ಕೆಲವರು ಇರುತ್ತಾರೆ, ಸದಾ ಹೊಗಳುವುದೇ ಅವರ ಜಾಯಮಾನ, ಅದು ಅವರ ಮಾತಿನ ಚಾಕಚಕ್ಯತೆ ಅಂತಲೇ ಅವರು ತಿಳಿದಿರುತ್ತಾರೆ. ಹಾಗೆಯೇ ತಮ್ಮನ್ನೂ ಇತರರು ಹೊಗಳಲಿ ಎಂದು ಬಯಸುತ್ತಿರುತ್ತಾರೆ. ಅವರ ಮಾತಿನ ನಡು ನಡುವೆ ''ಎಷ್ಟು Friendly ನೀವು, ತುಂಬಾ ಒಳ್ಳೆಯವರು, ನಿಮ್ಮಂಥವರು ಸಿಗೋದು ಬಲು ಅಪರೂಪ (ಎಷ್ಟು ಜನರಿಗೆ ಇದೆ ರೀತಿಯ ಮಾತನ್ನು ಆಡಿದ್ದಾರೋ ದೇವರೇ ಬಲ್ಲ)'' ಎಂದೆಲ್ಲ ಹೇಳುತ್ತಿರುತ್ತಾರೆ. ಇವರ ಉದ್ದೇಶ ಒಂದೇ, ತಾವು ಎಲ್ಲರನ್ನೂ ಬುಟ್ಟಿಗೆ ಬೀಳಿಸಿಕೊಳ್ಳುವುದು. ಒಂಥರಾ ವಿಷವಿಲ್ಲದ ನಾಗರಹಾವಿನಂತೆ.
ಇನ್ನೂ ಕೆಲವರು ಇರುತ್ತಾರೆ, ಅವರ ಮಾತುಗಳು ಬಹಳಷ್ಟು ಮಟ್ಟಿಗೆ ಮೇಲಿನಂತೆಯೇ ಇರುತ್ತವೆ ಆದರೆ ಅವರು ಉತ್ಪ್ರೇಕ್ಷಾಲಂಕಾರದ ಜೊತೆ ಉಪಮೆಗಳನ್ನೂ ಕೊಡುತ್ತಾರೆ. ಅವರಿಗೆ ನಮ್ಮನ್ನಷ್ಟೆ ಹೊಗಳಿದರೆ ಸಾಲದು, ನಮಗೆ ಗೊತ್ತಿರುವ ಕೆಲವು ಜನರನ್ನೂ ತೆಗಳಬೇಕು ''ಏನು ಜನಾರೀ ಅವರು, ನಿಮ್ಮ ಹಾಗೇ ಇಲ್ಲ, ನಿಮ್ಮ ಜೊತೆ ನಾವು ಅದೆಷ್ಟು Comfortable ಆಗಿ ಇರ್ತಿವಿ ಆದರೆ ಅವರ ಜೊತೆ ಏನೋ ಮುಳ್ಳು ಚುಚ್ಚಿದ ಅನುಭವ ಆಗುತ್ತೆ ಕಣ್ರೀ'' ಅಂತಾರೆ. ಇಂಥವರು ಒಂಥರಾ ವಿಷ ಸರ್ಪದ ಹಾಗೇ. ಮೈಯೆಲ್ಲಾ ಕಣ್ಣಾಗಿರಬೇಕು. ಅಪ್ಪಿ ತಪ್ಪಿ ಇವರಲ್ಲಿ ''ಅವರ'' ಬಗ್ಗೆ ಹೇಳಿದರೋ, ನಿಮ್ಮ ಸರ್ವ ಪುರಾಣವೂ ಕಾಲು ಬಾಯಿಗಳೊಂದಿಗೆ ''ಅವರ'' ಮನೆಯಲ್ಲಿ ರಸಾಯನವಾಗಿರುತ್ತದೆ.
ಇಂಥವರು ಒಂಥರಾ ಕಂಕುಳಲ್ಲಿ ಇದ್ದ ಬೆಣ್ಣೆಯ ಹಾಗೇ, ಬಿಡೋಕೂ ಆಗಲ್ಲ, ಹಾಗಂತ ಬಹಳ ದಿನ ಇರೋಕ್ಕೂ ಆಗಲ್ಲ. ಒಬ್ಬರನ್ನು ಹೊಗಳ್ತಾ, ಇನ್ನೊಬ್ರನ್ನ ತೆಗಳುತ್ತಾ, ಕೊನೆಗೆ ತಮ್ಮಷ್ಟಕ್ಕೆ ತಾವೇ ತಮ್ಮ ಚಾಣಾಕ್ಷ ಬುದ್ಧಿಗೆ ನಗುತ್ತಾ ಕಾಲ ಕಳೆಯುವುದೇ ಇಂಥವರ ಹವ್ಯಾಸ. ದುರ್ದೈವವಶಾತ್ ಇಂಥವರಿಗೆ ಬಹಳಷ್ಟು ಜನರ ಪರಿಚಯ ಇರುತ್ತೆ. ''ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು'' ಎನ್ನುವಂತೆ ಸದಾ ಬೇರೊಬ್ಬರ ಋಣಾತ್ಮಕ ಅಂಶಗಳ ಬಗೆಗೆ ಆಸಕ್ತಿ ಇವರಿಗೆ ಹೆಚ್ಚು. ಜೀವನದ ಬಂಡಿಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನಾವು ಇಂಥಹ ಜನರಾಗಿಯೋ, ಜನರೊಂದಿಗೋ ಸಂಪರ್ಕ ಇಟ್ಟುಕೊಂಡಿರುತ್ತೇವೆ.
ಕೆಲವೊಮ್ಮೆ ನಾವೇ ನಮಗೆ ಗೊತ್ತಿಲ್ಲದಂತೆ ನೆಚ್ಚಿನ ಸ್ನೇಹಿತನ ಮಾತಿನಿಂದ ಕೋಪಗೊಂಡು ಇನ್ನೊಬ್ಬ ಸ್ನೇಹಿತನಲ್ಲಿ ಅವನ ಬಗ್ಗೆ ಕೀಳಾಗಿ ಮಾತನಾಡಿರುತ್ತೇವೆ. ಇದೊಂದು ಆ ಕ್ಷಣದ ಕೆಟ್ಟ ಮನಸ್ಥಿತಿ. ಆ ಕ್ಷಣ ಧಾಟಿದಾಗ ಪುನಃ ಚಿತ್ರಣದ ಅರಿವಾಗಿ ಒಂದಾಗುತ್ತೇವೆ. ಆದರೆ ನಗು ನಗುತ್ತಾ ಹಿಂದಿನಿಂದ ನಮ್ಮ ಬಗ್ಗೆ ಆಡಿಕೊಳ್ಳುವುದಿದೆಯಲ್ಲ ಅದು ಮಾತ್ರ ವಿಚಿತ್ರ ಮನಸ್ಥಿತಿ. ಅಂಥವರು ಯಾವಾಗಲೂ ನಮ್ಮ ಚಿತ್ತ ಕೆಡಿಸಲು ಕಟಿ ಬದ್ಧರಾಗಿರುತ್ತಾರೆ. ಇನ್ನೊಬ್ಬರ ಏಳ್ಗೆ ಅವರಿಗೆ ಸಹಿಸಲು ಸಾದ್ಯವೇ ಇಲ್ಲ.
ನಮ್ಮನ್ನೇ ತೆಗೆದುಕೊಳ್ಳಿ, ನಮಗೆ ಊಟ ಮಾಡುವಾಗ ಸುಮ್ಮನೆ ಊಟ ಮಾಡಿ ಗೊತ್ತಿಲ್ಲ, ಇರುವ ೧೦ ನಿಮಿಷದ ಊಟದಲ್ಲಿ ದೇಶ ವಿದೇಶಗಳ ಅಥಿತಿಗಳು ಊಟದಲ್ಲಿ ಬಂದಿರುತ್ತಾರೆ. ನಮಗೆ ಊಟಕ್ಕೆ ಕೂತಾಗ ''ಒಬಾಮ ಏನು ಮಾಡಿದ, ಮನಮೋಹನ ಸಿಂಗ್ ಯಾಕೆ ಹೀಗೆ?, ಅಣ್ವಸ್ತ್ರ ಬೇಕೇ ಬೇಡವೇ? ಸಚಿನ್ ತೆಂಡೂಲ್ಕರ್ ಕೌಂಟಿ ಯಲ್ಲಿ ಆಡಲು ಯಾಕೆ ಒಪ್ಪಿಕೊಂಡ'' ಎಂಬ ವಿಷಯಗಳು ಬೇಕೇ ಬೇಕು. ನಮ್ಮದೇ ಮನೆಯ ಮುಂದೆ ಬಿದ್ದ ಕಸದ ರಾಶಿ ನಮಗೆ ಕಾಣಿಸದು ಆದರೆ ಪಕ್ಕದ ಮನೆ ಜಾನಕಮ್ಮನ ಮನೆಯ ಸ್ವಚ್ಛತೆ ಬಗ್ಗೆ ನಾವು ಬೆರಳು ತೋರಿಸುತ್ತೇವೆ. ನಮ್ಮನ್ನು ನಾವು ಸುಧಾರಿಸಿಕೊಳ್ಳಲು ನಮಗೆ ಪುರುಸೊತ್ತಿಲ್ಲ, ಯಥೇಚ್ಚವಾಗಿ ಇನ್ನೊಬ್ಬರಿಗೆ ಬದುಕಲು ಉಪದೇಶ ಕೊಡುತ್ತೇವೆ. ಅದರಲ್ಲೂ ಹಿರಿಯರು ಎನ್ನಿಸಿಕೊಂಡವರ ಬಾಯಿಯಿಂದ ಬರುವುದು ಕೇವಲ ಉಪದೇಶ ಮಾತ್ರ. ಉಪದೇಶ ಕೊಡಬೇಕಾಗಿಲ್ಲ, ನಿಮ್ಮನ್ನು ನೋಡಿ ಅನುಸರಿಸಬೇಕು ಎಂಬುದು ನಮಗೆ ಮರೆತು ಎಷ್ಟೋ ವರ್ಷಗಳೇ ಕಳೆದಿವೆ.
ನೀವು ಹಳ್ಳಿಯ ಹೆಂಗಸರು ಕುಳಿತು ಮಾತನಾಡುವುದು ಕೇಳಿರಬೇಕು (ಪಟ್ಟಣದ ಹೆಂಗಸರಿಗೆ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂಬುದೇ ಗೊತ್ತಿಲ್ಲ ಇನ್ನು ಮಾತನಾಡುವುದು ದೂರದ ವಿಚಾರವಾದ್ದರಿಂದ ಪ್ರಸ್ತಾಪಿಸುತ್ತಿಲ್ಲ) ''ಅಲ್ರಿ, ಆ ಸಾವಿತ್ರಮ್ಮನ ಸೊಸೆಗೆ ಏನು ಬಂತು ಅಂತ, ಅಷ್ಟು ಒಳ್ಳೆ ಸಾವಿತ್ರಮ್ಮನ ಜೊತೆ ಜಗಳ ಮಾಡ್ತಾಳಂತೆ'' ''ಹೌದೇನ್ರಿ, ಇನ್ನೊಂದು ವಿಷಯ ಗೊತ್ತಾ, ಆ ರಾಮಣ್ಣ ದಿನಾ ರಾತ್ರಿ ಕುಡಿದು ಬಂದು ಹೆಂಡತಿಗೆ ಹೊಡಿತಾನಂತೆ , ನಿಮ್ಮಂತ ಒಳ್ಳೆಯವರ ಮನೆ ಪಕ್ಕದಲ್ಲಿದ್ದುಕೊಂಡೂ ಹೀಗೆ ಮಾಡೋದಾ (ಪಕ್ಕದಲ್ಲಿದ್ದರೆ ಹುಟ್ಟು ಗುಣ ತಪ್ಪಿ ಹೋಗುತ್ತಾ) ''. ಕೊನೆಯಲ್ಲಿ ಎಲ್ಲರ ಬಗ್ಗೆ ಮಾತನಾಡಿದ ಮೇಲೆ ಅವರಲ್ಲೇ ಹಿರಿಜೀವ (ವಯಸ್ಸಿನಲ್ಲಾದರೂ ಆಗಬಹುದು, ಬಾಯಿಯಲ್ಲಾದರೂ ಆಗಬಹುದು, size ನಲ್ಲಾದರೂ ಆಗಬಹುದು) ಎದ್ದು ನಿಂತು ''ಅವರಿವರ ಮನೆ ಸುದ್ದಿ ನಮಗೆ ಯಾಕೆ, ನಮ್ಮಷ್ಟಕ್ಕೆ ನಾವು ಇದ್ದು ಬಿಡೋಣಾ'' ಅನ್ನೋ ವೇದ ವಾಕ್ಯದೊಂದಿಗೆ ಮುಕ್ತಾಯ ಮಾಡ್ತಾರೆ.
ಎದುರಿಗೆ ನಮ್ಮನ್ನೇ ಹೊಗಳಿ ಹಿಂದಿನಿಂದ ನಮ್ಮ ಬಗ್ಗೆಯೇ ಮಾತನಾಡುವ ಜನರನ್ನು ಗುರುತಿಸುವುದು ಕಷ್ಟದಾಯಕ ಕೆಲಸವೇ? ಮನುಷ್ಯ ಸಂಘಜೀವಿ, ನಮಗೆ ಸುತ್ತ ಮುತ್ತಲಿನ ಜನ ಬೇಕು, ಒಡನಾಟ ಬೇಕು. ಇಂಥವರು ನಮ್ಮ ಸುತ್ತ ಮುತ್ತಲೂ ಇದ್ದೇ ಇರುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.ನಾವೇ ಎಷ್ಟೋ ಸಲ ಇಂಥಹ ಸ್ನೇಹಿತರೊಂದಿಗೆ ಬದುಕುತ್ತಿರುತ್ತೇವೆ. ಆದರೆ ಅವರ ಇನ್ನೊಂದು ಮುಖದ ದರ್ಶನ ಆಗಿರುವುದೇ ಇಲ್ಲ. ನಮ್ಮ ಜೊತೆ ನಗು ನಗುತ್ತಾ ನಮ್ಮಿಂದ ಎಲ್ಲ ಮಾಹಿತಿ ಪಡೆದು ಕೊನೆಗೆ ಆದಷ್ಟು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅದೇನು ಕೆಟ್ಟ ಸುಖವೋ ಅವರಿಗೆ ಇದರಲ್ಲಿ ನಾ ಕಾಣೆ. ಇಂಥಹ ಸ್ನೇಹಿತರು ಮಹಾ ವಂಚಕರು. ಒಡನೆಯೇ ಇಂಥವರನ್ನು ಗುರುತಿಸಿ ನಡುವೆ ಒಂದು ಬೇಲಿ ನಿರ್ಮಿಸಿಕೊಳ್ಳುವುದು ಒಳ್ಳೆಯದು ಇಲ್ಲದಿರೆ ನಮ್ಮ ಜೀವನವನ್ನೇ ಹೊಸಕಿ ಹಾಕಿ ಬಿಡುವ ಮಹಾ ಶತ್ರುಗಳು ಇವರು. ಇಂಥವರು ಸಹಾಯ ಬೇಕಾದಾಗ ಮಾತ್ರ ನಮ್ಮ ಬಳಿ ತಲೆ ತಗ್ಗಿಸಿ ಬರುತ್ತಾರೆ ಅಷ್ಟೇ ಅಲ್ಲ ನಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ ಕೂಡಾ. ಒಮ್ಮೆ ಕೆಲಸವಾಯಿತೋ ನಂತರ ನಿಮ್ಮ ಮನೆಯ ಕಸದ ಬುಟ್ಟಿಯಲ್ಲಿಯೇ ನಿಮ್ಮನ್ನು ಹಾಕಿ ಹೋಗುತ್ತಾರೆ. ''ದುಷ್ತಂ ದೂರ ವರ್ಜಿತಂ'' ಎಂಬಂತೆ ಆದಷ್ಟು ಇಂಥವರ ಸಹವಾಸದಿಂದ ದೂರವಿರುವುದು ಒಳ್ಳೆಯದು.
ಎದುರಿಗೆ ನಮ್ಮನ್ನೇ ಹೊಗಳಿ ಹಿಂದಿನಿಂದ ನಮ್ಮ ಬಗ್ಗೆಯೇ ಮಾತನಾಡುವ ಜನರನ್ನು ಗುರುತಿಸುವುದು ಕಷ್ಟದಾಯಕ ಕೆಲಸವೇ? ಮನುಷ್ಯ ಸಂಘಜೀವಿ, ನಮಗೆ ಸುತ್ತ ಮುತ್ತಲಿನ ಜನ ಬೇಕು, ಒಡನಾಟ ಬೇಕು. ಇಂಥವರು ನಮ್ಮ ಸುತ್ತ ಮುತ್ತಲೂ ಇದ್ದೇ ಇರುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಸಾದ್ಯವೇ ಇಲ್ಲ.ನಾವೇ ಎಷ್ಟೋ ಸಲ ಇಂಥಹ ಸ್ನೇಹಿತರೊಂದಿಗೆ ಬದುಕುತ್ತಿರುತ್ತೇವೆ. ಆದರೆ ಅವರ ಇನ್ನೊಂದು ಮುಖದ ದರ್ಶನ ಆಗಿರುವುದೇ ಇಲ್ಲ. ನಮ್ಮ ಜೊತೆ ನಗು ನಗುತ್ತಾ ನಮ್ಮಿಂದ ಎಲ್ಲ ಮಾಹಿತಿ ಪಡೆದು ಕೊನೆಗೆ ಆದಷ್ಟು ನಮ್ಮ ಹೆಸರು ಕೆಡಿಸಲು ಪ್ರಯತ್ನಿಸುತ್ತಾರೆ. ಅದೇನು ಕೆಟ್ಟ ಸುಖವೋ ಅವರಿಗೆ ಇದರಲ್ಲಿ ನಾ ಕಾಣೆ. ಇಂಥಹ ಸ್ನೇಹಿತರು ಮಹಾ ವಂಚಕರು. ಒಡನೆಯೇ ಇಂಥವರನ್ನು ಗುರುತಿಸಿ ನಡುವೆ ಒಂದು ಬೇಲಿ ನಿರ್ಮಿಸಿಕೊಳ್ಳುವುದು ಒಳ್ಳೆಯದು ಇಲ್ಲದಿರೆ ನಮ್ಮ ಜೀವನವನ್ನೇ ಹೊಸಕಿ ಹಾಕಿ ಬಿಡುವ ಮಹಾ ಶತ್ರುಗಳು ಇವರು. ಇಂಥವರು ಸಹಾಯ ಬೇಕಾದಾಗ ಮಾತ್ರ ನಮ್ಮ ಬಳಿ ತಲೆ ತಗ್ಗಿಸಿ ಬರುತ್ತಾರೆ ಅಷ್ಟೇ ಅಲ್ಲ ನಮ್ಮನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ ಕೂಡಾ. ಒಮ್ಮೆ ಕೆಲಸವಾಯಿತೋ ನಂತರ ನಿಮ್ಮ ಮನೆಯ ಕಸದ ಬುಟ್ಟಿಯಲ್ಲಿಯೇ ನಿಮ್ಮನ್ನು ಹಾಕಿ ಹೋಗುತ್ತಾರೆ. ''ದುಷ್ತಂ ದೂರ ವರ್ಜಿತಂ'' ಎಂಬಂತೆ ಆದಷ್ಟು ಇಂಥವರ ಸಹವಾಸದಿಂದ ದೂರವಿರುವುದು ಒಳ್ಳೆಯದು.
ಯಾರು ಕಷ್ಟದಲ್ಲಿ ನೆರವಾಗುತ್ತಾರೋ ಅವರೇ ನಿಜವಾದ ಸ್ನೇಹಿತರು, ಆತ್ಮೀಯರು. ಇಂಥಹ ಆತ್ಮೀಯರ ಆಯ್ಕೆ ಮಾತ್ರ ನಮಗೆ ಬಿಟ್ಟದ್ದು. ಆದರೂ ''ಸಜ್ಜನರ ನಡವಳಿಕೆ ಹೆಜ್ಜೇನು ಸವಿದಂತೆ'' ಎಂಬ ನಾಣ್ನುಡಿ ಯಂತೆ ಉತ್ತಮ ಸ್ನೇಹಿತರ ಒಳ್ಳೆಯತನ ಮನಸ್ಸಿಗೆ ತಿಳಿದೇ ತಿಳಿಯುತ್ತದೆ. ಕೇವಲ ಸಮಯವೊಂದೇ ಅದಕ್ಕೆ ಉತ್ತರ ನೀಡಲು ಸಾದ್ಯ.
ನಿಮ್ಮ ನಡುವೆ ನಿಮ್ಮನ್ನು ಹೊಗಳಿ ನಿಮ್ಮನ್ನೇ ಆಡಿಕೊಳ್ಳುವ ಜನರಿರಬಹುದು ''ನೀವು ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ'' ಎನ್ನುವವರಿಂದ ಸ್ವಲ್ಪ ದೂರ ಇರಿ ಇಲ್ಲ ಒಂದು ಕಣ್ಣಿಡಿ.