Tuesday, January 20, 2009

ಮತ್ತೊಬ್ಬ ರಾಜ..

ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕೊನೆ...

- ಗುರು ಬಬ್ಬಿಗದ್ದೆ

ಕನ್ನಡ ನಾಡಿನಲ್ಲಿ ಅಕಾಲಿಕ ಮಳೆಯಂತೆ ಇನ್ನೊಂದು ಅಕಾಲಿಕ ಪ್ರಸವವಾಗುತ್ತಿದೆ ಅರ್ಥಾಥ್ ಮತ್ತೊಮ್ಮೆ ಚುನಾವಣೆ ನಡೆಯುತ್ತಿದೆ. ಇತ್ತೀಚೆಗೆ ಚುನಾವಣೆಯೂ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ವಿಶ್ವದ ಅದೇಷ್ಟೋ ರಾಷ್ತ್ರಗಳು ಕಮ್ಯೂನಿಸಮ್ ದಾಳಿಗೆ ಸಿಲುಕಿ ನರಳುತ್ತಿವೆ ಆದರೆ ನಮ್ಮದು ಸರ್ವತಂತ್ರ ಪ್ರಜಾತಂತ್ರ ವ್ಯವಸ್ಥೆ ಅಲ್ಲಲ್ಲ ಅವ್ಯವಸ್ಥೆ. ಯಾರು ಪ್ರಜೆ, ಯಾರು ಪ್ರಭು ಇಲ್ಲಿ ಎಲ್ಲರೂ ಒಂದೇ ಎಂಬ ಮಾತು ಕೇಳಿ ಕೇಳಿ ಬೇಸರವಾಗಿ ಹೋಗಿದೆ. ಸಿರಿವಂತರು ೧೦ ಅಂತಸ್ತೂ ಸಾಲದೆಂಬಂತೆ ಇನ್ನೆರಡು ಕಟ್ಟುತ್ತಿದ್ದಾರೆ. ಆದರೆ ಬಡವ ದಿನದಿಂದ ದಿನಕ್ಕೆ ಸೊರಗಿ ಹೋಗುತ್ತಿದ್ದಾನೆ. ರೈತ ಬೆಳೆದ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಇವೆಲ್ಲದರ ನಡುವೆ ನಮಗೆ ಚುನಾವಣೆಯೆಂಬ ಕ್ರತಕ ಗರ್ಭದ ಹೆರಿಗೆ ಸಮಯ. ಕನ್ನಡಿಗರು ಅತೀ ಬುದ್ದಿವಂತರು, ಅದರಲ್ಲೂ ಸಾಫ಼್ತವೇರ್ ತಂತ್ರಜ್ನಾನದಲ್ಲಿ ಹೆಸರುವಾಸಿಯಾದ ಬೆಂಗಳೂರು ಬುದ್ದಿವಂತರ ಅಡ್ಡೆ. ಚುನಾವಣೆಯಲ್ಲಿ ಅತೀ ಕಡಿಮೆ ಮತದಾನ ನಡೆದಿದ್ದು ಸಹ ಅತೀ ಬುದ್ದಿವಂತರು ಇರುವ ಜಾಗದಲ್ಲೇ. ಸರಕಾರ ತಮಗೆ ರಸ್ತೆ ಕೊಡಲಿಲ್ಲ, ಟ್ರಾಫ಼ಿಕ್ ಜಾಮ್ ಎಂದೆಲ್ಲ ಬಡ ಬಡಿಸುವ ಮಂದಿಗೆ ತಮಗೆ ಬೇಕಾದವರನ್ನು ಚುನಾಯಿಸಲು ಮತ ಹಾಕಲು ಆಗದಷ್ಟು ಉದಾಸೀನ ಅಲ್ಲ ಆ ದಿನವಿಡೀ ಮನೆಯಲ್ಲೇ ಆಸೀನ. ನಾಚಿಕೆಯಾಗುತ್ತಿದೆ, ಹೆಚ್ಚು ಹೆಚ್ಚು ಕಲಿತಂತೆ ದಡ್ಡರಾಗುತ್ತಿದ್ದೇವೆ. ಮತದಾನ ಮಾಡಲೂ ಹೋಗದೇ ಸುಮ್ಮನೆ ಸರಕಾರವನ್ನು ಬೈಯ್ಯುವುದು ನ್ಯಾಯವಲ್ಲ. ಸುಧಾರಣೆ ದಿನ ಬೆಳಗಾಗುವುದರೊಳಗೆ ಆಗುವುದಿಲ್ಲ. ಅದನ್ನು ಆರಂಭಿಸಬೇಕು. ಇಂದು ಚುನಾವಣೆ ಬಂತೆಂದರೆ ಎಲ್ಲ ಅಭ್ಯರ್ಥಿಗಳು ಹಳ್ಳಿಗೆ ಓಡುತ್ತಾರೆ ಕಾರಣ ಅಲ್ಲಿ ಓಟಿನ ಬ್ಯಾಂಕ್ ಇದೆ. ಹಳ್ಳಿಯವರಿಗೆ ಹಣದ, ಅಮಲಿನ, ಮತ್ತೇನೋ ಆಮಿಶ ಒಡ್ಡಿ ಮತ ಪಡೆಯುತ್ತಾರೆ. ಪ್ರಜ್ನಾವಂತ ಎನಿಸಿಕೊಂಡವರೆಲ್ಲ ಚುನಾವಣೆಯ ದಿನ ಮನೆಯಲ್ಲಿ ರಜೆಯ ಮೋಜನ್ನು ಅನುಭವಿಸುತ್ತಿದ್ದರೆ ಇನ್ನೇನಾಗಲು ಸಾದ್ಯ ಹೇಳಿ. ಮೊನ್ನೆ ಮೊನ್ನೆ ಒಂದು ಆರ್ಟಿಕಲ್ ಓದಿದೆ, ಅದರ ಸಾರಾಂಶ ಇಷ್ಟೇ, "ನಮಗೆ ಒಳ್ಳೆಯ ಮೊಬೈಲ್ ಬೇಕು. ಅತ್ಯುತ್ತಮ ಡಿಸೈನ್ ಇರಬೇಕು, ಉತ್ತಮ ವೀಡಿಯೊ ಮತ್ತು ಆಡಿಯೊ ರೆಕಾರ್ಡಿಂಗ್ ಇರಬೇಕು. ಫೋಟೊ ಚೆನ್ನಾಗಿ ಬರಬೇಕು. ಜಗತ್ತಿನ ಎಲ್ಲ ಮೊಬೈಲ್ ಗಳಲ್ಲಿ ಇರುವ ಸೌಕರ್ಯ ಇದರಲ್ಲಿ ಬೇಕು. ಬೆಲೆ ಮಾತ್ರ ಎಲ್ಲಕ್ಕಿಂಥ ಕಡಿಮೆ ಇರಬೇಕು". ಎಲ್ಲಿ ಸಾದ್ಯ ಹೇಳಿ, ನಮಗೆ ಏನು ಬೇಕು ಎನ್ನುವುದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿಸಿದೆ. ನಿಮಗೆ ಬೇಕಾದವರನ್ನು ಆರಿಸದೆ ಅದು ಮಾಡಿ, ಇದು ಮಾಡಿ ಎನ್ನಲು ಆಗುವುದಿಲ್ಲ ಅಲ್ಲವೇ? ಇನ್ನೇನು ಚುನಾವಣೆ ಮುಗಿಯುತ್ತಿದೆ, ಮತ್ತೊಮ್ಮೆ ಅತಂತ್ರ ಸರಕಾರ ಅಸ್ತಿತ್ವಕ್ಕೆ ಬರುತ್ತದೆ, ಪುನಹ ಯಾವುದೋ ಪಕ್ಷ ಇನ್ಯಾವುದೋ ಪಕ್ಷಕ್ಕೆ ಸೆರಗು ಹಾಸುತ್ತದೆ. ಮತ್ತೆ ಸ್ವಲ್ಪ ದಿನ ಆಡಳಿತದ ಕಣ್ಣು ಮುಚ್ಚಾಲೆ, ಮತ್ತದೇ ಚುನಾವಣೆಯ ಗೋಳು. ಕರ್ನಾಟಕವೇನು ಇವರಪ್ಪನ ಮನೆಯ ಆಸ್ತಿಯೇ ಹರಿದು ಹಂಚಿ ತಿನ್ನಲು. ಮತದಾರನೇ ಈಗ ಏಳದಿದ್ದರೆ ಇನ್ನೆಂದೂ ಸಾದ್ಯವಿಲ್ಲ. ಯಾರನ್ನಾದರೂ ಆರಿಸು ಆದರೆ ಬಹುಮತವನ್ನು ನೀಡು. ಯಾವ ಪಕ್ಷವೂ ಸಾಚಾ ಅಲ್ಲ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಇನ್ನೊಬ್ಬ ಮುಖ್ಯಮಂತ್ರಿ ಬರುತ್ತಾನೆ. ಇನ್ನೊಂದು ಮಂತ್ರಿ ಮಂಡಳ, ಆದರೆ ಜನಸಾಮಾನ್ಯರ ಗೋಳಿನ ಕಥೆ ಮಾತ್ರ ಹಾಗೆಯೇ ಮುಂದುವರಿಯುತ್ತದೆ. ನೂರಾರು ವರುಷ ನಮ್ಮಲ್ಲಿನ ಸಣ್ಣತನವನ್ನೇ ಬಂಡವಾಳವಾಗಿಸಿಕೊಂಡು ಒಡೆದು ಆಳಿದ ಆಂಗ್ಲರೇ ಇವರಿಗಿಂತ ಮೇಲು. ಅವರಿಗೆ ಒಂದು ಮಹತ್ವಾಕಾಂಕ್ಷೆಯಾದರೂ ಇತ್ತು. ಆದರೆ ನಮ್ಮ ಮಂತ್ರಿಗಳಿಗೆ ಹಣ ನುಂಗುವುದನ್ನು ಬಿಟ್ಟು ಇನ್ನೇನು ಗೊತ್ತಿಲ್ಲ. ವಿದೇಶ ಪ್ರವಾಸಗಳಿಗೆ ಹೋಗಿ ಅಲ್ಲಿನ ತಂತ್ರಜ್ನಾನದ ಮೋಜನ್ನು ಅನುಭವಿಸಿ ಬರುತ್ತಾರೆ. ನಮ್ಮಲ್ಲಿಗೆ ಬಂದ ಕೂಡಲೇ ತಂತ್ರಜ್ನಾನವನ್ನು ಅತಂತ್ರ ಮಾಡಿ ಬಿಡುತ್ತಾರೆ. ಇಂಥವರಿಂದ ಹೆಚ್ಚಿನದೇನು ನಿರೀಕ್ಷಿಸಲು ಸಾದ್ಯವಿಲ್ಲ. ಬಹುಮತವನ್ನು ನೀಡಿದರೆ ಕಾಲ ಕಾಲಕ್ಕೆ ಚುನಾವಣೆಯ ದುಂದು ವೆಚ್ಚವನ್ನಾದರೂ ತಪ್ಪಿಸಬಹುದು. ವಿರೋಧ ಪಕ್ಷ ಕೇವಲ ವಿರೋಧ ಮಾಡುವುದೊಂದೇ ತನ್ನ ಕರ್ತವ್ಯ ಎಂದುಕೊಂಡಿದೆ. ಆಡಳಿತದಲ್ಲಿರುವವರು ಮುಂದಿನ ಚುನಾವಣೆಗೆ ಸಿದ್ದರಾಗುತ್ತಾರೆ. ಒಟ್ಟಿನಲ್ಲಿ ಬಡವನ ಗೋಳು ನೀರಿನಲ್ಲಿ ತೊಳೆದ ಹುಳಸೇಹಣ್ಣಿನಂತಾಗುತ್ತದೆ. ನಮ್ಮ ಚುನಾವಣಾ ವ್ಯವಸ್ಥೆಯೇ ಇದಕ್ಕೆಲ್ಲ ಹೊಣೆ. ಬಹುಮತ ಬಂದ ಪಕ್ಷಕ್ಕೆ ಅಧಿಕಾರ ಎನ್ನುವುದರ ಬದಲು ಯವುದೇ ಪಕ್ಷಕ್ಕೆ ಹೆಚ್ಚಿನ ಮತ ಲಭಿಸಿದರೂ ಅವರೇ ಅಧಿಕಾರ ವಹಿಸಿಕೊಳ್ಳಬೇಕು ಎಂಬ ನಿಯಮ ಜಾರಿಗೆ ಬರಬೇಕು. ವಿರೋಧ ಪಕ್ಷ ಒಂದೇ ಸಾಕು. ಹತ್ತು ಹಲವು ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವುದನ್ನು ತಪ್ಪಿಸಬೇಕು. ನೇರ ಹಾಗೂ ನ್ಯಾಯಸಮ್ಮತ ತೀರ್ಮಾನ ಚುನಾವಣಾ ಮಂಡಳಿ ತೆಗೆದುಕೊಳ್ಳಬೇಕು. ದಾರ್ಶನಿಕ ಜಿಡ್ಡು ಕ್ರಷ್ಣಮೂರ್ತಿ ಯವರು ಹೇಳುವಂತೆ "ನೀವೇ ಜಗತ್ತು, ನೀವು ಬದಲಾಗದೇ ಯಾವುದೂ ಬದಲಾಗದು" ಮೊದಲು ನಮ್ಮಿಂದಲೇ ಸುಧಾರಣೆ ಆರಂಭಿಸಬೇಕಿದೆ. ಇದು ಸರ್ವತಂತ್ರ ಪ್ರಜಾವ್ಯವಸ್ಥೆ. ಪ್ರಜೆಗಳಿಗೆ ಎಲ್ಲ ಹಕ್ಕನ್ನು ಸಂವಿಧಾನ ನೀಡಿದೆ. ಆದ್ದರಿಂದ ಒಳ್ಳೆಯ ಆಡಳಿತ ನಡೆಸಲು ಸರಕಾರವನ್ನು ಒತ್ತಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಕಳೆದ ಹಲವು ವರ್ಷಗಳಿಂದ ನೋಡುತ್ತಿದ್ದೇವೆ. ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳೂ ಆಶ್ವಾಸನೆಯ ಮೇಲೆಯೇ ನಿಂತಿವೆ. ವಿಶ್ವಾಸಘಾತುಕತನದ ಪರಮಾವಧಿಯನ್ನೇ ಮೀರಿವೆ. ಚುನಾವಣೆ ಬಂತೆಂದರೆ ಸುಧಾರಣೆ ನೆನಪಾಗುವ ಅಧಿಕಾರದಾಹಿ ನಾಯಕರೇ ಹೆಚ್ಚಾಗಿದ್ದಾರೆ. ಒಮ್ಮೆ ಚುನಾವಣೆ ಮುಗಿದರೆ ಮತ್ತೆ ಕ್ಷೇತ್ರದ ದರ್ಶನ ಮುಂದಿನ ಚುನಾವಣೆ ಬಂದಾಗ. ಅಲ್ಲಿಯವರೆಗೆ ಜನಸಾಮಾನ್ಯರ ಗೋಳಿನ ಕಥೆ ಕೇಳುವವರಾರೂ ಇಲ್ಲ. ದಿನ ಬೆಳಗಾದರೆ ರೈತನ ಆತ್ಮಹತ್ಯೆ, ಕೋಮುಗಲಭೆ, ವರದಕ್ಷಿಣೆ ಸಾವು, ಒಂದೇ ಎರಡೇ ಸಮಸ್ಯೆಗಳ ಸುಳಿಯೇ ತುಂಬಿದೆ. ಕೊನೆ ಎಂದು? ನಮ್ಮನ್ನು ಆಳುವ ನಾಯಕರು ಒಂದು ದಿನವಾದರೂ ತಲೆ ಕೆಡಿಸಿಕೊಂಡಿದ್ದಾರೆಯೇ? ನಮ್ಮ ಬಗ್ಗೆ ಅವರಿಗೆ ನಿಜವಾದ ಕಳಕಳಿ ಇದೆಯೇ? ಒಮ್ಮೆ ಅಧಿಕಾರಕ್ಕೆ ಬಂದರೆ ತಲೆಮಾರುಗಳವರೆಗೂ ಆಸ್ತಿ ಮಾಡುತ್ತಾ ಹೋಗುವ ನಾಯಕರಿಂದ ಆಶ್ವಾಸನೆ ಸಿಗಲು ಸಾದ್ಯವೇ ಹೊರತು ಸುಧಾರಣೆ ಅಲ್ಲ. ಸತ್ತರೆ ಬೊಗಳೆ ಕಣ್ಣೀರು ಹಾಕುವ, ಬದುಕಿದರೆ ಅವರನ್ನೇ ಸಾಯಿಸುವ ಅಧಿಕಾರಿಗಳೂ ಹಾಗೂ ಅವರನ್ನು ಪೋಷಿಸುವ ಮಂತ್ರಿಗಳು, ರೈತ ಬೆಳೆದ ಬೆಳೆಗೆ ಮೂರು ಕಾಸಿನ ಕಿಮ್ಮತ್ತು ನೀಡಿ ಖರೀದಿಸಿ ಅಪಾರ ಹಣ ದೋಚುವ ಮದ್ಯವರ್ತಿಗಳು, ಇವ್ಯಾವುದೂ ಸಂಭಂಧವೇ ಇಲ್ಲದಂತೆ ಭಾವಿಸುವ "ಪ್ರಜ್ನಾವಂತರು" , ಯಾರಿಗಿದೆ ಸ್ವಾಮಿ ಸುಧಾರಣೆಯ ಪ್ರಜ್ನೆ. ನೀವು ಗಮನಿಸರಬೇಕು, ಹಳ್ಳಿಯ ಜನರಿಗೆ ಚುನಾವಣೆಯ ಬಗ್ಗೆ ಇರುವಷ್ಟು ಆಸಕ್ತಿ ಪಟ್ಟಣದವರಿಗೆ ಇಲ್ಲ. ಮತದಾನ ಹಾಕಲೂ ಆಗದ ಜನರಿಗೆ ಯಾರು ಅಧಿಕಾರಕ್ಕೆ ಬಂದರೂ ಅಷ್ಟಕ್ಕಷ್ಟೇ. ಅವರಿಗೆ ತಿಂಗಳ ಕೊನೆಯ ಸಂಬಳ, ಮೇಲೆರಡು ಗಿಂಬಳ ಸಿಕ್ಕಿದರೆ ಸಾಕು. ನಮ್ಮಲ್ಲಿ ಹುಚ್ಚು ಬ್ಯುರಾಕ್ರಸಿಯಿಂದಾಗಿ ಡೆಮಾಕ್ರಸಿ ನಶಿಸುತ್ತಿದೆ. ಚುನಾವಣೆಯೊಂದೇ ಇದಕ್ಕೆ ಪರಿಹಾರ. ಇದು ನಿಮ್ಮ ಹಕ್ಕು. ಅಹ್ರತೆಯಿಲ್ಲದೆ ಇರುವವನನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಿ. ಪ್ರಜಾಪ್ರಭುತ್ವದ ಸತ್ವವನ್ನು ಪರಿಚಯಿಸಿಕೊಡಿ. ಆಗ ಮಾತ್ರ ಒಂದು ಅರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾದ್ಯ. ಇಲ್ಲದಿದ್ದರೆ ಮೊದಲೇ ಹೇಳಿದಂತೆ "ಮತ್ತೊಬ್ಬ ರಾಜ, ಇನ್ನೊಂದು ಅರಮನೆ, ತೀರದು ಗೋಳಿನ ಕಥೆ", ಆಯ್ಕೆ ನಿಮಗೆ ಬಿಟ್ಟಿದ್ದು.....

1 comment:

Sweetie said...

Unlimited terms, family politics inda desha haaLaagothide.

MLA / MP gaLige, max 2 term kodabeku.