Monday, January 25, 2010

ವರುಷವಾಯಿತು ಒಂದು, ಹರುಷವಾಯಿತು ಇಂದು...

ತ್ಮೀಯ ಮಿತ್ರರೇ,


ಇಂದು ನನಗೆ ಸಂತಸದ ದಿನ, ನನ್ನ ಪ್ರೀತಿಯ ''ಸಾಗರದಾಚೆಯ ಇಂಚರ'' ಬ್ಲಾಗ್ ಗೆ ಒಂದು ವರುಷದ ಸಂಭ್ರಮ. ಬ್ಲಾಗ್ ಪ್ರಪಂಚ ಬಹಳಷ್ಟು ನೀಡಿದೆ ಒಂದು ವರುಷದಲ್ಲಿ. ಅನೇಕ ಮಿತ್ರರ ನಗೆ ಉಕ್ಕಿಸುವ ಬರಹಗಳು, ಚಿಂತನಶೀಲ ಲೇಖನಗಳು, ಮುದ ನೀಡುವ ಕವನಗಳು, ಚುಟುಕಾಗಿ ಇದ್ದರೂ ದಿನದ ನೋವನ್ನೇ ಮರೆಸುವ ಚುಟುಕಗಳು, ಹೀಗೆ ಪಟ್ಟಿ ಬೆಳೆಯುತ್ತದೆ.  ಸಂಧರ್ಭದಲ್ಲಿ ನನ್ನೆಲ್ಲ ನಲ್ಮೆಯ ಬ್ಲಾಗ್ ಮಿತ್ರರಿಗೆ, ಓದುಗರಿಗೆ, ನನ್ನ ಬ್ಲಾಗ್ ನ್ನು ಪ್ರೀತಿಯಿಂದ ಓದಿ ಬೆನ್ನು ತಟ್ಟುವ ಎಲ್ಲರಿಗೆ ನನ್ನ ಹ್ರದಯ ತುಂಬಿದ ಕ್ರತಜ್ಞತೆಗಳು. 




ಸರಿಯಾಗಿ ಒಂದು ವರುಷದ ಹಿಂದೆ ಬ್ಲಾಗ್ ಪ್ರಪಂಚಕ್ಕೆ ನಾನು ಕಾಲಿಟ್ಟೆ. ಅದೊಂದು ಕುತೂಹಲಕಾರೀ ಕಥೆ. ಮೊದಲಿನಿಂದಲೂ ನಾನು ಲೇಖನ, ಕವನಗಳು, ಕಥೆ ಹೀಗೆ ನನ್ನಷ್ಟಕ್ಕೆ ನಾನೇ ಬರೆಯುತ್ತಿದ್ದೆ. ಆದರೆ ನನ್ನ ಅರ್ಧಾಂಗಿ, ''ನೀವು ಯಾಕೆ ಬ್ಲಾಗ್ ಆರಂಬಿಸಿ ಅದರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಾರದು'' ಎಂದು ಒಂದು ದಿನ ನನ್ನನ್ನು ಕೇಳಿದಳು ಅಷ್ಟೇ ಅಲ್ಲ ಬ್ಲಾಗ್ ಬರೆಯಲು ಮೊದಲು ಪ್ರೇರಣೆ ನೀಡಿದಳು. ನನ್ನನ್ನು ಸದಾ ಪ್ರೇರೇಪಿಸಿ ಪ್ರೋತ್ಸಾಹ ನೀಡುವ ಮಡದಿಗೆ ಒಂದು ವರುಷ ತುಂಬಿದ  ಸಂದರ್ಭದಲ್ಲಿ ಕ್ರತಜ್ಞತೆಗಳು.


ಅದೇ ಸಮಯಕ್ಕೆ ಸರಿಯಾಗಿ ''ಕ್ಷಮಿಸಿ ನಾನು ಹೇಳೋದೆಲ್ಲ ತಮಾಷೆಗಾಗಿ'' ಬ್ಲಾಗಿನ ಆತ್ಮೀಯ ಮಿತ್ರ ಮೂರ್ತಿ (http://nmurthy79.blogspot.com/) ನನಗೆ ಬ್ಲಾಗ್ ಮಾಡುವುದು ಹೇಗೆ, ಲೇಖನ ಹಾಕುವುದು ಹೇಗೆ ಎಂಬ ಬಗ್ಗೆ ಬಹಳಷ್ಟು ಮಾಹಿತಿ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ನನ್ನ ಬ್ಲಾಗ್ ಆರಂಬವಾಯಿತು. ಎಷ್ಟು ಉತ್ಸಾಹ ವಿತ್ತೆಂದರೆ ಮೊದಲ ದಿನವೇ 10-15 ಲೇಖನ ಹಾಕಿ ಬಿಟ್ಟೆ. ಅದು ಮೊದಲ ಬಾರಿಗೆ ಬೈಕನ್ನು ಓಡಿಸಿದ ಸಂತಸದಂತೆ, ಆ ಉತ್ಸಾಹ ನಿರಂತರ ಉಳಿದರೆ ಸಾಕು ಅಲ್ಲವೇ? ನನ್ನನ್ನು ಬ್ಲಾಗ್ ಪ್ರಪಂಚಕ್ಕೆ ಕರೆದುಕೊಂಡು ಬಂದು ನನಗೆ ಬ್ಲಾಗ್ ಬರೆಯಲು ಬೇಕಾದ ಎಲ್ಲ ಮಾಹಿತಿ ನೀಡಿದ ಮೂರ್ತಿ ಗೆ  ನನ್ನ ಕ್ರತಜ್ಞತೆಗಳು.


ವರುಷ ತುಂಬಿದ ಸಂತಸಕ್ಕೆ ಸರಿಯಾಗಿ ಬ್ಲಾಗ್ ಹಿಂಬಾಲಿಸುವವರ ಸಂಖ್ಯೆಯೂ 100 ದಾಟಿದೆ, ನಿಮಗೆಲ್ಲರಿಗೂ ನಲ್ಮೆಯ ನಮನಗಳು.


ಕಳೆದ ವರುಷ ಮರೆಯಲಾದೀತೇ, ಸ್ವೀಡನ್ನಿನ ಹಿಮಚ್ಚಾದಿತ ಪರ್ವತಗಳ  ಶ್ರೇಣಿಯಲ್ಲಿ ಸ್ಕೀಯಿಂಗ್ ಮಾಡಿದ ಅನುಭವ, ಸ್ಪೇನ್ ದಲ್ಲಿ ಪಾಸ್ ಪೋರ್ಟ್ ಕಳ್ಳತನ ಎರಡೂ ಮರೆಯಲಾರದ ನೆನಪುಗಳಾಗಿ ಜೀವನ ಪುಟದಲ್ಲಿ ದಾಖಲಾದವು. ಅದರಲ್ಲೂ ನನ್ನ ಪಾಸ್ ಪೋರ್ಟ್ ಕಳೆದಾಗ ಬ್ಲಾಗ್ ಮಿತ್ರರು ನೀಡಿದ ಸಮಾಧಾನ, ಹಿತ ನುಡಿ, ಹುರಿದುಂಬಿಸುವಿಕೆ ಇವೆಲ್ಲವೂ ಕುಟುಂಬದ ನೆನಪನ್ನು ತರಿಸಿದವು. ದೂರದಲ್ಲಿದ್ದರೂ ನಿಮ್ಮವನಲ್ಲಿ ಒಬ್ಬನಂತೆ ನೋಡುವ ನಿಮ್ಮೆಲ್ಲರ ಪ್ರೀತಿಗೆ ನಾನು ಚಿರ ಋಣಿ. 

 ಸದಾ ಪ್ರೋತ್ಸಾಹಿಸುತ್ತಿರುವ ಇಟ್ಟಿಗೆ ಸಿಮೆಂಟಿನ ಪ್ರಕಾಶಣ್ಣ, ಛಾಯಾ ಕನ್ನಡಿಯ ಶಿವೂ ಸರ್, ಜೀವನ್ಮುಖಿಯ ಪರಾಂಜಪೆ ಸರ್, ಜಲಾನಯನ ಅಜ್ಹಾದ್ ಸರ್, ಚಂದ್ರು ಸರ್, ಮಹೇಶ್ ಸರ್, ಮಾನಸದ ತೇಜಸ್ವಿನಿ ಮೇಡಂ, ಮ್ರದು ಮನಸಿನ ಸುಗುಣ ಮೇಡಂ, ಹೀಗೆ ಎಲ್ಲ ನನ್ನ ಬ್ಲಾಗ್ ಮಿತ್ರರಿಗೂ ನಾನು ಚಿರ ಋಣಿ. ಜಾಗದ ಅಭಾವದಿಂದ ಇಲ್ಲಿ ಎಲ್ಲರ ಹೆಸರನ್ನೂ ಪ್ರಸ್ತಾಪಿಸುತ್ತಿಲ್ಲ. ನೀವೆಲ್ಲರೂ ನನಗೆ ಮಾರ್ಗದರ್ಶಿಗಳೇ.


ಅಂತೆಯೇ ನನಗೆ ಪ್ರೋತ್ಸಾಹ ನೀಡುತ್ತಿರುವ  ಜೈ ವಿಟ್ಟಲ ಬಳಗದ ಮಿತ್ರರಿಗೂ ವಂದನೆಗಳು.


ಎರಡನೇ  ವರ್ಷಕ್ಕೆ ಕಾಲಿಡುತ್ತಿರುವ ''ಸಾಗರದಾಚೆಯ ಇಂಚರ'' ಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಿಂದಿನಂತೆಯೇ ಇರುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದಿನ ವಾರ ಹೊಸ ಲೇಖನದೊಂದಿಗೆ, ಹೊಸ ಅನುಭವದೊಂದಿಗೆ ನಿಮ್ಮೆದುರು ಬರುತ್ತೇನೆ,
ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 
ಅಲ್ಲಿಯವರೆಗೆ
ನಿಮ್ಮವ ಗುರು 


Thursday, January 14, 2010

ಮುಂದೇನಾಯಿತು? ಪೊಲೀಸರೊಂದಿಗೆ ನನ್ನ ಮಾತುಕತೆ-ಭಾಗ 2

 ಕಳೆದ ವಾರ ಸ್ವೀಡನ್ನಿನ ಪೊಲೀಸರಿಗೆ ಸಿಕ್ಕಿ ಬಿದ್ದ ನನ್ನ ಸ್ಥಿತಿ ''http://gurumurthyhegde.blogspot.com/2010/01/blog-post.html'' ಯ ಬಗ್ಗೆ ಹೇಳಿದ್ದೆ. ಬಹಳಷ್ಟು ಬ್ಲಾಗ್ ಮಿತ್ರರು ಕಥೆಯನ್ನು ಧಾರಾವಾಹಿಯ ಹಾಗೇ ಮುಂದೂಡಬೇಡಿ , ಬೇಗ ಮುಂದೇನಾಯಿತು ಹೇಳಿ ಎಂದಿದ್ದರು. ಅದಕ್ಕೆ ಇಂದಿನ ಶೀರ್ಷಿಕೆಯೂ ಅದೇ '' ಮುಂದೇನಾಯಿತು? ಪೊಲೀಸರೊಂದಿಗೆ ನನ್ನ ಮಾತುಕತೆ- ಭಾಗ 2 '' ಎಂದು ಹಾಕಿದ್ದೇನೆ. ಇಂದು ಎಲ್ಲವನ್ನೂ ಹೇಳಿ ಮುಗಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ.

ಬಸ್ಸು ಚಲಿಸಲು ಆರಂಬಿಸಿತು, ಆ ಮಹಾತಾಯಿಯ ಪತ್ತೆ ಇರಲಿಲ್ಲ. ಇವರಿಗೆ ಭಾಷೆ ಬೇರೆ ಅರ್ಥವಾಗುವುದಿಲ್ಲ. ನನಗೋ ಭಯವೇ ಭಯ. ಇಳಿದು  ಬಿಡೋಣವೆಂದರೆ   ಬಸ್ಸನ್ನು ನಿಲ್ದಾಣ ಬರುವವರೆಗೂ ಮದ್ಯದಲ್ಲಿ ಎಲ್ಲಿಯೂ ಇಳಿಯುವ ಹಾಗಿಲ್ಲ. ಮುಂದಿನ  ನಿಲ್ದಾಣ ದಲ್ಲೇ ಇಳಿದು ಬಿಡುವುದು ಎಂದು ನಿರ್ದರಿಸಿದೆ. ಆದದ್ದಾಗಲಿ ಎದುರಿಸೋಣ ಎಂಬ ಹುಂಬ ಧೈರ್ಯ ತಂದು ಕೊಂಡೆ. ನಿಧಾನ ಮುಂದಿನ ನಿಲ್ದಾಣ ಬಂದಿತು.
ನಿಲ್ದಾಣ ಹತ್ತಿರ ಬರುವಷ್ಟರಲ್ಲಿ ನಿಲ್ದಾಣದಲ್ಲಿ 3-4 ಜನ ಪೊಲೀಸರು ತಿರುಗುತ್ತಿದ್ದಾರೆ. ಅವರ ಜೊತೆಗೆ ಆ ಮಹಾತಾಯಿಯೂ ಇದ್ದಾಳೆ. ಎಲ್ಲೋ ಎಡವಟ್ಟಾಗಿದೆ ಎಂದು ಆಗಲೇ ಅನ್ನಿಸತೊಡಗಿತು. ಇಳಿಯಲು ಭಯ. ಇಳಿಯದೆ ಇದ್ದರೆ ಅವರು ಬೇರೇನಾದರೂ ತಿಳಿದುಕೊಂಡರೆ ಎಂಬ ದಿಗಿಲು ಬೇರೆ. ಮಗುವನ್ನು ಎತ್ತಿಕೊಂಡು ಸ್ಟೇಷನ್ ದಲ್ಲಿ ಇಳಿದೆ. ಕೂಡಲೇ ಆ ತಾಯಿ ಪೊಲೀಸರೊಂದಿಗೆ ಓಡಿ ಬಂದು ''ಇವನೇ ನನ್ನ ಮಗುವನ್ನು ಎತ್ತಿಕೊಂಡು ಹೋದದ್ದು'' ಎನ್ನಬೇಕೆ. ಆಕಾಶ ಮೇಲಿದೆಯೇ ? ಕೆಳಗಿದೆಯೇ? ಎಂದು ಒಂದು ಕ್ಷಣ ತಿಳಿಯಲಿಲ್ಲ. ಇದೇನಪ್ಪ, ಯಾರಿಗೋ ಸಹಾಯ ಮಾಡಲು ಹೋಗಿ ಎಂಥಹ ಕಷ್ಟದಲ್ಲಿ ಸಿಲುಕಿದೆ ಎಂದೆನ್ನಿಸತೊಡಗಿತು. ಹೆಂಡತಿಗೆ ಇದನ್ನು ತಿಳಿಸೋಣವೆಂದರೆ ಮೊಬೈಲ್ off . ನಾನೊಂದು ತರ Dead Lock Situation ಗೆ ಬಿದ್ದಿದ್ದೆ. ಕೂಡಲೇ ಪೊಲೀಸರು ಮರುಮಾತನಾಡದೆ ಆ ಹೆಂಗಸಿನ ಜೊತೆ ನನ್ನನ್ನು ಪೋಲಿಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಎರಡನೇ ಬಾರಿಗೆ ವಿದೇಶದಲ್ಲಿ (ಮೊದಲ ಬಾರಿ ಸ್ಪೇನ್ ದಲ್ಲಿ ನನ್ನ ಪಾಸ್ ಪೋರ್ಟ್ ಕದ್ದಾಗ ಹೋಗಿದ್ದೆ, ಓದಲು ಇಲ್ಲಿ ಕ್ಲಿಕ್ಕಿಸಿ  ''http://gurumurthyhegde.blogspot.com/2009/10/s-pain-pain.html'') ಪೋಲಿಸ್ ಸ್ಟೇಷನ್ ದರ್ಶನವಾಯಿತು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಅಲ್ಲಿನ ವ್ಯವಸ್ಥೆ ನೋಡಿ ಶಾಶ್ವತ ಅಪರಾಧಿ ಯಾಗಿರುವುದೇ ಒಳ್ಳೆಯದು ಎಂದು ಎನ್ನಿಸದೇ ಇರದು. ಅಷ್ಟೊಂದು ಐಶಾರಾಮಿ ಜೀವನ ಅಲ್ಲಿನ ಕಳ್ಳರಿಗೆ.
ಇನ್ನು ಸ್ವೀಡನ್ನಿನ ಪೊಲೀಸರು ಶಿಸ್ತಿಗೆ ಕರ್ತವ್ಯಕ್ಕೆ ಹೆಸರುವಾಸಿ. ಅವರ ಬಗ್ಗೆ ಇನ್ನೂ ಆಸಕ್ತಿಯಿದ್ದರೆ ಮುಂದಿನ ವೆಬ್ಸೈಟ್ ನೋಡಿ ''http://www.polisen.se/'' . ಅವರಿಗೆ ಸಮಾಜದಲ್ಲಿ ದೊಡ್ಡ ಗೌರವವಿದೆ. ಲಂಚ ಎನ್ನುವುದು ಅವರಿಂದ ಕೊಂಚ ದೂರವೇ ಇರುತ್ತದೆ. ಸರಕಾರ ಅವರಿಗೆ ಬೇಕಾದಷ್ಟು ಸಂಬಳ ಕೊಡುತ್ತದೆ. ಗಿಂಬಳಕ್ಕೆ ಕೈ ಚಾಚುವ ಪ್ರಮೇಯವಿಲ್ಲ. ಅವರನ್ನು ನೋಡಿದರೆ ಹೆದರಿಕೆ ಹುಟ್ಟುತ್ತದೆ. ಎತ್ತರದ ಶರೀರ, ಅಚ್ಚು ಕಟ್ಟಾದ ಮೈ ಅಳತೆ, ಗಂಭೀರ ವದನ, ಕೈಯಲ್ಲಿ ಹೊಸ ತಂತ್ರಜ್ಞಾನದ ಪಿಸ್ತೂಲ್, gun ಗಳು ಇರುತ್ತವೆ. ಅವರ ದೇಹದ ಅಳತೆ ನೋಡಿದರೆ ಅವರ ಕೈ ಒಂದೇ 3-4 ಜನರನ್ನು ಹೊಡೆಯಲು ಸಾಕು ಎನಿಸುತ್ತದೆ. ಇಂಥಹ ಗಂಡೆದೆಯ ಪೋಲೀಸರ ಮುಂದೆ ನಾನು ನಿಂತಿದ್ದೆ.
ಮೈ ನಡುಗುತ್ತಿತ್ತು. ಹೊರಗಡೆ -14 ಡಿಗ್ರಿ ಯಷ್ಟು ಚಳಿ. ಸ್ಟೇಷನ್ ಒಳಗಡೆ +28  ಡಿಗ್ರಿ ಆದರೆ ನನಗೂ -14 degree ಕ್ಕಿಂತಲೂ ಹೆಚ್ಚಿನ ಚಳಿ, ಭಯ ಒಮ್ಮೆಲೇ ಆಗಿತ್ತು. ಮೊದಲಿಗೆ ನನ್ನ ಸಂಪೂರ್ಣ ದೇಹವನ್ನು ಪರೀಕ್ಷಿಸಿ ನನ್ನಿಂದ ನನ್ನ ಮೊಬೈಲ್ ಅನ್ನು ಕಿತ್ತುಕೊಂಡರು. ನಂತರ ನನ್ನ ಬಗ್ಗೆ ವಿಚಾರಣೆ ಆರಂಬಿಸಿದರು. ನನ್ನ ಕುಲ ಗೋತ್ರ ಎಲ್ಲ ಜಾಲಾಡಿಸಲು ಪ್ರಾರಂಬವಾಯಿತು. ಮದ್ಯದಲ್ಲಿ ನಾನೊಮ್ಮೆ ಬಾಯಿ ಹಾಕಿ ನಾನೊಂದು ಸಲ ನನ್ನ ಹೆಂಡತಿಗೆ ಫೋನ್ ಮಾಡಲೇ? ಇಲ್ಲ ನನ್ನ ಬಾಸ್ ಗೆ ಫೋನ್ ಮಾಡಲೇ ಎಂದೆ. ಆ ಪೋಲೀಸರ ಬಾಯಿಂದ ಹುಂ ಎನ್ನುವ ಯಾವ ಶುಭ ಲಕ್ಷಣಗಳೂ ಗೋಚರಿಸಲಿಲ್ಲ. ಆ ತಾಯಿ ನಾನೇ ಮಗುವನ್ನು ಕಿಡ್ನಾಪ್ ಮಾಡಿದ್ದೇನೆ ಎಂಬ ಅಪಾದನೆ ಮಾಡಿದ್ದಳು. ಸಾಲದ್ದಕ್ಕೆ ಕಂಪ್ಲೈಂಟ್ ಬೇರೆ ಕೊಟ್ಟಿದ್ದಾಳೆ. ನನ್ನನ್ನು ರಕ್ಷಿಸಲು ಯಾರು ಬರಲು ಸಾದ್ಯ. ನನಗೆ ನಾನೇ? ತಾನೇ. ನಾನೆಷ್ಟು ಹೇಳಿದರೂ ಪೊಲೀಸರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಆ ತಾಯಿಯ ವೇದನೆ, ಕೋಪ ಅವರನ್ನು ಹಾಗೇ ನಂಬುವಂತೆ ಮಾಡಿತ್ತು. ನಂಗೆ ಆಗಲೇ ಅನ್ನಿಸತೊಡಗಿತ್ತು, ಜೀವನದಲ್ಲಿ ಜೈಲಿನ ದರ್ಶನ ಖಂಡಿತ ಇದೆ ಎಂದು. ಕೆಲವು ತಿಂಗಳ ಹಿಂದೆ ಭಾರತಕ್ಕೆ ಹೋದಾಗ ಜ್ಯೋತಿಷಿಯೊಬ್ಬರು ಒಂದು ಭವಿಷ್ಯ ಹೇಳಿದ್ದರು ''ಕೆಲವೇ ದಿನಗಳಲ್ಲಿ ನೀನು ನಿಮ್ಮ ಕುಟುಂಬದಲ್ಲೇ ಯಾರೂ ಹೋಗದ ಜಾಗಕ್ಕೆ ಹೋಗುತ್ತಿಯಾ'' ಎಂದು. ಬಹುಷ: ಅವರು ಹೇಳಿದ್ದು ಇದೆ ಇರಬೇಕು. ನಮ್ಮ ಕುಟುಂಬದಲ್ಲೇ ಯಾರೂ ಹೋಗದ ಜೈಲಿಗೆ ಬಹುಷ: ನಾನು ಹೋಗುವೆನೆಂದು ಆಗ ಅನ್ನಿಸತೊಡಗಿತು.
ವಿಧಿಯಾಟ ಹೇಗೆ ನೋಡಿ, ಹತ್ತಾರು ಕೊಲೆ ಮಾಡಿದವ ತನಗೆ ಗೊತ್ತೇ ಇಲ್ಲದಂತೆ ತಿರುಗುತ್ತಾನೆ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಲು ಹೋದ ನನಗೆ ಪೋಲೀಸರ ದರ್ಶನ ಭಾಗ್ಯ. ಜೀವನವೆಂದರೆ ಸುಖ ದು:ಖ ಗಳ ಸಮರಸದ ಪ್ಯಾಕೇಜ ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಹೌದು, ಬದುಕಿನ ಜಟಕಾ ಬಂಡಿಯಲ್ಲಿ ಯಾರೆಲ್ಲ ಇರುತ್ತಾರೆ, ಬರುತ್ತಾರೆ, ಎಷ್ಟೋ ಸ್ನೇಹಿತರು, ಎಷ್ಟೋ ಹಿತ ಶತ್ರುಗಳು, ಎಷ್ಟೋ ವೈರಿಗಳು. ರಕ್ತ ಸಂಭಂಧವೆ ಇಲ್ಲದಿದ್ದರೂ ನಮಗೆ ಜೀವವನ್ನೇ ಕೊಡುವ ಆತ್ಮೀಯರು, ಆದಷ್ಟು ನಮ್ಮನ್ನು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡಲು ಪ್ರಯತ್ನಿಸುವ ಭಂಡ ಮನುಷ್ಯರು, ಹೀಗೆ ಎಲ್ಲರೂ ನಮ್ಮೊಂದಿಗೆ ಬದುಕಿನ ಗಾಡಿಯಲ್ಲಿ ಪ್ರಯಾಣಿಸುತ್ತಾರೆ. ಆ ಗಾಡಿಯಲ್ಲಿ ಇಂದು ಪೋಲೀಸರ ಪ್ರಯಾಣ.
ಒಂದು ಮಾತನ್ನು ಹೇಳಲೇಬೇಕು. ಇಲ್ಲಿನ ಪೊಲೀಸರಲ್ಲಿ ಒಂದು ವಿಧೇಯತೆ ಇದೆ, ವಿನಯತೆ ಇದೆ. ದರ್ಪವಿಲ್ಲ. ಕರ್ತವ್ಯ ಪ್ರಜ್ಞೆಯಿದೆ. ಸಮಯ ಪ್ರಜ್ಞೆಯಿದೆ. ಆ ತಾಯಿ ಯ ಮಾತಿನಲ್ಲಿ ಇರುವ ಸತ್ಯಾಂಶ ಹಾಗೂ ನನ್ನ ಮಾತಿನಲ್ಲಿರುವ ಸತ್ಯತೆಯನ್ನು ಅಳೆದು ತೂಗುತ್ತಿದ್ದರು. ಪರಿ ಪರಿಯಾಗಿ ಬೇಡಿದರೂ ನನ್ನ ಬಾಯಿಯಿಂದ ಒಂದೇ ಉತ್ತರ '' ಆ ತಾಯಿ ನನ್ನ ಮೇಲೆ ಸುಮ್ಮನೆ ಅಪವಾದ ಹಾಕುತ್ತಿದ್ದಾಳೆ'' ಎಂದು. ಆ ಮಹಾತಾಯಿಯಲ್ಲಿ  ಹೋಗಿ ನಡೆದುದನ್ನು ಹೇಳಿದೆ. ಆದರೆ ಅವಳು ಕೇಳುವ ಸ್ಥಿತಿಯಲ್ಲಿ  ಇರಲಿಲ್ಲ. ಯಾವ ತಾಯಿಯಾದರೂ ಅಷ್ಟೇ ಅಲ್ಲವೇ? ಮಗುವನ್ನು ಅರೆಕ್ಷಣ ಕಾಣದಿದ್ದರೆ ಚಡಪಡಿಸುತ್ತಾರೆ. ಅಂಥಹುದರಲ್ಲಿ ಮಗುವನ್ನು ಎತ್ತಿಕೊಂಡ ನಾನು ಬಸ್ಸಿನಲ್ಲಿ ಹೋದೆ ಎಂದರೆ ಏನೇನೋ ಅವಳು ಕಲ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಳು.
ನನಗೆ ಹೇಳಲು ಏನೂ ಉಳಿದಿರಲಿಲ್ಲ. ಫೋನ್ ಮಾಡಲು ಅವರು ಅವಕಾಶ ನೀಡಲಿಲ್ಲ. ಸುಮಾರು ಒಂದು ಘಂಟೆ ವಿಚಾರಣೆ ನಡೆಸಿದರೂ ಯಾವುದೇ ವಿಷಯವನ್ನು ನನ್ನ ಬಾಯಲ್ಲಿ ಅವರು ಕೇಳಲಿಲ್ಲ ''ನಾನು ಅವಳಿಗೆ ಸಹಾಯ ಮಾಡಲು ಮಗುವನ್ನು ಎತ್ತಿಕೊಂಡಿದ್ದೇನೆ'' ಎನ್ನುವ ವಿಷಯವೊಂದನ್ನು ಬಿಟ್ಟು.
ಅಲ್ಲಿನ ಪೋಲೀಸರ ತಾಳ್ಮೆ ಮೀರುತ್ತಿತ್ತು. ಇವನು ಸುಮ್ಮನೆ ಬಾಯಿ ಬಿಡುವುದಿಲ್ಲ ಎಂದು ನಿರ್ಧರಿಸಿದರೋ ಏನೋ, ಕೂಡಲೇ ಒಬ್ಬ ನನ್ನ ಬಗ್ಗಿಸಿ ಕೈಯನ್ನು ಹಿಂದಕ್ಕೆ ಕಟ್ಟಿ ಬೇಡಿ ಹಾಕಿದ. ಇನ್ನೊಬ್ಬ ನನ್ನನ್ನು ಹಿಡಿದುಕೊಂಡ. ಏನಾಗುತ್ತಿದೆ ಎಂದು ನನಗೆ ತಿಳಿಯದಾಗಿತ್ತು, ಆದರೆ ಪೋಲೀಸರ ಹೊಡೆತದ ರುಚಿ ಖಂಡಿತ ಇಂದು ಸಿಗುತ್ತದೆ ಎಂಬುದು ಮಾತ್ರ ಖಾತ್ರಿಯಾಗಿತ್ತು. ಒಬ್ಬ ಪೋಲಿಸ ತನ್ನ ಬಲವಾದ ಕೈಯಿಂದ ನನ್ನ ಬೆನ್ನ ಮೇಲೆ ಗುದ್ದಲು ಕೈ ಎತ್ತಿದ, ಇನ್ನೇನು ಅವನ ಬಲವಾದ ಕೈ ನನ್ನ ಮೇಲೆ ಅಪ್ಪಳಿಸುತ್ತದೆ , ನಾನು ಜೀವನದಲ್ಲೇ ಮೊದಲ ಬಾರಿಗೆ ಇಂಥಹ ದಿನವನ್ನೂ ನೋಡುತ್ತೇನೆ ಎಂದುಕೊಳ್ಳುತ್ತಿದ್ದೇನೆ.......ಅಷ್ಟರಲ್ಲಿ...
ಅಷ್ಟರಲ್ಲಿ ''ಬೇಗ ಏಳಿ, ಕನಸು ಕಂಡಿದ್ದು ಸಾಕು, ತಿಂಡಿ ಸಿದ್ದವಾಗಿದೆ, ಎದ್ದು ಹಲ್ಲು ತಿಕ್ಕಿ ಮುಖ ತೊಳೆದು ತಿಂಡಿ ತಿನ್ನಲು ಬನ್ನಿ'' ಎಂದು ಒಲವಿನ ಮಡದಿ ಹಾಸಿಗೆಯ ಹೊದಿಕೆಯನ್ನು ಸರಿಸಿದಳು. ಪೋಲಿಸರಿಂದ ಹೊಡೆತ ತಿನ್ನುವ ಸುಂದರ ಕನಸು ಹಾಗೆಯೇ ಮುರಿದು ಬಿತ್ತು. 
'' ಇನ್ನೈದು ನಿಮಿಷ ಬಿಟ್ಟು ಎಬ್ಬಿಸಿದ್ದರೆ ನಿನಗೆ ಆಗುತ್ತಿರಲಿಲ್ಲವೇ, ನನ್ನ ಕನಸು ಹಾಳು ಮಾಡಿದೆ'' ಎಂದು ಅವಳಲ್ಲಿ ಹುಸಿ ಮುನಿಸು ತೋರಿದೆ.
ಮುಖ ತೊಳೆದು ಬಂದವನಿಗೆ ''ಬಿಸಿ ಬಿಸಿ'' ಆದ ದೋಸೆ ಕಾಯುತ್ತಿತ್ತು. ಮನಸಿನಲ್ಲಿಯೇ ಕನಸಿನ ಬಗ್ಗೆ ನಗುತ್ತಾ ದೋಸೆ ತಿಂದು ಆಫೀಸ್ ಕಡೆ ಹೆಜ್ಜೆ ಹಾಕಿದೆ.
 ಆತ್ಮೀಯರೇ, ಕಳೆದ ಒಂದು ವಾರದಿಂದ ನನ್ನೊಂದಿಗೆ ಕನಸಿನಲ್ಲಿ ಪ್ರಯಾಣಿಸಿದ್ದಿರಿ, ನಿಮಗೂ ಇಂಥಹ ಕನಸು ಬಿದ್ದಿತ್ತೆ? ಹಂಚಿಕೊಳ್ಳುತ್ತಿರಲ್ಲ.            
ಸರ್ವರಿಗೂ ''ಮಕರ ಸಂಕ್ರಾಂತಿಯ'' ಹಾರ್ದಿಕ ಶುಭಾಶಯಗಳು.
ಮುಂದಿನ ವಾರ ಮತ್ತೆ ಸಿಗುತ್ತೇನೆ.

Sunday, January 10, 2010

ಸ್ವೀಡನ್ನಿನ ಪೊಲೀಸರಿಗೆ ಸಿಕ್ಕಿ ಬಿದ್ದ ನನ್ನ ಸ್ಥಿತಿ

ಅದೊಂದು ಚಳಿಗಾಲದ ಮುಂಜಾನೆ ಸುಮಾರು ೯ ಘಂಟೆಯ ಸಮಯ. ಇಲ್ಲಿ ಚಳಿಗಾಲವೆಂದರೆ ಸೂರ್ಯನಿಗೆ ''Winter Vacation'' ಆತನೂ ಬಹಳ ಮೈಗಳ್ಳ ಚಳಿಗಾಲದಲ್ಲಿ. ಮದುವೆಯ ದಿನ ಮೊದಲ ರಾತ್ರಿಯಲ್ಲಿ ಪ್ರಿಯತಮೆಗೆ ಕಾಯುವ ಪ್ರಿಯತಮನಂತೆ ಇಲ್ಲಿನ ಜನ ಸೂರ್ಯನ ಬೆಳಕಿಗೆ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಮೋಡದ ಮರೆಯಲ್ಲಿ ಕಣ್ಣು ಮುಚ್ಚಾಲೆ ಆಡುತ್ತಾ ಒಮ್ಮೆ ನಕ್ಕು ಮತ್ತೆ ಕಾಣದಾಗುವ ಸೂರ್ಯ ಬದುಕಿನಲ್ಲಿ ಇಷ್ಟೊಂದು ಮಹತ್ವದ ವ್ಯಕ್ತಿ ಎಂದು ತಿಳಿದಿದ್ದೆ ಸ್ವೀಡನ್ನಿಗೆ ಬಂದ ಮೇಲೆ. ಅಲ್ಲಿಯವರೆಗೆ ಸೂರ್ಯನ ಬಿಸಿಲು ಬಂದ ಕೂಡಲೇ ''ಅಯ್ಯಯ್ಯೋ ಸೆಖೆ, ತಡೆಯಲಾಗದು, ಗಾಳಿ ಕೂಡಾ ಬರ್ತಾ ಇಲ್ಲಾ'' ಎಂದೆಲ್ಲ ಬೈದ ದಿನಗಳೇ ಹತ್ತು ಹಲವು. ಇಂಥಹ ಸೂರ್ಯ ಚಳಿಗಾಲದಲ್ಲಿ ಸ್ವೀಡನ್ನಿನಲ್ಲಿ ದರ್ಶನ ಕೊಡುವುದು ಬೆಳಗಿನ ೧೦ ಘಂಟೆಯ ಸುಮಾರಿಗೆ. ಇವನ ದರ್ಶನವೋ ತಿರುಪತಿ ತಿಮ್ಮಪ್ಪನ ದರ್ಶನದಂತೆ. ಬಹಳ ಹೊತ್ತು ಒಂದೇ ಕಡೆ ನಿಲ್ಲಲಾರ. ಹೆಚ್ಚು ಹೊತ್ತು ದರ್ಶನ ಕೊಡದೆ ಮರೆಯಾಗುವ ಈತ ಭಾರತದ ತಿಮ್ಮಪ್ಪನಿಗೂ ಅಪ್ಪನಂತಿದ್ದಾನೆ. ಬೆಳಗಿನ ೧೦ ಘಂಟೆಗೆ ಬೆಳಕು ಹರಿದರೆ ಮಧ್ಯಾನ್ಹ ೩ ಘಂಟೆಗೆ ಪುನಃ ಸಂಪೂರ್ಣ ಕತ್ತಲು. ಕೇವಲ ೫-೬ ತಾಸುಗಳ ಹಗಲು ಇಲ್ಲಿಯವರನ್ನು ಒಂದು ರೀತಿಯ ವಿಚಿತ್ರ ಮಾನಸಿಕ ವೇದನೆಗೆ ಒಳಪಡಿಸುತ್ತದೆ. ಚಳಿಗಾಲದಲ್ಲಿ ಸತ್ತು ಬಿದ್ದ ಹೆಣದಂತೆ ಇಲ್ಲಿಯವರ ಮುಖ ಗೋಚರಿಸುತ್ತದೆ.


ಮಾತು ಎಲ್ಲೆಲ್ಲೋ ಹೋಗ್ತಾ ಇದೆ ಅಂತಿರಾ? ಸ್ವೀಡನ್ನಿನ ಪೊಲೀಸರು ಎಂದು ಸೂರ್ಯನ ಬಗ್ಗೆ ಹೇಳ್ತಾ ಇದಾನೆ ಅಂದುಕೊಂಡ್ರ? ಏನು ಮಾಡಲಿ ನಿಮಗೂ ಸ್ವಲ್ಪ ನಮ್ಮ ಚಳಿಗಾಲದ ವೇದನೆ ಹೇಳೋಣ ಅನಿಸ್ತು, ಅದಿಕ್ಕೆ ಇಷ್ಟೆಲ್ಲಾ ಪೀಠಿಕೆ. ಇಂಥಹ ಒಂದು ಚಳಿಗಾಲದ ಮುಂಜಾನೆ ಬಸ್ಸಿಗಾಗಿ ಕಾಯುತ್ತಾ ಇದ್ದೆ. ಒಂದೇ ನಿಮಿಷದೊಳಗೆ ಬಸ್ಸು ಬಂತು. ಇಲ್ಲಿನ ಸಾರಿಗೆ ವ್ಯವಸ್ಥೆಯ ಬಗೆಗೆ ಹೇಳದೆ ಕಥೆ ಮುಂದುವರಿಯುವುದು ಕಷ್ಟ. ಸಾಫ್ಟ್ವೇರ್ ತಂತ್ರಜ್ಞಾನ ಹೇಗೆಲ್ಲ ಉಪಯೋಗಿಸಿಕೊಳ್ಳಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ಅತ್ಯಂತ ವ್ಯವಸ್ಥಿತವಾಗಿ ಬಸ್ಸು, ಟ್ರಾಮ್, ಟ್ರೈನ್ ಗಳ ಬಗೆಗೆ ಮಾಹಿತಿ ನೀಡುವ ವೆಬ್ ಸೈಟ್ ''http://vasttrafik.se/en/''. ಸುಮ್ಮನೆ ಒಮ್ಮೆ ಅಲ್ಲಿಗೆ ಹೋಗಿ ವಾಹನಗಳ ಬಗೆಗಿನ ವಿವರಣೆ ನೋಡಿ. ನಿಮ್ಮ ಮನೆಯ ಹತ್ತಿರವೇ ಬಸ್ ನಿಲ್ದಾಣ ಇರುತ್ತದೆ. ನೀವು ಹೋಗುವ ಸಮಯವನ್ನು ಸೈಟ್ ನಲ್ಲಿ ಹಾಕಿದರೆ ಅದು ಬಸ್ ಅಥವಾ ಟ್ರಾಮ್ ಬರುವ ಸಮಯ ತೋರಿಸುತ್ತದೆ. ಅದೇ ಸಮಯಕ್ಕೆ ನೀವು ಅಲ್ಲಿ ಹೋದರೆ ಸಾಕು, ನಿಮಗಾಗಿ ಬಸ್ ತಯಾರಾಗಿರುವಂತೆ ಅಲ್ಲಿ ನಿಂತಿರುತ್ತದೆ. ಒಂದೆರಡು ನಿಮಿಷಗಳ ವ್ಯತ್ಯಾಸವು ಇರುವುದಿಲ್ಲ. ಅದಕ್ಕಾಗಿ ಇಲ್ಲಿಯ ಜನ ತಮ್ಮ ಕಾರುಗಳಿಗಿಂತ ಬಸ್ಸನ್ನೇ ಹೆಚ್ಚು ಉಪಯೋಗಿಸುತ್ತಾರೆ. ಒಂದು ತಾಸಿನಲ್ಲಿ 30 ಕಿ ಮಿ ದೂರದ ಪ್ರದೇಶಕ್ಕೆ ಹೋಗಿ ಸಾಮಾನು ಖರೀದಿಸಿಕೊಂಡು ಪುನಃ ಮನೆಗೆ ಬಂದು ಬಿಡಬಹುದು. ಎಲ್ಲಿಯೂ ಸಮಯ ಹಾಳಾಗುವುದಿಲ್ಲ. ಇಲ್ಲಿನ ಸಾರಿಗೆ ವ್ಯವಸ್ಥೆ ನನ್ನನ್ನು ಬಹುವಾಗಿ ಆಕರ್ಷಿಸಿದೆ. ಹೆಚ್ಚಿನ ಜನಸಂಖ್ಯೆ ಇರುವ ಭಾರತದಲ್ಲಿ ಇಂಥಹ ವ್ಯವಸ್ಥೆ ಬಂದರೆ ಎಷ್ಟೊಂದು ಚಂದ ಅಲ್ಲವೇ? ನಿಮಗೆ ಆಫೀಸ್ ನಲ್ಲಿ ಬೆಳಿಗ್ಗೆ ೯ ಘಂಟೆಗೆ ಅರ್ಜೆಂಟ್ ಆಗಿ ಒಂದು ಮೀಟಿಂಗ್ ಇದೆ ಅಂದುಕೊಳ್ಳಿ, ನೀವು ಬಸ್ಸಿಗೆ ಕಾಯುತ್ತಿದ್ದಿರಿ, ಸರಿಯಾದ ಸಮಯಕ್ಕೆ ಬಸ್ಸ ಬರಲಿಲ್ಲ, ಕೂಡಲೇ ನೀವು ಬಾಡಿಗೆ ಕಾರು ತೆಗೆದುಕೊಂಡು ಆಫೀಸ್ ಗೆ ಹೋಗಿ ಸಂಜೆ ಅದೇ ಕಾರಿನ ಬಿಲ್ಲನ್ನು ಸಾರಿಗೆ ಆಫೀಸಿನಲ್ಲಿ ಕೊಟ್ಟು ಬಸ್ಸ ಬರಲು ತಡವಾಗಿದ್ದು ಹೇಳಿದರೆ ''ಅದು ನಿಜವೇ ಆದಲ್ಲಿ'' ನಿಮಗೆ ಕಾರಿನ ಬಾಡಿಗೆ ಕೂಡಲೇ ಲಭಿಸುತ್ತದೆ. ಇಂಥಹ ವ್ಯವಸ್ಥೆ ಎಲ್ಲಿದೆ ಹೇಳಿ. ಅದಿಕ್ಕೆ ಹೇಳಿದ್ದು ಬಸ್ಸ, ಒಂದೆರಡು ನಿಮಿಷಗಳೂ ತಡವಾಗಿ ಬರುವುದಿಲ್ಲ ಎಂದು. ಒಂದೊಮ್ಮೆ ಬಸ್ಸು  ಬರಲು ತಡವಾದರೆ, ಬಿಲ್ಲನ್ನು ಅವರೇ ಕೊಡಬೇಕಲ್ಲ, ಅಂಥಹ   ತಪ್ಪನ್ನು ಅವರು ಹೆಚ್ಚಾಗಿ ಮಾಡುವುದಿಲ್ಲ. ಇನ್ನು ಕಥೆಗೆ ಬರೋಣ. ಬಸ್ಸನ್ನು ಹತ್ತಿ ಕುಳಿತುಕೊಂಡೆ. ಬಸ್ಸಲ್ಲಿ ಅಷ್ಟೊಂದು ಜನರೇನೂ ಇರಲಿಲ್ಲ. ಚಳಿಗಾಲದಲ್ಲಿ ಬಸ್ಸನ್ನು ಹತ್ತುವುದೇ ಮಜಾ, ಕಾರಣ ಬಸ್ಸು ಬೆಚ್ಚಗೆ ಇರುತ್ತದೆ, ಅದರೊಳಗಡೆ ಹಿಮದ ಮಳೆಯ ಕಾಟವಿಲ್ಲ :)


ಇಂತಿಪ್ಪ ಸಮಯದಲ್ಲಿ ನನ್ನ  ಪಕ್ಕದ ಸೀಟಿನಲ್ಲಿ ಸುಮಾರು ೩೦ ರ ಹರೆಯದ (ಹೆಣ್ಣಿನ ಹರೆಯಕ್ಕೂ ಅವಳ ಮುಖಕ್ಕೂ ಅಜಗಜಾಂತರ ವ್ಯತ್ಯಾಸ ಎಂದು ಕೇಳಿದ್ದೇನೆ ) ಹೆಂಗಸೊಬ್ಬಳು ತನ್ನ ಚಿಕ್ಕ ಮಗು (ಸುಮಾರು 2-3 ವರ್ಷ ಇರಬಹುದು) ಕರೆದುಕೊಂಡು ಬಂದು ಕುಳಿತಳು. ಕಥೆ ಅಲ್ಲಲ್ಲ ನನ್ನ ಗೋಳಿನ ವ್ಯಥೆ ಆರಂಬವಾಗುವುದೇ ಇಲ್ಲಿಂದ.


ಆ ಹೆಂಗಸು ಕುಳಿತ ಒಂದೆರಡು ನಿಮಿಷದಲ್ಲೇ ಕೈಯಲ್ಲಿರುವ ಮಗು ಒಂದೇ ಸಮನೆ ಅಳಲಾರಂಬಿಸಿತು. ಮಗುವನ್ನು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಆ ಮಗು ಅಳು ನಿಲ್ಲಿಸಲಿಲ್ಲ. ಆ ಮಹಾತಾಯಿ ತನ್ನ ಬ್ಯಾಗಿನಲ್ಲೆಲ್ಲ ಏನಾದರೂ ಮಗುವಿಗೆ ಕೊಡಲು ಸಿಗುತ್ತದೆಯೇ ಎಂದು ತಡಕಾಡಿದಳು. ಬಂದಿದ್ದು ಖಾಲಿ ಕೈ ಮಾತ್ರ. ಮಗುವಿನ ಅಳು ನೋಡಲಾಗದೆ ಆ ತಾಯಿ ನನ್ನೆಡೆಗೆ ತಿರುಗಿ ''If you don't mind, will you please take this child for couple of minutes until then i will bring some sweets from the shop?'' ಅಂತ ಹೇಳಿದಳು. ಮೊದಲೇ ನಾವು ಭಾರತೀಯರು, ಸಹಾಯ ಹಸ್ತಕ್ಕೆ ಪ್ರಸಿದ್ದರು. ಕೂಡಲೇ ಆಯಿತು ಎಂದು ಸಮ್ಮತಿ ಸೂಚಿಸಿ ಆ ಮುದ್ದಾದ ಮಗುವನ್ನು ಎತ್ತಿಕೊಂಡೆ. ಆ ಮಹಾತಾಯಿ ಸ್ವೀಟ್ಸ್ ತರಲು ಅಂಗಡಿಗೆ ತೆರಳಿದಳು. ನಂಗೆ ಗೊತ್ತಿದ್ದಂತೆ ಅಲ್ಲಿ ಹತ್ತಿರದಲ್ಲಿ ಎಲ್ಲಿಯೂ ಅಂಗಡಿ ಇರಲಿಲ್ಲ. ಸುಮಾರು ೧೦ ನಿಮಿಷ ಕಾದರೂ ತಾಯಿಯ ಸುಳಿವಿಲ್ಲ. ನನಗೆ ಭಯ ಆರಂಬವಾಯಿತು. ಮಗು ಬೇರೆ ಕೈಯಲ್ಲಿದೆ. ಎಲ್ಲರೂ ನನ್ನನ್ನೇ ದುರು ದುರು  ನೋಡಲಾರಂಬಿಸಿದರು. ಇದೆ ಸಮಯಕ್ಕೆ ಸರಿಯಾಗಿ ಬಸ್ಸನ್ನು ಬಸ್ ಸ್ಟೇಷನ್ ನಿಂದ ಬಿಟ್ಟರು. ನಾನು ಡ್ರೈವರ್ ಹತ್ತಿರ ಹೋಗಿ ಸ್ವಲ್ಪ ಹೊತ್ತು ನಿಲ್ಲಿಸಲು ಹೇಳಿದರೂ ಪ್ರಯೋಜನವಾಗಲಿಲ್ಲ. ಮೊದಲೇ ಸಮಯಕ್ಕೆ ಜೀವವನ್ನೇ ಕೊಡುವ ಜನರು. ಅಂಥಹುದರಲ್ಲಿ ಇಂಥಹ ವಿಷಯಗಳಿಗೆ ನಿಲ್ಲಿಸಿಯಾರೆ? ನನ್ನ ಎದೆ ಬಡಿತ ಹೆಚ್ಚಾಗುತ್ತಿತ್ತು. ಕೈಯಲ್ಲಿ ಯಾರದೋ ಮಗು. ಬಸ್ಸಿನಲ್ಲಿರುವವರೆಲ್ಲ ನನ್ನನ್ನೇ ನೋಡುತ್ತಿದ್ದಾರೆ. ಅವರ ನೋಟ ನೋಡಲಾಗದೆ ಒಂದು ಬದಿಯ ಸೀಟ್ ನಲ್ಲಿ ಬಂದು ಕುಳಿತೆ. ಮಹಾತಾಯಿ ಎಲ್ಲಿಗೆ ಹೋದಳೋ ಪತ್ತೆಯೇ ಇರಲಿಲ್ಲ.


ಮನಸ್ಸಿನಲ್ಲಿ ನೂರೆಂಟು ಯೋಚನೆ '' ನಿಜವಾಗಿಯೂ ಸ್ವೀಟ್ಸ್ ತರಲು ಹೋಗಿದ್ದಾಳ? ಇಲ್ಲ ಮಗುವನ್ನು ನನಗೆ ಕೊಟ್ಟು ಮಾಯವಾದಳ? ಮಗು ಅವಳದೇ ಹೌದೆ? ಇಲ್ಲ ಯಾರದೋ ಮಗುವನ್ನು  ಅಪಹರಿಸಿ ಕೊಂಡು ಬಂದು ಈಗ ನನಗೆ ನೀಡಿ ತಾನು ತಪ್ಪಿಸಿಕೊಂಡಲಾ ?'' ಮನಸ್ಸಿಗೆ ಏನೂ ತೋಚದಾಗಿತ್ತು. ಹೆಂಡತಿಯ ಮೊಬೈಲಿಗೆ ಫೋನ್ ಮಾಡಿದೆ, ಅವಳು ಮೀಟಿಂಗ್ ಇದೆ ಎಂದು ಮೊಬೈಲ್ ಆಫ ಮಾಡಿದ್ದಳು. ಸರಿಯಾಗಿ ಎಲ್ಲವೂ ಇಂದೇ ಆಗಬೇಕಿತ್ತೇ? ಎಂದು ಚಿಂತಿಸತೊಡಗಿದೆ. ಮನಸ್ಸು ಕುಳಿತಲ್ಲಿ ಕುಳಿತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲ. ಸಾಲದ್ದಕ್ಕೆ ಅಲ್ಲೇ ಆಚೆ ಇಚೆ ಸ್ವೀಡನ್ನಿನ ಪೋಲೀಸರ ವಾಹನಗಳು ಚಲಿಸುತ್ತಿದ್ದವು. ಇವರು ಮಗುವಿಗಾಗಿಯೇ ಹುಡುಕುತ್ತಿರಬಹುದೇ? ಎಂಬ ಕೆಟ್ಟ ಯೋಚನೆಗಳು ಬೇರೆ?


ಅಂದು ಮೊದಲ ಬಾರಿಗೆ ವಿದೇಶದಲ್ಲಿ ಹೆದರಿಕೆ ಆರಂಬವಾಯಿತು. ಮುಂದೇನಾಗುತ್ತದೆಯೋ? ಎಂಬ ಭಯ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು.
ಮೊದಲೇ ನಾವು ವಿದೇಶಿಯರು ಬೇರೆ?
ಮುಂದೇನಾಯಿತು? ಮುಂದಿನ ವಾರದವರೆಗೆ ಕಾಯಲೇಬೇಕು
ಅಲ್ಲಿಯವರೆಗೆ,
ಲಘು ವಿರಾಮ