ಬೈಗುಳ ತಾಗದೆ ಹೋಗಿದ್ದರೆ'' ಇಂದು ನಾ ಇಲ್ಲಿರುತ್ತಿರಲಿಲ್ಲ. ಇಂದಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂತಾದರೆ ಅವರ ಬೈಗುಳದ ನೆನಪು ಆಗುತ್ತದೆ. ನನ್ನ ಬದುಕಿನ ಬಗ್ಗೆ ವಿಪರೀತ ತಲೆಕೆಡಿಸಿಕೊಂಡು ಅವರು ಬೈದಿದ್ದರು. ಯಾರಿಗೂ ಬಯ್ಯದ ಅವರ ಆ ನಡವಳಿಕೆ ಅಂದು ಕೋಪ ತರಿಸಿದರೂ ಇಂದು ಅವರು ಸಿಕ್ಕರೆ ಅವರ ಪಾದಗಳಲ್ಲಿ ಎರಗಿ ಆಶಿರ್ವಾದ ಪಡೆಯುವ ಆಸೆ. ಆದರೆ ಅವರು ಕಾಲೇಜು ನಿಂದ ನಿವ್ರತ್ತರಾಗಿ ಮಕ್ಕಳೊಂದಿಗೆ ಭಾರತದ ಯಾವುದೋ ಕಡೆ ಇದ್ದಾರೆ ಎಂಬ ಸುದ್ದಿಯಿದೆ. 
ಕವಿಯ ಮಾತುಗಳು ನೆನಪಿಗೆ ಬರುತ್ತಿದೆ,

''ಗುರುವಿನ ಗುಲಾಮ 
ನಾಗದ ಹೊರತು
ದೊರೆಯದಣ್ಣ ಮುಕುತಿ ''

ಬದುಕು ಕೇವಲ ಪುಸ್ತಕದ ಬದನೇಕಾಯಿ ಅಲ್ಲ, ಅದು ಎಲ್ಲಕ್ಕೂ ಮೀರಿದ್ದು. ಬದುಕನ್ನ ನಾವು ಕಲಿತರೆ, ಉಳಿದೆಲ್ಲವೂ ನಮ್ಮ ಹಿಂದೆಯೇ ಬರುತ್ತದೆ. ಇಂದು ಶಾಲೆಗಳಲ್ಲಿ ಶಿಕ್ಷರು ಮಕ್ಕಳನ್ನು ಬೈಯ್ಯುವ ಹಾಗಿಲ್ಲ. ಬೆದರಿಸುವ ಹಾಗೆ ಇಲ್ಲ. 

 ಗದರಿಸಿ ಬೆದರಿಸಿ ಹೇಳಿದ ಪಾಠ
ನಡುಗಿಸಿ ಗುಡುಗಿಸಿ ಕಲಿತ ವಿದ್ಯೆ
ನಗುತ ನಲಿಯುತ ಆಡಿದ ಆಟ
ವಂದಿಸಿ, ಆಲಿಸಿ ಪಡೆದ ಬದುಕು 

ಇವೆಲ್ಲವೂ ಪರಿಪಕ್ವ ಮಾನವನನ್ನಾಗಿಸುತ್ತವೆ. ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬೇಕಾದರೆ ಅಲ್ಲಿ ಸಣ್ಣ ಹೆದರಿಕೆಯೂ ಇರಬೇಕು. 

ಮತ್ತದೇ ಕವಿವಾಣಿ ಕಿವಿಯಲ್ಲಿ ಸುಳಿಯುತ್ತಿದೆ,

      ಅಂದು,

         ಮುಂದೆ ಗುರಿಯಿತ್ತು
         ಹಿಂದೆ ಗುರುವಿದ್ದ
         ಸಾಗಿತ್ತು ಧೀರರ ಹಿಂಡು ಹಿಂಡು

        ಇಂದು,

           ಮುಂದಕ್ಕೆ ಗುರಿಯಿಲ್ಲ
            ಹಿಂದಕ್ಕೆ ಗುರುವೂ ಇಲ್ಲ
            ಸಾಗುತಿದೆ ರಣ ಹೇಡಿಗಳ ದಂಡು ದಂಡು 




ನನ್ನ  ಕಾಲೇಜಿನ  ದಿನಗಳ ಬದುಕಿನ ಕಥೆ ''ಬದುಕಿನ ಪುಟಗಳಿಂದ'' ಮುಂಚೆ ಒಮ್ಮೆ ಆರಂಬಿಸಿದ್ದೆ. ಕೆಲವು ಅನಿವಾರ್ಯ ಕಾರಣಗಳಿಂದ ಅದನ್ನ ಮುಂದುವರಿಸೋಕೆ ಆಗಿರಲಿಲ್ಲ. ಈಗ  ಮತ್ತೆ ಬರಿತ ಇದ್ದೀನಿ, ಇದರ ಮೊದಲಿನ  ಭಾಗ ನೀವು ಮುಂಚೆ ಓದದೆ ಇದ್ರೆ  ಓದೋಕೆ  ಕೆಳಗೆ ಕ್ಲಿಕ್ ಮಾಡಿ.


http://gurumurthyhegde.blogspot.com/2011/01/1.ಹ್ತ್ಮ್ಲ್  Part 1


http://gurumurthyhegde.blogspot.com/2011/02/50.html  Part 2 


http://gurumurthyhegde.blogspot.com/2011/02/part-3.html Part 3 


http://gurumurthyhegde.blogspot.com/2011/05/blog-post.html Part 4  



ಮತ್ತೆ ಮುಂದಿನ ವಾರ ಸಿಗೋಣ
ಗುರು ಬಬ್ಬಿಗದ್ದೆ










Sunday, September 18, 2011

ಅಭಿನವ ಉವಾಚ .....

ಪ್ರೀತಿಯ ಸ್ನೇಹಿತರೆ, ಕಳೆದ ತಿಂಗಳು ನಮ್ಮ ಪ್ರೀತಿಯ ಮಗ ಹುಟ್ಟಿದ್ದು ನಿಮಗೆ ತಿಳಿದೇ ಇದೆ. ಗುರುಹಿರಿಯರ ಆಶೀರ್ವಾದ  ದಿಂದ ''ಅಭಿನವ್'' ಎಂದು ಹೆಸರು ಇಟ್ಟಿದ್ದೇವೆ. ಅವನು ಹುಟ್ಟಿದ  ಕಥೆ ಅವನ ಬಾಯಿಂದಲೇ ಕೇಳಿ :) 


ಅಬ್ಬಾ, 9 ತಿಂಗಳು ಕತ್ತಲೆ ನಲ್ಲಿ ಇದ್ದಿದ್ದೆ, ಇದೇನಪ್ಪ, ಒಂದು ಲೈಟ್ ಕೂಡಾ ಹಾಕದೆ ಕಂಜೂಸ್ ಮಾಡ್ತಾರೆ ಅಂತ ಅಂದ್ಕೊಂಡಿದ್ದೆ,
ಎಲ್ಲಿ ನೋಡಿದ್ರುನು ಕತ್ತಲೆ, ಬರೆ ಆಚೆಯಿಂದ ಈಚೆ ಗೆ  ಓಡೋದು, ಒದೆಯೋದು ಇದೆ ನನ್ನ ಪ್ರಪಂಚ ಆಗಿತ್ತು. ಬದುಕು ಅಂದ್ರೆ ಇದೇನಾ, ಜಗತ್ತು ಅಂದ್ರೆ ಇದೇನಾ ಅಂತ ಆಶ್ಚರ್ಯ ಆಗಿತ್ತು. ನನ್ನೊಳಗಿನ ನಾನು ದೊಡ್ಡ ಆಗ್ತಾ ಇದ್ದೆ ಹೊಟ್ಟೆ ಒಳಗೆ. ''ಬದುಕು ಅಂದ್ರೆ ಬೆಳೆಯೋದು, ಬಾಳು ಅಂದ್ರೆ ಬೆಳಗೋದು'' ಅಂತ ಇದ್ದವನಿಗೆ ಎಲ್ಲ ಕಡೆ ಕತ್ತಲೆ ಮಾತ್ರ ಕಾಣುತ್ತ ಇತ್ತು. ಕತ್ತಲೆ ಮನಸ್ಸನ್ನು ತುಂಬಾ ನೋಯಿಸ್ತ ಇತ್ತು. ದೊಡ್ಡ ಆಗ್ತಾ ಇದ್ದಂತೆ ಗೊತ್ತಾಗ್ತಾ ಹೋಯ್ತು, ನನ್ನ ಪ್ರಪಂಚ ಇದಲ್ಲ, ಇದು ಅಮ್ಮನ ಪ್ರೀತಿಯ ಪ್ರಪಂಚ. ಜಗತ್ತಿನ ಎಲ್ಲ ಕೆಟ್ಟ ಶಕ್ತಿಗಳಿಂದ ನನ್ನನ್ನು ರಕ್ಷಿಸಿ ಪ್ರಪಂಚಕ್ಕೆ ಯೋಗ್ಯವಾಗಿ ಬರಲು ಶ್ರಮಿಸಿದ ಅಮ್ಮನ ಪ್ರೀತಿಯ ಪ್ರಪಂಚ ಇದು ಎಂದು ನಿಧಾನ ಅರಿವಾಗತೊಡಗಿತು. 

ಅಮ್ಮನಿಗೆ ಆ ದಿನಗಳಲ್ಲಿ ತುಂಬಾ ಕಷ್ಟ ಕೊಟ್ಟೆ. ಪಾಪ, ನನ್ನ ಪ್ರಪಂಚಕ್ಕೆ ತರಲು ಸ್ವೀಡನ್ನಿನಿಂದ ಭಾರತಕ್ಕೆ ಬರುವಂತೆ ಮಾಡಿದೆ. ನನಗೋ ಭಾರತದಲ್ಲೇ ಹುಟ್ಟುವ ಬಯಕೆ ಇತ್ತು. ಅಪ್ಪ, ಅಮ್ಮನ ಆಸೆಯೂ ಅದೇ ಆದದ್ದರಿಂದ ವಿದೇಶದ ಮಣ್ಣಿನಲ್ಲಿ ಹುಟ್ಟುವ ಸಂಕಷ್ಟ ತಪ್ಪಿತು.
 ಮಣ್ಣಿನ ಸುಗಂಧ, ಬದುಕನ್ನೇ ಬದಲಿಸುತ್ತದಂತೆ. 
ಗಂಗೆ ಹರಿದ, ತುಂಗೆ ನಲಿದ, ನಾಡಿನ ಮಣ್ಣಿನ ಸತ್ವವೇ ಅಂತದ್ದು.  ಹುಟ್ಟಿದ ಘಳಿಗೆ ಇನ್ನು ನೆನಪಿದೆ, ಅಮ್ಮನ ಹೊಟ್ಟೆಯಿಂದ ಹೊರಗೆ ಬರಲು ತುಂಬಾ ಚಡಪಡಿಸುತ್ತಿದ್ದೆ. ಅಮ್ಮನಿಗಂತೂ ನೋವು ತಡೆಯಲು ಆಗುತ್ತಿರಲಿಲ್ಲ. ಅಮ್ಮನ ಬಾಯಿಯಿಂದ  ''ಅಮ್ಮ'' , ''ಅಮ್ಮ'' ಎಂಬ ನೋವು ಕಿವಿಗೆ ತಟ್ಟುತಿತ್ತು. ಅವಳಿಗೆ ನೋವು ಕೊಟ್ಟು ನಾನು ಹೊರಗೆ ಬರುವ ಆಸೆ ಖಂಡಿತ ನನಗೆ ಇರಲಿಲ್ಲ. ಆದರೆ ಏನು ಮಾಡಲಿ, ಕತ್ತಲೆ ಯಲ್ಲಿ ಇದ್ದು ಇದ್ದು ನನಗೂ ಬೇಸರ ಬಂದಿತ್ತು. ಅಂತೂ ಆಗಸ್ಟ್ 16 ನೆ ತಾರೀಖು ಮಧ್ಯಾನ್ಹ   3 ಘಂಟೆ ಸುಮಾರಿಗೆ ನಾನು ಜನಿಸಿದೆ. ಸುಮಾರು 3.4 kg ಇದ್ದ ನನ್ನನ್ನು ಹೊರ ತರುವಲ್ಲಿ ವೈದ್ಯರು ತುಂಬಾ ಶ್ರಮಿಸಿದರು.


ಜನಿಸಿದ ಹೊತ್ತು ಅಮ್ಮನಿಗೆ ಅರ್ಧ ಎಚ್ಚರ ಇತ್ತು. ಕಣ್ಣಲ್ಲಿ ನೀರಿತ್ತು. ಬಹುಶ: ಬದುಕಿನ ಎಲ್ಲ ಘಟ್ಟದಲ್ಲಿ 

''ನಿನ್ನ ನೋವು ನನಗಿರಲಿ, ನನ್ನೆಲ್ಲ ನಲಿವು ನಿನಗಿರಲಿ'' 

ಎಂದು ಅಮ್ಮ ನನಗೆ ಹೇಳುತ್ತಿದ್ದಂತೆ ಕಿವಿಯಲ್ಲಿ ಭಾಸವಾಗುತ್ತಿತ್ತು. 


9 ತಿಂಗಳು ಹೊತ್ತು, ನೋವನ್ನು ನುಂಗಿ , ನನ್ನನ್ನು ಈ ಪ್ರಪಂಚಕ್ಕೆ ತಂದ ಅಮ್ಮನ ಪ್ರೀತಿಗೆ ಕೋಟಿ ಕೋಟಿ ನಮನಗಳು. ಆ ಹೊರಗೆ ಬಂದ ಮೊದಲ ಕ್ಷಣ ಅಪ್ಪನಿಗೆ ನನ್ನ ನೋಡುವ ತವಕ. ಅಪ್ಪನ ಕಣ್ಣಲ್ಲಿ ಆನಂದದ ಕಣ್ಣೀರು ಬಂದಿದ್ದು ಕಾಣುತ್ತಿತ್ತು. ಅಪ್ಪಂದಿರ ಪ್ರೀತಿಯೇ ಅಂತಾದ್ದು. ಅಮ್ಮನ ಮಡಿಲ ಸಾಂತ್ವನ ಇಲ್ಲದಿದ್ದರೂ, ಬದುಕಿಗೆ ಸವಾಲು ಹಾಕುವ ವಿಶ್ವಾಸವಿರುತ್ತದೆ. ಅಂದು ಅಪ್ಪನ ಕೈ ನನ್ನ ಕೆನ್ನೆ ಸವರಿದಾಗ ಅನಿಸಿದ್ದು ಅದೇ.

 ಹುಟ್ಟಿದ ಕೆಲವು ದಿನಗಳು ಬರೆ ಅಳುವುದು. ನಿದ್ದೆ ಮಾಡುವುದು. ಅಪ್ಪ, ಅಮ್ಮನಿಗೆ ಕೊಟ್ಟ ಕಾಟವನ್ನು ಅವರಿಂದಲೇ ದೊಡ್ಡವನಾದಾಗ ಕೇಳುವ ಆಸೆಯಿದೆ.



 ನನ್ನ ಹಠ ತುಂಬಾ ಇತ್ತು. ಅಮ್ಮನಿಗಂತೂ  ನಿದ್ದೆ ಇಲ್ಲ, ಬೆನ್ನು ನೋವು ಬೇರೆ, ನನ್ನ ಹಠ ಒಂದೇ ಸಮನೆ. ಆದರೆ ನಾನು ಏನು ಮಾಡಲಿ, ನನಗೆ ಆಗ ಅಳುವುದು ಬಿಟ್ಟು ಬೇರೇನೂ ಬಾರದು. ಅದು ಬಿಟ್ಟರೆ ನಂಗೆ ಗೊತ್ತಿದದ್ದು ನಿದ್ದೆ ಮಾಡುವುದು ಮಾತ್ರ. ಹಠ ನನಗೆ ಆಟವಿದ್ದಂತೆ, ಕಾರಣ ನನ್ನ ಬಗ್ಗೆ ಯಾರಾದರೂ ಲಕ್ಷ ಕೊಡದಿದ್ದರೆ ಅತ್ತು ಹೆದರಿಸುತ್ತಿದ್ದೆ. ಅಂತೂ ಹುಟ್ಟಿದ 11 ನೇ ದಿನ ಅಪ್ಪ, ಅಮ್ಮ ಇಬ್ಬರು ಸೇರಿ ನನಗೆ ''ಅಭಿನವ್' ಎಂಬ ಸುಂದರ ಹೆಸರನ್ನು ಇಟ್ಟರು.


 ನಂತರದ ದಿನಗಳಲ್ಲಿ ನಾನು ಅಳುವುದನ್ನು ಕಡಿಮೆ ಮಾಡದಿದ್ದರೂ ಅಮ್ಮನಿಗೆ ಕಾಟ ಕೊಡುವುದನ್ನು ಸ್ವಲ್ಪ ಕಡಿಮೆ ಮಾಡಿದ್ದೇನೆ. ಅಪ್ಪನಂತು ನನ್ನ ಬಿಟ್ಟು ಕೆಲಸಕ್ಕೆಂದು ಮಲೇಶಿಯಾ ಕ್ಕೆ ಹೋಗಿದ್ದಾರೆ. ಅವರ ನೆನಪಿನಲ್ಲಿ ಇದ್ದೇನೆ. ಅಪ್ಪನಿಗೂ ನನ್ನ ತುಂಬಾ ನೆನಪು,,,, ಪಾಪ, ಅಪ್ಪ ಬೇಗನೆ ಬರುತ್ತಾರೆ ಎಂಬ ನೀರೀಕ್ಷೆ ನನ್ನದು.

ಪುಟ್ಟ ಕಾಲುಗಳನ್ನು ಇಟ್ಟು ನಡೆಯುವ ತವಕ ನನಗೆ, ಆದರೆ ಏನು ಮಾಡಲಿ, ಇನ್ನು ಕಾಯಬೇಕಂತೆ, ಅಮ್ಮನ ಅಪ್ಪಣೆಯಿದೆ, ನಾನಿನ್ನೂ ಚಿಕ್ಕವನಂತೆ, ಸರಿ, ಅಮ್ಮನ ಮಾತು ನನಗೆ ವೇದ ವಾಕ್ಯ ಇದ್ದಂತೆ. ಬೇಗ ದೊಡ್ಡವನಾಗುವ ಆಸೆ ಇದೆ :)


ಅಪ್ಪನ ಅಪ್ಪಣೆಯ ಮೇರೆಗೆ ಅಪ್ಪನ ಬ್ಲಾಗ್ ನಲ್ಲಿ ನನ್ನ ಹುಟ್ಟಿದ ಕಥೆ ಹೇಳಿದ್ದೇನೆ. ಸದ್ಯದಲ್ಲಿಯೇ ಅಪ್ಪನ ಸಹಾಯದಿಂದ ''ಅಭಿನವ ಉವಾಚ'' ಎಂಬ ಬ್ಲಾಗ್ ನಲ್ಲಿ ಇನ್ನು ಹೆಚ್ಚು ಬರೆಯುತ್ತೇನೆ. ನನ್ನ ಬ್ಲಾಗ್ ''http://gurubabbigadde.blogspot.com/'' ಇಲ್ಲಿಯೇ ಬರೆಯುತ್ತೇನೆ. ಸದ್ಯಕೆ ನನ್ನ ಕೆಲವು ಫೋಟೋಗಳು ನಿಮಗಾಗಿ ಹಾಕಿದ್ದೇನೆ. ನೋಡುತ್ತಿರಲ್ಲ,


ಬೇಡ ಅಂದ್ರು ಕೇಳೋಲ್ಲ, ಏನೋ ಹಚ್ಚಿದ್ದಾರೆ ತಲೆಗೆ 


ಯಾರೋ ಇಣುಕಿ ನೋಡ್ತಾ ಇದಾರೆ ನನ್ನ, ಎದುರಿಗೆ ಬರೋಕೆ ಏನು ಕಷ್ಟ?


ಏನು ಮಾಡೋದು, ಅಮ್ಮ  ಯಾರತ್ರನೋ ಮಾತಾಡ್ತಾ ಇದಾಳೆ, ಈಗ ಹಠ ಮಾಡಿದ್ರೆ ಬರ್ತಾಳೆ ನೋಡೋಕೆ, ಆದ್ರೆ ಪಾಪ ಯಾಕೆ ತೊಂದ್ರೆ ಕೊಡೋದು?


ಸರಿ ನಿದ್ದೆ ಬರೋ ಟೈಮ್ ಆಯಿತು 


ಮಲಗ್ತಿನಪ್ಪ ನಾನು, ನೀವು ಮಲ್ಕೊಳ್ಳಿ, ಮತ್ತೆ ಸಿಗೋಣ, ಟಾ ಟಾ 


ಅಲ್ಲಿಯತನಕ ನಿಮ್ಮೆಲ್ಲರ ಪ್ರೀತಿ ಹಾರೈಕೆ ನನ್ನ ಮೇಲೆ ಇರಲಿ ,
ಪ್ರೀತಿಯ
ಅಭಿನವ

Wednesday, August 3, 2011

ಚಳಿಯ ನಾಡಿನ ಬೆವರಿನ ನೋಟ ....Part 2

ಬದುಕಿಗೆ ವಿದೇಶ ಬೇಕಿರಲಿಲ್ಲ, ಅದು ಅನಿವಾರ್ಯವೂ ಆಗಿರಲಿಲ್ಲ. ಆದರೆ ಬದುಕಿನ ಸಾರ್ಥಕತೆಗೆ ಹೊರದೇಶದ ಕೆಲಸದ ಅನುಭವ ಬೇಕಿತ್ತು. ಆ ತುಡಿತವೇ ವಿದೇಶಕ್ಕೆ ಹೋಗಲು ಪೂರಕ ಹಾಗೂ ಪ್ರೇರಕ. ಹಾಗೆಂದು ವಿದೇಶದಲ್ಲಿ ಇದ್ದ ಮಾತ್ರಕ್ಕೆ ದೇಶ ಪ್ರೇಮ ಕಡಿಮೆ ಆಗದು. ಅದು ನಿರಂತರ ಶಾಶ್ವತ. ವಿದೇಶದಲ್ಲಿ ಕೆಲಸ ಮಾಡುವುದೇ ತಪ್ಪು ಎಂದಾದರೆ, ದೇಶದಲ್ಲೇ ಇದ್ದು ''ವಿದೇಶಿ ಕಂಪನಿಗಳಿಗೆ'' ಕೆಲಸ ಮಾಡುವುದು ಇನ್ನು ತಪ್ಪಲ್ಲವೇ? ತಪ್ಪನ್ನು ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ. ಆದರೆ ಅದು ಎಷ್ಟರ ಮಟ್ಟಿಗೆ ಅವಶ್ಯಕ ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕು. ಮೊದ ಮೊದಲು ವಿದೇಶಕ್ಕೆ ಹೋದಾಗ ಅಲ್ಲಿನ ಪರಿಸರ, ನಮ್ಮವರ ಪ್ರೀತಿ ಸ್ನೇಹದ ಕೊರತೆ ಕಾಡುವುದು ಬಹಳ ಸಹಜ. ಆದರೆ ಕ್ರಮೇಣ ಅಲ್ಲಿನ ಪರಿಸರಕ್ಕೆ ಬದುಕು ಹೊಂದಿಕೊಳ್ಳುವ ಅನಿವಾರ್ಯತೆ ಎದುರಿಸುತ್ತದೆ, ಆ ಅನಿವಾರ್ಯತೆ ಮುಂದೆ ಅವಶ್ಯಕತೆ ಎನಿಸುತ್ತದೆ. ಆ ಅವಶ್ಯಕತೆಯ ಮೇಲೆ ನಮ್ಮದೇ ವ್ಯಾಕ್ಯಾನ ಬರೆದು ನಮ್ಮ ದೇಶಕ್ಕೆ ಹೋಗಲು ಸಾದ್ಯವೇ ಇಲ್ಲದ ಸನ್ನಿವೇಶ ಸ್ರಷ್ಟಿಯಾಗುತ್ತದೆ. ಇದೆಲ್ಲವೂ ಮನಸ್ಸಿನ ಕೆಲವು ಕ್ಷಣ ಗಳು ಅಷ್ಟೇ. 

''ತೆರೆದಿಡು ಮನವನ್ನು, ಅರೆಕ್ಷಣ ಚಿಂತಿಸುವ  ಮುನ್ನ
ಹರಿಯಬಿಡು ಕ್ಷಣವನ್ನ, ಬಾಚಿಕೋ ನೀ ಆಹ್ವಾನ''

ಬದುಕಿಗೆ ಅವಕಾಶಗಳು ಸಿಗುವುದು ಬಹಳ ಕಡಿಮೆ. ''ಎಲ್ಲ ಅವಕಾಶಗಳು ನಿಮ್ಮ ಮನೆಯ ಬಾಗಿಲಿಗೆ ಬಂದು, ಸ್ವೀಕರಿಸು ನನ್ನ, ಸ್ವೀಕರಿಸು ನನ್ನ ಎಂದು ಗೋಗರೆಯುವುದೂ ಇಲ್ಲ'' ಹಾಗಾಗಿ ಸಿಕ್ಕಿದ ಅವಕಾಶವನ್ನು ಉಪಯೋಗಿಸಿಕೊಳ್ಳುವುದೇ ಬುದ್ದಿವಂತಿಕೆ. ನಾವು ಸದಾ ನಮ್ಮ ರಾಜಕೀಯದವರು ಏನು ಮಾಡಿದ್ದಾರೆ, ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎನ್ನುತ್ತಿದ್ದೆವೆಯೇ ಹೊರತು ನಾವು ಏನು ಮಾಡಿದ್ದೇವೆ ಎಂದು ಚಿಂತಿಸುವುದೇ ಇಲ್ಲ. ಕೆನಡಿಯವರ ಮಾತು ನೆನಪಾಗುತ್ತದೆ,

''Don't ask what country can do for you
Ask what you can do for your country''

ಹಾಗಾಗಿ ದೇಶ ಪ್ರೇಮ ಕೇವಲ ಅಕ್ಷರಗಳ ಮಾತಾಗದೆ ಅದು ಕಾರ್ಯರೂಪಕ್ಕೆ ಇಳಿಯಬೇಕಿದೆ. ನಮ್ಮ ದೇಶಕ್ಕೆ ನಾವು ಕೊಡುವ ಅಲ್ಪ ಕಾಣಿಕೆಯೂ ಬ್ರಹದಾಕಾರವಾಗಿ ಬೆಳೆದು ದೊಡ್ಡ ಪರ್ವತವೆ ಆಗುತ್ತದೆ. ಸುಧಾರಣೆ ನಿನ್ನಿಂದಲೇ ಆರಂಬವಾಗಲಿ ಎಂಬ ಕವಿವಾಣಿ ಎಂದಿಗೂ ಸತ್ಯ. ಇದೆಲ್ಲ ಅನುಭವಕ್ಕೆ ಬಂದಿದ್ದು 3 ವರ್ಷಗಳ ಹಿಂದೆ ಸ್ವೀಡನ್ ದೇಶಕ್ಕೆ ಬಂದಾಗ. 

ನನ್ನನ್ನು ಬಹಳಷ್ಟು ಚಿಂತನೆಗೆ ಹಚ್ಚಿದ ದೇಶ ಇದು. ಸ್ವೀಡನ್ ಎಂದರೆ ''IKEA'' ಎಂಬ ನಾನ್ನುಡಿಯಿದೆ. ಕಾರಣ ಸ್ವೀಡನ್ ದ ಭಾಗವೇ ಆದ  ''IKEA''  ಕಂಪನಿ ಯಲ್ಲಿ ಶಿಸ್ತು ಹಾಗೂ ಅಚ್ಚು ಕಟ್ಟುತನ ಎಲ್ಲೆಡೆ ನೋಡಲು ಸಿಗುತ್ತದೆ. ಪ್ರತಿಯೊಬ್ಬರ ಮನೆಯ ಎಲ್ಲ ವಸ್ತುಗಳು  ''IKEA''  ಕಂಪನಿಯಿಂದಲೇ ಬರುತ್ತದೆ. ಜನರ ಆಸೆಗೆ, ರುಚಿಗೆ ತಕ್ಕಂತೆ ಎಲ್ಲ ಸಾಮಾನುಗಳನ್ನು ಅವರು ತಯಾರಿಸುತ್ತಾರೆ. ಸದ್ಯದಲ್ಲಿಯೇ ನಮ್ಮ ದೇಶದ ಮುಂಬೈ ಗೆ  ''IKEA''  ಕಂಪನಿ ಬರುತ್ತದೆ ಎಂಬ ಸುದ್ದಿ ಇದೆ. ಸ್ವೀಡನ್ ಅಂದರೆ ನೆನಪಾಗುವುದು ''VOLVO'' ಕಾರು ಗಳು. ಅತ್ಯಂತ ಬೆಲೆಬಾಳುವ ಜನರ ಮೆಚ್ಚಿನ ಕಾರುಗಳು ಜಗತ್ಪ್ರಸಿದ್ದ. ಅಷ್ಟೇ ಯಾಕೆ ನಮ್ಮ ರಸ್ತೆಗಳಲ್ಲಿ ಸಂಚರಿಸುವ ಸುಖದ ಸುಪ್ಪತ್ತಿಗೆಯಂತೆ  ಇರುವ ''VOLVO'' ಬಸ್ ಗಳು ಈ ದೇಶದ ಉತ್ಪಾದನೆ. ದೊಡ್ಡ ದೊಡ್ಡ ಮಹಡಿಗಳ ನಿರ್ಮಾಣ ತಯಾರಿಕೆ, ರಸ್ತೆ ನಿರ್ಮಾಣ ತಯಾರಿಕೆ ಗಳಲ್ಲಿ ಉಪಯೋಗಿಸುವ ಬಹುತೇಕ ಬ್ರಹತ್ ಉಪಕರಣಗಳು ''VOLVO'' ಕಂಪನಿಯಿಂದಲೇ ತಯಾರಾದದ್ದು. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.



ಸ್ವೀಡನ್ ಎಂದರೆ ನೆನಪಾಗುವುದು ''SKF'' ಕಂಪನಿ. ನಟ್ಟು, ಬೋಲ್ಟ್ ಗಳ ತಯಾರಿಕೆಯಲ್ಲಿ ವಿಶ್ವದ ನಂಬರ್ ಒನ್ ಕಂಪನಿಯಾದ ಇದು ಜಗತ್ತಿನ ಎಲ್ಲ ದೇಶಗಳಲ್ಲಿ ತನ್ನ ಸೇವೆ ನೀಡುತ್ತಿದೆ. ನೋಡಿ, ಎಷ್ಟು ಸಣ್ಣ ದೇಶ, ಆದರೆ ಅವರ ಸಾಧನೆ ಜಗತ್ತಿನಾದ್ಯಂತ ವಿಸ್ತರಿಸಿದೆ. ''ಮನಸ್ಸಿದ್ದರೆ ಮಾರ್ಗ'' ಎನ್ನುವುದಕ್ಕೆ ಈ ದೇಶದ ಜನ ಜೀವಂತ ಉದಾಹರಣೆ. ಸರಿ, ಏನಪ್ಪಾ ಇವರ ಜನಸಂಖ್ಯೆ ಅಂತಿರಾ, ಅಬ್ಬಬಬ್ಬ ಅಂದ್ರೆ 9 ಮಿಲಿಯನ್ ನಷ್ಟು. ನೋಡಿದ್ರ, 9 ಮಿಲಿಯನ ಜನ ಸೇರಿ ಇಷ್ಟೊಂದು ಸಾಧನೆ ಮಾಡೋದಾದ್ರೆ 1 .3 ಬಿಲಿಯನ್ ಜನ ಏನೇನು ಮಾಡಬಹುದಿತ್ತು. ಆಲ್ವಾ?

ಏನೋ, ಬೇಕಾದಷ್ಟು ಹಣ ಇದೆ ಅವ್ರಿಗೆ, ಏನು ಬೇಕಾದರು ಮಾಡ್ತಾರೆ ಅಂತಿರಾ? ಕಷ್ಟನೆ ಇಲ್ಲ ಅವರಿಗೆ ಅಂದ್ಕೊಂಡ್ರ? ಇಲ್ಲ ಸ್ವಾಮೀ. ನಿಮ್ಮ ಊಹೆ ತಪ್ಪು. ವರ್ಷದ 6 ತಿಂಗಳು ವಿಪರೀತ ಚಳಿ. ಎಷ್ಟು ಅಂದ್ರೆ ಇಲ್ಲಿನ ಉಷ್ಣತೆ  - 25 ಡಿಗ್ರಿ ಹೋಗುತ್ತದೆ. ನಮಗೆ + 15 ಹೋದ್ರೆ ಸಿಕ್ಕಾಪಟ್ಟೆ ಚಳಿ ಅಂತಿವಿ, ಅದ್ರಲ್ಲಿ -25 ಅಂದ್ರೆ ಹೇಗಿರಬೇಡ. ಸದಾ ಹಿಮ ಬಿಳ್ತಾ ಇರತ್ತೆ, ಇದೆಲ್ಲ ಸಾಲದು ಅನ್ನೋ ಹಾಗೆ ವಿಪರೀತ ಅನ್ನೋ ಕತ್ತಲು. ದಿನದ 20 ಘಂಟೆ  ಕತ್ತಲು ಕತ್ತಲು ಎಷ್ಟು ಘೋರ ಅನ್ನೋದು ಇಲ್ಲಿ ಬಂದ ಮೇಲೆ ನಮಗೆ ತಿಳೀತು. ನೀವೇನಾದ್ರು ಬ್ರಮ್ಹಚಾರಿ ಆಗಿದ್ರೆ ನಿಮ್ಮ ಕಥೆ ಮುಗಿತು, ಸದಾ ಕತ್ತಲು, ಹೊರಗಡೆ ಹೋಗೋ ಹಾಗಿಲ್ಲ, ಮಾತಾಡೋಕೆ ಯಾರು ಸಿಗಲ್ಲ, ರಸ್ತೆ ಎಲ್ಲ ಖಾಲಿ ಖಾಲಿ, ಒಂಥರಾ ಸಮೂಹ ಸನ್ನಿ ಅಂತಾರಲ್ಲ, ಹಾಗೆ ಆಗತ್ತೆ ಎಲ್ಲಾರಿಗೂ. ತುಂಬಾನೇ Depression ಸ್ಟಾರ್ಟ್ ಆಗುತ್ತೆ.


ಅಂಥಹ ಕತ್ತಲನ್ನೇ ಗೆದ್ದು ಬಂದಿದ್ದಾರೆ ಅವರೆಲ್ಲ. ಅವರ ಇಂದಿನ ಶ್ರೀಮಂತಿಕೆ ಅವರು ಬೆವರು ಸುರಿಸಿ ಗಳಿಸಿದ್ದು. ಅವರಿಗೆ ನಮ್ಮ ದೇಶದ ಹಾಗೆ ಶ್ರೀಮಂತ ಪರಂಪರೆಯಿಲ್ಲ. ಒಂದು ಕಾಲದಲ್ಲಿ ಕಡು ಬಡವರೇ ಆಗಿದ್ದ ಅವರು ಸುಧಾರಣೆಯ ಟೊಂಕ ಕಟ್ಟಿದ ಕ್ಷಣದಿಂದ ಬದಲಾದರು. ಅಲ್ಲೀಗ  ಕೇವಲ ''ಸುಧಾರಣೆ, ಸುಧಾರಣೆ, ಸುಧಾರಣೆ''

ದಿನಕರ ದೇಸಾಯಿ ಯವರ ಮಾತೊಂದು ನೆನಪಾಗ್ತಾ ಇದೆ 

''ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು
ನೆಲವು ನಂದನವಾಗಲೇನು ಬೇಕು
ತಿಳಿವು ತುಂಬಿದ ಕಣ್ಣು, ಅರಿವು ತುಂಬಿದ ಎದೆಯು 
ಛಲವನರಿಯದ  ಬದುಕು ಇಷ್ಟೇ ಸಾಕು''


ಬದುಕಲ್ಲಿ ಸಾಧಿಸುವ ಮನೋಭಾವ, ಮಾನವೀಯತೆ ತುಂಬಿದರೆ ಏನನ್ನಾದರೂ ಮಾಡಬಹುದು ಅನ್ನೋದಕ್ಕೆ ಸ್ವೀಡನ್ ಜನರ ಸಾಧನೆಯೇ ಉದಾಹರಣೆ.

ಅಲ್ಲಿನ ಬದುಕಾದರೂ ಎಂತದ್ದು, ಅವರ ದಿನನಿತ್ಯದ ಜೀವನ ಶೈಲಿ ಹೇಗೆ, ಬದುಕನ್ನು ಅವರು ನೋಡುವ ರೀತಿ ಹೇಗೆ ಇದನ್ನೆಲ್ಲಾ ಮುಂದಿನ ವಾರ ನಿಮ್ಮೊಂದಿಗೆ ಹಂಚೋಕೊತಿನಿ, ಅಲ್ಲಿತನಕ ಕಾಯ್ತಿರಲ್ಲ....

ನಿಮ್ಮವ
ಗುರು 


ಹಿಂದಿನ ವಾರ ಇದೆ ಸರಣಿಯ ಮೊದಲ ಭಾಗ ಬರೆದಿದ್ದೆ, ನೀವು ಓದಿಲ್ಲ ಅಂದ್ರೆ ಇಲ್ಲಿದೆ ಓದಿ 
ಮರೆತೆನೆಂದರ ಮರೆಯಲಿ ಹ್ಯಾಂಗ್ 
http://gurumurthyhegde.blogspot.com/  

Sunday, July 24, 2011

ಮರೆತೆನೆಂದರ ಮರೆಯಲಿ ಹ್ಯಾಂಗ್ ..



ಬದುಕಿನಲ್ಲಿ ಅಂದಿನಿಂದ ಇಂದಿನವರೆಗೂ ನಡೆದ ನಡೆಸಿದ ಜೀವನದ ಒಂದೊಂದು ರೀತಿಯೂ ನೆನಪಿನಂಗಳದಲ್ಲಿ ಮರೆಯದ ನೆನಪುಗಳನ್ನು ಹಾಗೆಯೇ ಉಳಿಸಿವೆ. ಬದುಕೇ ಹಾಗೆ... ಅದು ಕೇವಲ ಕೊಳದಲ್ಲಿ ಇರುವ ನೀರಲ್ಲ, ಹರಿಯುವ ಸಾಗರ, ಅದರಲ್ಲಿ ಬಂದು ಸೇರಿದ ನದಿಗಳೆಷ್ಟೋ, ಸಾಗರ ಧನ್ಯವಾಗುವುದೇ ಹಲವಾರು ನದಿಗಳ ನೀರಿನ ಸೆಳೆತದಿಂದ. ಹಾಗೆಯೇ ನಮ್ಮ ಬದುಕು ಕೂಡಾ, ಅಂದಿನಿಂದ ಇಂದಿನ ತನಕ ಪ್ರತಿ ಹೆಜ್ಜೆಯಲ್ಲಿಯೂ ನಮ್ಮನ್ನು ಸಾಗರದಂತೆ ಮಾಡಲು ಶ್ರಮಿಸಿದ ಅದೆಷ್ಟೋ ನದಿಗಳಿವೆ. ಅವರ ಶ್ರಮ, ಪ್ರೀತಿ, ಆಶೀರ್ವಾದ ಸದಾ ನಮ್ಮನ್ನು ಹರಸುತ್ತಿರುತ್ತದೆ.

ನೆನಪುಗಳ ಬುತ್ತಿ ಬಿಚ್ಚಿದಂತೆ ಒಂದೊಂದೇ ನಮ್ಮ ಮನಸ್ಸಿಗೆ ಆಪ್ತವೆನಿಸಲು ಆರಂಬವಾಗುತ್ತವೆ. ತಾಯಿಯ ಮಡಿಲ ಪ್ರೀತಿಯ ಧಾರೆ, ತಂದೆಯ ಶಿಸ್ತಿನ ಒಲವಿನ ಧಾರೆ, ಅಕ್ಕ ಅಣ್ಣರ ಪ್ರೀತಿ, ತಮ್ಮ ತಂಗಿಯ ತುಂಟತನ, ಮುದ್ದಿನ ಅಜ್ಜ ಅಜ್ಜಿಯ ತುಸು ಹೆಚ್ಚೇ ಎನಿಸುವ ಮುದ್ದು, ನಮ್ಮನ್ನು ಸಾಕಿ ಸಲಹುತ್ತ ಇರುವಾಗ ಅವುಗಳನ್ನ ಮರೆಯಲಿ ಹ್ಯಾಂಗ್.....

ಹಾಗೆಯೇ ಶಾಲೆಗೆ ಬಂದಾಗ ಗುರುಗಳ ತಿದ್ದುವಿಕೆ, ಬದುಕಿಗೆ ನಮ್ಮನ್ನು ಸಜ್ಜುಗೊಳಿಸುವಿಕೆ, ನಂತರ ಶಿಕ್ಷಣದ ಒಂದೊಂದೇ ಘಟ್ಟ ಏರಿದಂತೆ ಹೊಸ ಅನುಭವಗಳು, ನೋವು ನಲಿವುಗಳು, ಸ್ಪರ್ಧಾತ್ಮಕ ಜಗತ್ತು ಎಲ್ಲವೂ ನೆನಪಿಗೆ ಬಂದಂತೆ ಮರೆಯಲಿ ಹ್ಯಾಂಗ್...

ಯೇ ಕಹಾನಿ ಸ್ವೀಡನ್ನಿನ ದೇಶದ್ದು. ಮಲೇಶಿಯಾ ಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿವೆ. ಬೆಚ್ಚಗಿನ ಚಾದರ ಹೊದ್ದು ಮಲಗುವ ದೇಶದಿಂದ ಸುಡುಬಿಸಿಲಿನ ದೇಶಕ್ಕೆ ಬಂದಿದ್ದೇನೆ. ಇಲ್ಲಿ ಚಾದರ ತೆಗೆದಂತೆ ಅಲ್ಲಿನ ಬದುಕಿನ ಕ್ಷಣಗಳು ಚಾದರ ತೆಗೆದು ಒಂದೊಂದಾಗಿ ಸ್ಮ್ರತಿ ಪಟಲ ದಲ್ಲಿ ಸುಳಿಯುತ್ತಿವೆ. ಯಾವುದೇ ದೇಶದ ಬಗೆಗೆ ಮಾತನಾಡುವ ಮೊದಲು ಆ ದೇಶದ ಜೀವನ, ಅಲ್ಲಿನ ಜನರು, ಅವರ ದೈನಂದಿನ ಕ್ಷಣಗಳು, ಇದನ್ನು ಅಭ್ಯಸಿಸಬೇಕು ಎನ್ನುವ ಜಾಯಮಾನ ನನ್ನದು. ಎಷ್ಟೋ ಸಲ ಭಾರತಕ್ಕೆ ಹೋದಾಗ ಅನೇಕರು

 ''ನಿನಗೆ ದೇಶದ ಮೇಲೆ ಪ್ರೀತಿ ಇಲ್ಲ, ದೇಶಾಭಿಮಾನ ವಿಲ್ಲ. ವಿದೇಶದ ಪ್ರೀತಿ,
ಹಣ ನಿನ್ನ ಮನಸ್ಸನ್ನು ಭಾರತಕ್ಕೆ ಬರದಂತೆ ಮಾಡಿದೆ ''

ಎಂದು ಹೇಳುತ್ತಾರೆ. ಆದರೆ ಕಳೆದು 5 ವರ್ಷಗಳಿಂದ ವಿದೇಶದಲ್ಲಿ ಬದುಕಿದ ಮೇಲೆ ನಮ್ಮ ದೇಶದ ಮೇಲಿನ ಪ್ರೀತಿ ಮೊದಲಿಗಿಂತ ನೂರು ಪಟ್ಟು ಹೆಚ್ಚಿದೆ. ಯಾವುದೇ ದೇಶದ ಮೇಲಿನ ಪ್ರೀತಿ ಹೆಚ್ಚಬೇಕಾದರೆ ಆ ದೇಶ ಬಿಟ್ಟು ಹೊರ ಬನ್ನಿ, ಯಾವುದೇ ವ್ಯಕ್ತಿಯ ಮಹತ್ವ ಅರಿಯಬೇಕಾದರೆ ಆ ವ್ಯಕ್ತಿಯನ್ನು ಬಿಟ್ಟು ಸ್ವಲ್ಪ ದಿನ ಇರಿ, ಆಗಲೇ ನಿಜವಾದ ಪ್ರೀತಿ ತಿಳಿಯುತ್ತದೆ. ಸುಮ್ಮನೆ ಉಪದೇಶ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂಬ ಸತ್ಯ ನಮಗೆ ತಿಳಿಯಬೇಕಿದೆ ಅಷ್ಟೇ.

3 ವರ್ಷಗಳ ಹಿಂದೆ ಬೇಸಿಗೆಯ ಕಿರಣಗಳು ನಿಧಾನವಾಗಿ ಮರೆಯಾಗುತ್ತಿರುವ, ಗಿಡಗಳ ಎಲೆಗಳು ತಮ್ಮ ವಿಧ ವಿಧದ ಬಣ್ಣವನ್ನು ಕಳಚಿಕೊಳ್ಳುವ ಚಳಿಗಾಲದ ಆರಂಬದ ಕಾಲ. ನಾವು ಸ್ವೀಡನ್ನಿನ ಗೊತ್ಹೆಂಬುರ್ಗ್ ಎಂಬ ಪುಟ್ಟ, ಚೊಕ್ಕ, ಚಿಕ್ಕ ನಗರದ ವಿಮಾನ ನಿಲ್ದಾಣದಲ್ಲಿ ಇಳಿದೆವು. ಆಗಲೇ ನನ್ನ ಬಾಸ್ ಪ್ರೊಫ್. ಲಾಚೆಜರ್ ಕೊಮಿತೊವ್ ನಮ್ಮನ್ನು ಕರೆದುಕೊಂಡು ಹೋಗಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಮೊದಲ ಬಾರಿಗೆ ಯೂರೋಪಿನ ಸಭ್ಯತೆಯ ದರ್ಶನ ಲಭಿಸಿದ್ದು ಅಲ್ಲಿ. ನಮ್ಮ ದೇಶದಲ್ಲಿ  ಎಂದಾದರೂ ತಮ್ಮ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲು ಬಾಸ್ ಗಳು ಬಂದ ಉದಾಹರಣೆ ಬಹಳಷ್ಟು ಸಿಗಲು ಸಾದ್ಯವೇ? ನನಗಂತೂ ಇಲ್ಲ ಎಂದೇ ಅನಿಸುತ್ತದೆ. ಅಂದು ಅವರು ತಮ್ಮೆಲ್ಲ ಕೆಲಸ ಕಾರ್ಯ ಬಿಟ್ಟು ನನ್ನ ಹಾಗೂ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದಿದ್ದರು. ''ಆದರಾತಿಥ್ಯ ದ ಒಂದು ಅಮೋಘ ಉದಾಹರಣೆ'' ಎಂದೆನ್ನಬಹುದಲ್ಲ...

ಸ್ವೀಡನ್ನಿನ ನೆಲದಲ್ಲಿ ತದನಂತರದ 3 ವರ್ಷದಲ್ಲಿ ಪಡೆದ ಅನುಭವಗಳು, ಅಲ್ಲಿನ ಜನರ ಜೀವನ ಶೈಲಿ, ಅವರ ಸರಳ ಸಭ್ಯತೆ ಗಳ ಅನುಭವ, ಇವುಗಳನ್ನೆಲ್ಲ ಒಂದೇ ದಿನ ಹೇಳಿದರೆ ಸಾಕಾಗಲಿಕ್ಕಿಲ್ಲ.

ಅಲ್ಲಿಯತನಕ ಇದನ್ನೆಲ್ಲಾ ''ಮರೆತೆನೆಂದರ ಮರೆಯಲಿ ಹ್ಯಾಂಗ್''

ಮತ್ತೆ ಮುಂದಿನ ವಾರ ಸಿಗುತ್ತೇನೆ, ಸ್ವೀಡನ್ನಿಗರ ಬದುಕಿನ ಅನಾವರಣಗೊಳಿಸಲು.

ಸ್ನೇಹಿತರೆ, ಛಾಯಾ ಕನ್ನಡಿ ಬ್ಲಾಗ್ ನ ಶಿವೂ ಸರ್ ಹಾಗೂ ''ನಿಮ್ಮೊಳಗೊಬ್ಬ'' ಬ್ಲಾಗ್ ನ ಬಾಲು ಸರ್  ಅವರು ಕಳೆದ ಬಾರಿ ಸಿಕ್ಕಾಗ ಸ್ವೀಡನ್ನಿನ ಬಗೆಗೆ ಬರೆಯಿರು ಹೇಳಿದ್ದರು. ಆದರೆ ಬರೆಯಲು ಅದ್ಯಾಕೋ ಮನಸ್ಸು ಬರುತ್ತಿರಲಿಲ್ಲ. ಕಾರಣ ಅಲ್ಲಿನ ಸೊಗಸನ್ನು ಅನುಭವಿಸುತ್ತ ಕಾಲ ಕಳೆಯುತ್ತಾ ಅದರ ಬಗೆಗೆ ಬರೆಯಲು ಸಾದ್ಯವಾಗಲಿಲ್ಲವೇನೋ. ಆದರೆ ಮಲೇಶಿಯಾ ದಲ್ಲಿ ಕುಳಿತು ಅಲ್ಲಿನ ದೇಶದ ಬಗೆಗೆ ಬರೆಯಬೇಕೆಂಬ ಆಸೆ ಉತ್ಕಟವಾಗಿ ಮೂಡುತ್ತಿದೆ. ಅದಕ್ಕೆ ಈ ಲೇಖನ.

Friday, July 22, 2011

ಹುಟ್ಟಿದ ಹಬ್ಬದ ಶುಭಾಶಯಗಳು

ಇಂದು ಪ್ರೀತಿಯ ಮಡದಿಯ ಜನ್ಮ ದಿನ. ಕಳೆದ ಕೆಲವು ವರ್ಷಗಳಿಂದ ಅವಳ ಜನ್ಮದಿನವನ್ನು ಒಟ್ಟಿಗೆ ಆಚರಿಸುತ್ತಿದ್ದ ನನಗೆ ಈ ಸಲ ಮಾತ್ರ ಅವಳಿಂದ ದೂರವಾಗಿ ಮಲೇಶಿಯಾ ದಲ್ಲಿ ಇರುವ ಸಂದರ್ಭ ಬಂದೊದಗಿದೆ. ಅವಳ ನೆನಪು ಇಂದು ಕಾಡುತ್ತಿದೆ. ಜನ್ಮ ದಿನದ ಸಂದರ್ಭದಲ್ಲಿ ಹಾರ್ದಿಕ ಶುಭ ಹಾರೈಕೆಗಳು. ಜನ್ಮ ದಿನದ ಸಂಧರ್ಬದಲ್ಲಿ ಈ ಕವನ ಅವಳಿಗಾಗಿ...




ನನ್ನ ಒಲವೆ, ನನ್ನ ಬಲವೆ, ನನ್ನ ಪ್ರೇಮವೇ
ಮನವ ಗೆದ್ದ, ತನುವ ಗೆದ್ದ ನನ್ನ ಪ್ರೀತಿಯೇ
ಕಣ ಕಣದಲೂ ಅಣು ಅಣುವಲೂ ನಿನ್ನ ಕಾಣುವೆ
ಉಸಿರಿನ ಕೊನೆ ಉಸಿರಲ್ಲೂ ನಗುವ ನೀಡುವೆ

ಜನ್ಮ ದಿನದ ಕ್ಷಣವು ಇದುವು ಹರಸಿ ನಿನ್ನನು
ಇಂದು ನಿನ್ನ ನೆನಪು ಕಾಡುತಿಹುದು ಎನ್ನನು
ನೂರು ಕಾಲ ಬಾಳು ನೀನು, ಹರಸುತಿಹೆನು ನಾ
ಸದಾ ಸುಖವು ನಿನಗೆ ಸಿಗಲಿ, ಬೇಡುತಿರುವೆ ನಾ

ಜನ್ಮ ದಿನದಿ ನಿನ್ನ ಬಿಟ್ಟು ದೂರ ಇರುವೆನು
ಕ್ಷಮಿಸು ಎನ್ನ , ಬೇಗ ಬರುವೆ, ನೋಡ್ವೆ ನಿನ್ನನು
ಕಾಲವೆಂಬ ಪರಿಧಿಯಲ್ಲಿ, ಕಣವು ಎಲ್ಲರೂ
ಮರೆತ ಕ್ಷಣವ, ಬೆರೆತ ನಗುವ, ನೆನಪ ಮಾಡ್ವರು

ವರುಷ ಕಳೆದು ವರುಷ ಬಂತು ನಿನ್ನ ಬದುಕಲಿ
ಹರುಷವೆಂದೂ ಮರೆಯದಿರಲಿ ಬಾಳ ರಥದಲಿ
ಜನ್ಮದಿನದ ಸಮಯದಲ್ಲಿ ಎನ್ನ ಹರಕೆಯು
ನೂರು ಕಾಲ ಬಾಳು ನೀನು, ಭವ್ಯ ಪಥದಲಿ 

Friday, June 17, 2011

ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ ..

''ಬದುಕು ಬಯಸುತ್ತದೆ, ಬಯಸಿದಂತೆ ಬೆಸೆಯುತ್ತದೆ, ಬೆಸೆದಂತೆ ಕಾಡಿಸುತ್ತದೆ ''



ಬದುಕಿನ ಬಗೆಗಿನ ಈ ಸಾಲುಗಳನ್ನು ಎಷ್ಟು ಬಾರಿ ಓದಿದೆನೋ ಗೊತ್ತಿಲ್ಲ, ಪ್ರತಿ ಸಲ ಓದಿದಾಗ  ಹೊಸ ಹೊಸ ಅರ್ಥವನ್ನೇ ನೀಡಿವೆ. ಕೆಲವೊಮ್ಮೆ ತೀರ ಸಾಗರದ ಅಲೆಗಳ ನಡುವೆ ನಿಂತು ಬದುಕನ್ನು ನೋಡಿದ ರೀತಿ, ಇನ್ನೊಮ್ಮೆ ದಟ್ಟ ಅರಣ್ಯದ ನಡುವೆ ನಿಂತು ಬಾಳ ಕಂಡ ರೀತಿ, ಬದುಕು ಅಂದಿಗೂ ಇಂದಿಗೂ ಎಂದಿಗೂ ಅಷ್ಟೇ ಸಮ್ಮೋಹಕ ಶಕ್ತಿಯ ಮಿಂಚಿನ ಸಂಚಲನದ ಪ್ರತೀಕ.

ಕಳೆದ ವಾರ ಬೆಂಗಳೂರು  ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಸ್ವೀಡನ್ ಗೆಂದು ಹೊರಟು ನಿಂತಾಗ ಕಾಡಿದ ಬದುಕಿನ ಘಳಿಗೆಗಳು ಬದುಕಿನಲ್ಲಿ ಹಿಂದೆಂದೂ ಕಾಡಿರಲಿಲ್ಲ. Bacholor ಗೂ Forced Bacholor ಗೂ ಬಹಳ ವ್ಯತ್ಯಾಸ. ಒಬ್ಬ ಹೇಗೂ ನಡೆಯುತ್ತದೆ ಎನ್ನುವ ವಿಶಾಲ ಮನೋಭಾವ, ಇನ್ನೊಬ್ಬ ಹೀಗೆ ನಡೆಯಬೇಕು ಎನ್ನುವ ಮನೋಭಾವ. ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಸಂದರ್ಭ ಮದುವೆಯಾದ 3 ವರ್ಷಗಳಲ್ಲಿ ಎಂದಿಗೂ ಬಂದಿರಲಿಲ್ಲ. ಆದರೆ ಇದೆ ಮೊದಲ ಬಾರಿಗೆ ಆ ವ್ಯತ್ಯಾಸ ತಿಳಿಯುವ ದಿನಗಳು ಬಂದಿದ್ದವು.

ತವರು ಮನೆಯಲ್ಲಿ ಹೆಂಡತಿಯನ್ನು ಬಿಟ್ಟು ವಿಮಾನ ನಿಲ್ದಾಣಕ್ಕೆ ಬಂದಾಗ ಮನಸೇಕೋ ಭಾರ. ಸದಾ ಅವಳೊಂದಿಗೆ ಪ್ರಯಾಣ ಮಾಡಿದ ನನಗೆ ಒಬ್ಬನೇ ಹೋಗುವ ಪರಿಸ್ಥಿತಿ ನೆನದು ಅರೆ ಘಳಿಗೆ ಖೇದ ಆಯಿತು. ಅಂತೂ ವಿಮಾನ ನಿಲ್ದಾಣದಿಂದ ವಿಮಾನ ಹತ್ತಿ ಕುಳಿತೆ. ವಿಮಾನ ನಿಧಾನ ವಾಗಿ ಗಗನಕ್ಕೆ ಹೋಗುತ್ತಿದ್ದರೆ ನನ್ನ ಮನಸ್ಸು ಅಷ್ಟೇ ನಿಧಾನವಾಗಿ ಕಳೆದ ಬದುಕಿನ ಕ್ಷಣಗಳ ನೆನಪಿನ  ಬುತ್ತಿ ಯನ್ನು  ಯನ್ನು ಬಿಚ್ಚುತ್ತಿತ್ತು.  
                                              
''जी हमे मंजूर है आपका ये फैसला
कह रही है हर नझर बंदा परवर शुकरीया
हंसके अपनी जिदगीमें कर लीया शामिल मुझे''


3 ವರ್ಷದ ಹಿಂದೆ ಜೊತೆಯಾದ ಗೆಳತಿ ಯ ತವರಿಗೆ ಬಿಟ್ಟು ಬರುವ ನೋವು ಮತ್ತು ಅದರ ಅಗಾಧತೆ ಬಹಳ ಕ್ಲಿಷ್ಟ ವಾದದ್ದು. ಬೆಂಗಳೂರಿಂದ ಹೋರಾಟ ವಿಮಾನ ಮುಂಬೈ ಗೆ ಬಂತು. ಮುಂಬೈ ವಿಮಾನ ನಿಲ್ದಾಣ ಕ್ಕೂ ನನಗೂ ಸದಾ ಎಣ್ಣೆ ಶೀಗೆಕಾಯಿ ಸಂಬಂಧ. ಕಾರಣ ನಾವು 4 ಸಲ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದೇವೆ. ಹಾಗೆಯೇ ಮುಂಬೈ ಮಾರ್ಗವಾಗಿ ಹೊರದೇಶಕ್ಕೆ ಹೋಗಿದ್ದೇವೆ. ಪ್ರತಿಸಲವೂ 3-4 ಘಂಟೆಗಳು ಕೇವಲ ಕಸ್ಟಮ್ಸ್ ಚೆಕ್ ಮುಗಿಸಲು, ಸಾಮಾನುಗಳನ್ನು ಹಾಕಲು, ಬೋರ್ಡಿಂಗ್ ಪಾಸ್ ಪಡೆಯಲು ಕಾದಿದ್ದೇವೆ. ಆದರೆ ಈ ಸಲ ಒಬ್ಬನೇ ಬಂದಿಳಿದಾಗ ಸ್ವಲ್ಪ ನೆಮ್ಮದಿಯಾಯಿತು. ಕಾರಣ ನನಗೆ ಮುಂಬೈ ನಿಂದ ಸ್ವೀಡನ್ ಗೆ ವಿಮಾನ ಹೊರಡಲು 6 ಘಂಟೆಗಳ ಸಮಯವಿತ್ತು. 3-4 ಘಂಟೆಗಳು ಕಸ್ಟಮ್ಸ್ ಚೆಕ್ ಎನ್ನುವುದರಲ್ಲಿ ಕಳೆದರೆ ಕಡೆಗೆ ಇರುವುದು ಕೇವಲ 2 ಘಂಟೆ ಮಾತ್ರ. ಹೇಗೂ ಕಳೆದು ಹೋಗುತ್ತದೆ ಎಂದುಕೊಂಡೆ. ಅದು ಬೇರೆ ಬೆಳಗಿನ ಜಾವ.
ಪಾಪಿ ಚಿರಾಯು

ಅಂತಾರಲ್ಲ ಹಾಗಾಯ್ತು ಸ್ವಾಮಿ ನನ್ನ ಸ್ಥಿತಿ. ಅದ್ಯಾವ ಘಳಿಗೆ ನೋ ಗೊತ್ತಿಲ್ಲ, ಮುಂಬೈ ನಲ್ಲಿ ಎಲ್ಲ ಚೆಕ್ ಗಳು ಕೇವಲ ಒಂದು ಘಂಟೆಯಲ್ಲಿ ಮುಗಿದುಹೊಗಿದ್ದವು. ಮತ್ತೆ ವಿಮಾನ ನಿಲ್ದಾಣ ದ ಬಗೆಗೆ ಅಸಾದ್ಯ ಕೋಪ ಬಂತು :) ಸದಾ ಟೈಮ್ ಪಾಸು ಮಾಡಿಸುವ ವಿಮಾನ ನಿಲ್ದಾಣ ಈ ಬಾರಿ ಕೈ ಕೊಟ್ಟಿತ್ತು. 5 ತಾಸುಗಳು ಏನು ಮಾಡುವುದು ಎಂದೇ ತಿಳಿಯಲಿಲ್ಲ. ಆದರೆ ಪ್ರೀತಿಗೆ, ಆದರ ಕ್ಕೆ ಇನ್ನೊಂದು ಹೆಸರಾದ ಆತ್ಮೀಯ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆಯವರ ಮನೆಗೆ ಹೋದಾಗ ಪ್ರಕಾಶಣ್ಣ  ಕೊಟ್ಟ ಹೊಸ ಪುಸ್ತಕ ''ಇದೇ ಇದರ ಹೆಸರು'' ನನ್ನ ಬ್ಯಾಗ್ ನಲ್ಲಿ ಇತ್ತು. ಅಂತೂ ಸತತ 5 ತಾಸುಗಳು ಅವರ ಪುಸ್ತಕ ಓದುತ್ತ ಕಳೆದೆ. ಪ್ರಕಾಶಣ್ಣ ನ ಪುಸ್ತಕ ಎಂದರೆ ಅದು ನಗುವನ್ನೇ ಗುತ್ತಿಗೆ ಪಡೆದಂತೆ. ಆ 5 ಘಂಟೆಗಳು ನನ್ನ ಒಂಟಿತನಕ್ಕೆ ಸ್ವಲ್ಪ ವಿರಾಮ ನೀಡಿದವು.


ವಿಮಾನ ದ ಒಳಗಂತೂ ಬೇಸರ ಹೇಳತೀರದು. ಒಂದಂತು ಸತ್ಯ, ಭಾರತದ ರೈಲುಗಳಲ್ಲಿ ಸಾಮಾನ್ಯ ವರ್ಗದವರು ಪ್ರಯಾಣಿಸುವಾಗ ಸಿಗುವ ಸಂತೋಷ ಯಾವ ವಿಮಾನ ದಲ್ಲಿಯೂ ಸಿಗುವುದಿಲ್ಲ. ಆ ರೈಲುಗಳಲ್ಲಿ ಎಲ್ಲರು ಸ್ನೇಹಿತರೆ, ಪರಿಚಯ ಬೇಕೇ ಬೇಕೆಂದಿಲ್ಲ, ನಗು ಇದ್ದರೆ ಸಾಕು. ವಿಮಾನಗಳಲ್ಲಿ ಹಾಗಲ್ಲ,

''ನಾನು ಸತ್ಯವನ್ನೇ ನುಡಿಯುತ್ತೇನೆ , ಸತ್ಯವನ್ನಲ್ಲದೆ ಬೇರೇನನ್ನೂ ನುಡಿಯುವುದಿಲ್ಲ'' 

ಎಂದು ಕೋರ್ಟ್ ನಲ್ಲಿ ಪ್ರಮಾಣ ಮಾಡುವ ಹಾಗೆ ವಿಮಾನ ಹತ್ತುವ ಎಲ್ಲ ಪ್ರಯಾಣಿಕರು

 ''ವಿಮಾನ ಹತ್ತಿದ ಮೇಲೆ ನನ್ನ ಸ್ಟೇಟಸ್ ಅನ್ನು ಕಾಪಾಡಿಕೊಳ್ಳುತ್ತೇನೆ, ಯಾರೊಂದಿಗೂ ಮಾತನಾಡುವುದಿಲ್ಲ, ಗಂಬೀರತೆ   ಯನ್ನು  ದತ್ತು ತೆಗೆದುಕೊಳ್ಳುತ್ತೇನೆ, ಆಕಸ್ಮಾತ್ ಯಾರಾದರೂ ನನ್ನ ಮಾತನಾಡಿಸಿದರೆ ಕೇಳಿದ್ದಕ್ಕಷ್ಟೇ ಉತ್ತರ ಕೊಟ್ಟು ಮತ್ತೆ ಸ್ಟೇಟಸ್ ಕಾಯ್ದುಕೊಳ್ಳುತ್ತೇನೆ'' 


ಎಂದು ಪ್ರಮಾಣ ಮಾಡಿಯೇ ಬಂದಿರುತ್ತಾರೆ ಎನಿಸುತ್ತದೆ. ಒಂದು ತರ ಜೈಲಿನಲ್ಲಿ ಇಟ್ಟ ಅನುಭವ. ಪಕ್ಕದಲ್ಲಿದ್ದ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಿಸಿದೆ. ಒಂದು ನಗುವನ್ನೇ ಅವನ ಮುಖದಿಂದ ಹೊರ ಹಾಕಲಾಗಲಿಲ್ಲ, ಇನ್ನು ಮಾತನಾಡಿಸುವುದು ದೂರದ ಮಾತು. ಅವನ ಗಂಭೀರ ಮುಖ ನೋಡಿದರಂತೂ ನನ್ನ ಒಂಟಿತನ ಇನ್ನು ಜಾಸ್ತಿ ಆಗುತ್ತಿತ್ತು. ಪ್ರತಿ ಬಾರಿ ವಿಮಾನ ದಲ್ಲಿ ಬರುವಾಗ ನಾನು ಮಾತು ಹೆಂಡತಿ ಮಾತನಾಡುತ್ತಾ, ಇಸ್ಪೀಟ್ ಆಡುತ್ತ ಬರುವ ಸಮಯ ನೆನಪಾಗಲು ಆರಂಬಿಸಿ ಮತ್ತು ಬೇಸರಗೊಂಡಿತು ಮನಸು. ಅದ್ಯಾಕೋ ಗೊತ್ತಿಲ್ಲ, ವಿಮಾನ ಹತ್ತುವವರೆಗೆ ಮಾತನಾಡುವ ಜನರು ಹತ್ತಿದ ಮೇಲೆ ಬದಲಾಗಿ ಹೋಗುತ್ತಾರೆ, ಪಕ್ಕ ನಮ್ಮ ರಾಜ ಕಾರಣಿಗಳ ಹಾಗೆ. ''ಎಷ್ಟೇ ಒಳ್ಳೆಯ ರಾಜಕಾರಣಿಯನ್ನು ನೀವು ಚುನಾಯಿಸಿ ಕಳಿಸಿ, ದೇವರಾಣೆಗೂ ಆಟ ಆರಿಸಿ ಬಂದ ಮೇಲೆ ತನ್ನ ಉದ್ದಾರ ಬಿಟ್ಟು ಬೇರೆ ಯೋಚಿಸುವುದಿಲ್ಲ''. ಹಾಗೆಯೇ ವಿಮಾನ ಪ್ರಯಾಣಿಕರು ಕೂಡ. ಹತ್ತಿದ ಮೇಲೆ ಸೈಲೆಂಟ್ ಆಗಿಬಿಡುತ್ತಾರೆ.

''ವಿಮಾನ ಹತ್ತುವ ಮೊದಲು ಅವರು  ವಯಾಲೆಂಟ್
ಹತ್ತಿದ ಮೇಲೆ ಆಗುವರು ಸೈಲೆಂಟ್
ಹತ್ತುವ ಮೊದಲು , ಕಸ್ಟಮ್ಸ್ ಕಾಟ
ಹತ್ತಿದ ಮೇಲೆ ಗಗನ ಸಖಿಯರ ನೋಟ ''

ಅಂತೂ ಗೋಥೆನ್ಬರ್ಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಬಂದಿಳಿದಾಗ ಮಧ್ಯಾನ್ಹ 2 ಘಂಟೆ. ಇಲ್ಲಿನ ವಿಮಾನ ನಿಲ್ದಾಣ ದ ಬಗ್ಗೆ ಹೇಳಲೇಬೇಕು. ಅತ್ಯಂತ ಪುಟ್ಟ ಮತ್ತು ಅತ್ಯಂತ ವ್ಯವಸ್ಥಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದು. ವಿಮಾನ ಇಳಿದು ಬ್ಯಾಗ್ ತೆಗೆದುಕೊಳ್ಳಲು ಬರುವ ಮೊದಲೇ ಬ್ಯಾಗ್ ನಿಮಗಾಗಿ ಕಾಯುತ್ತಿರುತ್ತದೆ. ಅಷ್ಟೊಂದು ವೇಗದಲ್ಲಿ ಇಲ್ಲಿ ಕೆಲಸ ನಡೆಯುತ್ತದೆ. ಯಾವ ಚೆಕ್ ಇಲ್ಲ. ವಿಮಾನ ಇಳಿದು 30 ನಿಮಿಷದ ಒಳಗೆ ನೀವು ನಿಮ್ಮ ಮನೆ ಮುಟ್ಟಿರುತ್ತಿರಿ.
ಮನೆ ತಲುಪಿದ ವೇಳೆ 2-30. ಮೊದಲ ಬಾರಿಗೆ ಹೆಂಡತಿ ಇಲ್ಲದ ಮನೆಯ ಬಾಗಿಲು ತೆಗೆದಾಗ ಹ್ರದಯ ಭಾರವಾಯಿತು. ಕಳೆದ 3 ವರ್ಷಗಳಲ್ಲಿ ಅವಳಿಲ್ಲದೆ ನಾನು ಒಂದು ದಿನವನ್ನು ಈ ಮನೆಯಲ್ಲಿ ಕಳೆದಿಲ್ಲ. ಮನೆ ಒಳಗೆ ಬಂದಾಗ ಎಲ್ಲೆಡೆ ನೀರವ ಮೌನ. 

''ಬಾ ಮಗನೆ , ಮುಂದೈತೆ ಊರಹಬ್ಬ'' 

ಎಂದು ನನ್ನನ್ನೇ ಅಣಕಿಸಿ ಮನೆ ಒಳಗೆ ಎಲ್ಲರೂ ಕರೆದಂತೆ ಭಾಸವಾಗುತ್ತಿತ್ತು. ಕೂಡಲೇ ಹೆಂಡತಿಗೆ ಫೋನ್ ಮಾಡಿ ಬಂದ ಸುದ್ದಿ ತಿಳಿಸಿದೆ ಮತ್ತು ಮೌನದ ಬಗ್ಗೆ ಹೇಳಿದೆ. ಅವಳು ಸಮಾಧಾನ ಮಾಡಿದಳು. ಪಾಪ ನನ್ನ ಬಿಟ್ಟು ತವರು ಮನೆಯಲ್ಲಿ ಇರುವ ಅವಳನ್ನು ನಾನು ಸಮಾಧಾನ ಮಾಡುವುದು ಬಿಟ್ಟು ಅವಳೇ ನನ್ನ ಸಮಾಧಾನ ಮಾಡುತ್ತಿದ್ದಳು.

''ತವರ ಸುಖದೊಳಗೆನ್ನ 
ಮರೆತಿಹಳು ಎನ್ನದಿರಿ 
ನಿಮ್ಮ ಪ್ರೇಮವ ನೀವೇ........''

ಎಂದು ಅವಳು ಹೇಳಿದಂತೆ ನನಗೆ ಅನ್ನಿಸತೊಡಗಿತು. ಅವಳಿಗೆ ಆಮೇಲೆ ಫೋನ್ ಮಾಡುತ್ತೇನೆ ಎಂದು ಹೇಳಿ ಹೊಟ್ಟೆ ಪೂಜೆಗೆ ಕುಳಿತೆ. ಹಸಿವು ವಿಪರೀತ ಆಗಿತ್ತು. ಈ ಹಸಿವೆಗೆ ನೋಡಿ, ಒಂಟಿತನ ಆಗಲಿ, ಜಂಟಿ ಆಗಲಿ ಯಾವುದು ಭಾದಿಸದು, ತನ್ನ ಸಮಯ ಬಂದಾಗ ಚೀರುವ ಹಸಿವೆಯ ಬಗ್ಗೆ ನನಗೆ ವಿಪರೀತ ಕೋಪವಿದೆ. ಯಾವ ಬೇಧ ಭಾವ ವೂ ಇಲ್ಲದೆ ಎಲ್ಲರನ್ನು ಸಮನಾಗಿ ಕಾಡುವ ಅದರ ಒಳ್ಳೆಯ ತಾಣದ ಬಗೆಗೆ ಸಂತಸವೂ ಇದೆ. ಬದುಕಿನಲ್ಲಿ ''ಸಸ್ಯಾಹಾರಿ'' ಆಗುವುದು ಕೆಲವೊಮ್ಮೆ ಶಾಪ. ಯಾಕೆಂದರೆ ಸ್ವೀಡನ್ ಗೆ ಬಂದ ಕೂಡಲೇ ಯಾವುದಾದರೊಂದು ಹೋಟೆಲ್ ಹೋಗೋಣ ಎಂದರೆ ಅಲ್ಲಿ ಸಿಗುವುದು ''ಮಾಂಸಾಹಾರಿ'' ಯೇ. ಅದಕ್ಕೆ ಮನೆಯ ಅಡಿಗೆ ಮನೆಗೆ ಹೋಗಿ ಅನ್ನ, ಸಾರು ಮಾಡಿಕೊಳ್ಳೋಣ ಎಂದು ನಿರ್ಧರಿಸಿ ಅನ್ನ ಇಡಲು ಪಾತ್ರೆ ಹುಡುಕತೊಡಗಿದೆ.


''ಎಲ್ಲ ಪಾತ್ರೆಗಳು ಮುಷ್ಕರ ಹೂಡಿದಂತೆ ನನಗೆ ಕಾಣದೆ ಕುಳಿತಿದ್ದವು. ಮನೆಯಲ್ಲಿ ಹೆಂಡತಿ ಇದ್ದಾಗ ಅವಳು ಲಕ್ಷಣವಾಗಿ ಎಲ್ಲವನ್ನು ಜೋಡಿಸಿಟ್ಟಾಗ ಅದರ ಪ್ರಾಮುಖ್ಯತೆ ನಮಗೆ ತಿಳಿಯುವುದೇ ಇಲ್ಲ. ಅದೇ ನಮಗೆ ಅಂಥಹ ಸ್ತಿತಿ ಬಂದಾಗ ಅವರ ಇರುವಿಕೆ ಅರ್ಥ ಆಗುತ್ತದೆ. ಒಂದು ಗಾಜಿನ ಪಾತ್ರೆ ತೆಗೆದುಕೊಂಡು ಅಕ್ಕಿ ತೊಳೆಯಲು ಮುಂದಾದೆ. ಆದರೆ ಆ ಪಾತ್ರೆ '' ನಿನ್ನೊಂದಿಗೆ ಇರಲು ಮನಸಿಲ್ಲ'' ಎನ್ನುವಂತೆ ನನ್ನ ಕೈಯಿಂದ ತಪ್ಪಿಸಿಕೊಂಡು ನೆಲದ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿತು. ಬಂದ ದಿನವೇ ''ಕೊಲೆ''. ನೋಡಿ, ಪಾತ್ರೆಗಳಿಗೂ ಅವಳಿಲ್ಲದ ನೋವು....''


ಬಿದ್ದ ಗಾಜಿನ ಚೂರುಗಳ ಒಂದೊಂದು ಪುಡಿಯೂ ಅಣಕಿಸುವಂತೆ ತೋರುತ್ತಿದ್ದವು. ಮೊದಲ ದಿನವೇ ಹೀಗಾದರೆ ಮುಂದೆ ಗತಿಯೇನೋ.....

ಇನ್ನೊಂದು ಸ್ಟೀಲ್ ಪಾತ್ರೆ ತೆಗೆದುಕೊಂಡೆ (ಪುನಃ ಗಾಜು ಮುಟ್ಟಿದರೆ ಎಲ್ಲಿ ಆತ್ಮಹತ್ಯೆ ಯ ಸಂಖ್ಯೆ ಜಾಸ್ತಿ ಆಗುತ್ತದೋ ಎಂಬ ಭಯ ), ಅನ್ನ ತೊಳೆದು ಅನ್ನಕ್ಕಿಟ್ಟೆ. ಸರಿ ಅನ್ನ ಆಗಲು ಸ್ವಲ್ಪ ಸಮಯವಿದೆ, ಒಂದು ಹಾಡನ್ನಾದರೂ ಕೇಳೋಣ ಎಂದು Tape Recorder ಹಚ್ಚಿದೆ. ಸ್ವಾಮಿ, ಏನಂತಿರ ನನ್ನ ಬೇಸರನ, ಒಳ್ಳೆ ಎಲ್ಲರು ನನ್ನ ಮೇಲೆ ಸೇಡು ತೀರಿಸ್ಕೊಳ್ಳುವ ಯೋಚನೆ ಯಲ್ಲಿ ಇದ್ದ ಹಾಗೆ ಅನಸ್ತು ಯಾಕೆ ಗೊತ್ತಾ, ಅದರಲ್ಲಿ ಬರ್ತಾ ಇದ್ದ ಹಾಡು, ಪ್ರಸಿದ್ದ ಗಾಯಕಿ M D Pallavi ಅವರು ಹಾಡಿದ

''ಮೊದಲ ದಿನ ಮೌನ,
ಅಳುವೇ ತುಟಿಗೆ ಬಂದಂತೆ..... ಚಿಂತೆ......''

ಬರಬೇಕೇ...ಕವಿ ಆ ಕವನ ಬರೆದ ಸನ್ನಿವೇಶ ಕ್ಕೂ ನನ್ನ ಪ್ರಸ್ತುತ ಸನ್ನಿವೇಶಕ್ಕೂ ಯಾವ ಸಂಬಂಧ ಇಲ್ಲದಿದ್ದರೂ ಹೆಂಡತಿಯ ಬಿಟ್ಟು ಮೊದಲ ದಿನ ಕಳೆಯುತ್ತಿರುವ ನನಗೆ ನನಗೋಸ್ಕರವೇ ಕವಿ ಈ ಹಾಡನ್ನ ಬರೆದರೇ ಎಂದು ಅನ್ನಿಸಿದ್ದು ಸುಳ್ಳಲ್ಲ. ಅಳು ತುಟಿಗೆ ಅಲ್ಲ, ಕಣ್ಣಲ್ಲೇ ಬಂದಿತ್ತು.

ಮೊದಲ ದಿನದ ಅನುಭವಗಳು ನನ್ನನ್ನ ಮಾನಸಿಕವಾಗಿ ದುರ್ಬಲ ಗೊಳಿಸಿದ್ದು ಸುಳ್ಳಲ್ಲ. ಅಂತು ಈಗ ದಿನಕ್ಕೆ ಹಲವಾರು ಬಾರಿ ಹೆಂಡತಿಯ ಜೊತೆ, ಮನೆಯವರ ಜೊತೆ ಮಾತನಾಡುತ್ತ 8 ದಿನಗಳೇ ಕಳೆದುಹೋಗಿವೆ.

ಅದಿರಲಿ, ಹೆಂಡತಿ ಯಾಕೆ ತವರು ಮನೆಗೆ ಹೋಗಿದ್ದಾಳೆ ಅಂತಿರಾ,
ಸದ್ಯದಲ್ಲೇ ಹೇಳ್ತೀನಿ ಅದನ್ನ :)
ನಿಮ್ಮವ
ಗುರು









Wednesday, May 18, 2011

ಗಿಲಿ ಗಿಲಿ ಮ್ಯಾಜಿಕ್ ...

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬಹು ರೋಚಕ ಮ್ಯಾಜಿಕ್ ಸ್ಪರ್ಧೆ ''ಗಿಲಿ ಗಿಲಿ ಮ್ಯಾಜಿಕ್''. ಸುಮಾರು ವರ್ಷಗಳ  ಹಿಂದೆ ಇದು ಕಡಲ ತೀರದ ಭಾರ್ಗವನ ತವರೂರು ಉಡುಪಿಯಲ್ಲಿ ನಡೆದಿತ್ತು. ಇದೇನಪ್ಪ, ಇವ ಮ್ಯಾಜಿಕ್ ಕಲಿಯೋಕೆ ಸ್ಟಾರ್ಟ್ ಮಾಡಿ ಬಿಟ್ನ ಅನ್ಕೋಬೇಡಿ. ಕಥೆ ವಿಶ್ವ ಮ್ಯಾಜಿಕ್ ಸ್ಪರ್ಧೆ ದಂತೂ ಖಂಡಿತ ಅಲ್ಲ. ಇದು ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಆತ್ಮೀಯ ಸ್ನೇಹಿತರು ಮಾಡಿದ ರೋಚಕ ಮ್ಯಾಜಿಕ ನ ತುಣುಕುಗಳು ಅಷ್ಟೇ.


ಕಾಲೇಜಿನ ಆ ದಿನಗಳಲ್ಲಿ ಪಾಠದಲ್ಲಿ ಎಷ್ಟು ಆಸಕ್ತಿಯಿತ್ತೋ ಅಷ್ಟೇ ಆಸಕ್ತಿ ಎಲ್ಲ ವಿಷಯಗಳಲ್ಲಿ ಇತ್ತು. ಅದರಲ್ಲೂ, ಭಾಷಣ, ಆಶು ಭಾಷಣ, ನಾಟಕ, ನ್ರತ್ಯ ಹೀಗೆ ಕೈಯ್ಯಾಡಿಸದ ಯಾವುದೇ ಕ್ಷೇತ್ರ ಇರಲಿಲ್ಲ. ಆಮೇಲೆ ಎರಡು ದೋಣಿಯ ನಡುವೆ ಕಾಲನ್ನು ಇಟ್ಟು ಯಾವ ದೋಣಿಯನ್ನು ಹತ್ತದ ಕ್ಷಣ ಎದುರಾಗಿದ್ದೂ ಇದೆ. ಇಂತಿಪ್ಪ ಸಮಯದಲ್ಲಿ ಉಡುಪಿಯ ಪೂಜ್ಯ ಸ್ವಾಮೀಜಿಯವರ ಮೆಚ್ಚಿನ ಕಾಲೇಜು ಪೂರ್ಣ ಪ್ರಜ್ನ ದ ಕಾಲೇಜಿನ ವಾರ್ಷಿಕೋತ್ಸವ ದ ದಿನಾಂಕ ನಿಗದಿಯಾಗಿತ್ತು. ನನಗೆ ನೆನಪಿರುವಂತೆ ಅದು ಫೆಬ್ರುವರಿ 12 ಅನಿಸುತ್ತದೆ. ಅದಕ್ಕಾಗಿ ತಯಾರಿಯೋ ತಯಾರಿ. ಉಡುಪಿ ಸಾಂಸ್ಕ್ರತಿಕ ತವರು. ಇಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನೋಡುವುದೇ ಸಂಭ್ರಮ. ನಾನು ಉಡುಪಿಯಲ್ಲಿ ಇರುವಷ್ಟು  ಕಾಲ  ಭಾರತದ ಅನೇಕ ಸಾಧಕರ ಸಾಧನೆಯನ್ನು ಕಣ್ಣಾರೆ ಕಾಣುವ ಸೌಭಾಗ್ಯ ಪಡೆದಿದ್ದೇನೆ. ಸ್ವಾಮೀಜಿಯವರ ಎದುರಿನಲ್ಲಿ ಅವರು ನುಡಿಸಿದ  ವಾದ್ಯಗಳೆಷ್ಟೋ, ಹಾಡಿದ ಭಜನ್ ಗಳೆಷ್ಟೋ, ಮಾಡಿದ ಭಾಷಣ ಗಳೆಷ್ಟೋ  ,  ಒಟ್ಟಿನಲ್ಲಿ ಸಾಂಸ್ಕ್ರತಿಕ ರಾಜಧಾನಿಯಲ್ಲಿ ಧನ್ಯತಾ ಭಾವ ಅನುಭವಿಸಿದ್ದೇನೆ.

ಪೂರ್ಣ ಪ್ರಜ್ನ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವ ಕ್ಕೆ ಒಂದು ತಿಂಗಳ ಮೊದಲಿನಿಂದಲೂ ತಯಾರಿ ನಡೆದಿರುತ್ತದೆ. ಹಾಗೆಯೇ ನಮ್ಮ ಗೆಳೆಯರು ಮತ್ತು ನಾನು ನಾಟಕದಲ್ಲಿ ಇದ್ದೆವು. ಗೆಳೆಯರ ಗುಂಪಿನ ಇಬ್ಬರು ಆತ್ಮೀಯ ಗೆಳೆಯರು ''ಈ ಬಾರಿ ನಾವು ವಿನೂತನ ಕಾರ್ಯಕ್ರಮ ಕೊಡುತ್ತೇವೆ, ಅದನ್ನು ಈಗ ಹೇಳುವುದಿಲ್ಲ, ವೇದಿಕೆಯಲ್ಲಿ ನೋಡಿ ಆನಂದಿಸಿ'' ಎಂದರು. ನಮಗೋ, ಕುತೂಹಲ, ಇದೇನಪ್ಪ  ವಿನೂತನ ಕಾರ್ಯಕ್ರಮ ಎಂದು. ಅದನ್ನು ತಿಳಿದುಕೊಳ್ಳಲು ಗೆಳೆಯರ ರೂಮಿನ ಹತ್ತಿರ ಹಲವಾರು ಬಾರಿ ಸುಳಿದಿದ್ದೇವೆ. ಎಲ್ಲಾದರೂ ತಯಾರಿ ಮಾಡಿಕೊಳ್ಳುತ್ತಿದ್ದರೆ ತಿಳಿಯಲಿ ಎಂದು. ಆದರೆ ಆ ಗೆಳೆಯರು ಬಹಳ ಗೋಪ್ಯವಾಗಿ ಅವರ ಕಾರ್ಯಕ್ರಮ ಇಟ್ಟಿದ್ದರು. ಪ್ರತಿ ದಿನ ನಮ್ಮ ಎದುರು ಭೆಟ್ಟಿ ಅದಾಗ ತಮ್ಮ ಕಾರ್ಯಕ್ರಮದ ರೂಪು ರೇಷೆ ಗಳ ಬಗೆಗೆ ವರ್ಣನೆ, ಆದರೆ ಯಾವ ಕಾರ್ಯಕ್ರಮ ಎಂದು ಹೇಳುತ್ತಿರಲಿಲ್ಲ.

  ಒಂಥರಾ ಹಳೆಯ ಕಾಲದ ಮದುವೆಯಂತೆ. ಹೆಣ್ಣಿಗೆ ಮಾಲೆ ಹಾಕುವವರೆಗೂ
 ಮುಖ ನೋಡದಂತೆ ಕಾದ ವರ ನಂತೆ ನಮ್ಮ ಸ್ಥಿತಿ. 

ಆದರೆ ಆ ಇಬ್ಬರು ಗೆಳೆಯರು ಏನಾದರೂ ಹೊಸ ವಿಚಾರ ಖಂಡಿತ ನೀಡುತ್ತಾರೆ ಎಂಬ ಆತ್ಮ ವಿಶ್ವಾಸ. ಅದ್ಭುತ ಪ್ರತಿಭೆಯ ವ್ಯಕ್ತಿತ್ವ ಅವರದು. ಆ ನಿಟ್ಟಿನಲ್ಲಿ ನಾನು ಬಹಳಷ್ಟು ಅದೃಷ್ಟವಂತ ಎನ್ನಬಹುದು. ಯಾಕೆಂದರೆ ನನ್ನ ಸ್ನೇಹಿತರ ಬಳಗದಲ್ಲಿ ಅನೇಕ ಅದ್ವೀತೀಯ ಪ್ರತಿಭೆಗಳಿವೆ. ಇಂದಿಗೂ ಬೆಂಗಳೂರಿನ ಪ್ರತಿಷ್ಟಿತ ಕಂಪನಿಗಳ ಉನ್ನತ ಹುದ್ದೆಯಲ್ಲಿ ಆ ಗೆಳೆಯರಿದ್ದಾರೆ. ಬೆಂಗಳೂರಿಗೆ ಹೋದಾಗ ಅವರ ಮನೆಯಲ್ಲಿ ಕುಳಿತು ಪಕ್ಕಾ ಕಾಲೇಜಿನ ಹುಡುಗರಂತೆ ಕುಳಿತು ನಾವು ಹರಟುತ್ತಿದ್ದರೆ ನಮ್ಮ ಹೆಂಡತಿ ನಮ್ಮ ಮುಖವನ್ನೇ ನೋಡುತ್ತಿರುತ್ತಾರೆ. ರಾತ್ರಿ 9 ಘಂಟೆಗೆ ಮಾತನಾಡಲು ಆರಂಭಿಸಿದರೆ ಬೆಳಗಿನ ಜಾವ 3 ಘಂಟೆ ಆದರೂ ಸಮಯದ ಅರಿವು ಇರುವುದಿಲ್ಲ. ಯಾರಿಗೂ ಅಹಂಕಾರದ ಒಣ ಪ್ರತಿಷ್ಠೆ ಯಿಲ್ಲ. ಅಂಥಹ ಸಹ್ರದಯೀ ಸ್ನೇಹಿತರಿಗೆ ಸದಾ ಋಣಿ ನಾನು.

ವಾರ್ಷಿಕೋತ್ಸವ ಹತ್ತಿರ ಬರುತ್ತಿತ್ತು. ಎದೆಯೊಳಗೆ ಆತಂಕವೋ ಆತಂಕ. ನಮ್ಮ ನಾಟಕ ದ ಬಗ್ಗೆ ಅಲ್ಲ, ಆ ಸ್ನೇಹಿತರ ಕಾರ್ಯಕ್ರಮದ ಬಗ್ಗೆ. ಜೀವದ ಗೆಳೆಯರು ಅವರು, ನಮ್ಮಲ್ಲಿ ಮುಚ್ಚಿಟ್ಟು ಏನನ್ನೋ ಮಾಡುವ ಪಣ ತೊಟ್ಟಿದ್ದರು. ತೀರಾ ಕಾಲೇಜಿನ ವಾರ್ಷಿಕೋತ್ಸವಕ್ಕೆ ಒಂದು ವಾರ ಇರುವಾಗ ನಾವು ಜಾದೂ ಮಾಡುತ್ತೇವೆ ಎಂದಿದ್ದರು. ಇವರಿಗೆ ಜಾದೂ ಹೇಗೆ ಬರುತ್ತದೆ ಎಂಬ ಕುತೂಹಲ ನಮಗೆ. ಎಲ್ಲಿಂದ ಜಾದೂ ಕಲಿತಿದ್ದರೋ ಗೊತ್ತಿಲ್ಲ. ಆದರೆ ವಿನೂತನ ಜಾದೂ ಮಾಡುತ್ತೇವೆ. ಎಂದು ಘೋಷಿಸಿಯೇ ಬಿಟ್ಟರು. ಇಷ್ಟು ದಿನ ವಿನೂತನ ಕಾರ್ಯಕ್ರಮ ಇತ್ತು, ಇನ್ನು ಮೇಲೆ ವಿನೂತನ ಜಾದೂ. 

ಪೂರ್ಣ ಪ್ರಜ್ನ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮೂರು ದಿನ ಮೊದಲು ಎಲ್ಲ ಕಾರ್ಯಕ್ರಮಗಳನ್ನು ಸಂಬಂಧಿಸಿದ ಪ್ರೊಫೆಸರ್ ಗಳು ವೀಕ್ಷಿಸುತ್ತಾರೆ. ಕಾರಣ ಕೆಲವೊಮ್ಮೆ ಧರ್ಮಕ್ಕೆ ಸೂಕ್ಷ್ಮ ವಿಚಾರಗಳು ಎದುರಾದರೆ ಮುಂದೆ ಸಮಸ್ಯೆ ಆಗಬಾರದು ಎಂದು. ನಾವು ನಮ್ಮ ನಾಟಕ ಮಾಡಿ ತೋರಿಸಿದೆವು. ಹಸಿರು ನಿಶಾನೆ ಸಿಕ್ಕಿತು. ಇದೊಂದು ತರ ಸೆನ್ಸಾರ್ ಮಂಡಳಿ ಒಪ್ಪಿಗೆ ಪಡೆದ ಹಾಗೆ. ಪುಣ್ಯಕ್ಕೆ ''A'' Grade, ''B'' Grade ಅಂತ ಕೊಡೋಲ್ಲ :)

ನಮ್ಮ ನಾಟಕದ ನಂತರ ಒಂದು ನ್ರತ್ಯ ವೀಕ್ಷಿಸಿದ ನಂತರ ನನ್ನ ಆತ್ಮೀಯ ಸ್ನೇಹಿತರ ಜಾದೂ ಬಂತು. ಇದು ರಿಹರ್ಸಲ್ ಆದ್ದರಿಂದ ಎಲ್ಲ ಜಾದೂ ತೋರಿಸುವಂತೆ ಇರಲಿಲ್ಲ. ಆದ್ದರಿಂದ ಒಂದು ಹಗ್ಗ ತೆಗೆದು ಏನೇನೋ ಮಂತ್ರ ಹೇಳಿ ಹಗ್ಗವನ್ನು ಗಾಳಿಯಲ್ಲಿ ನಿಲ್ಲಿಸಿಬಿಟ್ಟರು. ಉಳಿದ ಹುಡುಗರು ಚಪ್ಪಾಳೆ ಹೊಡೆದರು. ಪ್ರದರ್ಶನಕ್ಕೆ ಹಸಿರು ನಿಶಾನೆ ಸಿಕ್ಕಿತು. ಅಲ್ಲಿಂದ ಹೊರಗೆ ಬಂದ ಮೇಲೆ ನನ್ನ ಜಾದೂ ಗೆಳೆಯರು ಹೇಳಿದರು ''ಇವತ್ತು ನೀವು ನೋಡಿದ್ದು ಏನೂ ಅಲ್ಲ, ಆ ದಿನ ನೋಡಿ, ನಿಮಗೆಲ್ಲ ಆಶ್ಚರ್ಯ ಎನ್ನುವ ಜಾದೂ ಮಾಡುತ್ತೇವೆ''. ಈಗ ಅದನ್ನು ಹೇಳುವುದಿಲ್ಲ ಎಂದು ಮತ್ತೆ ಗೋಡೆಯ ಮೇಲೆ ದೀಪ ಇಟ್ಟರು. ಈ ಕುತೂಹಲವೇ ಹಾಗೆ. ಇಟ್ಟು ಕೊಂಡಷ್ಟೂ ಆಸಕ್ತಿ ಹೆಚ್ಚು. ಪೆಟ್ಟಿಗೆಯಲ್ಲಿ ಬೀಗ ಹಾಕಿಟ್ಟ ವಸ್ತುವಿನ ಹಾಗೆ. ಒಳಗೆ ಏನಿದೆ ಏನಿದೆ ಎಂಬ ಆಸಕ್ತಿ. ಒಮ್ಮೆ ಪೆಟ್ಟಿಗೆಯ ಬಾಗಿಲು ತೆಗೆದರೆ ಮತ್ತೆ ಯಾವ ಆಸಕ್ತಿಯು ಇಲ್ಲ. ಅಂತೂ ನಮ್ಮ ಕುತೂಹಲವನ್ನು ತಣಿಸದೆ ವಾರ್ಷಿಕೋತ್ಸವದ ದಿನದ ವರೆಗೂ ಕಾಯ್ದುಕೊಂಡು ಬಂದರು.

ಆ ದಿನ ಬಂದೆ ಬಿಟ್ಟಿತು. ಪೂರ್ಣಪ್ರಜ್ಞ ಕಾಲೇಜಿನ ವಾರ್ಷಿಕೋತ್ಸವ 3 ದಿನ ನಡೆಯುತ್ತದೆ. ಮೊದಲ ದಿನ ಸ್ವಾಮೀಜಿಯವರ ಅಶಿರ್ವಚನ, ನಂತರ ಮುಖ್ಯ ಅಥಿತಿಗಳ ಭಾಷಣ, ಎರಡನೇ ದಿನ ಕಾಲೇಜಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಹಾಗೂ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಕ್ಷೇತ್ರದಲ್ಲಿ ಕಾಲೇಜಿಗೆ ಕೀರ್ತಿ ತಂದು ಕೊಟ್ಟ ಒಬ್ಬ ಹುಡುಗನಿಗೆ ಮತ್ತು ಹುಡುಗಿಗೆ ಕ್ರಮವಾಗಿ ''ಆದರ್ಶ ವಿದ್ಯಾರ್ಥಿ'' ಮತ್ತು ''ಆದರ್ಶ ವಿದ್ಯಾರ್ಥಿನಿ'' ಪ್ರಶಸ್ತಿ ಸ್ವಾಮೀಜಿಯವರ ಆಶಿರ್ವಾದದೊಂದಿಗೆ  ನೀಡಲಾಗುತ್ತದೆ. ಜಾದೂ ಮಾಡುವ ಇಬ್ಬರು ಗೆಳೆಯರಲ್ಲಿ ಒಬ್ಬ ಗೆಳೆಯನಿಗೆ ''ಆದರ್ಶ ವಿದ್ಯಾರ್ಥಿ'' ಸಿಕ್ಕಿದ್ದು ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಸಿತ್ತು. ಅಂತೆಯೇ ವಿಜ್ಞಾನ ವಿಭಾಗದ ಸುಮಾ (ಹೆಸರು ಬದಲಿಸಲಾಗಿದೆ) ಎನ್ನುವವಳಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ಲಭಿಸಿತು. 

ಇನ್ನು ಮೂರನೇ ದಿನ ಇರುವುದೇ ಮನರಂಜನೆಗೆ. ಆ ದಿನ ಸ್ವಾಮೀಜಿಯವರು ಬರುವುದಿಲ್ಲ. ಹುಡುಗರದೆ ದರ್ಬಾರು. ಬೆಳಗಿನಿಂದಲೇ ಸಂಭ್ರಮದ ವಾತಾವರಣ. ಹತ್ತು ಹಲವು ವೇಷ ತೊಟ್ಟ ಹುಡುಗ ಹುಡುಗಿಯರ ನೋಡುವುದೇ ಒಂದು ಸಂಭ್ರಮ. ನಾವೆಲ್ಲರೂ ನಮ್ಮ ಸ್ನೇಹಿತರ ಜಾದೂ ಕಾರ್ಯಕ್ರಮ ನೋಡಲು ಉತ್ಸುಕರಾಗಿದ್ದೆವು. ವೇದಿಕೆಯ ಮೇಲಿಂದ ''ಈಗ ಜಾದೂ ಪ್ರದರ್ಶನ'' ಎಂದ ಕೂಡಲೇ ಚಪ್ಪಾಳೆಯ ಸುರಿಮಳೆ. ಕಾರಣ ಜಾದೂ ಮಾಡುವ ಒಬ್ಬ ಗೆಳೆಯ ಆದರ್ಶ ವಿದ್ಯಾರ್ಥಿ  ಬೇರೆ. ಸುಮಾರು ಮೊದಲ 20 ನಿಮಿಷ ವಿಧ ವಿಧದ ಜಾದೂ ಮಾಡಿ ತೋರಿಸಿದರು. ತಮ್ಮ ಹಾಸ್ಯದ ಮೂಲಕ ನಡು ನಡುವೆ ಪ್ರೇಕ್ಷಕರನ್ನು ರಂಜಿಸುತ್ತ ಹಗ್ಗವನ್ನು ನಿಲ್ಲಿಸುವುದು, ಹಗ್ಗವನ್ನು ಹಾವಿನಂತೆ ಓಡಿಸುವುದು ಎಲ್ಲ ಮಾಡಿ ಜನರ ''ಶಹಬ್ಬಾಸ್'' ಗಿಟ್ಟಿಸಿದರು. ಇನ್ನೇನು ಜಾದೂ ಮುಗಿಯುವ ಹಂತ , ಜಾದೂ ಗೆಳೆಯ ಮೈಕ್ ನ ಹತ್ತಿರ ಬಂದು,
  ''ಇದೀಗ ಇವತ್ತಿನ ಕೊನೆಯ ಹಾಗೂ ಅದ್ಭುತ ಜಾದೂ, ನಿಮ್ಮ ಮನಸಿನಲ್ಲೇ ನೀವು ಏನೇ ಅಂದುಕೊಳ್ಳಿ,
 ಅದು ನಿಮ್ಮೆದುರಿಗೆ ಇಡುತ್ತೇವೆ, ಇಲ್ಲ ಕೊಡುತ್ತೇವೆ'
ಎಂದುಬಿಟ್ಟರು. ಒಮ್ಮೆಲೇ ನಿಶ್ಯಬ್ದ. ಮನಸಿನಲ್ಲಿ ಅಂದುಕೊಂಡಿದ್ದೆಲ್ಲ ಕೊಡುವಷ್ಟು  ಮಹಾನ ಜಾದೂ ಗಾರರು ಇವರಲ್ಲ ಎಂದು ನಮಗೆ ಗೊತ್ತಿತ್ತು. ಆದರೆ ಮಾತಿನಿಂದ ಹಿಂದೆ ಸರಿಯುವಂತೆ ಇಲ್ಲ.   ನಮ್ಮ ಎದೆ ''ಢವ ಢವ'' ಎನ್ನತೊಡಗಿತು.

ಕೊನೆಯ ಜಾದೂ ಆರಂಭವಾಗೆ ಬಿಟ್ಟಿತು. ಪ್ರೇಕ್ಷಕರಲ್ಲಿ ಒಬ್ಬನನ್ನು ಕರೆದು ಒಂದು ಚೀಲದೊಳಗೆ ಕೈ ಹಾಕಿ ಮನಸಿನಲ್ಲಿ ಏನಾದರೂ ನೆನಪು ಮಾಡಿಕೊ ಎಂದರು, ಅವನು ಏನು ನೆನಪು ಮಾಡಿ ಕೊಂಡನೋ  ಏನೋ, ಒಡನೆಯೇ ಒಂದು ಸುಂದರ ಪೆನ್ನು ಅವನ ಕೈಯ್ಯಲ್ಲಿ ಬಂತು. ಮತ್ತೊಮ್ಮೆ ಚಪ್ಪಾಳೆ. ಪುನಃ ಇನ್ನೊಬ್ಬ ಬಂದ, ಕೈ ಹಾಕಿದ, ಸುಂದರ ಮೊಬೈಲ್ ಅವನ ಕೈಯಲ್ಲಿ ಇತ್ತು. ಮತ್ತೆ ಚಪ್ಪಾಳೆ. (ಮೊದಲೆ ಅವರಿಗೆ ಬೇಕಾದ ಕೆಲವು ವಿಧ್ಯಾರ್ಥಿಗಳಿಗೆ ವೇದಿಕೆಯ ಮೇಲೆ ಬರಲು ಹೇಳಿದ್ದರು ಎಂಬುದು ಆಮೇಲೆ ತಿಳಿಯಿತು).

ಕೊನೆಗೆ ಒಂದು ಹುಡುಗಿಯನ್ನು ಬರಲು ಹೇಳಿದರು (ಮೊದಲೆ ಆ ಹುಡುಗಿಗೆ ಬರಲು ಹೇಳಿದ್ದರು). ಇನ್ನೇನು ಆ ಹುಡುಗಿ ಹೊರಡಲು ರೆಡಿ ಆಗುತ್ತಿದ್ದಾಳೆ ಅನ್ನುವಷ್ಟರಲ್ಲಿ ಅವಳ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸುಮಾ (ಆದರ್ಶ ವಿದ್ಯಾರ್ಥಿನಿ) ಎದ್ದು ಹೊರಟೇ ಬಿಟ್ಟಳು. ಈಗ ಜಾದೂ ಗೆಳೆಯರು ಅವಾಕ್ಕಾದರು. ಅವರಿಗೆ ಇದೊಂದು ಶಾಕ್. ಅವರು ಮೊದಲೆ ನಿಗದಿಪಡಿಸಿದ ಹುಡುಗಿ ಈಗ ಏನು ಮಾಡಲಾಗದೆ ಅಸಹಾಯಕಿ. ಸುಮಾ ವೇದಿಕೆ ಹತ್ತಿದಳು. ಇವರು ಹೇಳಿದಂತೆ ಮನಸಿನಲ್ಲಿ ಏನನ್ನೋ ನೆನೆದು ಚೀಲದಲ್ಲಿ ಕೈ ಹಾಕಿದಳು. ಜಾದೂ ಗೆಳೆಯರು ಮೈಕಿನ ಹತ್ತಿರ ಬಂದು  ''ಗಿಲಿ ಗಿಲಿ ಮ್ಯಾಜಿಕ್, ಗಿಲಿ ಗಿಲಿ ಮ್ಯಾಜಿಕ್'' ಎನ್ನುತ್ತಾ ಅವಳಿಗೆ ಮನಸಿನಲ್ಲಿ ನೆನೆದಿದ್ದು ಚೀಲದಲ್ಲಿ ಇದೆ, ತೆಗೆದುಕೋ ಎಂದರು. ಅವಳು ಚೀಲದಲ್ಲಿ ಕೈ ಹಾಕಿ ಏನೋ ತಾಗಿದಂತಾಗಿ ಅದನ್ನು ಹಿಡಿದುಕೊಂಡು ಪ್ರೇಕ್ಷಕರ ಕಡೆಗೆ ತಿರುಗಿ ಕೈ ಎತ್ತಿದಳು, ಒಮ್ಮೆಲೇ ಕಾಲೇಜಿನ ಹುಡುಗರು ಗೊಳ್ಳೆಂದು ನಕ್ಕರೆ ಎಲ್ಲ ಉಪನ್ಯಾಸಕರು ಗಂಭೀರವಾದರು. ಕಾರಣ ಇಷ್ಟೇ

 ''ಅವಳು   ಕೈಯಲ್ಲಿ ಹಿಡಿದುಕೊಂಡದ್ದು ಒಂದು ಬ್ರಾ'' 

ಜಾದೂ ಗೆಳೆಯ ಬೇರೆ ಮೈಕಿನಲ್ಲಿ ಹೇಳುತ್ತಿದ್ದಾನೆ ''ನೋಡಿ ನಮ್ಮ ಕೊನೆಯ ಜಾದೂ, ಅವಳು ಮನಸಿನಲ್ಲಿ ನೆನಪು ಮಾಡಿಕೊಂಡಿದ್ದು ಅವಳ ಕೈಯಲ್ಲಿ ಇದೆ'' ಎಂದು.

ಸುಮಾಳ ಕಣ್ಣಲ್ಲಿ ನೀರು. ಜಾದೂ ಮುಗಿಸಿದ ಗೆಳೆಯರು ವೇದಿಕೆ ಇಳಿದರು. ಇಳಿದವರೇ ಮೊದಲು, ಮೊದಲೆ ತಿಳಿಸಿದ ಹುಡುಗಿಗೆ ದಬಾಯಿಸಿದರು ''ನೀನು ಬರುವ ಬದಲು ಅವಳನ್ನು ಯಾಕೆ ಕಳಿಸಿದೆ'' ಎಂದು. ಆದರೆ ಕಾಲೇಜಿನ ಹುಡುಗರು ಇನ್ನೂ ಚಪ್ಪಾಳೆ ಹಾಕುತ್ತಲೇ ಇದ್ದರು. ಎಷ್ಟೆಂದರೂ ಆಗಿನ ವಯಸ್ಸೇ ಹಾಗೆ, ಚೇಷ್ಟೆ , ಕುಚೇಷ್ಟೆ ಗಳು ಇದ್ದಿದ್ದೆ ಅಲ್ಲವೇ.

ಮರುದಿನ ಬೆಳಿಗ್ಗೆ 3 ದಿನ ಮೊದಲೆ ಕಾರ್ಯಕ್ರಮದ ರಿಹರ್ಸಲ್ ನೋಡಿದ್ದ ಪ್ರೊಫೆಸರ್ ಇವರ ಹತ್ತಿರ ಬಂದು '' ಇದೇನಿದು ನಿಮ್ಮ ಜಾದೂ, ಆ ದಿನ ನನಗೆ ಹಗ್ಗ ನೇರ ಮಾಡಿ, ಹಾವಿನಂತೆ ಹಗ್ಗ ನಿಲ್ಲಿಸಿ ಇದನ್ನೇ ನಮ್ಮ ಮೇನ್ ಜಾದೂ ಅಂದಿರಿ, ನಿನ್ನೆ ಬೇರೆಯದೇ ತೋರಿಸಿದಿರಿ, ಅದು ಒಬ್ಬ ಆದರ್ಶ ವಿದ್ಯಾರ್ಥಿನಿ ಗೆ , ಛೆ ಛೆ ''

ನಮಗೋ ನಗುವೇ ನಗು, ವಿನೂತನ   ಜಾದೂ ನೋಡಿ, ಆ ಗೆಳೆಯರನ್ನು ಚುಡಾಯಿಸಿದ್ದೆ ಚುಡಾಯಿಸಿದ್ದು. ಇಂದಿಗೂ ಬೆಂಗಳೂರಿಗೆ ಹೋದಾಗ ಗೆಳೆಯರೆಲ್ಲ ಒಟ್ಟಿಗೆ ಸೇರಿದಾಗ ಜಾದೂವಿನ ವಿಚಾರ ಬರುತ್ತದೆ. ಮತ್ತೆ ನಗು. ಆ ಇಬ್ಬರು ಗೆಳೆಯರು ಬೆಂಗಳೂರಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ಆದರೆ ಆ ದಿನಗಳ ನೆನಪುಗಳು ಮಾತ್ರ ಸದಾ ಮನಸಿನಲ್ಲಿ ಇವೆ.  

Friday, April 22, 2011

''ಹೆಸರೇ ಬೇಡ'' ದಿಂದ ''ಇದೇ ಇದರ ಹೆಸರು'' ನ ತನಕ....

ಬ್ಲಾಗ್ ಪ್ರಪಂಚ ಬೆಳೆದಂತೆ ಅನೇಕ ಸ್ನೇಹಿತರು, ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವ ಹಾಗೆ ಎಲ್ಲೋ ಇರುವ ನಾವೆಲ್ಲಾ ಇಂದು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಸ್ನೇಹಕ್ಕೆ ಹೊಸ ಅರ್ಥ ಈ ಬ್ಲಾಗ್ ಪ್ರಪಂಚ ಕೊಟ್ಟಿದೆ. ಇದೇ ಸ್ನೇಹದ ಹೆಸರಿನಲ್ಲಿ  ನಮ್ಮ ಸ್ನೇಹವನ್ನು ದುರುಪಯೋಗ ಗೊಳಿಸಿ ಕೊಳ್ಳುವರ ಸಂಖ್ಯೆ ಯೂ ದಿನೇ ದಿನೇ ಹೆಚ್ಚುತ್ತಿದೆ. ಕೆಲವೊಮ್ಮೆ ಇಂಥಹ ಸ್ನೇಹಿತರ ನಡವಳಿಕೆಯಿಂದ ಬ್ಲಾಗ್ ಪ್ರಪಂಚದ ಬಗ್ಗೆ ಬೇಸರವೂ ಆಗಿದ್ದುಂಟು. ಆದರೆ ಹಿರಿಯ ಜನರ ಮಾತಿನಂತೆ ''ಸಜ್ಜನರ ಸಂಘವದು ಸವಿಜೇನು ಸವಿದಂತೆ''. ಅಂಥಹ ಒಳ್ಳೆಯ ಸ್ನೇಹಿತರು ಬ್ಲಾಗ್ ಲೋಕದಲ್ಲಿ ಇರುವುದರಿಂದ ಬ್ಲಾಗ್ ಲೋಕದ ಬಗೆಗೆ ಪ್ರೀತಿ ಮತ್ತೆ ಮತ್ತೆ ಜಾಸ್ತಿ ಆಗುತ್ತದೆ. 

                                                                 ಕ್ರಪೆ : ಶಿವೂ ಸರ್  ಬ್ಲಾಗ್ ನಿಂದ 

ಸುಮಾರು ಎರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದಾಗ ಅಣ್ಣನಂತೆ ಬ್ಲಾಗ್ ಅನ್ನು ಪ್ರೋತ್ಸಾಹಿಸಿದ ನೆಚ್ಚಿನ ಮೆಚ್ಚಿದ ಅಚ್ಚು ಮೆಚ್ಚಿನ ನಮ್ಮೆಲ್ಲರ ಪ್ರೀತಿಯ ''ಪ್ರಕಾಶಣ್ಣ'' ನ ಎರಡನೇ ಪುಸ್ತಕ ನಾಳೆ ಬಿಡುಗಡೆ ಆಗುತ್ತಿದೆ. ಪ್ರತಿ ಪುಸ್ತಕಕ್ಕೂ ಹೆಸರು ಇಡಲು ಹೋಗದೆ, ಹೆಸರನ್ನೇ ಹೆಸರು ಮಾಡಿ ಮೊದಲು ''ಹೆಸರೇ ಬೇಡ'' ಎಂದು ನಿರ್ಧರಿಸಿ ಇದೀಗ ''ಇದೇ ಇದರ ಹೆಸರು'' ಎಂದು ಹೇಳಿ ಅದರ ಬಿಡುಗಡೆಗೆ ಪ್ರಕಾಶಣ್ಣ ಸಿದ್ದರಾಗಿದ್ದಾರೆ.

ಅವರ ಕಥೆಗಳಲ್ಲಿ ಆತ್ಮೀಯತೆ ಇದೇ. ಕನ್ನಡ ಸಾಹಿತ್ಯಕ್ಕೆ ಅನೇಕ ಕಥೆಗಾರರು ಬಂದಿದ್ದಾರೆ. ಕೆಲವರು ಹಾಸ್ಯರಸದಲ್ಲಿ ಮಹಾನ ಸಿದ್ಧಿ ಸಾಧಿಸಿ ತೋರಿಸಿದ್ದಾರೆ . ಇನ್ನು ಕೆಲವರು ಕಥೆಯಿಂದ ಕಣ್ಣೀರಿನ ಕೊಡಿಯನ್ನೇ ಹರಿಸಿದ್ದಾರೆ. ಆದರೆ ಹಾಸ್ಯದ ಮಾಧ್ಯಮ ಬಳಸಿಕೊಂಡು ಗಂಬೀರ ವಿಷಯಗಳ ಬಗೆಗೆ ಬರೆದು ತನ್ಮೂಲಕ ಸಮಾಜದ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುವ ಕಥೆಗಳನ್ನು ಬರೆಯುವ ಕಲೆ ಯಲ್ಲಿ ಪ್ರಕಾಶಣ್ಣ ಸಿದ್ಧ ಹಸ್ತರು. 

ಸದಾ ನಗುಮೊಗದ, ನೋಡಿದ ಕೂಡಲೇ ಸ್ನೇಹ ಮಾಡಲೇಬೇಕು ಎಂದು ಮನಸಾಗುವ ಇಂಥಹ ಸ್ನೇಹಿತರೆ ಬ್ಲಾಗ್ ನ ಜೀವಾಳ. ಮೊದಲ ಬಾರಿಗೆ ಅವರ ಮನೆಗೆ ಹೋದಾಗ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಯವರನ್ನು ನೋಡಿದಾಗ ನನ್ನದೇ ಅಣ್ಣ ಅತ್ತಿಗೆ ಯವರನ್ನು ನೋಡಿದ ಅನುಭವ ಆಯಿತು. ಅಷ್ಟೊಂದು ಆತ್ಮೀಯತೆ, ಪ್ರೀತಿ ತೋರುವ ಅವರ ಕುಟುಂಬ ದ ಬಗೆಗೆ ತುಂಬಾ ಹೆಮ್ಮೆ ಇದೆ.

ಇಂಥಹ ಪ್ರಕಾಶಣ್ಣ ನ ಪುಸ್ತಕ ಬಿಡುಗಡೆಗೆ ಬರಲಾಗುತ್ತಿಲ್ಲ ಎಂಬ ನೋವು ತುಂಬಾ ತುಂಬಿದೆ. ಆದರೂ ವಿದೇಶದಲ್ಲಿದ್ದು ಇಲ್ಲಿಂದಲೇ ಅವರ ಪುಸ್ತಕಕ್ಕೆ ಶುಭ ಹಾರೈಸುತ್ತಿದ್ದೇನೆ. ಅವರ ಪುಸ್ತಕಗಳು ಸಮಸ್ತ ಕನ್ನಡಿಗರ ಮನೆ-ಮನ ತುಂಬಲಿ. ಕಾರ್ಯಕ್ರಮ ಸಂಪೂರ್ಣ ಯಶಸ್ವೀ ಯಾಗಲಿ ಎಂಬ ಮನದಾಳದ ಹಾರೈಕೆ ಬ್ಲಾಗ್ ನ ಮೂಲಕ ತಿಳಿಸುತ್ತಿದ್ದೇನೆ.

 ಅವರ ಮುಂದಿನ ಪುಸ್ತಕದ ಹೆಸರು ಏನಿರಬಹುದು ಎಂಬ ಕುತೂಹಲ ಈಗಲೇ  ಆರಂಭವಾಗಿದೆ, '' ಕೊನೆಗೂ ಸಿಗದ ಹೆಸರು'' ಎಂದಿರಬಹುದೇ?  :)

ಕೊನೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು 

ಜೈ ಹೋ 

Saturday, April 16, 2011

ಕನಸೇ.....

ನೆನಪಿನ ಭಾವನೆಗಳೇ ಹಾಗೆ, ಲಗಾಮಿಲ್ಲದ ಹುಚ್ಚು ಕುದುರೆಯಂತೆ, ಕೆಲವೊಮ್ಮೆ ಬದುಕನ್ನು  ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡಿಸಿ, ಮರುಘಳಿಗೆ ಶೈಶವ ನರಕದಲ್ಲಿ ಹೊರಳಾಡಿಸುತ್ತವೆ. ಸಿಹಿ ನೆನಪುಗಳೇ ಇರಲಿ, ಕಹಿ ನೆನಪುಗಳೇ ಇರಲಿ, ಕನಸಾಗಿ ಬಂದು ಕಾಡುತ್ತವೆ. ಭಾವನೆಗಳ ಹುಚ್ಚೆಬ್ಬಿಸಿ, ಹೊತ್ತಲ್ಲದ ಹೊತ್ತಿನಲ್ಲಿ, ಬಿಚ್ಚಿಟ್ಟ ಭಾವನೆಗಳ ಬೆತ್ತಲಾಗಿಸುವ, ತನ್ಮೂಲಕ ಕಾಡುವ ಕನಸುಗಳಿಗೆ ಹೇಳುವುದು ಇಷ್ಟೇ...''ಎಲ್ಲವನ್ನೂ ಸ್ಮ್ರತಿ ಪಟಲದಲ್ಲಿ ಅಚ್ಚೊತ್ತಿ ಹೋಗಿಬಿಡು, ಬಿಟ್ಟೆ ಎನ್ನುವ ಆತಂಕ ಬೇಡ, ಬಚ್ಚಿಟ್ಟೆ ಎನ್ನುವ ಭಯ ಬೇಡ, ಆದರೆ ಮತ್ತೆ ಬಂದು ನನ್ನ ಕಾಡಬೇಡ '' ಎಂದು.   




ಸುತ್ತಲು ಕವಿದ ಕತ್ತಲ ನೋಡಿ
ಬೆತ್ತಲಾಗದಿರು ಮನಸೇ
ಹೊತ್ತಲ್ಲದೊತ್ತಿನಲಿ, ಕಗ್ಗತ್ತಲಲ್ಲಿ
ಬಂದೆನ್ನ ಕಾಡದಿರು ಕನಸೇ..

ಹುಚ್ಚೆದ್ದ ಭಾವ, ಬೆಚ್ಚಾದ ಜೀವ
ಚಿತ್ತಾರದಂತ ಸೊಗಸೇ..
ಮಚ್ಚೆತ್ತಿ ಬಂದ, ಹಚ್ಚನೆಯ ಬೆಳಕು
ತುಂಬೆನ್ನ ಒಲವ ಬೊಗಸೆ...

ಚುಚ್ಚಾಟವೇಕೆ, ಕಚ್ಚಾಟವೇಕೆ
ಬಿಚ್ಚಿಟ್ಟ ಭಾವನೆಯ ಹದಕೆ
ಅಚ್ಚೊತ್ತಿ ಹೋಗು, ಬಚ್ಚಿಡದೆ ಎಲ್ಲ
ಮತ್ತೆರಗಿ ಬರದೆ ಕನಸೇ..

Sunday, April 10, 2011

ನಶ್ವರ .............


ಪ್ರಕ್ರತಿಯ ವೈಚಿತ್ರ್ಯಗಳ ನೋಡಿ, ಯಾವ ತಂತ್ರಜ್ಞಾನದಲ್ಲಿಯೂ ಕಡಿಮೆ ಇರದ ಜಪಾನ್ ಗೆ ಅಪ್ಪಳಿಸಿದ ಭೂಕಂಪ, ಬೆನ್ನಿಗೆ ಬಂದ ಸುನಾಮಿ ಗೆ ಜಪಾನೀಯರು ಕಂಗಾಲಾಗಿದ್ದಾರೆ. ಅದರ ಜೊತೆಗೆ ಬಂದೆರಗಿದ ಅಣು ವಿಕಿರಣ ಸೋರುವಿಕೆ, ಒಂದೇ ಎರಡೇ, ಬೆನ್ನಿಗೊಂದರಂತೆ ಬಂದೆರಗಿರುವ ಸಂಕಷ್ಟಗಳ ನಿವಾರಣೆಗೆ ಜಪಾನೀಯರು ಹೆಣಗುತ್ತಿದ್ದಾರೆ. ಬದುಕು ಎಷ್ಟೊಂದು ''ನಶ್ವರ'' ಅಲ್ಲವೇ? ನಿನ್ನೆ ವರೆಗೆ, ಈ ಬದುಕು ನಮ್ಮದು, ಮನೆ ನಮ್ಮದು, ಆಸ್ತಿ ನಮ್ಮದು, ಮರುಕ್ಷಣ ಯಾವುದೂ ನಮ್ಮದಲ್ಲ, ದೇಹ ಮಾತ್ರ ನಮ್ಮದು, ಇಲ್ಲಿ ಸಾವು ಗೆದ್ದ ಮನೆಯೂ ಇಲ್ಲ, ಮನಸು ಇಲ್ಲ, ಸಾಸಿವೆ ಇಲ್ಲದ ಮನೆಯ ಹುಡುಕಾಟದಂತೆ....
ಆದರೂ ಬದುಕು, ಅದರ ಬಗೆಗಿನ ಪ್ರೀತಿ ಕಡಿಮೆ ಆಗದು, ಮತ್ತದೇ ಆಸೆ, ಮತ್ತದೇ ಅಶಾಂತಿಯ ಬದುಕು, ಶಾಂತಿಯ ಹುಡುಕಾಟ, ಹಣ ಮಾಡಲು ಕಿತ್ತಾಟ, ಇಷ್ಟು ಮಾಡಿ ಇಟ್ಟಿದ್ದಕ್ಕೆ ಅಷ್ಟು ಸೇರಿಸುವ ಆಸೆ, ಕೊನೆಗೆ ಎಲ್ಲ ಬಿಟ್ಟು ೬ ಅಡಿ ೩ ಅಡಿ ದೇಹದೊಂದಿಗೆ ಸಾವು. ಇದೆ ತಾನೇ ಬದುಕು., ಮೊನ್ನೆ ಜಪಾನ್ ಭೂಕಂಪ ಹಾಗೂ ಸುನಾಮಿಯಲ್ಲಿ ಜಪಾನಿನ ಆತ್ಮೀಯ ಸ್ನೇಹಿತನ ಕುಟುಂಬ ಕಳೆದುಹೋಗಿದೆ. ಆತನ ತಂದೆ, ತಾಯಿ, ಹಾಗೂ ಇಬ್ಬರು ಅಕ್ಕಂದಿರು ಕಾಣೆಯಾಗಿದ್ದಾರೆ. ಅವರು ಸತ್ತಿದ್ದಾರೆ ಎನ್ನಲು ಅವನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ಅವರ ಶವಗಳು ಸಿಗುತ್ತಿಲ್ಲ. ದಿನೇ ದಿನೇ ಆತ ಕುಗ್ಗಿ ಹೋಗುತ್ತಿದ್ದಾನೆ. ಆತನ ನೋವಿಗೆ ಸಾಂತ್ವನ ಹೇಳುವ ಧೈರ್ಯ ನನಗಿಲ್ಲ. ''ನಶ್ವರ'' ದ ಬದುಕಿನ ವಿವಿಧ ಮಜಲುಗಳು ಕಣ್ಣ ಪಟಲದಿಂದ ಸರಿಯುತ್ತಿವೆ. ತಾಯಿಯ ಗರ್ಭದಿಂದ ಹೊರಗೆ ಬಂದಾಗ ಸುತ್ತ ಎಲ್ಲರೂ ನಗುತ್ತಿದ್ದರೆ, ಜಗದ ಮೈ ಮಾಟಕ್ಕೆ ತಯಾರಾಗುವ ಮಗುವಿನ ಕಣ್ಣಲ್ಲಿ ತುಂಬಿರುವುದು ನೀರು. ಆದರೆ ಜಗದಿಂದ ಹೊರತು ನಿಂತಾಗ ಎಲ್ಲರ ಕಣ್ಣಲ್ಲಿ ನೀರು, ಆದರೆ ಹೊರಡುವವನ ಕಣ್ಣಲ್ಲಿ ನಗು ತುಂಬಿರಬೇಕು, ಆಗಲೇ ಬದುಕು ಸಾರ್ಥಕ.
ಆ ಸ್ನೇಹಿತನ ಕುಟುಂಬ ಬೇಗ ಅವನಿಗೆ ಸಿಗಲಿ ಎಂದು ಪ್ರಾರ್ಥಿಸುತ್ತ ಈ ಕವನ ಅವನ ಕುಟುಂಬದ ನೆನಪಿಗಾಗಿ...



ಎಲ್ಲ ನೋವುಗಳ ಆಚೆಯೊಂದು 
ನಲಿವೆಂಬ ಭಾವ ಇಹುದು
''ಸಾವು'' ಗೆದ್ದ ಮನಸಿಲ್ಲ ಇಲ್ಲಿ
ನೆರಳಂತೆ ಜೀವ ಬರದು   

ಜನ್ಮ ಪಡೆದ ಕ್ಷಣ, ಸುತ್ತಲೆಲ್ಲ ನಗು
ನಿನ್ನ ಕಣ್ಣಲ್ಲಿ ನೀರು
ಇಷ್ಟವಾಗಲಿ ಜಗದ ಮೈಮಾಟ
ದು:ಖ ಸುಖದ ತೇರು 

ನಿನ್ನದೆಂಬುದು ದೇಹ ಮಾತ್ರ
ನಿನ ಹಿಂದೆ ಬರರು ಯಾರೂ
ಒಣಜಂಭ ಬಿಟ್ಟು, ಪ್ರೀತಿಯನು ಕಟ್ಟು
ಮಾಡದೆಯೇ ಬದುಕು ಬೋರು

ಅರಳುತಿರಲಿ ಸುಮ, ಬೆರೆಯುತಿರಲಿ ನಗು
ಕೆದಕದಿರಲೆಂದು ಬದುಕು
ಮೂರು ದಿನದ ಒಡನಾಟವಿಹುದಿಲ್ಲಿ
ಎಂದೆಂದೂ ಮೆಲುಕು ಹಾಕು         

Sunday, April 3, 2011

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಸ್ನೇಹಿತರೆ,

ಹೊಸ ಸಂವತ್ಸರ ಬರುತ್ತಿದೆ, ಎಂಥಹ ಸಿಹಿ ಸುದ್ದಿ, ದೇಶದ ಜನರಿಗೆ ವಿಶ್ವಕಪ್ಪಿನ ಉಡುಗೊರೆ ಒಂದೆಡೆಯಾದರೆ, ಟೆನ್ನಿಸ್ ನಲ್ಲಿ ಮಿಯಾಮಿ ಓಪನ್ ಗೆದ್ದು ವಿಶ್ವದ ನಂಬರ್ 1 ಜೋಡಿ ಯಾದ ಮಹೇಶ ಭೂಪತಿ, ಪೇಸ್ ಅವರ ಜುಗಲ್ ಬಂದಿ ಇನ್ನೊಂದೆಡೆ.
ಒಟ್ಟಿನಲ್ಲಿ ಹೊಸ ವರ್ಷ ಭರ್ಜರಿ ಆರಂಭವಾಗಿದೆ.
ದೇಶದ ಕೋಟ್ಯಾಂತರ ಅಭಿಮಾನಿಗಳ ಮನದ ದೇವರು ಸಚಿನ ಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇಕೇ....
ಕಳೆದ 20 -21 ವರ್ಷಗಳಿಂದ ದೇಶದ ಕ್ರಿಕೆಟ್ ನ ಹೊರೆ ಹೊತ್ತ ಸಚಿನ್ ನ ಸಾಧನೆಗೆ ಒಂದು ಸಲಾಮು.

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಕಳೆದ ಎರಡು ತಿಂಗಳಿಂದ ಅನಿವಾರ್ಯ ಕಾರಣಗಳು ಬ್ಲಾಗ್ ಗೆ ಬರದಂತೆ ಮಾಡಿದ್ದವು. ಹೊಸ ವರ್ಷದಲ್ಲಿ ಮತ್ತೆ ನಿಮ್ಮೊಂದಿಗೆ ಬರುತ್ತೇನೆ,

ಹೊಸ ವರ್ಷ ನಿಮಗೆಲ್ಲ ಹೊಸತನ್ನು ನೀಡಲಿ,


Tuesday, February 8, 2011

''ಪೆಟ್ಟು'' ನಿನಗೆ ಬಿತ್ತಲ್ಲ ''ಪೆಟ್ಟು'' Part 3

''ಕುರುಡು ಕಾಂಚಾಣ ಕುಣಿಯುತಲಿತ್ತು''

ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.

 ದಿನದ ಊಟದ ಖರ್ಚು, ಉಡುವ ಬಟ್ಟೆಯ ವೆಚ್ಚ , ನಲಿದು ಆಡುವ ಮಕ್ಕಳ ಆಸೆ ಇವಿಷ್ಟನ್ನು ದೊರಕಿಸಿಕೊಡುವಷ್ಟು ಹಣ ನಮ್ಮಲ್ಲಿದ್ದರೆ ನಾವೇ ಸುಖಿಗಳು. ಕಾರಣ ಹಣ ಹೆಚ್ಚಾದಂತೆ ಇನ್ನೂ ಹೆಚ್ಚು ಮಾಡುವ ತವಕ. ಕಡಿಮೆ ಸಂಬಳ ಬರುವವನಿಗೆ ಹೆಚ್ಚು ಸಂಬಳ ಪಡೆಯುವ ಆಸೆ, ಹೆಚ್ಚು ಸಂಬಳ ಪಡೆಯುವಗೆ ಇನ್ನೂ ಹೆಚ್ಚು ಪಡೆಯುವ ಆಸೆ. ಮಾನವನಿಗೆ ತ್ರಪ್ತಿ ಎನ್ನುವುದು  ಇರುವುದೇ ಇಲ್ಲ. ಸಣ್ಣ ಟಿ ವಿ ತೆಗೆದುಕೊಂಡವನಿಗೆ  ದೊಡ್ಡ ಟಿ ವಿ ಬೇಕು, ದೊಡ್ಡ ಟಿ ವಿ ತೆಗೆದುಕೊಳ್ಳುವವವನಿಗೆ ಫ್ಲಾಟ್ ಟಿ ವಿ ಬೇಕು, ಹೀಗೆ ಪ್ರತಿಯೊಂದರಲ್ಲೂ ಮನುಷ್ಯ ಇದ್ದಿದ್ದರಲ್ಲಿ ಸಂತ್ರಪ್ತನಾಗುವುದೇ  ಇಲ್ಲ. ಆ ಅಸಂತ್ರಪ್ತ ಮನಸ್ಸೇ ಜಗತ್ತಿನ ಅನೇಕ ಅವಘಡಗಳಿಗೆ ಕಾರಣವೂ ಕೂಡಾ.

  ''ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ''

ಎಂಬ ಹಾಡು ಅಂದಿಗೂ ಇಂದಿಗೂ ಎಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?

ಉಡುಪಿಯ ಆ ದಿನಗಳಲ್ಲಿ ಆದದ್ದು ಅದೇ, ಮೊದಲ ಗಳಿಕೆ ಎಂದಿಗೂ ವಿಶೇಷ ತ್ರಪ್ತಿ ನೀಡುತ್ತದೆ. ಆದರೆ ಅಲ್ಲಿ ಗಳಿಕೆ ನನ್ನ ಉದ್ದೇಶ ಆಗಿರಲಿಲ್ಲ. ಕಲಿಕೆ ಉದ್ದೇಶವಾಗಿತ್ತು. ಮೊದಲ ''ಪೆಟ್ಟು'' ಹೋಗಿ ಬಂದ ನಂತರ ಬಡಿಸುವುದರಲ್ಲಿ ವಿಶ್ವಾಸ ವೂ ಬಂತು. ಮೊದಲ ಪೆಟ್ಟು, ಎರಡಾಯಿತು, ಎರಡು ಮೂರಾಯಿತು, ಮೂರು ನಾಲಕ್ಕು......... ಹೀಗೆ ಪೆಟ್ಟಿಗೆ ಹೋಗಲು ಆರಂಬಿಸಿದೆ. ಹೋಗಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗುವಷ್ಟರ    ಮಟ್ಟಿಗೆ ಅದು ಬೆಳೆಯಿತು. ಬದುಕೇ ಹಾಗೇ, ಅದನ್ನು ಎಷ್ಟರ ಮಟ್ಟಿಗೆ ಬೇಕೋ ಅಷ್ಟರ ಮಟ್ಟಿಗೆ ಇಟ್ಟರೆ ಸ್ವರ್ಗ, ಇಲ್ಲದಿರೆ ಆ ಬದುಕೇ ಕುತ್ತಿಗೆಯೇ ಮೇಲೆ ಹತ್ತಿ ಕುಣಿಯಲು ಆರಂಬಿಸುತ್ತದೆ. ಅದಕ್ಕೆ ಇರಬೇಕು, ಸಾಧು ಸಂತರು ಸತತ ಯೋಗ ಧ್ಯಾನ ದ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರು ಎನಿಸುತ್ತದೆ.

















''ಪೆಟ್ಟು'' ಮೊದ ಮೊದಲು ಸುಂದರವಾಗಿಯೇ ಇತ್ತು. ಮೊದಲು ಹಣ ಬರಲು ಆರಂಬಿಸಿದಾಗ ಹಾಗೇ ಆಗುತ್ತದೆ ಅಲ್ಲವೇ? ಆದರೆ ಅದೊಂದು ದಿನ ಮಾತ್ರ ಪೆಟ್ಟಿಗೆ ಬಿದ್ದಿತ್ತು ದೊಡ್ಡ ''ಪೆಟ್ಟು''. ಕಾಲೇಜಿನಲ್ಲಿ ಪ್ರತಿದಿನ 12 -30 ಗೆ ಕ್ಲಾಸ್ ಮುಗಿಯುತ್ತಿತ್ತು. ಮತ್ತೆ ಮಧ್ಯಾನ್ಹ  2 ಘಂಟೆಗೆ ಆರಂಬವಾಗುತ್ತಿತ್ತು. ಆ ದಿನವೂ 12 -30 ಗೆ ಕ್ಲಾಸ್ ಮುಗಿಸಿ ಊಟಕ್ಕೆ ಹೋಗುವ ಪ್ಲಾನ್ ಎಂದಿನಂತೆಯೇ ಇತ್ತು. ಪ್ರತಿದಿನ 12 -30 ಕ್ಕೆ  ಊಟಕ್ಕೆ ಕ್ರಷ್ಣ  ಮಠ ಕ್ಕೆ ಹೋಗುತ್ತಿದ್ದೆವು. ಆದರೆ ಆ ದಿನ ಬೆಳಿಗ್ಗೆ ಪೆಟ್ಟಿನ ಸ್ನೇಹಿತರು  ಬಂದು ಇಂದು ಮಧ್ಯಾನ್ಹ ಪೆಟ್ಟು ಇದೆ. 12 -30 ಕ್ಕೆ ಹೋಗಿ 2 ಘಂಟೆಗೆ ಬರುವುದು ಎಂದರು. ನಾನು ನನಗೆ ಎರಡು ಘಂಟೆಗೆ ರಸಾಯನ ಶಾಸ್ತ್ರ (Chemistry) ದ ಕ್ಲಾಸ್ ಇದೆ, ಬರಲು ಆಗುವುದಿಲ್ಲ ಎಂದೆ. ಆದರೆ ಅವರು ಕೇಳಬೇಕಲ್ಲ.  12 -30 ಗೆ ಹೊರಟೆ ಬಿಟ್ಟಿತ್ತು  ದಂಡು. 

ಮದುವೆ ಮನೆ, ವಧು ವರರು ಹಾರ ಬದಲಾಯಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದರು. ಬಂದ ಬಂಧು ಬಳಗ ಅವರನ್ನೆಲ್ಲ ಹರಸಿ ಊಟಕ್ಕೆ ಹೋಗುತ್ತಿದ್ದರು. ನಮ್ಮ ಕೆಲಸ ಆರಂಭವಾಗುವುದೇ ಈಗ, ನಾವು ಬಡಿಸಲು ಆರಂಬಿಸಿದೆವು. ಕೆಲವೊಮ್ಮೆ ಮುಂದೆ ಆಗುವ ಸಮಸ್ಯೆ  ಮೊದಲೇ ತಿಳಿಯುತ್ತದಂತೆ. ಆ ದಿನ ಬಡಿಸುವಾಗಲೂ ಏನೋ ಒಂದು ತರ ಬೇರೆಯೇ ತರನಾದ ವಿಚಿತ್ರ ಅನುಭವ ಆಗುತ್ತಿತ್ತು. ಇದೇಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿದರೂ ಹೊಳೆಯಲಿಲ್ಲ. ಸಮಯ ಹೋಗುತ್ತಿತ್ತು. 2 ಘಂಟೆ ಸಮೀಪಿಸುತ್ತಿತ್ತು. ರಸಾಯನ ಶಾಸ್ತ್ರ ಕ್ಲಾಸ್ ಇದೆ ಬೇರೆ. ಅದು ರಸಾಯನ ಶಾಸ್ತ್ರದ ಅದ್ಭುತ ಪ್ರೊಫೆಸರ್ ಕ್ಲಾಸ್ ಆಗಿತ್ತು. ಮಿಸ್ ಮಾಡಿಕೊಳ್ಳೋ ಚಾನ್ಸ್ ಇರಲೇ ಇಲ್ಲ, 

ಆದರೆ ಬಂದ ಮೇಲೆ ಬಡಿಸಿ ಮುಗಿಸದೆ  ಹೋಗೋ ಚಾನ್ಸ್ ಕೂಡಾ ಇರಲಿಲ್ಲ. ಹಾಗೇ ಸಾಲಿನಲ್ಲಿ ಬಡಿಸುತ್ತ ಬಡಿಸುತ್ತ ಹೋಗುತ್ತಿದ್ದವನಿಗೆ ಎದೆ ಧಸಕ್ ಅಂದಿತು ಒಮ್ಮೆ. ತಲೆ ಎತ್ತಿ ನೋಡುತ್ತೇನೆ, ರಸಾಯನ ಶಾಸ್ತ್ರದ  ಸರ್ವ ಪ್ರೊಫೆಸರ್ ಗಳೂ ಸಾಲಿನಲ್ಲಿ ಸಪ್ತ ಋಷಿಗಳು ತಪಸ್ಸಿಗೆ ಕುಳಿತ ಹಾಗೇ ಕುಳಿತಿದ್ದಾರೆ. ಕೈಯಲ್ಲಿ ರಸಂ (ಸಾರು), ಎದುರುಗಡೆ ರಸಾಯನ ಶಾಸ್ತ್ರ, ಮೈಯೆಲ್ಲಾ ಬೆವರಿನ ರಸ ಒಟ್ಟಿನಲ್ಲಿ ಭೂಮಿ, ಆಕಾಶ ಒಟ್ಟಿಗೆ ಬೆರೆತು ತಲೆಯ ಮೇಲೆ ಬಿದ್ದ ಅನುಭವ. ಅದರಲ್ಲೂ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಒಬ್ಬರು ಪ್ರೊಫೆಸರ್ ಇದ್ದರು. ಅವರು ಹಾಸ್ಯ ಮಾಡುತ್ತಲೇ ಚಾಟಿ ಬೀಸುವ ಪ್ರವ್ರತ್ತಿಯವರು. ನಾ ಕಂಡ ಅತ್ಯುತ್ತಮ ಪ್ರೊಫೆಸರ್ ಗಳಲ್ಲಿ ಒಬ್ಬರು ಅವರು. 

ನನ್ನ ನೋಡಿ, ಸಮಯ ನೋಡಿದರು, ಮತ್ತೆ ನನ್ನ ನೋಡಿದರು, ನನಗೆ ವಿಚಿತ್ರ ತಳಮಳ. ಪೆಟ್ಟಿಗೆ ಬಂದು ಅಂದು ದೊಡ್ಡ ''ಪೆಟ್ಟು'' ಬಿದ್ದಿತ್ತು. ಅದಕ್ಕೆ ಮೊದಲು ಹೇಳಿದ್ದು, ಹಣ ಬೇಕು ನಿಜ, ಅತಿಯಾದ ಹಣ ಒಳ್ಳೆಯದಲ್ಲ ಎಂದು. ಪಾಪ, ನನಗೇನು ಗೊತ್ತಿತ್ತು ನಾನು ಹೋಗಿದ್ದು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯ ಮದುವೆಗೆ ಎಂದು :) 

ಮರುದಿನ ಕ್ಲಾಸ್ ನಲ್ಲಿ ಅವರು ರಸಾಯನ ಶಾಸ್ತ್ರ ಕಲಿಸುವ ಬದಲು ರಸಂ ಮಾಡುವ ವಿಧಾನ, ಬಡಿಸುವ ವಿಧಾನ ಗಳ ಬಗೆಗೆ ಹೇಳಿದರು, ಕ್ಲಾಸ್ ನ ಉಳಿದ ವಿಧ್ಯಾರ್ಥಿಗಳಿಗೆ ಇದ್ಯಾಕೆ ರಸಂ ಬಗ್ಗೆ ರಸಾಯನ ಶಾಸ್ತ್ರದ ಪ್ರೊಫೆಸರ್ ಮಾತನಾಡುತ್ತಿದ್ದಾರೆ ಎಂದು. ನನಗೆ ಮಾತ್ರ ರಸಂ ಬೇಗ ಮುಗಿದು ಹೋದರೆ ಸಾಕೆಂದು ಅನ್ನಿಸುತ್ತಿತ್ತು. ಆ ಪ್ರೊಫೆಸರ್ ಗೆ ನನ್ನ ಮೇಲೆ ಇದ್ದ ವಿಶೇಷ ಪ್ರೀತಿಯಿಂದ ಅವರು ಒಂದು ತಾಸು ರಸಂ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅದರ ನಂತರ ಪೆಟ್ಟು ಕೇವಲ ವಾರಾಂತ್ಯದ ಕೆಲಸವಾಗಿತ್ತೆ ಹೊರತು ವಾರದ ಮಧ್ಯದ ಕೆಲಸವಾಗಿರಲಿಲ್ಲ.

ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ ಅಂದು ನನ್ನೊಂದಿಗೆ ಪೆಟ್ಟಿಗೆ ಬರುತ್ತಿದ್ದ ಎಷ್ಟೋ ಮಂದಿ ಅಂದಿನ ಕ್ಷಣಿಕ ಗಳಿಕೆಯನ್ನೇ ಮಹಾ ಗಳಿಕೆ ಎಂದು ತಿಳಿದು ಕಲಿಯುವುದ ಅರ್ಧ ದಲ್ಲೇ ಬಿಟ್ಟು ಇಂದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಸ್ವಾಭಿಮಾನ, ಸ್ವಂತ ದುಡಿಮೆ ಎಲ್ಲವೂ ಅವಶ್ಯ ನಿಜ, ಆದರೆ ಅದು ಬದುಕನ್ನೇ ನುಂಗಬಾರದು. ನನ್ನೊಂದಿಗೆ ಪೆಟ್ಟಿಗೆ ಬಂದ ಕೆಲವು ಸ್ನೇಹಿತರು ಇಂದು ಬೆಂಗಳೂರಿನಲ್ಲಿ Chartered Accountant ಆಗಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯ ಹುದ್ದೆಯಲ್ಲಿದ್ದಾರೆ. ಪ್ರತಿ ಸಲ ಬೆಂಗಳೂರಿಗೆ ಹೋದಾಗ ಅವರನ್ನೆಲ್ಲ ಭೆಟ್ಟಿಯಾಗುತ್ತೇನೆ. ಸಾಹಸಮಯ ಬದುಕಿನ ಉದಾಹರಣೆಯಂತೆ ಇರುವ ಅವರ ಜೀವನ ದ ಮೇಲೆ ನನಗೆ ಬಹಳ ಹೆಮ್ಮೆಯಿದೆ, ಅಂತಹ ಸ್ನೇಹಿತರ ಪರಿಚಯ ಈ ಬದುಕಿಗೆ ಸಿಕ್ಕ ಬಹುದೊಡ್ಡ ಆಸ್ತಿ.

ನನ್ನ ಬದುಕಿನೊಂದಿಗೆ ಹೆಜ್ಜೆ ಹಾಕಿದ ನನ್ನ ಬದುಕಿನ ಪ್ರತಿ ಘಟ್ಟದಲ್ಲೂ ನೋವಿಗೆ ಸಾಂತ್ವನ ನೀಡುವ ತಾಯಿಯಂತೆ, ನಲಿವಿಗೆ ಹುರಿದುಂಬಿಸುವ ಅಣ್ಣನಂತೆ, ಸಾಧನೆಗಳಿಗೆ ಪ್ರೋತ್ಸಾಹಿಸುವ ತಂದೆಯಂತೆ, ತಪ್ಪಿದಲ್ಲಿ ತಿದ್ದುವ  ಸ್ನೇಹಕ್ಕೆ ಅರ್ಥವಾದ ಗೆಳೆಯನೊಬ್ಬನ ಪ್ರೀತಿ  ಉಡುಪಿಯಲ್ಲಿ ಅಷ್ಟೇ ಅಲ್ಲ ನನ್ನ ಬದುಕಿನಲ್ಲಿಯೇ ಮರೆಯಲಾರದ್ದು. ಮುಂದೆ ಅವನ ಬಗ್ಗೆ ಬರೆಯುತ್ತೇನೆ.
 ಮತ್ತೆ ಸಿಗುತ್ತೇನೆ
ನಿಮ್ಮವ 
ಗುರು 

ಮೊದಲ ಹಾಗೂ ಎರಡನೇ ಭಾಗ ಓದದವರು ಕೆಳಗೆ ಕ್ಲಿಕ್ ಮಾಡಿ ಓದಿ 
ಬದುಕಿನ ಪುಟಗಳಿಂದ http://gurumurthyhegde.blogspot.com/2011/01/1.html  ಭಾಗ 1
ಅದು ಕೇವಲ ೫೦ ರೂಪಾಯಿ ಆಗಿರಲಿಲ್ಲ http://gurumurthyhegde.blogspot.com/2011/02/50.html  ಭಾಗ  2 

Tuesday, February 1, 2011

ಅದು ಕೇವಲ 50 ರೂಪಾಯಿ ಆಗಿರಲಿಲ್ಲ ...

ಕಳೆದ ವಾರ ನನ್ನ ಪ್ರೀತಿಯ ಬ್ಲಾಗ್ ನ ಹುಟ್ಟಿದ ಹಬ್ಬ ಆದ್ದರಿಂದ ''ಬದುಕಿನ ಪುಟಗಳಿಂದ'' ಬರಹ ಮುಂದುವರೆಸಲಾಗಲಿಲ್ಲ. ಅನೇಕ ಮಿತ್ರರು ಮೇಲ್ ಮಾಡಿ ಮುಂದಿನ ಬರಹ ನಿಂತದ್ದೇಕೆ ಎಂದು ಕೇಳಿದ್ದಾರೆ. ಖಂಡಿತ ನಿಲ್ಲಿಸುವ ಉದ್ದೇಶ ಇಲ್ಲ. ಅದಕ್ಕೆ ಈಗ ಮುಂದುವರೆಸುತ್ತಿದ್ದೇನೆ. ಮೊದಲ ಭಾಗ ಓದದವರು ಇಲ್ಲಿ ಓದಿ ''http://gurumurthyhegde.blogspot.com/2011/01/1.html''













ಉಡುಪಿಯ ಆ ದಿನಗಳು ಬದುಕಿಗೆ ಅಡಿಪಾಯ ಮಾತ್ರ ಆಗಿರಲಿಲ್ಲ. ಬದುಕಿನ ರಸಮಯ ಕ್ಷಣಗಳೂ ಹೌದು. ಉಡುಪಿಯಲ್ಲಿ ಓದಿದವರಿಗೆ ರಥ ಬೀದಿಯ ಮಹತ್ವ ಗೊತ್ತೇ ಇರುತ್ತದೆ. ಅದರಲ್ಲೂ ಪೂರ್ಣ ಪ್ರಜ್ಞ ದಲ್ಲಿ ಓದುವ ವಿದ್ಯಾರ್ಥಿಗಳಿಗೂ ರಥ ಬೀದಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಬೇರೆ ಊರಿನಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ರಥಬೀದಿಯ ದರ್ಶನ ದಿನವೂ ಆಗೇ ಆಗುತ್ತದೆ. ಮಧ್ಯಾನ್ಹ  ಊಟಕ್ಕೆ ಹೋಗುವಾಗ, ರಾತ್ರಿ ಊಟಕ್ಕೆ ಹೋಗುವಾಗ, ಜೊತೆಗೆ ರಥಬೀದಿಯಲ್ಲಿ ತಿರುಗುವ ಯಾತ್ರಾರ್ಥಿಗಳ ದರ್ಶನ, ಸಾಲದೆಂಬಂತೆ ಶ್ರೀ ಕ್ರಷ್ಣನ ದರ್ಶನ, ಬದುಕು ಪಾವನ ಎನಿಸಿಬಿಡುತ್ತದೆ. ಸುಂದರ ಯಾತ್ರಾರ್ಥಿಗಳಿಂದ ಕೆಲವರ ಕಣ್ಣು ಪಾವನ ಆಗುವುದೂ ಉಂಟು.  ಉಡುಪಿಯಲ್ಲಿ   ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಉತ್ತರ ಕನ್ನಡ ದವರೆ ಇರುತ್ತಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಕಾರಣ ಒಂದಾದರೆ, ಇದು ಉತ್ತರ ಕನ್ನಡಕ್ಕೆ ಹತ್ತಿರದ ಜಾಗ ಎನ್ನುವುದು ಇನ್ನೊಂದು. ಅದರಲ್ಲೂ ಉಡುಪಿಯಲ್ಲಿ ಉಚಿತ ಊಟ, ದೇವರ ಪ್ರಸಾದವೂ ಆದ್ದರಿಂದ ಅರ್ಥಿಕ ದ್ರಷ್ಟಿಯಿಂದಲೂ ಇದು ಪ್ರಶಸ್ತ ಜಾಗ.
ಕಾಲೇಜಿಗೆ ಸೇರಿದ ದಿನಗಳಲ್ಲಿ ಹಣದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ತಂದೆಯವರು ಚಾಚೂ ತಪ್ಪದೆ ಹಣ ಕಳಿಸುತ್ತಿದ್ದರು. ಅವರ ಶ್ರಮ, ಬೆವರಿನ ಕಷ್ಟ ನನಗೆ ಗೊತ್ತೇ ಆಗುತ್ತಿರಲಿಲ್ಲ. ಮಧ್ಯಮ ವರ್ಗದ ಕುಟುಂಬವಾದ ನಮಗೆ ತಿನ್ನಲು ಉಣ್ಣಲು ಕೊರತೆ ಇರಲಿಲ್ಲ ಆದರೂ ತಂದೆಯವರಿಗೆ ದೊಡ್ಡ ಕುಟುಂಬದ  (ಆಗ ಸಾಮೂಹಿಕ ಕುಟುಂಬ ಪದ್ಧತಿ) ಜವಾಬ್ದಾರಿಯೂ ಇತ್ತು. ಇದರ ನಡುವೆ ನಮ್ಮ ಶಿಕ್ಷಣದ ಖರ್ಚು. ನನಗಿನ್ನೂ ನೆನಪಿದೆ, ಆ ದಿನಗಳಲ್ಲಿ ತಂದೆ ತಾಯಿಯವರು ಯಲ್ಲಾಪುರದಲ್ಲಿದ್ದರು. ತಂದೆಯವರು ಸರಕಾರೀ ಕೆಲಸದಲ್ಲಿದ್ದರು. ನಾನಾಗ ಒಂದನೇ ಪಿ ಯು ಸಿ ವಿಜ್ಞಾನ ವಿಭಾಗಕ್ಕೆ ಸೇರಿ 6 ತಿಂಗಳು ಆಗಿದ್ದವು. ಒಮ್ಮೆಲೇ ತಂದೆಯವರಿಗೆ ಹಳಿಯಾಳಕ್ಕೆ ವರ್ಗಾವಣೆ ಆಯಿತು. ಹಳಿಯಾಳ ಸುಮಾರು ಒಂದೂ ವರೆ ಘಂಟೆಯ ಪ್ರಯಾಣ ಯಲ್ಲಾಪುರ ದಿಂದ. ಹಾಗೆಂದು ನಾನು ಕಾಲೇಜು ಬಿಡುವುದು ನನಗೆ ಇಷ್ಟವಿರಲಿಲ್ಲ. ಆದರೆ ತಂದೆಯವರೇ ಪ್ರತಿದಿನ ಅಲ್ಲಿಗೆ ಹೋಗಿಬರುವುದೆಂದು ನಿರ್ಧರಿಸಿದರು. ಒಬ್ಬ ಮಗನ ಮಟ್ಟಿಗೆ ತಂದೆಯ ಆ ನಿರ್ಧಾರ ಬಲು ದೊಡ್ಡದಾಗಿತ್ತು. ಮಗ ಕಲಿಯಲಿ, ಆತನ ಶಿಕ್ಷಣ ಮಧ್ಯದಲ್ಲಿಯೇ ತನ್ನಿಂದ ನಿಲ್ಲುವುದು ಬೇಡ ಎಂದು ತಿಳಿದು ತಾವೇ ಪ್ರತಿದಿನ 3 ಘಂಟೆ ಪ್ರಯಾಣ ಮಾಡಿದ ಆ ದಿನಗಳು ಎಂದೂ ಮರೆಯಲಾರದ್ದು. ನಮಗೆ ಬಿಸಿ ಬಿಸಿ ಊಟ ನೀಡಿ, ತಾವು ಮನೆಯಿಂದ ಬೆಳಿಗ್ಗೆಯೇ ಕಟ್ಟಿಸಿಕೊಂಡು ಹೋಗಿ ತಿಂದು ಬರುವ ಆ ಮನಸ್ಸಿನ ತಂದೆಯ ದೊಡ್ಡ ಗುಣ ಹಾಗೂ ಅವರ ಋಣ ಎಂದಿಗೂ ತೀರಿಸಲಾಗದ್ದು.
ಉಡುಪಿ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರೆದ ಪ್ರದೇಶ. ಇಲ್ಲಿ ಸಂಗೀತ, ಕಲೆ ಗಳಿಗೆ ಅಗಾಧ ಪ್ರೋತ್ಸಾಹ. ಕನ್ನಡ ನಾಡಿನ ಗಂಡು ಕಲೆ ''ಯಕ್ಷಗಾನ'' ದ ಉಳಿವಿಗೆ ಮೂಲ ಕಾರಣ ದಕ್ಷಿಣ ಕನ್ನಡದವರೇ ಎಂದರೆ ತಪ್ಪಾಗಲಿಕ್ಕಿಲ್ಲ. ಶಿಕ್ಷಣದಲ್ಲೂ ಅವರು ಎಲ್ಲರಿಗಿಂತ ಮುಂದು. ನಾಡಿನ ಖ್ಯಾತ ಶಿಕ್ಷಣ ಸಂಸ್ಥೆಗಳ ಒಡೆಯರೂ ಹೌದು.

''ಘಟ್ಟದ ಕೆಳಗಿನ ನೀರು, ಜೊತೆಯಲಿ ಹರಿಯುವ ಬೆವರು 
ಎಳೆದಿದೆ ಬದುಕಿನ ತೇರು, ಬದುಕುವೆ ಎಲ್ಲೇ ಹೋದರೂ''

ಯಾವ ಪುಣ್ಯಾತ್ಮ ಹೇಳಿದನೋ ಗೊತ್ತಿಲ್ಲ. ಆದರೆ ಆ ಮಾತು ಮಾತ್ರ ಎಂದಿಗೂ ಸತ್ಯ. ಸಮುದ್ರ ತೀರದ ಜನರಿಗೆ ಮಂಡೆ (ಮಂಡೆ ಅಂದರೆ ಬುದ್ದಿ) ಬಹಳ ಜಾಸ್ತಿ. ವ್ಯಾಪಾರದಲ್ಲಿ ಬಹಳ ಜಾಣರು. ಸ್ವಲ್ಪ ನಾವು ಯಾಮಾರಿದರೂ ನಮ್ಮ ಎದುರಿಗೇ ನಮ್ಮ ಮಾರಾಟ ಮಾಡಿ ಹೋಗುವಷ್ಟು ಚಂಡ-ಪ್ರಚಂಡರು ಅವರು. ಬಹುಷ: ಅವರ ಕಷ್ಟಮಯ ಜೀವನ ಕಲಿಸಿದ ಪಾಠ ಅದೆಂದು ತೋರುತ್ತದೆ. ಅದೇ ಘಟ್ಟದ ಮೇಲೆ ಬಹಳಷ್ಟು ಜನರಿಗೆ ಅಡಿಕೆ ತೋಟವಿದೆ. ಅಡಿಕೆಗೆ ಬೆಲೆಯಿದೆ (ಆದರೂ ಜನ ತಾವು ಬಡವರು ಎನ್ನುವುದು ಬಿಟ್ಟಿಲ್ಲ, ಲಕ್ಷಾದೀಶ್ವರ ಕೋಟ್ಯಾ ಧೀಶ್ವರ ನನ್ನು ನೋಡಿ ತಾನು ಬಡವ ಎನ್ನುತ್ತಾನೆ, ಹೀಗೆಯೇ ಎಷ್ಟೇ ಅಡಿಕೆಗೆ ಬೆಲೆ ನೀವು ಕೊಡಿ, ಅವರು ಕಣ್ಣೀರು ಹಾಕುವುದು ಬಿಡರು)  
ಘಟ್ಟದ ಕೆಳಗಿನ ಜನರಿಗೆ ಇಂಥಹ ಯೋಗವಿಲ್ಲ. ಅಲ್ಲಿರುವುದು ಬೋಳು ಗುಡ್ಡೆ ಗಳು ಮಾತ್ರ. ಅದರಲ್ಲೇ ಸುಖ ಕಾಣಬೇಕು. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಮತ್ತೆ ಸಂಜೆಯೇ ಮನೆಗೆ ಬರುವುದು ಅವರು. ಆ ದಿನಚರಿಯೇ ಅವರಿಗೆ ಒಂದು ರೀತಿಯ ಬದುಕನ್ನು ಕಲಿಸಿದೆ. ಇದು ಉಡುಪಿಯಲ್ಲಿ ನಾನು ಕಂಡು ಕೊಂಡ ಜನರ ಜೀವನ ಚಕ್ರ. 
ದಕ್ಷಿಣ ಕನ್ನಡ ದಲ್ಲಿ ಮದುವೆಗಳನ್ನು ಮನೆಯಲ್ಲಿ ಮಾಡುವಷ್ಟು ಸಮಯ ಹಾಗೂ ವ್ಯವಧಾನ ಯಾರಿಗೂ ಇಲ್ಲ. ಅದಕ್ಕೆ ಅವರು ಆಯ್ದು ಕೊಳ್ಳುವುದು ಮಠ ಮಂದಿರ ಗಳನ್ನು, ಛತ್ರಗಳನ್ನು. ಉಡುಪಿಯ ಸುತ್ತ ಮುತ್ತ ಅನೇಕ ಮದುವೆಯ ಛತ್ರಗಳಿವೆ. ಛತ್ರಗಳಲ್ಲಿ ನಡೆಯುವ ಮದುವೆಯ ವ್ಯವಸ್ಥೆ ಯನ್ನು ಆ ಛತ್ರಗಳ ನಿರ್ವಾಹಕರು ಸಂಬಂದಿಸಿದವರಿಗೆ ನೀಡುತ್ತಾರೆ. ಅಂದರೆ  ಊಟದ ವ್ಯವಸ್ಥೆ  ಒಬ್ಬನಿಗೆ, ಅಲಂಕಾರದ ವ್ಯವಸ್ಥೆ  ಇನ್ನೊಬ್ಬನಿಗೆ, ಹೂವಿನ ವ್ಯವಸ್ಥೆ ಮತ್ತೊಬ್ಬನಿಗೆ ಹೀಗೆ. ಇಲ್ಲಿ ಊಟ ಬಡಿಸಲು ನಿರ್ಧಿಷ್ಟ ಪಂಗಡಗಳಿಗೆ ವಹಿಸಿ ಕೊಟ್ಟಿರುತ್ತಾರೆ. ಆ ಪಂಗಡಗಳು ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಪಂಗಡದಲ್ಲಿ ಸೇರಿಸಿಕೊಳ್ಳುತ್ತಾರೆ.

  ಇಂಥಹ  ಊಟಕ್ಕೆ ಬಡಿಸಲು ಹೋಗುವುದಕ್ಕೆ ''ಪೆಟ್ಟು'' ಎನ್ನುತ್ತಾರೆ.

 ಉಡುಪಿಗೆ ಹೋದ ಮೊದಲ ದಿನಗಳಲ್ಲಿ ಸ್ನೇಹಿತನೊಬ್ಬ ''ಪೆಟ್ಟಿಗೆ'' ಬರುತ್ತಿಯ ಎಂದು ಕೇಳಿದ್ದ. ನಾನು   ಒಳಗೊಳಗೇ ಬೆವೆತುಹೋಗಿದ್ದೆ. ಇನ್ನೆಲ್ಲಿಂದ ಜನರ ಕರೆದುಕೊಂಡು ಬಂದು ನನಗೆ ಹೊಡೆಯುತ್ತಾರೋ ಎಂದು. ಆಮೇಲೆ ಅರ್ಥ ತಿಳಿದಾಗ ನಕ್ಕಿದ್ದೋ ನಕ್ಕಿದ್ದು. 
ಉಡುಪಿಯ ರಥ ಬೀದಿಗಳಲ್ಲಿ ತಿರುಗುವಾಗ ಇಂಥಹ ಒಂದು ಪಂಗಡದ ನಾಯಕನ ಪರಿಚಯ ಆಯಿತು. ಆ ಪಂಗಡದಲ್ಲಿ ನನ್ನ ಕೆಲವು ಸ್ನೇಹಿತರು ಇದ್ದರು. ಅವರೆಲ್ಲ ಮದುವೆಗೆ ಬಡಿಸಲು ಹೋಗಿ ತಮ್ಮ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುತ್ತಿದ್ದರು. ಹೀಗೆ ಒಂದು ಭಾನುವಾರ ಬೆಳಿಗ್ಗೆ ಪೇಪರ್ ಓದುತ್ತಿದ್ದವನಿಗೆ ಒಂದು ದೂರವಾಣಿ ಕರೆ ಬಂತು. ಸ್ನೇಹಿತನೊಬ್ಬ ಕರೆ ಮಾಡಿ ''ಇಂದಿನ ಪೆಟ್ಟಿ ಗೆ ಒಬ್ಬ ಕೈ ಕೊಟ್ಟಿದ್ದಾನೆ. ನಮಗೆ ಒಬ್ಬ ಬಡಿಸುವ ಜನ ಅರ್ಜೆಂಟ್ ಬೇಕಾಗಿದೆ. ದಯವಿಟ್ಟು ಬರಲು ಆಗುತ್ತದೆಯೇ? '' ಎಂದು ಕೇಳಿದ. ಮಧ್ಯಾನ್ಹ 12 ಘಂಟೆಗೆ ಹೋಗಿ 2 ಘಂಟೆಗೆ ತಿರುಗಿ ಬರುವುದು ಎಂದು ಹೇಳಿದ. ಸರಿ, ಆತ ಸ್ನೇಹಿತ ಬೇರೆ ಎಂದು ಮೊದಲ ಪೆಟ್ಟು ತಿನ್ನಲು (ಕ್ಷಮಿಸಿ , ಬಡಿಸಲು) ಹೊರಟೆ ಬಿಟ್ಟೆ. ಬಡಿಸುವುದು ನನಗೆ ಹೊಸದಲ್ಲ. ಕಾರಣ ಕ್ರಷ್ಣ ಮಠದಲ್ಲಿ ಪ್ರತಿದಿನ ಬಡಿಸುತ್ತೇವೆ. ಆದರೆ ಮದುವೆ ಮನೆಯಲ್ಲಿ ಬಡಿಸುವುದು, ಮತ್ತು ಪದ್ದತಿಯಂತೆ ಬಡಿಸುವುದು ಹೊಸದಾಗಿತ್ತು. ನನಗೆ ಮೊದಲ ದಿನವಾದ್ದರಿಂದ ''ಪ್ರಥಮ ಚುಂಬನಂ ದಂತ ಭಗ್ನಂ'' ಆಗದಿರಲಿ ಎಂದು ಕೇವಲ ಉಪ್ಪು, ಉಪ್ಪಿನಕಾಯಿ ಮತ್ತು ಹಪ್ಪಳ ಮಾತ್ರ ಬಡಿಸಲು ನೀಡಿದ್ದರು. ಸುಮಾರು 1000 ಜನ ಅಂದು ಮದುವೆಗೆ ಬಂದಿದ್ದರು ಎನಿಸುತ್ತದೆ. ಬಡಿಸಿ ಆದ ಮೇಲೆ ನಾವು ಊಟ ಮಾಡಿ ಮನೆಗೆ ಬಂದೆವು. ಆ ದಿನ ಸಂಜೆ ರಥ ಬೀದಿಯಲ್ಲಿ ನನ್ನ ಸ್ನೇಹಿತ ನನಗೆ 50 ರೂಪಾಯಿಗಳನ್ನು ಕೊಟ್ಟ. ನನಗೆ ಆಶ್ಚರ್ಯ .

''ಇದೇನಿದು?'' ಎಂದು ಕೇಳಿದೆ, 

''ನಿನ್ನ ಮೊದಲ ದುಡಿಮೆ'' ಎಂದ.

 2 ಘಂಟೆ ಬಡಿಸಲು ಹೋಗಿದ್ದಕ್ಕೆ 50 ರೂಪಾಯಿ ನೀಡುತ್ತಿದ್ದರು ಆ ದಿನಗಳಲ್ಲಿ.

ಇಂದು 50 ರೂಪಾಯಿಗಳಿಗೆ ಬೆಲೆ ಇಲ್ಲದಿದ್ದರೂ 11 ವರ್ಷಗಳ ಹಿಂದೆ ಅದು ಬೆಲೆ ಬಾಳುವನ್ತಾದ್ದೆ  ಆಗಿತ್ತು. 

ಮೊದಲ ಬಾರಿಗೆ ಬೆವರು ಹರಿಸಿ ದುಡಿದ ಹಣ ಅದು, ಅಂದು ಆ 50 ರೂಪಾಯಿಗಳು ಕೇವಲ ಹಣ ಆಗಿರಲಿಲ್ಲ. ಬದುಕಿಗೆ ಕಲಿಸಿದ ಬಹುದೊಡ್ಡ ಪಾಠ ಆಗಿತ್ತು. ಅಪ್ಪ ಮಾಡಿಟ್ಟ ಆಸ್ತಿಯನ್ನು ಲೆಕ್ಕವಿಲ್ಲದೆ ಖರ್ಚು ಮಾಡುವ ನಾವುಗಳು ಸ್ವಂತ ದುಡಿದಾಗ ಅದರ ಅನುಭವ ತಿಳಿಯುತ್ತದೆ ಎಂಬ ಸತ್ಯ ಗೋಚರಿಸಿದ ಕ್ಷಣ ಅದಾಗಿತ್ತು. ಕಣ್ಣು ತೇವ ಗೊಂಡಿತ್ತು. ದುಡಿಯುವ ಕೈಗಳ ನೋವು ಮೊದಲ ಬಾರಿಗೆ ಗೋಚರಿಸಿತ್ತು. ಅಂದು ರಸ್ತೆಯಲ್ಲಿ ಮರಳುವಾಗ ರಸ್ತೆ ಕೆಲಸ ಮಾಡುವ ಅದೆಷ್ಟೋ ಜೀವಗಳ ಮೇಲೆ ನನಗರಿವಿಲ್ಲದೆ ಅಕ್ಕರೆ ಮೂಡಿತ್ತು. 

ಆ 50 ರೂಪಾಯಿ ಕಲಿಸಿದ  ಪಾಠ ಇಂದು ಲಕ್ಷ  ರೂಪಾಯಿಗಳು  ಹೇಳಿಕೊಡುತ್ತಿಲ್ಲ....... 

ಮುಂದಿನ ವಾರ ಮತ್ತೆ ಸಿಗುತ್ತೇನೆ
ನಿಮ್ಮ ಗುರು