Tuesday, October 13, 2009

S-PAIN ನ PAIN ನಿಂದ SWEDEN ವರೆಗೆ ...ಭಾಗ 2

ಹಿಂದಿನ ಲೇಖನದಲ್ಲಿ ಸ್ಪೇನ್ ದಲ್ಲಿ ಕಳೆದ ನನ್ನ ಪಾಸ್ ಪೋರ್ಟ್ ವಿಷಯವಾಗಿ ಬರೆದಿದ್ದೆ. ಅಲ್ಲಿಯ ಮೊದಲ ದಿನದ ಅನುಭವ, ಕಳವಳ, ಇವೆಲ್ಲವುಗಳ ಜೊತೆಗೆ ಮೊದಲ ಭೆಟ್ಟಿಯ ಕಹಿ ನೆನಪುಗಳ ಬಗೆಗೆ ತಿಳಿಸಿದ್ದೇನೆ. (ಹಿಂದಿನ ಸಂಚಿಕೆಗೆ ಇಲ್ಲಿ ಕ್ಲಿಕ್ಕಿಸಿ http://gurumurthyhegde.blogspot.com/2009/10/s-pain-pain.html

ಆ ದಿನ ರಾತ್ರಿಯಿಡೀ ನಿದ್ದೆ ಇರಲಿಲ್ಲ. ರಾತ್ರಿ ಎಷ್ಟೋ ಸಲ ಎದ್ದು ರೆಸೆಪಶನ್ ತನಕ ನಡೆದು ಬಂದು ಪುನಃ ಹೋಗುತ್ತಿದ್ದೆ. ರೆಸೆಪಶನ್ ನಲ್ಲಿ ಇದ್ದವರಿಗೆ ಗಾಬರಿ. ಏನಾಯಿತೆಂದು. ಬೆಳಿಗ್ಗೆ ಎದ್ದವನೇ ಬಾರ್ಸಿಲೋನಾ ದಲ್ಲಿರುವ ಭಾರತೀಯ ದೂತಾವಾಸ (Indian Embassy) ಗೆ ಫೋನ್ ಮಾಡಿದರೆ ಅವರು ಬೇಸಿಗೆಯ ರಜೆಯ ಮೋಜನ್ನು ಅನುಭವಿಸುತ್ತಿದ್ದಾರೆ. ಇನ್ನೆರಡು ದಿನ ಬಿಟ್ಟು ಪ್ರಯತ್ನಿಸಿ ಎಂಬ ವಾಣಿ ಬರುತ್ತಿದೆ. ನಮಗೆ ಕನಿಷ್ಠ 4  ದಿನಗಳ ಸಮಯವಿತ್ತು ಅಲ್ಲಿ, ಆದರೆ ಕೇವಲ ಒಂದೇ ದಿನಕ್ಕೆ ಬರುವ ಪ್ರವಾಸಿಗರಿಗೆ ಹೀಗೆ ಆದರೆ ಅವರ ಗತಿಯೇನು. ಸಂಪೂರ್ಣ ಆಗಸ್ಟ್ ತಿಂಗಳು Indian Embassy ಮುಚ್ಚಿರುತ್ತದಂತೆ. ನನಗೆ ವಿಚಿತ್ರವೆನಿಸಿತು.

ಮತ್ತೇನು ಮಾಡಲು ದಿಕ್ಕು ತೋಚದೆ ಒಲ್ಲದ ಮನಸ್ಸಿನಿಂದ Conference ಗೆ ಹೋದೆ. ಬಂದಿದ್ದು ಅದಕ್ಕೆ ಅಲ್ಲವೇ?
ಅಲ್ಲಿ ರೆಸೆಪಶನ್ ನಲ್ಲಿ ನನ್ನೆಲ್ಲ ಕಥೆ ಹೇಳಿದೆ. ಇನ್ನೊದು ಹೇಳಲೇಬೇಕಾದ ಸ್ಪೇನ್ ಸಮಸ್ಯೆ ಎಂದರೆ  ಭಾಷ ಪ್ರೇಮ ಇಲ್ಲ ಭಾಷಾ ಕೊರತೆ. ಯಾರೂ ಇಂಗ್ಲಿಷ್ ಮಾತನಾಡುವುದಿಲ್ಲ. ಸ್ಪ್ಯಾನಿಶ್ ಬಿಟ್ಟು ಬೇರೆ ಭಾಷೆ ಬರುವುದಿಲ್ಲ ಕೂಡಾ. ಆಫೀಸ್ ಗೆ ಹೋಗಿ, ಅಂಗಡಿ ಹೋಗಿ, ಎಲ್ಲಿ ಹೋದರೂ ಒಂದೇ ಸಮಸ್ಯೆ. ಇಂಥವರಿಗೆ ಫೋನ್ ಮಾಡಿ ನನ್ನ ಸಮಸ್ಯೆ ಹೇಳಿದರೆ ಅವರಿಗೆ ಎಷ್ಟು ಅರ್ಥವಾದೀತು? ನಿಮಿಷಕ್ಕೆ 10 ಸಲ ಗ್ರಾಸಿಯಾಸ್ ಅನ್ನುತ್ತಾರೆ. Conference Reception ಅಲ್ಲಿ ಸಿಸಿಲಿಯಾ ಎನ್ನುವ ಹುಡುಗಿಯಿದ್ದಳು. ಅವಳಿಗೆ ಇಂಗ್ಲಿಷ್ ತುಂಬಾ ಚೆನ್ನಾಗಿ ಬರುತ್ತಿತ್ತು. ಅವಳ ಹತ್ತಿರ ನನ್ನೆಲ್ಲ ಸಮಸ್ಯೆ ಹೇಳಿದೆ. ಕೂಡಲೇ ಅವಳು ಬಾರ್ಸಿಲೋನ Indian Embassy ಗೆ ಫೋನ್ ಮಾಡಿದಳು. ಆದರೆ ಅದೇ ಉತ್ತರ ಬಂದಿತು 2 ದಿನ ಬಿಟ್ಟು ಎಂದು. ನಂತರ ಅವಳು ಮಾಡ್ರಿಡ್ನಲ್ಲಿರುವ Indian Embassy ಗೆ ಫೋನ್ ಮಾಡಿದಳು. ನನ್ನ ಪುಣ್ಯಕ್ಕೆ ಅವರು ಓಪನ್ ಮಾಡಿದ್ದರು. ಅವರಿಂದ ಎಲ್ಲ ವಿವರ ಪಡೆದುಕೊಂಡಳು (ಅಲ್ಲಿ ಎಲ್ಲರೂ ಸ್ಪ್ಯಾನಿಶ್ ಮಾತನಾಡುತ್ತಾರೆ ಎಂಬುದು ಸರ್ವ ವಿಧಿತ). ಒಬ್ಬ ಸ್ಪ್ಯಾನಿಶ್ ಹುಡುಗಿಯಿಂದ ಸಿಕ್ಕ ಸಹಾಯ ಮರೆಯಲು ಸಾದ್ಯವಿಲ್ಲ. ಆಪತ್ ಕಾಲದಲ್ಲಿ ನೆರವಿಗೆ ಬಂದವನೇ ನಿಜವಾದ ಮಿತ್ರನಂತೆ. ಭಾರತದಲ್ಲಿಯೂ ಅನೇಕ ಮಿತ್ರರೂ ಇಂಥಹ ಸಂಧರ್ಭದಲ್ಲಿ ನನ್ನ ಜೊತೆ ಮಾನಸಿಕವಾಗಿ ಇದ್ದರು. ಪದೇ  ಪದೇ  ಮೇಲ್ ಕಳಿಸಿ ಏನಾಯಿತೆಂದು ವಿಚಾರಿಸುತ್ತಿದ್ದರು.
ನಂತರ ಸಿಸಿಲಿಯಾ ಹೇಳಿದಳು, ''ನಾನು ಪಾಸ್ ಪೋರ್ಟ್ ಗೋಸ್ಕರ ಮ್ಯಾಡ್ರಿಡ್ ಗೆ ಹೋಗಬೇಕು ಎಂದು''. ಬಾರ್ಸಿಲೋನಾ ದಲ್ಲಿ     ಪಾಸ್ ಪೋರ್ಟ್ ನೀಡುವುದಿಲ್ಲ ವಂತೆ. ಅವಳಿಗೆ ಕೊನೆಯದಾಗಿ ಒಂದು ಥ್ಯಾಂಕ್ಸ್ ಹೇಳಿ ಮ್ಯಾಡ್ರಿಡ್ ಗೆ ಹೋಗಲು ಯೋಚಿಸತೊಡಗಿದೆ. ಮ್ಯಾಡ್ರಿಡ್ ಪುನಹ ಸುಮಾರು 300-400 ಕಿ ಮಿ ಪ್ರಯಾಣ ಇನ್ನೊದು ದಿಕ್ಕಿನಲ್ಲಿ. ಕೂಡಲೇ ಮಡದಿಗೆ ಫೋನ್ ಮಾಡಿ ನನ್ನ ವೀಸಾ, ಪಾಸ್ಪೋರ್ಟ್ ನ ನಕಲು ಇದ್ದರೆ  ಇ-ಮೇಲ್  ಗೆ ಕಳಿಸೆಂದು ತಿಳಿಸಿದೆ. ಅವಳು ಹುಡುಕಿ ಹುಡುಕಿ ಕೊನೆಗೂ ನಕಲು ಪಡೆಯುವಲ್ಲಿ ಯಶಸ್ವಿಯಾದಳು ಸ್ವಲ್ಪ ಧೈರ್ಯ ಬಂತು.
ಮರುದಿನ ಬೇಗ ಎದ್ದವನೇ  ಫಾಸ್ಟ್ ಟ್ರೈನ್ ತೆಗೆದುಕೊಂಡೆ. ಇದು ತುಂಬಾ ದುಬಾರಿ ಆದರೆ ಘಂಟೆಗೆ 350 ಕಿ ಮಿ ವೇಗದಲ್ಲಿ ಚಲಿಸುತ್ತದೆ. ನಾನು ಸುಮಾರು 70 ನಿಮಿಷದಲ್ಲಿ ಮಾಡ್ರಿಡ್ ನಲ್ಲಿದ್ದೆ. ಇಲ್ಲಿ ಹಣಕ್ಕಿಂತ ಸಮಯ ಮುಖ್ಯವಾಗಿತ್ತು. ಬೆಳಿಗ್ಗೆ 9 ಘಂಟೆಗೆ ಸರಿಯಾಗಿ Indian Embassy ಮುಂದೆ ಹೋದೆ. ನನಗೋ ನಾನೇ ಮೊದಲು ಬಂದಿದ್ದೇನೆ ಎಂದು ಆದರೆ ನನಗಿಂತ ಮುಂಚೆಯೇ 25 ಜನ ಸಾಲಿನಲ್ಲಿ ನಿಂತಿದ್ದಾರೆ. ನಂತರ ನಾನು ಸಾಲಿನಲ್ಲಿ ನಿಲ್ಲಲು ನಂಬರ್ ತೆಗೆದುಕೊಂಡೆ. 26 ನೇ ನಂಬರ್ ನನ್ನದು. ಅಲ್ಲಿ ಭಾರತದಿಂದ 5-6 ಜನ ಡಾಕ್ಟರುಗಳು ಬಂದಿದ್ದರು. ಅವರೆಲ್ಲ ಬಾರ್ಸಿಲೋನಾದಲ್ಲಿ  ಜರುಗಿದ ವೈದ್ಯಕೀಯ ಸಮ್ಮೇಳನ ದಲ್ಲಿ ಭಾಗವಹಿಸಲು ಬಂದಿದ್ದರಂತೆ. ಅವರ ಪಾಸ್ ಪೋರ್ಟ್, ದುಡ್ಡು ಎಲ್ಲ ಕಳುವಾಗಿದೆ ಎಂದು ತಿಳಿದಾಗ ಬಹಳ ಬೇಸರವಾಯಿತು. ಅವರು ತುಂಬಾ ಬೇಸರಗೊಂಡಿದ್ದರು. ಅವರಿಗೂ ಅದೇ ದಿನ ಪಾಸ್ಪೋರ್ಟ್ ಬೇಕಿತ್ತು.
ಅಲ್ಲಿ ರೆಸೆಪಶನ್ ಕೌಂಟರ್ ನಲ್ಲಿ ಕುಳಿತಿದ್ದವಳು ಸ್ಪೇನ್ ಹುಡುಗಿ. ಅವಳಿಗೆ ಸರಿಯಾಗಿ ಇಂಗ್ಲಿಷ್ ಬಾರದು. ಏನಾದರೂ ಕೇಳಿದರೆ ದುರುಗುಟ್ಟಿಕೊಂಡು ನೋಡುತ್ತಾಳೆ. ಮೊದಲೇ ನನಗೆ ಹೇಳಿದಳು, ಏನೇ ಮಾಡಿದರೂ ಇವತ್ತು ಪಾಸ್ ಪೋರ್ಟ್ ಸಿಗುವುದಿಲ್ಲ ಎಂದು. ನನ್ನ ಶಕ್ತಿಯೇ ಉಡುಗಿ ಹೋಯಿತು. ಏಕೆಂದರೆ ಮರುದಿನ ನಾವು ತಿರುಗಿ ಸ್ವೀಡನ್ ಹೊರಡುವ ಫ್ಲೈಟ್ ಬುಕ್ ಮಾಡಿದ್ದೇವೆ. ಇವತ್ತು ಸಿಗಲೇಬೇಕು. ಏನಾದರಾಗಲಿ ಎಂದು ಅದಕ್ಕೆ ಸಂಭಂಧಪಟ್ಟ ಎಲ್ಲ ಫಾರಂ ತುಂಬಿದೆ. 8 ಫೋಟೋ ಬೇಕೆಂದರು. ಪುನಃ ಅಲ್ಲಿಂದ ಸ್ಟುಡಿಯೊ ಹುಡುಕಿ 8 ಫೋಟೋ ತೆಗೆಸಿಕೊಂಡು ಬಂದೆ. ಇದೆಲ್ಲ ಮುಂಚೆ ಗೊತ್ತಿದ್ದರೆ ಒಂದಷ್ಟು ಫೋಟೋ ಮುಂಚೆಯೇ ತೆಗೆದುಕೊಂಡು ಹೋಗುತ್ತಿದ್ದೆ. ಇದೊಂದು ತರ Murphy's Law ಇದ್ದ ಹಾಗೆ. ಫೋಟೋ ಕೈಲಿರುವಾಗ ಅವಶ್ಯಕತೆ ಇರುವುದಿಲ್ಲ. ಅವಶ್ಯಕತೆ ಇರುವಾಗ ಫೋಟೋ ಕೈಲಿರುವುದಿಲ್ಲ.
ಫೋಟೋ ತೆಗೆಸಿಕೊಂಡು ಬಂದು ನೋಡಿದರೆ ಇನ್ನೂ ಮೊದಲ ನಂಬರ್ ಕೆಲಸವೇ ಮುಗಿದಿಲ್ಲ. 9 ಘಂಟೆಯಿಂದ 11 ಘಂಟೆಯವರೆಗೆ ಸಾಲಿನಲ್ಲಿ ನಿಂತುಕೊಂಡರೂ 10 ನೇ ನಂಬರ್ ತನಕ ಮಾತ್ರ ಆಯಿತು. ನನ್ನದೋ 26 ನೇ ನಂಬರ್. 1 ಘಂಟೆ  ವರೆಗೆ ಮಾತ್ರ ಅವರು ಕೇಸ್ ತೆಗೆದುಕೊಳ್ಳುತ್ತಾರೆ. ಮತ್ತೆ ಮಧ್ಯಾನ್ಹ ಪಾಸ್ ಪೋರ್ಟ್ ವಿತರಣೆ ಮಾತ್ರ ಎಂದು ತಿಳಿಯಿತು. ಆಮೆ ವೇಗದಲ್ಲಿ ಸಾಗುತ್ತಿರುವ ಕೇಸ್ ಗಳ ನಡುವೆ ನನ್ನ ಕೇಸ್ ಬರುವಾಗ ಖಂಡಿತ 1 ಘಂಟೆ ಕಳಿಯುತ್ತದೆ ಎಂದು ನನಗೆ ಆಗಲೇ ತೋರಿತು. ನಾನು ಎಮರ್ಜೆನ್ಸಿ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಿದ್ದರಿಂದ ಒಂದು ದಿನ ಉಳಿದರೆ ಯಾವ ಪ್ರಯೋಜನವೂ  ಇಲ್ಲ ( ಅದಕ್ಕೆ ಎಮರ್ಜೆನ್ಸಿ ಎಂದು ಹೇಗೆ ಕರೆಯಲಿ ಹೇಳಿ ) ಎಂದೆನಿಸಿ ಕೂಡಲೇ ಆಫೀಸರ್ ಇರುವಲ್ಲಿಗೆ ನಡೆದೆ.
ಅವರು ನಿಜಕ್ಕೂ ಸಮಾಧಾನಿ ಯಾಗಿದ್ದರು. ಅವರಲ್ಲಿ ನನ್ನ ಪಾಸ್ ಪೋರ್ಟ್ ಕಳೆದ ಕಥೆ, ವ್ಯಥೆ ಯನ್ನೆಲ್ಲ ತೋಡಿಕೊಂಡೆ. ಅವರು ನನ್ನ ಅಪ್ಲಿಕೇಶನ್ ಎಲ್ಲ ಪರಿಶೀಲಿಸಿದರು. ಅಲ್ಲಿಯೇ ಇನ್ನೊಂದು ಸಮಸ್ಯೆ ಎದುರಾಯಿತು. ಸ್ವೀಡನ್ ದೇಶದಲ್ಲಿ ನಮಗೆ ಯಾವುದೇ ID Card ಮೊದಲ ವರ್ಷ ನೀಡುವುದಿಲ್ಲ. ಆಫೀಸರ್ ನನಗೆ ನಿನ್ನ ಸ್ವೀಡನ್ ID Card ತೋರಿಸು ಎಂದರು. ಅವರು ಕೊಡುವುದಿಲ್ಲ ಎಂದರೆ ಇವರು ಕೇಳುತ್ತಿಲ್ಲ. ಇಕ್ಕಟ್ಟಿಗೆ ಸಿಲುಕಿಹೋದೆ. ಇಲ್ಲದಿದ್ದರೆ ನಿನ್ನ ಯುನಿವರ್ಸಿಟಿ ಯಿಂದ ಒಂದು ಲೆಟರ್ ಕೂಡಲೇ ಕಲಿಸಲು ಹೇಳು ಅಂದರು. ಏನು ಅಂತ ಹೇಳಲಿ. ಯುನಿವರ್ಸಿಟಿ ಯಲ್ಲಿರುವ ನನ್ನ ಬಾಸ್ ನನ್ನೊಡನೆ conference ಗೆ ಬಂದಿದ್ದರು. ಅವರಿಗೆ ಅದೇ ದಿನ Presentation ಇದ್ದಿದ್ದರಿಂದ ಅವರು ಮ್ಯಾಡ್ರಿಡ್ ಗೆ ಬಂದಿರಲಿಲ್ಲ. ಆದ್ದರಿಂದ ಯುನಿವರ್ಸಿಟಿ ಲೆಟರ್ ಕಲಿಸಲು ಸಾದ್ಯವೇ ಇಲ್ಲ. ಹಾಗೆಂದು ಇವರು ನಂಬಲು ರೆಡಿ ಇಲ್ಲ. ಮೊತ್ತ ಮೊದಲ ಬಾರಿಗೆ ಜೀವನದಲ್ಲಿ Dead Lock Situation ನಲ್ಲಿ ಸಿಲುಕಿದ್ದೆ. ನನ್ನ ಯಾವ ಜನ್ಮದ ಪುಣ್ಯವೋ ಏನೋ , ಆಫೀಸರ್ ಚೇಂಬರ್ ನಲ್ಲಿ ಆ ಆಫೀಸರ್ ಆತ್ಮೀಯ ರ ಗೆಳೆಯ ರೊಬ್ಬರು ಇದ್ದರು. ಅವರು ಮ್ಯಾಡ್ರಿಡ್ ನಲ್ಲಿ ದೊಡ್ಡ ಬಿಸಿನೆಸ್ ಮ್ಯಾನ್ . ಅವರು ನನ್ನ ಕಥೆಯನ್ನೆಲ್ಲಾ ಕೇಳಿ ಆ ಆಫೀಸರ್ ಅವರಲ್ಲಿ ಪಾಸ್ ಪೋರ್ಟ್ ಕೊಡುವಂತೆ ವಿನಂತಿಸಿಕೊಂಡರು. ಆ ಆಫೀಸರ್ ಗೆ ಮನ ಕರಗಿತೋ ಏನೋ ಕೂಡಲೇ ಫೋನ್ ಮಾಡಿ ಇದರ ಬಗ್ಗೆ ಯಾರ ಹತ್ತಿರವೋ ಮಾತನಾಡಿದರು. ನಂತರ ಒಂದು ವರುಷದ ಮಟ್ಟಿಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಲು ಸಹಿ ಹಾಕಿದರು. ಅಷ್ಟೇ  ಅಲ್ಲದೆ  ಸ್ವೀಡನ್ ತಲುಪಿದ ನಂತರ ಒಂದು ವರುಷದ ಒಳಗೆ ಹೊಸ ಪಾಸ್ ಪೋರ್ಟ್ ಪಡೆಯುವಂತೆಯೂ ಸೂಚಿಸಿದರು. ''ಬದುಕಿದೆಯಾ ಬಡ ಜೀವವೇ'' ಎನ್ನಿಸಿದ್ದು ಆಗಲೇ. ಅವರು ಆ ಸಂಧರ್ಭಕ್ಕೆ ನನಗೆ ದೇವರು, ಅವರೊಬ್ಬರೇ ಅಲ್ಲ, ಸಕಾಲದಲ್ಲಿ ನೆರವಿಗೆ ಬಂದ ಆ ಬಿಸಿನೆಸ್ ಮ್ಯಾನ್ ಕೂಡಾ ಆಪತ್ಭಾಂದವ ನಂತೆ ಕಂಡರು.  ಹೀಗೆ ಸಾಲನ್ನು ಮುರಿದು ಒಳಗೆ ಹೋಗಿ ಸುಮಾರು 12-30 ಹೊತ್ತಿಗೆ ನನ್ನ ಪಾಸ್ ಪೋರ್ಟ್ ಪಡೆಯಲು ಸಹಿ ಹಾಕಿಸಿಕೊಂಡು ಹೊರಗೆ ಬಂದು ರಿಸೆಪ್ಶನ್ ನಲ್ಲಿ ಹಣ ಕಟ್ಟಿದೆ. ಎಮರ್ಜೆನ್ಸಿ ಪಾಸ್ ಪೋರ್ಟ್ ಗೋಸ್ಕರ 11000 ರೂಪಾಯಿಗಳನ್ನು ತೆಗೆದುಕೊಂಡರು. ''ಬರೆಯ ಮೇಲೊಂದು ಬರೆ'' ಎನ್ನುವಂತೆ ಮೊದಲೇ ಎಲ್ಲ ಕಳೆದುಕೊಂಡವನಿಗೆ ಮತ್ತೊಂದು ಏಟು ನೀಡಿದ್ದರು. ಏನು ಮಾಡುವುದು, ತಿರುಗಿ ಬರಬೇಕೆಂದರೆ ಅದೆಲ್ಲ ಅನಿವಾರ್ಯವಾಗಿತ್ತು.
ಮಧ್ಯಾನ್ಹ 3 ಘಂಟೆಗೆ ನನಗೆ ಹೊಸ ಪಾಸ್ ಪೋರ್ಟ್ ನೀಡಿದರು. ಅದನ್ನು ಪಡೆದು ಕೂಡಲೇ ಟ್ರೈನ್ ಹತ್ತಿ Zaragoza ಬಂದೆನು. ಅಲ್ಲಿಂದ ನಾನು ಬಾಸ್ ಕೂಡಿಕೊಂಡು ಬಾರ್ಸಿಲೋನ ಕ್ಕೆ ಪ್ರಯಾಣ ಬೆಳೆಸಿದವು. ಪ್ರಯಾಣ ನನ್ನನ್ನು ಬಹಳಷ್ಟು ಸುಸ್ತಾಗುವ ಹಾಗೆ ಮಾಡಿತ್ತು. ಮಾನಸಿಕ ಒತ್ತಡ, ಮೇಲಿಂದ ಮೇಲೆ ಪ್ರಯಾಣ, ಚಿಂತೆ ಎಲ್ಲವೂ ನನ್ನನ್ನು ಸೋಲಿಸಿ ಬಿಟ್ಟಿದ್ದವು. ಸ್ವೀಡನ್ ತಲುಪಿದರೆ ಸಾಕೆಂದು ಯೋಚಿಸುತ್ತಿದ್ದೆ. ಹೆಂಡತಿಗೆ ಮೊದಲೇ ಹೇಳಿದ್ದೆ, ನನ್ನ ತಂದೆ ತಾಯಿಗಳಿಗೆ ಇದರೆ ಬಗ್ಗೆ ಏನು ಹೇಳಬೇಡ ಎಂದು, ಇಲ್ಲದಿರೆ ವೃಥಾ ಬೇಜಾರು ಮಾಡಿಕೊಳ್ಳುವುದೊಂದೇ ಅಲ್ಲದೆ ಸರ್ವ ದೇವರುಗಳಿಗೆ ಹರಕೆ ಹೊತ್ತು ಕಣ್ಣಿರು ಹಾಕುತ್ತ ಕುಳಿತುಕೊಳ್ಳುತ್ತಾರೆ ಎನ್ನುವುದು.
ಆ ದಿನ ಬಾರ್ಸಿಲೋನ  ತಲುಪುವಾಗ 9 ಘಂಟೆ ರಾತ್ರಿ. ಒಂದೇ ದಿನ 1200 ಕಿ ಮಿ ಪ್ರಯಾಣ ಮಾಡಿದ್ದೆ. ರಾತ್ರಿ ಕಣ್ಣಿಗೆ ಸ್ವಲ್ಪ ನಿದ್ದೆ ಬಂತು.
  ಮರುದಿನ ಬೆಳಿಗ್ಗೆ ಎದ್ದು Swedish Embassy ಗೆ ವೀಸಾ ಹಾಕಿಸಿಕೊಳ್ಳಲು ನಾನು ಮತ್ತು ನನ್ನ ಬಾಸ್ ಹೋದೆವು. ನನ್ನ ಬಾಸ್ ಗೆ ಸ್ವೀಡಿಷ್ ಭಾಷೆ ಬರುತ್ತದೆ ಯಾದ್ದರಿಂದ ಅಲ್ಲಿ ವ್ಯವಹರಿಸುವುದು ಅಷ್ಟು ಕಷ್ಟವಾಗಲಿಲ್ಲ. ಆದರೆ ಅವರಲ್ಲಿ ವೀಸಾ ಬಗ್ಗೆ ಕೇಳಿದಾಗ ಅವರು ಹೇಳಿದ್ದೇನು ಗೊತ್ತೇ '' ವೀಸಾ ಹಾಕುವ ಅಧಿಕಾರ ಕೇವಲ ಮ್ಯಾಡ್ರಿಡ್ ನಲ್ಲಿರುವ Swedish Embassy ಗೆ ಇದೆ, ನಮಗಿಲ್ಲ, ಆದ್ದರಿಂದ ನೀವು ಮ್ಯಾಡ್ರಿಡ್ ಗೆ ಹೋಗಿ ಹಾಕಿಸಿಕೊಂಡು ಹೋಗಿ'' ಎನ್ನಬೇಕೆ. ಹಿಂದಿನ ದಿನವಷ್ಟೇ ಮ್ಯಾಡ್ರಿಡ್ ನಿಂದ ಬಂದಿದ್ದೇನೆ ಈಗ  ಪುನಃ ಮ್ಯಾಡ್ರಿಡ್ ಗೆ ಹೋಗಬೇಕು ಅಂದಾಗ ನನ್ನ ತಲೆ ಹಾಳಾಗಿ ಹೋಯಿತು. ನನ್ನ ಬಾಸ್ ಬಹಳಷ್ಟು ಪ್ರಯತ್ನ ಪಟ್ಟರು ಅಲ್ಲಿಯೇ ಹಾಕಿಸಲು. ಆದರೆ ಅವರು ಒಪ್ಪಲೇ ಇಲ್ಲ. ಮ್ಯಾಡ್ರಿಡ್ ಗೆ ಹೋಗಲೇಬೇಕು ಎಂದು ಹೇಳಿ ಬಿಟ್ಟರು.

ತಲೆಯ ಮೇಲೆ ಕೈ ಹೊತ್ತು ಅಲ್ಲಿಂದ ಹೊರಗೆ ಬಂದೆವು. ನನ್ನ ಹತ್ತಿರ ವೀಸಾದ ಒಂದು ನಕಲಿತ್ತು. ಬಾಸ್ ಅಂದರು '' ನೀನು ಯುರೋಪ ನಲ್ಲೆ ಇರುವುದರಿಂದ ವೀಸಾ ಇಲ್ಲದೆಯೇ ನಾವು ಪ್ರಯಾಣ ಮಾಡೋಣ, ಮಧ್ಯದಲ್ಲಿ ಏನಾದರೂ ಸಮಸ್ಯೆ ಆದರೆ ನಾನು ಎದುರಿಸುತ್ತೇನೆ, ನೀನೇನು ಚಿಂತಿಸದಿರು'' ಎಂದು ಧೈರ್ಯ ತುಂಬಿದರು. ಸಂಜೆ 6 ಘಂಟೆಗೆ ಸ್ಪೇನ್ ನಿಂದ ವೀಸಾ ಇಲ್ಲದೆಯೇ ಪ್ರಯಾಣಕ್ಕೆ ರೆಡಿ ಆದೆ. ಟಿಕೆಟ್ ಕೌಂಟರ್ ನವರು ವೀಸಾ ಕೇಳಿದರು. ಅವರಿಗೆ ಎಲ್ಲ ಕಥೆ ಹೇಳಿದೆವು. ಬಹುಷ: ಅವರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಹಾಗೆಯೇ ಟಿಕೆಟ್ ಕೊಟ್ಟು ಕಳಿಸಿದರು. ಮುಂದಿದ್ದದ್ದು ಕಸ್ಟಂ ಚೆಕ್. ಅಲ್ಲಿ ಎದೆ ಡವ ಡವ ಎನ್ನಲು ಆರಂಬವಾಯಿತು. ಯಾವ ಪುಣ್ಯವೋ ಏನೋ ಅವರು ಏನನ್ನೂ ಕೇಳಲಿಲ್ಲ. ಇಷ್ಟೆಲ್ಲಾ ಮಾಡಿ ಆದೆ ದಿನ ಬರುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನಿಮ್ಮಲ್ಲಿ ಏಳಬಹುದು. ಅದಕ್ಕೆ ಕಾರಣ ಮರುದಿನ ಬೆಳಿಗ್ಗೆ ಸ್ವೀಡನ್ ನಲ್ಲಿ '' ಕೋಟ್ಯಾಂತರ ರೂಪಾಯಿ ಮೌಲ್ಯದ ಪ್ರಾಜೆಕ್ಟ್ '' ಬಗೆಗೆ ಮೀಟಿಂಗ್ ಏರ್ಪಡಿಸಿದ್ದೆವು. ಅಲ್ಲಿಗೆ ಹೋಗದಿದ್ದರೆ ಅದು ಕೈ ತಪ್ಪುವ ಸಾದ್ಯತೆ ಇತ್ತು. ಆದ್ದರಿಂದ ಬಾಸ್ ಆದೆ ದಿನ ಪ್ರಯಾಣ ಮಾಡೇ ಬಿಡೋಣ ಎಂದಿದ್ದರು.
ಹೀಗೆ ಸ್ಪೇನ್ ನಿಂದ ಪಾರಾಗಿ ಬಿಟ್ಟೆವು. ನಂತರ Copen Hagen ನಲ್ಲಿ ಇಳಿಯಿತು. ಇಲ್ಲಿ ನಾವು ಇನ್ನೊದು ವಿಮಾನ ಹತ್ತಬೇಕಿತ್ತು. ಇಲ್ಲಿ ಸ್ವಲ್ಪ ಹೆದರಿಕೆ ಇತ್ತು. ಆದರೆ ಇಲ್ಲಿಯೂ ಯಾವ ಸಮಸ್ಯೆ ಇಲ್ಲದೆ ಪಾರಾದೆವು. ಇನ್ನು ಸ್ವೀಡನ್ ದಲ್ಲಿ ಏನಾದರೂ ಚಿಂತೆ ಇಲ್ಲ ಯಾಕೆಂದರೆ  ಅದು ನಾವು ಇರುವ ಊರು.
ರಾತ್ರಿ 11-30 ಗೆ ವಿಮಾನ ಸ್ವೆಡೆನ್ನಿನ ಗೊತ್ಹೆಂಬುರ್ಗ್ ಗೆ ಬಂದಿಳಿಯಿತು. ಯಾವ ಅಡೆ ತಡೆ ಇಲ್ಲದೆ ಅಲ್ಲಿಂದ ಹೊರಗೆ ಬಂದು ಮನೆ ತಲುಪುವಾಗ 12-30 ಆಗಿತ್ತು. ಮೆಚ್ಚಿನ ಮಡದಿಗೆ ನನ್ನ ನೋಡಿದ ಕೂಡಲೇ ಅದ ಸಂತೋಷ ವರ್ಣಿಸಲಸದಳ, ಆನಂದಭಾಷ್ಪ ಅವಳ ಕಣ್ಣಲ್ಲಿ ಹರಿಯುವುದು ಕಂಡಿತು.
ಜೀವನದಲ್ಲಿ ಒಂದು ದೊಡ್ಡ ಗಂಡಾಂತರ ಕಳೆದು ಬಂದಂತೆ ಗೋಚರಿಸಿತು. ಮರುದಿನ ಬೆಳಿಗ್ಗೆಯೇ ಆಫೀಸಿನಿಂದ ನನಗೆ ಹೊಸ Laptop ಕೊಟ್ಟರು. ಹೀಗೆ ಗೊತ್ತಿಲ್ಲದ ದೇಶದಲ್ಲಿ ಭಾಷೆಯೂ  ಬರದೆ ಒದ್ದಾಡಿ ಬಂದ ಮೇಲೆ ಇದೀಗ ಪಾಸ್ ಪೋರ್ಟ್ ಗಾಗಿಯೇ ಒಂದು ಹೊಸ ಬ್ಯಾಗ್ ತೆಗೆದುಕೊಂಡಿದ್ದೇನೆ. ಅದು ನನ್ನ ದೇಹಕ್ಕೆ ತಾಗಿ ಕೊಂಡಿರುವಂತೆ ನೋಡಿಕೊಂಡಿದ್ದೇನೆ.
ಇನ್ಯಾರಿಗೂ ಇಂಥಹ ಅನುಭವ ಆಗಬಾರದು ಎಂಬ ದ್ರಷ್ಟಿಯಿಂದ ಲೇಖನ ಬರೆದಿದ್ದೇನೆ. ನನ್ನ ನೋವು, ನನಗೆ ಮಾತ್ರ ಸಾಕು. ನಿಮಗೆ ಯಾರಿಗೂ ಬೇಡ. ವಿದೇಶ ಪ್ರಯಾಣ ಸುಖವೇನೋ  ಹೌದು, ಆದರೆ ಅದು ಸಂಪೂರ್ಣ ಸುರಕ್ಷಿತ ಎಂದು ಮಾತ್ರ ಅಂದುಕೊಳ್ಳಬೇಡಿ. ಕಳ್ಳರೂ ಎಲ್ಲಡೆ ಇದ್ದಾರೆ. ಎಲ್ಲಿಯವರೆಗೆ ಮನುಕುಲವಿದೆಯೋ ಅಲ್ಲಿಯವರೆಗೆ, ಕಳ್ಳತನ, ಹಿಂಸೆ, ನೋವು ಇದ್ದದ್ದೇ. ಅದನ್ನು ತಪ್ಪಿಸಲು ಸಾದ್ಯವೇ ಇಲ್ಲ. ಕಿತ್ತು ತಿನ್ನುತ್ತಿರುವ ಬಡತನ, ಸಂಸ್ಕಾರವಿಲ್ಲದ ಬದುಕು, ಅಸಂಸ್ಕ್ರತ ನಾಗರೀಕ ಮನೋಭಾವ, ಇವೆಲ್ಲವುಗಳಿಂದ ಮನುಷ್ಯ  ತನಗರಿವಿಲ್ಲದೆ ಇಂಥಹ ಕಾರ್ಯಗಳಿಗೆ ಅಣಿಯಾಗುತ್ತಾನೆ. ಕಾಲ ಮಾತ್ರ ಇದಕ್ಕೆ ಪರಿಹಾರ. ವಿದೇಶಕ್ಕೆ ಹೋಗುವಾಗ ಮೊದಲು ಆ ದೇಶದ ಸುರಕ್ಷತೆಯ ಬಗೆಗೆ ತಿಳಿದುಕೊಳ್ಳಿ. ಅಲ್ಲಿ ಏನಾದರೂ ಪಾಸ್ ಪೋರ್ಟ್ ಕಳ್ಳತನ ಆದರೆ ಹೆಚ್ಚಿನ ಮಾಹಿತಿಗೆ ನನ್ನನ್ನು ಸಂಪರ್ಕಿಸಿ :) 


ಇಂಥಹ ಸಂಧರ್ಭದಲ್ಲಿ ನನಗೆ ಧೈರ್ಯ ತುಂಬಿದ ನನ್ನೆಲ್ಲ ಮಿತ್ರ ಮಿತ್ರೆಯರಿಗೆ, ಬ್ಲಾಗ್ ಗೆಳೆಯರಿಗೆ, ಹಾಗೂ ನೆಚ್ಚಿನ ಮಡದಿಗೆ ಅನಂತ ಧನ್ಯವಾದಗಳು 

58 comments:

PARAANJAPE K.N. said...

ನಿಮ್ಮ ಅನುಭವ ಕಥನದ ಮುಂದುವರೆದ ಭಾಗ ಓದಿದೆ, ಚೆನ್ನಾಗಿದೆ, ಇದೊಂದು ಪಾಠ, ಹಾಗಾದಾಗ ಮಾತ್ರ ಅದರ ಕಟು ಅನುಭವ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್,
ಈಗಷ್ಟೇ ಬರೆದು ಹಾಕಿದೆ, ನಿಮ್ಮ ಅಭಿಪ್ರಾಯ ಬಂತು. ಹೌದು, ಇದೊಂದು ನಿಜವಾಗಿಯೂ ಪಾಠ. ಮುಂದೆ ಯಾರಿಗೂ ಹೀಗಾಗದಿರಲಿ ಎನ್ನುವುದೇ ಲೇಖನದ ಉದ್ದೇಶ.
ಧನ್ಯವಾದಗಳು

ಕ್ಷಣ... ಚಿಂತನೆ... said...

ಗುರು ಅವರೆ, ನಿಮ್ಮ ಸ್ಪೇನ್ ಪ್ರವಾಸದ ಕಹಿ ಅನುಭವದ ಕಥೆ ಓದಿದೆ. ವಿದೇಶದಲ್ಲಿರುವವರಿಗೆ, ಹಾಗೂ ವಿದೇಶಗಳಲ್ಲಿ ಸಂಚರಿಸುವವರಿಗೆ ಇದು ಬಹಳ ಮುಖ್ಯವಾದ ಪಾಠ. ಹಾಗೂ ನಿಮ್ಮ ಪ್ರವಾಸ ಸುಖಾಂತ್ಯವಾಗಿದ್ದು, ನಿಮ್ಮ ಮಡಿದಿಯವರಿಗೂ, ಮಿತ್ರರಿಗೂ ಎಲ್ಲರ ಆತಂಕ ದೂರವಾಗಿದ್ದು ಸಂತಸವಾಗಿದೆ.

ಇತರರಿಗೆ ಹೀಗಾಗದಿರಲೆಂಬ ನಿಮ್ಮ ಕಾಳಜಿಗೆ ಧನ್ಯವಾದಗಳು.

ಆದರೆ, ಇದೊಂದು ನಿಜಕ್ಕೂ ಅಗ್ನಿಪರೀಕ್ಷೆಯ ಅನುಭವ.

ಸ್ನೇಹದಿಂದ,

ಚಂದ್ರು

ಶಿವಪ್ರಕಾಶ್ said...

ಯಪ್ಪಾ... ಎಂತ ಅನುಭವ ಇದು.. !!!!
Luckily you escaped from airports ...
ಯಾರಿಗೂ ಈ ಥರ ಆಗದಿರಲಿ...

ಸವಿಗನಸು said...

ಗುರು,
ಸ್ಪೇನ್ ಪ್ರವಾಸದ ಕಹಿ ಅನುಭವ ಇನ್ಯಾರಿಗೂ ಬೇಡ..... ಓದುತ್ತಿದ್ದರೆ ನಮಗೆ ಬಹಳ ಆತಂಕ ಮೂಡಿಸಿತು...
ಕೊನೆಯಲ್ಲಿ ಸುಖಾಂತ್ಯವಾಗಿದ್ದು ಎಲ್ಲರಿಗೂ ಸಂತಸ ಮೂಡಿಸಿತು....
ವಿದೇಶದಲ್ಲಿರುವವರಿಗೆ ಬಹಳ ಮುಖ್ಯವಾದ ಪಾಠ ಇದು.....
ಎಲ್ಲರಿಗೂ ತಿಳಿ ಹೇಳಿದ ನಿಮಗೆ ಧನ್ಯವಾದಗಳು.

sunaath said...

ಓದುತ್ತಿರುವಾಗ ನನ್ನ ಮನಸ್ಸೂ ದುಗುಡದಿಂದ ಕೂಡಿತ್ತು. ಇನ್ನು ಸ್ವತಃ ಅನುಭವಿಸುತ್ತಿರುವ ನಿಮಗೆ ಹೇಗಾಗಿರಬೇಡ? ನಿಮ್ಮ ಲೇಖನ ಓದಿದ ವಿದೇಶ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತಾಗಲಿ.

ಸಾಗರದಾಚೆಯ ಇಂಚರ said...

ಚಂದ್ರು ಸರ್,
ಸ್ವೀಡನ್ ಬಂದಾಗ ನನಗೆ ಆದ ಸಂತಸ ಅಷ್ಟಿಷ್ಟಲ್ಲ, ಎಲ್ಲಿ ಅಲ್ಲಿಯೇ ಸಿಳುಕಿಬಿದುತ್ತೇನೋ ಎಂಬ ಭಯ ಕಾಡಿತ್ತು.ಕಸ್ಟಮ್ ಜೊತೆ ಸಿಲುಕಿದರೆ ಹೊರಗೆ ಬರುವುದು ತುಂಬಾ ಕಷ್ಟ, ನಮ್ಮ ದೇಶದಲ್ಲಿ ಆದರೆ ಏನಾದರೂ ಮಾಡಿ ಹೊರಗೆ ಬರಬಹುದು.
ನಿಜಕ್ಕೂ ಇದೊಂದು ಅಗ್ನಿ ಪರೀಕ್ಷೆಯೇ ಆಗಿತ್ತು

ಸಾಗರದಾಚೆಯ ಇಂಚರ said...

ಶಿವೂ,
ನಿಜಕ್ಕೂ ಲಕ್ಕಿ ನೆ,
ಇಲ್ದಿದ್ರೆ ಕ್ಷಣಕ್ಕೊಮ್ಮೆ ಪಾಸು ಪೋರ್ಟ್ ಮತ್ತೆ ವೀಸಾ ನೋಡೋ ಕಸ್ಟಮ್ಸ್ ಆ ದಿನ ನೋಡಲೇ ಇಲ್ಲ ಅಂದ್ರೆ ನಂಬ್ತಿರಾ?

ಏನೋ ದೇವರ ದಯೆ , ತಿರುಗಿ ಬಂದೆ ಸುಖವಾಗಿ

ಸಾಗರದಾಚೆಯ ಇಂಚರ said...

ಸವಿಗನಸು,
ಹೌದು, ಎಷ್ಟೋ ಸಲ ನಾವು ತುಂಬಾ ಕೇರ್ ಲೆಸ್ ಆಗಿ ಇರ್ತಿವಿ, ಆದರೆ ನಮ್ಮ ಕ್ಷಣ ಮಾತ್ರದ ನಿಷ್ಕಾಳಜಿ ಜೀವನವನ್ನೇ ಕಷ್ಟಕ್ಕೆ ದೂಡಬಹುದು ಅನ್ನೋದಕ್ಕೆ ನಾನೆ ಸಾಕ್ಷಿ
ಯಾರಿಗೂ ಹೀಗೆ ಆಗೋದು ಬೇಡ

ಸಾಗರದಾಚೆಯ ಇಂಚರ said...

ಸುನಾಥ್ ಸರ್,
ನಾವು ನಮ್ಮ ಎಚ್ಚರಿಕೆಯಿಂದ ಇರಲೇಬೇಕು. ಅದರಲ್ಲೂ ಸ್ಪೇನ್ ಮತ್ತು ಇಟಲಿ ಗೆ ಹೋಗೋವಾಗ ಮೈಯೆಲ್ಲಾ ಕಣ್ಣಾಗಿರಬೇಕು.
ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು

ದಿನಕರ ಮೊಗೇರ said...

ನೀವು ಲೇಖನ ಬರೆದ ರೀತಿ ಹೇಗಿತ್ತೆಂದರೆ, ನಾನೂ ನಿಮ್ಮ ಜೊತೆ ಪ್ರಯಾಣ ಮಾಡಿದ ಹಾಗಿತ್ತು..... ನಿಜಕ್ಕೂ ಭಯಾನಕ ಅನುಭವ... ಯಾರಿಗೂ ಹೀಗೆ ಆಗದಿರಲಿ, ಎಂಬ ನಿಮ್ಮ ಆಶಯಕ್ಕೆ ತುಂಬಾ ಖುಷಿಯಾಯಿತು.... ಅದಿರಲಿ, ಆ ಟೈಮ್ ನಲ್ಲಿ ಎಷ್ಟು ದೇವರಿಗೆ, ಏನೆಲ್ಲಾ ಹರಕೆ ಇಟ್ಟುಕೊಂಡಿರಿ...

shivu.k said...

ಗುರುಮೂರ್ತಿ ಸರ್,

ನಮಗಿದೆಲ್ಲಾ ಗೊತ್ತಿರಲಿಲ್ಲ. ಯುರೋಪ್ ಎಂದರೆ ಎಲ್ಲಾ ಸೊಗಸು, ಶಿಸ್ತು, ಎಂದು ಕೇಳಿದೆವು. ನಿಮ್ಮ ಕತೆಯನ್ನು ಕೇಳಿದರೆ ಮೇಲೆ ಪ್ರಪಂಚದಲ್ಲಿ ಎಲ್ಲಾಕಡೆಯೂ ಕಳ್ಳರು, ಕೆಟ್ಟವರು ಇರುತ್ತಾರೆ ಎನ್ನುವುದು ಗೊತ್ತಾಯಿತು.

ಮತ್ತೆ ನೀವು ವಿವರಿಸಿದ ರೀತಿಯೆಲ್ಲಾ ಸಿನಿಮಾದ ಹಾಗೆ ಕಣ್ಣ ಮುಂದೆ ಚಲಿಸಿದಂತೆ ಆಯ್ತು. ನೀವು ಅಂತ ಸ್ಥಿತಿಯನ್ನು ಧೈರ್ಯದಿಂದ ಎದುರಿಸಿದ ರೀತಿ ಮೆಚ್ಚುಗೆಯಾಯಿತು. ಕೊನೆಗೆ ಎಲ್ಲಾ ಒಳ್ಳೆಯದಾಯಿತಲ್ಲ. ದೇವರು ದೊಡ್ಡವನು...

Rajesh Manjunath - ರಾಜೇಶ್ ಮಂಜುನಾಥ್ said...

ಗುರುಮೂರ್ತಿ ಸರ್,
ಪ್ರತಿ ಸಾಲನ್ನು ಓದುತ್ತಾ ಹೋದಂತೆ ಮೈ ಮನದಲ್ಲೆಲ್ಲ ಅದೇನೋ ಪುಳಕ, ಅದು ಹೇಗೆ ಅಂತಹ ಪರಿಸ್ಥಿತಿಯನ್ನು ಎದುರಿಸಿದ್ದಿರೋ ದೇವರೇ ಬಲ್ಲ.

ಮನಸು said...

ಈ ಅನುಭವ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.... ನಮ್ಮೆಲ್ಲರಿಗು ಕಿವಿಮಾತು... ಇಂತಹ ಕಷ್ಟ ಯಾರಿಗೂ ಬೇಡ..

ತೇಜಸ್ವಿನಿ ಹೆಗಡೆ said...

"ಒಂದೇ ದಿನ 1200 ಕಿ ಮಿ ಪ್ರಯಾಣ"

ಅಬ್ಬಾ!!! ಊಹಿಸಲೂ ಸಾಧ್ಯವಿಲ್ಲ... Spainನ Painನ ಬಗ್ಗೆ ಓದಿ ಒಂಥರ ವಿಚಿತ್ರ ನೋವು ನನಗೂ ಆಯಿತು. ಅದು ಹೇಗೆ ಅಷ್ಟೋಂದು ಮಾನಸಿಕ ಒತ್ತಡವನ್ನು ನಿಭಾಯಿಸಿದರೋ ಕಾಣೆ. ನಿಮ್ಮೊಂದಿಗೆ ನಿಮ್ಮ ಬಾಸ್ ಕೂಡಾ ಇದ್ದುದಕ್ಕೇ ನೀವು ಇಷ್ಟಾದರೂ ನಿಭಾಯಿಸಲು ಸಾಧ್ಯವಾಯಿತೇನೋ ಅಲ್ಲವೇ?

Snow White said...

ಗುರುಮೂರ್ತಿ ಸರ್,
ನಿಜಕ್ಕೂ ನೀವು ಲಕ್ಕಿ ಸರ್..ಇನ್ನು ಯಾರಿಗೂ ಹೀಗೆ ಆಗದಿರಲಿ ..ನಿಮ್ಮ ಅನುಭವ ನಮ್ಮೆಲ್ಲರಿಗೂ ಪಾಠ ಇದ್ದಂತೆ

ಸಾಗರದಾಚೆಯ ಇಂಚರ said...

ದಿನಕರ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಹರಕೆ ಹೊತ್ತಿದ್ದೇನೆ. ಭಾರತಕ್ಕೆ ಹೋದಾಗ ಸಲ್ಲಿಸಬೇಕು
ಕೆಲವೊಮ್ಮೆ ಕಾಣದ ಭಗವಂತನೇ ಬೇಕಾಗುತ್ತಾನೆ ರಕ್ಷಿಸಲು, ಅಲ್ಲವೇ?
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್,
ಯಾವ ದೇಶಕ್ಕೆ ಹೋಗಿ ಕಳ್ಳರು ಇದ್ದೆ ಇದ್ದಾರೆ, ಅಮೇರಿಕಾದಲ್ಲೂ ಬೇಕಾದಷ್ಟು ಕಳ್ಳತನ ಆಗುತ್ತೆ. ನಮ್ಮಲ್ಲಿ ಕಲ್ಲತಣನೆ ದೊಡ್ಡ ಸುದ್ದಿ ಆಗಿ ಪೇಪರ್ ನಲ್ಲಿ ಬರುತ್ತೆ. ಅಲ್ಲಿ ಅದನ್ನೆಲ್ಲಾ ಮುಚ್ಚಿ ಬಿಡ್ತಾರೆ ಅಷ್ಟೇ.
ನಿಮ್ಮ ಹಾರೈಕೆ ಸದಾ ಇರಲಿ, ಮೆಚ್ಚಿ ಓದಿದ್ದಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ರಾಜೇಶ ಸರ್,
ಆ ದಿನ ಎಲ್ಲ ಮನಸ್ಥಿತಿ ಮೇಲೆ ನಿಯಂತ್ರಣ ಮಾಡೋಕೆ ಯೋಗ ಮಾಡ್ತಾ ಇದ್ದೆ. ಅಷ್ಟೊಂದು ಟೆನ್ಶನ್ ತಡ್ಕೊಳೋಕೆ ಆಗಬೇಕಲ್ಲ ಅದಿಕ್ಕೆ.
ನಿಮ್ಮ ಹಾರೈಕೆಗೆ ಧನ್ಯವಾದಗಳು
ಹೀಗೆಯೇ ಬರ್ತಾ ಇರಿ

ಸಾಗರದಾಚೆಯ ಇಂಚರ said...

ಮನಸು,
ಇನ್ಯಾರಿಗೂ ಹೀಗೆ ಆಗದಿರಲಿ ಅನ್ನೋದೇ ನನ್ನ ಆಶಯ,
ಸದಾ ಬರ್ತಾ ಇರಿ

ಸಾಗರದಾಚೆಯ ಇಂಚರ said...

ತೇಜಸ್ವಿನಿ ಮೇಡಂ ,
೧೨೦೦ ಕಿ ಮಿ ಪ್ರಯಾಣ ಮಾಡೋದು ಕಷ್ಟ ಆಗಿರಲಿಲ್ಲ ಆದರೆ ಮಾನಸಿಕ ಸ್ಥಿತಿ ಸರಿ ಇಲ್ದೆ ಇದ್ದಿದ್ರಿಂದ ಅ ೧೨೦೦ ಕಿ ಮಿ ೨೪೦೦ ಕಿ ಮಿ ಹಾಗೆ ಕಂಡಿತು.
ಬಾಸ್ ಜೊತೆಗೆ ಇದ್ದಿದ್ದಕ್ಕೆ ಸ್ವಲ್ಪ ಧೈರ್ಯನು ಬಂತು.
ಒಬ್ಬನೇ ಆಗಿದ್ರೆ ಏನಾಗ್ತಿತ್ತೋ ಏನೋ.
ಮೆಚ್ಚುಗೆಗೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

ಇನ್ಯಾರೂ ಇಂಥಹ ಕಷ್ಟಕ್ಕೆ ಸಿಲುಕದೆ ಇರಲಿ ಅನ್ನೋದೇ ನನ್ನ ಆಸೆ.
ನಿಮ್ಮ ಹಾರೈಕೆ ಸದಾ ಇರಲಿ, ಹೀಗೆಯೇ ಬರ್ತಾ ಇರಿ

Balu said...

ಗುರುಮೂರ್ತಿ,
ಲೇಖನಕ್ಕೆ ಧನ್ಯ ವಾದಗಳು. ಎರಡನೇ ಕಂತಿಗೆ ಕಾಯ್ತಾ ಇದ್ದೆ. ನಾನೂ ಮುಂದಿನ ವಾರ ಜರ್ಮನಿಗೆ ಬರ್ತಾ ಇದ್ದೇನೆ. ನಿಮ್ಮ ಲೇಖನದಿಂದಾಗಿ ನಿಜವಾಗಿಯೂ ಸಹಾಯವಾಯ್ತು. ಪಾಸಪೋರ್ಟಿಗೆ ಅಂತ ಬೇರೆ ಪೌಚ್ ಬ್ಯಾಗೇ ತಗೋಬೇಕೋ? ಬೇರೆ ಏನು ಎಚ್ಚರಿಕೆ ಬೇಕು, ಸಲಹೆ ನೀಡಿ.

ಊರಿಂದ ಬೇರೆ ಏನಾದ್ರೂ ತರಬೇಕಾದದ್ದು ಇದ್ದರೆ ತಿಳಿeಸಿ, ತರುತ್ತೇನೆ.
ಬಾಲು ಸಾಯಿಮನೆ
blhegde@gmail.com

ಸಾಗರದಾಚೆಯ ಇಂಚರ said...

ಬಾಲು,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು
ಜರ್ಮನಿಗೆ ಬಂದಾಗ ಆದ್ರೆ ನಮ್ಮಲ್ಲಿಗೂ ಬನ್ನಿ,
ಪಾಸು ಪೋರ್ಟ್ ಗೆ ಅಂತಾನೆ ಪೌಚ್ ಇಟ್ಕೊಳ್ಳಿ
ಇನ್ನೇನಾದ್ರು ಸಹಾಯ ಬೇಕಿದ್ರೆ ಹೇಳಿ

Unknown said...

ನಿಮ್ಮ ಸ್ಪೇನ್ ಪ್ರವಾಸದ ಕಹಿ ಅನುಭವದ ಕಥೆ ಓದಿದೆ. ವಿದೇಶದಲ್ಲಿರುವವರಿಗೆ, ಹಾಗೂ ವಿದೇಶಗಳಲ್ಲಿ ಸಂಚರಿಸುವವರಿಗೆ ಇದು ಬಹಳ ಮುಖ್ಯವಾದ ಪಾಠ. ಹಾಗೂ ನಿಮ್ಮ ಪ್ರವಾಸ ಸುಖಾಂತ್ಯವಾಗಿದ್ದು, ನಿಮ್ಮ ಮಡಿದಿಯವರಿಗೂ, ಮಿತ್ರರಿಗೂ ಎಲ್ಲರ ಆತಂಕ ದೂರವಾಗಿದ್ದು ಸಂತಸವಾಗಿದೆ.

ಸಾಗರದಾಚೆಯ ಇಂಚರ said...

ಪ್ರದೀಪ,
ನಿಜ, ಇದೊಂದು ಕಹಿ ಅನುಭವವೇ ಆದರೂ ಎಚ್ಚರಿಕೆಯೇ ಕರೆಘಂಟೆಯೂ ಆಗಿದೆ,
ಇನ್ನು ಯಾರೂ ಹೀಗೆ ಅನುಭವಿಸುವುದು ಬೇಡ

SANTOSH MS said...

Sir, this will be a warning to me for my future travel within Europe. Anyhow, by God's grace you have reaced home safely.

Ultrafast laser said...

Wow!, quite a hrrendous experience man!. Nevertheless, your fighting spirit is appreciable. Good one!.-D.M.Sagar

ಸಾಗರದಾಚೆಯ ಇಂಚರ said...

Dear Santhosh,
you should be very careful while travelling in not only in europe but foreign as a whole. Especially be careful while you are in Italy and Spain.
Thanks for the comments

ಸಾಗರದಾಚೆಯ ಇಂಚರ said...

Dear Ultrafast Laser
thanks for your words,
but those days are unforgettable in my lifetime

Roopa said...

ನಿಮ್ಮ ಅನುಭವ ಎಲ್ಲರಿಗು ಎಚ್ಚರಿಕೆಯ ಘಂಟೆಯೇ ಸರಿ. ವಿದೇಶದಲ್ಲಾಗಲಿ ನಮ್ಮ ನೆಲದಲ್ಲಾಗಲಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು ಎನ್ನುವುದನ್ನು . ಮತ್ತೆ ಮನದಟ್ಟು ಮಾಡಿಸುತ್ತದೆ ನಿಮ್ಮ ಲೇಖನ . ಹೇಗೋ ಎಲ್ಲಾ ಸರಿ ಹೋಯಿತಲ್ಲ ಅಷ್ಟು ಸಾಕು

Me, Myself & I said...

ಡಾ, ಗುರುಮೂರ್ತಿಯವ್ರೆ

ತುಂಬಾ ಸ್ವಾರಸ್ಯ ಭರಿತವಾಗಿದೆ. ಎರಡನೆ ಭಾಗನ ಒಂಚೂರು ಮೊಟಕು ಗೊಳಿಸ್ಬೋದಿತ್ತು. ಆದ್ರೂ ತುಂಬಾ ಆತಂಕದ ಕ್ಷಣಗಳನ್ನ ಎಳೆ ಎಳೆ ಯಾಗಿ ಬಿಚ್ಚಿಟ್ಟು ಓದೋಕ್ಕೆ ಅನುವು ಮಾಡ್ಕೋಟ್ಟದ್ದಕ್ಕೆ ಅಭಿನಂದನೆಗಳು.

ಸಾಗರದಾಚೆಯ ಇಂಚರ said...

ರೂಪಾ,
ನಿಮ್ಮ ಲೇಖನ ಓದಿದ ಮೇಲೆ ನನ್ನ ಸ್ಥಿತಿ ಅಷ್ಟೇನೂ ಕಷ್ಟದ್ದಾಗಿರಲಿಲ್ಲ ಎನಿಸಿತು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಲೋದ್ಯಾಶಿ ಯವರೇ,
ನೀವು ಅಂದಿದ್ದು ನಿಜ, ಮೊಟಕು ಗೊಳಿಸೋಕೆ ತುಂಬಾ ಪ್ರಯತ್ನ ಪಟ್ಟೆ. ಆದ್ರೆ ಕೆಲವೊಮ್ಮೆ ನಮ್ಮ ನೋವನ್ನು ಹಂಚಿಕೊಂಡಷ್ಟು ಸಮಾಧಾನ ಸಿಗುತ್ತೆ ಆಲ್ವಾ,
ಅದು ದೊಡ್ದ ಆಗೋಯ್ತು
ಅಭಿಪ್ರಾಯಕ್ಕೆ ಧನ್ಯವಾದಗಳು

Manju Bhat said...

ಗುರು, ಲೇಖನವನ್ನ ಚೆನ್ನಾಗಿ ಬರೆದಿದ್ದಿಯ. ಓದಿದಮೇಲೆ ಮುಂದಿನ ಲೇಖನಕ್ಕಾಗಿ ಕಾಯುತ್ತಿದ್ದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನೋದು ಸತ್ಯ.
ನಿಮಗೆ ಹಾಗೂ ನಿಮ್ಮ ಮನೆಯವರಿಗೆ ದೀಪಾವಳಿಯ ಶುಭಾಶಯಗಳು!!!

ಸಾಗರದಾಚೆಯ ಇಂಚರ said...

ಮಂಜು,
ಮೆಚ್ಚಿದ್ದಕ್ಕೆ ಧನ್ಯವಾದಗಳು
ನಿಮ್ಮ ಮನೆಯವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಬಾಲು said...

ನಿಮ್ಮದು ಕಠೊರವಾದ ಅನುಭವ, ಹಾಗೆಯೇ ಬೇರೆಲ್ಲರಿಗೂ ಒಂದು ಪಾಠ. ವಿದೇಶ ಪ್ರಯಾಣದಲ್ಲಿ ತುಂಬ ಜಾಗರೂಕರಾಗಿರಬೇಕು. ಲೇಖನ ಓದುವಾಗ ನನಗು ಕೂಡ ಧುಗುದ ಉಂಟಾಗಿತ್ತು, ಇನ್ನು ನಿಮಗೆ ಹೇಗೆ ಆಗಿರಬೇಡ...

ಲ್ಯಾಪ್ಟಾಪ್ ಜೊತೇನೆ ಪಾಸ್ ಪೋರ್ಟ್ ಇಡೋ ನನ್ನೆಲ್ಲ ಸ್ನೇಹಿತರಿಗೆ ನಿಮ್ಮ ಲಿಂಕ್ ಕಳಿಸಿದ್ದೇನೆ.

ಸಾಗರದಾಚೆಯ ಇಂಚರ said...

ನಿಜ ಬಾಲು,
ಇದೊಂದು ಕತ್ಹೊರ ಅನುಭವಾನೆ,
ಯಾರಿಗೂ ಹೀಗೆ ಆಗಬಾರದು,
ಅಭಿಪ್ರಾಯಕ್ಕೆ ಧನ್ಯವಾದಗಳು

ರಾಜೇಶ್ ನಾಯ್ಕ said...

ಗುರು,
ಇದರ ಮೊದಲ ಭಾಗ ಓದಿದ ಬಳಿಕ ಎರಡನೇ ಭಾಗಕ್ಕೆ ಕಾಯುತ್ತಿದ್ದೆ. ಧೈರ್ಯದಿಂದ ಎದುರಿಸಿದಿರಲ್ಲ, ಅದನ್ನು ಮೆಚ್ಚಬೇಕು.

ಸೀತಾರಾಮ. ಕೆ. / SITARAM.K said...

ತಮ್ಮ ವೀದೇಶಿ ಪ್ರಯಾಣದಲ್ಲಾದ ಪ್ರಯಾಸ ಪಾಡು ಯಾರಿಗು ಬೇಡ. ಆದರೆ ಅ೦ಥಹ ಪರಿಸ್ತಿತಿಯಲ್ಲೂ ತಾವು ಧೈರ್ಯ ಕಳೆದುಕೊಳ್ಳದೇ ಅಲ್ಲಿ ಇಲ್ಲಿ ಎಡತಾಕಿ ಸ೦ಧರ್ಭ ನಿರ್ವಹಿಸಿದ ರೀತಿ ನಿಜಕ್ಕೂ ಶ್ಲಾಘನೀಯ. ಬೇರೆಯವರಿಗೂ ಇದೊ೦ದು ಪರಿಸ್ತಿತಿ ನಿರ್ವಹಿಸಲು ಅತ್ತುತ್ಯಮ ಸಹಾಯಕಾರಿ ಲೇಖನ. ಅನುಭವ ಹ೦ಚಿಕೊ೦ಡದ್ದಿಕ್ಕೆ ಧನ್ಯವಾದಗಳು.

ಜಲನಯನ said...

ಪ್ರವಾಸ ಕಥನ ಎಂದುಕೊಳ್ಳೋಣವೆಂದರೆ ಇದು ಪ್ರಯಾಸ-ಪ್ರವಾಸ ಕಥನ ಆಯ್ತು. ಡಾ. ಗುರು ನಿಮ್ಮ ಅನುಭವ ಇತರರಿಗೆ ಮಾರ್ಗದರ್ಶಕ ಖಂಡಿತ. ಅದರಲ್ಲೂ ಭಾಷೆ ಪೂರ್ತಿ ವಿಭಿನ್ನವಾದರೆ ಮುಗಿದೇ ಹೋಯಿತು. ಇಂಗ್ಲೀಷಿನಲ್ಲಿ ಸ್ವಲ್ಪ ಮಾರ್ಪಾಡು ಇದ್ದು ಸ್ಟರ್ಲಿಂಗ್ ನಲ್ಲಿ ನನಗೇ ಹೀಗೇ ಇಕ್ಕಟ್ಟಿನ ಪರಿಸ್ಥಿತಿಯೆದುರಾಯಿತೆಂದರೆ...ಪಾಸ್ಪೋರ್ಟ್ ಕಳೆದುಕೊಂಡು ಸ್ಪೇನಿನಲ್ಲಿ ನಿಮ್ಮ ಪಾಡು ಊಹಿಸಲೂ ಕಷ್ಟಕರ.
ಕೊನೆಗೆ ಮನಮೆಚ್ಚಿದ ಮಡದಿ ಜೊತೆ ದೀಪಾವಳಿಗೆ ಬಂದರಲ್ಲಾ...ಇಗೋ ನಿಮಗೆಲ್ಲಾ...
ಜಲನಯನ ಶುಭ ಹಾರೈಕೆ
ಬೆಳಗು ನೀ ಹಣತೆಯನು
ಚೆಲ್ಲಲಿ ಬೆಳಕು ಒಳ-ಹೊರಗೆ
ಮನದುಂಬಿ ತನು ತುಂಬಿ
ಹೊಮ್ಮಲಿ ಶಕ್ತಿ ಒಳ-ಹೊರಗೆ.
ತರಲಿ ಹೊತ್ತು ಈ ದೀಪಾವಳಿ
ಇಂದು ಇನ್ಮುಂದೂ ಪ್ರತಿಘಳಿಗೆ
ಜ್ಜಾನ ಸುಖ ಸಂತೋಷ ಸಂಪತ್ತು
ಹರಡಿ ನೆಮ್ಮದಿ ಪ್ರತಿ ದೀವಳಿಗೆ.

ಸಾಗರದಾಚೆಯ ಇಂಚರ said...

ರಾಜೇಶ್ ಸರ್,
ನಿಮ್ಮ ಹಾರೈಕೆ ಹೀಗೆ ಇರಲಿ, ದೀಪಾವಳಿಯ ಶುಭಾಶಯಗಳು

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್,
ನಿಜಕ್ಕೂ ದೇವರು ದೊಡ್ಡವನು,
ಹೀಗೆ ಬರ್ತಾ ಇರಿ, ದೀಪಾವಳಿಯ ಶುಭಾಶಯಗಳು

ಸಾಗರದಾಚೆಯ ಇಂಚರ said...

ಜಲನಯನ
ದೀಪಾವಳಿಗೆ ಸುಂದರವಾಗಿ ಹಾರೈಸಿದ್ದಿರಿ,
ಪ್ರೀತಿ ಹೀಗೆ ಇರಲಿ
ಧನ್ಯವಾದಗಳೊಂದಿಗೆ

ಸುಧೇಶ್ ಶೆಟ್ಟಿ said...

ಗುರುಮೂರ್ತಿ ಅವರೇ....

ತಡವಾಗಿ ಕಮೆ೦ಟು ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ.... ಲೇಖನ ಅವತ್ತೇ ಓದಿದ್ದೆ...

ನಿಮ್ಮ ಲೇಖನ ತು೦ಬಾ ಸಹಾಯಕವಾಯಿತು... ನಿಮ್ಮ ಸ್ಥೈರ್ಯವನ್ನು ಮೆಚ್ಚಲೇಬೇಕು....

ಸ್ವೀಡನ್ ಸ್ವೀಟ್ ಮೆಮೊರೀಸ್ ಇದ್ದರೆ ಹೇಳಿ :)

Rashmi said...

Hey! Good to read the second part. All i can say is "My God!"

ಸಾಗರದಾಚೆಯ ಇಂಚರ said...

ಸುದೇಶ ಸರ್,
ತಡವಾಗಿಯಾದರೂ ಬಂದಿರಿ, ಅದೇ ಸಂತೋಷ,
ಹೀಗೆಯೇ ಬರುತ್ತಿರಿ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ಸಾಗರದಾಚೆಯ ಇಂಚರ said...

Dear Rashmi,

Thanks for your concern,

keep visiting blog...

Ittigecement said...

ಗುರು....

ಒಡುತ್ತ... ಓದುತ್ತ... ಕಣ್ಣೆಲ್ಲ ಮಂಜಾಯಿತು....

ಅಂಥಹ ಸಂದರ್ಭಗಳಲ್ಲಿ ಸಮೋಯುಚಿತ ನಿರ್ಧಾರ ತೆಗೆದು ಕೊಂಡಿದ್ದು ಶ್ಲಾಘನೀಯ...

ನಾನು ಲಂಡನ್ ಹೋದಾಗ ನನ್ನ ಪಾಸ್ಪೋರ್ಟ್ ಕಳೆದು ಹೋಗಿತ್ತು...
ಆದರೆ ನಿಮ್ಮಷ್ಟು ತೊಂದರೆ ಅನುಭವಿಸಿಲ್ಲ...

ಕೆಲಸದ ಒತ್ತಡದದಿಂದಾಗಿ ಬರುವದು ತಡವಾಯಿತು ಬೇಸರಿಸದಿರಿ...

ಹೊರದೇಶದಲ್ಲಿ
ಒಂದು ಥರಹದ ಪರದೇಶಿ ಭಾವನೆ ಬರುತ್ತದೆ ಅಲ್ಲವಾ...?

ನಿಮ್ಮ ಭಾವಗಳಿಗೆ ನನ್ನ ನಮನಗಳು...

ಸಾಗರದಾಚೆಯ ಇಂಚರ said...

ಆತ್ಮೀಯ ಪ್ರಕಾಶಣ್ಣ,
ಅದೊಂದು ಮರೆಯಲಾರದ ಅನುಭವ,
ಹೀಗೆಯೇ ಬರುತ್ತಿರಿ
ಪ್ರೀತಿ ಸದಾ ಇರಲಿ

ವಿನುತ said...

ಸವಿವರವಾಗಿ ನಿಮ್ಮ ಅನುಭವವನ್ನು ಹಂಚಿಕೊಂಡಿರುವ ಪರಿ ಚನ್ನಾಗಿದೆ. ಅನೇಕರಿಗೆ ಸಹಾಯವಾಗುವುದರಲ್ಲಿ ಸಂಶಯವಿಲ್ಲ. ಧನ್ಯವಾದಗಳು.

ಸಾಗರದಾಚೆಯ ಇಂಚರ said...

Thank you Vinutha for your comments

ವನಿತಾ / Vanitha said...

ತುಂಬಾ ಲೇಟ್ ಆಗಿ ಓದಿದೆ.
ನಿಮ್ಮ ಕಹಿ ಅನುಭವ ಯಾರಿಗೂ ಆಗದಿರಲಿ..

good to know that you are from M'lore university..!!

ಸಾಗರದಾಚೆಯ ಇಂಚರ said...

ವನಿತಾ,
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ್,
ನೀವು ಮಂಗಳೂರಿನವರ?
ನಾನು ಮಂಗಳೂರಿನಲ್ಲಿ ನನ್ನ MSc ಮಾಡಿದೆ

ಚಿತ್ರಾ said...

ಗುರು,
ಓದಿ ಮುಗಿಸುವವರೆಗೂ ಒಂಥರಾ tension .
ನಿಮ್ಮ ಅನುಭವ ಇನ್ನೆಷ್ಟೋ ಜನರ ಅನುಭವವಾಗಿರಬಹುದು ! ಪರಸ್ಥಳದಲ್ಲಿ, ಭಾಷೆ ಬಾರದಿದ್ದಾಗ ಹೀಗಾದರೆ ....ನೆನೆದರೆ ಎದೆ ನಡುಗುತ್ತದೆ ! ಅಂತೂ ಆ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ ಪಾರಾಗಿ ಬಂದಿರಲ್ಲ ! ಅಭಿನಂದನೆಗಳು .

ಸಾಗರದಾಚೆಯ ಇಂಚರ said...

ಚಿತ್ರಾ,
ನಿಜ, ಅದೊಂದು ನೆನಪು ಮಾಡಿಕೊಳ್ಳಲು ಹೆದರಿಕೆಯಾಗುತ್ತದೆ ಎಅಗ
ಎಂಥ ದಿನಗಳವು ಅದು
ಅಭಿಪ್ರಾಯಕ್ಕೆ ಧನ್ಯವಾದಗಳು

Manasaare said...

Nimm anubhav nang matra inchu inchu anubhav aytu nodi. Yakendare naanu USA Los Vegas airport nalli. passport kalidokondide adu nann vabbalade alla , nandu ,nann gandadu haagu nann magu du. Appa aa videsh dalli ee thara yenadru aadre namage namm desh yestu nenapagutte andre helokagolla. Aa journey nenapadre innu nange bevaru beedovastu bhaya agutte. Namm punyakke adu namage seatle nalli vapasu siktu. Ade vandu innuvaregu nange arthavagade iro chamatkar . Naanu raatriyella japasida Raghavendra swamygala japada prabhavavo yeno los vegas nalli kalidiro passports nange seatle nalli siktu.

ಸಾಗರದಾಚೆಯ ಇಂಚರ said...

ಮನಸಾರೆ
ನನ್ನ ಬ್ಲಾಗ್ ಗೆ ಬಂದು ಸ್ಪೇನ್ ಪ್ರವಾಸ ಕಥನದ ಬಗ್ಗೆ ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್,
ನನಗೂ ಅದೊಂದು ಮರೆಯಲಾಗದ ಅನುಭವ
ನಿಮ್ಮ ಬ್ಲಾಗ್ ಗೆ ಬಂದೆ ಆದರೆ ಅದು ಕಾಮೆಂಟಿಸಲು ಆಗುತ್ತಿಲ್ಲ, ಸ್ವಲ್ಪ ಪರೀಕ್ಷಿಸಿ
ನನ್ನ ಬ್ಲಾಗ್ ಗೆ ಸದಾ ಬರುತ್ತಿರಿ