Sunday, November 22, 2009

ಮೋಹಿನಿ ....






ಕಾಡುತಿರುವೆ ಕಾಡಬೇಡ,ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ


ಕಣ್ಣ ರೆಪ್ಪೆಯಂಚಿನಲ್ಲಿ,ಕೊಂಕುಕಣ್ಣ ನೋಟದಲ್ಲಿ
ಕರಗುವಂತೆ ಕಲ್ಲು ಹ್ರದಯ ನೋಡಬೇಡ ನನ್ನ ನೀ


ಕಾಯುತಿರುವೆ ನಿನ್ನ ನಾನು,ನನ್ನ ಪ್ರೇಮ ಗೂಡಿನಲ್ಲಿ 
ಕಾಯಲಾರೆ ಇನ್ನು ಮುಂದೆ ಕದವ ತೆರೆಯೆ ಮಾನಿನಿ


ಹಾರುತಿರುವೆ ಮನದ ತುಂಬ,ಬಂಧಿಯಾಗು ಕಣ್ಮಣಿ
ನಿನ್ನ ಪ್ರೇಮ ಪಾಶದಲ್ಲಿ ಸಿಲುಕಿಬಿಡಲೇ ಅರಗಿಣಿ


ಅಚ್ಚ ಹಸಿರ ಪಚ್ಚೆ ಕೆನೆಯ,ಕಡೆದ ಕಲ್ಲ ಶಿಲ್ಪದಲ್ಲಿ
ತುಂಟನಗೆಯ ಬೀರಿ ಎನ್ನ ಕಾಡಬೇಡ ಕಾಮಿನಿ


ಕಾಲವೆಂಬ ಪರಿಧಿಯಲ್ಲಿ,ಕವನವಾದ ವಾಹಿನಿ
ಕವಿಯ ಮನದ ಕಣ್ಣ ಮುಂದೆ ಮೂಡಿ ಬಂದ ಕಾವ್ಯ ನೀ

Saturday, November 7, 2009

ಏನಾಯ್ತೆ ಗೆಳತಿ

                  ಯಾಕೆ ಗೆಳತಿ ನಿನ್ನ ಮುಖವು ಹೀಗೆ ಬಾಡಿದೆ 
                  ಚಂದ್ರ ಕಿರಣ ಕೂಡ ಬೆಂಕಿ ಮಳೆಯ ಸುರಿಸಿದೆ 
                  ಮುದ್ದು ಮೊಗದ ನಿನ್ನ ನೋಟ ಎಲ್ಲಿ ಹೋಗಿದೆ 
                  ಹಂಸದಂಥ ನಡಿಗೆಯಿಂದು ಭಾರವಾಗಿದೆ ಗೆಳತಿ ಕಾಣದಾಗಿದೆ 


                  ಹಕ್ಕಿ ಕೂಡ ಹಾಡಲಿಲ್ಲ ನಿನ್ನ ನೋಡದೆ 
                  ಕೋಳಿ ತಾನು ಕೂಗಲಿಲ್ಲ ಮುಖವ ಕಾಣದೆ 
                  ರವಿಯು ಕೂಡ ಬಾಡಿ ಹೋದ ಬಿಸಿಲು ಬೀರದೆ 
                  ನಿನ್ನ ಮನದ ಬೇಗೆಯನ್ನು ಹೇಳಬಾರದೇ ಗೆಳತಿ ನೋಡಲಾಗದೆ


                  ಚದುರಿ ಹೋಯ್ತು ಮೋಡವೆಲ್ಲ ಮಳೆಯ ಸುರಿಸದೆ 
                  ಬೀಸೊ ಗಾಳಿ ಮೌನವಾಯ್ತು ತಂಗಾಳಿ ಸೂಸದೆ 
                  ಹರಿಯೋ ನದಿಯೂ ಹರಿಯಲಿಲ್ಲಂಬಿಗನ ಕಾಣದೆ  
                  ನಿನ್ನ ಚಿಂತೆ ದೂರ ಮಾಡ್ವೆ ಹೇಳು ನನ್ನೆದೆ, ಗೆಳತಿ ಬಳಿಗೆ ಬಾರದೆ


                  ದೂರ ಕಡಲು ಹರಿವ ತೆನೆಯು ನಿಂತು ನೋಡಿದೆ  
                  ಬಾನ ರವಿಯು ಚಂದ್ರಮಂಗೆ ದಾರಿ ತೋರಿದೆ 
                  ಕತ್ತಲಲ್ಲಿ ಬೆಳಕ ತುಂಬಿ ಲಾಲಿ ಹಾಡಿದೆ 
                  ನಿನ್ನ ಬಿಂಬ, ಚಂದ್ರ ಬಿಂಬ ಒಂದೆ ಆಗಿದೆ ಗೆಳತಿ ಮನಸು ತುಂಬಿದೆ

Sunday, November 1, 2009

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ನಲ್ಮೆಯ ಕನ್ನಡಿಗರೇ,




ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು



ಸಿರಿಗನ್ನಡಂ ಗೆಲ್ಗೆ

Monday, October 26, 2009

ಮದುಮಗಳು




ಮಲೆನಾಡಿನ ಮೈದಳೆವ ವನಸಿರಿ 
ಮೈತುಂಬಿ ಮೆರೆದಾಡುವ ಹಸಿರ ಗಿರಿ 
ಮದವೇರಿದ ಮದನಾರಿಯ ಚೆಲುವ ಪರಿ 
ಮುತ್ತನ್ನೇ ಮೆತ್ತಿರುವ ಹರಿಯುವ ಝರಿ


ಶರಾವತಿ ಜೋಗದಲಿ ಹರಿಯುವ ಸೊಬಗು 
ಬನವಾಸಿಯ ಮಧುಕೇಶ್ವರ ಪಂಪನ ಬೆರಗು 
ಸುತ್ತ ಮರವು ಲತೆಗಳೆಲ್ಲ ನಾಚಿಸೋ ಯಾಣ
ಮಾಡು ಒಮ್ಮೆ ಮಲೆನಾಡಿಗೆ ತಪ್ಪದೆ ಪಯಣ


ಕವಿಗಳೆಲ್ಲ ಹುಟ್ಟಿ ಬೆಳೆದ ಆದರ್ಶದ ತಾಣ 
ರಾಷ್ಟ್ರ ಬೆಳಗೋ ದಿಗ್ಗಜರಿಗೆ ನಮ್ಮಯ ನಮನ 
ಭೂಮಿತಾಯಿ ಪ್ರೀತಿ ಮಗಳು ಇರುವಳು ಇಲ್ಲಿ 
ಮನಸ ಸೂರೆ ಮಾಡ್ವ ಸೋದೆ ಸ್ವರ್ಣವಲ್ಲಿ


ಎಲ್ಲ ಇಲ್ಲಿ ಒಂದೆ ಎಂಬ ಭಾವನೆ ಇರಲು 
ಯಾರೇ ಬಂದರೂ ಭತ್ತದ ಪ್ರೀತಿಯ ಕಡಲು 
ಇತಿಹಾಸದ ಗತ ವೈಭವ ಇಲ್ಲಿಯ ಒಡಲು 
ದೈವ ಭಕ್ತಿ ತುಂಬಿರುವ ಸೇವೆಯ ಅಳಿಲು


ಸಿರಸಿಯ  ಶ್ರೀ  ಮಾರಿಕಾಂಬೆ  ನಿನಗೆ  ವಂದನೆ 
ಮಂಜುಗುಣಿ  ದೇವನಿಗೆ  ಅಭಿವಂದನೆ 
ಮುಕ್ಕೋಟಿ  ದೇವತೆಗಳ  ಪ್ರೇಮದರಮನೆ 
ಮಲೆನಾಡಿನ  ಸೊಬಗು  ಸವಿಯೋ  ಒಮ್ಮೆ  ಸುಮ್ಮನೆ

Tuesday, October 13, 2009

S-PAIN ನ PAIN ನಿಂದ SWEDEN ವರೆಗೆ ...ಭಾಗ 2

ಹಿಂದಿನ ಲೇಖನದಲ್ಲಿ ಸ್ಪೇನ್ ದಲ್ಲಿ ಕಳೆದ ನನ್ನ ಪಾಸ್ ಪೋರ್ಟ್ ವಿಷಯವಾಗಿ ಬರೆದಿದ್ದೆ. ಅಲ್ಲಿಯ ಮೊದಲ ದಿನದ ಅನುಭವ, ಕಳವಳ, ಇವೆಲ್ಲವುಗಳ ಜೊತೆಗೆ ಮೊದಲ ಭೆಟ್ಟಿಯ ಕಹಿ ನೆನಪುಗಳ ಬಗೆಗೆ ತಿಳಿಸಿದ್ದೇನೆ. (ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ಕಿಸಿ http://gurumurthyhegde.blogspot.com/2009/10/s-pain-pain.html

ಆ ದಿನ ರಾತ್ರಿಯಿಡೀ ನಿದ್ದೆ ಇರಲಿಲ್ಲ. ರಾತ್ರಿ ಎಷ್ಟೋ ಸಲ ಎದ್ದು ರೆಸೆಪಶನ್ ತನಕ ನಡೆದು ಬಂದು ಪುನಃ ಹೋಗುತ್ತಿದ್ದೆ. ರೆಸೆಪಶನ್ ನಲ್ಲಿ ಇದ್ದವರಿಗೆ ಗಾಬರಿ. ಏನಾಯಿತೆಂದು. ಬೆಳಿಗ್ಗೆ ಎದ್ದವನೇ ಬಾರ್ಸಿಲೋನಾ ದಲ್ಲಿರುವ ಭಾರತೀಯ ದೂತಾವಾಸ (Indian Embassy) ಗೆ ಫೋನ್ ಮಾಡಿದರೆ ಅವರು ಬೇಸಿಗೆಯ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ. ಇನ್ನೆರಡು ದಿನ ಬಿಟ್ಟು ಪ್ರಯತ್ನಿಸಿ ಎಂಬ ವಾಣಿ ಬರುತ್ತಿದೆ. ನಮಗೆ ಕನಿಷ್ಠ 4  ದಿನಗಳ ಸಮಯವಿತ್ತು ಅಲ್ಲಿ, ಆದರೆ ಕೇವಲ ಒಂದೇ ದಿನಕ್ಕೆ ಬರುವ ಪ್ರವಾಸಿಗರಿಗೆ ಹೀಗೆ ಆದರೆ ಅವರ ಗತಿಯೇನು. ಸಂಪೂರ್ಣ ಆಗಸ್ಟ್ ತಿಂಗಳು Indian Embassy ಮುಚ್ಚಿರುತ್ತದಂತೆ. ನನಗೆ ವಿಚಿತ್ರವೆನಿಸಿತು.

ಮತ್ತೇನು ಮಾಡಲು ದಿಕ್ಕು ತೋಚದೆ ಒಲ್ಲದ ಮನಸ್ಸಿನಿಂದ Conference ಗೆ ಹೋದೆ. ಬಂದಿದ್ದು ಅದಕ್ಕೆ ಅಲ್ಲವೇ?
ಅಲ್ಲಿ ರೆಸೆಪಶನ್ ನಲ್ಲಿ ನನ್ನೆಲ್ಲ ಕಥೆ ಹೇಳಿದೆ. ಇನ್ನೊದು ಹೇಳಲೇಬೇಕಾದ ಸ್ಪೇನ್ ಸಮಸ್ಯೆ ಎಂದರೆ  ಭಾಷ ಪ್ರೇಮ ಇಲ್ಲ ಭಾಷಾ ಕೊರತೆ. ಯಾರೂ ಇಂಗ್ಲಿಷ್ ಮಾತನಾಡುವುದಿಲ್ಲ. ಸ್ಪ್ಯಾನಿಶ್ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಕೂಡಾ. ಆಫೀಸ್ ಗೆ ಹೋಗಿ, ಅಂಗಡಿ ಹೋಗಿ, ಎಲ್ಲಿ ಹೋದರೂ ಒಂದೇ ಸಮಸ್ಯೆ. ಇಂಥವರಿಗೆ ಫೋನ್ ಮಾಡಿ ನನ್ನ ಸಮಸ್ಯೆ ಹೇಳಿದರೆ ಅವರಿಗೆ ಎಷ್ಟು ಅರ್ಥವಾದೀತು? ನಿಮಿಷಕ್ಕೆ 10 ಸಲ ಗ್ರಾಸಿಯಾಸ್ ಅನ್ನುತ್ತಾರೆ. Conference Reception ಅಲ್ಲಿ ಸಿಸಿಲಿಯಾ ಎನ್ನುವ ಹುಡುಗಿಯಿದ್ದಳು. ಅವಳಿಗೆ ಇಂಗ್ಲಿಷ್ ತುಂಬಾ ಚೆನ್ನಾಗಿ ಬರುತ್ತಿತ್ತು. ಅವಳ ಹತ್ತಿರ ನನ್ನೆಲ್ಲ ಸಮಸ್ಯೆ ಹೇಳಿದೆ. ಕೂಡಲೇ ಅವಳು ಬಾರ್ಸಿಲೋನ Indian Embassy ಗೆ ಫೋನ್ ಮಾಡಿದಳು. ಆದರೆ ಅದೇ ಉತ್ತರ ಬಂದಿತು 2 ದಿನ ಬಿಟ್ಟು ಎಂದು. ನಂತರ ಅವಳು ಮಾಡ್ರಿಡ್ನಲ್ಲಿರುವ Indian Embassy ಗೆ ಫೋನ್ ಮಾಡಿದಳು. ನನ್ನ ಪುಣ್ಯಕ್ಕೆ ಅವರು ಓಪನ್ ಮಾಡಿದ್ದರು. ಅವರಿಂದ ಎಲ್ಲ ವಿವರ ಪಡೆದುಕೊಂಡಳು (ಅಲ್ಲಿ ಎಲ್ಲರೂ ಸ್ಪ್ಯಾನಿಶ್ ಮಾತನಾಡುತ್ತಾರೆ ಎಂಬುದು ಸರ್ವ ವಿಧಿತ). ಒಬ್ಬ ಸ್ಪ್ಯಾನಿಶ್ ಹುಡುಗಿಯಿಂದ ಸಿಕ್ಕ ಸಹಾಯ ಮರೆಯಲು ಸಾದ್ಯವಿಲ್ಲ. ಆಪತ್ ಕಾಲದಲ್ಲಿ ನೆರವಿಗೆ ಬಂದವನೇ ನಿಜವಾದ ಮಿತ್ರನಂತೆ. ಭಾರತದಲ್ಲಿಯೂ ಅನೇಕ ಮಿತ್ರರೂ ಇಂಥಹ ಸಂಧರ್ಭದಲ್ಲಿ ನನ್ನ ಜೊತೆ ಮಾನಸಿಕವಾಗಿ ಇದ್ದರು. ಪದೇ  ಪದೇ  ಮೇಲ್ ಕಳಿಸಿ ಏನಾಯಿತೆಂದು ವಿಚಾರಿಸುತ್ತಿದ್ದರು.
ನಂತರ ಸಿಸಿಲಿಯಾ ಹೇಳಿದಳು, ''ನಾನು ಪಾಸ್ ಪೋರ್ಟ್ ಗೋಸ್ಕರ ಮ್ಯಾಡ್ರಿಡ್ ಗೆ ಹೋಗಬೇಕು ಎಂದು''. ಬಾರ್ಸಿಲೋನಾ ದಲ್ಲಿ     ಪಾಸ್ ಪೋರ್ಟ್ ನೀಡುವುದಿಲ್ಲ ವಂತೆ. ಅವಳಿಗೆ ಕೊನೆಯದಾಗಿ ಒಂದು ಥ್ಯಾಂಕ್ಸ್ ಹೇಳಿ ಮ್ಯಾಡ್ರಿಡ್ ಗೆ ಹೋಗಲು ಯೋಚಿಸತೊಡಗಿದೆ. ಮ್ಯಾಡ್ರಿಡ್ ಪುನಹ ಸುಮಾರು 300-400 ಕಿ ಮಿ ಪ್ರಯಾಣ ಇನ್ನೊದು ದಿಕ್ಕಿನಲ್ಲಿ. ಕೂಡಲೇ ಮಡದಿಗೆ ಫೋನ್ ಮಾಡಿ ನನ್ನ ವೀಸಾ, ಪಾಸ್ಪೋರ್ಟ್ ನ ನಕಲು ಇದ್ದರೆ  ಇ-ಮೇಲ್  ಗೆ ಕಳಿಸೆಂದು ತಿಳಿಸಿದೆ. ಅವಳು ಹುಡುಕಿ ಹುಡುಕಿ ಕೊನೆಗೂ ನಕಲು ಪಡೆಯುವಲ್ಲಿ ಯಶಸ್ವಿಯಾದಳು ಸ್ವಲ್ಪ ಧೈರ್ಯ ಬಂತು.
ಮರುದಿನ ಬೇಗ ಎದ್ದವನೇ  ಫಾಸ್ಟ್ ಟ್ರೈನ್ ತೆಗೆದುಕೊಂಡೆ. ಇದು ತುಂಬಾ ದುಬಾರಿ ಆದರೆ ಘಂಟೆಗೆ 350 ಕಿ ಮಿ ವೇಗದಲ್ಲಿ ಚಲಿಸುತ್ತದೆ. ನಾನು ಸುಮಾರು 70 ನಿಮಿಷದಲ್ಲಿ ಮಾಡ್ರಿಡ್ ನಲ್ಲಿದ್ದೆ. ಇಲ್ಲಿ ಹಣಕ್ಕಿಂತ ಸಮಯ ಮುಖ್ಯವಾಗಿತ್ತು. ಬೆಳಿಗ್ಗೆ 9 ಘಂಟೆಗೆ ಸರಿಯಾಗಿ Indian Embassy ಮುಂದೆ ಹೋದೆ. ನನಗೋ ನಾನೇ ಮೊದಲು ಬಂದಿದ್ದೇನೆ ಎಂದು ಆದರೆ ನನಗಿಂತ ಮುಂಚೆಯೇ 25 ಜನ ಸಾಲಿನಲ್ಲಿ ನಿಂತಿದ್ದಾರೆ. ನಂತರ ನಾನು ಸಾಲಿನಲ್ಲಿ ನಿಲ್ಲಲು ನಂಬರ್ ತೆಗೆದುಕೊಂಡೆ. 26 ನೇ ನಂಬರ್ ನನ್ನದು. ಅಲ್ಲಿ ಭಾರತದಿಂದ 5-6 ಜನ ಡಾಕ್ಟರುಗಳು ಬಂದಿದ್ದರು. ಅವರೆಲ್ಲ ಬಾರ್ಸಿಲೋನಾದಲ್ಲಿ  ಜರುಗಿದ ವೈದ್ಯಕೀಯ ಸಮ್ಮೇಳನ ದಲ್ಲಿ ಭಾಗವಹಿಸಲು ಬಂದಿದ್ದರಂತೆ. ಅವರ ಪಾಸ್ ಪೋರ್ಟ್, ದುಡ್ಡು ಎಲ್ಲ ಕಳುವಾಗಿದೆ ಎಂದು ತಿಳಿದಾಗ ಬಹಳ ಬೇಸರವಾಯಿತು. ಅವರು ತುಂಬಾ ಬೇಸರಗೊಂಡಿದ್ದರು. ಅವರಿಗೂ ಅದೇ ದಿನ ಪಾಸ್ಪೋರ್ಟ್ ಬೇಕಿತ್ತು.
ಅಲ್ಲಿ ರೆಸೆಪಶನ್ ಕೌಂಟರ್ ನಲ್ಲಿ ಕುಳಿತಿದ್ದವಳು ಸ್ಪೇನ್ ಹುಡುಗಿ. ಅವಳಿಗೆ ಸರಿಯಾಗಿ ಇಂಗ್ಲಿಷ್ ಬಾರದು. ಏನಾದರೂ ಕೇಳಿದರೆ ದುರುಗುಟ್ಟಿಕೊಂಡು ನೋಡುತ್ತಾಳೆ. ಮೊದಲೇ ನನಗೆ ಹೇಳಿದಳು, ಏನೇ ಮಾಡಿದರೂ ಇವತ್ತು ಪಾಸ್ ಪೋರ್ಟ್ ಸಿಗುವುದಿಲ್ಲ ಎಂದು. ನನ್ನ ಶಕ್ತಿಯೇ ಉಡುಗಿ ಹೋಯಿತು. ಏಕೆಂದರೆ ಮರುದಿನ ನಾವು ತಿರುಗಿ ಸ್ವೀಡನ್ ಹೊರಡುವ ಫ್ಲೈಟ್ ಬುಕ್ ಮಾಡಿದ್ದೇವೆ. ಇವತ್ತು ಸಿಗಲೇಬೇಕು. ಏನಾದರಾಗಲಿ ಎಂದು ಅದಕ್ಕೆ ಸಂಭಂಧಪಟ್ಟ ಎಲ್ಲ ಫಾರಂ ತುಂಬಿದೆ. 8 ಫೋಟೋ ಬೇಕೆಂದರು. ಪುನಃ ಅಲ್ಲಿಂದ ಸ್ಟುಡಿಯೊ ಹುಡುಕಿ 8 ಫೋಟೋ ತೆಗೆಸಿಕೊಂಡು ಬಂದೆ. ಇದೆಲ್ಲ ಮುಂಚೆ ಗೊತ್ತಿದ್ದರೆ ಒಂದಷ್ಟು ಫೋಟೋ ಮುಂಚೆಯೇ ತೆಗೆದುಕೊಂಡು ಹೋಗುತ್ತಿದ್ದೆ. ಇದೊಂದು ತರ Murphy's Law ಇದ್ದ ಹಾಗೆ. ಫೋಟೋ ಕೈಲಿರುವಾಗ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇರುವಾಗ ಫೋಟೋ ಕೈಲಿರುವುದಿಲ್ಲ.
ಫೋಟೋ ತೆಗೆಸಿಕೊಂಡು ಬಂದು ನೋಡಿದರೆ ಇನ್ನೂ ಮೊದಲ ನಂಬರ್ ಕೆಲಸವೇ ಮುಗಿದಿಲ್ಲ. 9 ಘಂಟೆಯಿಂದ 11 ಘಂಟೆಯವರೆಗೆ ಸಾಲಿನಲ್ಲಿ ನಿಂತುಕೊಂಡರೂ 10 ನೇ ನಂಬರ್ ತನಕ ಮಾತ್ರ ಆಯಿತು. ನನ್ನದೋ 26 ನೇ ನಂಬರ್. 1 ಘಂಟೆ  ವರೆಗೆ ಮಾತ್ರ ಅವರು ಕೇಸ್ ತೆಗೆದುಕೊಳ್ಳುತ್ತಾರೆ. ಮತ್ತೆ ಮಧ್ಯಾನ್ಹ ಪಾಸ್ ಪೋರ್ಟ್ ವಿತರಣೆ ಮಾತ್ರ ಎಂದು ತಿಳಿಯಿತು. ಆಮೆ ವೇಗದಲ್ಲಿ ಸಾಗುತ್ತಿರುವ ಕೇಸ್ ಗಳ ನಡುವೆ ನನ್ನ ಕೇಸ್ ಬರುವಾಗ ಖಂಡಿತ 1 ಘಂಟೆ ಕಳಿಯುತ್ತದೆ ಎಂದು ನನಗೆ ಆಗಲೇ ತೋರಿತು. ನಾನು ಎಮರ್ಜೆನ್ಸಿ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಿದ್ದರಿಂದ ಒಂದು ದಿನ ಉಳಿದರೆ ಯಾವ ಪ್ರಯೋಜನವೂ  ಇಲ್ಲ ( ಅದಕ್ಕೆ ಎಮರ್ಜೆನ್ಸಿ ಎಂದು ಹೇಗೆ ಕರೆಯಲಿ ಹೇಳಿ ) ಎಂದೆನಿಸಿ ಕೂಡಲೇ ಆಫೀಸರ್ ಇರುವಲ್ಲಿಗೆ ನಡೆದೆ.
ಅವರು ನಿಜಕ್ಕೂ ಸಮಾಧಾನಿ ಯಾಗಿದ್ದರು. ಅವರಲ್ಲಿ ನನ್ನ ಪಾಸ್ ಪೋರ್ಟ್ ಕಳೆದ ಕಥೆ, ವ್ಯಥೆ ಯನ್ನೆಲ್ಲ ತೋಡಿಕೊಂಡೆ. ಅವರು ನನ್ನ ಅಪ್ಲಿಕೇಶನ್ ಎಲ್ಲ ಪರಿಶೀಲಿಸಿದರು. ಅಲ್ಲಿಯೇ ಇನ್ನೊಂದು ಸಮಸ್ಯೆ ಎದುರಾಯಿತು. ಸ್ವೀಡನ್ ದೇಶದಲ್ಲಿ ನಮಗೆ ಯಾವುದೇ ID Card ಮೊದಲ ವರ್ಷ ನೀಡುವುದಿಲ್ಲ. ಆಫೀಸರ್ ನನಗೆ ನಿನ್ನ ಸ್ವೀಡನ್ ID Card ತೋರಿಸು ಎಂದರು. ಅವರು ಕೊಡುವುದಿಲ್ಲ ಎಂದರೆ ಇವರು ಕೇಳುತ್ತಿಲ್ಲ. ಇಕ್ಕಟ್ಟಿಗೆ ಸಿಲುಕಿಹೋದೆ. ಇಲ್ಲದಿದ್ದರೆ ನಿನ್ನ ಯುನಿವರ್ಸಿಟಿ ಯಿಂದ ಒಂದು ಲೆಟರ್ ಕೂಡಲೇ ಕಲಿಸಲು ಹೇಳು ಅಂದರು. ಏನು ಅಂತ ಹೇಳಲಿ. ಯುನಿವರ್ಸಿಟಿ ಯಲ್ಲಿರುವ ನನ್ನ ಬಾಸ್ ನನ್ನೊಡನೆ conference ಗೆ ಬಂದಿದ್ದರು. ಅವರಿಗೆ ಅದೇ ದಿನ Presentation ಇದ್ದಿದ್ದರಿಂದ ಅವರು ಮ್ಯಾಡ್ರಿಡ್ ಗೆ ಬಂದಿರಲಿಲ್ಲ. ಆದ್ದರಿಂದ ಯುನಿವರ್ಸಿಟಿ ಲೆಟರ್ ಕಲಿಸಲು ಸಾದ್ಯವೇ ಇಲ್ಲ. ಹಾಗೆಂದು ಇವರು ನಂಬಲು ರೆಡಿ ಇಲ್ಲ. ಮೊತ್ತ ಮೊದಲ ಬಾರಿಗೆ ಜೀವನದಲ್ಲಿ Dead Lock Situation ನಲ್ಲಿ ಸಿಲುಕಿದ್ದೆ. ನನ್ನ ಯಾವ ಜನ್ಮದ ಪುಣ್ಯವೋ ಏನೋ , ಆಫೀಸರ್ ಚೇಂಬರ್ ನಲ್ಲಿ ಆ ಆಫೀಸರ್ ಆತ್ಮೀಯ ರ ಗೆಳೆಯ ರೊಬ್ಬರು ಇದ್ದರು. ಅವರು ಮ್ಯಾಡ್ರಿಡ್ ನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ . ಅವರು ನನ್ನ ಕಥೆಯನ್ನೆಲ್ಲಾ ಕೇಳಿ ಆ ಆಫೀಸರ್ ಅವರಲ್ಲಿ ಪಾಸ್ ಪೋರ್ಟ್ ಕೊಡುವಂತೆ ವಿನಂತಿಸಿಕೊಂಡರು. ಆ ಆಫೀಸರ್ ಗೆ ಮನ ಕರಗಿತೋ ಏನೋ ಕೂಡಲೇ ಫೋನ್ ಮಾಡಿ ಇದರ ಬಗ್ಗೆ ಯಾರ ಹತ್ತಿರವೋ ಮಾತನಾಡಿದರು. ನಂತರ ಒಂದು ವರುಷದ ಮಟ್ಟಿಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಲು ಸಹಿ ಹಾಕಿದರು. ಅಷ್ಟೇ  ಅಲ್ಲದೆ  ಸ್ವೀಡನ್ ತಲುಪಿದ ನಂತರ ಒಂದು ವರುಷದ ಒಳಗೆ ಹೊಸ ಪಾಸ್ ಪೋರ್ಟ್ ಪಡೆಯುವಂತೆಯೂ ಸೂಚಿಸಿದರು. ''ಬದುಕಿದೆಯಾ ಬಡ ಜೀವವೇ'' ಎನ್ನಿಸಿದ್ದು ಆಗಲೇ. ಅವರು ಆ ಸಂಧರ್ಭಕ್ಕೆ ನನಗೆ ದೇವರು, ಅವರೊಬ್ಬರೇ ಅಲ್ಲ, ಸಕಾಲದಲ್ಲಿ ನೆರವಿಗೆ ಬಂದ ಆ ಬಿಸಿನೆಸ್ ಮ್ಯಾನ್ ಕೂಡಾ ಆಪತ್ಭಾಂದವ ನಂತೆ ಕಂಡರು.  ಹೀಗೆ ಸಾಲನ್ನು ಮುರಿದು ಒಳಗೆ ಹೋಗಿ ಸುಮಾರು 12-30 ಹೊತ್ತಿಗೆ ನನ್ನ ಪಾಸ್ ಪೋರ್ಟ್ ಪಡೆಯಲು ಸಹಿ ಹಾಕಿಸಿಕೊಂಡು ಹೊರಗೆ ಬಂದು ರಿಸೆಪ್ಶನ್ ನಲ್ಲಿ ಹಣ ಕಟ್ಟಿದೆ. ಎಮರ್ಜೆನ್ಸಿ ಪಾಸ್ ಪೋರ್ಟ್ ಗೋಸ್ಕರ 11000 ರೂಪಾಯಿಗಳನ್ನು ತೆಗೆದುಕೊಂಡರು. ''ಬರೆಯ ಮೇಲೊಂದು ಬರೆ'' ಎನ್ನುವಂತೆ ಮೊದಲೇ ಎಲ್ಲ ಕಳೆದುಕೊಂಡವನಿಗೆ ಮತ್ತೊಂದು ಏಟು ನೀಡಿದ್ದರು. ಏನು ಮಾಡುವುದು, ತಿರುಗಿ ಬರಬೇಕೆಂದರೆ ಅದೆಲ್ಲ ಅನಿವಾರ್ಯವಾಗಿತ್ತು.
ಮಧ್ಯಾನ್ಹ 3 ಘಂಟೆಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಿದರು. ಅದನ್ನು ಪಡೆದು ಕೂಡಲೇ ಟ್ರೈನ್ ಹತ್ತಿ Zaragoza ಬಂದೆನು. ಅಲ್ಲಿಂದ ನಾನು ಬಾಸ್ ಕೂಡಿಕೊಂಡು ಬಾರ್ಸಿಲೋನ ಕ್ಕೆ ಪ್ರಯಾಣ ಬೆಳೆಸಿದವು. ಪ್ರಯಾಣ ನನ್ನನ್ನು ಬಹಳಷ್ಟು ಸುಸ್ತಾಗುವ ಹಾಗೆ ಮಾಡಿತ್ತು. ಮಾನಸಿಕ ಒತ್ತಡ, ಮೇಲಿಂದ ಮೇಲೆ ಪ್ರಯಾಣ, ಚಿಂತೆ ಎಲ್ಲವೂ ನನ್ನನ್ನು ಸೋಲಿಸಿ ಬಿಟ್ಟಿದ್ದವು. ಸ್ವೀಡನ್ ತಲುಪಿದರೆ ಸಾಕೆಂದು ಯೋಚಿಸುತ್ತಿದ್ದೆ. ಹೆಂಡತಿಗೆ ಮೊದಲೇ ಹೇಳಿದ್ದೆ, ನನ್ನ ತಂದೆ ತಾಯಿಗಳಿಗೆ ಇದರೆ ಬಗ್ಗೆ ಏನು ಹೇಳಬೇಡ ಎಂದು, ಇಲ್ಲದಿರೆ ವೃಥಾ ಬೇಜಾರು ಮಾಡಿಕೊಳ್ಳುವುದೊಂದೇ ಅಲ್ಲದೆ ಸರ್ವ ದೇವರುಗಳಿಗೆ ಹರಕೆ ಹೊತ್ತು ಕಣ್ಣಿರು ಹಾಕುತ್ತ ಕುಳಿತುಕೊಳ್ಳುತ್ತಾರೆ ಎನ್ನುವುದು.
ಆ ದಿನ ಬಾರ್ಸಿಲೋನ  ತಲುಪುವಾಗ 9 ಘಂಟೆ ರಾತ್ರಿ. ಒಂದೇ ದಿನ 1200 ಕಿ ಮಿ ಪ್ರಯಾಣ ಮಾಡಿದ್ದೆ. ರಾತ್ರಿ ಕಣ್ಣಿಗೆ ಸ್ವಲ್ಪ ನಿದ್ದೆ ಬಂತು.
  ಮರುದಿನ ಬೆಳಿಗ್ಗೆ ಎದ್ದು Swedish Embassy ಗೆ ವೀಸಾ ಹಾಕಿಸಿಕೊಳ್ಳಲು ನಾನು ಮತ್ತು ನನ್ನ ಬಾಸ್ ಹೋದೆವು. ನನ್ನ ಬಾಸ್ ಗೆ ಸ್ವೀಡಿಷ್ ಭಾಷೆ ಬರುತ್ತದೆ ಯಾದ್ದರಿಂದ ಅಲ್ಲಿ ವ್ಯವಹರಿಸುವುದು ಅಷ್ಟು ಕಷ್ಟವಾಗಲಿಲ್ಲ. ಆದರೆ ಅವರಲ್ಲಿ ವೀಸಾ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತೇ '' ವೀಸಾ ಹಾಕುವ ಅಧಿಕಾರ ಕೇವಲ ಮ್ಯಾಡ್ರಿಡ್ ನಲ್ಲಿರುವ Swedish Embassy ಗೆ ಇದೆ, ನಮಗಿಲ್ಲ, ಆದ್ದರಿಂದ ನೀವು ಮ್ಯಾಡ್ರಿಡ್ ಗೆ ಹೋಗಿ ಹಾಕಿಸಿಕೊಂಡು ಹೋಗಿ'' ಎನ್ನಬೇಕೆ. ಹಿಂದಿನ ದಿನವಷ್ಟೇ ಮ್ಯಾಡ್ರಿಡ್ ನಿಂದ ಬಂದಿದ್ದೇನೆ ಈಗ  ಪುನಃ ಮ್ಯಾಡ್ರಿಡ್ ಗೆ ಹೋಗಬೇಕು ಅಂದಾಗ ನನ್ನ ತಲೆ ಹಾಳಾಗಿ ಹೋಯಿತು. ನನ್ನ ಬಾಸ್ ಬಹಳಷ್ಟು ಪ್ರಯತ್ನ ಪಟ್ಟರು ಅಲ್ಲಿಯೇ ಹಾಕಿಸಲು. ಆದರೆ ಅವರು ಒಪ್ಪಲೇ ಇಲ್ಲ. ಮ್ಯಾಡ್ರಿಡ್ ಗೆ ಹೋಗಲೇಬೇಕು ಎಂದು ಹೇಳಿ ಬಿಟ್ಟರು.

ತಲೆಯ ಮೇಲೆ ಕೈ ಹೊತ್ತು ಅಲ್ಲಿಂದ ಹೊರಗೆ ಬಂದೆವು. ನನ್ನ ಹತ್ತಿರ ವೀಸಾದ ಒಂದು ನಕಲಿತ್ತು. ಬಾಸ್ ಅಂದರು '' ನೀನು ಯುರೋಪ ನಲ್ಲೆ ಇರುವುದರಿಂದ ವೀಸಾ ಇಲ್ಲದೆಯೇ ನಾವು ಪ್ರಯಾಣ ಮಾಡೋಣ, ಮಧ್ಯದಲ್ಲಿ ಏನಾದರೂ ಸಮಸ್ಯೆ ಆದರೆ ನಾನು ಎದುರಿಸುತ್ತೇನೆ, ನೀನೇನು ಚಿಂತಿಸದಿರು'' ಎಂದು ಧೈರ್ಯ ತುಂಬಿದರು. ಸಂಜೆ 6 ಘಂಟೆಗೆ ಸ್ಪೇನ್ ನಿಂದ ವೀಸಾ ಇಲ್ಲದೆಯೇ ಪ್ರಯಾಣಕ್ಕೆ ರೆಡಿ ಆದೆ. ಟಿಕೆಟ್ ಕೌಂಟರ್ ನವರು ವೀಸಾ ಕೇಳಿದರು. ಅವರಿಗೆ ಎಲ್ಲ ಕಥೆ ಹೇಳಿದೆವು. ಬಹುಷ: ಅವರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಹಾಗೆಯೇ ಟಿಕೆಟ್ ಕೊಟ್ಟು ಕಳಿಸಿದರು. ಮುಂದಿದ್ದದ್ದು ಕಸ್ಟಂ ಚೆಕ್. ಅಲ್ಲಿ ಎದೆ ಡವ ಡವ ಎನ್ನಲು ಆರಂಬವಾಯಿತು. ಯಾವ ಪುಣ್ಯವೋ ಏನೋ ಅವರು ಏನನ್ನೂ ಕೇಳಲಿಲ್ಲ. ಇಷ್ಟೆಲ್ಲಾ ಮಾಡಿ ಆದೆ ದಿನ ಬರುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಅದಕ್ಕೆ ಕಾರಣ ಮರುದಿನ ಬೆಳಿಗ್ಗೆ ಸ್ವೀಡನ್ ನಲ್ಲಿ '' ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ರಾಜೆಕ್ಟ್ '' ಬಗೆಗೆ ಮೀಟಿಂಗ್ ಏರ್ಪಡಿಸಿದ್ದೆವು. ಅಲ್ಲಿಗೆ ಹೋಗದಿದ್ದರೆ ಅದು ಕೈ ತಪ್ಪುವ ಸಾದ್ಯತೆ ಇತ್ತು. ಆದ್ದರಿಂದ ಬಾಸ್ ಆದೆ ದಿನ ಪ್ರಯಾಣ ಮಾಡೇ ಬಿಡೋಣ ಎಂದಿದ್ದರು.
ಹೀಗೆ ಸ್ಪೇನ್ ನಿಂದ ಪಾರಾಗಿ ಬಿಟ್ಟೆವು. ನಂತರ Copen Hagen ನಲ್ಲಿ ಇಳಿಯಿತು. ಇಲ್ಲಿ ನಾವು ಇನ್ನೊದು ವಿಮಾನ ಹತ್ತಬೇಕಿತ್ತು. ಇಲ್ಲಿ ಸ್ವಲ್ಪ ಹೆದರಿಕೆ ಇತ್ತು. ಆದರೆ ಇಲ್ಲಿಯೂ ಯಾವ ಸಮಸ್ಯೆ ಇಲ್ಲದೆ ಪಾರಾದೆವು. ಇನ್ನು ಸ್ವೀಡನ್ ದಲ್ಲಿ ಏನಾದರೂ ಚಿಂತೆ ಇಲ್ಲ ಯಾಕೆಂದರೆ  ಅದು ನಾವು ಇರುವ ಊರು.
ರಾತ್ರಿ 11-30 ಗೆ ವಿಮಾನ ಸ್ವೆಡೆನ್ನಿನ ಗೊತ್ಹೆಂಬುರ್ಗ್ ಗೆ ಬಂದಿಳಿಯಿತು. ಯಾವ ಅಡೆ ತಡೆ ಇಲ್ಲದೆ ಅಲ್ಲಿಂದ ಹೊರಗೆ ಬಂದು ಮನೆ ತಲುಪುವಾಗ 12-30 ಆಗಿತ್ತು. ಮೆಚ್ಚಿನ ಮಡದಿಗೆ ನನ್ನ ನೋಡಿದ ಕೂಡಲೇ ಅದ ಸಂತೋಷ ವರ್ಣಿಸಲಸದಳ, ಆನಂದಭಾಷ್ಪ ಅವಳ ಕಣ್ಣಲ್ಲಿ ಹರಿಯುವುದು ಕಂಡಿತು.
ಜೀವನದಲ್ಲಿ ಒಂದು ದೊಡ್ಡ ಗಂಡಾಂತರ ಕಳೆದು ಬಂದಂತೆ ಗೋಚರಿಸಿತು. ಮರುದಿನ ಬೆಳಿಗ್ಗೆಯೇ ಆಫೀಸಿನಿಂದ ನನಗೆ ಹೊಸ Laptop ಕೊಟ್ಟರು. ಹೀಗೆ ಗೊತ್ತಿಲ್ಲದ ದೇಶದಲ್ಲಿ ಭಾಷೆಯೂ  ಬರದೆ ಒದ್ದಾಡಿ ಬಂದ ಮೇಲೆ ಇದೀಗ ಪಾಸ್ ಪೋರ್ಟ್ ಗಾಗಿಯೇ ಒಂದು ಹೊಸ ಬ್ಯಾಗ್ ತೆಗೆದುಕೊಂಡಿದ್ದೇನೆ. ಅದು ನನ್ನ ದೇಹಕ್ಕೆ ತಾಗಿ ಕೊಂಡಿರುವಂತೆ ನೋಡಿಕೊಂಡಿದ್ದೇನೆ.
ಇನ್ಯಾರಿಗೂ ಇಂಥಹ ಅನುಭವ ಆಗಬಾರದು ಎಂಬ ದ್ರಷ್ಟಿಯಿಂದ ಲೇಖನ ಬರೆದಿದ್ದೇನೆ. ನನ್ನ ನೋವು, ನನಗೆ ಮಾತ್ರ ಸಾಕು. ನಿಮಗೆ ಯಾರಿಗೂ ಬೇಡ. ವಿದೇಶ ಪ್ರಯಾಣ ಸುಖವೇನೋ  ಹೌದು, ಆದರೆ ಅದು ಸಂಪೂರ್ಣ ಸುರಕ್ಷಿತ ಎಂದು ಮಾತ್ರ ಅಂದುಕೊಳ್ಳಬೇಡಿ. ಕಳ್ಳರೂ ಎಲ್ಲಡೆ ಇದ್ದಾರೆ. ಎಲ್ಲಿಯವರೆಗೆ ಮನುಕುಲವಿದೆಯೋ ಅಲ್ಲಿಯವರೆಗೆ, ಕಳ್ಳತನ, ಹಿಂಸೆ, ನೋವು ಇದ್ದದ್ದೇ. ಅದನ್ನು ತಪ್ಪಿಸಲು ಸಾದ್ಯವೇ ಇಲ್ಲ. ಕಿತ್ತು ತಿನ್ನುತ್ತಿರುವ ಬಡತನ, ಸಂಸ್ಕಾರವಿಲ್ಲದ ಬದುಕು, ಅಸಂಸ್ಕ್ರತ ನಾಗರೀಕ ಮನೋಭಾವ, ಇವೆಲ್ಲವುಗಳಿಂದ ಮನುಷ್ಯ  ತನಗರಿವಿಲ್ಲದೆ ಇಂಥಹ ಕಾರ್ಯಗಳಿಗೆ ಅಣಿಯಾಗುತ್ತಾನೆ. ಕಾಲ ಮಾತ್ರ ಇದಕ್ಕೆ ಪರಿಹಾರ. ವಿದೇಶಕ್ಕೆ ಹೋಗುವಾಗ ಮೊದಲು ಆ ದೇಶದ ಸುರಕ್ಷತೆಯ ಬಗೆಗೆ ತಿಳಿದುಕೊಳ್ಳಿ. ಅಲ್ಲಿ ಏನಾದರೂ ಪಾಸ್ ಪೋರ್ಟ್ ಕಳ್ಳತನ ಆದರೆ ಹೆಚ್ಚಿನ ಮಾಹಿತಿಗೆ ನನ್ನನ್ನು ಸಂಪರ್ಕಿಸಿ :) 


ಇಂಥಹ ಸಂಧರ್ಭದಲ್ಲಿ ನನಗೆ ಧೈರ್ಯ ತುಂಬಿದ ನನ್ನೆಲ್ಲ ಮಿತ್ರ ಮಿತ್ರೆಯರಿಗೆ, ಬ್ಲಾಗ್ ಗೆಳೆಯರಿಗೆ, ಹಾಗೂ ನೆಚ್ಚಿನ ಮಡದಿಗೆ ಅನಂತ ಧನ್ಯವಾದಗಳು 

Tuesday, October 6, 2009

ಬದುಕಿದೆಯಾ ಬಡ ಜೀವವೇ? ''S-PAIN'' ಪ್ರವಾಸ ತಂದ PAIN ಪ್ರವಾಸ.....

ಹಿಂದಿನ ತಿಂಗಳು SPAIN ಗೆಂದು ಹೋದಾಗ ಆ ''S-PAIN'' ಪ್ರವಾಸ ತಂದ PAIN  ಬಗ್ಗೆ ಬರೆದ ಲೇಖನ. ಬಹಳ ದಿನಗಳಿಂದ ಇದನ್ನು ಬರೆಯಬೇಕೆಂದಿದ್ದೆ . ಆದರೆ ಕೆಲಸದ ಒತ್ತಡದಿಂದಾಗಿ ಬರೆಯಲಾಗುತ್ತಿರಲಿಲ್ಲ. ಆದರೆ ಕಳೆದ ವಾರ ಇಟ್ಟಿಗೆ ಸಿಮೆಂಟಿನ ಪ್ರಕಾಶ ಹೆಗಡೆಯವರ ''ಹೇಳಬಾರದೆಂದರೂ.. ಬಾಯಲ್ಲಿ ಬರುತ್ತಿತ್ತು ಸುಳ್ಳು'' http://ittigecement.blogspot.com/ ಲೇಖನ ಓದಿದ ಮೇಲೆ ಇದನ್ನು ಇಂದು ಬರೆಯಲೇ ಬೇಕು ಎಂದೆನಿಸಿ ಬರೆದಿದ್ದೇನೆ.

ಕಳ್ಳರು ಎಲ್ಲೆಡೆ ಇರುತ್ತಾರೆ, ಕೆಲವೆಡೆ ರಕ್ಷಕರೇ ಕಳ್ಳರಾಗುವುದು ಉಂಟು. ಅದೇನು ಭಾರತಕ್ಕೆ ಹೊಸದಲ್ಲ ಬಿಡಿ. ಸಮಸ್ತ ದೇಶವನ್ನೇ ರಾಜಕಾರಣಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಆದರೆ ರಕ್ಷಣೆ ಎನ್ನುವುದು ವಿದೇಶಗಳಲ್ಲಿ ಅದರಲ್ಲೂ ಭಾರಿ ಸಂಭಾವಿತರೆನಿಸಿಕೊಂಡ ಐರೋಪ್ಯ ಸಮುದಾಯಗಳಲ್ಲಿ ಹೆಚ್ಚಿದೆ ಎಂಬ   ನಂಬಿಕೆ (ಅಲ್ಲ ಅಪನಂಬಿಕೆ) ಇತ್ತು. ಹಿಂದಿನ ತಿಂಗಳ ಸ್ಪೇನ್ ಪ್ರವಾಸ ಆ ನಂಬಿಕೆಗೆ ಬಲವಾದ ಕೊಡಲಿ ಏಟು ನೀಡಿತು.

ಸ್ಪೇನ್ ದೇಶ ಸೌಂದರ್ಯಕ್ಕೆ ಹೆಸರುವಾಸಿ,  ದೇಶದ ಒನಪು ವಯ್ಯಾರಗಳ ಬಗೆಗೆ ಮುಂದೊಮ್ಮೆ ವಿಸ್ತಾರವಾಗಿ ಬರೆಯುತ್ತೇನೆ. ಏಕೆಂದರೆ  ಲೇಖನ ಸ್ಪೇನ್ ನಿಂದ ಪಾರಾಗಿ ಬಂದ ನನ್ನ ಬಡಪಾಯಿ ಸ್ಥಿತಿಯ ಕುರಿತು. ಅದಕ್ಕೆ ಸೌಂದರ್ಯದ ಬಣ್ಣ ಬಳಿದು ಸತ್ಯವನ್ನು ಮುಚ್ಚುವ ಪ್ರಯತ್ನ  ಲೇಖನದಲ್ಲಂತೂ ಮಾಡಲಾರೆ. ಸ್ಪೇನ್ ನ ಒಂದು ಸುಂದರ ನಗರ ZARAGOZA ಎಂಬುದಾಗಿದೆ. ಇಲ್ಲಿಯೇ 12 ನೆ FERROELECTRIC LIQUID CRYSTAL CONFERENCE ನಲ್ಲಿ ಭಾಗವಹಿಸಲು ನಾನು  ಮತ್ತು ನನ್ನ ಬಾಸ್ ಇಬ್ಬರೂ ಗೊತ್ಹೆಂಬುರ್ಗ್ (ಸ್ವೆಡೆನ್ನಿನಲ್ಲಿದೆ) ನಿಂದ ವಿಮಾನ ಹಿಡಿದು ಹೊರಟೆವು.

ನಮಗೆ ನೇರ ವಿಮಾನ ವಿಲ್ಲವಾದರಿಂದ ಗೊತ್ಹೆಂಬುರ್ಗ್ ನಿಂದ ಜರ್ಮನಿ ಯ ಮ್ಯುನಿಕ್ ಗೆ ಪ್ರಯಾಣ ಮಾಡಿ ಅಲ್ಲಿಂದ ಸ್ಪೇನ್ ನ ಬಾರ್ಸಿಲೋನ ಗೆ ಪ್ರಯಾಣ ಮಾಡಲು ನಿರ್ಧರಿಸಿದೆವು. ಗೊತ್ಹೆಂಬುರ್ಗ್ ನಿಂದ ಸ್ಪೇನ್ ಗೆ ಸುಮಾರು ೪ ಘಂಟೆಗಳ ಪ್ರಯಾಣ. ಮಧ್ಯದಲ್ಲಿ ಮ್ಯುನಿಕ್ ನಲ್ಲಿ ಸ್ವಲ್ಪ ಹೊತ್ತು ಕಾದು ಬಾರ್ಸೆಲೋನಾಗೆ ಬಂದಿಳಿಯುವಷ್ಟರಲ್ಲಿ ನಡು ಮಧ್ಯಾನ್ಹ ವಾಗಿತ್ತು. ಬಾರ್ಸಿಲೋನ ಎಂದಾಕ್ಷಣ  ನೆನಪಾಗುವುದು , ಬಾರ್ಸಿಲೋನ ಒಲಂಪಿಕ್ಸ್, ಬಾರ್ಸಿಲೋನ ಫುಟ್ಬಾಲ್ ತಂಡ, ನಂತರ ಬಾರ್ಸಿಲೋನ ದ ಶಿಲ್ಪ ಗೌಡಿ ಯ   ಬಗ್ಗೆ. ಸ್ಪೇನ್ ನ ಪ್ರವಾಸ ಕಥನದಲ್ಲಿ  ಮಹಾನ್ ಶಿಲ್ಪಿಯ ಬಗೆಗೆ ತಿಳಿಸುತ್ತೇನೆ. ಹೀಗೆ ಬಾರ್ಸಿಲೋನ ವಿಮಾನ ನಿಲ್ದಾಣದಿಂದ ಇಳಿದು ಬಾರ್ಸಿಲೋನ ಉತ್ತರ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಮಧ್ಯಾನ್ಹ 1-30 ಆಗಿತ್ತು. ಹಸಿವು ಬೇರೆ, ಜೊತೆಗೆ ಆದಷ್ಟು ಬೇಗ ZARAGOZA ತಲುಪಿದರೆ ಸಾಕೆಂಬ ಯೋಚನೆ ಸೇರಿ ನಮ್ಮ ಮನಸ್ಸು ಓಡುತ್ತಿತ್ತು.

ಬಾರ್ಸಿಲೋನ ದಿಂದ ZARAGOZA ವರೆಗೆ ರೈಲಿ ನಲ್ಲಿ ಹೋದರೆ ಸುಮಾರು 3600 ರೂಪಾಯಿಗಳು. ಅದೇ ಬಸ್ಸಿನಲ್ಲಿ ಹೋದರೆ 600 ರೂಪಾಯಿಗಳು. ಸುಮ್ಮನೆ ಅನಾವಶ್ಯಕ ಹಣ ಖರ್ಚು ಮಾಡುವುದು ಯಾಕೆಂದು ಯೋಚಿಸಿ ನಾನು ಮತ್ತು ನನ್ನ ಬಾಸ್ ಇಬ್ಬರೂ ಬಸ್ಸಿನಲ್ಲೇ ಪ್ರಯಾಣ ಮಾಡೋಣವೆಂದು ನಿರ್ಧರಿಸಿದೆವು. ಬಹುಷ್ಯ ಆ ನಿರ್ಧಾರ ಇಷ್ಟೊಂದು ಭೀಕರವಾಗಿರುತ್ತದೆ ಎಂದು ತಿಳಿದಿದ್ದರೆ ನಾವು ನಿರ್ಧಾರವನ್ನೇ ಕೈ ಬಿಡುತ್ತಿದ್ದೆವು. ಬಾರ್ಸಿಲೋನ ಬಸ್ಸ ನಿಲ್ದಾಣದಿಂದ ZARAGOZA ಕ್ಕೆ ಹೊರಡುವ ಬಸ್ಸ ಟಿಕೆಟ್ ತೆಗೆದುಕೊಂಡು ಸ್ವಲ್ಪ ಊಟ ಮಾಡಿ ಪ್ರಯಾಣ ಮುಂದುವರೆಸೋಣ ಎಂದು ನಿರ್ದರಿಸಿದೆವು . ಆ ಬಸ್ಸ ನಿಲ್ದಾಣದಲ್ಲಿ 2 ನೇ  ಮಹಡಿಯಲ್ಲಿ ಟಿಕೆಟ್ ಕೌಂಟರ್ ಇದೆ, ಆದರೆ ಮೆಟ್ಟಿಲುಗಳ ಹೊರತು ಇನ್ಯಾವ ಸಾಧನವೂ ನಮ್ಮನ್ನು ಮೇಲೆ ಒಯ್ಯಲಾರದು. ಆದರೆ ಕೈಯಲ್ಲಿ ಬ್ಯಾಗ್ ಬೇರೆ ಇದ್ದರಿಂದ ಒಬ್ಬರು ಬ್ಯಾಗ್ ನೋಡಿಕೊಳ್ಳುವುದು, ಇನ್ನೊಬ್ಬರು ಟಿಕೆಟ್ ತರುವುದು ಎಂದು ನಿರ್ದರಿಸಿ ನಾನು ಟಿಕೆಟ್ ತರಲು 2 ನೇ  ಮಹಡಿ ಗೆ ಹೋದೆನು. ಹೋಗುವಾಗ ನನ್ನ ಸಮಸ್ತ ಬ್ಯಾಗ್ ಗಳನ್ನೂ ಅಲ್ಲಿಯೇ ಬಿಟ್ಟು ಕೇವಲ ಹಣದೊಂದಿಗೆ ಹೊರಟನು. ಅಂತೂ 2-30 ರ  ಬಸ್ಸ ಗೆ ಟಿಕೆಟ್ ಲಭಿಸಿತು. ಸಂತೋಷದಿಂದ ಕೆಳಗೆ ಬಂದೆ, ''ಬಹುಶ ಆ ಪ್ರಯಾಣದ ಕೊನೆಯ ನಗೆ ಅದಾಗಿತ್ತು ಎನಿಸುತ್ತದೆ''. ಕೆಳಗೆ ಬಂದು ನನ್ನ ಬ್ಯಾಗ್ ನೋಡುತ್ತೇನೆ , ಬ್ಯಾಗ್ ನಾಪತ್ತೆಯಾಗಿದೆ. ಬಾಸ್,  ಬ್ಯಾಗ್ ಮುಂದೆ ಇದ್ದರೂ ಕಳ್ಳರೂ ಉಪಾಯದಿಂದ ಬ್ಯಾಗ್ ಹಾರಿಸಿದ್ದಾರೆ.

ಆ ಬ್ಯಾಗ ನಲ್ಲಿ ನನ್ನ ಪರಮ ಪ್ರಿಯ ಲ್ಯಾಪ್ಟಾಪ್ ಇತ್ತು, ಕೇವಲ ಕೆಲವೇ ದಿನಗಳ ಹಿಂದೆ ಮೆಚ್ಚಿನ ಮಡದಿಗೆ ಆ ಲ್ಯಾಪ್ಟಾಪ್ ನ್ನು ಅವಳ ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದೆ. ''ಇದನ್ನು ಸರ್ವದಾ ನಿನ್ನ ಬಳಿಯಲ್ಲಿಯೇ ಇಟ್ಟುಕೋ, ನನ್ನ ಮೇಲೆ ಕೋಪ ಬಂದರೆ ಇದನ್ನು ನೋಡು, ಕೋಪ ಇಳಿಯುತ್ತದೆ'', ಎಂದೆಲ್ಲ ಅವಳಿಗೆ ನೀಡಿದ ಸಿಹಿಮಾತುಗಳನ್ನು ಆ ಕಳ್ಳ ನಿರ್ದಾಕ್ಷಿಣ್ಯವಾಗಿ ಕೊಂದು ಹಾಕಿದ್ದ. ಇಷ್ಟೇ ಆದರೆ ತಾಳಿಕೊಳ್ಳಬಹುದಾಗಿತ್ತು . ಆದರೆ ಅದೇ ಬ್ಯಾಗ್ ಅಲ್ಲಿ ಕೊನೆಯ ಕ್ಷಣದಲ್ಲಿ ನನ್ನ ಪಾಸ್ ಪೋರ್ಟ್ ಹಾಕಿ ಟಿಕೆಟ್ ತರಲು ಹೋಗಿದ್ದೆ. ಒಮ್ಮೆಲೇ ನೆಲ ಕುಸಿದ ಅನುಭವ. ವಿದೇಶದಲ್ಲಿ ಪಾಸ್ ಪೋರ್ಟ್ ಒಂದೇ ನಮ್ಮ ಗುರುತು. ಅದಿಲ್ಲದಿರೆ ನಾವು ''illegal immigrants'' ಒಂದು ಕ್ಷಣ ಏನು ಮಾಡುವುದೆಂದೇ ತೋಚಲಿಲ್ಲ. ಆದರೆ ಜೊತೆಯಲ್ಲಿ ಬಾಸ್ ಇದ್ದಿದ್ದರಿಂದ ಅವರು ಧೈರ್ಯ ತುಂಬಿದರು.

ಕೂಡಲೇ ಅಲ್ಲಿಯೇ ಹತ್ತಿರದಲ್ಲಿದ್ದ ಪೋಲಿಸ್ ಸ್ಟೇಷನ್ ಗೆ ತೆರಳಿ ಕಂಪ್ಲೈಂಟ್ ಕೊಟ್ಟೆವು. ಅಲ್ಲಿನ ಪೋಲಿಸರು  ಮಾವನ ಮನೆಗೆ ಬಂದ ಅಳಿಯನನ್ನು ಸತ್ಕರಿಸಿದಂತೆ ನಮ್ಮನ್ನು ನೋಡಿ ನಗುಮೊಗದಿ ಮಾತನಾಡಿದರೆ ಹೊರತು ತಮ್ಮ ಕರ್ತವ್ಯದ ಬಗೆಗೆ ಎಳ್ಳಷ್ಟೂ ಕಾಳಜಿ ತೋರಿಸಿದಂತೆ ಕಾಣಲಿಲ್ಲ. ಇದರ ಜೊತೆಗೆ '' ಇದೆಲ್ಲ ಇಲ್ಲಿ ಮಾಮೂಲು, ನೀವು ಎಚ್ಚರ ಇರಬೇಕು'' ಎಂಬ ಬಿಟ್ಟಿ  ಉಪದೇಶ ಬೇರೆ ಕೊಟ್ಟರು. ಮನದಲ್ಲಿ ದು:ಖ , ಮೇಲಿಂದ ಇವರ ಮೇಲೆ ಸಿಟ್ಟು, ನಾನು ನಾನಾಗಿರಲಿಲ್ಲ.  ''ಏನಾದರೂ ಮಾಡಿಕೊಂಡು ಸಾಯಿರಿ'' ಎಂದು ಶಪಿಸುತ್ತ (ಯಾವಾಗಲೂ ತುಂಬಾ ಕೋಪ, ಮತ್ತು ನೋವಾದಾಗ ಬಾಯಲ್ಲಿ ಕನ್ನಡ ಶಬ್ದಕೊಶಕ್ಕೇ  ಸವಾಲೆಸೆಯುವ ಬೈಗುಳಗಳು ಬರುತ್ತವಂತೆ) ಅವರಿಂದ ಕಂಪ್ಲೈಂಟ್ ಕೊಟ್ಟಿದ್ದರ ಪ್ರತಿ ತೆಗೆದುಕೊಂಡೆವು.

''ಬಂದದ್ದೆಲ್ಲ ಬರಲಿ, ಆ ಗೋವಿಂದನ ದಯೆ ಒಂದಿರಲಿ'' ಎಂಬ ಮಾತಿನಂತೆ ಊಟವನ್ನು ಮಾಡದೆ ಹಾಗೆಯೇ ಹೊರಡಲು ನಿರ್ಧರಿಸಿದೆವು. ಕಾರಣ ಅಂದು ರವಿವಾರ. ''Indian Embassy'' ಗೆ ರಜೆ. ಆದ್ದರಿಂದ ಪಾಸ್ ಪೋರ್ಟ್ ಬಗ್ಗೆ ತಿಳಿಸಲು ಸೋಮವಾರದವರೆಗೆ ಕಾಯಬೇಕು. ZARAGOZA ಹೋಗಿಯೇ ಸೋಮವಾರ  ಮುಂದಿನ ವಿಚಾರ ಮಾಡೋಣವೆಂದು ತೀರ್ಮಾನಿಸಿ 2-30 ಯ ಬಸ್ಸ ಹತ್ತಿದೆವು. ನನ್ನ ಬಾಸ್ ತುಂಬಾ ವಿಚಲಿತರಾಗಿದ್ದರು. ಹಸಿವಾದರೂ ಅವರಿಗೆ ಊಟ ಮಾಡಲು ಮನಸಿರಲಿಲ್ಲ. ಹಾಗೆಯೇ ಹಸಿದ ಹೊಟ್ಟೆಯಲ್ಲಿಯೇ ZARAGOZA ಬಂದಿಳಿದಾಗ ಸಂಜೆ 7-30 ಆಗಿತ್ತು. ಪುನಃ ನಮ್ಮ ಹೋಟೆಲ್ ಗೆ ಹೋಗಲು ಬಸ್ಸ ಹತ್ತುವ ದುಸ್ಸಾಹಸಕ್ಕೆ ಕೈ ಹಾಕದೆ ಟ್ಯಾಕ್ಸಿ ಹತ್ತಿ ಹೋಟೆಲ್ ಮುಟ್ಟಿದೆವು.

ಹೋಟೆಲ್ ಕೌಂಟರ್ ನವರು ಹೇಳಿದರು ''ಇಲ್ಲಿನ ಪೋಲಿಸಿನವರಿಂದ ಯಾವುದೇ ನಿರೀಕ್ಷೆ ಬೇಡ'' ಎಂದು. ಆಗಲೇ ಚಿಂತೆ ಯ ಪರ್ವತ ಬೆಳೆಯತೊಡಗಿತು. ಮಡದಿಗೆ ಫೋನ್ ಮಾಡಿ ವಿಚಾರ ತಿಳಿಸಿದೆ, ಅವಳಿಗೋ ಗಾಬರಿ. ಮೊದಲ ಬಾರಿಗೆ ಮದುವೆಯ ನಂತರ ಅವಳನ್ನು ಬಿಟ್ಟು ಹೋಗಿದ್ದೆ. ಅವಳಿಲ್ಲದ ಮೊದಲ ಪ್ರಯಾಣವೇ ಇಷ್ಟೊಂದು ವಿಘ್ನಗಳು. ಅವಳಿಗೆ ಸಮಾಧಾನ ನಾನು ಮಾಡಿದೆನೋ , ನನಗೆ ಸಮಾಧಾನ ಅವಳು ಮಾಡಿದಳೋ ಒಟ್ಟಿನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಸಂತೈಸಿಕೊಂಡೆವು. ಮೊದಲ ಸ್ಪೇನ್ ಪ್ರವಾಸದ ಮೊದಲ ದಿನವೇ ''ಪ್ರಥಮ ಚುಂಬನಂ ದಂತ ಭಗ್ನಂ'' ದಂಥ ಸ್ಥಿತಿ ಎದುರಾಗಿತ್ತು.

ಮರುದಿನ ದಿಂದ ನನ್ನ ಪಾಸ್ ಪೋರ್ಟ್ ಗಾಗಿ ನಾ ಪಟ್ಟ ಕಷ್ಟ ಕಾರ್ಪಣ್ಯಗಳು, ಅಸಂಬದ್ದ ರೂಲ್ಸ್ ಗಳು , ತಲೆ ತಿನ್ನಲಾರಂಬಿಸಿದವು. ಅಲ್ಲಿಂದ  ನಾನು ಕ್ಷೇಮವಾಗಿ ಬಂದೆನೆ? ಕಸ್ಟಮ್ಸ್ ಗಳ ಕಣ್ಣಿನಿಂದ ಪಾರಾಗುವುದು ಸಾದ್ಯವಾಯಿತೆ? ಇವೆಲ್ಲ ಪ್ರಶ್ನೆಗಳ ಉತ್ತರದೊಂದಿಗೆ ಮುಂದಿನ ವಾರ ಸಿಗುತ್ತೇನೆ.

Tuesday, September 29, 2009

ಷೋಡಷಿಯು ಅವಳು ....



ಮನೆಯ ಮಂದಿರದಲ್ಲಿ ಮನದ ಆಳದ ಬೆಡಗಿ  
ಮನಸ್ಸನ್ನು ಕದ್ದಂಥ ಮಲೆನಾಡಿನ ಹುಡುಗಿ


ಮಲ್ಲಿಗೆಯೋ ಸಂಪಿಗೆಯೋ ಮನಸೆಲ್ಲ ಜಾಜಿ  
ಮಿಂಚಿನ ಸೆಳಕಿನಲಿ ತಪ್ಪೆಲ್ಲ ರಾಜಿ


ಮುದ್ದಿನ ಮಾವನ ಮುತ್ತಿನ ಮಗಳು 
ಮೆತ್ತನೆಯ ಮಾತಿಂದ ಮನವ ಗೆದ್ದಿಹಳು


ಮೈಮನದ ಮಕರಂದ ಮಾನಿನಿಗೆ ಚಂದ  
ಮನವನ್ನು ತಣಿಸುವಳು ನೋಡು ಮುದದಿಂದ


ಮಗುವಂತೆ ಬಂದು ಮಗುವನ್ನೇ ನೀಡಿದಳು 
ಮಕ್ಕಳಾದವು ಎರಡು ಒಂದು ಮರಿ ಮಗಳು


ಮಂದಹಾಸವ ಬೀರಿ ಈಗಲೂ ಕಾಯುವಳು  
ಹರೆಯ ಅರವತ್ತಾರು, ಷೋಡಷಿಯು ಅವಳು

Tuesday, September 22, 2009

ಅವಳ ನೆನಪು


-ಗುರು ಬಬ್ಬಿಗದ್ದೆ


ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು 
ಮಮತೆಯಿಂದ ಸಲಹಿದಂತ ತಾಯಿ ಮಡಿಲನು  
ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು  
ಅಣ್ಣ ಅಕ್ಕ ತೋರಿದಂತ ಪ್ರೀತಿ ನೆನಪನು 
 
ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು  
ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು 
ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೊ  
ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೊ  

ನಮ್ಮ ಊರು ನಮ್ಮ ಜನ ಏನು ಚಂದವೋ  
ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ  
ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ
ಆದರವಳು ನಮ್ಮ ಮನಸ ಪ್ರೇಮದಾಯಿಯೋ

ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ  
ಹಣದ ಮುಂದೆ ಮನವು ಮಾನ ಮಾರಿಕೊಂಬುದೋ
ಅನುರಾಗದ ಸೆಲೆಗೆ ಇಲ್ಲಿ ಬೆಲೆಯೇ ಇಲ್ಲವೊ  
ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ  

ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು  
ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು 
ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ 
ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ

Tuesday, September 15, 2009

ಆಧ್ಯಾತ್ಮದ ಹರಿಕಾರನಾಗಿ ವೈಜ್ಞಾನಿಕ ಕ್ರಾಂತಿಗೆ ಮುನ್ನುಡಿ ಬರೆದು ನಮ್ಮನ್ನಗಲಿದ ಶ್ರೀ ವಿಭುದೇಶರಿಗೆ ಭಾವಪೂರ್ಣ ನಮನ


-ಗುರು ಬಬ್ಬಿಗದ್ದೆ

ಧರ್ಮ ಹಾಗೂ ವಿಜ್ಞಾನ ಒಂದೇ ನೆರಳಿನಲ್ಲಿ ಇರುವುದು ಬಹಳ ಕಡಿಮೆ. ಒಂದು ಇನ್ನೊಂದಕ್ಕೆ ವಿರುದ್ದ. ಅದಕ್ಕಾಗಿಯೇ ಸ್ವಾಮೀಜಿಗಳು ಹಾಗೂ ವಿಜ್ಞಾನಿಗಳ ವಿಚಾರ ಸರಣಿಯೇ ಬೇರೆ ಬೇರೆ. ಒಬ್ಬರು ನಿರಾಕಾರ ಭಗವಂತನ ಆರಾಧಕರಾದರೆ ಇನ್ನೊಬ್ಬರು ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವವರು. ಇವರಿಬ್ಬರೂ ಒಂದೇ ಆಗಿದ್ದು ತುಂಬಾ ವಿರಳ. ಆದರೆ ಇಂದು ಬೆಳಿಗ್ಗೆ ನಮ್ಮನ್ನಗಲಿದ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರು ಧರ್ಮದ ಹರಿಕಾರನಾಗಿ ವಿಜ್ಞಾನದ ಕ್ರಾಂತಿಗೆ ಚಾಲನೆ ಕೊಟ್ಟವರು ಎಂದರೆ ಅತಿಶಯೋಕ್ತಿಯಲ್ಲ. ಹೌದು, ಶ್ರೀ ವಿಭುದೇಶ ತೀರ್ಥರೆಂದರೆ , ಶ್ರೀ ಪೂರ್ಣಪ್ರಜ್ಞ ಸಂಸ್ಥೆಯ ಸಂಸ್ಥಾಪಕರೆಂದರೆ ಸಮಸ್ತ ಭಾರತಕ್ಕೂ ಗೊತ್ತು. ಇಂದು ಭಾರತದಾದ್ಯಂತ ಹೆಸರು ಮಾಡಿರುವ ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣಪ್ರಜ್ನವೂ ಒಂದು. ಇಂದು ಪೂರ್ಣಪ್ರಜ್ಞ ಸುಮಾರು ೨೭ ಶಾಲಾ , ಕಾಲೇಜುಗಳನ್ನು ಒಳಗೊಂಡಿದೆ. ಇದಕ್ಕೆಲ್ಲ ಕಾರಣೀಭೂತರಾದವರು ಶ್ರೀ ವಿಭುದೇಶರು. ಆಧ್ಯಾತ್ಮದ ನಡುವೆಯೇ ವಿಜ್ಞಾನದ ಅಪಾರ ಆಸಕ್ತಿ ಅವರ ವೈಶಿಷ್ಟ್ಯತೆ.
ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಹಳಷ್ಟು ವಿಜ್ಞಾನಕ್ಕೆ ಪ್ರೋತ್ಸಾಹಿಸಿದ ಸ್ವಾಮೀಜಿಯವರು ಅಪಾರ ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದ್ದಾರೆ.
ಯಾವ ಸ್ವಾಮೀಜಿಯವರು ಮಾಡದ ಈ ನೂತನ ಕೆಲಸ ಒಂದು ಮೈಲಿಗಲ್ಲೇ ಸರಿ. ಅವರ ಮಾತಿನಲ್ಲೇ ಹೇಳುವದಾದರೆ '' ಭಾರತೀಯರು ವಿದೇಶಗಳಲ್ಲಿ ಸಂಶೋಧನೆ ಮಾಡಿ ನೋಬಲ್ ಪಡೆಯುತ್ತಾರೆ, ಆದರೆ ನಮ್ಮ ಪ್ರತಿಭೆಗಳು ನಮ್ಮಲ್ಲೇ ಸಂಶೋಧನೆ ಮಾಡಿ ನೋಬಲ್ ಪಡೆಯಬೇಕು. ಅದೇ ದೇಶಕ್ಕೆ ಹೆಮ್ಮೆ, ಅದಕ್ಕಾಗಿಯೇ ಈ ಸಂಶೋಧನಾ ಕೇಂದ್ರ ನನ್ನ ಬಹುದಿನದ ಆಸೆ'' ಎಂದು ಸುಮಾರು 6 ವರ್ಷಗಳ ಹಿಂದೆ ಸ್ವಾಮೀಜಿ ಹೇಳಿದ್ದು ನನಗಿನ್ನೂ ನೆನಪಿದೆ. ಅದರಲ್ಲೂ ಭೌತಶಾಸ್ತ್ರದ ಬಗ್ಗೆ ವಿಶೇಷ ಒಲವು ಹೊಂದಿದ್ದ ಸ್ವಾಮೀಜಿ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತರಾಗಿದ್ದರು. ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಸ್ವಾಮೀಜಿಯವರು ಆಲಸ್ಯವನ್ನು ಎಂದಿಗೂ ಸಹಿಸುತ್ತಿರಲಿಲ್ಲ.
ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟು ನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಸ್ವಾಮೀಜಿ ಶಿಕ್ಷಣಕ್ಕೆ ಒಂದು ಹೊಸ ರೂಪ ನೀಡಿದ್ದರು. ಬೆಂಗಳೂರಿನ ಜನರು ಪೂರ್ಣಪ್ರಜ್ಞಕ್ಕೆ ಇಂದಿಗೂ ಮುಗಿ ಬೀಳುವುದು ಇದಕ್ಕಾಗಿಯೇ.
ಸ್ವಾಮೀಜಿಯಾಗಿ ದೇವರ ಧ್ಯಾನದಲ್ಲಿಯೇ ನಿರತನಾಗದೆ ಸಮಾಜಕ್ಕೆ ಉಪಕಾರ ಮಾಡುತ್ತಾ ಶಿಕ್ಷಣಕ್ಕೆ ಅನುಪಮ ಸೇವೆ ಸಲ್ಲಿಸಿದ ಶ್ರೀ ವಿಭುದೇಶರ ಅಗಲಿಕೆಯ ನೋವು ಬಹುದಿನ ನಮ್ಮನ್ನು ಕಾಡುತ್ತದೆ.
ಅವರದೆ ವಿದ್ಯಾ ಸಂಸ್ಥೆಯಲ್ಲಿ ಕಲಿತ ನನಗೆ ಅವರನ್ನು ಹತ್ತಿರದಿಂದ ನೋಡಿದ ಭಾಗ್ಯವಿದೆ. ಅವರ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮವನ್ನು ನಿರ್ವಹಣೆಯನ್ನು ಮಾಡಿದ್ದೇನೆ. ಅವರಿಂದ ಆಶೀರ್ವಾದ ಕೂಡ ಪಡೆದಿದ್ದೇನೆ. ಇಂದು ಬೆಳಗಿನ ಜಾವ ಬಂದ ಸುದ್ದಿ ಒಮ್ಮೆ ನನ್ನ ಮನಸ್ಸನ್ನೇ ವಿಚಲಿತಗೊಲಿಸಿತು. ಕೂಡಲೇ ಅವರ ಬಗೆಗೆ 4 ಮಾತುಗಳನ್ನಾಡುವ ಬಯಕೆ ತೋರಿತು.
ಅವರಿಲ್ಲ ನಿಜ, ಆದರೆ ಅವರ ಜ್ಞಾನದೀವಿಗೆ ಸದಾ ನಮ್ಮೊಂದಿಗಿದೆ. ಅವರ ದಿವ್ಯ ಉದ್ದೇಶ ನಮ್ಮೊಂದಿಗಿದೆ.
ಅವರ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ ನನ್ನ ಬಾಳಿಗೆ ಬೆಳಕಾದ ಆ ಆಧ್ಯಾತ್ಮದ ಹರಿಕಾರನಿಗೊಂದು ದಿವ್ಯ ನಮನ, ಭಾವಪೂರ್ಣ ನಮನ,
ಸದಾ ನಿಮ್ಮ ನೆನಪಿನಲ್ಲಿ, ನಿಮ್ಮದೇ ಮಾರ್ಗದರ್ಶನದ ಅಡಿಯಲ್ಲಿ ಮುನ್ನಡೆಯುತ್ತಾ....

ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರಿಗೆ ಕೊನೆಯ ದಿವ್ಯ ನಮನ

Saturday, September 12, 2009

ಮರೆಯದಿರು ಮನವೇ

- ಗುರು ಬಬ್ಬಿಗದ್ದೆ

ಮರೆಯಬೇಡ ಮರೆಯಬೇಡ ಮರೆಯಬೇಡ ನನ್ನ ಮನವೇ
ಮರೆತು ನೀನು ಮರುಗ ಬೇಡ ಮನದ ಪ್ರೇಮವೇ
ಕೊರಗಬೇಡ ಕೊರಗಬೇಡ ಕೊರಗಬೇಡ ಜೀವ ಸೆಲೆಯೇ
ಕೊರಗಿ ನೀನು ದುಡುಕಬೇಡ ಭಾವ ಬಿಂದುವೇ
ಸೊರಗಿ ಹೋದ ಮರವೂ ಕೂಡ ಮರಳಿ ಬಾಳ ಕಾಯುತಿಹುದು
ಪುನ: ಚಿಗುರಿ ಚಿಗುರಿ ಪುನ: ನಗುವ ತೋರ್ವದು
ಮುಗುದೆ ನೀನು ಮುದುಡಬೇಡ ಮುದದಿ ನಿನ್ನ ಅಪ್ಪಿಕೊಳುವೆ
ಕ್ಷಣದಿ ನೆನೆದು ನೆನೆದು ಕ್ಷಣದಿ ಬದುಕ ಬಯಸುವೆ
ಕಾಲನೆದೆಯ ಗರ್ಭದಲ್ಲಿ ಸತತ ಕೃಷಿಯು ನಡೆಯುತಿಹುದು
ಹುಟ್ಟು ಸಾವು ಸಾವು ಹುಟ್ಟು ವಿಧಿಯ ಬರಹವೋ
ಮನವಿದೆನ್ನ ಅರ್ಪಿಸಿಹೆನು ಕ್ಷಣದೊಳೆನ್ನ ವದನ ನೋಡು
ಕದನ ಸರಸ ಸರಸ ಕದನ ಬದುಕಿನಾಟವೋ

Friday, August 28, 2009

ಸ್ವೀಡಿಷ್ ಕಲಾವಿದೆಗೆ ಒಲಿದ ಓಡಿಸ್ಸಿ ನ್ರತ್ಯ


- ಗುರು ಬಬ್ಬಿಗದ್ದೆ

(ಈ ಲೇಖನವನ್ನು ಪ್ರಕಟಿಸಿದ ''ದಟ್ಸಕನ್ನಡ.ಕಾಮ್''''http://thatskannada.oneindia.in/nri/article/2009/0828-sweden-odissi-dancer-annette-pooja.html ಗೂ ಮತ್ತು ''ಕನ್ನಡಧ್ವನಿ'' ''http://www.kannadadhvani.com/node/846'' ಗೂ ಕ್ರತಜ್ನತೆಗಳು)


ಸಂಗೀತ ಸುಧೆಯೊಳಗೆ ಮೀಯದವರಾರು

ಕಾಲ್ಗೆಜ್ಜೆ ಸಪ್ಪಳಕೆ ಒಲಿಯದವರಾರು

ನ್ರತ್ಯದಲಿ ನಟರಾಜ ಸೂರೆಗೊಂಡನು ಮನವ

ದೀಪಕ ರಾಗವು ಬೆಳಗಿಸಿತು ಜಗವ


ಸಂಗೀತ ಮತ್ತು ನ್ರತ್ಯ ಎಂಥಹ ಅರಸಿಕರನ್ನು ರಸಿಕತೆಗೆ ಒಯ್ಯುತ್ತವೆ. ಅದೊಂದು ಅಮಲಿದ್ದಂತೆ, ಮನಸ್ಸಿನ ನೋವಿಗೆ ಸಂಜೀವಿನಿ ಇದ್ದಂತೆ, ಆನಂದದ ಸಾಗರದಂತೆ.

ಅದು ಶಾಸ್ತ್ರಬದ್ದ ಭಾರತೀಯ ಸಂಗೀತ-ನ್ರತ್ಯವೇ ಆಗಿರಬಹುದು ಇಲ್ಲವೆ ಪಾಶ್ಚಾತ್ಯರ ಪಾಪ್-ನ್ರತ್ಯ ವೇ ಆಗಿರಬಹುದು. ಅದರಲ್ಲೂ ಭಾರತೀಯ ನ್ರತ್ಯ ಪ್ರಕಾರಗಳಿಗೆ ಸಿಕ್ಕಷ್ಟು ಪ್ರಸಿದ್ದಿ ಜಗತ್ತಿನ ಯಾವ ನ್ರತ್ಯ ಪ್ರಕಾರಗಳಿಗೂ ಸಿಕ್ಕಿಲ್ಲ ಅಂದರೆ ಅತಿಶಯೋಕ್ತಿಯಲ್ಲ. ಆದರೆ ಭಾರತೀಯರಾದ ನಾವು ಅರೆ ಬೆತ್ತಲೆಯ ವಿದೇಶಿ ನ್ರತ್ಯವನ್ನೇ ಸವಿಯುತ್ತಾ ನಮ್ಮ ತನ ವನ್ನು ಮರೆಯುತ್ತಿದ್ದೇವೆ. ವಿದೇಶಿಯರು ಎಂದಕೂಡಲೇ ಕೇವಲ ಬೆತ್ತಲೆ ಕುಣಿಯುವವರು ಎನ್ನುವುದನ್ನು ನಮಗೆ ಗೊತ್ತಿಲ್ಲದೇ ಅಂದುಕೊಂಡುಬಿಟ್ಟಿದ್ದೇವೆ. ನಾವು ನಮ್ಮದನ್ನೇ ಬಿಟ್ಟು ಪರಕೀಯತೆಯನ್ನು ಮೈಗೂಡಿಸಿಕೊಂಡು ಸಂಸ್ಕ್ರತಿಯ ಅಧ:ಪತನಕ್ಕೆ ಕಾರಣೀಭೂತರಾಗುತ್ತಿದ್ದರೆ ಸದ್ದಿಲ್ಲದೆ ಸ್ವೀಡನ್ನಿನ ಮಹಿಳೆಯೊಬ್ಬರು ಭಾರತೀಯ ನ್ರತ್ಯದಲ್ಲಿ ಕಳೆದ ೧೫ ವರ್ಷಗಳಿಂದ ತಪಸ್ಸು ಮಾಡುತ್ತಿದ್ದಾರೆಂದರೆ ಆಶ್ಚರ್ಯವಾಗುತ್ತಿದೆಯೇ?

ಹೌದು, ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿರುವ ಅನಿಟ್ಟೆ ಪೂಜಾ (ಪೂಜಾ ಎನ್ನುವುದು ಓಡಿಸ್ಸಿ ಗುರು ಇಟ್ಟ ಹೆಸರು) ಕಳೆದ ೧೫ ವರ್ಷಗಳಿಂದ ಓಡಿಸ್ಸಿ ನ್ರತ್ಯ ಕಲಿಯುತ್ತಿದ್ದಾರೆ ಅಷ್ಟೇ ಅಲ್ಲ ಕಲಿಸುತ್ತಿದ್ದಾರೆ. ಭಾರತದ ಎಲ್ಲ ನ್ರತ್ಯ ಪ್ರಕಾರಗಳಲ್ಲೂ ಕೈಯ್ಯಾಡಿಸಿರುವ ಇವರು ಕೊನೆಯದಾಗಿ ಆರಿಸಿಕೊಂಡಿದ್ದು ಓಡಿಸ್ಸಿ ನ್ರತ್ಯವನ್ನು. ಹ್ರದಯಸ್ಪರ್ಶೀ ಅಭಿನಯ, ತಾಳಕ್ಕೆ ತಕ್ಕ ಹೆಜ್ಜೆ, ಹೆಜ್ಜೆಗೆ ತಕ್ಕ ಭಾವದ ಮೂಲಕ ಇಲ್ಲಿಯ ಜನರ ಕಣ್ಮಣಿಯಾಗಿದ್ದಾರೆ. ತಮ್ಮ ಹೆಸರಿನಲ್ಲಿ ಪೂಜಾ ಎನ್ನುವುದನ್ನು ಸೇರಿಸಿಕೊಂಡಿರುವ ಇವರದು ಸುಖೀ ಕುಟುಂಬ. ಇವರ ಗಂಡ ಲಿಯನಾರ್ಡೋ ಒಬ್ಬ ನಟ ಹಾಗೂ ಶಿಕ್ಷಕ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಒಬ್ಬಳು ಗಾಯತ್ರಿ, ಇನ್ನೊಬ್ಬಳು ಕರೀಷ್ಮಾ. ಇಬ್ಬರಿಗೂ ಇಟ್ಟ ಭಾರತೀಯ ಮೂಲದ ಹೆಸರು ಅವರ ಭಾರತ ಪ್ರೇಮಕ್ಕೆ ಹಿಡಿದ ಕನ್ನಡಿ.


ಫೋಟೋ: ಲಿಯೋನಾರ್ಡೋ ಸ್ಟೆಫಾನ್

ಮೂಲತ: ಸ್ವೀಡನ್ನಿನಲ್ಲಿಯೇ ಹುಟ್ಟಿ ಬೆಳೆದ ಅನಿಟ್ಟೆ ಪೂಜಾ, ತಮ್ಮ ತಂದೆಯವರಿಂದ ಸಂಗೀತ ಹಾಗೂ ನ್ರತ್ಯಗಳಲ್ಲಿ ಆಸಕ್ತಿ ತಳೆದರು. ನ್ರತ್ಯ ಇವರ ರಕ್ತದಲ್ಲಿಯೇ ಬೆಳೆದಿತ್ತು. ಆದರೆ ಅದು ಭಾರತದೊಂದಿಗೆ ವಿಸ್ತರಿಸುತ್ತದೆ ಎಂಬುದು ಅವರಿಗೂ ತಿಳಿದಿರಲಿಕ್ಕಿಲ್ಲ. ಥಿಯೇಟರ್ ಗಳಲ್ಲಿ ವೇಷ-ಭೂಷಣ ಮಾಡುವವರಾಗಿದ್ದ ಇವರು ಕ್ರಮೇಣ ನ್ರತ್ಯದ ಕಡೆಗೆ ಒಲಿದಿದ್ದೇ ಸೋಜಿಗದ ಕಥೆ.

”ಸ್ಟಾಕ್ ಹೋಮ್ ನಲ್ಲಿ ನಾಟಕ ಅಕಾಡೆಮಿಯಲ್ಲಿ ಕಲಿಯುತ್ತಿದ್ದಾಗ ಅನೇಕ ಏಷ್ಯಾದ ನಿರ್ದೇಶಕರ ಜೊತೆ ಕೆಲಸ ಮಾಡಿದೆ. ಆಗಲೇ ಭಾರತ ನ್ರತ್ಯದ ಬಗೆಗೆ ಜಗತ್ತಿನಾದ್ಯಂತ ಇರುವ ಕೌತುಕತೆ, ಗೌರವ ನನ್ನಲ್ಲಿ ಹೊಸ ಸಂಚಲನ ಉಂಟು ಮಾಡಿತು. ಒಮ್ಮೆ ಕೂಚಿಪುಡಿ ನ್ರತ್ಯವನ್ನು ವೀಕ್ಷಿಸಿದೆ, ಆ ನ್ರತ್ಯಕ್ಕೆ ಸಿಕ್ಕಿದ ಅದ್ಭುತ ಗೌರವಕ್ಕೆ ಬೆರಗಾದೆ, ಆಗಲೇ ಅನ್ನಿಸಿತು, ಭಾರತೀಯ ನ್ರತ್ಯದಲ್ಲಿ ಏನೋ ಇದೆ, ಅದನ್ನು ಕಲಿಯಬೇಕು, ಅಸ್ವಾದಿಸಬೇಕು” ಎನ್ನುವ ಪೂಜಾ ಭಾರತೀಯ ನ್ರತ್ಯ ಪ್ರಕಾರಗಳಲ್ಲಿ ಬಹಳಷ್ಟು ಸಂಶೋಧನೆ ಮಾಡಿದ್ದಾರೆ.

ಉಡುಪಿಯಲ್ಲಿ ಯಕ್ಷಗಾನ ವೇಷ-ಭೂಷಣ ಮಾಡುವುದನ್ನು ಕಲಿತ ಇವರು ನಂತರ ಹತ್ತು ಹಲವು ಭಾರತೀಯ ನ್ರತ್ಯಗಳಿಗೆ ವೇಷ-ಭೂಷಣ ಹಾಕುವುದನ್ನು ಕಲಿತರು. ಇದೇ ಸಂದರ್ಭದಲ್ಲಿ ಓರಿಸ್ಸಾದ ಪುರಿ ಜಗನ್ನಾಥ ರಥೋತ್ಸವವನ್ನು ವೀಕ್ಷಿಸುವ ಅವಕಾಶ ಇವರಿಗೆ ಲಭಿಸಿತು. ಅಲ್ಲಿಯ ಆ ಮನಮೋಹಕ ಓಡಿಸ್ಸಿ ನ್ರತ್ಯ, ಅವರ ಶ್ರದ್ಧೆ, ಜಗನ್ನಾಥನಲ್ಲಿ ತಮ್ಮನ್ನು ಸಮರ್ಪಿಸಿಕೊಳ್ಳುವ ಪರಿ, ಅವನನ್ನು ಒಲಿಸಿಕೊಳ್ಳುವ ನಾಟ್ಯ ಶೈಲಿ ಇವರ ಜೀವನ ಶೈಲಿಯನ್ನೇ ಬದಲಿಸಿಬಿಟ್ಟಿತು. ಅಂದೇ ನಿರ್ಧರಿಸಿದರಂತೆ ” ಇದೇ ನ್ರತ್ಯವನ್ನು ತಾನು ಕಲಿಯಬೇಕು, ಅದರ ಸತ್ವವನ್ನು ಅರಿಯಬೇಕು, ಆ ಜಗನ್ನಾಥನಲ್ಲಿ ತಲ್ಲೀನವಾಗುವ ಯಾವ ಮಹಾಶಕ್ತಿ ಈ ಓಡಿಸ್ಸಿ ನ್ರತ್ಯಕ್ಕಿದೆ ಎನ್ನುವುದನ್ನು ತಾವು ಮನಗಾಣಬೇಕು” ಎಂಬುದಾಗಿ.

ಇದೇ ಸಂದರ್ಭದಲ್ಲಿ ಭಾರತೀಯ ನ್ರತ್ಯ ಅಕಾಡೆಮಿಯ ಫೆಲೋಶಿಪ್ ಲಭಿಸಿತು. ಅಲ್ಲಿಂದ ಅನಿಟ್ಟೆ ಪೂಜಾ ತಿರುಗಿ ನೋಡಲಿಲ್ಲ. ಮೂರು ವರುಷ ಕುಚಿಪುಡಿ ಕಲಿತರು. ಇದರ ನಡುವೆಯೇ ಕೇರಳದ ಸಾಂಪ್ರದಾಯಿಕ ನ್ರತ್ಯ ”ಥೆಯ್ಯಾಮ್” ನೋಡುವ ಸೌಭಾಗ್ಯ ಒದಗಿತು. ಆದರೆ ಅದು ಪುರುಷರಿಗೆ ಮಾತ್ರ ಎಂದು ತಿಳಿದು ಬೇಸರಗೊಂಡರು. ತದ ನಂತರ ರಾಜಸ್ಥಾನದ ಪ್ರಸಿದ್ಧ ನ್ರತ್ಯ ”ಕಲಬೆಲಿಯಾ” ನ್ರತ್ಯ, ಹಠಯೋಗ ಶಿಕ್ಷಣ, ಕಥಕ್ಕಳಿ, ಭರತನಾಟ್ಯ ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಂಡರು. ”ಕಲೆ ಸಾಧಕನ ಸೊತ್ತು” ಎಂಬುದನ್ನು ಅಕ್ಷರಷ: ನಿಜ ಮಾಡಿದ ಅನಿಟ್ಟೆ ಪ್ರಸಿದ್ಧ ಓಡಿಸ್ಸಿ ನ್ರತ್ಯ ಗುರು ಶ್ರೀ ಗುರು ಹರಿಕ್ರಷ್ಣ ಬೆಹ್ರಾ ರಲ್ಲಿ ೬ ವರ್ಷಗಳ ಕಾಲ ನ್ರತ್ಯಾಭ್ಯಾಸ ಮಾಡಿದರು. ಇದೇ ಸಂದರ್ಭದಲ್ಲಿ ಒಂದೂವರೆ ವರ್ಷದ ಮಗಳನ್ನು ಬಿಟ್ಟಿರಲಾಗದ, ನ್ರತ್ಯವನ್ನು ಬಿಡಲೊಲ್ಲದ ದ್ವಂದ್ವ ಇವರನ್ನು ಕಾಡಿತು. ಕೊನೆಗೂ ಗೆದ್ದದ್ದು ಓಡಿಸ್ಸಿ ನ್ರತ್ಯವೇ. ತಮ್ಮ ಮಗಳನ್ನು ತಮ್ಮೊಂದಿಗೆ ಕೂರಿಸಿಕೊಂಡೇ ನ್ರತ್ಯ ಕಲಿತು ಶಹಬ್ಬಾಸ್ ಎನಿಸಿಕೊಂಡರು.


ಫೋಟೋ: ಅವಿನಾಶ್

ಸುಂದರ ಅಭಿನಯ, ತನ್ನ ನ್ರತ್ಯದೊಳಗಿನ ಭಾವನೆಗಳ ಮೇಲಿನ ಹಿಡಿತ, ಭಾರತೀಯ ಸಂಸ್ಕ್ರತಿಯ ಬಗೆಗಿನ ಆಳವಾದ ಜ್ನಾನ, ಕಥಾ-ಪುರಾಣಗಳ ವಿಶ್ಲೇಷಣೆ, ಎಂದೂ ತಪ್ಪದ ಗೆಜ್ಜೆಯೊಂದಿಗಿನ ಹೆಜ್ಜೆ ಅನಿಟ್ಟೆ ಪೂಜಾ ಅವರನ್ನು ಓಡಿಸ್ಸಿ ನ್ರತ್ಯ ರಂಗದ ಪ್ರತಿಭಾನ್ವಿತ ಕಲಾವಿದೆಯನ್ನಾಗಿ ಮಾಡಿವೆ. ”ವಿದ್ಯಾ ವಿನಯೇನ ಶೋಭಿತೇ” ಎನ್ನುವಂತಿರುವ ಇವರು ಸ್ವೀಡನ್ನಿನ ಅದೇಷ್ಟೋ ಮಕ್ಕಳಿಗೆ ಓಡಿಸ್ಸಿ ನ್ರತ್ಯವನ್ನು ಕಲಿಸುತ್ತಿದ್ದಾರೆ. ತಮ್ಮ ಗಂಡನೊಂದಿಗೆ ಸೇರಿಕೊಂಡು ”ವಿಶ್ವ ನ್ರತ್ಯ ಸಂಘ (World Dance Academy) ಸಮಯ ಸಿಕ್ಕಾಗಲೆಲ್ಲ ಭಾರತಕ್ಕೆ ಭೇಟಿ ನೀಡುವ ಪೂಜಾ ಪ್ರಸ್ತುತ ಅರುಣಾ ಮೊಹಾಂಟಿಯವರಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಸ್ವೀಡಿಷ್ ಸರಕಾರದಿಂದ ಇವರಿಗೆ ಫೆಲೋಶಿಪ್ ಲಭಿಸಿದ್ದು ಅದು ನ್ರತ್ಯ ಕಲಿಯಲು ಹಾಗೂ ಭಾರತೀಯ ಸಂಸ್ಕ್ರತಿ ಅರಿಯಲು ಸಹಕಾರವಾಯಿತು ಎನ್ನುತ್ತಾರೆ ಅನಿಟ್ಟೆ ಪೂಜಾ. ”ಥೆಯ್ಯಾಮ ಮತ್ತು ಕಥಕ್ಕಳಿ ಕಲಿತಿದ್ದರಿಂದ ರಾಮಾಯಣ ಮತ್ತು ಮಹಾಭಾರತ ಕಥೆ ತಿಳಿಯಲು ಅನುಕೂಲವಾಯಿತು. ಭಾರತೀಯ ಸಂಸ್ಕ್ರತಿ ಮತ್ತು ಪರಂಪರೆ ನಿಜಕ್ಕೂ ಶ್ರೀಮಂತವಾದದ್ದು. ಬಹುಶ: ಇದಕ್ಕಾಗಿಯೇ ಭಾರತೀಯ ನ್ರತ್ಯ ಇಂದಿಗೂ ಚಿರನೂತನ, ದಿವ್ಯ ಚೇತನ” ಎನ್ನುವ ಪೂಜಾ ಅವರು ಭಾರತದ ಉದ್ದಗಲಕ್ಕೂ ಸಂಚರಿಸಿದ್ದಾರೆ. ಭಾರತವನ್ನು ಬಹುವಾಗಿ ಪ್ರೀತಿಸುವ ಇವರಿಗೆ ತಮ್ಮ ಮಕ್ಕಳಿಗೂ ಆ ಸಂಸ್ಕ್ರತಿಯನ್ನು ತಿಳಿಸುವ ಹಂಬಲವಿದೆ. ಭಾರತದಾದ್ಯಂತ ಹಲವಾರು ಕಡೆ ನ್ರತ್ಯ ಕಾರ್ಯಕ್ರಮ ನೀಡಿರುವ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದೀಗ ಸ್ವೀಡನ್ನಿನ ಗೊಥೆನ್ಬರ್ಗ್ ನಲ್ಲಿ ತಮ್ಮ ನ್ರತ್ಯ ಶಾಲೆ ನಡೆಸುತ್ತ ಇಲ್ಲಿಯೂ ನ್ರತ್ಯ ಕಾರ್ಯಕ್ರಮ ನೀಡುತ್ತಾ ಇಲ್ಲಿಯ ಜನರ ಮನ ಗೆದ್ದಿದ್ದಾರೆ.

ದೇಶಾಭಿಮಾನ ಎನ್ನುವುದು ಎಲ್ಲಿ? ಹೇಗೆ? ಟಿಸಿಲೊಡೆಯುತ್ತದೆ ಎಂದು ಹೇಳುವುದು ಕಷ್ಟ. ಅದು ಯಾವ ರೂಪದಲ್ಲಿ ಇರುತ್ತದೆಯೋ ಬಲ್ಲವರಾರು. ದೇಶದಲ್ಲಿದ್ದೇ ಪರಕೀಯರಾಗುವುದು, ಪರಕೀಯರಾಗಿದ್ದುಕೊಂಡೇ ದೇಶವನ್ನು ಪ್ರೀತಿಸುವುದು ಸೋಜಿಗವಲ್ಲವೇ? ನಮ್ಮ ಸಂಸ್ಕ್ರತಿ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ಅನಿಟ್ಟೆ ಪೂಜಾ ಅವರನ್ನು ಅಭಿನಂದಿಸಲೇಬೇಕು.


Saturday, August 22, 2009

ತಮಗೆಲ್ಲರಿಗೂ ಧನ್ಯವಾದಗಳು..

ಆತ್ಮೀಯರೇ,

''ಸಾಗರದಾಚೆಯ ಇಂಚರ '' ಕವನ ಸಂಕಲನ ನನ್ನ ಮೊದಲ ಪುಸ್ತಕ. ಕಳೆದ ತಿಂಗಳು ಇದು ಬಿಡುಗಡೆಗೊಂಡ ವಿಷಯ ತಮಗೆಲ್ಲ ತಿಳಿದೇ ಇದೆ. ಕೆಲಸದ ಒತ್ತಡದಿಂದ ಬ್ಲಾಗ್ ಗೆ ಬರಲಾಗುತ್ತಿಲ್ಲ. ಅದಕ್ಕೆ ಕ್ಷಮೆ ಇರಲಿ.

ತಮಗೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ನನ್ನ ಕವನ ಸಂಕಲನ ಬಿಡುಗಡೆಗೊಳ್ಳಲು ಸಹಕರಿಸಿದ ಎಲ್ಲ ನಲ್ಮೆಯ ಮಿತ್ರ ಮಿತ್ರೆಯರಿಗೆ ಈ ಸಂಧರ್ಬದಲ್ಲಿ ಧನ್ಯವಾದ ಅರ್ಪಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ , ಪ್ರೀತಿ, ಹಾರೈಕೆ ಸದಾ ಹೀಗೆಯೇ ಇರಲಿ.

ಕವನ ಸಂಕಲನಕ್ಕೆ ಮೆಚ್ಚುಗೆಯ ನುಡಿಯಾಡಿದ ಶ್ರೀ ಕೆ ಏನ್ ಹೊಸಮನಿಯವರಿಗೆ ಧನ್ಯವಾದ.

ಕವನ ಸಂಕಲನಕ್ಕೆ ಮುನ್ನುಡಿ ಬರೆದ ಕವಿ ಅಶ್ವಥ್ ಭಾರದ್ವಾಜರಿಗೆ ಧನ್ಯವಾದ.
ಕವನ ಸಂಕಲನವನ್ನು ಅಂದವಾಗಿ ಮುದ್ರಿಸಿದ ಸೂರ್ಯ ಪ್ರಿಂಟರ್ಸ್ ಅವರಿಗೆ ಧನ್ಯವಾದ
ಕವನಗಳಿಗೆ ರಾಗ ಒದಗಿಸಿ ಇಂಪಾಗಿ ಹಾಡಿದ ವಾಣಿ ಹರ್ಡಿಕರ್ ಹಾಗೂ ಅವರ ತಂಡಕ್ಕೆ ಧನ್ಯವಾದ



ಸಮಾರಂಭಕ್ಕೆ ಪ್ರತ್ಯಕ್ಷ ಸಾಕ್ಷಿಯಾದ ನಮ್ಮೂರ ಜನತೆಗೆ, ಒಲವಿನ ಜೈ ವಿಠಲ ಬಳಗಕ್ಕೆ ತುಂಬು ಹ್ರದಯದ ಕ್ರತಜ್ನತೆ.


ನನ್ನ ಕವನಕ್ಕೆ ಸದಾ ಚಿಂತನೆಯ ವೇದಿಕೆಯನ್ನೊದಗಿಸಿದ ಎಲ್ಲ ಬ್ಲಾಗ್ ಮಿತ್ರರಿಗೂ ಧನ್ಯವಾದಗಳು.

ಪ್ರೀತಿ ಹೀಗೆಯೇ ಇರಲಿ.

ಸದ್ಯದಲ್ಲಿಯೇ ಇಟಲಿಯ ಮನಮೋಹಕ ತಾಣಗಳ ಬಗೆಗೆ ಪ್ರವಾಸ ಕಥನ ಆರಂಬಿಸುತ್ತಿದ್ದೇನೆ.

ನಿಮ್ಮ ಪ್ರೀತಿಯ ಗುರು

Wednesday, August 5, 2009

ರಕ್ಷಾ ಬಂಧನ ದ ಹಾರ್ದಿಕ ಶುಭಾಶಯಗಳು.

ಆತ್ಮೀಯರೇ,
ತಮ್ಮೆಲ್ಲರಿಗೂ ರಕ್ಷಾ ಬಂಧನ ದ ಹಾರ್ದಿಕ ಶುಭಾಶಯಗಳು.
ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ,
ವಸುದೈವ ಕುಟುಂಬಕಂ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ
ತಮ್ಮ ಗುರು

Sunday, July 5, 2009

ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಒಲವಿನ ಆಮಂತ್ರಣ

ಆತ್ಮೀಯರೇ...

''ಸಾಹಿತ್ಯ ನನಗೆ ಹೊಸದು, ತೋಚಿದ್ದನ್ನು

ಬರೆದೆ, ಬರೆದದ್ದನ್ನು ಹಂಚಿಕೊಳ್ಳುವ ಬಯಕೆ''

ಇದೇ ಬರುವ ಜುಲೈ 18, 2009 ರಂದು ನನ್ನ ಪ್ರಪ್ರಥಮ ಕವನ ಸಂಕಲನ

''ಸಾಗರದಾಚೆಯ ಇಂಚರ''

ಬಿಡುಗಡೆಗೊಳ್ಳಲಿದೆ.

ತಮಗೆಲ್ಲ ಆದರದ ಸ್ವಾಗತ,ಸುಸ್ವಾಗತ......

ಸಮಯ : ಮಧ್ಯಾನ್ಹ 3 ಗಂಟೆಗೆ,

ಸ್ಥಳ : ಗಜಾನನ ಪ್ರೌಡಶಾಲೆ ಸಂಪಖಂಡ,ಸಿರ್ಸಿ

ಕವನ ಸಂಕಲನ ಬಿಡುಗಡೆ : ಶ್ರೀ ಕೆ ಏನ್,ಹೊಸಮನಿ , ಪ್ರಾಂಶುಪಾಲರು, ಮಾರಿಕಾಂಬ ಜೂನಿಯರ್ ಕಾಲೇಜ್ ಅವರಿಂದ.

ಕವನ ಸಂಕಲನ ವಿಮರ್ಶೆ : ಶ್ರೀ ಅಶ್ವಥ್ ಭಾರದ್ವಾಜ,ಕನ್ನಡ ಉಪನ್ಯಾಸಕರು, ಉಡುಪಿ ಅವರಿಂದ

ಮುಖ್ಯ ಅತಿಥಿಗಳಾಗಿ : ಎಸ್.ಏನ್.ಹೆಗಡೆ,ಮುಖ್ಯೋಪಾದ್ಯಾಯರು , ಶ್ರೀ ಗಜಾನನ ಪ್ರೌಢಶಾಲೆ ಸಂಪಖಂಡ , ಸಿರಸಿ

ಅದ್ಯಕ್ಷರು : ಶ್ರೀ ಎಸ್ ಎಸ್ ಹೆಗಡೆ, ಶ್ರೀ ಗಜಾನನ ವಿದ್ಯಾವರ್ಧಕ ಸಂಘ, ಸಂಪಖಂಡ

ಅದೇ ದಿನ ಸಂಜೆ 5-30 ರಿಂದ ಹೆಸರಾಂತ ಹಿಂದುಸ್ತಾನೀ ಗಾಯಕಿ

ಶ್ರೀಮತಿ ವಾಣಿ ಹರ್ಡಿಕರ್

ಅವರಿಂದ

''ಹಿಂದುಸ್ತಾನೀ ಗಾಯನ''

ಕಾರ್ಯಕ್ರಮವಿದೆ.

ನೀವೆಲ್ಲರೂ ಬನ್ನಿ,

ನಿಮ್ಮವರನ್ನೂ ಕರೆತನ್ನಿ.


ನಿಮ್ಮ ನಿರೀಕ್ಷೆಯಲ್ಲಿ ಗುರು ಬಬ್ಬಿಗದ್ದೆ


Tuesday, June 30, 2009

ಸಾಗರದಾಚೆಯ ಇಂಚರ...

ಇಂಚರವೋ, ಇಂಚರವೋ

ಸಾಗರದಾಚೆಯ ಇಂಚರವೋ

ಗೀತೆಯಲಿ, ಸಂಗೀತದಲಿ, ಅಂಚಲಿ ಮಿಂಚಿದ ಇಂಚರವೋ


ಜಿಗಿದಾಡಿವೆ ಬಾನಿಗೆ ಹಕ್ಕಿಗಳು

ಗೂಡನು ಮರೆತು ಹೋಗದಿರಿ

ನಭದಲಿ ಸೆಳೆಯುವ ಛಲವಿಹುದು

ಬೇರನು ಬಿಟ್ಟು ತೊಲಗದಿರಿ


ಹೊಸತನ, ಹೊಸಕ್ಷಣ ಹೊಸದು ನಿಜ

ಹೊಸದರಲಿ ಎಲ್ಲವೂ ಸಹಜ

ನಿಮ್ಮೆಲ್ಲರ ತನುವಿದು ಜತನದಲಿ

ಸತತವೂ ಇಹುದು ತಾಯ್ನಾಡಿನಲಿ


ಗೂಡಿಗೆ ಅದರದೇ ಅಧರವಿದೆ

ಉದರವ ಪೊರೆಯುವ ಸೆಳೆತವಿದೆ

ಸಾಗರದಾಚೆಗೆ ಸೇರದಿರು

ನೆಲವಿದು ನಿನಗೆ ಕಾಯುತಿದೆ

Wednesday, June 17, 2009

ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ..


- ಗುರು ಬಬ್ಬಿಗದ್ದೆ
ಜಗತ್ತೇ ಹಾಗೆ, ಇಂದಿನ ಸೂರ್ಯ ಸಂತಸ ನೀಡಿದರೆ ನಾಳೆ ಅದೇ ಸೂರ್ಯನ ತಾಪ ಹೆಚ್ಚಾದಾಗ ಖಳನಾಯಕನೂ ಆಗುತ್ತಾನೆ. ಅದು ಪ್ರತಿಯೊಂದು ಜೀವ ಜಂತುಗಳಿಗೂ ಅನ್ವಯಿಸುತ್ತದೆ ಅಲ್ಲವೇ? ಇಂದು ಇಷ್ಟವಾದ ವ್ಯಕ್ತಿ ನಾಳೆ ಕಷ್ಟವಾಗುತ್ತಾನೆ. ಮೊನ್ನೆ ಮೊನ್ನೆ ಯವರೆಗೆ ಇಷ್ಟವಾದ ಅಮ್ಮ-ಅಪ್ಪ ನ ಮೇಲೆ ಒಮ್ಮೆಲೇ ಕೋಪ ಬರುತ್ತದೆ. ಮನದನ್ನೆಯ ಮುನಿಸಿಗೆ ನಾವೇ ಕಾರಣವಾಗುತ್ತೇವೆ. ಹೀಗೇಕೆ? ಎಂದು ವಿಚಾರಿಸಿದರೆ ಉತ್ತರ ಸಿಗದ ಹತ್ತಾರು ಪ್ರಶ್ನೆಗಳು ಮನಸ್ಸನ್ನು ಕೊರೆಯಲು ಆರಂಬಿಸುತ್ತವೆ. ಪ್ರಶ್ನೆಗಳೇ ಇನ್ನೊಂದು ಪ್ರಶ್ನೆಯಾಗಿ ಸಮಸ್ಯೆಗಳ ಸುರಿಮಳೆಯನ್ನೇ ಸೃಷ್ಟಿಸುತ್ತವೆ. ಮೊನ್ನೆ ಮೊನ್ನೆಯ ತನಕ ಇಷ್ಟವಾಗುತ್ತಿದ್ದ ಬಿ.ಜೆ.ಪಿ. ಚುನಾವಣೆಯಲ್ಲಿ ಯಾಕೆ ಕಷ್ಟವಾದಳೋ? ಗೊತ್ತಿಲ್ಲ. ಮೆಚ್ಚಿದ ಮಡದಿಗೆ ಕಿಚ್ಚು ಹಚ್ಚುವ ತವಕ ಅದೆಲ್ಲಿಂದ ಬಂತೋ? ಗೊತ್ತಿಲ್ಲಾ. ನೆಚ್ಚಿದ ಸ್ನೇಹಿತನಲ್ಲಿ ಕಿಚ್ಚಾಡಿದ ಮನಸ್ಸು ಹೀಗೆಕಾಯಿತೋ ಗೊತ್ತಿಲ್ಲ. ಇದು ಪ್ರತಿಯೊಬ್ಬನ ಜೀವನದಲ್ಲೂ ಒಂದು ಪರೀಕ್ಷಾ ಕಾಲ. ಒಂದು ಸಾಹಸದ ಘಟ್ಟ. ಇದನ್ನು ಅತ್ಯಂತ ತಾಳ್ಮೆಯಿಂದ ದಾಟಬೇಕು. ಅತ್ತ ಧರಿ, ಇತ್ತ ಪುಲಿ ಎನ್ನುವ ಮನಸ್ಥಿತಿ. ಇದೇನಪ್ಪ ಏನೇನೋ ಬಡ ಬಡಾಯಿಸ್ತ ಇದಾನೆ. ತಲೆ ಗಿಲೆ ಕೆಟ್ಟು ಹೋಯ್ತಾ ಅಂತಿರಾ? ನಾನು ಹೇಳೋಕೆ ಹೊರಟಿರೋದು ಮೊನ್ನೆಯಷ್ಟೇ ಕ್ರಿಕೆಟ್ ನಿಂದ ಸೂಪರ್ 8 ರ ಘಟ್ಟದಿಂದ ಒಂದೂ ಪಂದ್ಯ ಗೆಲ್ಲಲಾಗದೆ ನಿರ್ಗಮಿಸಿದ ಧೋನಿ ಬಳಗದ ಕುರಿತು. ಹೊರ ಬಿದ್ದ ಕೂಡಲೇ ಹೊರಟ ಮೊದಲ ಉದ್ಘಾರ '' ಬರು ಬರುತ್ತಾ ರಾಯರ ಕುದುರೆ ಕತ್ತೆಯಾಯಿತೆ?'' ಎನ್ನೋದು.
ವಿಶ್ವ ಚುಟುಕು ಕ್ರಿಕೆಟ್ ನ ಆಧಿಪತ್ಯ ಸ್ಥಾಪಿಸಿದ್ದ ಭಾರತ ಇಷ್ಟೊಂದು ಹೀನಾಯವಾಗಿ ಸೋಲುತ್ತದೆ ಎಂದರೆ ಎಂಥವರಿಗೂ ಬೇಸರವಾಗದೆ ಇರದು. ಅದು ನಿನ್ನೆ 130 ರನ್ ಹೊಡೆಯಲಾಗದೆ ಹೋದದ್ದು. ಘಟಾನುಘಟಿಗಳ ದಂಡೆ ಇದ್ದರೂ ದಕ್ಷಿಣ ಆಫ್ರಿಕಾದ ಕರಾರುವಕ್ಕಾದ ದಾಳಿ ಎದುರಿಸಲಾಗದೆ ಇದ್ದದ್ದು ಮಿಸ್ಟರ್ ಕೂಲ್ ಖ್ಯಾತಿಯ (ಅಪಖ್ಯಾತಿ ) ಧೋನಿಯ ನಾಯಕತ್ವದ ಬಗೆಗೆ ಹಲವು ಸಂಶಯಗಳನ್ನು ಬೆಟ್ಟು ಮಾಡಿದೆ. ಏನಾಯಿತು ಭಾರತ ಕ್ರಿಕೆಟ್ ಗೆ. ಸೋತದ್ದು ಬೇಸರವಿಲ್ಲ. ಸೋಲು ಗೆಲುವಿನ ಸೋಪಾನ ಅನ್ನೋಣ. ಆದರೆ ಸೋತ ರೀತಿ ಇದೆಯಲ್ಲ ಅದು ನಾಚಿಕೆ ತರುವಂತದ್ದು. ನಮ್ಮ ನಾಯಕ , ನಾಯಕತ್ವದ ಕೆಲವು ನಿರ್ಧಾರಗಳು ನಮ್ಮನ್ನು ಸೋಲಿನ ಅಂಚಿಗೆ ದೂಡಿದವು ಎಂದರೆ ತಪ್ಪಾಗಲಿಕ್ಕಿಲ್ಲ. ನಿಜ, ಇಲ್ಲಿ ಕುಳಿತು ಬರೆಯುವುದು ಸುಲಭ, ಆದರೆ ಅಲ್ಲಿ ಮೈದಾನದಲ್ಲಿ ಅಂಥಹ ಒತ್ತಡ ನಿರ್ವಹಿಸುವುದು ಎಷ್ಟು ಕಷ್ಟ ಎನ್ನುವುದು ಧೋನಿಗೆ ಮಾತ್ರ ಗೊತ್ತು. ''ಅದಕ್ಕೆ ಅಲ್ಲವೇ ಅವನನ್ನು ನಾಯಕನನ್ನಾಗಿ ಮಾಡಿದ್ದು''. ಅಷ್ಟಕ್ಕೂ ಧೋನಿ ತೆಗೆದುಕೊಂಡ ನಿರ್ಧಾರವಾದರೂ ಎಂಥದ್ದು. ಮಹತ್ವದ ವೆಸ್ಟ್ ಇಂಡೀಸ್ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಇಶಾಂತ ಶರ್ಮನಿಗೆ ಓವರ್ ನೀಡಿದ್ದು. ಅವನೋ, ''ಬಾಲಿಂಗ್ ಮಾಡುವುದು ರನ್ ಕೊಡುವುದಕ್ಕೆ ಎಂದು ತಿಳಿದಿರುವಂತಿದೆ''. ಒಂದಾದರೂ ಪಂದ್ಯದಲ್ಲಿ ಒಳ್ಳೆಯ ಪ್ರದರ್ಶನ ಅವನಿಂದ ಬಂದಿದ್ದರೆ ಮುಂದುವರಿಸಬಹುದಿತ್ತು. ಆದರೂ ಅವನು ತಂಡದಲ್ಲಿ ಮುಂದುವರಿದ. ಮಹತ್ವದ ಓವರ್ ಮಾಡಿದ ಹಾಗೂ ನಮ್ಮ ತಂಡದಲ್ಲೇ ಇದ್ದು ವೆಸ್ಟ್ ಇಂಡೀಸ್ ಪರವಾಗಿ ಆಡಿದ. ಆದರೂ 153 ರನ್ ಗೆಲ್ಲಲು ಸಾಕಾಗಿತ್ತು. ಕೆಟ್ಟ ಫಿಲ್ಡಿಂಗ್, ಕೆಟ್ಟ ಬೌಲಿಂಗ್, ಒಂದೇ ಎರಡೇ? ಅಂತೂ ಅಲ್ಲಿ ಸೋತೆವು.
ಆದರೂ ಭಾರತ ಕ್ರಿಕೆಟ್ ನ ವಿಶೇಷ ಶಕ್ತಿ ಎಂದರೆ ಸೋತಾಗ ಮೈ ಕೊಡವಿ ನಿಂತು ಎದ್ದು ಬಂದು ಎದುರಾಳಿಯ ಮೇಲೆ ಪ್ರಹಾರ ಮಾಡಿ ಗೆಲುವನ್ನು ತಮ್ಮದಾಗಿಸಿಕೊಳ್ಳುವುದು. ಇದನ್ನು ಎಷ್ಟೋ ಭಾರಿ ನೋಡಿದ್ದೇವೆ. ಇದಕ್ಕೆ ಬೆಂಬಲ ಕೊಡುವಂತೆ ಇಂಗ್ಲಂಡ್ ಪಂದ್ಯಕ್ಕೆ ಮುಂಚೆ ಧೋನಿ '' ನಾವು ಸಿಡಿದೆದ್ದು ಬರುತ್ತೇವೆ, ಗೆಲ್ಲುತ್ತೇವೆ, ಕಾದು ನೋಡಿ'' ಎಂಬಂಥ ಹೇಳಿಕೆ ನೀಡಿ ಎಲ್ಲ ಭಾರತೀಯರ ಮನದಲ್ಲಿ ಪುಳಕವನ್ನೇ ನೀಡಿದ. ಅದಕ್ಕೆ ತಕ್ಕಂತೆ ಇಂಗ್ಲಂಡ್ ಪಂದ್ಯದಲ್ಲಿ ಮೊದಲಿಗೆ ಅದ್ಭುತ ಬೌಲಿಂಗ್ ಪ್ರದರ್ಶನ ಬಂತು. ಅಂತೂ ಭಾರತ ಇಂದು ಗೆಲ್ಲುತ್ತದೆ ಎಂದೂ ಕಾಯುತ್ತ ಕುಳಿತದ್ದೇ ಬಂತು.
ಮಹತ್ವದ ಪಂದ್ಯದಲ್ಲಿ ಸ್ಟಾರ್ ಬೌಲರ್ ಓಜಾ ನನ್ನು ಆಡಿಸದೆ ರವಿಂದ್ರ ಜಡೇಜಾ ನನ್ನು ಆಡಿಸಿದರು. ಅದಕ್ಕೆ ಕೊಟ್ಟ ಕಾರಣ '' ಆತ ಒಬ್ಬ ಒಳ್ಳೆ ಬೌಲರ್ ಮಾತ್ರವಲ್ಲ, ಒಳ್ಳೆ batsman ಕೂಡಾ, ಒಳ್ಳೆ fielder ಕೂಡ''. ಹೇಳಿದ್ದಕ್ಕೆ ತಕ್ಕಂತೆ ಒಳ್ಳೆಯ ಬೌಲಿಂಗ್ ಏನೋ ಮಾಡಿದ. ಆದರೆ ಇಂಥಹ ಮಹತ್ವದ ಪಂದ್ಯದಲ್ಲಿ ಹರ್ಭಜನ್ wide ಜೊತೆ ಜುಗಲ್ ಬಂಧಿಯಾಡುತ್ತಿದ್ದ. ಮಹತ್ವದ ಪಂದ್ಯದಲ್ಲಿ ಆಟ ಹೊಸ ತಂತ್ರ ಕಲಿಯುತ್ತಿದ್ದ. ಚೆಂಡನ್ನು ಲೆಗ್ ಸೈಡ್ ನತ್ತ ತಿರುಗಿಸುತ್ತಾ ಬ್ಯಾಟ್ಸ್ ಮ್ಯಾನ್ ಗಳನ್ನೂ ಕಂಗೆಡಿಸುವ ಅವನ ಕಲೆ (ಅಲ್ಲ ಕೊಲೆಯೋ) ಭಾರತಕ್ಕೆ ಮುಳುವಾಯಿತು.
ಆದರೂ ಪಂದ್ಯ ಗೆಲ್ಲಬಹುದಿತ್ತು. ಆದರೆ ಯುವರಾಜ್ ನನ್ನು ಕಳಿಸುವ ಜಾಗಕ್ಕೆ ರವಿಂದ್ರ ಜಡೇಜಾ ನನ್ನು ಯಾಕೆ ಕಳಿಸಿದರೋ ಗೊತ್ತಿಲ್ಲ. ಅವನು ಮಾತ್ರ ಭವಿಷ್ಯದ ಅತ್ಯುತ್ತಮ Test Batsman ತಾನು ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟ. ಎಂಥಹ ಎಸೆತಗಳಿಗೂ ತಲೆ ಬಾಗಿ ನಮಸ್ಕರಿಸಿದನೆ ಹೊರತು ತಲೆ ಎತ್ತಿ ಹೊಡಿಯಲಿಲ್ಲ. ಅಲ್ಲಿಗೆ ರನ್ ರೇಟ್ ಕೂಡ ಕೈ ತಪ್ಪಿತ್ತು. ನಂತರ ಸೋಲು ಕೈ ಹಿಡಿಯಿತು. ಕೊನೆಯಲ್ಲಿ ಮಾಡಿದ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ. ಭಾರತ ಹೊರಗೆ ಬಿತ್ತು . ಅಲ್ಲಾ ತಾವೇ ತಮ್ಮ ಘೋರಿ ತೋಡಿಕೊಂಡರೋ? ಅವರನ್ನೇ ಕೇಳಬೇಕು.
ಕ್ರಿಕೆಟ್ ಭಾರತಕ್ಕೆ ಕೇವಲ ಆಟವಲ್ಲ. ಬಿಲಿಯನ್ ಗಟ್ಟಲೆ ಜನರ ಭಾವನೆಗಳೊಂದಿಗೆ ಬೆರೆತ ಸೇತುವೆಯದು. ನಮ್ಮೆಲ್ಲ ಸಮಯ ಬದಿಗಿಟ್ಟು ಕ್ರಿಕೆಟ್ ಎಂಬ ಮೂರ್ಖ ಆಟ ಗೊತ್ತಿದ್ದರೂ ನೋಡುತ್ತೇವೆ. ಇಷ್ಟೊಂದು ಬೆಂಬಲ ಇರುವ ಆಟಗಾರರು ಮೈದಾನದಲ್ಲಿ ಪಕ್ಕ ವ್ರತ್ತಿಪರತೆಯನ್ನು ತೋರಿಸದೇ ಇದ್ದರೆ ನೋವಾಗುವುದು ಸಹಜ. ಅದಕ್ಕೆ ಸೋತ ಕೂಡಲೇ ಧೋನಿ ದೇಶದ ಕ್ಷಮೆ ಯಾಚಿಸಿದ್ದು.
ಇಲ್ಲಿ ಪ್ರಶ್ನೆಯೇಳುವುದು ನಾಯಕನ ನಿರ್ಧಾರದ ಬಗ್ಗೆ. ಇದೆ ಧೋನಿಯನ್ನು ಆಕಾಶದೆತ್ತರಕ್ಕೆ ಏರಿಸಿದವರೂ ನಾವೇ ಅಲ್ಲವೇ? ಈಗ ಪಾತಾಳಕ್ಕೆ ಇಳಿಸಿದ್ದೇವೆ. ಧೋನಿಯ ಎಷ್ಟೋ ದಿಟ್ಟ ನಿರ್ಧಾರಗಳು ಭಾರತಕ್ಕೆ ಜಯ ತಂದುಕೊಟ್ಟಿವೆ. ಆದರೆ ಎಲ್ಲ ಸಂಧರ್ಭದಲ್ಲಿ ಪ್ರಯೋಗ ಮಾಡುವುದು ಸರಿಯಲ್ಲ ಅಲ್ಲವೇ. ಅದು ಮಹತ್ವದ ಪಂದ್ಯದಲ್ಲಿ. ವೀರೇಂದ್ರ ಸೆಹ್ವಾಗ ಇಲ್ಲದೆ ಆಡುವುದು ಎಷ್ಟು ಕಷ್ಟ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇಲ್ಲಿ ಯಾರನ್ನೂ ತೆಗಳಿ ಪ್ರಯೋಜನವಿಲ್ಲ.
ಸಂಪೂರ್ಣ ತಂಡವೇ ಇದಕ್ಕೆ ಹೊಣೆ. ಹೊಗಳಿ ಹೊಗಳಿ ಅಟ್ಟಕ್ಕೇರಿಸಿ ಈಗ ಬಯ್ದರೆ ಹೇಗೆ. ನಾವು ತಂಡವಾಗಿ ಆಡುವುದನ್ನೇ ಮರೆತ ಹಾಗಿದೆ. ದೇಶಕ್ಕಾಗಿ ಆಡುವಾಗ ವ್ಯಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಆಡಬೇಕಾದ ಅನಿವಾರ್ಯತೆಯಿದೆ. ಧೋನಿಯ ನಾಯಕತ್ವ ನಿಧಾನವಾಗಿ ನಶಿಸುತ್ತಿದೆಯೇ ಎಂಬ ಸಂಶಯ ಎಲ್ಲೆಡೆ ಕೇಳಿ ಬರುತ್ತಿದೆ. ಅವನ ನಿರ್ಧಾರಗಳು ಕಳೆದ ಕೆಲವು ಪಂದ್ಯಗಳಲ್ಲಿ ಭಾರತಕ್ಕೆ ಮುಳುವಾಗಿವೆ. ಅದೇನೇ ಇರಲಿ '' ರಾಯರ ಕುದುರೆ ಬರು ಬರುತ್ತಾ ಕತ್ತೆಯಾದ ಹಾಗೆ
ನಮ್ಮ ತಂಡವಾಗಬಾರದು''
ಮೊದಲು ಬಿಡುವಿಲ್ಲದ ವೇಳಾಪಟ್ಟಿಯನ್ನು ತೆಗೆದು ಹಾಕಿ ಆಟಗಾರರಿಗೆ ವಿಶ್ರಾಂತಿಯನ್ನು ನೀಡಿ ಅವರನ್ನು ಅಣಿಗೊಳಿಸಬೇಕಾಗಿದೆ. ಇಲ್ಲದಿದ್ದರೆ ವೆಸ್ಟ್ ಇಂಡೀಸ್ ಸರಣಿಯ ಫಲಿತಾಂಶವೂ ಇದಕ್ಕಿಂತ ವಿಭಿನ್ನವಾಗಿರದು.

Thursday, May 28, 2009

ಅವಳು...

- ಗುರು ಬಬ್ಬಿಗದ್ದೆ

 ಅವಳಿಂದಲೇ ಬಾಳು, ಅವಳಿಲ್ಲದೇ  ಗೋಳು

ನನ್ನೆದೆಯ ಬಾಂದಳದಿ ಹೊಳೆವ ತಾರೆ  ಅವಳು

ಚೈತ್ರಮಾಸದ ಕೋಗಿಲೆ, ಮಾಧುರ್ಯದವಳು

ಮುಂಗಾರಿನ ಮೋಡದ ಹಿಂದೆ ಸ್ವಾತಿಮುತ್ತು  ಅವಳು    

 

ನನ್ನ ಜೀವನ ಪುಟದಿ, ಅಕ್ಷರವಾದವಳು

ಸಕ್ಕರೆಯ ಮಾತಿನಲಿ, ಪ್ರೀತಿ ಕೊಟ್ಟವಳು

ನೋವಿರಲಿ, ನಲಿವಿರಲಿ, ಅನುಸರಿಸಿದವಳು

ತುಳಿದು ಸಪ್ತಪದಿ, ಸಂಗಾತಿಯಾದವಳು          

 

ಹೊತ್ತು ಹೆತ್ತವರನೆಲ್ಲ, ಬಿಟ್ಟೆಲ್ಲ ಬಂದಿಹಳು

ಚಿತ್ತದಿ ನನ್ನಯ ಮನವ, ಮುದದಿ ಗೆದ್ದಿಹಳು

ತಾಯಿ ಮಮತೆಯ ಎನಗೆ ಧಾರೆ ಎರೆದಿಹಳು

ಎನ್ನಯ ಸಾಧನೆಗೆ ಸ್ಪೂರ್ಥಿ ಚಿಲುಮೆಯು  ಅವಳು    

Monday, May 25, 2009

ಸ್ವೀಡನ್ನಿನ ಪತ್ರಿಕೆಯಲ್ಲೊಂದು ನನ್ನ ಬಗೆಗಿನ ಬರಹ....

ಇದೆ ತಿಂಗಳು ಸ್ವೀಡನ್ನಿನ ಪತ್ರಿಕೆಯೊಂದು ನನ್ನ ಇಂಟರ್ವ್ಯೂ ತೆಗೆದುಕೊಂಡು ಅದನ್ನು ಪ್ರಕಟಿಸಿದೆ. ನನ್ನ ಸಂಶೋಧನೆಯ ಜೊತೆಗೆ ಕ್ರಿಕೆಟ್ ಆಟದ ಬಗೆಗೂ ಅದರಲ್ಲಿ ವರ್ಣಿಸಿದ್ದಾರೆ. ಇದನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
 


ತಮ್ಮವ 

ಗುರು ಬಬ್ಬಿಗದ್ದೆ

Thursday, May 21, 2009

ವಾಸ್ತವತೆ.....

  -ಗುರು ಬಬ್ಬಿಗದ್ದೆ


ಹೊತ್ತು ಮೂಡುವ ಮೊದಲೇ ಹೊತ್ತಿ ಉರಿಯಿತು ಬೆಂಕಿ
ಹಚ್ಚ ಹಸುರಿನ ಹಸುಳೆ ಬಾಳದಾರಿಯ ಕನಸು
ಹಚ್ಚನೆಯ ಕೆಸರಿನಲಿ ನುಚ್ಚು ನೂರಾಯಿತು 

ನಿತ್ಯ ಬರುವ ಗಾಳಿ ಎತ್ತಿ ತಂದಿತು ಉರಿಯ
ನಗುವ ಮರೆಸುತ ಮನದಿ ವಿಷ ತುಂಬಿತು
ಜಾತಿ-ಜಾತಿಯ ನಡುವೆ ದ್ವೇಷಾಸೂಯೆಯ ಬೆಂಕಿ
ಜಾತ್ಯಾತೀತತೆ ನಮ್ಮ ಕನಸಾಯಿತು

ಕಣ್ಣ ಬೆಳಗುವ ಬೆಳಕು ಕಣ್ಣನ್ನೇ ಕೊರೆದಿತ್ತು
ಹಣ್ಣ ಕೊಯ್ಯುವ ಕತ್ತಿ ಕತ್ತು ಕೊಯ್ದಿತ್ತು
ನಾ ಮೇಲು ನೀ ಮೇಲು ಎಂಬ ಒಣ ಭಾವನೆಯು
ಬಟ್ಟ ಬಯಲಲಿ ಬಿಟ್ಟ ಕರುವಾಯಿತು

ಎಚ್ಚೆತ್ತ ಎಚ್ಚರಿಕೆ ಅಚ್ಚಳಿಯದೇ ಉಳಿದು
ಬಿತ್ತುತ್ತ ಪ್ರೇಮವನು ದ್ವೇಷವನು ತೊರೆದು‌
ಒಟ್ಟಿನಲಿ ಒಂದಾಗಿ ಬೆಚ್ಚನೆ ಹೊದಿಕೆಯ ಹೊದ್ದು
ಹೊತ್ತು ಇಳಿಯುವ ಮೊದಲೇ ಬೆಂಕಿ ಆರಿಸಿ ಜಗದಿ 

ಹತ್ತಾರು ಹಸುಳೆಗಳ ಭವ್ಯ ದೇಶದ ಕನಸು
ಹೊತ್ತಿ ಬೆಳಗಲಿ ಮನದಿ ನಮಗೂ ವಯಸಾಯಿತು

Tuesday, May 12, 2009

ನನ್ನ ಅಂತರಂಗ....

- ಗುರು ಬಬ್ಬಿಗದ್ದೆ

ಜೀವನ ಎಂಬುದು ಒಂದು ನಾಟಕ ರಂಗ, ಅವರವರ ಪಾತ್ರವನ್ನು ಅವರವರು ನಿರ್ವಹಿಸುತ್ತಾ ಹೋಗಬೇಕು ಎನ್ನುವುದೇನೋ ಸರಿ. ಆದರೆ ಬಡವನ ಪಾತ್ರ ಯಾವಾಗಲೂ ಬಡವನ ಪಾತ್ರವೇ ಆಗಿರುತ್ತದೆ. ಸಿರಿವಂತಿಕೆಯ ದರ್ಪದಲ್ಲಿ ಬಡಜನರ ಮೇಲೆ ಅದೆಷ್ಟೋ ದೌರ್ಜನ್ಯಗಳಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೆ ಮೇಲ್ಜಾತಿಯ ಹುಡುಗನೊಬ್ಬ ಕೆಳಜಾತಿಯ ಹುಡುಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದನ್ನು ಅವಳು ಪ್ರತಿಭಟಿಸಿದಾಗ ಆತ ಅವಳನ್ನೇ ಸಜೀವವಾಗಿ ಸುಟ್ಟು ಹಾಕಿದ ಘಟನೆ ಕಣ್ಣಂಚಿನಲ್ಲಿ ಜೀವಂತವಾಗಿದೆ. ಇದಕ್ಕೆಲ್ಲ ಕೊನೆ ಎಂದು? ಧರಿಸಿಕೊಳ್ಳಲೂ ವಸ್ತ್ರವಿಲ್ಲದೆ ಒದ್ದಾಡುವ ಕಿತ್ತು ತಿನ್ನುವ ಬಡತನ ಒಂದೆಡೆಯಾದರೆ, ಮೈ ಮೇಲಿನ ಬಟ್ಟೆಯೇ ಭಾರ ಎನ್ನುವಂತೆ ಅದನ್ನು ಕಳಚಿ ಹೊರಟಿರುವ ಶೋಕಿ ಜನಾಂಗ ಇನ್ನೊಂದೆಡೆ. ಎಲ್ಲಿಯ ಸಮಾನತೆ, ಎಲ್ಲಿಯ ಸ್ವಾತಂತ್ರ್ಯ. ಈ ಕವನದಲ್ಲಿ ನನ್ನ ಅಂತರಂಗದ ಸುಪ್ತ ಭಾವನೆಗಳನ್ನು ಅನಾವರಣಗೊಳಿಸಿದ್ದೇನೆ. ತಮ್ಮ ಬಿಚ್ಚು ಮನಸ್ಸಿನ ಅಭಿಪ್ರಾಯಗಳಿಗೆ ಸದಾ ಸ್ವಾಗತ. 

ಭೋರ್ಗರೆದಿದೆ ನೀರ್ಗರೆದಿದೆ ಶೃಂಗಾರದ ಧಾತ್ರಿ

ಮೈ ಮನ ನವಿರೇಳಿಸುತಲಿ ಸಾಗಿದೆ ಹೊಸ ಮೈತ್ರಿ ೧


ಮಿಡಿಯುತ್ತಲಿ ಮಿಡಿಸುತ್ತಲಿ ನವ್ಯದ ನವ್ಯತೆಯನ್ನು
ಹುಟ್ಟುತ್ತಲಿ ಸಾಯುತ್ತಲಿ ಸಾಗಿಸಿ ಜೀವನವನ್ನು     ೨


ಸ್ವಾತಂತ್ರ್ಯದ ಹೆಸರಲಿ ಸ್ವೇಚ್ಚಾಚಾರದ ಬದುಕು
‌ಉದ್ಧಾರದ ನೆಪದಲಿ ಸೃಷ್ಟಿಸುತಿವೆ ಒಡಕು          ೩


ಆನಂದದ ಆಕ್ರಂದನ ಹೆಚ್ಚಿಸುತಿವೆ ಬಡತನ
ಸಿರಿವಂತಿಕೆ ಸಾಮ್ರಾಜ್ಯದಲಿ ಕರಗುತಿದೆ ತನು-ಮನ ೪


ಅನ್ನ ವಸ್ತ್ರದ ಬರದಿ ನಿರ್ಗತಿಕರ ಪಾಡೇನು
ಶೋಕಿ ಯುವತಿಯರಿಗೆ ಇದ್ದರೂ ವಸ್ತ್ರ ತೊಡಲು ಬರವೇನು  ೫


ಹಗರಣಗಳ ಸರಮಾಲೆಯಲಿ ಕರಗುತಿದೆ ಹಣವು
ವಯ್ಯಾರದ ಶ್ರಂಗಾರಕೆ ಮುಡುಪಾಗಿದೆ ಸಿರಿತನವು        ೬


ಹೇಳಲೂ ಆಗದೆ ಬಿಡಲೂ ಆಗದೆ ಸಾಗಿದೆ ಜೀವನ ನಾಟಕ ರಂಗ
‌ಇದನೆಲ್ಲವ ನೋಡಿದೊಡೆ ವಿಷಾದಿಪುದು ನನ್ನ ಅಂತರಂಗ                ೭