ಸ್ನೇಹಿತರೆ....
ಗೊತ್ತಿಲ್ಲದೇ ''ಸಾಗರದಾಚೆಯ ಇಂಚರ'' ಕ್ಕೆ 4 ವರುಷಕ್ಕೆ ಕಾಲಿಟ್ಟ ಸಂಭ್ರಮ. ಕಳೆದ ವರ್ಷ ಬ್ಲಾಗ್ ಹೆಚ್ಚು ಬರೆಯಲು ಆಗಲಿಲ್ಲ. ಆದರೆ ಈ ವರ್ಷ ಮತ್ತದೇ ಉತ್ಸಾಹದೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ನಿಮ್ಮ ಪ್ರೀತಿ ಸದಾ ಇರಲಿ. ನಿಮ್ಮೆಲ್ಲರ ಬ್ಲಾಗ್ ಅನ್ನು ನಿಧಾನ ಓದುತ್ತಿದ್ದೇನೆ. ಅದಕ್ಕೆ ಕ್ಷಮೆ ಇರಲಿ. ಹೊಸ ವರುಷ ಸದಾ ಹರುಷ ತರಲಿ.
ಬದುಕಿಗೆ ಸಂಗಾತಿ ಬೇಕು ನಿಜ, ಆದರೆ ಸಂಗಾತಿ ಇಲ್ಲದ ಬದುಕು ''ಬದುಕಲ್ಲ'' ಎಂಬ ನಿಲುವಿಗೆ ನನ್ನ ವಿರೋಧವಿದೆ. ಅಮ್ಮನ ಮುದ್ದಿನ ಮಗಳಾದ ನನಗೆ ಅಮ್ಮನ ಮದುವೆಯ ಬಲವಂತ ಇಂದಿಗೂ ಅರ್ಥವಾಗದ ಒಂದು ಸಮೀಕರಣ. ಹರೆಯಕ್ಕೆ ಬಂದ ಮಗಳು ತಂದೆ ತಾಯಿಗಳ ಚಿಂತೆಯನ್ನು ಹೆಚ್ಚಿಸುತ್ತಾಳಂತೆ. ಅವಳ ಮದುವೆ ಮಾಡಿ ಬಿಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂಬ ಕಲ್ಪನೆ ಬಹುಶ ಎಲ್ಲ ಭಾರತೀಯ ತಂದೆ ತಾಯಿಗಳಲ್ಲೂ ಇರುತ್ತದೆ.
ಬದುಕು ಕೇವಲ 4 ಗೋಡೆಗಳ ಮಧ್ಯದ ಜೈಲಲ್ಲ ಎಂದು ನಾನು ಹೇಳಿದರೆ ಅದನ್ನು ''ಉಡಾಫೆ'' ಎಂದು ತಿರಸ್ಕರಿಸುವ ಅಥವಾ ತಿರಸ್ಕರಿಸುವಂತೆ ಮಾಡುವ ಅದೆಷ್ಟೋ ನನ್ನ ಸುತ್ತ ಮುತ್ತಲಿನ ಸಮಾಜಿಗರಿಗೆ ಬದುಕೆಂದರೆ ಬಾವಿಯೊಳಗಿನ ಕಪ್ಪೆಯಂತೆ. ಅವರು ನಡೆಸಿದ್ದೆ ಬದುಕು, ಹೇಳಿದ್ದೇ ವೇದ ವಾಕ್ಯ.
ನಾನಾಗ ಚಿಕ್ಕವಳಿದ್ದೆ. ಆಗ ಕಲಿಯುವುದೊಂದು ಬಿಟ್ಟು ಇನ್ನೇನು ನನಗೆ ಗೊತ್ತಿರಲಿಲ್ಲ ಅಥವಾ ಬೇಕಿರಲೂ ಇಲ್ಲ. ಜೊತೆಗೆ ಭರತನಾಟ್ಯದ ಹುಚ್ಚು. ಸದಾ ಮನಸ್ಸಿನಲ್ಲಿ ರಾಗಗಳೊಂದಿಗೆ ಪ್ರಯಾಣ ಮಾಡುತ್ತಾ ಕಾಲ್ಗೆಜ್ಜೆಗಳ ನಾದಕ್ಕೆ ತಾಳಗಳನ್ನು ಜೋಡಿಸುತ್ತ ನನ್ನೊಂದಿಗೆ ನಾನು ಬದುಕಿನ ಸಂತೋಷದ ತೇರನ್ನು ಎಳೆಯುತ್ತ ಇದ್ದೆ. ಮುದ್ದು ಮಾಡುವ ಅಮ್ಮ, ತಿದ್ದಿ ತೀಡುವ ಅಪ್ಪ, ಗುದ್ದಿ ತಿದ್ದುವ ಗುರು, ಇವರೆಲ್ಲ ಇರುವಾಗ ನನಗೆ ಯಾವ ಚಿಂತೆಯೂ ಇರಲಿಲ್ಲ. ಮುಂದಿನ ಬದುಕು ಬಹುಶ: ಸಂತೋಷದ ಸಾಗರ ಎಂದು ಅಂದೇ ಎಣಿಸಿದ್ದೆ.
ಕಾಲ ಯಾರಿಗೂ ನಿಲ್ಲಲ್ಲ. ಅಂತೆಯೇ ನನಗೋಸ್ಕರ ನಿಲ್ಲಲಿಲ್ಲ. ಶಿಕ್ಷಣದ ಜೊತೆ, ಭರತನಾಟ್ಯ, ಜೊತೆ ಜೊತೆಗೆ ಸಾಗುತ್ತಿತ್ತು. ಭರತನಾಟ್ಯ ಮುಗಿದಮೇಲೆ ಪಾಠ, ಪಾಠ ದ ನಂತರ ಭರತನಾಟ್ಯ, ಹೀಗೆ ''ನೀನಿದ್ದರೆ ನಾನು, ನಾನಿದ್ದರೆ ನೀನು'' ಎಂಬಂತೆ ನಡೆಯುತ್ತಿತ್ತು.
ಹೆಣ್ಣು ''ಸಂಗೀತ ಕಲಿಯಬೇಕು'' ''ನೃತ್ಯ ಕಲಿಯಬೇಕು'' ''ಹೆಚ್ಚಿನ ಶಿಕ್ಷಣ ಕಲಿಯಬೇಕು''ಆದರೆ ಅವಳು ಅದರಲ್ಲೇ ಸಾಧನೆ ಮಾಡಬಾರದು ಎಂಬ ನಿಲುವು ಎಷ್ಟು ಸರಿ? ಹೆಣ್ಣಿಗೆ
ನೃತ್ಯ , ಸಂಗೀತ ಕೇವಲ ಚಿಕ್ಕವರಿದ್ದಾಗ ಮಾತ್ರ ಕಲಿಯಬೇಕು ಎಂಬ ನಿಲುವು ಭಾರತದ ಅದೆಷ್ಟೋ ತಂದೆ ತಾಯಿಗಳ ಅಭಿಪ್ರಾಯ. ಅವಳು ಬೆಳೆದಂತೆ ಇದನ್ನೆಲ್ಲಾ ಬಿಟ್ಟು ಲಕ್ಷಣವಾಗಿ ಅಡಿಗೆ ಮಾಡಿ ಮದುವೆಯಾಗಿ, 4 ಮಕ್ಕಳನ್ನು ಹೆತ್ತು ಅವರನ್ನು ನೋಡಿಕೊಳ್ಳಬೇಕು. ಬಂಗಾರದಂತ ಸಂಸಾರ ಅವಳದಾಗಬೇಕು, ಎಂಬ ನಿಲುವುಗಳೇ ಭಾರತೀಯ ನಾರಿ ಮನೆಯನ್ನು ಬಿಟ್ಟು ಹೊರಗೆ ಬರದಂತೆ ಎಷ್ಟೋ ಬಾರಿ ಕಟ್ಟಿ ಹಾಕುತ್ತವೆ. ಆ ವಿಷಯದಲ್ಲಿ ನಾನು ಅದೃಷ್ಟವಂತೆ. ನನ್ನ ಶಿಕ್ಷಣಕ್ಕಾಗಲಿ, ಅಥವಾ ಸಂಗೀತ,
ನೃತ್ಯಕ್ಕಾಗಲಿ ಯಾರೂ ಅಡ್ಡಿ ಬರಲಿಲ್ಲ. ಒಳ್ಳೆಯ ಅಂಕಗಳನ್ನು ಪಡೆದು Prestigeous ಕಂಪನಿಯಲ್ಲಿ ದೊಡ್ಡ ಹುದ್ದೆ ಪಡೆದುಕೊಂಡಾಗ ಮನಸ್ಸಿಗೆ ಆದ ಸಂತೋಷ ಹೇಳಲಸದಳ.
ಆದರೆ ಅದಾಗಲೇ ನಮ್ಮೂರ ಜನರಿಗೆ, ನಮ್ಮ ಹೆತ್ತವರಿಗೆ ನಾನು ''ಬೆಳೆದ ಮಗಳು'' ಅಂದರೆ ''ಮದುವೆಗೆ ಬಂದ ಮಗಳು''
ಶುರುವಾಯಿತು ನೋಡಿ, ಜನ ಮರುಳೋ, ಜಾತ್ರೆ ಮರುಳೋ. ಹುಡುಗನ ಹುಡುಕುವ ಸಾಹಸ. ಒಂದೆರಡು ವಧು ಪರೀಕ್ಷೆಯೂ ಆಯಿತು. ಏನಂತಿರಾ, ಅದನ್ನ, ನಾನು ಮೊದಲೇ ಸ್ವಲ್ಪ ಸೀರಿಯಸ್ ಮನುಷ್ಯ, ಅದನ್ನ ಆ ಪ್ರಾಣಿ ಹೇಗೋ ತಿಳಿದುಕೊಂಡಿದೆ. ಅವನ ಪ್ರಶ್ನೆಯ ವೈಖರಿಯ ಸ್ಯಾಂಪಲ್ ನಿಮ್ಮ ಮುಂದೆ,
ವಧು ಪರೀಕ್ಷೆ ೧: ಪರೀಕ್ಷಾ ಕೊಠಡಿ.
ವರ : ಹೇಗಿದ್ದಿರಾ,
ವಧು: ಚೆನ್ನಾಗಿದ್ದೀನಿ (ಇನ್ನೇನು ನಿಮ್ಮ ನೋಡಿದ ಮೇಲೆ ಹುಷಾರು ತಪ್ಪಿ ಹೋಗೋ ಲಕ್ಷಣ ಇದೆ )
ವರ: ನಾನು ಚೆನ್ನಾಗಿದ್ದೀನಿ
ವಧು : (ನಾನೇನು ಕೇಳಿದನ ನಿಮ್ಮ)
ವರ: ಏನು ಓದ್ಕೊಂಡಿದಿರಾ? ನೀವು ತುಂಬಾ ಮೂಡಿ ಅಂತೆ, ಹೆಚ್ಚು ಯಾರತ್ರನು ಮಾತಾಡಲ್ಲ ಅಂತೆ, ಒಳ್ಳೆ ಡಾನ್ಸ್ ಮಾಡ್ತಿರಂತೆ? ಹಾಡು ಬರತ್ತೆ ಅಂತನು ಕೇಳಿದೆ, ಹೌದ?
ವಧು: ಪರವಾಗಿಲ್ಲ, homework ಚೆನ್ನಾಗಿ ಮಾಡಿ ಬಂದಿದಿರಾ, ನೀವು ಕೇಳಿರೋದು ಎಲ್ಲ ನಿಜ. ನಾನು ಹಾಗೆಲ್ಲ ಸುಮ್ಮ ಸುಮ್ಮನೆ ಮಾತಾಡೋಕೆ ಹೋಗಲ್ಲ. ವಿಷಯ ಇದ್ರೆ ಮಾತಾಡ್ತೀನಿ, ಇಲ್ಲ ಅಂದ್ರೆ ಆಫೀಸ್ ಕೆಲಸ ಇದ್ದೆ ಇದೆ. ನನಗೆ ಸುಮ್ಮನೆ ಹರಟೆ ಹೊಡೆಯೋಕೆ ಇಷ್ಟ ಇಲ್ಲ.
ವರ: Same Here ನಾನು ಹಾಗೇನೆ . ನನಗೆ ಸೀರಿಯಸ್ ಮನುಷ್ಯರು ಅಂದ್ರೆ ತುಂಬಾ ಇಷ್ಟ. ಯಾರಿಗೆ ಬೇಕು ಹರಟೆ ಹೇಳಿ, ಟೈಮ್ ಎಲ್ಲಿದೆ ಅದನ್ನೆಲ್ಲ ಮಾಡೋಕೆ
ವಧು:(ಈಗ ತಾವು ಮಾಡ್ತಾ ಇರೋದು ಅದನ್ನೇ ಅಲ್ಲವೇ)
ವರ: ನಿಮಗೆ ಅಡಿಗೆ ಮಾಡೋಕೆ ಬರತ್ತಾ? ನಾನು ತುಂಬಾ ಸಂಬಳ ತಗೋತೀನಿ, ನನಗೆ ನೀವು ಕೆಲಸ ಮಾಡೋದು ಇಷ್ಟ ಇಲ್ಲ. ಮನೇಲಿ ಎಲ್ಲಾನು ಇದೆ. ಆರಾಮಾಗಿ ಮನೇಲೆ ಇದ್ದು ಬಿಡಿ. ಕೆಲಸದವರು ಇದ್ದಾರೆ. ನೀವು ಏನು ಮಾಡೋದು ಬೇಡ. ಬೇಜಾರಾದರೆ ಮನೇಲೆ ಡಾನ್ಸ್ ಮಾಡಿ. ಆದ್ರೆ ಹೊರಗಡೆ ಪ್ರೋಗ್ರಾಮ್ ಕೊಡೋದು ಬೇಡ ಯಾಕಂದ್ರೆ ನಂದು ಸ್ಟೇಟಸ್ ಹಾಳಾಗತ್ತೆ, ನನ್ನ ಹೆಂಡ್ತಿ ಡಾನ್ಸ್ ಮಾಡ್ತಾಳೆ ಅಂತ ಕೇಳಿದ್ರೆ. ನೀವು ಹೇಗೆ ಬೇಕಾದ್ರೂ ಇರಿ, ನನದೇನೂ ಅಭ್ಯಂತರ ಇಲ್ಲ, ಒಟ್ಟಿನಲ್ಲಿ ನೀವು ಸುಖವಾಗಿ ಇರಬೇಕು ಅಷ್ಟೇ..
ವಧು : (ನಿಮ್ಮಜ್ಜಿ, ಎಲ್ಲಿ ಸುಖ, ಇಷ್ಟೊಂದು ಬಂಧನದಲ್ಲಿ ನನ್ನ ಇಟ್ಟು, ಸುಖವಾಗಿರು ಅಂತಿರಲ್ಲ)
ವರ: ಸರಿ ಹಾಗಾದ್ರೆ, ಮದುವೆ ಬಗ್ಗೆ ನಿಮ್ಮ ತಂದೆ ತಾಯಿ ಹತ್ರ ಮಾತಾಡ್ತೀನಿ, ನನ್ನ ನಂಬರ್ ತಗೋಳಿ, ಕಾಲ್ ಮಾಡ್ತಾ ಇರಿ ಆಯ್ತಾ..
ವಧು: ಸರಿ, ನೀವು ಕಾಲ್ ಗೆ ಕಾಯ್ತಾ ಇರಿ ಆಯ್ತಾ ;;;;;;
ಇದು ನನ್ನ ಮೊದಲ ವಧು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕೂಡಾ. ನನ್ನ ಅಭಿಪ್ರಾಯಕ್ಕೆ ಎಳ್ಳೆಣ್ಣೆ ಯಾ ಬೆಲೆಯೂ ಇಲ್ಲದ ಮದುವೆ ಬೇಕಾ? ಎಂದು ಮೊದಲ ಬಾರಿಗೆ ಅನ್ನಿಸಿದ್ದು ಅಂದೇ. ಈ ಬದುಕು ತಂದೆ ತಾಯಿಗಳ ಕ್ರಪೆ. ಆದರೆ ಬದುಕಿನ ಸಂಪೂರ್ಣ ಹಕ್ಕು ನನ್ನದಲ್ಲವೇ? ನನ್ನ ಬದುಕಿನ ನಿರ್ಧಾರ ಊರಿನ 4-6 ಜನ ನಿರ್ಧರಿಸುತ್ತಿದ್ದಾರೆ ಎಂದಾದರೆ ನಾನ್ಯಾರು? ನನ್ನ ಸ್ವಂತಿಕೆ ಏನು? ಇದೂ ಒಂದು ಬದುಕೇ? ಇನ್ನೊಬ್ಬರ ಹಂಗಿನ ಸ್ವಾತಂತ್ರವೇ ಇಲ್ಲದ ಬದುಕಿನ ಬಗ್ಗೆ ಬಹಳಷ್ಟು ವಿಚಾರಗಳು ಅಂದು ತಲೆಯಲ್ಲಿ ಸುಳಿದು ಹೋದವು.
ಮನೆಯಲ್ಲಿ ಅಂದೇ ಹೇಳಿದೆ, ನನಗೆ ಮದುವೆ ಬೇಡ ಎಂದು. ಅಂದಿನಿಂದ ಆರಂಭವಾಯಿತು ಅಮ್ಮನ ಉಪವಾಸ ಸತ್ಯಾಗ್ರಹ, ಅದೆಲ್ಲೋ ಉತ್ತರ ಭಾರತದಲ್ಲಿ ನೀರಿಲ್ಲದೆ ಜನ ಸಾಯುತ್ತಿದ್ದಾರೆ ಎಂದು ಓದಿದ್ದೆ. ಅಂದೆನಾದರೂ ನಮ್ಮ ಮನೆಯಿಂದ ಒಂದು ಪೈಪ್ ನಲ್ಲಿ ಕಣ್ಣೀರನ್ನು ಉತ್ತರ ಭಾರತಕ್ಕೆ ಕಳಿಸಿದ್ದರೆ ಅದೆಷ್ಟೋ ಜನ ಬದುಕಿಕೊಳ್ಳುತ್ತಿದ್ದರು. ಅಮ್ಮನ ಕಣ್ಣೀರಿನ ಪವರ್ ಹಾಗಿತ್ತು. ಅತ್ತು ಅತ್ತು ಅವಳ ಕಣ್ಣು ಕೆಂಪಾಗಿತ್ತು.
ಅಮ್ಮನಿಗೆ ಮದುವೆ ಎನ್ನುವುದು ಒಂದು ಅನಿವಾರ್ಯ ಅಷ್ಟೇ ಅಲ್ಲ ಅದೊಂದು ಸಂಪ್ರದಾಯ. ನನಗೆ ಮದುವೆ ಎನ್ನುವುದು ಬಂಧನ.ಹಾರುವ ಹಕ್ಕಿಗೆ ಚಿನ್ನದ ಪಂಜರದಲ್ಲಿ ಕೂಡಿಸಿ ಪಂಚ ಭಕ್ಷ ಪರಮಾನ್ನ ನೀಡಿದರೂ ಅದಕ್ಕೆ ಹಾರುವಿಕೆಯಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಎಲ್ಲಿಯೂ ಸಿಗದು.ಆದರೆ ಸಂಪ್ರದಾಯದ ನೆರಳಲ್ಲಿ ಬೆಳೆದ ಅಮ್ಮನಿಗೆ ಇದನ್ನು ಅರ್ಥ ಮಾಡಿಸಲು ಸಾದ್ಯವಿಲ್ಲ.
ಅವಳಿಗೆ ಬದುಕು ಎಂದರೆ ಮದುವೆ, ಬಾಳು ಎಂದರೆ ಮಕ್ಕಳು.
ನನಗೆ ಬದುಕು ಎಂದರೆ ಸಾಧನೆ, ಬಾಳು ಎಂದರೆ ಸಾಹಸ
ಅವಳು ಬದುಕಿಗೆ ಹೆದರಿ ಬಾಳನ್ನು ಒಪ್ಪಿ ಕೊಂದವಳು (ಅಲ್ಲಲ್ಲ ಒಪ್ಪಿ ಕೊಂಡವಳು)
ನಾನು ಬದುಕಿಗೆ ಸವಾಲಾಗಿ ನಿಂತು ಬಾಳನ್ನು ಅಪ್ಪುವವಳು
ಇಬ್ಬರ ಮನಸ್ಸಿನ ದ್ವಂದ್ವ ಇಬ್ಬರಿಗೂ ಅರ್ಥ ಆಗದು
ಮತ್ತೆ ಮುಂದಿನ ವಾರ ಸಿಗುತ್ತೇನೆ, ಕಥೆ ಇನ್ನೂ ಇದೆ....