ಬ್ಲಾಗ್ ಪ್ರಪಂಚ ಬೆಳೆದಂತೆ ಅನೇಕ ಸ್ನೇಹಿತರು, ಎತ್ತಣ ಮಾಮರ, ಎತ್ತಣ ಕೋಗಿಲೆ ಎನ್ನುವ ಹಾಗೆ ಎಲ್ಲೋ ಇರುವ ನಾವೆಲ್ಲಾ ಇಂದು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಸ್ನೇಹಕ್ಕೆ ಹೊಸ ಅರ್ಥ ಈ ಬ್ಲಾಗ್ ಪ್ರಪಂಚ ಕೊಟ್ಟಿದೆ. ಇದೇ ಸ್ನೇಹದ ಹೆಸರಿನಲ್ಲಿ ನಮ್ಮ ಸ್ನೇಹವನ್ನು ದುರುಪಯೋಗ ಗೊಳಿಸಿ ಕೊಳ್ಳುವರ ಸಂಖ್ಯೆ ಯೂ ದಿನೇ ದಿನೇ ಹೆಚ್ಚುತ್ತಿದೆ. ಕೆಲವೊಮ್ಮೆ ಇಂಥಹ ಸ್ನೇಹಿತರ ನಡವಳಿಕೆಯಿಂದ ಬ್ಲಾಗ್ ಪ್ರಪಂಚದ ಬಗ್ಗೆ ಬೇಸರವೂ ಆಗಿದ್ದುಂಟು. ಆದರೆ ಹಿರಿಯ ಜನರ ಮಾತಿನಂತೆ ''ಸಜ್ಜನರ ಸಂಘವದು ಸವಿಜೇನು ಸವಿದಂತೆ''. ಅಂಥಹ ಒಳ್ಳೆಯ ಸ್ನೇಹಿತರು ಬ್ಲಾಗ್ ಲೋಕದಲ್ಲಿ ಇರುವುದರಿಂದ ಬ್ಲಾಗ್ ಲೋಕದ ಬಗೆಗೆ ಪ್ರೀತಿ ಮತ್ತೆ ಮತ್ತೆ ಜಾಸ್ತಿ ಆಗುತ್ತದೆ.
ಕ್ರಪೆ : ಶಿವೂ ಸರ್ ಬ್ಲಾಗ್ ನಿಂದ
ಸುಮಾರು ಎರಡು ವರ್ಷದ ಹಿಂದೆ ಬ್ಲಾಗ್ ಆರಂಭಿಸಿದಾಗ ಅಣ್ಣನಂತೆ ಬ್ಲಾಗ್ ಅನ್ನು ಪ್ರೋತ್ಸಾಹಿಸಿದ ನೆಚ್ಚಿನ ಮೆಚ್ಚಿದ ಅಚ್ಚು ಮೆಚ್ಚಿನ ನಮ್ಮೆಲ್ಲರ ಪ್ರೀತಿಯ ''ಪ್ರಕಾಶಣ್ಣ'' ನ ಎರಡನೇ ಪುಸ್ತಕ ನಾಳೆ ಬಿಡುಗಡೆ ಆಗುತ್ತಿದೆ. ಪ್ರತಿ ಪುಸ್ತಕಕ್ಕೂ ಹೆಸರು ಇಡಲು ಹೋಗದೆ, ಹೆಸರನ್ನೇ ಹೆಸರು ಮಾಡಿ ಮೊದಲು ''ಹೆಸರೇ ಬೇಡ'' ಎಂದು ನಿರ್ಧರಿಸಿ ಇದೀಗ ''ಇದೇ ಇದರ ಹೆಸರು'' ಎಂದು ಹೇಳಿ ಅದರ ಬಿಡುಗಡೆಗೆ ಪ್ರಕಾಶಣ್ಣ ಸಿದ್ದರಾಗಿದ್ದಾರೆ.
ಅವರ ಕಥೆಗಳಲ್ಲಿ ಆತ್ಮೀಯತೆ ಇದೇ. ಕನ್ನಡ ಸಾಹಿತ್ಯಕ್ಕೆ ಅನೇಕ ಕಥೆಗಾರರು ಬಂದಿದ್ದಾರೆ. ಕೆಲವರು ಹಾಸ್ಯರಸದಲ್ಲಿ ಮಹಾನ ಸಿದ್ಧಿ ಸಾಧಿಸಿ ತೋರಿಸಿದ್ದಾರೆ . ಇನ್ನು ಕೆಲವರು ಕಥೆಯಿಂದ ಕಣ್ಣೀರಿನ ಕೊಡಿಯನ್ನೇ ಹರಿಸಿದ್ದಾರೆ. ಆದರೆ ಹಾಸ್ಯದ ಮಾಧ್ಯಮ ಬಳಸಿಕೊಂಡು ಗಂಬೀರ ವಿಷಯಗಳ ಬಗೆಗೆ ಬರೆದು ತನ್ಮೂಲಕ ಸಮಾಜದ ಸಮಸ್ಯೆಗಳ ಬಗೆಗೆ ಬೆಳಕು ಚೆಲ್ಲುವ ಕಥೆಗಳನ್ನು ಬರೆಯುವ ಕಲೆ ಯಲ್ಲಿ ಪ್ರಕಾಶಣ್ಣ ಸಿದ್ಧ ಹಸ್ತರು.
ಸದಾ ನಗುಮೊಗದ, ನೋಡಿದ ಕೂಡಲೇ ಸ್ನೇಹ ಮಾಡಲೇಬೇಕು ಎಂದು ಮನಸಾಗುವ ಇಂಥಹ ಸ್ನೇಹಿತರೆ ಬ್ಲಾಗ್ ನ ಜೀವಾಳ. ಮೊದಲ ಬಾರಿಗೆ ಅವರ ಮನೆಗೆ ಹೋದಾಗ ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ ಯವರನ್ನು ನೋಡಿದಾಗ ನನ್ನದೇ ಅಣ್ಣ ಅತ್ತಿಗೆ ಯವರನ್ನು ನೋಡಿದ ಅನುಭವ ಆಯಿತು. ಅಷ್ಟೊಂದು ಆತ್ಮೀಯತೆ, ಪ್ರೀತಿ ತೋರುವ ಅವರ ಕುಟುಂಬ ದ ಬಗೆಗೆ ತುಂಬಾ ಹೆಮ್ಮೆ ಇದೆ.
ಇಂಥಹ ಪ್ರಕಾಶಣ್ಣ ನ ಪುಸ್ತಕ ಬಿಡುಗಡೆಗೆ ಬರಲಾಗುತ್ತಿಲ್ಲ ಎಂಬ ನೋವು ತುಂಬಾ ತುಂಬಿದೆ. ಆದರೂ ವಿದೇಶದಲ್ಲಿದ್ದು ಇಲ್ಲಿಂದಲೇ ಅವರ ಪುಸ್ತಕಕ್ಕೆ ಶುಭ ಹಾರೈಸುತ್ತಿದ್ದೇನೆ. ಅವರ ಪುಸ್ತಕಗಳು ಸಮಸ್ತ ಕನ್ನಡಿಗರ ಮನೆ-ಮನ ತುಂಬಲಿ. ಕಾರ್ಯಕ್ರಮ ಸಂಪೂರ್ಣ ಯಶಸ್ವೀ ಯಾಗಲಿ ಎಂಬ ಮನದಾಳದ ಹಾರೈಕೆ ಬ್ಲಾಗ್ ನ ಮೂಲಕ ತಿಳಿಸುತ್ತಿದ್ದೇನೆ.
ಅವರ ಮುಂದಿನ ಪುಸ್ತಕದ ಹೆಸರು ಏನಿರಬಹುದು ಎಂಬ ಕುತೂಹಲ ಈಗಲೇ ಆರಂಭವಾಗಿದೆ, '' ಕೊನೆಗೂ ಸಿಗದ ಹೆಸರು'' ಎಂದಿರಬಹುದೇ? :)
ಕೊನೆಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಕೆಗಳು
ಜೈ ಹೋ