Sunday, April 10, 2011

ನಶ್ವರ .............


ಪ್ರಕ್ರತಿಯ ವೈಚಿತ್ರ್ಯಗಳ ನೋಡಿ, ಯಾವ ತಂತ್ರಜ್ಞಾನದಲ್ಲಿಯೂ ಕಡಿಮೆ ಇರದ ಜಪಾನ್ ಗೆ ಅಪ್ಪಳಿಸಿದ ಭೂಕಂಪ, ಬೆನ್ನಿಗೆ ಬಂದ ಸುನಾಮಿ ಗೆ ಜಪಾನೀಯರು ಕಂಗಾಲಾಗಿದ್ದಾರೆ. ಅದರ ಜೊತೆಗೆ ಬಂದೆರಗಿದ ಅಣು ವಿಕಿರಣ ಸೋರುವಿಕೆ, ಒಂದೇ ಎರಡೇ, ಬೆನ್ನಿಗೊಂದರಂತೆ ಬಂದೆರಗಿರುವ ಸಂಕಷ್ಟಗಳ ನಿವಾರಣೆಗೆ ಜಪಾನೀಯರು ಹೆಣಗುತ್ತಿದ್ದಾರೆ. ಬದುಕು ಎಷ್ಟೊಂದು ''ನಶ್ವರ'' ಅಲ್ಲವೇ? ನಿನ್ನೆ ವರೆಗೆ, ಈ ಬದುಕು ನಮ್ಮದು, ಮನೆ ನಮ್ಮದು, ಆಸ್ತಿ ನಮ್ಮದು, ಮರುಕ್ಷಣ ಯಾವುದೂ ನಮ್ಮದಲ್ಲ, ದೇಹ ಮಾತ್ರ ನಮ್ಮದು, ಇಲ್ಲಿ ಸಾವು ಗೆದ್ದ ಮನೆಯೂ ಇಲ್ಲ, ಮನಸು ಇಲ್ಲ, ಸಾಸಿವೆ ಇಲ್ಲದ ಮನೆಯ ಹುಡುಕಾಟದಂತೆ....
ಆದರೂ ಬದುಕು, ಅದರ ಬಗೆಗಿನ ಪ್ರೀತಿ ಕಡಿಮೆ ಆಗದು, ಮತ್ತದೇ ಆಸೆ, ಮತ್ತದೇ ಅಶಾಂತಿಯ ಬದುಕು, ಶಾಂತಿಯ ಹುಡುಕಾಟ, ಹಣ ಮಾಡಲು ಕಿತ್ತಾಟ, ಇಷ್ಟು ಮಾಡಿ ಇಟ್ಟಿದ್ದಕ್ಕೆ ಅಷ್ಟು ಸೇರಿಸುವ ಆಸೆ, ಕೊನೆಗೆ ಎಲ್ಲ ಬಿಟ್ಟು ೬ ಅಡಿ ೩ ಅಡಿ ದೇಹದೊಂದಿಗೆ ಸಾವು. ಇದೆ ತಾನೇ ಬದುಕು., ಮೊನ್ನೆ ಜಪಾನ್ ಭೂಕಂಪ ಹಾಗೂ ಸುನಾಮಿಯಲ್ಲಿ ಜಪಾನಿನ ಆತ್ಮೀಯ ಸ್ನೇಹಿತನ ಕುಟುಂಬ ಕಳೆದುಹೋಗಿದೆ. ಆತನ ತಂದೆ, ತಾಯಿ, ಹಾಗೂ ಇಬ್ಬರು ಅಕ್ಕಂದಿರು ಕಾಣೆಯಾಗಿದ್ದಾರೆ. ಅವರು ಸತ್ತಿದ್ದಾರೆ ಎನ್ನಲು ಅವನ ಮನಸ್ಸು ಒಪ್ಪುತ್ತಿಲ್ಲ. ಯಾಕೆಂದರೆ ಇಲ್ಲಿಯವರೆಗೆ ಅವರ ಶವಗಳು ಸಿಗುತ್ತಿಲ್ಲ. ದಿನೇ ದಿನೇ ಆತ ಕುಗ್ಗಿ ಹೋಗುತ್ತಿದ್ದಾನೆ. ಆತನ ನೋವಿಗೆ ಸಾಂತ್ವನ ಹೇಳುವ ಧೈರ್ಯ ನನಗಿಲ್ಲ. ''ನಶ್ವರ'' ದ ಬದುಕಿನ ವಿವಿಧ ಮಜಲುಗಳು ಕಣ್ಣ ಪಟಲದಿಂದ ಸರಿಯುತ್ತಿವೆ. ತಾಯಿಯ ಗರ್ಭದಿಂದ ಹೊರಗೆ ಬಂದಾಗ ಸುತ್ತ ಎಲ್ಲರೂ ನಗುತ್ತಿದ್ದರೆ, ಜಗದ ಮೈ ಮಾಟಕ್ಕೆ ತಯಾರಾಗುವ ಮಗುವಿನ ಕಣ್ಣಲ್ಲಿ ತುಂಬಿರುವುದು ನೀರು. ಆದರೆ ಜಗದಿಂದ ಹೊರತು ನಿಂತಾಗ ಎಲ್ಲರ ಕಣ್ಣಲ್ಲಿ ನೀರು, ಆದರೆ ಹೊರಡುವವನ ಕಣ್ಣಲ್ಲಿ ನಗು ತುಂಬಿರಬೇಕು, ಆಗಲೇ ಬದುಕು ಸಾರ್ಥಕ.
ಆ ಸ್ನೇಹಿತನ ಕುಟುಂಬ ಬೇಗ ಅವನಿಗೆ ಸಿಗಲಿ ಎಂದು ಪ್ರಾರ್ಥಿಸುತ್ತ ಈ ಕವನ ಅವನ ಕುಟುಂಬದ ನೆನಪಿಗಾಗಿ...



ಎಲ್ಲ ನೋವುಗಳ ಆಚೆಯೊಂದು 
ನಲಿವೆಂಬ ಭಾವ ಇಹುದು
''ಸಾವು'' ಗೆದ್ದ ಮನಸಿಲ್ಲ ಇಲ್ಲಿ
ನೆರಳಂತೆ ಜೀವ ಬರದು   

ಜನ್ಮ ಪಡೆದ ಕ್ಷಣ, ಸುತ್ತಲೆಲ್ಲ ನಗು
ನಿನ್ನ ಕಣ್ಣಲ್ಲಿ ನೀರು
ಇಷ್ಟವಾಗಲಿ ಜಗದ ಮೈಮಾಟ
ದು:ಖ ಸುಖದ ತೇರು 

ನಿನ್ನದೆಂಬುದು ದೇಹ ಮಾತ್ರ
ನಿನ ಹಿಂದೆ ಬರರು ಯಾರೂ
ಒಣಜಂಭ ಬಿಟ್ಟು, ಪ್ರೀತಿಯನು ಕಟ್ಟು
ಮಾಡದೆಯೇ ಬದುಕು ಬೋರು

ಅರಳುತಿರಲಿ ಸುಮ, ಬೆರೆಯುತಿರಲಿ ನಗು
ಕೆದಕದಿರಲೆಂದು ಬದುಕು
ಮೂರು ದಿನದ ಒಡನಾಟವಿಹುದಿಲ್ಲಿ
ಎಂದೆಂದೂ ಮೆಲುಕು ಹಾಕು         

Sunday, April 3, 2011

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಸ್ನೇಹಿತರೆ,

ಹೊಸ ಸಂವತ್ಸರ ಬರುತ್ತಿದೆ, ಎಂಥಹ ಸಿಹಿ ಸುದ್ದಿ, ದೇಶದ ಜನರಿಗೆ ವಿಶ್ವಕಪ್ಪಿನ ಉಡುಗೊರೆ ಒಂದೆಡೆಯಾದರೆ, ಟೆನ್ನಿಸ್ ನಲ್ಲಿ ಮಿಯಾಮಿ ಓಪನ್ ಗೆದ್ದು ವಿಶ್ವದ ನಂಬರ್ 1 ಜೋಡಿ ಯಾದ ಮಹೇಶ ಭೂಪತಿ, ಪೇಸ್ ಅವರ ಜುಗಲ್ ಬಂದಿ ಇನ್ನೊಂದೆಡೆ.
ಒಟ್ಟಿನಲ್ಲಿ ಹೊಸ ವರ್ಷ ಭರ್ಜರಿ ಆರಂಭವಾಗಿದೆ.
ದೇಶದ ಕೋಟ್ಯಾಂತರ ಅಭಿಮಾನಿಗಳ ಮನದ ದೇವರು ಸಚಿನ ಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇಕೇ....
ಕಳೆದ 20 -21 ವರ್ಷಗಳಿಂದ ದೇಶದ ಕ್ರಿಕೆಟ್ ನ ಹೊರೆ ಹೊತ್ತ ಸಚಿನ್ ನ ಸಾಧನೆಗೆ ಒಂದು ಸಲಾಮು.

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಕಳೆದ ಎರಡು ತಿಂಗಳಿಂದ ಅನಿವಾರ್ಯ ಕಾರಣಗಳು ಬ್ಲಾಗ್ ಗೆ ಬರದಂತೆ ಮಾಡಿದ್ದವು. ಹೊಸ ವರ್ಷದಲ್ಲಿ ಮತ್ತೆ ನಿಮ್ಮೊಂದಿಗೆ ಬರುತ್ತೇನೆ,

ಹೊಸ ವರ್ಷ ನಿಮಗೆಲ್ಲ ಹೊಸತನ್ನು ನೀಡಲಿ,


Tuesday, February 8, 2011

''ಪೆಟ್ಟು'' ನಿನಗೆ ಬಿತ್ತಲ್ಲ ''ಪೆಟ್ಟು'' Part 3

''ಕುರುಡು ಕಾಂಚಾಣ ಕುಣಿಯುತಲಿತ್ತು''

ಹಣ ಸುಖ ಕೊಡುತ್ತದೆ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಸುಳ್ಳು ಕೂಡಾ.

 ದಿನದ ಊಟದ ಖರ್ಚು, ಉಡುವ ಬಟ್ಟೆಯ ವೆಚ್ಚ , ನಲಿದು ಆಡುವ ಮಕ್ಕಳ ಆಸೆ ಇವಿಷ್ಟನ್ನು ದೊರಕಿಸಿಕೊಡುವಷ್ಟು ಹಣ ನಮ್ಮಲ್ಲಿದ್ದರೆ ನಾವೇ ಸುಖಿಗಳು. ಕಾರಣ ಹಣ ಹೆಚ್ಚಾದಂತೆ ಇನ್ನೂ ಹೆಚ್ಚು ಮಾಡುವ ತವಕ. ಕಡಿಮೆ ಸಂಬಳ ಬರುವವನಿಗೆ ಹೆಚ್ಚು ಸಂಬಳ ಪಡೆಯುವ ಆಸೆ, ಹೆಚ್ಚು ಸಂಬಳ ಪಡೆಯುವಗೆ ಇನ್ನೂ ಹೆಚ್ಚು ಪಡೆಯುವ ಆಸೆ. ಮಾನವನಿಗೆ ತ್ರಪ್ತಿ ಎನ್ನುವುದು  ಇರುವುದೇ ಇಲ್ಲ. ಸಣ್ಣ ಟಿ ವಿ ತೆಗೆದುಕೊಂಡವನಿಗೆ  ದೊಡ್ಡ ಟಿ ವಿ ಬೇಕು, ದೊಡ್ಡ ಟಿ ವಿ ತೆಗೆದುಕೊಳ್ಳುವವವನಿಗೆ ಫ್ಲಾಟ್ ಟಿ ವಿ ಬೇಕು, ಹೀಗೆ ಪ್ರತಿಯೊಂದರಲ್ಲೂ ಮನುಷ್ಯ ಇದ್ದಿದ್ದರಲ್ಲಿ ಸಂತ್ರಪ್ತನಾಗುವುದೇ  ಇಲ್ಲ. ಆ ಅಸಂತ್ರಪ್ತ ಮನಸ್ಸೇ ಜಗತ್ತಿನ ಅನೇಕ ಅವಘಡಗಳಿಗೆ ಕಾರಣವೂ ಕೂಡಾ.

  ''ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ''

ಎಂಬ ಹಾಡು ಅಂದಿಗೂ ಇಂದಿಗೂ ಎಂದಿಗೂ ಎಷ್ಟು ಪ್ರಸ್ತುತ ಅಲ್ಲವೇ?

ಉಡುಪಿಯ ಆ ದಿನಗಳಲ್ಲಿ ಆದದ್ದು ಅದೇ, ಮೊದಲ ಗಳಿಕೆ ಎಂದಿಗೂ ವಿಶೇಷ ತ್ರಪ್ತಿ ನೀಡುತ್ತದೆ. ಆದರೆ ಅಲ್ಲಿ ಗಳಿಕೆ ನನ್ನ ಉದ್ದೇಶ ಆಗಿರಲಿಲ್ಲ. ಕಲಿಕೆ ಉದ್ದೇಶವಾಗಿತ್ತು. ಮೊದಲ ''ಪೆಟ್ಟು'' ಹೋಗಿ ಬಂದ ನಂತರ ಬಡಿಸುವುದರಲ್ಲಿ ವಿಶ್ವಾಸ ವೂ ಬಂತು. ಮೊದಲ ಪೆಟ್ಟು, ಎರಡಾಯಿತು, ಎರಡು ಮೂರಾಯಿತು, ಮೂರು ನಾಲಕ್ಕು......... ಹೀಗೆ ಪೆಟ್ಟಿಗೆ ಹೋಗಲು ಆರಂಬಿಸಿದೆ. ಹೋಗಲೇಬೇಕಾದ ಅನಿವಾರ್ಯತೆ ಸ್ರಷ್ಟಿಯಾಗುವಷ್ಟರ    ಮಟ್ಟಿಗೆ ಅದು ಬೆಳೆಯಿತು. ಬದುಕೇ ಹಾಗೇ, ಅದನ್ನು ಎಷ್ಟರ ಮಟ್ಟಿಗೆ ಬೇಕೋ ಅಷ್ಟರ ಮಟ್ಟಿಗೆ ಇಟ್ಟರೆ ಸ್ವರ್ಗ, ಇಲ್ಲದಿರೆ ಆ ಬದುಕೇ ಕುತ್ತಿಗೆಯೇ ಮೇಲೆ ಹತ್ತಿ ಕುಣಿಯಲು ಆರಂಬಿಸುತ್ತದೆ. ಅದಕ್ಕೆ ಇರಬೇಕು, ಸಾಧು ಸಂತರು ಸತತ ಯೋಗ ಧ್ಯಾನ ದ ಮೂಲಕ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರು ಎನಿಸುತ್ತದೆ.

















''ಪೆಟ್ಟು'' ಮೊದ ಮೊದಲು ಸುಂದರವಾಗಿಯೇ ಇತ್ತು. ಮೊದಲು ಹಣ ಬರಲು ಆರಂಬಿಸಿದಾಗ ಹಾಗೇ ಆಗುತ್ತದೆ ಅಲ್ಲವೇ? ಆದರೆ ಅದೊಂದು ದಿನ ಮಾತ್ರ ಪೆಟ್ಟಿಗೆ ಬಿದ್ದಿತ್ತು ದೊಡ್ಡ ''ಪೆಟ್ಟು''. ಕಾಲೇಜಿನಲ್ಲಿ ಪ್ರತಿದಿನ 12 -30 ಗೆ ಕ್ಲಾಸ್ ಮುಗಿಯುತ್ತಿತ್ತು. ಮತ್ತೆ ಮಧ್ಯಾನ್ಹ  2 ಘಂಟೆಗೆ ಆರಂಬವಾಗುತ್ತಿತ್ತು. ಆ ದಿನವೂ 12 -30 ಗೆ ಕ್ಲಾಸ್ ಮುಗಿಸಿ ಊಟಕ್ಕೆ ಹೋಗುವ ಪ್ಲಾನ್ ಎಂದಿನಂತೆಯೇ ಇತ್ತು. ಪ್ರತಿದಿನ 12 -30 ಕ್ಕೆ  ಊಟಕ್ಕೆ ಕ್ರಷ್ಣ  ಮಠ ಕ್ಕೆ ಹೋಗುತ್ತಿದ್ದೆವು. ಆದರೆ ಆ ದಿನ ಬೆಳಿಗ್ಗೆ ಪೆಟ್ಟಿನ ಸ್ನೇಹಿತರು  ಬಂದು ಇಂದು ಮಧ್ಯಾನ್ಹ ಪೆಟ್ಟು ಇದೆ. 12 -30 ಕ್ಕೆ ಹೋಗಿ 2 ಘಂಟೆಗೆ ಬರುವುದು ಎಂದರು. ನಾನು ನನಗೆ ಎರಡು ಘಂಟೆಗೆ ರಸಾಯನ ಶಾಸ್ತ್ರ (Chemistry) ದ ಕ್ಲಾಸ್ ಇದೆ, ಬರಲು ಆಗುವುದಿಲ್ಲ ಎಂದೆ. ಆದರೆ ಅವರು ಕೇಳಬೇಕಲ್ಲ.  12 -30 ಗೆ ಹೊರಟೆ ಬಿಟ್ಟಿತ್ತು  ದಂಡು. 

ಮದುವೆ ಮನೆ, ವಧು ವರರು ಹಾರ ಬದಲಾಯಿಸಿಕೊಂಡು ಹಸನ್ಮುಖರಾಗಿ ಕುಳಿತಿದ್ದರು. ಬಂದ ಬಂಧು ಬಳಗ ಅವರನ್ನೆಲ್ಲ ಹರಸಿ ಊಟಕ್ಕೆ ಹೋಗುತ್ತಿದ್ದರು. ನಮ್ಮ ಕೆಲಸ ಆರಂಭವಾಗುವುದೇ ಈಗ, ನಾವು ಬಡಿಸಲು ಆರಂಬಿಸಿದೆವು. ಕೆಲವೊಮ್ಮೆ ಮುಂದೆ ಆಗುವ ಸಮಸ್ಯೆ  ಮೊದಲೇ ತಿಳಿಯುತ್ತದಂತೆ. ಆ ದಿನ ಬಡಿಸುವಾಗಲೂ ಏನೋ ಒಂದು ತರ ಬೇರೆಯೇ ತರನಾದ ವಿಚಿತ್ರ ಅನುಭವ ಆಗುತ್ತಿತ್ತು. ಇದೇಕೆ ಹೀಗೆ ಆಗುತ್ತಿದೆ ಎಂದು ಯೋಚಿಸಿದರೂ ಹೊಳೆಯಲಿಲ್ಲ. ಸಮಯ ಹೋಗುತ್ತಿತ್ತು. 2 ಘಂಟೆ ಸಮೀಪಿಸುತ್ತಿತ್ತು. ರಸಾಯನ ಶಾಸ್ತ್ರ ಕ್ಲಾಸ್ ಇದೆ ಬೇರೆ. ಅದು ರಸಾಯನ ಶಾಸ್ತ್ರದ ಅದ್ಭುತ ಪ್ರೊಫೆಸರ್ ಕ್ಲಾಸ್ ಆಗಿತ್ತು. ಮಿಸ್ ಮಾಡಿಕೊಳ್ಳೋ ಚಾನ್ಸ್ ಇರಲೇ ಇಲ್ಲ, 

ಆದರೆ ಬಂದ ಮೇಲೆ ಬಡಿಸಿ ಮುಗಿಸದೆ  ಹೋಗೋ ಚಾನ್ಸ್ ಕೂಡಾ ಇರಲಿಲ್ಲ. ಹಾಗೇ ಸಾಲಿನಲ್ಲಿ ಬಡಿಸುತ್ತ ಬಡಿಸುತ್ತ ಹೋಗುತ್ತಿದ್ದವನಿಗೆ ಎದೆ ಧಸಕ್ ಅಂದಿತು ಒಮ್ಮೆ. ತಲೆ ಎತ್ತಿ ನೋಡುತ್ತೇನೆ, ರಸಾಯನ ಶಾಸ್ತ್ರದ  ಸರ್ವ ಪ್ರೊಫೆಸರ್ ಗಳೂ ಸಾಲಿನಲ್ಲಿ ಸಪ್ತ ಋಷಿಗಳು ತಪಸ್ಸಿಗೆ ಕುಳಿತ ಹಾಗೇ ಕುಳಿತಿದ್ದಾರೆ. ಕೈಯಲ್ಲಿ ರಸಂ (ಸಾರು), ಎದುರುಗಡೆ ರಸಾಯನ ಶಾಸ್ತ್ರ, ಮೈಯೆಲ್ಲಾ ಬೆವರಿನ ರಸ ಒಟ್ಟಿನಲ್ಲಿ ಭೂಮಿ, ಆಕಾಶ ಒಟ್ಟಿಗೆ ಬೆರೆತು ತಲೆಯ ಮೇಲೆ ಬಿದ್ದ ಅನುಭವ. ಅದರಲ್ಲೂ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ರಸಾಯನ ಶಾಸ್ತ್ರದಲ್ಲಿ ಒಬ್ಬರು ಪ್ರೊಫೆಸರ್ ಇದ್ದರು. ಅವರು ಹಾಸ್ಯ ಮಾಡುತ್ತಲೇ ಚಾಟಿ ಬೀಸುವ ಪ್ರವ್ರತ್ತಿಯವರು. ನಾ ಕಂಡ ಅತ್ಯುತ್ತಮ ಪ್ರೊಫೆಸರ್ ಗಳಲ್ಲಿ ಒಬ್ಬರು ಅವರು. 

ನನ್ನ ನೋಡಿ, ಸಮಯ ನೋಡಿದರು, ಮತ್ತೆ ನನ್ನ ನೋಡಿದರು, ನನಗೆ ವಿಚಿತ್ರ ತಳಮಳ. ಪೆಟ್ಟಿಗೆ ಬಂದು ಅಂದು ದೊಡ್ಡ ''ಪೆಟ್ಟು'' ಬಿದ್ದಿತ್ತು. ಅದಕ್ಕೆ ಮೊದಲು ಹೇಳಿದ್ದು, ಹಣ ಬೇಕು ನಿಜ, ಅತಿಯಾದ ಹಣ ಒಳ್ಳೆಯದಲ್ಲ ಎಂದು. ಪಾಪ, ನನಗೇನು ಗೊತ್ತಿತ್ತು ನಾನು ಹೋಗಿದ್ದು ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿನಿಯ ಮದುವೆಗೆ ಎಂದು :) 

ಮರುದಿನ ಕ್ಲಾಸ್ ನಲ್ಲಿ ಅವರು ರಸಾಯನ ಶಾಸ್ತ್ರ ಕಲಿಸುವ ಬದಲು ರಸಂ ಮಾಡುವ ವಿಧಾನ, ಬಡಿಸುವ ವಿಧಾನ ಗಳ ಬಗೆಗೆ ಹೇಳಿದರು, ಕ್ಲಾಸ್ ನ ಉಳಿದ ವಿಧ್ಯಾರ್ಥಿಗಳಿಗೆ ಇದ್ಯಾಕೆ ರಸಂ ಬಗ್ಗೆ ರಸಾಯನ ಶಾಸ್ತ್ರದ ಪ್ರೊಫೆಸರ್ ಮಾತನಾಡುತ್ತಿದ್ದಾರೆ ಎಂದು. ನನಗೆ ಮಾತ್ರ ರಸಂ ಬೇಗ ಮುಗಿದು ಹೋದರೆ ಸಾಕೆಂದು ಅನ್ನಿಸುತ್ತಿತ್ತು. ಆ ಪ್ರೊಫೆಸರ್ ಗೆ ನನ್ನ ಮೇಲೆ ಇದ್ದ ವಿಶೇಷ ಪ್ರೀತಿಯಿಂದ ಅವರು ಒಂದು ತಾಸು ರಸಂ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅದರ ನಂತರ ಪೆಟ್ಟು ಕೇವಲ ವಾರಾಂತ್ಯದ ಕೆಲಸವಾಗಿತ್ತೆ ಹೊರತು ವಾರದ ಮಧ್ಯದ ಕೆಲಸವಾಗಿರಲಿಲ್ಲ.

ಇದನ್ನೆಲ್ಲಾ ಯಾಕೆ ಬರೆಯುತ್ತಿದ್ದೇನೆಂದರೆ ಅಂದು ನನ್ನೊಂದಿಗೆ ಪೆಟ್ಟಿಗೆ ಬರುತ್ತಿದ್ದ ಎಷ್ಟೋ ಮಂದಿ ಅಂದಿನ ಕ್ಷಣಿಕ ಗಳಿಕೆಯನ್ನೇ ಮಹಾ ಗಳಿಕೆ ಎಂದು ತಿಳಿದು ಕಲಿಯುವುದ ಅರ್ಧ ದಲ್ಲೇ ಬಿಟ್ಟು ಇಂದು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಸ್ವಾಭಿಮಾನ, ಸ್ವಂತ ದುಡಿಮೆ ಎಲ್ಲವೂ ಅವಶ್ಯ ನಿಜ, ಆದರೆ ಅದು ಬದುಕನ್ನೇ ನುಂಗಬಾರದು. ನನ್ನೊಂದಿಗೆ ಪೆಟ್ಟಿಗೆ ಬಂದ ಕೆಲವು ಸ್ನೇಹಿತರು ಇಂದು ಬೆಂಗಳೂರಿನಲ್ಲಿ Chartered Accountant ಆಗಿ ದೊಡ್ಡ ದೊಡ್ಡ ಕಂಪನಿಗಳ ಮುಖ್ಯ ಹುದ್ದೆಯಲ್ಲಿದ್ದಾರೆ. ಪ್ರತಿ ಸಲ ಬೆಂಗಳೂರಿಗೆ ಹೋದಾಗ ಅವರನ್ನೆಲ್ಲ ಭೆಟ್ಟಿಯಾಗುತ್ತೇನೆ. ಸಾಹಸಮಯ ಬದುಕಿನ ಉದಾಹರಣೆಯಂತೆ ಇರುವ ಅವರ ಜೀವನ ದ ಮೇಲೆ ನನಗೆ ಬಹಳ ಹೆಮ್ಮೆಯಿದೆ, ಅಂತಹ ಸ್ನೇಹಿತರ ಪರಿಚಯ ಈ ಬದುಕಿಗೆ ಸಿಕ್ಕ ಬಹುದೊಡ್ಡ ಆಸ್ತಿ.

ನನ್ನ ಬದುಕಿನೊಂದಿಗೆ ಹೆಜ್ಜೆ ಹಾಕಿದ ನನ್ನ ಬದುಕಿನ ಪ್ರತಿ ಘಟ್ಟದಲ್ಲೂ ನೋವಿಗೆ ಸಾಂತ್ವನ ನೀಡುವ ತಾಯಿಯಂತೆ, ನಲಿವಿಗೆ ಹುರಿದುಂಬಿಸುವ ಅಣ್ಣನಂತೆ, ಸಾಧನೆಗಳಿಗೆ ಪ್ರೋತ್ಸಾಹಿಸುವ ತಂದೆಯಂತೆ, ತಪ್ಪಿದಲ್ಲಿ ತಿದ್ದುವ  ಸ್ನೇಹಕ್ಕೆ ಅರ್ಥವಾದ ಗೆಳೆಯನೊಬ್ಬನ ಪ್ರೀತಿ  ಉಡುಪಿಯಲ್ಲಿ ಅಷ್ಟೇ ಅಲ್ಲ ನನ್ನ ಬದುಕಿನಲ್ಲಿಯೇ ಮರೆಯಲಾರದ್ದು. ಮುಂದೆ ಅವನ ಬಗ್ಗೆ ಬರೆಯುತ್ತೇನೆ.
 ಮತ್ತೆ ಸಿಗುತ್ತೇನೆ
ನಿಮ್ಮವ 
ಗುರು 

ಮೊದಲ ಹಾಗೂ ಎರಡನೇ ಭಾಗ ಓದದವರು ಕೆಳಗೆ ಕ್ಲಿಕ್ ಮಾಡಿ ಓದಿ 
ಬದುಕಿನ ಪುಟಗಳಿಂದ http://gurumurthyhegde.blogspot.com/2011/01/1.html  ಭಾಗ 1
ಅದು ಕೇವಲ ೫೦ ರೂಪಾಯಿ ಆಗಿರಲಿಲ್ಲ http://gurumurthyhegde.blogspot.com/2011/02/50.html  ಭಾಗ  2 

Tuesday, February 1, 2011

ಅದು ಕೇವಲ 50 ರೂಪಾಯಿ ಆಗಿರಲಿಲ್ಲ ...

ಕಳೆದ ವಾರ ನನ್ನ ಪ್ರೀತಿಯ ಬ್ಲಾಗ್ ನ ಹುಟ್ಟಿದ ಹಬ್ಬ ಆದ್ದರಿಂದ ''ಬದುಕಿನ ಪುಟಗಳಿಂದ'' ಬರಹ ಮುಂದುವರೆಸಲಾಗಲಿಲ್ಲ. ಅನೇಕ ಮಿತ್ರರು ಮೇಲ್ ಮಾಡಿ ಮುಂದಿನ ಬರಹ ನಿಂತದ್ದೇಕೆ ಎಂದು ಕೇಳಿದ್ದಾರೆ. ಖಂಡಿತ ನಿಲ್ಲಿಸುವ ಉದ್ದೇಶ ಇಲ್ಲ. ಅದಕ್ಕೆ ಈಗ ಮುಂದುವರೆಸುತ್ತಿದ್ದೇನೆ. ಮೊದಲ ಭಾಗ ಓದದವರು ಇಲ್ಲಿ ಓದಿ ''http://gurumurthyhegde.blogspot.com/2011/01/1.html''













ಉಡುಪಿಯ ಆ ದಿನಗಳು ಬದುಕಿಗೆ ಅಡಿಪಾಯ ಮಾತ್ರ ಆಗಿರಲಿಲ್ಲ. ಬದುಕಿನ ರಸಮಯ ಕ್ಷಣಗಳೂ ಹೌದು. ಉಡುಪಿಯಲ್ಲಿ ಓದಿದವರಿಗೆ ರಥ ಬೀದಿಯ ಮಹತ್ವ ಗೊತ್ತೇ ಇರುತ್ತದೆ. ಅದರಲ್ಲೂ ಪೂರ್ಣ ಪ್ರಜ್ಞ ದಲ್ಲಿ ಓದುವ ವಿದ್ಯಾರ್ಥಿಗಳಿಗೂ ರಥ ಬೀದಿಗೂ ಅವಿನಾಭಾವ ಸಂಬಂಧ. ಅದರಲ್ಲೂ ಬೇರೆ ಊರಿನಿಂದ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ರಥಬೀದಿಯ ದರ್ಶನ ದಿನವೂ ಆಗೇ ಆಗುತ್ತದೆ. ಮಧ್ಯಾನ್ಹ  ಊಟಕ್ಕೆ ಹೋಗುವಾಗ, ರಾತ್ರಿ ಊಟಕ್ಕೆ ಹೋಗುವಾಗ, ಜೊತೆಗೆ ರಥಬೀದಿಯಲ್ಲಿ ತಿರುಗುವ ಯಾತ್ರಾರ್ಥಿಗಳ ದರ್ಶನ, ಸಾಲದೆಂಬಂತೆ ಶ್ರೀ ಕ್ರಷ್ಣನ ದರ್ಶನ, ಬದುಕು ಪಾವನ ಎನಿಸಿಬಿಡುತ್ತದೆ. ಸುಂದರ ಯಾತ್ರಾರ್ಥಿಗಳಿಂದ ಕೆಲವರ ಕಣ್ಣು ಪಾವನ ಆಗುವುದೂ ಉಂಟು.  ಉಡುಪಿಯಲ್ಲಿ   ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಬಹುಪಾಲು ಉತ್ತರ ಕನ್ನಡ ದವರೆ ಇರುತ್ತಾರೆ. ಇಲ್ಲಿನ ಶಿಕ್ಷಣ ವ್ಯವಸ್ಥೆ ಕಾರಣ ಒಂದಾದರೆ, ಇದು ಉತ್ತರ ಕನ್ನಡಕ್ಕೆ ಹತ್ತಿರದ ಜಾಗ ಎನ್ನುವುದು ಇನ್ನೊಂದು. ಅದರಲ್ಲೂ ಉಡುಪಿಯಲ್ಲಿ ಉಚಿತ ಊಟ, ದೇವರ ಪ್ರಸಾದವೂ ಆದ್ದರಿಂದ ಅರ್ಥಿಕ ದ್ರಷ್ಟಿಯಿಂದಲೂ ಇದು ಪ್ರಶಸ್ತ ಜಾಗ.
ಕಾಲೇಜಿಗೆ ಸೇರಿದ ದಿನಗಳಲ್ಲಿ ಹಣದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ. ಯಾಕೆಂದರೆ ತಂದೆಯವರು ಚಾಚೂ ತಪ್ಪದೆ ಹಣ ಕಳಿಸುತ್ತಿದ್ದರು. ಅವರ ಶ್ರಮ, ಬೆವರಿನ ಕಷ್ಟ ನನಗೆ ಗೊತ್ತೇ ಆಗುತ್ತಿರಲಿಲ್ಲ. ಮಧ್ಯಮ ವರ್ಗದ ಕುಟುಂಬವಾದ ನಮಗೆ ತಿನ್ನಲು ಉಣ್ಣಲು ಕೊರತೆ ಇರಲಿಲ್ಲ ಆದರೂ ತಂದೆಯವರಿಗೆ ದೊಡ್ಡ ಕುಟುಂಬದ  (ಆಗ ಸಾಮೂಹಿಕ ಕುಟುಂಬ ಪದ್ಧತಿ) ಜವಾಬ್ದಾರಿಯೂ ಇತ್ತು. ಇದರ ನಡುವೆ ನಮ್ಮ ಶಿಕ್ಷಣದ ಖರ್ಚು. ನನಗಿನ್ನೂ ನೆನಪಿದೆ, ಆ ದಿನಗಳಲ್ಲಿ ತಂದೆ ತಾಯಿಯವರು ಯಲ್ಲಾಪುರದಲ್ಲಿದ್ದರು. ತಂದೆಯವರು ಸರಕಾರೀ ಕೆಲಸದಲ್ಲಿದ್ದರು. ನಾನಾಗ ಒಂದನೇ ಪಿ ಯು ಸಿ ವಿಜ್ಞಾನ ವಿಭಾಗಕ್ಕೆ ಸೇರಿ 6 ತಿಂಗಳು ಆಗಿದ್ದವು. ಒಮ್ಮೆಲೇ ತಂದೆಯವರಿಗೆ ಹಳಿಯಾಳಕ್ಕೆ ವರ್ಗಾವಣೆ ಆಯಿತು. ಹಳಿಯಾಳ ಸುಮಾರು ಒಂದೂ ವರೆ ಘಂಟೆಯ ಪ್ರಯಾಣ ಯಲ್ಲಾಪುರ ದಿಂದ. ಹಾಗೆಂದು ನಾನು ಕಾಲೇಜು ಬಿಡುವುದು ನನಗೆ ಇಷ್ಟವಿರಲಿಲ್ಲ. ಆದರೆ ತಂದೆಯವರೇ ಪ್ರತಿದಿನ ಅಲ್ಲಿಗೆ ಹೋಗಿಬರುವುದೆಂದು ನಿರ್ಧರಿಸಿದರು. ಒಬ್ಬ ಮಗನ ಮಟ್ಟಿಗೆ ತಂದೆಯ ಆ ನಿರ್ಧಾರ ಬಲು ದೊಡ್ಡದಾಗಿತ್ತು. ಮಗ ಕಲಿಯಲಿ, ಆತನ ಶಿಕ್ಷಣ ಮಧ್ಯದಲ್ಲಿಯೇ ತನ್ನಿಂದ ನಿಲ್ಲುವುದು ಬೇಡ ಎಂದು ತಿಳಿದು ತಾವೇ ಪ್ರತಿದಿನ 3 ಘಂಟೆ ಪ್ರಯಾಣ ಮಾಡಿದ ಆ ದಿನಗಳು ಎಂದೂ ಮರೆಯಲಾರದ್ದು. ನಮಗೆ ಬಿಸಿ ಬಿಸಿ ಊಟ ನೀಡಿ, ತಾವು ಮನೆಯಿಂದ ಬೆಳಿಗ್ಗೆಯೇ ಕಟ್ಟಿಸಿಕೊಂಡು ಹೋಗಿ ತಿಂದು ಬರುವ ಆ ಮನಸ್ಸಿನ ತಂದೆಯ ದೊಡ್ಡ ಗುಣ ಹಾಗೂ ಅವರ ಋಣ ಎಂದಿಗೂ ತೀರಿಸಲಾಗದ್ದು.
ಉಡುಪಿ ಸಾಂಸ್ಕ್ರತಿಕವಾಗಿ ಬಹಳಷ್ಟು ಮುಂದುವರೆದ ಪ್ರದೇಶ. ಇಲ್ಲಿ ಸಂಗೀತ, ಕಲೆ ಗಳಿಗೆ ಅಗಾಧ ಪ್ರೋತ್ಸಾಹ. ಕನ್ನಡ ನಾಡಿನ ಗಂಡು ಕಲೆ ''ಯಕ್ಷಗಾನ'' ದ ಉಳಿವಿಗೆ ಮೂಲ ಕಾರಣ ದಕ್ಷಿಣ ಕನ್ನಡದವರೇ ಎಂದರೆ ತಪ್ಪಾಗಲಿಕ್ಕಿಲ್ಲ. ಶಿಕ್ಷಣದಲ್ಲೂ ಅವರು ಎಲ್ಲರಿಗಿಂತ ಮುಂದು. ನಾಡಿನ ಖ್ಯಾತ ಶಿಕ್ಷಣ ಸಂಸ್ಥೆಗಳ ಒಡೆಯರೂ ಹೌದು.

''ಘಟ್ಟದ ಕೆಳಗಿನ ನೀರು, ಜೊತೆಯಲಿ ಹರಿಯುವ ಬೆವರು 
ಎಳೆದಿದೆ ಬದುಕಿನ ತೇರು, ಬದುಕುವೆ ಎಲ್ಲೇ ಹೋದರೂ''

ಯಾವ ಪುಣ್ಯಾತ್ಮ ಹೇಳಿದನೋ ಗೊತ್ತಿಲ್ಲ. ಆದರೆ ಆ ಮಾತು ಮಾತ್ರ ಎಂದಿಗೂ ಸತ್ಯ. ಸಮುದ್ರ ತೀರದ ಜನರಿಗೆ ಮಂಡೆ (ಮಂಡೆ ಅಂದರೆ ಬುದ್ದಿ) ಬಹಳ ಜಾಸ್ತಿ. ವ್ಯಾಪಾರದಲ್ಲಿ ಬಹಳ ಜಾಣರು. ಸ್ವಲ್ಪ ನಾವು ಯಾಮಾರಿದರೂ ನಮ್ಮ ಎದುರಿಗೇ ನಮ್ಮ ಮಾರಾಟ ಮಾಡಿ ಹೋಗುವಷ್ಟು ಚಂಡ-ಪ್ರಚಂಡರು ಅವರು. ಬಹುಷ: ಅವರ ಕಷ್ಟಮಯ ಜೀವನ ಕಲಿಸಿದ ಪಾಠ ಅದೆಂದು ತೋರುತ್ತದೆ. ಅದೇ ಘಟ್ಟದ ಮೇಲೆ ಬಹಳಷ್ಟು ಜನರಿಗೆ ಅಡಿಕೆ ತೋಟವಿದೆ. ಅಡಿಕೆಗೆ ಬೆಲೆಯಿದೆ (ಆದರೂ ಜನ ತಾವು ಬಡವರು ಎನ್ನುವುದು ಬಿಟ್ಟಿಲ್ಲ, ಲಕ್ಷಾದೀಶ್ವರ ಕೋಟ್ಯಾ ಧೀಶ್ವರ ನನ್ನು ನೋಡಿ ತಾನು ಬಡವ ಎನ್ನುತ್ತಾನೆ, ಹೀಗೆಯೇ ಎಷ್ಟೇ ಅಡಿಕೆಗೆ ಬೆಲೆ ನೀವು ಕೊಡಿ, ಅವರು ಕಣ್ಣೀರು ಹಾಕುವುದು ಬಿಡರು)  
ಘಟ್ಟದ ಕೆಳಗಿನ ಜನರಿಗೆ ಇಂಥಹ ಯೋಗವಿಲ್ಲ. ಅಲ್ಲಿರುವುದು ಬೋಳು ಗುಡ್ಡೆ ಗಳು ಮಾತ್ರ. ಅದರಲ್ಲೇ ಸುಖ ಕಾಣಬೇಕು. ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋದರೆ ಮತ್ತೆ ಸಂಜೆಯೇ ಮನೆಗೆ ಬರುವುದು ಅವರು. ಆ ದಿನಚರಿಯೇ ಅವರಿಗೆ ಒಂದು ರೀತಿಯ ಬದುಕನ್ನು ಕಲಿಸಿದೆ. ಇದು ಉಡುಪಿಯಲ್ಲಿ ನಾನು ಕಂಡು ಕೊಂಡ ಜನರ ಜೀವನ ಚಕ್ರ. 
ದಕ್ಷಿಣ ಕನ್ನಡ ದಲ್ಲಿ ಮದುವೆಗಳನ್ನು ಮನೆಯಲ್ಲಿ ಮಾಡುವಷ್ಟು ಸಮಯ ಹಾಗೂ ವ್ಯವಧಾನ ಯಾರಿಗೂ ಇಲ್ಲ. ಅದಕ್ಕೆ ಅವರು ಆಯ್ದು ಕೊಳ್ಳುವುದು ಮಠ ಮಂದಿರ ಗಳನ್ನು, ಛತ್ರಗಳನ್ನು. ಉಡುಪಿಯ ಸುತ್ತ ಮುತ್ತ ಅನೇಕ ಮದುವೆಯ ಛತ್ರಗಳಿವೆ. ಛತ್ರಗಳಲ್ಲಿ ನಡೆಯುವ ಮದುವೆಯ ವ್ಯವಸ್ಥೆ ಯನ್ನು ಆ ಛತ್ರಗಳ ನಿರ್ವಾಹಕರು ಸಂಬಂದಿಸಿದವರಿಗೆ ನೀಡುತ್ತಾರೆ. ಅಂದರೆ  ಊಟದ ವ್ಯವಸ್ಥೆ  ಒಬ್ಬನಿಗೆ, ಅಲಂಕಾರದ ವ್ಯವಸ್ಥೆ  ಇನ್ನೊಬ್ಬನಿಗೆ, ಹೂವಿನ ವ್ಯವಸ್ಥೆ ಮತ್ತೊಬ್ಬನಿಗೆ ಹೀಗೆ. ಇಲ್ಲಿ ಊಟ ಬಡಿಸಲು ನಿರ್ಧಿಷ್ಟ ಪಂಗಡಗಳಿಗೆ ವಹಿಸಿ ಕೊಟ್ಟಿರುತ್ತಾರೆ. ಆ ಪಂಗಡಗಳು ಮಠದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ತಮ್ಮ ಪಂಗಡದಲ್ಲಿ ಸೇರಿಸಿಕೊಳ್ಳುತ್ತಾರೆ.

  ಇಂಥಹ  ಊಟಕ್ಕೆ ಬಡಿಸಲು ಹೋಗುವುದಕ್ಕೆ ''ಪೆಟ್ಟು'' ಎನ್ನುತ್ತಾರೆ.

 ಉಡುಪಿಗೆ ಹೋದ ಮೊದಲ ದಿನಗಳಲ್ಲಿ ಸ್ನೇಹಿತನೊಬ್ಬ ''ಪೆಟ್ಟಿಗೆ'' ಬರುತ್ತಿಯ ಎಂದು ಕೇಳಿದ್ದ. ನಾನು   ಒಳಗೊಳಗೇ ಬೆವೆತುಹೋಗಿದ್ದೆ. ಇನ್ನೆಲ್ಲಿಂದ ಜನರ ಕರೆದುಕೊಂಡು ಬಂದು ನನಗೆ ಹೊಡೆಯುತ್ತಾರೋ ಎಂದು. ಆಮೇಲೆ ಅರ್ಥ ತಿಳಿದಾಗ ನಕ್ಕಿದ್ದೋ ನಕ್ಕಿದ್ದು. 
ಉಡುಪಿಯ ರಥ ಬೀದಿಗಳಲ್ಲಿ ತಿರುಗುವಾಗ ಇಂಥಹ ಒಂದು ಪಂಗಡದ ನಾಯಕನ ಪರಿಚಯ ಆಯಿತು. ಆ ಪಂಗಡದಲ್ಲಿ ನನ್ನ ಕೆಲವು ಸ್ನೇಹಿತರು ಇದ್ದರು. ಅವರೆಲ್ಲ ಮದುವೆಗೆ ಬಡಿಸಲು ಹೋಗಿ ತಮ್ಮ ಖರ್ಚನ್ನು ತಾವೇ ನಿಭಾಯಿಸಿಕೊಳ್ಳುತ್ತಿದ್ದರು. ಹೀಗೆ ಒಂದು ಭಾನುವಾರ ಬೆಳಿಗ್ಗೆ ಪೇಪರ್ ಓದುತ್ತಿದ್ದವನಿಗೆ ಒಂದು ದೂರವಾಣಿ ಕರೆ ಬಂತು. ಸ್ನೇಹಿತನೊಬ್ಬ ಕರೆ ಮಾಡಿ ''ಇಂದಿನ ಪೆಟ್ಟಿ ಗೆ ಒಬ್ಬ ಕೈ ಕೊಟ್ಟಿದ್ದಾನೆ. ನಮಗೆ ಒಬ್ಬ ಬಡಿಸುವ ಜನ ಅರ್ಜೆಂಟ್ ಬೇಕಾಗಿದೆ. ದಯವಿಟ್ಟು ಬರಲು ಆಗುತ್ತದೆಯೇ? '' ಎಂದು ಕೇಳಿದ. ಮಧ್ಯಾನ್ಹ 12 ಘಂಟೆಗೆ ಹೋಗಿ 2 ಘಂಟೆಗೆ ತಿರುಗಿ ಬರುವುದು ಎಂದು ಹೇಳಿದ. ಸರಿ, ಆತ ಸ್ನೇಹಿತ ಬೇರೆ ಎಂದು ಮೊದಲ ಪೆಟ್ಟು ತಿನ್ನಲು (ಕ್ಷಮಿಸಿ , ಬಡಿಸಲು) ಹೊರಟೆ ಬಿಟ್ಟೆ. ಬಡಿಸುವುದು ನನಗೆ ಹೊಸದಲ್ಲ. ಕಾರಣ ಕ್ರಷ್ಣ ಮಠದಲ್ಲಿ ಪ್ರತಿದಿನ ಬಡಿಸುತ್ತೇವೆ. ಆದರೆ ಮದುವೆ ಮನೆಯಲ್ಲಿ ಬಡಿಸುವುದು, ಮತ್ತು ಪದ್ದತಿಯಂತೆ ಬಡಿಸುವುದು ಹೊಸದಾಗಿತ್ತು. ನನಗೆ ಮೊದಲ ದಿನವಾದ್ದರಿಂದ ''ಪ್ರಥಮ ಚುಂಬನಂ ದಂತ ಭಗ್ನಂ'' ಆಗದಿರಲಿ ಎಂದು ಕೇವಲ ಉಪ್ಪು, ಉಪ್ಪಿನಕಾಯಿ ಮತ್ತು ಹಪ್ಪಳ ಮಾತ್ರ ಬಡಿಸಲು ನೀಡಿದ್ದರು. ಸುಮಾರು 1000 ಜನ ಅಂದು ಮದುವೆಗೆ ಬಂದಿದ್ದರು ಎನಿಸುತ್ತದೆ. ಬಡಿಸಿ ಆದ ಮೇಲೆ ನಾವು ಊಟ ಮಾಡಿ ಮನೆಗೆ ಬಂದೆವು. ಆ ದಿನ ಸಂಜೆ ರಥ ಬೀದಿಯಲ್ಲಿ ನನ್ನ ಸ್ನೇಹಿತ ನನಗೆ 50 ರೂಪಾಯಿಗಳನ್ನು ಕೊಟ್ಟ. ನನಗೆ ಆಶ್ಚರ್ಯ .

''ಇದೇನಿದು?'' ಎಂದು ಕೇಳಿದೆ, 

''ನಿನ್ನ ಮೊದಲ ದುಡಿಮೆ'' ಎಂದ.

 2 ಘಂಟೆ ಬಡಿಸಲು ಹೋಗಿದ್ದಕ್ಕೆ 50 ರೂಪಾಯಿ ನೀಡುತ್ತಿದ್ದರು ಆ ದಿನಗಳಲ್ಲಿ.

ಇಂದು 50 ರೂಪಾಯಿಗಳಿಗೆ ಬೆಲೆ ಇಲ್ಲದಿದ್ದರೂ 11 ವರ್ಷಗಳ ಹಿಂದೆ ಅದು ಬೆಲೆ ಬಾಳುವನ್ತಾದ್ದೆ  ಆಗಿತ್ತು. 

ಮೊದಲ ಬಾರಿಗೆ ಬೆವರು ಹರಿಸಿ ದುಡಿದ ಹಣ ಅದು, ಅಂದು ಆ 50 ರೂಪಾಯಿಗಳು ಕೇವಲ ಹಣ ಆಗಿರಲಿಲ್ಲ. ಬದುಕಿಗೆ ಕಲಿಸಿದ ಬಹುದೊಡ್ಡ ಪಾಠ ಆಗಿತ್ತು. ಅಪ್ಪ ಮಾಡಿಟ್ಟ ಆಸ್ತಿಯನ್ನು ಲೆಕ್ಕವಿಲ್ಲದೆ ಖರ್ಚು ಮಾಡುವ ನಾವುಗಳು ಸ್ವಂತ ದುಡಿದಾಗ ಅದರ ಅನುಭವ ತಿಳಿಯುತ್ತದೆ ಎಂಬ ಸತ್ಯ ಗೋಚರಿಸಿದ ಕ್ಷಣ ಅದಾಗಿತ್ತು. ಕಣ್ಣು ತೇವ ಗೊಂಡಿತ್ತು. ದುಡಿಯುವ ಕೈಗಳ ನೋವು ಮೊದಲ ಬಾರಿಗೆ ಗೋಚರಿಸಿತ್ತು. ಅಂದು ರಸ್ತೆಯಲ್ಲಿ ಮರಳುವಾಗ ರಸ್ತೆ ಕೆಲಸ ಮಾಡುವ ಅದೆಷ್ಟೋ ಜೀವಗಳ ಮೇಲೆ ನನಗರಿವಿಲ್ಲದೆ ಅಕ್ಕರೆ ಮೂಡಿತ್ತು. 

ಆ 50 ರೂಪಾಯಿ ಕಲಿಸಿದ  ಪಾಠ ಇಂದು ಲಕ್ಷ  ರೂಪಾಯಿಗಳು  ಹೇಳಿಕೊಡುತ್ತಿಲ್ಲ....... 

ಮುಂದಿನ ವಾರ ಮತ್ತೆ ಸಿಗುತ್ತೇನೆ
ನಿಮ್ಮ ಗುರು






Wednesday, January 26, 2011

ಮಗು ಬೆಳೆಯುತ್ತಿದೆ .....

ಸರ್ವರಿಗೂ ಗಣ ರಾಜ್ಯೋತ್ಸವದ ಶುಭಾಶಯಗಳು 

ಸುಮಾರು ಎರಡು ವರ್ಷಗಳ ಹಿಂದಿನ ಕಥೆಯಿದು, ಬಹಳ ದಿನಗಳಿಂದ ನಿಮ್ಮೊಂದಿಗೆ ಹೇಳಿಕೊಳ್ಳ (ಲ್ಲ) ಬೇಕೆಂದು  ಬಯಸುತ್ತಿದ್ದೆ. ಆದರೆ ಸಮಯ ಬರದೆ ಕಾಯುವಂತೆ ಆಗಿತ್ತು. ಎಲ್ಲದಕ್ಕೂ ಒಂದು ಸಮಯ ಬೇಕಲ್ಲ. ಸುಮ್ಮನೆ ನಮ್ಮ ಖಯಾಲಿ ಗೆ ಎಲ್ಲವನ್ನೂ ಬರೆಯುತ್ತಿದ್ದರೆ ನೀವು ಓದಬೇಕಲ್ಲ. ಅದಕ್ಕೇ ಸರಿಯಾದ ಸಮಯ ಬಂದಾಗ ಮಗು ಬೆಳೆಯುತ್ತಿರುವ ಕಥೆ ಹೇಳೋಣ ಎಂದು ಇಲ್ಲಿಯತನಕ ಕಾದೆ. ಇನ್ನು ಕಾಯಲಾರೆ. ಆ ಬೆಳೆಯುತ್ತಿರುವ ಮಗುವಿನ ಹುಟ್ಟು, ಸುತ್ತಲಿನ ಪರಿಸರ, ಬೆಳೆದ ವಾತಾವರಣ, ಬೆಳೆಯುತ್ತಿರುವ ಪರಿ, ಮಾಡುತ್ತಿರುವ ತರಲೆ, ತುಂಟಾಟಗಳು, ಇವನ್ನೆಲ್ಲ ನಿಮ್ಮೊಂದಿಗೆ ಹೇಳಿಕೊಳ್ಳದೆ ನನಗೆ ಸಮಾಧಾನವಿಲ್ಲ. ಕೇಳದಿದ್ದರೆ ನಿಮ್ಮನ್ನು ಸುಮ್ಮನೆ ನಾನು ಬಿಡುವುದಿಲ್ಲ. ಇದೊಂದು ತರ ಅತಿಥಿ ಗಳನ್ನು ಮನೆಗೆ ಕರೆಯಿಸಿ ಅವರಿಂದಲೇ ಕೆಲಸ ಮಾಡಿಸಿಕೊಳ್ಳುವ ಮನೆಯಾಕೆಯ ಮನಸ್ಥಿತಿ. ತುಂಬಾ ತಲೆ ತಿನ್ನದೇ ಕಥೆಗೆ ಬರುತ್ತೇನೆ.

ಅದೊಂದು ಜನವರಿಯ ಚುಮು ಚುಮು ಛಳಿಯ ಮುಂಜಾನೆ. 
''ತಣ್ಣನೆಯ ತಂಗಾಳಿ ತನುವನ್ನು ತೀಡುತಿದೆ
ತುಂತುರು ಹನಿಗಳು, ಮೈ ಮನವ ಬಳಸುತಿವೆ''

ಕೊರೆಯುತ್ತಿರುವ ಚಳಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುತ್ತಿದ್ದಂತೆ ಹಿಮ ಮೋಡಗಳು ಸ್ವೀಡನ್ನಿನ ಗೊತ್ಹೆಂಬುರ್ಗ್ ನಲ್ಲಿ ಪಸರಿಸಿತ್ತು. ಇದೇನು, ನೋಡು ನೋಡುವಷ್ಟರಲ್ಲಿ  ಹಿಮದ ಮಳೆ ಆರಂಭವಾಗಿಯೇ ಬಿಟ್ಟಿತ್ತು. ಸ್ವೀಡನ್ನಿಗೆ ಹಿಮ ಮಳೆ ಸಾಮಾನ್ಯವಾದರೂ ಗೊತ್ಹೆಂಬುರ್ಗ್ ಗೆ ಇದೊಂದು ವಿಶೇಷ. ಗೊತ್ಹೆಂಬುರ್ಗ್ ಸಮುದ್ರ ತೀರದಲ್ಲಿ ಇದ್ದಿದ್ದರಿಂದ ಇಲ್ಲಿ ಕೊರೆಯುವ ಗಾಳಿ ಇರುತ್ತಿತ್ತೆ ಹೊರತು ಹಿಮಪಾತ ತುಂಬಾ ಕಡಿಮೆ. ಆದರೆ ಕಳೆದ ಎರಡು ವರ್ಷಗಳಲ್ಲಿ ವಿಪರೀತ ಹಿಮ ಮಳೆ ಗೊತ್ಹೆಂಬುರ್ಗ್ ನ್ನು ಆವರಿಸಿಕೊಂಡಿದೆ. ಕಥೆಯನ್ನು ಬೇರೆಡೆಗೆ ಹೋಗಲು ಅವಕಾಶ ಮಾಡಿಕೊಡದೆ  ಎರಡು ವರ್ಷದ ಹಿಂದಕ್ಕೆ ಹೋಗೋಣ. ಆ ಜನವರಿಯ 26 ನೇ ತಾರೀಖು ನನಗಿನ್ನೂ ನೆನಪಿದೆ. ಆ ದಿನ ವಿಪರೀತ ಗಾಳಿ. ಮೈ ಕೊರೆಯುವ ಚಳಿ, ಹೊರಗೆ ಕಾಲು ಹಾಕಲು ಆಗದಷ್ಟು ಚಳಿ, ಬಹುಷ: - 20 ಡಿಗ್ರಿ ಇತ್ತೆಂದು ಅನಿಸುತ್ತದೆ. ಸರಿಯಾಗಿ ನೆನಪಿಲ್ಲ. ಇಂಥಹ ಪ್ರಕ್ರತಿಗೆ  ವಿರುದ್ಧವಾದ  ವಾತಾವರಣದಲ್ಲಿ ಹೆರಿಗೆ ನೋವು ಆರಂಭವಾಗಿಬಿಟ್ಟಿತ್ತು. ಈ ಹೆರಿಗೆ ನೋವು ವಿಚಿತ್ರ ನೋಡಿ, ತಾಯಿ ಹೆರಿಗೆ ನೋವನ್ನು ಸಂತಸದಿಂದಲೇ ಸ್ವೀಕರಿಸುತ್ತಾಳೆ. ತನ್ನೆಲ್ಲ ನೋವನ್ನು ಮರೆತು ಬರುವ ಕಂದನ ನೀರೀಕ್ಷೆಯಲ್ಲಿ ಕಾಲ ಕಳೆಯುವ ತಾಯಿಯ ಮನಸ್ಥಿತಿ ಕೇವಲ ತಾಯಿಗೆ ಮಾತ್ರ ಸಾದ್ಯ. ಪ್ರತಿ ಹೆಣ್ಣಿಗೆ ಕಂದನ ಹುಟ್ಟು ಮರುಜನ್ಮ ಲಭಿಸಿದಂತೆ. ಆ 9 ತಿಂಗಳ ಕಾಲ ಅನುಭವಿಸಿದ ಎಲ್ಲ ನೋವನ್ನು ಒಂದೇ ಕ್ಷಣದಲ್ಲಿ ಕಂದನ ನಗು ಮರೆಸಿಬಿಡುತ್ತದೆ. 

ಸರಿಯಾಗಿ ಜನವರಿ 26 ನೇ ತಾರೀಖು ಹೆರಿಗೆ ನೋವು ಬಂದೆ ಬಿಟ್ಟಿತ್ತು. ಹೊರಗಡೆ ಹೋಗಲು ಸಾದ್ಯವಿಲ್ಲದ ಒಳಗೆ ಕೂತುಕೊಳ್ಳಲು ಆಗದ ಪರಿಸ್ಥಿತಿ ಅದು. ಹಾಗೆಂದು ಮಗುವಿನ ಬರುವಿಕೆಗೆ ಸಾಕಷ್ಟು ತಯಾರಿ ನಡೆದಿತ್ತು ಕೂಡಾ. ಯಾವುದೇ ರೀತಿಯಲ್ಲಿ ಮಗುವಿನ ಹುಟ್ಟಿನಲ್ಲಿ ದೋಷ ಬರದಂತೆ ನಿಗಾ ವಹಿಸಲಾಗಿತ್ತು. ಹಿರಿಯರ ಆಶೀರ್ವಾದ, ಕಿರಿಯರ ಬೆಂಬಲ, ಸ್ನೇಹಿತರ ಶುಭ ನುಡಿ ಎಲ್ಲವೂ ಆ ಮಗುವಿನ ಪೋಷಕರಿಗೆ ಲಭಿಸಿತ್ತು. ಇನ್ನೇನು ಬೇಕು ಬದುಕಿಗೆ.

ಅಂತೂ ೨೬ ನೇ ತಾರೀಖು ಎಲ್ಲ ಅಡೆ  ತಡೆಗಳನ್ನು ದಾಟಿ ಆ ಮಗು ಹುಟ್ಟೇ ಬಿಟ್ಟಿತು. ಮಗುವಿನ ಹುಟ್ಟಿದ ನಂತರದ ಬೆಳವಣಿಗೆ ಹೇಳುವ ಮೊದಲು ಸ್ವೀಡನ್ನಿನಲ್ಲಿ ಗರ್ಭಿಣಿ ಹೆಂಗಸರನ್ನು ನೋಡಿಕೊಳ್ಳುವ ಆಸ್ಪತ್ರೆಗಳ ಬಗ್ಗೆ ನಿಮಗೆ ಹೇಳಲೇಬೇಕು. ಸ್ವೀಡನ್ ನಲ್ಲಿ ವೈದ್ಯಕೀಯ ಸೇವೆ ಸದಾ ಉಚಿತ. ನಮ್ಮಲ್ಲಿನ ಸರಕಾರೀ ಆಸ್ಪತ್ರೆಗಳಂತೆ  ''ಸೇವೆ ಉಚಿತ: ಸಾವು ಖಚಿತ'' ದಂತಲ್ಲ. ಆದರೆ ಆಸ್ಪತ್ರೆಗೆ ಹೋಗುವ ಮೊದಲು ವೈದ್ಯರಿಗೆ ಫೋನ್ ಮಾಡಿ ಅವರ ಭೇಟಿಯ ಸಮಯ ನಿಗದಿ ಪಡಿಸಿಕೊಳ್ಳಬೇಕು. ಗರ್ಭಿಣಿ ಸ್ತ್ರೀಯರಿಗೆ  ಇಲ್ಲಿಯ ವ್ಯವಸ್ಥೆ ಹೇಳಿ ಮಾಡಿಸಿದಂತಿದೆ. ಯಾವುದಕ್ಕೂ ಹಣ ಕೊಡುವ ಕೆಲಸವಿಲ್ಲ. ಸಮಯಕ್ಕೆ ಸರಿಯಾಗಿ ಹೋಗಿ ಎಲ್ಲ ರೀತಿಯ ವೈದ್ಯಕೀಯ ಸೇವೆ ತೆಗೆದುಕೊಂಡರೆ ಆಯಿತು. ಮಗುವಿನ ಬೆಳವಣಿಗೆಗೆ ತಾಯಿಗೆ ಕೊಡಬೇಕಾದ ಎಲ್ಲ ರೀತಿಯ ಹೈ-ಟೆಕ್ ಚಿಕಿತ್ಸೆಗಳನ್ನು ನೀಡುತ್ತಾರೆ. ಇನ್ನು ತಾಯಿ ಕೆಲಸದಲ್ಲಿದ್ದರೆ ಅವಳಿಗೆ ಮಗು ಹುಟ್ಟುವ 2 ತಿಂಗಳಿಂದ ಹಿಡಿದು ಒಂದು ವರ್ಷದ ತನಕ ಸಂಬಳದ ಜೊತೆಗೆ ರಜೆ ನೀಡುತ್ತಾರೆ. ಇದು ಸಾಲದೆಂಬಂತೆ ತಂದೆಗೂ 6 ತಿಂಗಳುಗಳ ಕಾಲ ಸಂಬಳದ ಜೊತೆ ರಜೆ ನೀಡುತ್ತಾರೆ. ಮಗು ಹುಟ್ಟಿದ ಮೇಲೆ ಮಗುವಿನ ಪೋಷಣೆಗೆಂದು ಪ್ರತಿ ತಿಂಗಳು 10000 ರೂಪಾಯಿಗಳನ್ನು ಹೆತ್ತವರಿಗೆ ನೀಡುತ್ತಾರೆ ಕೂಡಾ. ಇಂಥಹ ವ್ಯವಸ್ಥೆ ಎಲ್ಲಿದೆ ಹೇಳಿ. ಇಲ್ಲಿ ಜೀವಕ್ಕೆ ಬೆಲೆಯಿದೆ, ಬದುಕಿಗೆ ಗೌರವವಿದೆ. 

2 ವರ್ಷಗಳ ಹಿಂದೆ ಹುಟ್ಟಿದ ಮಗುವಿಗಾಗಲಿ, ಹೆತ್ತವರಿಗಾಗಲಿ ಇದ್ಯಾವ ಸವಲತ್ತುಗಳು ಲಭಿಸಲಿಲ್ಲ. ತಂದೆ ತಾಯಿ ಇಬ್ಬರೂ ಕೆಲಸದಲ್ಲಿದ್ದರೂ ಯಾವುದೇ ರಜೆ ಆಗಲಿ, ಸಂಬಳ ವಾಗಲಿ ಮಗು ಹುಟ್ಟಿದ್ದಕ್ಕೆ ಸಿಗಲಿಲ್ಲ. ಆದರೆ ಆ ಮಗುವಿನ ಹುಟ್ಟಿನ ಸಂಭ್ರಮ ಪೋಷಕರಿಗೆ ಹೇಳಲು ಅಸಾದ್ಯವಾದದ್ದು. ಆರಂಭದಲ್ಲಿ ವಿದೇಶದಲ್ಲಿ ಹುಟ್ಟಿದ ಮಗು ಎಲ್ಲಿ ಅನಾಥವಾಗಿ ಬೆಳೆಯುತ್ತದೋ ಎಂಬ ಆತಂಕವಿತ್ತು. ಆದರೆ ಕಾಲ ಕ್ರಮೇಣ ವಿದೇಶದಲ್ಲಿದ್ದ ಮಗುವಿಗೆ ದೂರದ ಭಾರತೀಯರ ಸಂಪರ್ಕ ಲಭಿಸಿದ್ದಲ್ಲದೆ , ವಿಶ್ವದ ಅನೇಕ ಸ್ನೇಹಿತರ ಹಿತನುಡಿ ಮಗುವಿನ ಅಂತರಿಕ ವಿಶ್ವಾಸ ಹೆಚ್ಚಿಸಿತು. ಇಂದು ಮಗು ಒಂದು ಹಂತಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕಾರಣ ಆ ಎಲ್ಲ ಮಹನೀಯರುಗಳು.

ಇದೇನಪ್ಪ, ಮಗು, ಹೆರಿಗೆ, ಹುಟ್ಟು, ಸ್ನೇಹಿತರು, ಬೆಳವಣಿಗೆ ಏನೇನೋ ಹೇಳ್ತಾ ಇದಾನೆ ಅಂತ ಬೈಕೋತಾ ಇದೀರಾ, ಇಂದು 26 ನೇ ತಾರೀಖು ನನ್ನ ಪುಟ್ಟ ಮಗು ''ಸಾಗರದಾಚೆಯ ಇಂಚರ'' ಕ್ಕೆ  ಎರಡು ವರ್ಷ ತುಂಬಿತು. ಈ ಸಂಭ್ರಮ ಅದಕ್ಕೇ. ಈ  ಎರಡು ವರ್ಷಗಳಲ್ಲಿ ನನ್ನ ಬ್ಲಾಗ್ ನ್ನು ಎತ್ತಿ ಬೆಳೆಸಿದ ನಿಮ್ಮೆಲ್ಲರಿಗೂ ಹ್ರತ್ಪೂರ್ವಕ ವಂದನೆಗಳು.

ಇಲ್ಲಿ ಯಾರ ಹೆಸರನ್ನು ಪ್ರಸ್ತಾಪಿಸಲು ಸಾದ್ಯವಿಲ್ಲ ಕಾರಣ ನೀವೆಲ್ಲರೂ ನನ್ನ ಬ್ಲಾಗ್ ಬೆಳೆಯಲು ಕಾರಣ ಆಗಿದ್ದೀರಿ.  ಈ ಎರಡು ವರ್ಷಗಳಲ್ಲಿ ನನ್ನ ನೋವುಗಳಿಗೆ ಸಾಂತ್ವನ ನೀಡಿ, ನಲಿವುಗಳಿಗೆ ಬೆಂಬಲವಾಗಿ, ತಪ್ಪಿದಲ್ಲಿ ತಿದ್ದಿ, ಇಷ್ಟವಾದಲ್ಲಿ ಮೆಚ್ಚಿ ಈ ಮಗುವನ್ನು ಬೆಳೆಸಿದ್ದಿರಿ. ಅದಕ್ಕೆ ಇನ್ನೊಮ್ಮೆ ಥ್ಯಾಂಕ್ಸ್

ಕೆಲವು ಸಂದರ್ಭಗಳಲ್ಲಿ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ, ಕೆಲವೊಮ್ಮೆ ನಿಮಗೆ ಬೇಸರ ಆಗುವಂತೆ  ಕಾಮೆಂಟ್ ನೀಡಿರಬಹುದು. ನಿಮ್ಮದೇ ಮನೆಯ ಸದಸ್ಯ ಎಂದು ತಿಳಿದು ಮನ್ನಿಸಿಬಿಡಿ.  

ಬ್ಲಾಗ್ ಆರಂಬಿಸಿದಾಗ ನನ್ನ ಮನದಾಳದ ಭಾವನೆಗಳನ್ನು ಬರೆಯುವ ತಾಣ ಎಂದುಕೊಂಡಿದ್ದೆ. ಆದರೆ ಅದು ಈಗ ಅದನ್ನೆಲ್ಲ ಮೀರಿ ನಡೆದಿದೆ. ನಿಮ್ಮೆಲ್ಲರ ಪ್ರೀತಿಗೆ, ಸ್ನೇಹಕ್ಕೆ ಸೋತಿದ್ದೇನೆ. ಬ್ಲಾಗ್ ನಿಂದ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಸ್ನೇಹ ಲಭಿಸಿದೆ. ಕೆಲವರು ಇಟ್ಟಿಗೆ ಸಿಮೆಂಟ್ ನಲ್ಲಿಯೇ  ಮನಸ್ಸನ್ನು ಗೆದ್ದರೆ, ಇನ್ನು ಕೆಲವರು ಮನಸಿನಲ್ಲಿಯೇ ಮಾತಾಡಿ ಮನಸನ್ನು ಅರಿತಿದ್ದಾರೆ. ತಮ್ಮ ಛಾಯಾ ಕನ್ನಡಿಯಿಂದ ಸ್ನೇಹಿತರಾದ ಕೆಲವರು, ಜಲದಲ್ಲಿದ್ಹ ಮೀನುಗಳ ನಯನಗಳ ಬಗ್ಗೆ ತಿಳಿಸುತ್ತ ಜೊತೆಗಾರರಾದವರು ಹಲವರು,  ಮರುಭೂಮಿಯಲ್ಲಿದ್ದು ಕೊಂಡು  
ಮ್ರದು ಮನಸಿನಿಂದ, ಸವಿ ಮಾತಿಂದ  ಸ್ನೇಹ ಹಂಚಿದವರು,  ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಒಟ್ಟಿನಲ್ಲಿ ಬ್ಲಾಗ್ ಲೋಕಕ್ಕೆ ಬಂದ ಮೇಲೆ ಅನೇಕ ಸ್ನೇಹಿತರು ಸಿಕ್ಕಿದ್ದಾರೆ. ಬೆಂಗಳೂರಿಗೆ ಹೋಗುವುದೇ ಒಂದು ಸಂಭ್ರಮ. ಅನೇಕ ಬ್ಲಾಗ್ ಸ್ನೇಹಿತರು ಬೆಂಗಳೂರು ಬರುತ್ತೇನೆ ಅಂದರೆ, ''ಯಾವಾಗ ಬರುತ್ತಿರಾ'' ''ಎಲ್ಲರೂ ಸೇರೋಣ, ಪ್ರೀತಿಯಿಂದ 4 ಕ್ಷಣ ಒಟ್ಟಿಗೆ ಕಳೆಯೋಣ'' ''ಬರುವ ದಿನ ತಿಳಿಸಿ'' ಎಂದೆಲ್ಲ ಹೇಳಿದಾಗ ಹ್ರದಯ ತುಂಬಿ ಬರುತ್ತದೆ. ಎಲ್ಲಿಯೋ ಇರುವ ನಮ್ಮನ್ನು ಆಪ್ತರನ್ನಾಗಿಸಿಕೊಂಡು ನಮ್ಮನ್ನು ಭೆಟ್ಟಿ ಆಗಲು ಬರುವ ಎಲ್ಲ ಸ್ನೇಹಿತರುಗಳ ಸ್ನೇಹಕ್ಕೊಂದು  ಸಲಾಮು.  

3 ನೇ ವರ್ಷಕ್ಕೆ ಕಾಲಿಡುತ್ತಿರುವ ಮಗುವಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕಿದೆ, ಕೊಡುತ್ತಿರಲ್ಲ
ಮತ್ತೆ ಮುಂದಿನ  ವಾರ ಸಿಗುತ್ತೇನೆ 
ಪ್ರೀತಿ ಇರಲಿ
ನಿಮ್ಮ
ಗುರು 

Thursday, January 6, 2011

ಬದುಕಿನ ಪುಟಗಳಿಂದ ..




ಕೆದಕಿದಷ್ಟೂ ಬರುವ ಅಗಾಧ ರಾಶಿಯೆಂದರೆ ನೆನಪು. ಅದು ಸಿಹಿ ನೆನಪೇ ಆಗಿರಬಹುದು, ಕಹಿ ನೆನಪೇ ಆಗಿರಬಹುದು. 
''ಎಲ್ಲ ಮರೆತಿರುವಾಗ, ಇಲ್ಲ ಸಲ್ಲದ ನೆವವ 
ಹೂಡಿ ಬರದಿರು ಮತ್ತೆ ಹಳೆಯ ನೆನಪೇ''
ನೆನಪುಗಳಲ್ಲಿ ನೋವಿದ್ದರೆ ಅದರ ನೆನಪು ಮನಸಿಗೆ ಮತ್ತೆ ಮತ್ತೆ ನೋವು ತರಿಸುತ್ತದೆ. ಸಿಹಿ ನೆನಪುಗಳು ಬದುಕಿನಲ್ಲಿ ನೆನೆಸಿದ್ದಷ್ಟೂ ಹೊಸತನ ನೀಡುತ್ತವೆ. ಬದುಕು ಮುಂದಕ್ಕೆ ಚಲಿಸಬೇಕು ನಿಜ, ಆದರೆ ಅದೊಂದು ''ಸಿಂಹಾವಲೋಕನ'' ಆಗಿರಬೇಕು. ಮುಂದೆ ನಡೆದಂತೆ ಹಿಂದೆ ಇಟ್ಟ ಹೆಜ್ಜೆಯ ಒಮ್ಮೆ ಅವಲೋಕನ ಅತ್ಯಗತ್ಯ. ಅದರಲ್ಲಿ ತಿದ್ದಿಕೊಳ್ಳುವ ಹಲವು ಅಂಶಗಳು ಆಗ ಗಮನಕ್ಕೆ ಬರದೆ ಪುನಃ ಎಂದಾದರೊಮ್ಮೆ ಗಮನಕ್ಕೆ ಬರಬಹುದು. ಅದಕ್ಕೇ

 ''ಬಂದ ನೆನಪುಗಳ ದೂರ ತಳ್ಳದಿರು, ಭಾವ ತುಂಬಿ ಬರಲಿ
ನೊಂದ ಮನಸಿಗದು ಹಿತವ ನೀಡುವುದು, ಜೀವ ಮತ್ತೆ ತರಲಿ''

ಬದುಕು ಏಕತಾನತೆಯಿಂದ ಕೂಡಿದ್ದರೆ ಅದರಲ್ಲಿ ಯಾವ ಖುಷಿಯೂ ಇಲ್ಲ ಎಂಬುದು ನನ್ನ ಭಾವನೆ.  ಗೆಲುವು-ಸೋಲು ಬದುಕಿನಲ್ಲಿದ್ದರೆ ಮಾತ್ರ ಹಸನಾದ ಬಾಳು ನಡೆಯಲು ಸಾದ್ಯ. ಹುಟ್ಟಿದ ಮಗು ಒಮ್ಮೆಲೇ ನಡೆಯಲು ಕಲಿತರೆ ಮುಂದೆ ಬಿದ್ದಾಗ ಆಗುವ ನರಳಾಟ ಸಹಿಸಲಸಾದ್ಯ. ಅದೇ ಮಗು ಎದ್ದು ಬಿದ್ದು ನಡೆಯಲು ಕಲಿತರೆ ಬರುವ ಎಲ್ಲ ನೋವುಗಳ ಸಮರ್ಥವಾಗಿ ಎದುರಿಸುವ ಮಾನಸಿಕ ಸ್ಥೈರ್ಯ ಪಡೆದುಕೊಳ್ಳುತ್ತದೆ. ಆ ಏಳು-ಬೀಳುಗಳ ನಡುವಿನ ಬದುಕಿನ ಚಿತ್ರಣದ ನೆನಪು ಎಂದಿಗೂ ಮಧುರ.
ಸರಿಯಾಗಿ 11 ವರ್ಷಗಳ ಹಿಂದೆ ನಾನು PUC ಮುಗಿಸಿದಾಗ ಮನೆಯಲ್ಲಿ ಮುಂದಕ್ಕೆ ಏನು ಮಾಡಬೇಕೆಂದು ಚಿಂತನೆ. ನಮ್ಮ ತಂದೆ ಎಂದಿಗೂ ನೀನು ಇಂಜಿನಿಯರ್ ಆಗಲೇಬೇಕು, ಡಾಕ್ಟರ್ ಆಗಲೇಬೇಕು ಎಂದು ಪೀಡಿಸಲಿಲ್ಲ. ಆ ಮಟ್ಟಿಗೆ ನಾನು ಸುಖಿ. ನನಗೆ ಆಗ ಇಂಜಿನಿಯರಿಂಗ್ ನಲ್ಲಿ ಸಾಕಷ್ಟು Rank ಬಂದರೂ BSc ಮಾಡುವ ಮನಸ್ಸಿತ್ತು. ತಂದೆಯವರ ಸಮ್ಮತಿ ಪಡೆದು ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಸೇರಿದ್ದಾಯಿತು. ಅಂದಿನ ದಿನಗಳಲ್ಲಿ ನಾನು ಇಂಜಿನಿಯರ ಮಾಡದೇ BSc ಗೆ ಸೇರಿದ್ದಕ್ಕೆ ನನ್ನ ಅನೇಕ ಸ್ನೇಹಿತರು, ಹಾಗೂ ಸಂಬಂಧಿಕರು ''ನಾನು ಯಾವ ಪ್ರಯೋಜನಕ್ಕೂ ಬಾರದವನು'' ಎಂದು ನನ್ನೆದುರಲ್ಲೇ ಅನೇಕ ಸಲ ಮೂದಲಿಸುತ್ತಿದ್ದರು. ಕೆಲವೊಮ್ಮೆ ಅಂಥಹ  ಮೂದಲಿಕೆ ಎಂಥಹ ಪರಿಣಾಮ ಬೀರುತ್ತದೆ ಎಂದರೆ ''ಏನಾದರಾಗಲಿ, ಸಾಧಿಸಿ ತೋರಿಸಬೇಕು'' ಎಂಬ ನಿರ್ಧಾರ ವನ್ನು ನಮ್ಮಲ್ಲಿ ತುಂಬಿ ಬಿಡುತ್ತದೆ. ರಜೆಯಲ್ಲಿ ಊರಿಗೆ ಹೋದಾಗ ಅಮ್ಮ-ಅಪ್ಪ ಹೇಳುತ್ತಿದ್ದುದು ''ಸರಿಯಾಗಿ ಓದು, ಮೂದಲಿಸುವವರ ಬಾಯಿಗೆ ಆಹಾರ ಆಗಬೇಡ '' ಎಂದು. ಬಹುಷ: ತಂದೆ-ತಾಯಿ ಕೊಟ್ಟ ಆ ಪ್ರೀತಿಯೇ ನನ್ನನ್ನು ಮುನ್ನಡೆಸಿತು ಎಂದರೆ ತಪ್ಪಾಗಲಾರದೇನೋ. 
ಆ ದಿನಗಳಲ್ಲಿ ಬಿಸಿ ರಕ್ತದ ವಯಸ್ಸು, ಸ್ವಾಭಿಮಾನ ಅದೆಲ್ಲಿತ್ತೋ ಗೊತ್ತಿಲ್ಲ. ಪ್ರತಿಯೊಂದಕ್ಕೂ ಸ್ವಾಭಿಮಾನ. ತಂದೆಯಿಂದ ಹಣ ಪಡೆಯಲು ಸ್ವಾಭಿಮಾನ. ವರ್ಷದ ಕಾಲೇಜಿನ ಫೀಸ್ ಗೆ ಎಷ್ಟು ಬೇಕೋ ಅಷ್ಟನ್ನೇ ಪಡೆಯಬೇಕು ಎಂಬ ಹಠ. ಉಡುಪಿಯಲ್ಲಿ ಇರುವಾಗ ಶ್ರೀ ಕೃಷ್ಣ ಮಠದ ಹತ್ತಿರಲ್ಲಿಯೇ ರೂಮು ಮಾಡಿಕೊಂಡು ಇದ್ದೆ. ಸುಮಾರು 20 ಜನ ವಿಧ್ಯಾರ್ಥಿಗಳು ನನ್ನಂತೆಯೇ ಅಲ್ಲಿ ಇದ್ದರು. ನಾನು ಜೀವನದಲ್ಲಿ ಮೊದಲ ಬಾರಿಗೆ ತಂದೆ-ತಾಯಿಯನ್ನು ಬಿಟ್ಟು ಹೊರಗೆ ಬಂದ ಕ್ಷಣ ಅದು. ಮನೆಯಲ್ಲಿ ಅಮ್ಮ ಮಾಡಿದ ಕೈ ತುತ್ತನ್ನು ತಿನ್ನುತ್ತ ಊಟಕ್ಕೆ ಕುಳಿತಾಗ ''ಅದು ಸರಿ, ಇದು ಸರಿ ಇಲ್ಲ'' ಎಂದು ಅಮ್ಮನಿಗೆ ಬುದ್ಧಿ ಹೇಳುತ್ತಾ ಇದ್ದೆ. ಆದರೆ ಉಡುಪಿಗೆ ಬಂದ ಒಂದೇ ವಾರದಲ್ಲಿ ನಾನೇ ಅಡಿಗೆ ಮಾಡಿಕೊಂಡಾಗ ಅಮ್ಮನ ನೆನಪಾಗಿ ''ಕಣ್ಣೀರು'' ಗಳ ಗಳ ನೇ ಹರಿದಿತ್ತು. ನಮ್ಮೆಲ್ಲ ಮಾತುಗಳನ್ನು ಶಾಂತಿಯಿಂದ ಕೇಳಿ, ನಮ್ಮ ಮಾತುಗಳಿಗೆ ಬೇಸರ ಮಾಡಿಕೊಳ್ಳದೆ, ಪುನಃ ಅದೇ ನಗು, ಅದೇ ತಾಳ್ಮೆ, ಅದೇ ಸೇವಾ ಮನೋಭಾವ, ಅದೇ ವಾತ್ಸಲ್ಯದಿಂದ ನಮ್ಮನ್ನು ಸಲಹುವ ಮಮತಾಮಯಿ ತಾಯಿಯ ಪ್ರೀತಿಯ ಮುಂದೆ ಜಗತ್ತಿನ ಯಾವ ಪ್ರೀತಿಯೂ ಸರಿಸಮನಲ್ಲ. ಆ ಕ್ಷಮಯಾಧರಿತ್ರಿಯ ಮುಂದೆ ನಾವು ತುಂಬಾ ಚಿಕ್ಕವರು. 
ಉಡುಪಿಯಲ್ಲಿ ಶ್ರೀ ಕೃಷ್ಣ ಮಠ ದಲ್ಲಿ ಪ್ರತಿದಿನ ಮಧ್ಯಾನ್ಹ ಮತ್ತು ಸಂಜೆ ಸರ್ವರಿಗೂ ಉಚಿತ ಊಟ ಹಾಕುತ್ತಾರೆ. ಶ್ರೀ ಕೃಷ್ಣನ ಪರಮ ಪ್ರಸಾದ ವಾದ ಊಟವನ್ನು ಮಾಡಿ ಸರ್ವರೂ ಪುನೀತರಾಗುತ್ತಾರೆ. ನಾನು ಬಂದ ಒಂದು ವಾರದ ನಂತರ ಶ್ರೀ ಕೃಷ್ಣ ಮಠ ಕ್ಕೆ  ಊಟಕ್ಕೆ ಹೋಗತೊಡಗಿದೆ. ನನ್ನ ಬದುಕಿನಲ್ಲಿ ಶ್ರೀ ಕೃಷ್ಣ ಮಠ ದ ಋಣ ಮಾತ್ರ ತೀರಿಸಲಾಗದ್ದು. ಪ್ರತಿದಿನ ಮಧ್ಯಾನ್ಹ ಮತ್ತು ರಾತ್ರಿ ಶ್ರೀ ಕೃಷ್ಣನ ದರ್ಶನ ಮಾಡಿ ಸಾವಿರಾರು ಜನರ ನಡುವೆ ಕುಳಿತು ಮಾಡುವ ಊಟದ ರುಚಿ ಐಶಾರಾಮಿ ಬಂಗಲೆಯಲ್ಲಿ ಚಿನ್ನದ ತಟ್ಟೆ ಯಲ್ಲಿ ಕುಳಿತರೂ ಸಿಗದು. ಮನುಷ್ಯ ನ ಅಹಂಕಾರ ಕಡಿಮೆ ಮಾಡಬೇಕು ಎಂದಾದರೆ ''ವಿಶಾಲ ಸಮುದ್ರದ ಎದುರಲ್ಲಿ ಅಥವಾ ವಿಶಾಲ ಆಕಾಶದ ಕೆಳಗೆ ನಕ್ಷತ್ರಗಳ ವೀಕ್ಷಣೆಯಲ್ಲಿ ಘಂಟೆಗಟ್ಟಲೆ ಕುಳಿತು ಕೊಳ್ಳಬೇಕಂತೆ . ಆ ನಿಸರ್ಗದ ವೈಚಿತ್ರ್ಯದ ಮುಂದೆ ಮನಸ್ಸು ತನ್ನಿಂದ ತಾನೇ ಶಾಂತವಾಗುತ್ತದೆ ಎನ್ನುತ್ತಾರೆ ಹಿರಿಯರು. ಇತ್ತೀಚಿನ ದಿನಗಳಲ್ಲಿ ನಮಗೆ ಸಮುದ್ರ ಎಂದರೆ ನೆನಪಾಗುವುದು ಮರಳಲ್ಲಿ ಆಡುವುದು, ಸ್ನಾನ ಮಾಡುವುದು ಬಿಟ್ಟರೆ ಶಾಂತವಾಗಿ ಕುಳಿತುಕೊಳ್ಳಲು ನಮಗೆ ಸಾದ್ಯವಿಲ್ಲದ ಸ್ಥಿತಿ. ಅಂತೆಯೇ ಸಾವಿರಾರು ಜನರ ನಡುವೆ ಕುಳಿತು ಊಟ ಮಾಡಿದಾಗ ಸಿಗುವ ಭಾವನೆಯೇ ಬೇರೆ.  
ಹಾಗೆಂದೂ ಎಂದಿಗೂ ಉಚಿತ ಊಟ ಕೊಡುತ್ತಾರೆ ಎಂದು ಸುಮ್ಮನೆ ಊಟ ಮಾಡಿ ಬರುತ್ತಿರಲಿಲ್ಲ. ನಾವು ಒಂದು 10 ಜನ ಗೆಳೆಯರು ಪ್ರತಿ ದಿನ ಸುಮಾರು ಸಾವಿರದಷ್ಟು ಜನರಿಗೆ ಬಡಿಸಿ , ಅವರ ಊಟ ಆದ ಮೇಲೆ ಕೊನೆಯಲ್ಲಿ ನಾವು ಊಟ ಮಾಡಿ ಬರುತ್ತಿದ್ದೆವು. ಇದಕ್ಕೆ ನಮಗೆ ಯಾರೂ ಹಣ ಕೊಡುತ್ತಿರಲಿಲ್ಲ. ಹೀಗೆ ಕೃಷ್ಣನ ಮಠ  ದಲ್ಲಿ ಬಡಿಸಿ ಊಟ ಮಾಡಿ ಕಲಿಯುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಕೃಷ್ಣ ಮಠ  ನಮ್ಮೆಲ್ಲರ ಬಾಳಿಗೆ ಬೆಳಕಾಗಿದೆ. ಅನ್ನ ನೀಡಿ ಬದುಕು ಬರೆದ ಮಹಾನ್  ಸ್ಥಳವೂ ಹೌದು.
ನೋಡಿ, ಎಲ್ಲಿಂದನೋ ಆರಂಬಿಸಿದ ಕಥೆ ಎಲ್ಲಿಗೋ ಹೋಗುತ್ತಿದೆ. ನೆನಪಿನ ಬುತ್ತಿ ಬಿಚ್ಚಿದಂತೆ ಬರೆಯಬೇಕು ಎನಿಸುತ್ತದೆ. ಆ ದಿನಗಳಲ್ಲಿ ಇದ್ದ ಸ್ವಾಭಿಮಾನ ಬದುಕಿಗೆ ಹೊಸ ಆಯಾಮ ನೀಡಿತು.

 ಕಳೆದ ದಿನಗಳಾದರೂ ಎಂತಹುದು? ಬದುಕಿನ ದಾರಿ ಹುಡುಕುವಲ್ಲಿ ಉಡುಪಿ ಯ ಮಾತ್ರವೇನು?  ಇವೆಲ್ಲವುಗಳನ್ನು ಮುಂದಿನ ವಾರ ಹೇಳುತ್ತೇನೆ. 
ಮತ್ತೆ ಸಿಗೋಣ
ಗುರು 

Thursday, December 30, 2010

ಸಮಯಕ್ಕೀಗ ಸಮಯವಿಲ್ಲ...

ವೈರಸ್ ಹಾವಳಿ ಗಿಂತ ವೇಗವಾಗಿ ಹಾಗೂ ಅಷ್ಟೇ ವ್ಯವಸ್ಥಿತವಾಗಿ ಹಬ್ಬುತ್ತಿರುವ ದೊಡ್ಡ ವೈರಸ್ ''I am Busy'' ಎನ್ನುವ ಶಬ್ದ. ಯಾರನ್ನೇ ಕೇಳಿ ''ನಮಗೆ ಟೈಮ್ ಇಲ್ರಿ, ಆಫೀಸ್ ಕೆಲಸದ ನಡುವೆ ಬೇರೆ ಏನು ಮಾಡೋಕೂ ಟೈಮ್ ಇಲ್ಲ'' ಅನ್ನೋ ಮಾತು. ಬಹುಷ: ಇದೇ ಕಾರಣಕ್ಕೆ ಇಂದು ಚಿತ್ರಕಾರರು, ಸಾಹಿತಿಗಳು, ಕವಿಗಳ, ಮಾತುಗಾರರ ಸಂಖ್ಯೆ ಗಣನೀಯವಾಗಿ ನಶಿಸುತ್ತಿದೆ. ಮೊದಲೆಲ್ಲ ಎಷ್ಟೇ ಕಲಿತರೂ ಜನರಲ್ಲಿ ಹಾಸ್ಯ ಪ್ರಜ್ಞೆ ಕಡಿಮೆ ಆಗಿರಲಿಲ್ಲ. ಆದರೆ ಇಂದು ಗಂಭೀರ ವದನದ ಲಂಬೋದರಗಳ (ಇಡೀ ದಿನ ಕುರ್ಚಿಯ ಮೇಲೆ ಕುಳಿತು ಗಣಕ ಯಂತ್ರ ಕುಟ್ಟಿದರ ಫಲ )ಸಂಖ್ಯೆ ಎಲ್ಲೆಡೆ  ಕಂಡು ಬರುತ್ತಿದೆ. ಇಂಥಹ ಲಂಬೋದರಗಳ ನಡುವೆ ದಿನದ 24 ಘಂಟೆ ಒದ್ದಾಡುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ''ಸಮಯಕ್ಕೇ ಸಮಯವಿಲ್ಲದ'' ಪರಿಸ್ಥಿತಿ ಬಂದಿದೆ.

ಹಾಗಾದ್ರೆ ಸಮಯ ಎಲ್ಲಿ ಹೋಯಿತು ಎಂಬುದರ ವಿಶ್ಲೇಷಣೆ ಅಗತ್ಯ ಅಲ್ಲವೇ? ದಿನದ 24 ಘಂಟೆಗಳನ್ನು  ಮನುಷ್ಯ ನ ದಿನಚರಿ ನೋಡಿ ಮಾಡಲಿಲ್ಲ. ಇಂದು 24 ಘಂಟೆ, ನಾಳೆ 26 ಘಂಟೆ ಎಂದು ಬದಲಿಸಲು. ಅವು ಜಗತ್ತಿನ ಪ್ರತಿಯೊಂದು ಜೀವಿಗೂ ಒಂದೇ ತೆರನಾಗಿದೆ. ಆದರೆ ಅದೇ 24 ಘಂಟೆಗಳನ್ನೇ ಉಪಯೋಗಿಸಿಕೊಂಡು ಅಸಾಮಾನ್ಯವಾದುದನ್ನು ಸಾಧಿಸಿದ ಸಾಮಾನ್ಯ ಮನುಷ್ಯರ ಜೀವನ ಗಾಥೆ ನಮಗೊಂದು ನೀತಿ ಪಾಠ ಅಲ್ಲವೇ? ಅವರಿವರ್ಯಾಕೆ? ನಮ್ಮವರೇ ಆದ ನೆಚ್ಚಿನ ಬರಹಗಾರ ರವಿ ಬೆಳೆಗೆರೆ ಅವರನ್ನೇ ತೆಗೆದುಕೊಳ್ಳಿ. 24 ಘಂಟೆಗಳಲ್ಲಿ ಅದೆಷ್ಟೊಂದು ಕೆಲಸ ಮಾಡುತ್ತಾರೆ. ಟಿ.ವಿ ಸಿರಿಯಲ್ಲುಗಳು, ಬೆಳಗಿನ ರೆಡಿಯೋ ಕಾರ್ಯಕ್ರಮ, ನಂತರ ಹಾಯ್ ಬೆಂಗಳೂರಿಗೆ ಲೇಖನ, ರಾತ್ರಿ   Crime Story, ಕಥೆ ಕವನಗಳ ಬಿಡುಗಡೆ ಸಮಾರಂಭ, ಸಾಲದೆಂಬಂತೆ ಅಸಂಖ್ಯಾತ ಪುಸ್ತಕಗಳ ಪ್ರಕಟಣೆ, ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ, ಒಂದೇ ಎರಡೇ, ಯಾವುದನ್ನೂ ತಪ್ಪಿಸುವಂತಿಲ್ಲ. ವಿಶ್ರಾಂತಿ ನೋ ಚಾನ್ಸ್.

ಅವರ ನೋಡಿ ನನಗೆ ಅನ್ನಿಸಿದೆ, ಅದೇಗೆ ಸಮಯವನ್ನು ಅವರು ಅಷ್ಟೊಂದು ಕರೆಕ್ಟ್ ಆಗಿ ಉಪಯೋಗಿಸ್ಕೊಳ್ಳುತ್ತಾರೆ ಎಂದು. ನಾವು ನಮ್ಮ ಮನಸ್ಸನ್ನು ಅಡ್ಜಸ್ಟ್ ಮಾಡಿಕೊಂಡು ಬಿಟ್ಟಿದ್ದೇವೆ ''ದಿನದ 24 ಘಂಟೆಗಳು  ನಮಗೆ ಸಾಕಾಗುವುದಿಲ್ಲ, ಆದ್ದರಿಂದ ನಾವು ನಮ್ಮ ಕೆಲಸಗಳನ್ನು ಮುಗಿಸಲು ಆಗುವುದಿಲ್ಲ'' ಎಂದು. ಮೊನ್ನೆ ಮೊನ್ನೆ ಬ್ಲಾಗ್ ಬರೆಯದ, ಬ್ಲಾಗ್  ಓದದ ಸ್ನೇಹಿತರೊಬ್ಬರು ಕೇಳಿದರು, ''ನಿಮಗೆ ಆಫೀಸ್ ನಲ್ಲಿ ಮಾಡಲು ಕೆಲಸ ಇಲ್ಲವೇ? ಯಾವಾಗಲು ಬ್ಲಾಗ್ ಬರೆಯುತ್ತಿರಲ್ಲ? ಎಂದು''. ಅವರ ಪ್ರಕಾರ ಬ್ಲಾಗ್ ಎನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಎಂಬುದಾಗಿ. ಸಮಯದ ಪರಿಕಲ್ಪನೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಮಾತಾಡಬಲ್ಲ. ತಾನೊಬ್ಬನೇ ಕೆಲಸ ಮಾಡುತ್ತಿದ್ದೇನೆ, ತಾನೊಬ್ಬನೇ ದೇಶದ ಉದ್ಧಾರ ದ ಹೊಣೆ ಹೊತ್ತಿದ್ದೇನೆ, ಉಳಿದವರೆಲ್ಲ ಸುಮ್ಮನೆ ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಉಡಾಫೆಯ ಧೋರಣೆಯ ಜನರ ಮಾತುಗಳು ಬೇಸರ ತರಿಸುವುದಿಲ್ಲ ಬದಲಿಗೆ ಅವರ ಬಗೆಗೆ ಅತೀವ ಕನಿಕರ ಮೂಡಿಸುತ್ತದೆ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಸಮಯವೇ ಸಿಗದ ಸ್ಥಿತಿ ನೋಡಿ ನಿಜಕ್ಕೂ ದು:ಖ ವಾಗುತ್ತದೆ. ಅವರ ಪ್ರಕಾರ ವಿದೇಶದವರು ಸುಮ್ಮನೆ ನಮ್ಮನ್ನು ಕರೆದುಕೊಂಡು ಬಂದು ಕುರ್ಚಿಯಲ್ಲಿ ಕೂರಿಸಿ ಧರ್ಮಕ್ಕೆ ಸಂಬಳ ಕೊಡುತ್ತಾರೆ ಎಂಬುದಾಗಿ. ಸಮಯ ಎಲ್ಲರಿಗೂ ಒಂದೇ ತೆರನಾಗಿದೆ, ಕೆಲಸವೂ ನಮ್ಮ ಜಾಣ್ಮೆ ಯಲ್ಲಿದೆ. ಒಬ್ಬ ಅಂಬಾನಿಗೆ,  ಸಿಕ್ಕ ಸಮಯದಲ್ಲಿಯೇ ಅಷ್ಟೊಂದು ಸಾಧನೆ ಮಾಡಲು ಸಮಯವಿದೆ ಎಂದಾದರೆ ನಮಗೆ ಯಾಕೆ ಸಾದ್ಯವಿಲ್ಲ. ಅವರೆಲ್ಲ ''ಇಂದೇ ಕೊನೆಯ ದಿನ'' ಎಂಬಂತೆ ಬದುಕನ್ನು ತಿಳಿದು ಸಮಯವನ್ನು ಸದುಪಯೋಗ ಪಡಿಸಿಕೊಂದಿದ್ದಕ್ಕೆ ಅವರು ಅಲ್ಲಿದ್ದಾರೆ, ನಾವು ಇಲ್ಲಿದ್ದಿವಿ.

 ಸಮಯವೇ ಇಲ್ಲದ ಸ್ಥಿತಿ ಎಲ್ಲೆಡೆ ತುಂಬಿ ಹೋಗಿದೆ, ಕಲಿಯುವ ಮಕ್ಕಳಿಗೆ ನಲಿಯಲು ಸಮಯವಿಲ್ಲ, ವಿಪರೀತ ಸ್ಪರ್ಧೆ ಅವರ ಸೃಜನಾತ್ಮಕ ವ್ಯಕ್ತಿತ್ವವನ್ನೇ ಕೊಂದು ಹಾಕುತ್ತಿದೆ. ಸದಾ ಗಣಕ ಯಂತ್ರದ ಮುಂದೆ ಕುಳಿತು ಆಡುವ ಅವರ ಸ್ಥಿತಿ ನೆನೆದು ಸಂಕಟ ಆಗುತ್ತದೆ. 
ಇನ್ನು ಪ್ರೇಮಿಗಳಿಗೆ ಪ್ರೀತಿಸಲು ಸಮಯವಿಲ್ಲ. ಸದಾ ಆಫೀಸ್ ಕೆಲದಲ್ಲಿಯೇ ಬ್ಯುಸಿ ಆಗಿರುವ ಅವರು ಕೇವಲ ಮೊಬೈಲ್ ಮೂಲಕ ಪ್ರೀತಿಸುತ್ತಿದ್ದಾರೆ.
 ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಮನೆಗೆ ಹೋಗಲು ಸಮಯವಿಲ್ಲ. ತಮ್ಮೆಲ್ಲ ಭಾವನೆಗಳನ್ನು ವಾರದ ಕೊನೆಗೆ ದೂಡುತ್ತಾರೆ. ಎಲ್ಲ ಭಾವನೆಗಳಿಗೆ ವಾರಾಂತ್ಯ ಉತ್ತರ ಅಲ್ಲವಲ್ಲ ಎಂಬ ನಗ್ನ ಸತ್ಯ ಅವ್ರಿಗೆ ಇನ್ನು ತಿಳಿದಿಲ್ಲ. ತಮಗೋಸ್ಕರ ಒಂದು ಜೀವ ಮನೆಯಲ್ಲಿ ಕಾಯುತ್ತಿದೆ ಎಂಬ ಸತ್ಯ ಗೊತ್ತಿದ್ದರೂ ವಿಪರೀತ ಸ್ಪರ್ಧಾತ್ಮಕ ಜಗತ್ತು ಮನೆಗೆ ಹೋಗಲು ಬಿಡುತ್ತಿಲ್ಲ. ಪುನಃ ಸಮಯವಿಲ್ಲ. ಭಾರತದಂಥ ಬೆಳೆಯುತ್ತಿರುವ ದೇಶಗಳಲ್ಲಿ ಅತೀ ವೇಗದ ಸ್ಪರ್ಧೆ ಮನುಷ್ಯನ ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತಿದೆ. ಮಿತಿ ಮೀರಿದ ಸಿಟ್ಟು, ಕೋಪ, ಅಸಹನೆ ಮಾನವನಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಸಮಾಧಾನ ಪಡಲು ಸಮಯವೇ ಇಲ್ಲದ ಪರಿಸ್ಥಿತಿ ಇರುವಾಗ ತಂಗಾಳಿಯ ಜೊತೆ ಓಡಾಡುವ  ಅವಕಾಶವೆಲ್ಲಿ. 

''ಆ ಬೆಟ್ಟದಲ್ಲಿ, ಬೆಳದಿಂಗಳಲ್ಲಿ, ಸುಳಿದಾಡಬೇಡ ಗೆಳತಿ''

ಎಂದು ಹೇಳಲೂ ಸಮಯವಿಲ್ಲದ ಸನ್ನಿವೇಶ ನಿರ್ಮಾಣವಾಗಿದೆ.

 ಪರಿಸ್ಥಿತಿ ಎಷ್ಟೊಂದು ಮಿತಿ ಮೀರಿದೆ ಎಂದರೆ ಹೆತ್ತವರ ಮಾತನಾಡಿಸಲು ನಮಗೆ ಸಮಯವಿಲ್ಲ. ಜೀವನದ ಕೊನೆಯ ಕ್ಷಣ ಗಳನ್ನು   ನೋಡುತ್ತಿರುವ ಅದೆಷ್ಟೋ ಪಾಲಕರು ತಮ್ಮ ಮಕ್ಕಳನ್ನು ನೋಡಲು ಹಂಬಲಿಸುತ್ತಾರೆ. ಆದರೆ ಸಮಯ ಇಲ್ಲದ ಮಕ್ಕಳು ದಿನೇ ದಿನೇ ಮುಂದುಡುತ್ತಾ ಕೊನೆಗೆ ಪಾಲಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ಸಮಯ ಸಿಗಲಿಲ್ಲ ಅನ್ನುತ್ತಾರೆ. ''ಮನಸಿದ್ದಲ್ಲಿ ಮಾರ್ಗವಿದೆ''. ಸಮಯದ ಉಪಯೋಗ ತಿಳಿಯಬೇಕಷ್ಟೆ.

ಇಲ್ಲದಿರೆ
ಜಾನೆ ಕಹಾ ಗಯೇ ವೋ ದಿನ, ಕಹತೇ ತೆ ತೆರಿ ರಾಹ್ ಮೇ....

ಎನ್ನುವಂತಾಗುತ್ತದೆ ನಮ್ಮ ಬದುಕು. 

ಇತ್ತೀಚಿನ ದಿನಗಳಲಿ ಓದುವ ಗೀಳು ಬಿಟ್ಟೆ ಹೋಗುತ್ತಿದೆ. ಪುಸ್ತಕಗಳನ್ನು ಓದಲು ಯಾರಿಗೂ ಸಮಯವಿಲ್ಲ. ಏನೇ ಹೇಳಿ, ಗೂಗಲ್ ಮಾಡಿ ತಿಳಿದುಕೊಳ್ಳುವ ತವಕ, ಆದರೆ ಸುಂದರ ಬರಹಗಳ, ಕಾದಂಬರಿಗಳ ಓದುವ  ವ್ಯವಧಾನ ಇಲ್ಲವೇ ಇಲ್ಲ. ನಾನು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಎಂದಿಗೂ ಬಸ್ ನಲ್ಲಿ ಶಾಲಾ, ಕಾಲೇಜುಗಳಿಗೆ ಆಗಲಿ, ಆಫೀಸ್ ಗೆ ಆಗಲಿ ಹೋದವನು ಅಲ್ಲ. ಆಫೀಸ್ ಹತ್ತಿರವೇ ಮನೆ ಬಾಡಿಗೆ ತೆಗೆದುಕೊಳ್ಳುವ ದುರಭ್ಯಾಸ ಮೊದಲಿನಿಂದಲೂ ಇದೆ. ಆದರೆ ಕಳೆದ 6 ತಿಂಗಳಿನ ಹಿಂದೆ ಆಫೀಸ್ ನ ಹತ್ತಿರ ಮನೆ ಮಾಡುವ ದುರಭ್ಯಾಸ ಹೆಂಡತಿಗೂ ಬಂದಿದ್ದರಿಂದ ಅನಿವಾರ್ಯವಾಗಿ ಮನೆ ಬದಲಿಸುವ ಪರಿಸ್ಥಿತಿ ಬಂತು. ಅವಳ ಆಫೀಸ್ ನ ಹತ್ತಿರ ನಾವು ಮನೆ ಮಾಡಿದ್ದರಿಂದ ನನಗೆ ಸುಮಾರು 15 ಕಿ ಮೀ ಬಸ್ ನಲ್ಲಿ ಪ್ರಯಾಣಿಸಬೇಕಾದ ಸನ್ನಿವೇಶ ನಿರ್ಮಾಣ ಆಯಿತು. ಬಹುಷ: ಬಸ್ ನಲ್ಲಿ ಪ್ರಯಾಣಿಸಬೇಕಾದರೆ ಎಷ್ಟೊಂದು ಕಷ್ಟ ಆಗುತ್ತದೆ ಎಂಬುದನ್ನು ನನಗೆ ತಿಳಿಸಲು ನನ್ನ ಮಡದಿ ಮಾಡಿದ  ಉಪಾಯವೂ ಇದ್ದಿರಬಹುದು :)
ಹೇಗಪ್ಪ ಬಸ್ ನಲ್ಲಿ ಪ್ರತಿ ದಿನ ಹೋಗುವುದು ಎಂಬ ದುಗುಡ ಬೇರೆ. ಬಸ್ ಕಾಯಬೇಕು, ಇಲ್ಲಿನ ಕೊರೆಯುವ  ಚಳಿಗೆ ಬಸ್ ಕಾಯುವ ದಿದೆಯಲ್ಲ, ಅದು ನನ್ನ ಶತ್ರುವಿಗೂ ಬೇಡಾ. ಬೀಸುವ ಗಾಳಿ, ಸುರಿಯುತ್ತಿರುವ ಹಿಮ ಮಳೆ, ಜಾರುತ್ತಿರುವ ರಸ್ತೆಗಳು, ಮೈ ಮೇಲೆ ಹೊದ್ದ 3-4 ಸ್ವೆಟರ್  ಗಳು, ತಲೆಗೆ ಟೊಪ್ಪಿ, ಕೈಗೆ ಗ್ಲೌಸ್ ಅಯ್ಯೋ, ಬೇಡಪ್ಪ ಬೇಡ. ಇದನ್ನೆಲ್ಲಾ ನೆನಪು ಮಾಡಿಕೊಂಡು ದೇವರಿಗೆ ಒಂದು ದೀಪ ಹಚ್ಚಿ ಬಸ್ ಹಿಡಿದು ಆಫೀಸ್ ಹೋಗುವ ಮೊದಲ ಯಾನಕ್ಕೆ ಮಾನಸಿಕವಾಗಿ ಸಿದ್ದವಾದೆ. ಹೆಂಡತಿ ಬಂದು Dan Brown ಅವರ ಹೊಸ ಕಾದಂಬರಿ ''The Lost Symbol'' ಕೈಗೆ ಕೊಟ್ಟು ಹೇಳಿದಳು ''ಇದನ್ನು ಬಸ್ ನಲ್ಲಿ ಓದುತ್ತ ಹೋಗಿ, ಸಮಯದ ಹಿಂದೆ ನೀವು ಓಡುತ್ತಿರಿ'' ಎಂದು. ಉಪಾಯವೇನೋ ಅಪಾಯವಿಲ್ಲದಂತೆ ತೋರಿತು. ಆದರೆ ಬಸ್ ಹತ್ತಿದಾಗ ಹೊಳೆಯುವ ಮೊದಲ ಕೆಲಸ ''ನಿದ್ದೆ'' ಮಾಡುವುದು. ನಾನು ಬೆಂಗಳೂರಿನ ಬಸ್ ಹತ್ತಿದಾಗ ಇಷ್ಟ ಪಡುವುದು ಅದನ್ನೇ. ಎಷ್ಟೊಂದು ಟ್ರಾಫಿಕ್ , ಸಿಗ್ನಲ್ ಗಳು, ಕನಿಷ್ಟವೆಂದರೂ ಒಂದು ಘಂಟೆ ಪ್ರಯಾಣ ಗ್ಯಾರಂಟೀ. ಆರಾಮವಾಗಿ ನಿದ್ದೆ ಮಾಡಬಹುದಲ್ಲ ಎನ್ನುವ ದೂರಾಲೋಚನೆ. ಹಾಗಾಗಿ ಬೆಂಗಳೂರು ಟ್ರಾಫಿಕ್ ಬಗ್ಗೆ No Comments.
ಹೆಂಡತಿ ಪುಸ್ತಕ ಕೊಟ್ಟಾಗ ''ನಿದ್ರಾ ದೇವಿಯ ತೆಕ್ಕೆಗೆ ಬೀಳುವ ನನಗೆ ಸರಸ್ವತಿಯ ಒಲಿಸಿಕೊಳ್ಳುವ'' ಹೆಚ್ಚುವರಿ ಖಾತೆಯೂ ಬಂದು ಸೇರಿದಂತೆ ಆಯಿತು. ನಮ್ಮ ರಾಜಕಾರಣಿಗಳಾದರೆ  ಬಿಡಿ '' 4-5 ಖಾತೆಗಳನ್ನು ಸಲೀಸಾಗಿ ತೆಗೆದುಕೊಂಡು ಆ ಖಾತೆಗಳಲ್ಲಿ ಯಾವ ಸಣ್ಣ ಕಂಡಿಯನ್ನು ಬಿಡದೆ ಗುಡಿಸಿ ಗುಂಡಾಡಿ ಬಿಡುತ್ತಾರೆ''. ನಾವು ಹುಲು ಮಾನವರು, ಹಾಗಾಗಿ ಮೊದಲ ದಿನ ಕೇವಲ 5 ಪೇಜು ಗಳನ್ನು ಓದಲು ಹರ ಸಾಹಸ ಪಟ್ಟೆ. ಹಾಗೆಂದು ಪುಸ್ತಕ ಓದುವುದು ನನಗೆ ತುಂಬಾ ಇಷ್ಟ. ಆದರೆ ಬಸ್ ನಲ್ಲಿ ಓದುವ ಪ್ರವೃತ್ತಿ ಇರಲಿಲ್ಲ. ಇನ್ನು Dan Brown ಅವರ ಕಾದಂಬರಿಗಳಲ್ಲಿ ಮೊದಲ 50 ಪೇಜುಗಳಲ್ಲಿ ವಿಪರೀತ ವಿಷಯ ತುಂಬಿ ನಮ್ಮ ತಲೆಯನ್ನು  mixer    ನಂತೆ ತಿರುಗಿಸಿಬಿಡುತ್ತಾರೆ. ಹಾಗಾಗಿ ಅಂತೂ ಕಷ್ಟ ಪಟ್ಟು 50 ಪೇಜು ಮುಗಿಸಿದೆ, ನಂತರ 550 ಪೇಜು ಗಳ ಹೇಗೆ ಮುಗಿದವೆಂದೆ ತಿಳಿಯಲಿಲ್ಲ. ಬಸ್ ಗೆ ಹೋಗಲು ಹಾತೊರೆಯುತ್ತಿದ್ದೆ. ಬಸ್ ತಪ್ಪಿದರೂ ಮನದಲ್ಲೇ ಸಂತಸ. ಒಂದೊಂದು ಕ್ಷಣವನ್ನು ಹಾಳು ಮಾಡದೆ ಸಮಯದ ಸದುಪಯೋಗ ಪಡಿಸಿಕೊಂಡು ಆ ಮಹಾನ ಕಾದಂಬರಿ  ಓದಿ ಮುಗಿಸಿದೆ. ಅದಾದ ನಂತರ 2-3 ಕಾದಂಬರಿ  ಬಸ್ ನಲ್ಲಿ ಓದಿದ್ದೇನೆ. ಇದರಿಂದ ನನಗೆ ತಿಳಿದಿದ್ದು ಇಷ್ಟೇ. ಸಮಯ ನಮ್ಮಲ್ಲೂ ಇದೆ, ಆದರೆ ನಾವು ಸುಮ್ಮನೆ ಬ್ಯುಸಿ ಬ್ಯುಸಿ ಎನ್ನುತ್ತೇವೆ. ಮನಸ್ಸು ಮಾಡಿದರೆ ಎಷ್ಟೊಂದು ಕೆಲಸ ಮಾಡಬಹುದು ಎಂದು.

ಹೊಸ ವರ್ಷ ಬರುತ್ತಿದೆ, ಹಳೆಯ ವರ್ಷ ಸವಿ ನೆನಪುಗಳೋ, ಕಹಿ ನೆನಪು ಗಳೋ, ಒಟ್ಟಿನಲ್ಲಿ ಮತ್ತೊಂದು ವರ್ಷ ಎದುರಿಗಿದೆ. ಹೊಸ ಆಲೋಚನೆಗಳು, ಹೊಸ ಸಂಕಲ್ಪಗಳು ಇದ್ದಿದ್ದೆ. ಬೆಳಿಗ್ಗೆ ಬೇಗನೆ ಇನ್ನು ಮೇಲೆ ಏಳಬೇಕು, ಎದ್ದು ಒಂದರ್ಧ ಘಂಟೆ ವ್ಯಾಯಾಮ, ಜಾಗ್ಗಿಂಗ್ ಮಾಡಬೇಕು. ಅಮ್ಮನಿಗೆ ಮನೆ ಕೆಲಸಕ್ಕೆ ನೆರವಾಗಬೇಕು, ಆಫೀಸ್ ನಲ್ಲಿ ಹೆಚ್ಚು ಸಮಯ ಹಾಳು ಮಾಡದೇ ಬೇಗ ಕೆಲಸ ಮುಗಿಸಿ ಮನೆಗೆ ಬಂದು ಮನೆಯವರ ಜೊತೆ ಸಮಯ ಕಳೆಯಬೇಕು. ಎಂಬಂಥ ಸಂಕಲ್ಪಗಳೂ ಸಂಕಲ್ಪಗಳಾಗೆ ಉಳಿದಿರುತ್ತವೆ ಎಂಬುದು ನನಗೂ ಗೊತ್ತು, ನಿಮಗೂ ಗೊತ್ತು.

                          ಕೆಲವೊಮ್ಮೆ ಎಂಥಹ ಸಂಕಲ್ಪ ಮಾಡಿರುತ್ತೇವೆ ಎಂದರೆ''ಹೊಸ ವರ್ಷದಲ್ಲಿ ಪ್ರತೀ ವಾರ ದೇವಸ್ಥಾನಕ್ಕೆ ತಪ್ಪದೆ ಹೋಗುತ್ತೇನೆ, ಪೂಜೆ ಹವನ, ಮಾಡಿಸುತ್ತೇನೆ'' ಎಂಬ ಸಂಕಲ್ಪಗಳು. ಹೊಸ ವರ್ಷದಲ್ಲಾದರೂ ಇಂಥಹ ನಂಬಿಕೆಗಳನ್ನು ಬಿಡೋಣಾ.

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಪ್ರೇಮಗಳ
ಗುರುತಿಸದಾದೆನು ನಮ್ಮೋಳಗೆ

ನಮ್ಮ ಮನದಲ್ಲೇ ಇರುವ ದೇವರ ಆರಾಧನೆ ಬಿಟ್ಟು ಪೂಜೆ, ಪುನಸ್ಕಾರ, ಹವನ, ಚಂಡಿ ಯಾಗ ಎಂಬ ಮಾತುಗಳು ಕೇಳಲು ಚೆಂದ. ಆದರೆ ನಮ್ಮ ಅನೇಕ ಕುಟುಂಬಗಳು ಇಂಥ ಮೂಡ ನಂಬಿಕೆಗಳಿಂದ ಬೀದಿಗೆ ಬಂದಿವೆ. ತಿನ್ನಲು  ಅನ್ನವಿಲ್ಲದಿದ್ದರೂ ಹೊನ್ನಿನ ಅಂಬಾರಿ ಮಾಡಿಸುವ ಹರಕೆಗಳನ್ನು ಯಾವ ದೇವರೂ ಇಷ್ಟ ಪಡುವುದಿಲ್ಲ. ಪರಸ್ಪರ ರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮಮತೆ ಸದಾ ತುಂಬಿದ್ದರೆ ಅದೇ ಗೋಕುಲ.

ಹೊಸ ವರ್ಷದ ಹೊಸ್ತಿಲಲ್ಲಿ ಸಂಕುಚಿತ ಮನೋಭಾವನೆ ಬಿಟ್ಟು ವಿಶಾಲ ಮನಸ್ಕರಾಗಿ ಹೆತ್ತವರನ್ನು, ಹೊತ್ತಿರುವ ಭೂಮಿಯನ್ನು ಕಾಪಾಡುವ ಸಂಕಲ್ಪ ಮಾಡೋಣ.

ಹೊಸ ವರ್ಷ ಸರ್ವರಿಗೂ ಒಳಿತನ್ನು ಮಾಡಲಿ

ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 



ನಿಮ್ಮವ ಗುರು




Wednesday, December 22, 2010

ಹೃದಯದ ಪಿಸುಮಾತು ...

ಬದುಕಿನಲ್ಲಿ ಎಲ್ಲ ಕಡೆಯೂ ಸಂತಸ ಒದ್ದು ಕೊಂಡು ಬಿದ್ದಿರುವುದಿಲ್ಲ. ಅದೊಂದು ಹೂವಿನ ಮುಳ್ಳಿನ ಹಾಸಿಗೆ. ಮುಳ್ಳನ್ನು ಮೆಟ್ಟಿ ನೋವು ಸಿಕ್ಕಂತೆ  ಹೂವನ್ನು ಮುಟ್ಟಿ ನಲಿವು. ಎಂಥಹ ಸಮಯ ಬಂದರೂ ನಾವು ನಮ್ಮ ಹೆತ್ತವರ ಪ್ರೀತಿಯ ಮರೆಯಬಾರದು. ಕಷ್ಟಕಾಲದಲ್ಲಿ ಜೊತೆಗೆ ಬರುವ ಆತ್ಮೀಯ ಸ್ನೇಹಿತನ ಮಾತುಗಳು ಎಂದಿಗೂ ಪೂರಕ ಮತ್ತು ಪ್ರೇರಕ. ಕೆಟ್ಟ ನೆನಪುಗಳು ಬಾಳಿನ ಅರ್ಧ  ಸುಖವನ್ನೇ ತಿಂದು ಹಾಕುತ್ತವೆ. ನಾಳಿನ ಸುಂದರ ಬದುಕಿಗೆ ಕಾಯಬೇಕೆ ಹೊರತು ನಿನ್ನೆಯ ಕಹಿ ನೆನಪುಗಳಿಗೆ ಮರುಗುವುದಲ್ಲ. ಸಂಸಾರದಲ್ಲಿ ಸಮರಸ, ಬದುಕಿನಲ್ಲಿ ಸಂತಸ ಎರಡೂ ಮುಖ್ಯ. ಕೆಲವೊಮ್ಮೆ ನಮಗೆ ಇನ್ನೊಬ್ಬರ ಸಾಧನೆ ಸಹಿಸಲು ಅಸಾದ್ಯವಾಗುತ್ತದೆ. ಅವರ ಬಗೆಗೆ ಇಲ್ಲ ಸಲ್ಲದ ಆರೋಪ ಮಾಡಿ ಆದಷ್ಟು ಅವರನ್ನು ತುಳಿಯಲು ಪ್ರಯತ್ನ ಪಡುತ್ತೇವೆ. ನಮಗೆ ಇನ್ನೊಬ್ಬರು ಇಷ್ಟವಾಗದಿದ್ದರೆ ಅವರಿಂದ ದೂರವಿರಬೇಕೆ ಹೊರತು ಅವರನ್ನು, ಅವರ ಹೆಸರನ್ನು ಹಾಳು ಮಾಡುವುದಲ್ಲ. ಇನ್ನೊಬ್ಬರ ಮೇಲಿನ ಧ್ವೇಷ ನಮ್ಮನ್ನೇ ಕೊಲ್ಲುತ್ತದೆಯಷ್ಟೇ. ಈ ಮಣ್ಣಿನ ಋಣ ಎಲ್ಲಕ್ಕಿಂತ, ಎಲ್ಲರಿಗಿಂತ ದೊಡ್ಡದು. ಅದರ ಋಣ ತೀರಿಸುವ ಜವಾಬ್ದಾರಿ ಪ್ರತೀ ಒಬ್ಬರ ಕರ್ತವ್ಯ. ಜನನಿ ಮತ್ತು ಜನ್ಮಭೂಮಿಯ  ಮೇಲಿನ ಪ್ರೀತಿ ಇಮ್ಮಡಿಯಾಗುತ್ತ  ಬದುಕು ಹಸನ್ಮುಖಿ ಯಾಗಬೇಕು ಎಂಬುದೇ ಕವನ ಆಶಯ.   


ಮರೆಯುವ ಕ್ಷಣಗಳ ಬರೆದು ಇಡು
ಮನಸಿನ ಪುಟಗಳ ತೆರೆದು ಬಿಡು 

ಕಾಡುವ ನೆನಪ ಕೆದಕದಿರು
ಸಿಹಿನೆನಪಿನ ಜೊತೆಗೆ ಬಾಳುತಿರು

ಇನಿಯನ ಮಾತಿಗೆ ಮುನಿಯದಿರು
ಸಂಗಾತಿಯ ಕಣ್ಣಲಿ ಬದುಕನಿಡು

ಸ್ನೇಹಿತನ ಹಿತನುಡಿ ಸತತ ಇಡು
ಕುಹಕವ ಬಗೆವರ ದೂರವಿಡು

ಹೆತ್ತವರ ಪ್ರೀತಿಯ ಅಳಿಸದಿರು
ಹೊತ್ತಿರುವ ಜನನಿಯ ಮರೆಯದಿರು

ಚುಚ್ಚುತ ಮನಸನು ಕೊಲ್ಲದಿರು
ಇಷ್ಟವಾಗದಿರೆ ದೂರವಿರು

ನೊಂದವರ ನೋವಿಗೆ ಅಭಯವಿಡು
ಕಂಡರಿಯದ ಮಾತಿಗೆ ಮರುಗದಿರು

ಜನ್ಮಭೂಮಿಯನು ಬೆಳಗುತಿರು
ಋಣ ತೀರಿಸದೆ ತೊಲಗದಿರು

ಪಿಸುಮಾತಿದು ಹೃದಯದ ನೆನಪಲಿಡು
ಬದುಕಿನ ಪುಟಗಳ ಮುಚ್ಚದಿರು


Wednesday, December 15, 2010

ಧ್ವನಿಯೊಂದು ಕರೆಯುತಿದೆ...

ಹೆಣ್ಣಿಗೆ ತವರುಮನೆ ಎಂದರೆ ಸ್ವರ್ಗವಿದ್ದಂತೆ. ಅಲ್ಲಿ ಬರುವ ಎಲ್ಲ ಕಷ್ಟವನ್ನು ಅವಳು ಕಷ್ಟ ಅಂದುಕೊಳ್ಳುವುದೇ ಇಲ್ಲ. ಅದರಲ್ಲೂ ಮದುವೆಯಾಗಿ ವರುಷವಾದರೂ ತವರು ಮನೆಗೆ ಹೋಗದೆ ಗಂಡನ ಮನೆಯಲ್ಲಿ ಅತ್ತೆ-ಮಾವರ ಸೇವೆ ಮಾಡುತ್ತಾ, ಪತಿಯ ಸೇವೆ ಮಾಡುತ್ತಾ ಇದ್ದ ಹೆಣ್ಣಿಗೆ ಒಮ್ಮೆಲೇ ಊರಿಗೆ ಹಬ್ಬಕ್ಕೆ ಬಾ, ಎಂಬ ಅಣ್ಣನ ಕರೆಯೋಲೆ ಬಂದರಂತೂ ಸ್ವರ್ಗಕ್ಕೆ ಮೂರೇ ಗೇಣು. ಆ ಸಂದರ್ಭದಲ್ಲಿ ಅವಳಿಗೆ ಊಟ ರುಚಿಸದು, ಇನಿಯನ ಸನಿಹ ಬೇಡ, ಅತ್ತೆ ಮಾವರ ನೋಟವೂ ಬೇಡ. ಒಟ್ಟಿನಲ್ಲಿ ಅವಳಿಗೆ ತನ್ನ ತವರುಮನೆಯ ಚಿತ್ರಣವೇ ಎದುರಿಗಿರುತ್ತದೆ. ಅಲ್ಲಿ ತಾ ಆಡಿದ್ದು, ನಲಿದಿದ್ದು, ಅಪ್ಪ-ಅಮ್ಮರ ಮಡಿಲಲ್ಲಿ ಮುದ್ದು ಕಂದನಾಗಿ ಬೆಳೆದದ್ದು, ಗೆಳತಿಯರ ನಗು ಎಲ್ಲ ಕಣ್ಮುಂದೆ ಬಂದು ಯಾವಾಗ ತಾನು ತವರು ಸೇರುತ್ತೇನೆಯೋ ಎಂಬ ತವಕ ಅವಳಿಗೆ. ಅಂಥಹ ಹೆಣ್ಣಿನ ಮನದ ಭಾವನೆಗಳ ಅನಾವರಣ ಈ ಕವನದಲ್ಲಿದೆ.



ದೂರದ ಊರಿಂದ ಧ್ವನಿಯೊಂದು ಬರುತಲಿದೆ
ತಂಗಿ, ನೀ ಬಾ ಬಾರೆ, ಎಂದೆನ್ನ ಕರೆಯುತಿದೆ
ಕಳೆದು ಹೋಯಿತು ವರುಷ, ತವರೂರ ಆ ಹರುಷ
ಮರೆಯಲಾರೆನು ನಾನು, ಅನುಗಾಲ ನಿಮಿಷ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಅಣ್ಣನ ಒಡನಾಟ, ತಮ್ಮನೊಂದಿಗೆ  ಕಾಟ
ಅಕ್ಕನ ಜೊತೆಯಲಿ, ಕಳೆದ ಆ ಕ್ಷಣದೂಟ 
ತಂಗಿಯ ತೆಕ್ಕೆಯಲಿ, ಸರಸ ವಿರಸದ ಆಟ
ಗೆಳತಿಯರ ಒಡನಾಟ, ಗೆಳೆಯರ ಸವಿಮಾತ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಹೆತ್ತ ತಾಯಿಯ ನೋಟ, ಪಿತನ ಹಿತನುಡಿ ಪಾಠ 
ಸುತ್ತ ನೂರೆಂಟು ತರುಲತೆಗಳ ಮುದ್ದಾಟ
ಕೆಲಸದ ರಂಗಿಯ, ಕಿಲ ಕಿಲ ನಗುವಾಟ
ಹೊಲದಲ್ಲಿ ಬೆಳೆದ, ಭತ್ತದ ಸವಿನೋಟ
ಹಸಿರನ್ನೇ ಹೊತ್ತ, ಉಸಿರು ಅಡಿಕೆಯ ತೋಟ
ದೂರದ ಊರಿಂದ ಧ್ವನಿಯೊಂದು ಬರುತಲಿದೆ

ಬೇಡವಾಗಿದೆ ಇಂದು, ಇನಿಯನ ಸರಸದ ಮಾತು
ಕಾಡತೊಡಗಿದೆ ನನಗೆ, ಅತ್ತೆ ಮಾವರ ಕಾಟ
ಮಡಿಲ ಸೇರುವ ತವಕ, ತವರ ಸೇರುವ ತನಕ
ಅಪ್ಪ-ಅಮ್ಮರ ಮಡಿಲ, ಕಂದನಾಗುವ ತನಕ
ದೂರದ ಊರಿಂದ, ಧ್ವನಿಯೊಂದು ಬರುತಲಿದೆ


Wednesday, December 8, 2010

ನೆನಪಾಯ್ತೆ ಇಂದು ...

ಸ್ವೀಡನ್ನಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಹಿಮಮಳೆ ಆಗುತ್ತಿದೆ. ಎಲ್ಲಿ ನೋಡಿದರೂ ಹಿಮದ ರಾಶಿಯೇ ಬಿದ್ದಿದೆ. ಈ ಸಂದರ್ಭದಲ್ಲಿ ಹಿಮಗಳ ನಡುವೆ, ಸಂಗಾತಿಯೊಂದಿಗೆ ಮಲೆನಾಡಿನಲ್ಲಿ ಕಳೆದ ಕ್ಷಣಗಳ ನೆನಪು ಈ ಕವನದ ಹೂರಣ. ಇಲ್ಲಿನ ಹಿಮಗಳ ನಡುವೆ ಅಲ್ಲಿನ ಮಲೆನಾಡಿನ, ಸೌಂದರ್ಯದ, ತರು ಲತೆಗಳ ಮಧುಬನಗಳಲ್ಲಿ ಮನ ತೇಲಾಡಿದೆ. ಇರುಳಿನ ಸಂಜೆಯ ಹೊತ್ತಿನಲ್ಲಿ, ದೇವರಿಗೆ ಅಂಗನೆಯರು ದೀಪ ಬೆಳಗುವ ಹೊತ್ತಿನಲ್ಲಿ, ಚಂದ್ರಮನ ಆಗಮನದ ಹೊತ್ತಿನಲ್ಲಿ, ಮಧುರಗೀತೆಯ ನೆನಪು ಸುಳಿದಾಡಿದೆ. ಮೊನ್ನೆ ಡಿಸೆಂಬರ್ 6 ಕ್ಕೆ ಮದುವೆಯಾಗಿ 3 ವರ್ಷ ತುಂಬಿತು. ನನ್ನೊಂದಿಗೆ ಹೆಜ್ಜೆಯಲ್ಲಿ ಹೆಜ್ಜೆ ಹಾಕಿ, ನೋವು ನಲಿವುಗಳಿಗೆ ಜೊತೆಯಾಗಿ ಉಸಿರಾದ ಬಾಳ ಸಂಗಾತಿ ಗೀತಾ ಳಿಗೆ ಬರೆದ ಕವನವಿದು.



ಮೆತ್ತನೆಯ ಮಲ್ಲಿಗೆಯೇ, ,ಮುತ್ತೊಂದ ಕೊಡುವೆ
ಮಾತಾಡು ಮಾತಾಡು, ಮಕರಂದ ಹೀರುವೆ
ಅಧರದಲಿ ಮಧುರಗೀತೆ, ಬರಲಿ ಎಂದೆಂದೂ 
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಮಲೆನಾಡ ಸಂಪಿಗೆ, ಮಧುಬನದ ಅಂಚಿಗೆ
ಮುಚ್ಚು ಮರೆ ಇಲ್ಲದೆ, ಮೊಂಬೆಳಕಿನ ಹೊತ್ತಿಗೆ 
ಮದನಾರಿ, ಶುಭಕೋರಿ, ಮುದ್ದಾಡುವೆ ಇಂದು
     ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 

ಬಾನಿನಲಿ ಹಾರ್ಯಾವ್ , ಹಕ್ಕಿಗಳ ದಂಡು
ಅಂಗನೆಯರು ಬೆಳಗಿಹರು, ದೀಪಗಳ ಬಂದು
ಇರುಳಾಯ್ತು ಚಂದ್ರಮನು, ಬರುತಾನೆ ಇಂದು
ಹಿಮಮಳೆಯ ಹಿಮಗಳಲಿ, ನೆನಪಾಯ್ತೆ ಇಂದು 


Tuesday, November 23, 2010

ಬರೆಯಲೆಂದು ಹೊರಟೆ ಬ್ಲಾಗ ವಿಷಯಕೆಲ್ಲ ಬೀಗ...



ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ರಾಜಕೀಯವೆಂಬ ವಿಷಯ, ಸದಾ ಜನರ ಬಾಯಲಿಹುದು
ಯಡ್ಡಿ ಅಣ್ಣ, ಕುಮಾರಣ್ಣನ ಬಗ್ಗೆ ಬರೆದೆನು
ಸಾಲು ಸಾಲು ಬರೆದೆ, ಪೇಜು ಪೇಜು ಕೊರೆದೆ
ಪಕ್ಕದಲ್ಲೇ ಇದ್ದ ಒಬ್ಬ, ಕೇಳಿಬಿಟ್ಟ ನನ್ನನು 
ಕೆಲಸವಿಲ್ಲವೇನು ನಿನಗೆ, ಬೇಕೇ ಇಂಥ ವಿಷಯ
ಪಾಳುಬಿದ್ದ ಗುಡಿಯೇ ಲೇಸು, ಹೊಲಸು ರಾಜಕೀಯ


ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಚಲನಚಿತ್ರವೆಂಬ ಮಾಯೆ, ಸದಾ ಗಾಸಿಪ್ , No ಚುಪ್ ಚುಪ್
ಬರೆಯ ಹೊರಟೆ, ತುಂಡು ಲಂಗ, ಬಿಪಾಶಾಳ ಬಗೆಗೆ
ನಡುವೆ ತಡೆದ ಮಿತ್ರನೊಬ್ಬ, ಬಿಪಾಶಾಳ ''ಪಾಶ'' ಬೇಡ,
ಬರೆಯಬೇಡ ಇಂಥ ವಿಷಯ, ಎಂದು ಹೋದ ಮಹಾಶಯ

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಪ್ರೀತಿಯೆಂಬ ಮೋಹದಲ್ಲಿ, ಸಿಲುಕಿ ಇರದೇ ಉಳಿದೋರ್ಯಾರು
ಇಂಥ ವಿಷಯಕಿಂತ ಬೇರೆ ವಿಷಯ ಎಲ್ಲಿದೆ
ಗೀಚಿ ಬಿಟ್ಟೆ ಪ್ರೇಮ ಕವನ ಗೆಳತಿ ನಿನ್ನ ಮೋಹ ಕುರಿತು
ಓದಿ ಬಿಟ್ಟ ಗೆಳೆಯ ನುಡಿದ, ನಿನ್ನ ತಲೆಯು ಎಲ್ಲಿದೆ?
ಪ್ರೇಮ-ಗೀಮ ಬರೆಯುತಿರುವೆ, ಕೆಲಸವಿಲ್ಲವೇನು ನಿನಗೆ
ಇದ್ದ ಸಮಯವನ್ನು ಯಾಕೆ ಹಾಳು ಮಾಡುವೆ?

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಬದುಕ ಸೊಗಸ ಬಿಟ್ಟು ಹೊರಟ, ತ್ಯಾಗಜೀವಿ ಬುದ್ದ ದೇವ 
ಅವನ ಬಗ್ಗೆ ಯಾರಿಗಿಲ್ಲ ಪ್ರೇಮ-ಅಕ್ಕರೆ
ಬೆಳಗುತಿರುವ ಜಗದಿ ಬೆಳಕ, ಬರೆದೆ ಬಿಟ್ಟೆ ಎಂಥ ಪುಳಕ
ಕೊಂಕು ನುಡಿಯ ನುಡಿದು ಬಿಟ್ಟ ಮಿತ್ರ ಮೆಲ್ಲಗೆ
''ಮಡದಿ ಜೊತೆಗೆ ಜಗಳವೇನು? ಕೋಪವೇನು? ತಾಪವೇನು?
ಸರಸ-ವಿರಸ ಬಾಳಿನೆರಡು ಚಕ್ರ ಅಲ್ಲವೇ?
ಸುಮ್ಮನೇಕೆ ಬರೆವೆ ನೀನು? ಬದುಕು ನಿನಗೆ ಭಾರವೇನು?
ಬರೆದರೊಮ್ಮೆ ಇಂಥ ವಿಷಯ, 
ಹೊಡೆದು ಬಿಡುವೆನೆಂದನು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಥತ್ ಎಂದು ತಲೆಯ ಕೆರೆದು, ಬರೆದೆ ನನ್ನ ಸಂಶೋಧನೆಯ ಬಗೆಗೆ
ಹಾಕಲೆಂದು ಹೋದೆ ನಾನು, ಇಂದು ಬ್ಲಾಗಿಗೆ
ಅದನು ಓದಿ ನುಡಿದ ಗೆಳತಿ
''ಅಂದು ತೀರಿ ಹೋದ ಗಾಂಧಿ, ಇಂದು ಹುಟ್ಟಿ ಬಂದನು
ಸದಾ ನಿನ್ನ ಸಂಶೋಧನೆ , ಬಿಟ್ಟು ಹೊರಗೆ ಬಂದು ನೋಡು,
ಜಗದ ತುಂಬಾ ಹಸಿರು ತುಂಬಿ,
ಮನವ ಸೆಳೆಯುತಿರುವುದು''

ಬರೆಯಲೆಂದು ಹೊರಟೆ ಬ್ಲಾಗ 
ವಿಷಯಕೆಲ್ಲ ಬೀಗ
ಅತ್ತ ಇತ್ತ ನೋಡಿ ಬಂದೆ
ಮನವು ಖಾಲಿ ಜಾಗ

ಹುಡುಕುತಿರುವೆ ವಿಷಯ ನಾನು
ಹೊಳೆಯಲಿಲ್ಲ ಏನೂ
ಬರೆದರೊಂದು ಕೊಂಕು ಜನರ ಬಾಯಲಿರುವುದು 
ಬಿಟ್ಟು ಅವರ ಬದುಕಲಾರೆ, ಅವರ ಬಿಟ್ಟು ಬಾಳಲಾರೆ 
ಧೈರ್ಯ ಮಾಡಿ ಕವನ ಒಂದು ಹಾಕುತಿರುವೆನು

    
ಸ್ನೇಹಿತರೆ, ಬಹಳ ದಿನಗಳಿಂದ ಕೆಮ್ಮು, ಜ್ವರ, ಜೊತೆಗೆ ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಬ್ಲಾಗ್ ಕಡೆಗೆ ಬರಲಾಗಲಿಲ್ಲ. ಹಾಗೆಯೇ ನಿಮ್ಮೆಲ್ಲರ ಬ್ಲಾಗ್ ಓದಲು ಆಗಲಿಲ್ಲ, ಅದಕ್ಕೆ ಕ್ಷಮೆ ಇರಲಿ
ಮತ್ತೆ ಎಂದಿನಂತೆ ಬ್ಲಾಗ್ ಓದುವ ಓದುಗನಾಗುತ್ತೇನೆ.
ಪ್ರೀತಿ ಇರಲಿ
ನಿಮ್ಮವ
ಗುರು 

Sunday, November 7, 2010

ಸಿಹಿಸುದ್ದಿಯೊಂದ ಕೊಡುವೆ ನಿಮಗೆ...

ಆತ್ಮೀಯ ಸ್ನೇಹಿತರೆ,
ಕನ್ನಡದ ಪ್ರೇಮಕವಿ ಕೆ ಎಸ ನರಸಿಂಹ ಸ್ವಾಮಿಯವರ ಹೆಸರಿನಲ್ಲಿ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನನ್ನೆರಡು ಕವನಗಳಿಗೆ ''ರಾಜ್ಯಮಟ್ಟದ ಕೆ ಎಸ ಏನ್ ನೆನಪಿನ ಪ್ರೇಮಕವಿ ಪುರಸ್ಕಾರ'' ಪ್ರಶಸ್ತಿ ಲಭಿಸಿದೆ ಎನ್ನಲು ಸಂತಸವೆನಿಸುತ್ತದೆ.
ಸ್ಪರ್ಧೆ ನಡೆಸಿದ ನಮ್ಮೆಲ್ಲರ ಪ್ರೀತಿಯ ಸಾಧಕ ಭೇರ್ಯ  ರಾಮಕುಮಾರ್ ಅವರಿಗೆ ಹಾಗೂ ಅವರ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗಕ್ಕೆ ನಾನು ಅಭಾರಿ.
ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲ ಚಿರಋಣಿ.
ಮತ್ತೆ ಮುಂದಿನ ವಾರ ಹೊಸ ಲೇಖನದೊಂದಿಗೆ ಬರುತ್ತೇನೆ
ಗುರು 

Sunday, October 31, 2010

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಆತ್ಮೀಯ ಕನ್ನಡಿಗರೇ,


ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು


ಕನ್ನಡ ಉಸಿರಾಗಲಿ, ಕನ್ನಡ ಬದುಕಾಗಲಿ, ಕನ್ನಡ ಜೀವನವಾಗಲಿ 


ಸಿರಿಗನ್ನಡಂ ಗೆಲ್ಗೆ 

Thursday, October 14, 2010

ಬಚ್ಚಿಡದೆ ಬಿಚ್ಚಿಟ್ಟಿಹೆ..

ಪ್ರೀತಿ ಎಲ್ಲಿ ಯಾವಾಗ ಹುಟ್ಟುತ್ತದೋ ಬಲ್ಲವರು ಯಾರು. ಹರೆಯದ ಮನಸುಗಳ ಮುಗ್ಧ ಪ್ರೀತಿ, ಬದುಕಿನ ಸುಂದರ ಕ್ಷಣಗಳಲ್ಲೊಂದು. ಇಲ್ಲಿ ಪ್ರೇಮಿಕೆಯ ಪ್ರೇಮದಲ್ಲಿ ಶರಣಾದ ಪ್ರೇಮಿ, ತನ್ನ ಪ್ರಿಯತಮೆಯ ಸೌಂದರ್ಯದ ಅನಾವರಣ ಮಾಡುತ್ತಿದ್ದಾನೆ. ಆತ ಅವಳನ್ನು ಹೊಗಳುತ್ತಿಲ್ಲ ಬದಲಿಗೆ ಅವಳ ಸ್ನಿಗ್ಧ ಸೌಂದರ್ಯಕೆ ಸಾಕ್ಷಿಯಾಗುತ್ತಿದ್ದಾನೆ. ಆತನಿಗೆ ಅವಳ ಸೌಜನ್ಯ, ಸಲ್ಲಾಪ, ಸವಿಗನಸು ಕಾಣುವಂತೆ ಮಾಡಿದೆ. ಪ್ರೇಮದ ಮತ್ತಿನಲ್ಲಿ ಬಾಯಾರಿಕೆ ಆಗಿದೆ. ಇದಕ್ಕೆ ನೀರು ಪರಿಹಾರವಲ್ಲ. ಪ್ರೇಮಿಕೆಯ ಅಧರದ ಪಾನಕ್ಕೆ ಆತ ಕಾದಿದ್ದಾನೆ. ಅದೊಂದು ನಿಷ್ಕಲ್ಮಶ: ಪ್ರೀತಿ. ಕಾಮಕ್ಕೆ ಅಲ್ಲಿ ಜಾಗವೇ ಇಲ್ಲ. ತನ್ನ ಬದುಕಿನ ಎಲ್ಲ ಸತ್ಯಗಳನ್ನು, ರಹಸ್ಯಗಳನ್ನು ಬಚ್ಚಿಡದೆ ಆತ ಬಿಚ್ಚಿಟ್ಟಿದ್ದಾನೆ. ದೂರದಲ್ಲೆಲ್ಲೋ ಮಾಮರದಲಿ ಆತನಿಗೆ ಕೋಗಿಲೆಗಳ ಸದ್ದು ಕೇಳುತ್ತಿದೆ. ಹೌದು, ಸಂಗಾತಿಯ ಸಂಪ್ರೀತಿಗೆ ವಸಂತ ಕಾಲ ಸಜ್ಜಾಗಿದೆ. ಆ ಮೋಹಕ ಘಳಿಗೆಗೆ ಆಕೆಯ ಸೆಳೆಯಲು ಮದನನ ಮೋಹಕ ಬಾಣವನ್ನೇ ಅವಳಿಗೆ ಎಸೆದಿದ್ದಾನೆ. ಗೋಪಿಕೆಯರ ಆರಾದ್ಯ ದೈವ ಗೋಪಿನಂದನ ಕೊಳಲ ನಾದಕ್ಕೆ ಮೋಹಕ ಮುತ್ತಿನ ನೆನಪು ಆತನಿಗೆ ಕಾಡಿದೆ. ಇದು ಕೇವಲ ಪ್ರೇಮವೇ? ಎರಡು ಮನಸುಗಳ, ಎರಡು ದೇಹಗಳ,ಅಮರ ಪ್ರೇಮ....


ನವಯವ್ವನ, ನಳನಳಿಸುವ, ನಲಿದಾಟದ ತರುಣ
ನಾಜೂಕಿನ, ನವೋ ನವದ, ನಿಗಿನಿಗಿಸುವ ತರುಣಿ
ನುಡಿದಂತೆ ನಾಲಿಗೆ, ನಡೆದಂತೆ ನಾಚಿಕೆ
ನಯನಗಳು ನಿಂತಲ್ಲಿ ನಿಲ್ಲದಿರೆ, ನೋಟಕೆ

ಸಂಗಾತಿಯೇ, ಸಂಪ್ರೀತಿಯೇ, ಸೌಮ್ಯೋಕ್ತಿಯ ಸೌಧ 
ಸೌಜನ್ಯದಿ, ಸಲಹುತಿರೆ, ಸುಶ್ರಾವ್ಯದ ನಾದ
ಸುದಿನವಿದು, ಸಜನಿ ನಿನಗೆ, ಸುಕುಮಾರನ ಸುಂದರಿ
ಸಲ್ಲಾಪದಿ, ಸವಿಗನಸಿದೆ, ಸೌಂದರ್ಯವ ಸವರಿ

ಬಳಲಿಕೆಯು, ಬಾಯಾರಿದೆ, ಬಳಿಗೆ ಬಾರೆ ಮಯೂರಿ
ಬೆದರದಿರು, ಬಳಿಯಲಿರು, ಬಿಡದೆ ನನ್ನ ನಾರಿ
ಬಚ್ಚಿಡದೆ ಬಿಚ್ಚಿಟ್ಟಿಹೆ, ಬದುಕಿನ ಬಟ್ಟಲ ಒಳಗೆ
ಬಂಗಾರಿಯೇ, ಬಿನ್ನಾಣವೇ, ಬದುಕಿನ ಘಳಿಗೆ 

ಮಾಮರದಲಿ ಸದ್ದಾಗಿದೆ, ಮರೆಮಾಚಿದೆ ಮೌನ
ಮಾಟಗಾರ, ಮಾತಿನಲ್ಲೇ, ಮಾರನ ಮೈ ಬಾಣ
ಮುದ್ದಾಡುವೆ ಮೆಲ್ಲನೆ, ಮೆಲುನಗೆಯಲಿ ಮೆತ್ತಗೆ
ಮೋಹನ ಮುರಳಿಯ ನಾದ, ಮೋಹಕತೆ ಮುತ್ತಿಗೆ

Thursday, September 23, 2010

ಹೂವುಗಳ್ ಅಂದಾವ .

 ಹೂವಿನ ಅಂದ ಆಕರ್ಷಿಸದ ಮನಗಳಿವೆಯೇ? ಬದುಕು ಹೂವಿನಂತೆ ಇದ್ದರೆ ಚೆಂದ ಎನ್ನುತ್ತಿರಾ? ಆದರೆ ಆ ಅರಳುವ ಮುಂಚಿನ ವೇದನೆ ಹೂವಿಗೆ ಮಾತ್ರ ಮೀಸಲು. ಸುಂದರ ಗುಲಾಬಿ, ಮುಳ್ಳಿನ ಜೊತೆಗೆ ಹುಟ್ಟಿ ನೋವು ನಲಿವುಗಳ ಚಿತ್ರಣಕ್ಕೆ ಸಾಕ್ಷಿಯಾಗುವಂತೆ ಬದುಕು ಕೂಡಾ.

                                    
 ಮುಗಿಲಿನ ಮುಟ್ಟುವ ತವಕವು ಯಾಕೆ? 
ನಿನ್ನಯ ಮೊಗವನು ಕದ್ದಾರು ಜೋಕೆ....

ಏನಿದು ನಿನ್ನಯ ರೂಪ, ಕರಗಿತು ಮನಸಿನ ಕೋಪ....

ಇನಿಯನ ಜೊತೆಯಲಿ ನಿನ್ನಯ ಆಟವೇ? ಚೆಲುವೆ ನೀ ಎಲ್ಲಿರುವೆ.....

ಬಣ್ಣದ ಚಿಟ್ಟೆಗೆ ಮಕರಂದದ ಚಿಂತೆ... ಹೂವಿಗೆ ತನ್ನೊಡಲ ಒಳಗಿರುವ ರಸವ ಉಣಬಡಿಸುವ ಆಸೆ...
ಈ ಸುಂದರ ತರುಲತೆಗಳ ಬ್ರಂದಾವನ ಲೀಲೆ....

ನಿನ್ನ ಪ್ರೇಮದಾಳದಲ್ಲಿ, ಮುಳುಗಿ ಹೋದ ಮೀನು ನಾನು....

ತನ್ನೊಳಗೆ ಜಗತ್ತನ್ನೇ ಸೆಳೆಯುವ ಅಪ್ರತಿಮ ಚೆಲುವೆ ಈಕೆ....
ಬಿರಿದ ಮಲ್ಲಿಗೆ ಹೂವ ನೆನಪು ಬಾರದೆ....

ನಿನ್ನ ಮೋಹಕತೆಗೆ, ಸೌಂದರ್ಯಕ್ಕೆ ಎಣೆಯುಂಟೆ  ...
ಚೆಲುವೆ ನೀನು ನಕ್ಕರೆ, ಬದುಕು ಬಾಳ ಸಕ್ಕರೆ...

ಮಕರಂದವ ಕುಡಿದು ಮರೆಯದಿರು ಎನ್ನ, ಬಾ ಇಲ್ಲಿ ಮತ್ತೊಮ್ಮೆ, ಕೊಡುವೆ ಮಕರಂದವನ...


ನಿಮ್ಮವ

ಗುರು ಬಬ್ಬಿಗದ್ದೆ

Monday, September 13, 2010

ಉರಿಸದಿರಲೆಂದೂ ನಿನ್ನ ಸಹನೆ...


ನೋವು ನಲಿವು ಬದುಕಿನ ಬಂಡಿಯ ಎರಡು ಚಕ್ರಗಳಿದ್ದಂತೆ. ನಲಿವೆಗೆ ನೂರೆಂಟು ಮಿತ್ರರು, ನೋವಿಗೆ ನೀನೊಬ್ಬನೇ ಮಿತ್ರ ಎಂಬ ಮಾತು ಅಕ್ಷರಶ: ಸತ್ಯ. ನೋವಿನಲ್ಲಿ ಜೊತೆಗೆ ಬರುವವರು ಮಾತ್ರ ನಿಜವಾದ ಮಿತ್ರರು. ಮನಸು ನೋವಿನಿಂದ ಆವ್ರತವಾದಾಗ, ಬದುಕು ಪಾತಾಳ ಸೇರಿದ ಅನುಭವ ಆಗುತ್ತದೆ. ಬದುಕಿನ ಬಗೆಗಿನ ಅಸಹನೆ ಎಂದಿಗೂ ನಿನ್ನ ''ಸಹನೆ'' ಯ ಕೆಣಕದಿರಲಿ. ನಿನ್ನ ನೋವುಗಳು ಕಲ್ಲ ಗೋಡೆಗೆ ಮಾತ್ರ ಕೇಳಿಸುತ್ತದೆ, ಅದನ್ನು ಅರಿತವರಿಗೆ  ಮಾತ್ರ ಅದರ ಅಗಾಧತೆ ಅರ್ಥವಾಗುತ್ತದೆ. ನೀನು ಒಲ್ಲೆ ಎಂದರೂ ವಿಶಾಲ ಬದುಕು ನಿನಗಾಗಿ ಕಾದಿದೆ, ಕಾಯುತಿದೆ, ಹೂವಿನಿಂದ ಪೊಕಳೆ ಉದುರಿತು ಎಂಬ ನೋವು ಬೇಡ, ಹೊಸ ಹೂವು ಅದೇ ಜಾಗದಿಂದ ಮೂಡುವುದು ಹಾಗೂ ಮೂಡಬೇಕು, ಅದೇ ಬದುಕು, ಅದೇ ಬಾಳು.

                                                                      ಚಿತ್ರ  ಕ್ರಪೆ: ಗೂಗಲ್ 

ನಿನ್ನ ನೋವುಗಳ ಮನದ ಭಾವಗಳ
ಆಗಸಕೆ ಹಾರಿಬಿಡು ನನ್ನ ಗೆಳತಿ
ಬೀಸೋ ಗಾಳಿಗೆ ಅದರ ವೇಗಕೆ
ಸುಟ್ಟು ಹೋಗಲಿ ಎಲ್ಲ , ಪ್ರೀತಿಯೊಡತಿ

ಸುತ್ತ ಹರಿಯುತಿದೆ ಆಳಕಿಳಿಯುತಿದೆ
ಭೂವ್ಯೋಮ ಪಾತಾಳ, ಎಲ್ಲ ಒಡನೆ
ಹಸಿವಿನ ಕಿಚ್ಚು, ಮೈಯ್ಯೊಳಗೆ ಹುಚ್ಚು
ಉರಿಸದಿರಲೆಂದೂ ನಿನ್ನ ಸಹನೆ
 
ಕಲ್ಲ ಗೋಡೆಯಲಿ, ಮೆಲ್ಲನುಸಿರುತಿರೆ
 ಬಲ್ಲ ಮನಸಿಗದು, ಕಬ್ಬಿಣದ ಕಡಲೆ
ಒಲ್ಲೆನೆಂದರೂ ಜೀವ, ಬಿಡಿಸಲಾಗದ ಭಾವ
ಇಲ್ಲೇ ಇರು ಎನ್ನುತಿದೆ ಮನದ ಪೊಕಳೆ

Monday, September 6, 2010

ಕಿಸ್ ಒಂದು ಮಿಸ್ ಆಯ್ತು,,,,,




ಮನಸೇಕೋ ಕಾಯುತಿದೆ ಬರಲಿಲ್ಲ ಅವಳು
ಮಿಸ್ಸಾಯ್ತು ಬಸ್ಸೆಂದು ಕಾರಣವು ಹಲವು
ಟುಸ್ಸ್ ಆಯ್ತು ಪ್ಲಾನ್ ಎಲ್ಲ ನೀ ಬರದೆ ಹೋದೆ
ಕಿಸ್ ಒಂದು ಮಿಸ್ ಆಯ್ತು, ಬಳಿಗೆ ನೀ ಬರದೆ


ಬಿಸಿಲೇಕೋ ಬಹು ಉರಿಯು, ಫ್ಯಾನಿಲ್ಲ ಇಲ್ಲಿ
ಬಾಯೆಲ್ಲ ಇಂಗೊಯ್ತು, ನೀರಿಲ್ಲದ ನಲ್ಲಿ
ಲಾಲ್ಬಾಗ್ನ ಒಡಲಲ್ಲಿ, ನಾ ಕಾಯ್ತಾ ಇರುವೆ
ಯಾಕ್ ಹಿಂಗೆ ಮಾಡ್ತಿ, ಓ ನನ್ನ ಒಲವೆ


 ಹಲ್ಲಿಲ್ಲದ ಕಡ್ಲೆ, ಆಯ್ತಲ್ಲೇ  ಚೆಲುವೆ
ವಿಲ್ ಬರಿದೆ ಸಾಯೋಕೆ, ಮನಸಿಲ್ವೆ ಹೂವೆ
ಎಲ್ನೋಡು ಅಲ್ಲೆಲ್ಲ, ತುಂಬೈತೆ ಪುಷ್ಪ
ಕಾಯ್ತಾನೆ ಕುಂತಿವ್ನಿ, ಎಲ್ಲೋದ್ಲೋ ''ಪುಷ್ಪ''