Thursday, July 29, 2010

ನಾರ್ವೆ ಎಂಬ ಸೌಂದರ್ಯದ ರಾಶಿಯ ಸುತ್ತ ಒಂದು ಸುತ್ತು ....

ಕೆಲವು ದಿನಗಳಿಂದ ಬ್ಲಾಗ್ ನಲ್ಲಿ ಏನು ಬರೆಯಬೇಕೆಂದು ಯೋಚಿಸುತ್ತಿದ್ದೆ. ಒಂದೆರಡು ಕವನ ಹಾಕಲೇ? ಇಲ್ಲ ಕಳೆದ ವಾರ ನಾರ್ವೆ ಗೆ ಹೋಗಿ ಬಂದ ಬಗ್ಗೆ ಬರೆಯಲೇ ಎಂದು. ನಾರ್ವೆ ಗೆ ಹೋಗಿ ಬಂದ ಮೇಲೆ ಬಹಳಷ್ಟು ವಿಷಯಗಳು ತಲೆಯಲ್ಲಿ ಮನೆ ಮಾಡಿ ಹುಳದಂತೆ ಕೆರೆಯುತ್ತಿವೆ ಇಲ್ಲ ಕೊರೆಯುತ್ತಿವೆ. ಆ ದೇಶದ ಬಗೆಗೆ ಬರೆಯಲೇಬೇಕು ಎಂದೆನಿಸಿ ಕುಳಿತಿದ್ದೇನೆ. ಎಂದಿನಂತೆ ನಿಮ್ಮ ಪ್ರೋತ್ಸಾಹ ಇರುತ್ತದೆ ಎಂದು ನಂಬಿದ್ದೇನೆ.

ನಾನು ಈ ಮೊದಲು ಡೆನ್ಮಾರ್ಕಿನ ಬಗೆಗೆ, ಅಲ್ಲಿನ ಸಮುದ್ರಗಳ ಬಗೆಗೆ (http://gurumurthyhegde.blogspot.com/2010/04/blog-post.html), ಕೋಪೆನ್ಹೇಗನ್  ಎಂಬ ನಗರದ ಬಗೆಗೆ (http://gurumurthyhegde.blogspot.com/2009/01/copenhagen.html) , ಸ್ವೀಡನ್ನಿನ ಕೆಲವು ರಮ್ಯ ತಾಣಗಳ ಬಗೆಗೆ (http://gurumurthyhegde.blogspot.com/2009/03/blog-post_27.html) ಬರೆದಿದ್ದೇನೆ. ಆದರೆ ಅವೆಲ್ಲವೂ ಒಂದು ನಗರದ ಭವ್ಯ ಇತಿಹಾಸ ಬಿಂಬಿಸುತ್ತಿದ್ದವು. ನಾರ್ವೆ ಗೆ ಹೋಗಿ ಬಂದ ಮೇಲೆ ಸೌಂದರ್ಯ ಎನ್ನುವುದಕ್ಕೆ ವ್ಯಾಖ್ಯಾನವೇ ಬೇರೆ ಎಂಬಂತಾಗಿದೆ ನನ್ನ ಸ್ಥಿತಿ. ಅಲ್ಲಿನ ಹಳ್ಳಿಗಳಲ್ಲಿ ಓಡಾಡಿ, ಅಲ್ಲಿನ ಪರ್ವತಗಳ ಅಂಚಿನಲ್ಲಿ ನಲಿದಾಡಿ, ಅಲ್ಲಿನ ನೀರಿನಲ್ಲಿ ತೇಲಾಡಿ, ಮಿಲಿಯನ್ ಗಟ್ಟಲೆ ಹಳೆಯದಾದ ಪರ್ವತಗಳ ನಡುವೆ ಅಡ್ಡಾಡಿ ಬಂದ ಮೇಲೆ ಮನಸು ಯಾವುದೋ ಒಂದು ಲೋಕಕ್ಕೆ ಸದಾ ಕರೆದೊಯ್ಯುತ್ತಿದೆ. ಇದನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಂಡರೆ ಮಾತ್ರ ಸಮಾಧಾನ.

ನಾರ್ವೆ ಎಂಬ ದೇಶ ಶ್ರೀಮಂತರ ತವರೂರು. ಒಂದು ಕಾಲದಲ್ಲಿ ಸ್ವೀಡನ್ನಿನ ಅಧೀನದಲ್ಲಿದ್ದ ನಾರ್ವೆ ಈಗ ಸ್ವತಂತ್ರ ದೇಶ. ಆಗ ಬಡ ದೇಶವಾಗಿದ್ದ ನಾರ್ವೆ ಯನ್ನು ಸ್ವತಂತ್ರಗೊಳಿಸಿದ ಸ್ವೀಡನ್ ಈಗ ಬಹುಷ ಪರಿತಪಿಸಿದರೆ ಆಶ್ಚರ್ಯವಿಲ್ಲ . ಕಾರಣ ಸ್ವತಂತ್ರಗೊಂಡ ನಾರ್ವೆ ಗೆ ವರದಂತೆ ಸಿಕ್ಕಿದ್ದು ''ಅಲ್ಲಿನ ಹೇರಳ ಅನಿಲ'' ಸಂಪತ್ತು. ಅಗೆದಲ್ಲೆಲ್ಲ Oil ಬರುವ ಜಾಗವದು. ಕೇಳಬೇಕೆ ಸಿರಿವಂತಿಕೆಗೆ. ಒಂದು ಅಂದಾಜಿನ ಪ್ರಕಾರ ''ಹತ್ತು ಜನರಲ್ಲಿ ಒಬ್ಬ ನಾರ್ವೆಯ ನಾಗರಿಕ ಮಿಲಿಯನ್ ಗಟ್ಟಲೆ ಹಣವುಳ್ಳವನಂತೆ''. ಇಂಥಹ ದೇಶಕ್ಕೆ ಕಳಶವಿಟ್ಟಂತೆ ಸಿಕ್ಕಿದ್ದು ನಿಸರ್ಗ ಸಂಪತ್ತು. ಕೆಲವೊಮ್ಮೆ ''ऊपर वाला जब  देता तो चप्पड पाड़ के देता है'' ಎನ್ನುವಂತೆ ಇಲ್ಲಿ ಎಲ್ಲವೂ ಹೇರಳವಾಗಿವೆ. ಬೇಕಾಗಿ ಉಳಿಯುವಷ್ಟು ಸೂರ್ಯ ಪ್ರಕಾಶ, ಬೇಡವೆನ್ನುವಷ್ಟು ಮಂಜುಗಡ್ಡೆ (ಇಲ್ಲ ಮಂಜಿನ ಗುಡ್ಡೆ) , ಬೇಕಾದಷ್ಟು ಕತ್ತಲು, ಅಸಹನೀಯ ಎನಿಸುವಷ್ಟು ಶ್ರೀಮಂತಿಕೆ, ಹೇರಳ ಅನಿಲ ಸಂಪತ್ತು, ಪರಿಶುದ್ಧ ಗಾಳಿ ಒಟ್ಟಿನಲ್ಲಿ GOD GIFT.

 ನಾವು ಸಂಪೂರ್ಣ ನಾರ್ವೆ ಗೆ ಹೋಗದಿದ್ದರೂ ನಾರ್ವೆ ಯ ಕೆಲವು ಸುಂದರ ಸ್ಥಳ ಗಳಿಗೆ ಭೆಟ್ಟಿ ಕೊಟ್ಟು ಬಂದಿದ್ದೇವೆ. ಅವುಗಳಲ್ಲಿ ನಗ್ನತೆಯೇ ಮೈ ವೆತ್ತ ಎಲ್ಲಿಯೂ ಕಾಮದ ವಾಂಛೆ ಇಲ್ಲದ ಪ್ರೇಮದ ಪುತ್ತಳಿಗಳೇ ತುಂಬಿರುವ OSLO ದ ಶಿಲಾ ಸಂಗ್ರಹಾಲಯ (Sculpture Museum) ಮೊದಲಿಗೆ ನಿಮ್ಮನ್ನು ಆಕರ್ಷಿಸುತ್ತದೆ. ಮುಂದೆ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ. ಇದೊಂದು ಜ್ಹಲಕ್ ಅಷ್ಟೇ.



 ಇಲ್ಲಿಂದ ಆರಂಭವಾಗುತ್ತದೆ ನಮ್ಮ ''Norway in a Nutshell'' ಪ್ರವಾಸ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ http://www.norwaynutshell.com/ . ಇಲ್ಲಿ ಬೇರೆ ಬೇರೆ ತರಹದ ಪ್ಯಾಕೇಜ್ ಟ್ರಿಪ್ ಗಳಿವೆ. ನಾವು ಒಂದನ್ನು ಆಯ್ಕೆ ಮಾಡಿಕೊಂಡೆವು. ನಾರ್ವೆ ಶ್ರೀಮಂತ ದೇಶವಾದರಿಂದ ಇಲ್ಲಿ ಎಲ್ಲವೂ ಯದ್ವ ತದ್ವ ತುಟ್ಟಿ. ಹಣ ನೀರಿನಂತೆ ಹರಿಯುತ್ತದೆ ಇಲ್ಲಿ, ಇಲ್ಲಿನ ನದಿಗಳಂತೆ. ನಮ್ಮ ಟ್ರಿಪ್ ಗೆ ನಾವು ಒಬ್ಬರಿಗೆ 11000 ರೂಪಾಯಿಗಳಷ್ಟು ಕೊಟ್ಟು ಟಿಕೆಟ್ ಮಾಡಿಸಿದೆವು. ಟಿಕೆಟ್ ಕೇವಲ ಪ್ರಯಾಣ ಮಾಡಲು ಮಾತ್ರ. ಪ್ಯಾಕೇಜ್ ಟ್ರಿಪ್ ನಲ್ಲಿ ಯಾವ ತಿಂಡಿಯೂ ಇಲ್ಲ, ವಸತಿ ಇಲ್ಲ. ಅದನ್ನೆಲ್ಲ ನಾವೇ ಮಾಡಿಕೊಳ್ಳಬೇಕು. 








ಇದೊಂದು ರೋಚಕ ರಮಣೀಯ ಅನುಭವ. ಇದರ ಬಗ್ಗೆ ಮುಂದಿನ ವಾರಗಳಲ್ಲಿ ವಿವರವಾಗಿ ಬರೆಯುತ್ತೇನೆ. ಇಲ್ಲಿನ ಪ್ರಕ್ರತಿಗೆ ಶರಣಾಗಿದ್ದೇನೆ. ಆ ರಮ್ಯ ಮನೋಹರ ಮೈದುಂಬಿದ ಸೌಂದರ್ಯದ ನಿಸರ್ಗ ರಮಣೀಯ ಜಲಸಿರಿಯ ರಮಣಿ ಕಣ್ಣೆದುರಿಗೆ ಕುಣಿಯುತ್ತಿದ್ದಾಳೆ.
ಮುಂದಿನ ವಾರ ಅವಳನ್ನು ನಿಮ್ಮೆದುರಿಗೆ ಕುಣಿಸುವ ಪ್ರಯತ್ನ ಮಾಡುತ್ತೇನೆ.
ಅಲ್ಲಿಯವರೆಗೆ ಕಾಯುತ್ತಿರಲ್ಲ.....

ನಿಮ್ಮವ 

ಗುರು  

Thursday, July 22, 2010

ಜನುಮದಿನದ ಹಾರೈಕೆ....

ನನ್ನೊಂದಿಗೆ ಹೆಜ್ಜೆ ಹಾಕಿದ, ಬಾಳ ನಾಟ್ಯ ರಂಗದಲ್ಲಿ ನನ್ನೊಂದಿಗೆ ನರ್ತಿಸಿದ, ನೋವಿನಲ್ಲಿ ತಾಯಿಯಾಗಿ, ನಲಿವಿನಲ್ಲಿ ಗೆಳತಿಯಾಗಿ, ಸಾಧನೆಯಲ್ಲಿ ಬೆನ್ನೆಲುಬಾಗಿ ನಿಂತ ನನ್ನ ಮನದಾಳದ ಒಡತಿ,  ಬಾಳ ಸಂಗಾತಿ ಗೀತಾ ಳ 27 ನೇ ಜನುಮದಿನ ಇಂದು (23 ಜುಲೈ). ಅವಳಿಗೆ ಒಂದು ಪುಟ್ಟ ಶುಭ ಹಾರೈಕೆ ಕವನದ ಮೂಲಕ. ನನ್ನನ್ನು ಬ್ಲಾಗ್ ಬರೆಯಲು ಪ್ರೇರೇಪಿಸಿ, ಹುರುದುಂಬಿಸಿದವಳು ಅವಳು. ಇಂದು ಬ್ಲಾಗಿನ ಮೂಲಕವೇ ಅವಳಿಗೊಂದು ಶುಭ ಹಾರೈಕೆ. ನೂರಾರು ವರುಷ ಅವಳು ಸಂತಸದಿ ಬಾಳಲಿ ಎಂಬುದೇ ಜನುಮದಿನದ ಹಾರೈಕೆ.



ಚೆಲುವೆ ನಿನ್ನ ಮೊಗದ ನೋಟ, ಹೂವು ಒಂದು ಅರಳಿದಂತೆ
ಒಲವ ಭಾವ ತುಂಬಿ ಮನಸು ಪುಳಕಗೊಂಡಿದೆ
ನಿನ್ನ ಪ್ರೇಮದಾಳದಲ್ಲಿ ಅರಳುತಿರುವ ಮೀನು ನಾನು
ಬಿರಿದ ಹೂವಿನಲ್ಲೆ ನಿನ್ನ ಪ್ರೀತಿ ಕಾಣುವೆ

ವರುಷ ಬಂತು ಇಪ್ಪತೆಂಟು, ಅಳಿಯಲಾರದಂತ ನಂಟು
ಹರುಷ ಎಂದೂ ಮನದಿ ಇರಲಿ, ಇರುವೆ ಜೊತೆಗೆ ನಾ
ಅಂದು ಇಂದು ಎಂದು ನೀನು, ಅಳಿಸಲಾರದಂತ ಸೊಗಸು
ಮುಗುದೆ ನಿನ್ನ ಮೊಗವ ನೋಡಿ, ನನ್ನೇ ಮರೆವೆ ನಾ

ಜನುಮ ದಿನದ ನೆನಪಿಗಾಗಿ, ಬರೆದೆ ಒಂದು ಪ್ರೇಮ ಕವನ
ಎದೆಯ ಆಳದಿಂದ ಬಂದ, ಭಾವ ಮಂಥನ
ಶುಭವ ನಿನಗೆ ಕೋರಿ ಒಲವೆ, ಅಭಯ ಹಸ್ತ ಎಂದೂ ಇಡುವೆ
ಎನ್ನ ಮನದ ತುಂಬ ನಿನ್ನ ತುಂಬಿ ಕೊಳ್ಳುವೆ

ಬಾಳಿನಲ್ಲಿ ನೋವು ನಲಿವು, ಇದ್ದರೇನೆ ಬದುಕು ಚೆಂದ
ಗೆಳತಿ ನಿನ್ನ ಹರುಷಕೆಂದು, ಪಣವ ತೊಟ್ಟಿಹೆ
ನೂರು ಕಾಲ ಬಾಳು ನೀನು,  ಇರುವೆ ಜೊತೆಗೆ ಎಂದೂ ನಾನು
ಎನ್ನ ಹರಕೆ ದೇವರಲ್ಲಿ, ಸದಾ ಇಟ್ಟಿಹೆ

Tuesday, July 13, 2010

ಜೈಲಿಗೆ ಹೋಗಲು ಎಂಟೇ ದಿನ ...




ಎಲ್ಲರಂತಿರಲಿಲ್ಲ ಅವಳು, ಹಾಗೆಂದು ಇದು ಅವಳು ಬಯಸಿದ್ದು ಅಲ್ಲ. ಬದುಕಿನ ವೈಚಿತ್ರದ ನರ್ತನಕ್ಕೆ ನ್ರತ್ಯಗಾತಿಯಾದ ನತದೃಷ್ಟೆ ಅವಳು. ಮನುಷ್ಯನ ಭಾವನೆಗಳಿಗೆ ರೆಕ್ಕೆ ಪುಕ್ಕ ಬಲಿತು ಆತ  ಹಾರಾಡುವ ಮಟ್ಟಕ್ಕೆ ಬೆಳೆದರೂ ಮೃಗೀಯ ಮನೋಭಾವನೆ ಬಿಟ್ಟಿಲ್ಲ ಎನ್ನುವುದಕ್ಕೆ ಅವಳ ಜೀವನವೇ ಸಾಕ್ಷಿ.

      ಸುಮಾರು 30 ವರ್ಷಗಳ ಹಿಂದಿನ ಮಾತು. ಸುರ ಸುಂದರ, ಮನ್ಮಥನ ರೂಪವೇ ಆಗಿದ್ದ ಅವನಿಗೆ ಸಾವಿರಾರು ಹೆಣ್ಣು ಮಕ್ಕಳು ಹಿಂದೆ ಬೀಳುತ್ತಿದ್ದರು. ಅವನ ಕುಡಿನೋಟಕ್ಕೆ, ತುಟಿಯ ಮಾಟಕ್ಕೆ, ಮಾದಕ ನಗುವಿಗೆ ಸೋಲದವರಿರಲಿಲ್ಲ. ಇಂಥಹ ಸುಂದರ ಸುಶೀಲ ಹುಡುಗನನ್ನು ಅವಳು ಮೊದಲ ನೋಟದಲ್ಲಿ ಕಂಡಾಗಲೇ ಮಾರುಹೋಗಿದ್ದಳು, ಅಷ್ಟೇ ಅಲ್ಲ ಬಲು ಬೇಗ ತನ್ನನ್ನೇ ಮಾರಿಕೊಂಡಿದ್ದಳು ಕೂಡಾ. ಪ್ರೀತಿಯೇ ಹಾಗೇ, ಅದಕ್ಕೆ ಯಾವ ಗಡಿಯಿಲ್ಲ, ಜಾತಿಯ ಹಂಗಿಲ್ಲ, ಮಾತಿನ ಗೋಜಿಲ್ಲ, ಸಂಭಂಧಗಳ ಕಡಿವಾಣವಿಲ್ಲ. ಒಂದು ನಿಷ್ಕಲ್ಮಶ ಪ್ರೀತಿ ಬೆಳ್ಳಂ ಬೆಳಿಗ್ಗೆ ನಿಮ್ಮ ಎದೆಯಲ್ಲಿ ಹುಟ್ಟಿ ಮಧ್ಯಾನ್ಹದ ವೇಳೆಗೆ ಇನ್ನೊಂದು ಎದೆಗೆ ತನ್ನ ಚಲನೆ ಆರಂಬಿಸಿಬಿಡುತ್ತದೆ. ಅವಳಿಗಾದದ್ದೂ ಅದೇ. ಕುಡಿನೋಟದಲ್ಲೇ ಕೊಂದ ಆ ಸುಂದರಾಂಗನಿಗೆ ಒಲಿದ ಅವಳು ಅವನೊಂದಿಗೆ ಪ್ರೇಮ ಸಲ್ಲಾಪದಲ್ಲಿ ತೊಡಗಿದಳು.

      ಕಾಲ ಯಾರಿಗೂ ಕಾಯದು. ಇಂದು ಬರುವ ಸೂರ್ಯ, ರಾತ್ರಿ ಬರುವ ಚಂದ್ರ, ಬದುಕಿಗೆ ಹಗಲು ರಾತ್ರಿ, ಎಲ್ಲವೂ ತನ್ನಷ್ಟಕ್ಕೆ ಯಾರಿಗೂ ಕಾಯದೆ ತಮ್ಮ ಪಾಡಿಗೆ ತಾವು ಕರ್ತವ್ಯ ಬದ್ದ ಕೆಲಸಗಾರರಂತೆ ಕಾರ್ಯ ನಿರ್ವಹಿಸುತ್ತಿರುತ್ತವೆ. ಅವಳ, ಅವನ ಪ್ರೇಮದ ದ್ಯೋತಕವಾಗಿ ಒಂದು ಮಗು ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಸಂಗತಿ ಗೊತ್ತಾದಾಗ ಅವರು ಮದುವೆ ಆಗಲು ನಿರ್ಧರಿಸಿದರು. ಅವಳೂ ಸರ್ವಾಂಗ ಸುಂದರಿ. ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಚೆಲುವೆಯನ್ನೂ ಮೀರಿಸುವ ಸೌಂದರ್ಯ ಅವಳದಾಗಿತ್ತು. ಮಾದಕ ಮೈಮಾಟ, ಚೆಲುವಿನ ಮೈಕಟ್ಟು, ಚುಂಬಕ ಶಕ್ತಿಯ ಮಾತು ಅವನನ್ನು ಅವಳ ಬಳಿ ಸೆಳೆದಿತ್ತು. ಇಂಥ ಸರ್ವಾಂಗ ಸುಂದರ, ಸುಂದರಿ 30 ವರ್ಷದ ಹಿಂದೆ ಮದುವೆಯಾದರು.

      ಕಥೆ ಆರಂಬವಾಗುವುದೇ ಇಲ್ಲಿ. ಆರಂಬಿಕ ದಿನಗಳಲ್ಲಿ ಎಲ್ಲವೂ ಸುಗಮವಾಗಿತ್ತು. ಕೈ ಕೈ ಹಿಡಿದುಕೊಂಡು ಅವರು ಹೋಗುವಾಗ ರಸ್ತೆಯ ಇಕ್ಕೆಲಗಳಲ್ಲಿ ಹೂಗಳೇ ನಾಚಿ ಮುದುಡಿ ಕೊಂಡವೇನೋ  ಎಂಬಷ್ಟರ ಮಟ್ಟಿಗೆ ಅವರಿಬ್ಬರ ಬದುಕು ಸಾಗಿತ್ತು. ಅವಳೆಂದರೆ ಜೀವ, ಅವಳಿಲ್ಲದೆ ಬದುಕಿಲ್ಲ ಎನ್ನುತ್ತಿದ್ದ ಕಾಲವದು. ನೋಡದ ಚಲನಚಿತ್ರಗಳಿಲ್ಲ. ಹೋಗದ ಸುಂದರ ತಾಣಗಳಿಲ್ಲ. ಒಟ್ಟಿನಲ್ಲಿ ಅದೊಂದು ಹ್ಯಾಪಿ ಫ್ಯಾಮಿಲಿ.

      ದಿನ ಸರಿಯುತ್ತಿದ್ದಂತೆ ಅವನಲ್ಲಿ ವಿಚಿತ್ರ ಭಾವನೆಗಳು ಮೂಡತೊಡಗಿದವು. ಪದೇ ಪದೇ ಕೋಪ, ಸಿಟ್ಟು, ಅಸಹನೆ ಜಾಸ್ತಿ ಆಗತೊಡಗಿತು. ಯಾವ ಹೆಂಡತಿಯೆಂದರೆ ತನ್ನೆಲ್ಲ ಪ್ರೀತಿಯನ್ನು ಧಾರೆ ಎರೆಯುತ್ತಿದ್ದನೋ ಅದೇ ಹೆಂಡತಿ ಎಂದರೆ ಬುಸುಗುಟ್ಟುವ ಹಾವಂತೆ ತೋರತೊಡಗಿತು ಅವನಿಗೆ. ಅವಳೋ ಏನೂ ಅರ್ಥವಾಗದೆ ಮೌನಿಯಾಗ ತೊಡಗಿದಳು. ಮೌನ ದ ಕಟ್ಟೆ  ಒಡೆದಾಗ ಜಗಳ. ಇಲ್ಲದಿರೆ ಕಣ್ಣೀರು ಅವಳ ಅಸ್ತ್ರ. ಜಗತ್ತಿನ ಎಲ್ಲ ಹೆಣ್ಣುಮಕ್ಕಳಿಗೂ ಕಣ್ಣೀರು  ಎಂದರೆ ಬಹುದೊಡ್ಡ ಆಸ್ತಿ. ಅಪ್ಪನ ಮನೆ ಬಿಟ್ಟು ಗಂಡನ ಮನೆಗೆ ಬರುವ ಪ್ರತಿ ಹೆಣ್ಣು ತನ್ನೊಂದಿಗೆ ಕಣ್ಣೀರು ತರಲು ಮರೆಯುವುದಿಲ್ಲ. ಯಾಕೆಂದರೆ ಆ ಹೆಣ್ಣಿನ ಭಾವನೆಗಳಿಗೆ ಬೆಲೆ ಸಿಗದಿದ್ದಾಗ ಅವಳಿಗೆ ಉಳಿಯುವುದು ಕಣ್ಣೀರು  ಮಾತ್ರ. ಅದೇ ಕಣ್ಣೀರು ಜಗತ್ತಿನ ಅಸಂಖ್ಯಾತ ಮಹಿಳೆಗೆ ಬದುಕಲು ಪ್ರೇರೇಪಿಸಿದೆ, ಬಾಳಲು ಕಾರಣ ನೀಡಿದೆ, ಸಾಯಲು ಪ್ರತಿರೋಧಿಸಿದೆ. 

      ಅವಳೂ ಸಹ ನೋವಾದಾಗಲೆಲ್ಲ ಕಣ್ಣೀರು  ಹಾಕಿ ಸಮಾಧಾನ ಪಟ್ಟಿದ್ದಳು. ಆದರೆ ದಿನ ಗಳೆದಂತೆ ಆತ ಮನುಷ್ಯತ್ವಕ್ಕೆ ಅಪವಾದವೆಂಬಂತೆ ವರ್ತಿಸತೊಡಗಿದ. ದಿನದ ಕುಡಿತದ ಮುಂದೆ ಹ್ರದಯದ ಮಿಡಿತ ಅರ್ಥವಾಗದು ಯಾರಿಗೂ. ಹಾಗೆಂದೂ ಅವರು ಆಗರ್ಭ ಶ್ರೀಮಂತರು ಕೂಡಾ. ಮನೆಯಲ್ಲಿ ತುಂಬಿ ತುಳುಕುತ್ತಿತ್ತು ಹಣ. ಅವನು, ಅವಳು ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸಕ್ಕಿದ್ದರು. ಆದರೂ ಅದೇನೋ ಅಸಮಾಧಾನ ಅವನಿಗೆ. ಅದು ಎಲ್ಲಿಯವರೆಗೆ  ಹೋಯಿತೆಂದರೆ ಅವಳ ಮೇಲೆ ಕೈ ಎತ್ತುವಷ್ಟರ ಮಟ್ಟಿಗೆ ಅದು ಬೆಳೆಯಿತು. ಕೆಲವೊಮ್ಮೆ ಅವಳಿಗೆ ಹೊಡೆದು ಹೊಡೆದು ಕೋಪ ತಣಿಯದಿದ್ದರೆ ಬಡಪಾಯಿ ನಾಯಿಗೆ ಹೊಡೆಯುತ್ತಿದ್ದ. ಒಬ್ಬ ಸುಸಂಸ್ಕ್ರತ ಮನುಷ್ಯ ಹೇಗೆ ಬದಲಾಗಬಲ್ಲ ಎನ್ನುವುದಕ್ಕೆ ಆತ ಜೀವಂತ ಉದಾಹರಣೆಯಾಗಿದ್ದ.  ಇದನ್ನೆಲ ಮೌನವಾಗಿ ಸಹಿಸಿಕೊಳ್ಳುತ್ತಾ ಸಹಿಸಿಕೊಳ್ಳುತ್ತಾ 30 ವರ್ಷಗಳೇ ಕಳೆದುಹೋಯಿತು. ಹೆಣ್ಣಿನ ಸಹನೆಯ ಮುಂದೆ ''ಸಹನೆ'' ಯೇ  ಶರಣಾಗಿ ಬಿಡುತ್ತದೆ. ಅವಳು ಅದೆಷ್ಟರ ಮಟ್ಟಿಗೆ ಸಹಿಸಿಕೊಳ್ಳುತ್ತಾಳೆಂದರೆ   ನೋವು ತನಗಿಟ್ಟುಕೊಂಡು, ನಲಿವನ್ನು ಹಂಚಿವಷ್ಟು. ಆ ನಲಿವಲ್ಲೇ ನೋವನ್ನು ಮರೆಯುವಷ್ಟು.

      ಹೀಗಿರಲೊಂದು ದಿನ, ಅವಳು ಅಡಿಗೆ ಮನೆಯಲ್ಲಿ ತರಕಾರಿ ಕೊಚ್ಚುತ್ತಿದ್ದಳು. ಎಂದಿನಂತೆ ಆತ ಬಂದು ಅವಳೊಂದಿಗೆ ಜಗಳಕ್ಕೆ ಇಳಿದ. ಅವಳು ಅದು ಇದೂ ಮಾತನಾಡಿದಳು. ಕೋಪದಲ್ಲಿ ಆತ ನಾಯಿಗೆ ರಪ ರಪನೆ ಹೊಡೆದ. ಅಷ್ಟೂ ಸಾಲದೆಂಬಂತೆ ಅವಳನ್ನು ಕೆಳಗೆ ಬೀಳಿಸಿ ಕಾಲಿನಲ್ಲಿ ಒದ್ದ. ನರಳಾಡುತ್ತಿರುವ ಅವಳ ಮೇಲೆ ವಿಕ್ರತ ನಗೆ ಬೀರಿ ಗಂಡಸುತನದ ಪೌರುಷವನ್ನು ತೋರಿದ. ಅವಳು ಪ್ರತಿರೋಧ ತೋರಿದರೂ ಅವನ ಬಲದ ಮುಂದೆ ಅವಳು ''ಅಬಲೆ''. ಪುನಃ ಅಳುತ್ತ ಎದ್ದು ತರಕಾರಿ ಕೊಚ್ಚ ತೊಡಗಿದಳು. ಅವನ ಕೋಪ ಮಿತಿ ಮೀರಿತು. ಪುನಃ ಅವಳ ಮೇಲೆ ಹೊಡೆಯಲೆಂದು ಹೋದಾಗ ಅವಳಿಗೆ ಗೊತ್ತಿಲ್ಲದೇ ತಪ್ಪಿ ಅವಳ ಕೈಯಲ್ಲಿರುವ ಚಾಕು ಅವನ ಕೈಗೆ ತಗುಲಿ ರಕ್ತ ಚಿಮ್ಮಿತು. ಕೂಡಲೇ ಆತ ಜಾಗ್ರತನಾದ. ಹೊಡೆಯಲಿಲ್ಲ, ಬಡಿಯಲಿಲ್ಲ. ನೇರವಾಗಿ ಪೋಲಿಸರಲ್ಲಿಗೆ ಹೋಗಿ ಅವಳ ಮೇಲೆ ಹಲ್ಲೆಯ ಆರೋಪ ಹೊರಿಸಿದ. ಉತ್ತಮ ವಕೀಲರು, ಸತ್ಯವನ್ನೇ ಸುಳ್ಳು ಮಾಡಲು ಸಾದ್ಯ, ಹಾಗೆಯೇ ಸುಳ್ಳನ್ನೇ ಸತ್ಯ ಮಾಡಲು ಸಾದ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿ ಹೋಯಿತು. ಅವಳು ಅವನ ಮೇಲೆ ಹಲ್ಲೆ ನಡಿಸಿದ್ದು ನಿಜ ಎಂದು ದೃಢ ಪಟ್ಟು ಅವಳಿಗೆ ೨ ವರ್ಷಗಳ ಕಾಲ ಜೈಲು ಶಿಕ್ಷೆ ನಿಗದಿಯಾಯಿತು. ಜೀವನ ಪರ್ಯಂತ ಅವನ ನೋವನ್ನು ಸಹಿಸಿದ್ದಕ್ಕೆ, ಅವನೇ ಸರ್ವಸ್ವ ಎಂದು ನಂಬಿದ್ದಕ್ಕೆ, ಎಲ್ಲವನ್ನು ಕಣ್ಣೀರು ಹಾಕಿ ನುಂಗಿದ್ದಕ್ಕೆ ಅವಳಿಗೆ ಸಿಕ್ಕ ಪ್ರತಿಫಲ ಜೈಲು ವಾಸ.

      ಸ್ನೇಹಿತರೆ, ಮೇಲಿನದು ಚಂದಮಾಮನ ಕಥೆಯಲ್ಲ, ಇಲ್ಲ ಬ್ಲಾಗ್ ಬರೆಯಲು ನಾನು ಮಾಡಿಕೊಂಡ ಕಲ್ಪನೆಯೂ ಅಲ್ಲ. ಇದು ಕಳೆದ ವಾರ ನನ್ನೆದುರಿಗೆ ಕುಳಿತ 55 ವರ್ಷದ ಹೆಣ್ಣಿನ ಕರುಣಾ ಭರಿತ ನೋವು. ಇದೀಗ ಅವಳು ಜೈಲಿಗೆ ಹೋಗಲು ೮ ದಿನ ಬಾಕಿಯಿದೆ.   ದಿನ ಎಣಿಸುತ್ತ, ಕಣ್ಣೀರು  ಹಾಕುತ್ತ ಕುಳಿತ ಆ ಹೆಣ್ಣಿನ ನೋವು  ಹೇಳಲು ಅಸಾದ್ಯ. ಅವಳೆದುರಿಗೆ ಕುಳಿತು, ಅವಳ ಬಾಯಿಂದ ಕಥೆ ಕೇಳಿದ ಮೇಲೆ ಅವಳ ಬಗ್ಗೆ ಬರೆಯಲೇ ಬೇಕೆನಿಸಿತು.

      ಅನಿವಾರ್ಯ ಕಾರಣಗಳಿಂದ ಅವಳ ಹೆಸರು ನೀಡಿಲ್ಲ. ಅವಳು ಸ್ವೀಡನ್ನಿನ ಪ್ರಜೆ. ಆತನೂ ಸ್ವೀಡನ್ನಿನ ಪ್ರಜೆ. ಆ ಹೆಂಗಸು ತನ್ನ ಸರ್ವ ಆಸ್ತಿಯನ್ನು ಬಿಟ್ಟು ಹೋಗುತ್ತಿದ್ದಾಳೆ. ಅವಳ ಮನೆ ತುಂಬಾ ಸುಂದರ ಚಿತ್ರ ಗಳು, ಅವಳ ಮಗನ ಕಣ್ಣಲ್ಲಿ ಕಣ್ಣಿರಿನ ಕೋಡಿ. ಬದುಕು ಎಷ್ಟು ವಿಚಿತ್ರ ಎನಿಸತೊಡಗಿದೆ.

ತಾಯಿ ಸಮಾನಳಾದ ಅವಳಿಗೆ ಹೀಗಾಗಬಾರದಿತ್ತು ಎಂಬ ನೋವು ಮನವನ್ನು ಕಾಡುತ್ತಿದೆ. ವಾರವೆಲ್ಲ ಅವಳ ಬಗ್ಗೆ ಚಿಂತಿಸಿ ಮನ ಸೋತಿದೆ.

ಅವಳ ಮನೆ ಬಿಟ್ಟು ಬರುವಾಗ ''ತಾನಿನ್ನು ಬರುತ್ತೇನೆ'' ಎಂದು ಹೇಳಿ ಕಣ್ಣಿರು ಇಟ್ಟಾಗ ಮನಸಿಗೆ ಅದೇನೋ ನೋವು ಆವರಿಸಿತು. 
ಯಾರಿಗೂ ಹೀಗಾಗದಿರಲಿ.  

Wednesday, July 7, 2010

ಅರಳಿದಂತೆ ಸುಮವು ........

ಬದುಕು ಕೇವಲ ಮೂರು ದಿನದ್ದು, ಆ ಮೂರು ದಿನದ ಬಾಳಿನಲ್ಲಿ ಸಂಕಷ್ಟಗಳು ಬರುತ್ತವೆ ಹೋಗುತ್ತವೆ. ಹಾಗೆಂದೂ ಸುತ್ತಲೂ ಕತ್ತಲಿದೆ, ಎಲ್ಲಿಯದು ಬೆಳಕು  ಎಂದು ಪ್ರತಿಕ್ಷಣವೂ ಕಣ್ಣೀರಿಡುತ್ತಾ ಕುಳಿತರೆ ನಗುವೇ ಮಾಯವಾಗಿ ಬಿಡುತ್ತದೆ. ನಗು ಎಂತಹ ವಿರಕ್ತನಲ್ಲೂ ಹೊಸ ಚಲನೆ ಎಬ್ಬಿಸುತ್ತದೆ. ಸದಾ ಬದುಕಿಗೆ ಮರುಗದೆ ಪ್ರತಿದಿನವೂ ಹೊಸ ಕ್ಷಣದಂತೆ ಭಾವಿಸಿ ಮುನ್ನುಗ್ಗಬೇಕು. ನಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬ ಬಗ್ಗೆ ಚಿಂತೆ ಬೇಡ. ಜನರಿರುವುದೇ ಅದಕ್ಕೆ. ಅವರು ಅವರಷ್ಟಕ್ಕೆ ಹೇಳುತ್ತಿರುತ್ತಾರೆ. ನಾವು ನಮ್ಮಷ್ಟಕ್ಕೆ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡಬೇಕು. ಕನಸುಗಳನ್ನು ಹೊಸೆದರಷ್ಟೇ ಸಾಲದು. ಅದನ್ನು ನನಸಾಗಿಸುವಲ್ಲಿ ನಮ್ಮ ಪ್ರಯತ್ನ ಅಗತ್ಯ. ಬದುಕು ಹೂವಿನಂತೆ ಸದಾ ಅರಳುತ್ತಿರಬೇಕೆ ಹೊರತು ನರಳುತ್ತಿರಬಾರದು  ನಿನಗೆ ನೀನೆ ಗೆಳೆಯ, ನಿನಗೆ ನೀನೆ ಗೆಳತಿ. ಬದುಕು ಧನಾತ್ಮಕತೆಗೆ ಸಾಗಲಿ ಎಂಬುದು ಕವನದ ಆಶಯ 


ಮನಸಿನಲಿ ಸ್ವಚ್ಛಂಧ ಮಗುವಿನಂತಹ ನಗುವು
ಮರೆಯದ ಛಾಯೆ, ನಿನ್ನ ಗೆಳತನವು
ನೀನಿರದ ಅರೆಕ್ಷಣವು ಮರೆತಂತೆ ಸೂರ್ಯ
ಸುತ್ತಲೂ ಕತ್ತಲಿರೆ  ಬೆಳಕು  ಅನಿವಾರ್ಯ

ತಿಳಿನೀಲ ಆಗಸದಿ ಹುಣ್ಣಿಮೆಯ ಚಂದ್ರ
ಸುವಿಶಾಲ ಪ್ರಥ್ವಿಯಲಿ ಬೆಳಗಿಹುದು ಅಂದ
ನೀನೆಂಬ ನಾನು, ನಾನಾಗಿ ನೀನು
ಸ್ನೇಹದ  ಪರಿಧಿಯಿರೆ, ಬೇಕಿಲ್ಲ  ಏನೂ 
  
ಮರೆತುಬಿಡು ಎಲ್ಲವನು, ನೋವಿರಲಿ ನನಗೆ
ಹರಿಯಬಿಡು ಬದುಕನ್ನು, ನಲಿವಿರಲಿ ನಿನಗೆ
ಲೋಕದಲ್ಲಿ ನೂರೆಂಟು ಜನರಿಹರು ಗೆಳತಿ
ನಿನ್ನ ಮನೆಕೆ ನೀನೆ ಎಂದಿಗೂ ಒಡತಿ

ಚಲನೆಯಿದೆ ಚಲಿಸುತಿದೆ ಚಿತ್ತಾರ ಮನಸು
ಅಂತರಂಗದಿ ಕುಳಿತ ವಿಸ್ತಾರ ಕನಸು  
ಸಾಧನೆಯು ಬಾಡದಿರೆ, ಬದುಕಿಹುದು ಮೂರೇ ದಿನ
ನಿನ್ನೊಳಗೆ ಉಳಿಯದಿರು, ಎದ್ದು ಬಾ ಅನುದಿನ 

Sunday, June 27, 2010

ತೇಲಿ ಹೋಗದಂತೆ ಬದುಕು




ಸಖ ನಿನ್ನ ಪ್ರೇಮರಸವ
ಸುಖಿಯಾಗಿ ಉಂಡೆ ನಾನು
ದುಡುಕಿ ಹೋಗದಂತೆ ಬದುಕು
ದಡಕೆ ತಂದ ನಾವಿಕ ನೀನು

ಮಧುರ ವೀಣೆ ತಂತಿ ಮೀಟಿ
ಮನಸು ಹಾರದಂತೆ ದಾಟಿ
ತೇಲಿ ಹೋಗದಂತೆ ಬದುಕು
ಹಿಡಿದು ತಂದ ನಾವಿಕ ನೀನು

ನೊಂದ ಭಾವ, ಬೆಂದ ಜೀವ
ಅಲೆಯುತಿರುವ ಭಾವ ಸೆಲೆಯ
ಬಾಡಿ ಹೋಗದಂತೆ ಬದುಕು
ಅರಳುವಂತೆ ಮಾಡಿದೆ ನೀನು

ಯಾವ ಹುತ್ತ, ಯಾವ ಹಾವು
ಯಾರ ಬಾಳು, ಯಾರ ಸಾವು
ಬಾರದೆಡೆಗೆ ಹೊರಟು ನಿಂತ
ಬಳಿಗೆ ಕರೆದ ರಕ್ಷಕ ನೀನು


Monday, June 14, 2010

ಓ ಸಾಜನಾ



ಓ ಸಾಜನಾ, ಓ ಸಾಜನಾ, 
ನಿನ ಬಿಟ್ಟು ಇರಲಾರೆ ನಾ
ಓ ಸಾಜನಾ, ಓ ಸಾಜನಾ  
ನನ ಭಾವ ನಿನ್ನ ಮನ


ನಿನ್ನೊಳಗಿನ, ನಿನ್ನಾಸೆಯ, ನಿನ್ನುಸಿರೆ ನಾ 
ನಿನ್ನೆದೆಯ ಮಿಡಿತದಲಿ, ಅಡಗಿರುವೆ ನಾ 
ಓ ಸಾಜನಾ, ಓ ಸಾಜನಾ,  
ನೀನಿಲ್ಲದೆ ನಾನಿರುವೆನಾ


ನನ್ನ ಮನೆಯಂಗಳದಿ, ಚೆಲ್ಲಿದ ನಗು ನೀನಾ 
ನಿನ್ನ ಕನಸಿನ ಮನದ, ಕನಸುಗಾರ ನಾನಾ
ಓ ಸಾಜನಾ, ಓ ಸಾಜನಾ,  
ಅರಳಿದಂತೆ ಹೂವಿನ ಬನ


ನೋವಿರಲಿ, ನಲಿವಿರಲಿ, ಮರೆಯೆ ಒಲವ ಗಾನ 
ನೀನಿರದ ಅನುಕ್ಷಣವೂ ಬಾಳು ದಿವ್ಯ ಮೌನ,
ಓ ಸಾಜನಾ, ಓ ಸಾಜನಾ,
ನಿನ ಬಿಟ್ಟು ಇರಲಾರೆ ನಾ 

ಸ್ನೇಹಿತರೆ,
ಕೆಲವು ದಿನಗಳಿಂದ ಅನಿವಾರ್ಯ ಕಾರಣಗಳಿಂದ ಬ್ಲಾಗ್ ಗೆ ಬರಲಾಗಲಿಲ್ಲ, ನಿಮ್ಮೆಲ್ಲರ ಬ್ಲಾಗನ್ನು ಓದಲು ಸರಿಯಾಗಿ ಆಗಲಿಲ್ಲ. ಬ್ಲಾಗ್ ಬರೆಯಲು ಆಗಲಿಲ್ಲ. ಅದಕ್ಕೆ ಕ್ಷಮೆ ಇರಲಿ. ಮತ್ತೆ ಮೊದಲಿನಂತೆ ಬ್ಲಾಗ್ ಗೆ ಬಂದಿದ್ದೇನೆ. ಕೆಲವು ಕೆಲಸದ ಒತ್ತಡಗಳು , ಭಾರತ ಪ್ರವಾಸ ಎಲ್ಲವೂ ಒಮ್ಮೆಲೇ ಬಂದು ಬರೆಯಲಾಗಲಿಲ್ಲ.


ಬಹಳಷ್ಟು ಹೊಸ ವಿಷಯಗಳು, ವಿಚಾರ ಧಾರೆಗಳೊಂದಿಗೆ ಮುಂದಿನ ವಾರ ಸಿಗುತ್ತೇನೆ,


ಪ್ರೀತಿ ಪ್ರೋತ್ಸಾಹ ಸದಾ ಇರಲಿ
ಗುರು

Wednesday, May 5, 2010

ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು

ಯಾಕೋ ಏನೋ, ನಂಗೇನ್ ಗೊತ್ತು
ಅವಳಿಗೆ ಬಂತು ಸಿಟ್ಟು
 ಕೆಂಪಾದ ಕೆನ್ನೆ, ಅರಳೋದ್ ಬಿಟ್ಟು
ತಂದೀತ್ ತಲೆಗೆ ಚಿಟ್ಟು

ಕೊಡ್ತೀನಿ ಚಿನ್ನ, ನಿಂಗೆ ''ಚಿನ್ನ''
ಬಿಡ ಬ್ಯಾಡ್ ಹಿಂಗೆ ಕಣ್ಣ 
ಅಧರದಿಂದ ಮಧುರ ಗೀತೆ 
ಹಾಡಲೇನೆ ರನ್ನ   


ಮುದ್ದಾದ ವದನ, ಯಾಕೆ ಕದನ
ನೀನೆ ನನ್ನ ಪ್ರಾಣ
ಹರಿಯೋ ನದಿಯ, ಬೀಸೋ ಗಾಳಿ
 ತಂದು ಕೊಡ್ಲೇನ್ ಜಾಣ

ನನ್ನ ನಿನ್ನ, ನಡುವೇನ್ ಗುಟ್ಟು
ನಿಂಗ್ಯಾಕ್  ಬಂತು ಸಿಟ್ಟು
 ಬಿಟ್ಟು ಸಿಟ್ಟು, ''ಅತ್ತು'' ಬಿಟ್ಟು
ತಬ್ಕೋ  ನನ್ನ, ಬಂದ್ ಬಿಟ್ಟು 

ಗಂಡ ಹೆಂಡತಿ ಸಿಟ್ಟು, ಉಂಡು ಮಲಗುವ ತನಕ ಎಂಬ ಗಾದೆ ಅಂದಿಗೂ, ಇಂದಿಗೂ ಎಂದಿಗೂ ಪ್ರಸ್ತುತ. ನಿತ್ಯ ಸತ್ಯ. ಸಂಸಾರದ ಬಂಡಿಯಲ್ಲಿ ಬರೆ ಪ್ರೇಮವಿದ್ದರೆ ಸಾಲದು. ಅಲ್ಲಿ ಸರಸವೆಷ್ಟೋ, ವಿರಸವೂ ಇರಬೇಕು. ಹುಸಿಮುನಿಸು, ನಸು ನಗಿಸುತ್ತಾ ಇರುವುದೇ ಜೀವನದ ಯಶಸ್ಸಿನ ಗುಟ್ಟು. ಸರಸ ವಿರಸ ಹದವಾಗಿ ಬೆರೆತರೆ ಸಂಸಾರ ಸೊಗಸು. ಹೆಂಡತಿಗೆ ಸಿಟ್ಟು ಬಂದಿದೆ ಎಂದು ಗಂಡನೂ ಸಿಟ್ಟು ಮಾಡಿ ಕುಳಿತರೆ  ಹೇಗೆ. ಸಿಟ್ಟು ಯಾಕೆ ಬಂತು, ನನ್ನ ಯಾವ ಮಾತು, ಯಾವ ವಿಷಯ ನಿನಗೆ ಕೋಪ ತಂತು, ಎಂದು ಹದವಾಗಿ ಅವಳಲ್ಲಿ ಕೇಳಿ ಅವಳ ಮನಸ್ಸಿನ ಪ್ರೇಮ ''ತಂತು'' ವನ್ನು ಮೀಟಬೇಕು. ಜೀವನ ಒಂದು ಪಾಠ ಶಾಲೆ, ಪ್ರತಿದಿನ ಪ್ರತಿಕ್ಷಣ ಕಲಿಕೆ ಇದ್ದಿದ್ದೆ. ಪ್ರತಿದಿನದ ಯಾಂತ್ರಿಕ ಕೆಲಸದ ನಡುವೆ ಬರುವ ಸಿಟ್ಟಿಗೆ ಅದರದೇ ಆದ ಸಮಾಧಾನವು ಇರುತ್ತದೆ. ಅದರಲ್ಲೂ ತನ್ನ ''ಅಪ್ಪ, ಅಮ್ಮ, ಹುಟ್ಟೂರು, ಹೆತ್ತೋರು, ಮನೆ, ಗಿಡ ಮರ, ಸ್ನೇಹಿತರು'' ಎಲ್ಲವನ್ನೂ ತ್ಯಜಿಸಿ ಪತಿಯ ಹಿಂದೆ ಬರುವ ಹೆಣ್ಣು ಮಕ್ಕಳ ಬಹುದೊಡ್ಡ ಆಸ್ತಿ ''ಕಣ್ಣೀರು''. ಮನಸ್ಸಿಗೆ ಬೇಸರವಾದಾಗ ನಾಲಕ್ಕು ಹನಿ ಕಣ್ಣೀರು ಹಾಕಿದರೆ ಅವರಿಗೆ ಅದೆಷ್ಟೋ ಸಮಾಧಾನ. ಅದಕ್ಕೆ ಸಿಟ್ಟು ಬಂದಾಗ ಸ್ವಲ್ಪ ಅಳಲು ಬಿಟ್ಟರೆ, ಸಮಾಧಾನವಾದಾಗ ನಗು ಅರಳುತ್ತದೆ. ಬದುಕಿನ ಬಂಡಿಯಲ್ಲಿ ಸಮರಸದಿ ಬದುಕಿ ಬಾಳಬೇಕು ಎಂಬುದೇ ಕವನದ ಆಶಯ.

ಆತ್ಮೀಯ ಸ್ನೇಹಿತರೆ,

ನಾನು ಮತ್ತು ನನ್ನ ಅರ್ಧಾಂಗಿ  ಸ್ವಲ್ಪ ದಿನದ ಮಟ್ಟಿಗೆ ಭಾರತಕ್ಕೆ ಬರುತ್ತಿದ್ದೇವೆ.. ತಾಯ್ನಾಡಿನ ನೆನಪು, ಮಣ್ಣಿನ ನೆನಪು, ಹೆತ್ತವರ ನೋಡುವ ತವಕ ದಿನೇ ದಿನೇ ಹೆಚ್ಚುತ್ತಿದೆ. ಜೊತೆಗೆ ಕಳೆದ ಒಂದು ವರ್ಷದಲ್ಲಿ ಮನಸ್ಸಿಗೆ ತುಂಬಾ ಹತ್ತಿರವಾದ ಬ್ಲಾಗ್ ಸ್ನೇಹಿತರು ಕೂಡಿದ್ದಾರೆ. ನಿಮ್ಮನೆಲ್ಲ ಬೆಂಗಳೂರಿನಲ್ಲಿ ಭೆಟ್ಟಿಯಾಗುತ್ತೇನೆ ಎಂಬ ವಿಶ್ವಾಸ ನನ್ನದು. ಯಾವಾಗ, ಎಲ್ಲಿ ಎಂಬುದನ್ನು ಭಾರತಕ್ಕೆ ಬಂದು ತಿಳಿಸುತ್ತೇನೆ. ನಿಮ್ಮೆಲ್ಲರ ಫೋನ್ ನಂಬರ್ ನನ್ನ E-mail. Address ''koorsebabbi@gmail.com'' ಗೆ ದಯವಿಟ್ಟು ಕಳಿಸುತ್ತಿರಲ್ಲ. ನಾನು ಮೇ 7 ರಿಂದ 26 ರ ತನಕ ಭಾರತದಲ್ಲಿ ಇರುತ್ತೇನೆ. 

ಸಿಗುತ್ತಿರಲ್ಲ...

ಇನ್ನು ಸುಮಾರು 3 ವಾರಗಳ ಕಾಲ ನಿಮ್ಮೆಲ್ಲರ ಬ್ಲಾಗನ್ನು ಪೂರ್ತಿ ಓದಲು ಸಾಧ್ಯವಾಗುವುದಿಲ್ಲ. ಅದಕ್ಕೆ ಕ್ಷಮೆ ಇರಲಿ. ಬಂದ ಕೂಡಲೇ ಮತ್ತೆ ಪ್ರೀತಿಯ ಓದುಗನಾಗಿ ಎಲ್ಲ ಬ್ಲಾಗನ್ನು ಓದುತ್ತೇನೆ. 

ಪ್ರೀತಿ, ವಿಶ್ವಾಸ ಸದಾ ಇರಲಿ.

ನಿಮ್ಮವ 

ಗುರು 

Wednesday, April 28, 2010

ಸಮುದ್ರ ಸಂಗಮ - ನೋಟ ವಿಹಂಗಮ ..ಕೊನೆಯ ಭಾಗ

ಹಿಂದಿನ ವಾರ ಹಡಗಿನ ಪ್ರಯಾಣ ದ ಅನುಭವದ  (http://gurumurthyhegde.blogspot.com/2010/04/grenen-2.html) ಬಗೆಗೆ ಹೇಳಿದ್ದೆ. ಅದರೊಂದಿಗೆ ರೈಲಿನಲ್ಲಿ ನಿಮ್ಮನ್ನು Skagen ವರೆಗೆ ಒಯ್ದಿದ್ದೆ. ಇನ್ನು  ಪ್ರವಾಸ ಕಥನವನ್ನು ಧಾರಾವಾಹಿಯಂತೆ ಎಳೆಯುವುದಿಲ್ಲ. ಇಂದೇ ಮುಗಿಸಿಬಿಡುತ್ತೇನೆ.  

ರೈಲಿನಲ್ಲಿ Skagen ತಲುಪುವಾಗ ಮಧ್ಯಾನ್ಹ 3 ಘಂಟೆ ಆಗಿತ್ತು. ಇಳಿದ ಕೂಡಲೇ ಗ್ರೆನೇನ್ ತಲುಪಲು ಬಸ್ ಎಲ್ಲಿದೆ ಎಂದು ವಿಚಾರಿಸಿದಾಗ ತಿಳಿಯಿತು, ಇನ್ನೂ ಬೇಸಿಗೆ ಆರಂಭವಾಗದ್ದರಿಂದ ಬಸ್ ಸೌಲಭ್ಯ ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು. ಬಾಡಿಗೆ ಕಾರನ್ನು ಹುಡುಕಿದೆವು. ಅದೂ ಇಲ್ಲ ಎಂದು ತಿಳಿಯಿತು. ಪಕ್ಕದಲ್ಲೇ ಇದ್ದ ಬಾಡಿಗೆ ಸೈಕಲ್ ಕೇಳಲೆಂದು ಹೋದರೆ ಮಾಲಿಕನನ್ನೇ ಹುಡುಕಿ ಹೋಗಬೇಕು ಎಂದು ತಿಳಿಯಿತು. ಇಲ್ಲಿ ಹೆಚ್ಚಿನ ಜನ ಸೈಕಲ್ ತೆಗೆದುಕೊಂಡು ಗ್ರೆನೇನ್ ಗೆ ಹೋಗುತ್ತಾರೆ ಎಂದು ಓದಿ ತಿಳಿದುಕೊಂಡಿದ್ದೆ. ಹಾಗಾಗಿ ಸೈಕಲ್ ಕೇಳಲು ಹೋದೆವು. ಯಾವುದೂ  ಸಿಗದೇ ದೇವರು ಕೊಟ್ಟ ಕಾಲನ್ನು ಉಪಯೋಗಿಸುವುದೆಂದು ತೀರ್ಮಾನಿಸಿದೆವು.

ಇಲ್ಲಿಯ ರಸ್ತೆಗಳು ಹಾಗೆಯೇ, ಅಂಕು ಡೊಂಕು ಗಳಿಲ್ಲ, ನೇರವಾಗಿವೆ, ದೂರದಲ್ಲಿ ದೀಪದ ಮನೆ (Light House) ಕಾಣುತ್ತಿತ್ತು. ಅಲ್ಲಿಯೇ ಗ್ರೆನೇನ್ ಇದೆ ಎಂದು ಗೂಗಲ್ ಮಾಡಿ ನೋಡಿಕೊಂಡಿದ್ದೆವು. ಆದರೆ ಆ ದೀಪದ ಮನೆ ಎಷ್ಟು ನಡೆದರೂ ಬರುತ್ತಿಲ್ಲ. ಹೇಳುವ ಎಲ್ಲ ವಿಷಯಗಳು ಖಾಲಿಯಾಗುತ್ತಿತ್ತು. ಕಾಲು ದಣಿಯುತ್ತಿತ್ತು. ಸಮುದ್ರ ಸಂಗಮ ಸೇರುವ ಮೊದಲೇ ನಾವು ತಿರುಗಿ ಹೋಗುತ್ತೇವೆಯೇ ಎಂಬ ಚಿಂತೆ ಆರಂಭವಾಯಿತು. ಸುಮ್ಮನೆ ನೇರ ರಸ್ತೆಯಲ್ಲಿ ನಡೆಯುವುದೆಂದರೆ ಸ್ವಲ್ಪ ಬೇಸರವೇ....ಆದರೆ ರಸ್ತೆಯ ಇಕ್ಕೆಲಗಳಲ್ಲಿನ ಸುಂದರ ಮನೆಗಳು ಕಣ್ಮನ ಸೆಳೆಯುತ್ತಿದ್ದವು.



ಹೆಸರಾಂತ ಚಿತ್ರಕಾರರ ಓಣಿ ಯಂತೆ  ಇದು. ಮನೆ ನೋಡಿದರೆ ತಿಳಿಯುತ್ತದೆ ಇದು ಚಿತ್ರಕಾರನ ಕಲ್ಪನೆಯ ಮೂರ್ತರೂಪ ಎಂದು. ಬಗೆ ಬಗೆಯ ವೈವಿದ್ಯದ ಮನೆ ಕಣ್ಣಿಗೆ ತಂಪು ನೀಡದಿರುತ್ತಿದ್ದರೆ ಬಹುಷ: ನಾವು ಮುಂದೆ ಹೆಜ್ಜೆ ಹಾಕುತ್ತಿರಲಿಲ್ಲವೇನೋ. ಸ್ವಲ್ಪ ದೂರ ಕಳೆದ ಮೇಲೆ ಓಣಿ ಮುಗಿಯಿತು. ಬಯಲು ಬಂತು.




ಏನು ಮಾಡಬೇಕೆಂದು ತೋಚದೆ ಸಮಯ ನೋಡುತ್ತಾ ಹೆಜ್ಜೆ ಹಾಕುತ್ತಿದ್ದೆವು. ಸ್ವಲ್ಪ ದೂರ ಕಳೆದ ಮೇಲೆ ಬಲಗಡೆಯಲ್ಲಿ ಸಮುದ್ರ ತೀರ ಕಾಣಲು ಆರಂಬಿಸಿತು.  ಸರಿ, ಇನ್ನು ರಸ್ತೆ ಬೇಡ ಎಂದು ನಿರ್ಧರಿಸಿ ಪಕ್ಕದ ಸಮುದ್ರ ತೀರದಲ್ಲಿ ನಡೆಯಲು ಆರಂಬಿಸಿದೆವು. ಇಲ್ಲಿಯೂ ಅಷ್ಟೇ, ದೀಪದ ಮನೆ ಕಾಣುತ್ತಲೇ ಇತ್ತು. ಆದರೆ ಬರುತ್ತಿರಲಿಲ್ಲ.



ಕೆಲವೊಮ್ಮೆ, ನಮ್ಮ ನೋಡಿ ಅದು ಓಡುತ್ತಿದೆಯೇ ಎಂದು ಅನ್ನಿಸತೊಡಗಿತು. ಆದರೆ ಪಕ್ಕದ ಸಮುದ್ರ ಮನಸ್ಸಿಗೆ ಹಿತ ನೀಡುತ್ತಿತ್ತು. ಒಂದು ವಿಚಿತ್ರ ಆಕಾರದಲ್ಲಿ ಇಲ್ಲಿನ ಸಮುದ್ರ ತೀರ ನಿರ್ಮಿಸಲಾಗಿದೆ. ಸಮುದ್ರದ ಶಕ್ತಿಶಾಲಿ ಅಲೆಗಳಿಂದ ತಡೆಯಲು ಇಂಥಹ ತಡೆಗೋಡೆ ನಿರ್ಮಿಸಲಾಗಿದೆಯಂತೆ. ಹೆಚ್ಚು ಮಾನವ ಸುಳಿವಿಲ್ಲದೆ ಇರುವುದರಿಂದ ಸ್ವಚ್ಚತೆಯಿಂದ ಕಂಗೊಳಿಸುತ್ತಿತ್ತು.



ಅಂತೂ ನಡೆದು ನಡೆದು ದೀಪದ ಮನೆ ಹತ್ತಿರ ಬಂದು ತಲುಪಿದೆವು. ದೀಪದ ಮನೆ ಸಮುದ್ರದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ದಾರಿದೀಪ ವಿದ್ದಂತೆ. ಇಲ್ಲಿನ ದೀಪದ ಮನೆಯನ್ನು 1858 ರಲ್ಲಿ ನಿರ್ಮಿಸಲಾಯಿತು. 46 ಮೀಟರ್ ಎತ್ತರ ಇರುವ ಲೈಟ್ ಹೌಸ ಡೆನ್ಮಾರ್ಕಿನ ಎರಡನೇ ಅತಿ ದೊಡ್ಡ ಲೈಟ್ ಹೌಸ್ ಆಗಿದೆ.


ಇದು ಅತ್ಯಂತ ಪ್ರಕಾಶಮಾನವಾದ 400 ವ್ಯಾಟ್ ಗಳುಳ್ಳ ಸೋಡಿಯಂ ಬೆಳಕನ್ನು ಹೊಂದಿದೆ. ಸುಮಾರು 20 ಮೈಲಿಗಳ ದೂರದಿಂದ ಸಹ ಇದರ ಬೆಳಕನ್ನು ವೀಕ್ಷಿಸುವಷ್ಟು ಸಮರ್ಥವಾಗಿದೆ ಇದು. ಹಿಂದಿನವರ ತಂತ್ರಜ್ಞಾನಕ್ಕೆ ತಲೆ ಬಾಗಲೆಬೇಕಲ್ಲವೇ?

ಇಲ್ಲಿ ಒಂದು ಚಿತ್ರ ಸಂಗ್ರಹಾಲಯವಿದೆ. ಹೆಸರಾಂತ ಚಿತ್ರಕಾರರು ಇಲ್ಲಿನ ಸಮುದ್ರ ತೀರಕ್ಕೆ ಬಂದು ಬಿಡಿಸಿದ ಮನಮೋಹಕ ಚಿತ್ರಗಳು ಇಲ್ಲಿವೆಯಂತೆ. ಆದರೆ ನಾವು ಹೋದಾಗ ಸಂಗ್ರಹಾಲಯ  ಮುಚ್ಚಿತ್ತು ಅದಕ್ಕೆ ಅದನ್ನು ನೋಡಲಾಗಲಿಲ್ಲ. ಇಲ್ಲಿಂದ ಸುಮಾರು ಒಂದು ಕಿ ಮಿ ನಡೆದರೆ ಸಿಗುವುದೇ ಡೆನ್ಮಾರ್ಕಿನ ಉತ್ತರದ ತುತ್ತ ತುದಿ, ಎರಡು ಸಮುದ್ರಗಳು ಸೇರುವ ಸಂಗಮ. ಗ್ರೆನೇನ್ ಎಂದು ಕರೆಯುವ ಜಾಗ. ಇಲ್ಲಿ ಒಂದು Tractor ಬಸ್ ಲಭ್ಯವಿದೆ. ಇದೊಂದು ಬ್ರಹತ್, ವಿಶಾಲ್ ಸಮುದ್ರ ತೀರವಾದ್ದರಿಂದ ನಡೆದು ಮುಗಿಯದು ಎಂದು ನಿರ್ಧರಿಸಿ Tractor ಬಸ್ ಏರಿ ಕುಳಿತೆವು.




ಇದರಲ್ಲಿ ಸಂಪೂರ್ಣ ಸಮುದ್ರ ತೀರ ಸುತ್ತಿ ಬರಬಹುದು. ಎರಡು ಸಮುದ್ರಗಳು ಸೇರುವ ಜಾಗದಲ್ಲಿ ಬಸ್ ನಿಲ್ಲಿಸುತ್ತಾರೆ. ಇಲ್ಲಿ ಇಳಿದು ಬೇಕಾದಷ್ಟು ಸಮಯ ಕಳೆದು ಪುನಃ ಇನ್ನೊಂದು ಬಸ್ ಹಿಡಿದು ತಿರುಗಿ ಹೋಗುವ ವ್ಯವಸ್ಥೆಯಿದೆ. 


ಕೊನೆಗೂ ಆ ಕ್ಷಣ ಬಂತು. ಚಿತ್ರ ವಿಚಿತ್ರ ಬಣ್ಣದ ಆಗಸ, ಎರಡು ಸಮುದ್ರಗಳ ಮಿಲನ, ಬ್ರಹತ್ ಮರಳ ದಂಡೆ, ನಿಜಕ್ಕೂ ಇದೊಂದು ರಮಣೀಯ ಸ್ಥಳ.


ಅಲ್ಲಿಯೇ ಕುಳಿತು ಕವನ ಬರೆಯಲೇ ಎನ್ನುವಷ್ಟು ಮನಸ್ಸು ನನಗೆ ಹಾತೊರೆಯುತ್ತಿದ್ದರೆ ಇನ್ನು  ಚಿತ್ರಕಾರನಿಗೆ ಇದು ಸ್ಪೂರ್ತಿ ಸೆಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಂಥಹ ಮನುಷ್ಯನಿಗೂ ಪ್ರಕ್ರತಿಯ ಜೊತೆಗೆ ಬೆಸುಗೆ ಬೆಸೆಯುವ ಸ್ಥಳವಿದು.



ಇಲ್ಲಿನ ಆಕಾಶವೇ ಹಾಗಂತೆ. ಸದಾ ಚಿತ್ರ ವಿಚಿತ್ರ ಬಣ್ಣಗಳಲ್ಲಿ ಗೋಚರಿಸುತ್ತಾ ಇರುವುದರಿಂದ ಬೇಸಿಗೆಯಲ್ಲಿ ಚಿತ್ರಕಾರರೂ ಇಲ್ಲಿಯೇ ಕುಳಿತು ತಮ್ಮ ಕಲ್ಪನೆಗಳಿಗೆ ಕುಂಚದ ಸಹಾಯದಿಂದ ಮೂರ್ತ ರೂಪ ನೀಡುತ್ತಾರಂತೆ.



ಎಷ್ಟು ನೋಡಿದರೂ ಸಾಲದು ಎಂಬಂತಿತ್ತು ಅಲ್ಲಿನ ಎರಡು ಸಮುದ್ರಗಳು ಸೇರುವ ಆ ಸ್ಥಳ. ನೀರು ಮಾತ್ರ ಬಹಳ ತಣ್ಣಗೆ ಇದ್ದಿದ್ದರಿಂದ ನೀರನ್ನು ಒಮ್ಮೆ ಮುಟ್ಟಿ  ಧನ್ಯರಾದೆವು. ಅದೇ ಕಡು ಬೇಸಿಗೆಯಾಗಿದ್ದರೆ ನೀರಿಗೆ ಇಳಿದು ಸ್ನಾನ ಆದರೂ ಮಾಡಬಹುದಿತ್ತೇನೋ ಎಂದು ಯೋಚಿಸುವಷ್ಟರಲ್ಲಿಯೇ ಅಲ್ಲಿ ಇದ್ದ ಒಬ್ಬರು ಹೇಳಿದರು, ಇಲ್ಲಿ ಸಮುದ್ರ ಸ್ನಾನ ಅಷ್ಟು ಒಳ್ಳೆಯದಲ್ಲ ಎಂದು. 




ಬೇಸಿಗೆಯಲ್ಲಿ ಇದು ಅತ್ಯಂತ ಪ್ರಸಿದ್ದ ಪ್ರವಾಸೀ ತಾಣ. ದೇಶ ವಿದೇಶಗಳಿಂದ ಸದಾ ಪ್ರವಾಸಿಗರು ಇಲ್ಲಿ ಬರುತ್ತಾರೆ. ಅವರಿಗಾಗಿಯೇ ಕಡಿಮೆ ದರದಲ್ಲಿ ತಿಂಗಳು ಗಟ್ಟಲೆ ಉಳಿಯಲು ಮನೆಗಳಿವೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಸೇರುವ ಎರಡು ಸಮುದ್ರಗಳ ಪೈಕಿ ಒಂದು ಬಿಸಿ ಆಗಿರುತ್ತದೆ, ಇನ್ನೊಂದು ತಣ್ಣಗಿದೆ. ಸೇರುವೆ ಜಾಗದಲ್ಲಿ ಕಾಲಿಟ್ಟರೆ ಬಿಸಿ ಹಾಗೂ ತಣ್ಣನೆಯ ಅನುಭವ ಒಮ್ಮೆಲೇ ಲಭಿಸುತ್ತದೆ. ಇದೊಂದು ರೋಚಕ ಅನುಭವ.

ಎರಡು ಸಮುದ್ರಗಳಲ್ಲಿ ಒಂದು ತಿಳಿ ನೀಲದಂತೆ ಕಂಡರೆ ಇನ್ನೊಂದು ಸ್ವಲ್ಪ ಬೇರೆಯೇ ಬಣ್ಣ ಇರುವಂತೆ ಗೋಚರಿಸುತ್ತದೆ. ಅತ್ಯಂತ ಸ್ಪಷ್ಟವಾಗಿ ಎರಡು ಸಮುದ್ರಗಳ ವ್ಯತ್ಯಾಸ ಗುರುತಿಸಬಹುದು.


ಸುಮಾರು ಹೊತ್ತು ಅಲ್ಲಿಯೇ ಕುಳಿತು ಕೊಂಡು ಸೂರ್ಯಾಸ್ತ ನೋಡುವ  ಮನಸ್ಸು ಇದ್ದರೂ ರಾತ್ರಿಯ ಹಡಗು ತಪ್ಪಿ ಹೋಗಬಾರದು ಎಂದು ಸ್ವಲ್ಪ ಹೊತ್ತು ಕುಳಿತು ನಂತರ ತಿರುಗಿ ಹೊರಟೆವು. ಅಲ್ಲಿಯೇ ಒಂದು ಅಂಗಡಿಯಲ್ಲಿ ಬಿಸಿಬಿಸಿ ಚಹಾ ಕುಡಿದು ನಂತರ ಒಬ್ಬ ಪುಣ್ಯಾತ್ಮ ಅದೇಗೋ ಯಾರಿಗೋ ಫೋನ್ ಮಾಡಿ ಒಂದು ಬಾಡಿಗೆ ಕಾರನ್ನು ತರಿಸಿಕೊಟ್ಟ. ಅವನಿಗೆ ಮನಸಿನಲ್ಲೇ ವಂದಿಸುತ್ತಾ ಕಾರಿನಲ್ಲಿ ರೈಲು ನಿಲ್ದಾಣದವರೆಗೆ ಬಂದು ನಂತರ ಸರಿಯಾದ ಸಮಯಕ್ಕೆ ಹಡಗನ್ನು ಹತ್ತಿದೆವು.
ಇಡೀ ದಿನದ ಸಾಹಸ ದೇಹಕ್ಕೆ ಬಹಳಷ್ಟು ದಣಿವನ್ನು ನೀಡಿತ್ತು. ಯಾರಿಗೂ ಹಡಗಿನಲ್ಲಿ ಆಡಲು ಮನಸ್ಸಿರಲಿಲ್ಲ.



 ಹಾಗೇ ಹೀಗೆ ನೋಡುತ್ತಿರುವಂತೆಯೇ ನಮ್ಮ ಊರು Gothenburg ಬಂದೆ ಬಿಟ್ಟಿತು.

ಪುನಃ ಮನೆಗೆ ಬಂದು ಸೇರುವಷ್ಟರಲ್ಲಿ ರಾತ್ರಿ 11-30. 

ಸಮುದ್ರದ ಸಂಗಮ ದ ವಿಹಂಗಮ ನೋಟ ಮನದಾಳದಲ್ಲಿ ಸಂಗಮವಾಗಿ ಸಂಗೀತದ ಸರಿಗಮಕ್ಕೆ ತಾಳವಾಗಿ, ವಾರದ ಕೊನೆಯ ಮನರಂಜನೆಯ ತಾಣವಾಗಿ, ಮರುದಿನದ ಕೆಲಸಕ್ಕೆ ಉತ್ಸಾಹದ ಚಿಲುಮೆಯಾಗಿ ಪುನಃ ಮತ್ತೊಮ್ಮೆ ಅಲ್ಲಿಗೆ ಹೋಗಬೇಕೆನ್ನುವ ಆಸೆಗೆ ನೀರೆರೆದಿತ್ತು.

ಸ್ನೇಹಿತರೆ, ನನ್ನೊಂದಿಗೆ ಪ್ರವಾಸ ಕಥನವನ್ನು ಓದಿದ ನಿಮ್ಮೆಲ್ಲರಿಗೂ ಕ್ರತಜ್ನತೆಗಳು. ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ

ಓದುತ್ತಿರಲ್ಲ....




Tuesday, April 20, 2010

ಮುಂದುವರಿದ Grenen ಪ್ರವಾಸ ಕಥನ, ಭಾಗ -2

ಕಳೆದ ವಾರದ ಸಂಚಿಕೆಯಲ್ಲಿ ಗ್ರೆನೇನ್ ಎಂಬ ಪ್ರದೇಶದ ಚಿಕ್ಕ ಮಾಹಿತಿಯ ಜೊತೆಗೆ ಹಡಗಿನ ಪ್ರಯಾಣದ ಬಗೆಗೆ ತಿಳಿಸಿದ್ದೆ (Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ http://gurumurthyhegde.blogspot.com/2010/04/blog-post.html). ಅನೇಕ ಬ್ಲಾಗ್ ಮಿತ್ರರು ಕಾಯಿಸಬೇಡಿ ಎಂದು ತಿಳಿಸಿದ್ದರಿಂದ ಇನ್ನೂ ಕಾಯಿಸುವುದು ಸರಿ ಅಲ್ಲವೆಂದು ನಿರ್ಧರಿಸಿ ಬೇಗನೆ ಬರೆದು ಹಾಕುತ್ತಿದ್ದೇನೆ :)

Gothenburg ನಿಂದ Frederikshavn ಗೆ ಹೊರಡುವ ಹಡಗಿನ ಪ್ರಯಾಣ  ಆರಂಬವಾಗಿದ್ದು 1983 ರಲ್ಲಿ. ಅನೇಕ ಲಾರಿಗಳಿಗೆ ಇದು ವರ ಕಾರಣ ಕೇವಲ ಮೂರೇ ತಾಸಿನಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಡಗು ಲಾರಿಗಳನ್ನು ತಲುಪಿಸುತ್ತದೆ. ಇಲ್ಲದಿದ್ದರೆ ಅವರು ಸುಮಾರು 15 ಘಂಟೆಗಳಷ್ಟು ರಸ್ತೆಯಲ್ಲಿ ಸಂಚರಿಸಬೇಕು. ಆದ್ದರಿಂದ ಹಡಗಿನ ಒಳಗೆ ಹೆಚ್ಚಾಗಿ ಲಾರಿ ಮಾಲೀಕರು, ಡ್ರೈವರ್ ಗಳು ತುಂಬಿರುತ್ತಾರೆ. ಅಷ್ಟೇ ಅಲ್ಲದೆ ಎಷ್ಟೋ ಪ್ರವಾಸಿಗರು ತಮ್ಮ ಕಾರನ್ನು ಹಡಗಿನಲ್ಲಿ ಹಾಕಿ, ನಂತರ ಡೆನ್ಮಾರ್ಕ್ ಮುಟ್ಟಿದ ಮೇಲೆ ಕಾರಿನಲ್ಲಿ ಮುಂದಿನ ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಇದರಿಂದ ಅವರ ಸಮಯ ಮಾತ್ರ ಉಳಿಯುವುದಿಲ್ಲ ಬದಲಿಗೆ ಪೆಟ್ರೋಲ್ ನ  ಹಣ ಉಳಿಯುತ್ತದೆ, ಐಶಾರಾಮಿ  ಹಡಗಿನಲ್ಲಿ ಕುಳಿತು ರುಚಿಯಾದ ಬಗೆ ಬಗೆಯ ಖಾದ್ಯ ಸೇವಿಸುತ್ತಾ, ವಿವಿದ ದೇಶದ ಪಾನೀಯಗಳನ್ನು ಹೀರುತ್ತಾ ಹೋಗುವ ಆ ಸುಖ ಕಾರಿನಲ್ಲಿ ಅವರಿಗೆ ಎಲ್ಲಿ ಸಿಗುತ್ತದೆ ಅಲ್ಲವೇ?


ಸುಮಾರು 155 ಮೀಟರ್ ಗಳಷ್ಟು ಉದ್ದದಾದ ಹಡಗು 550 ಕಾರುಗಳನ್ನು ಹೊತ್ತೊಯ್ಯುವಷ್ಟು ಸಮರ್ಥವಾಗಿದೆ. ಸುಮಾರು 2300 ರಷ್ಟು ಪ್ರಯಾಣಿಕರನ್ನು ಒಮ್ಮೆಲೇ ಹೊತ್ತೊಯ್ಯಬಹುದಾದ ಬ್ರಹತ್ ಹಡಗಿದು. ಇದರ ಹೊರಗಿನ ಮೈಮಾಟ ಎಷ್ಟು ಚಂದವೋ ಒಳಗಿನ ಒನಪು ವಯ್ಯಾರವೂ ಅಷ್ಟೇ ಮನೋಹರ. ನಿಮ್ಮ ದುಡ್ಡಿಗೆ ಸಂಚಕಾರ ನೀಡುವ ಅನೇಕ ಜೂಜು ಕೇಂದ್ರಗಳು (Casino Centre) ಇದರ ಒಳಗೆ ಇವೆ. ಮಕ್ಕಳ ಆಟದಿಂದ ಹಿಡಿದು ಟೇಬಲ್ ಟೆನ್ನಿಸ್ ನಂತಹ ಆಟಗಳು ಇದರೊಳಗೆ ಹೇರಳವಾಗಿವೆ. ಇಲ್ಲಿ ಜನ ಕುಳಿತಿರುವುದಕ್ಕಿಂತ ಒಂದಿಲ್ಲೊಂದು ಆಟದಲ್ಲಿ, ಜೂಜಾಡುತ್ತ ಇರುವುದೇ ಹೆಚ್ಚು. ವಾತಾವರಣ ಚೆನ್ನಾಗಿದ್ದರೆ ಹಡಗಿನ ಮೇಲೆ ಹೋಗಿ ಸುತ್ತಲೂ ಇರುವ ನೀಲಾಕಾಶ, ಬ್ರಹತ್ ಸಮುದ್ರದ ಸೌಂದರ್ಯವನ್ನು ಸವಿಯಬಹುದು. 

                                        

ನೀಲಾಕಾಶದ ನೀಲಿಯಿಂದಾಗಿ ಸಮುದ್ರದ ನೀರು ಅಚ್ಚ ನೀಲಿ ಸೀರೆ ಉಟ್ಟ ಬೆಡಗಿಯಂತೆ ತೋರುತ್ತದೆ. ಪ್ರಕ್ರತಿ, ಸೌಂದರ್ಯಕ್ಕೆ ಎಷ್ಟು ಹೆಸರುವಾಸಿಯೋ ಹಾಗೆಯೇ ಮಾನವನ ಅಹಂಕಾರ ಮುರಿಯುವಲ್ಲಿಯೂ ಅಷ್ಟೇ ಹೆಸರುವಾಸಿ. ಮನುಷ್ಯ ತಾನೆಷ್ಟೇ ದೊಡ್ಡವನಾದರೂ ಪ್ರಕ್ರತಿಯ  ಮುಂದೆ ಕುಬ್ಜನೆ. ನಾವು ಆಕಾಶದಲ್ಲಿ ಹಾರುವ ವಿಮಾನ ಸೃಷ್ಟಿಸಬಹುದು. ಆದರೆ ಜ್ವಾಲಾಮುಖಿಯ ಹೊಗೆಯಿಂದ ವಿಮಾನವನ್ನು ರಕ್ಷಿಸಲು ಸಾದ್ಯವಿಲ್ಲ. ಯೂರೋಪಿನ ಅದೆಷ್ಟೋ ವಿಮಾನ ನಿಲ್ದಾಣಗಳಲ್ಲಿ ಲಕ್ಷಾಂತರ ಜನರು ತಮ್ಮ ಮನೆಗೆ ಯಾವಾಗ ಸೇರುತ್ತೆವೋ ಎಂಬ ಆತಂಕದಲ್ಲಿದ್ದಾರೆ. ಪ್ರಕ್ರತಿಯ ನಡೆ ವಿಚಿತ್ರ, ಅದನ್ನು ಅರಿಯಲು ಯಾರಿಂದಲೂ ಸಾದ್ಯವಿಲ್ಲ. ಅಲ್ಲವೇ?

ಹೀಗೆ ಪ್ರಕ್ರತಿಯ ಬಗೆಗೆ ವಿಚಾರಿಸುತ್ತಾ ಹಡಗಿನ ಮೇಲೆ ಬಂದು ನಿಂತು ಸೌಂದರ್ಯ ಸವಿಯತೊಡಗಿದೆವು.  ವಿಪರೀತ ಗಾಳಿ, ಹಾಗೂ 8 ಡಿಗ್ರಿ ಯಷ್ಟು ಉಷ್ಣತೆ ಯಿಂದಾಗಿ ನಾವು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗಲಿಲ್ಲ. ಆದರೂ ಹುಚ್ಚಾಟಕ್ಕೆನೂ ಕಡಿಮೆಯಿರಲಿಲ್ಲ.
                                   

ಹಡಗಿನ ಒಳಗೆ ಬಂದು ನಾವು ಸ್ವಲ್ಪ ಹೊತ್ತು ಜೂಜನ್ನು ಆಡಿದೆವು.


                                    

 ಹೇಳಿಕೊಳ್ಳುವಂಥ ಲಾಭ ಬರದಿದ್ದರೂ ಒಂದು ಒಳ್ಳೆಯ ಅನುಭವ ಲಭಿಸಿತು. ನಾವು ಶಾಖಾಹಾರಿಗಳಿಗೆ ಆಹಾರದ್ದೆ ಸಮಸ್ಯೆ. ಎಲ್ಲಿ ಹೋದರೂ ನಮಗೆ ಬೇಕಾದ ಆಹಾರ ಸಿಗದೇ ಇದ್ದಿದ್ದರಿಂದ ಹೋಗುವಲ್ಲಿ ಎಲ್ಲ ಸ್ವಲ್ಪ ಆಹಾರ ತೆಗೆದುಕೊಂಡು ಹೋಗಲೇಬೇಕಾಗುತ್ತದೆ. ಮುದ್ದಿನ ಮಡದಿ ಹಿಂದಿನ ದಿನ ರಾತ್ರಿಯೆಲ್ಲ ನಿದ್ದೆ ಗೆಟ್ಟು ಮಾಡಿದ್ದ ತಿಂಡಿಯನ್ನು ಹಡಗಿನಲ್ಲಿ ತಿಂದು ಪುನಃ  ಸ್ವಲ್ಪ ಹೊತ್ತು ಇಸ್ಪೀಟ್ ಆಡುವಷ್ಟರಲ್ಲಿ 3ಘಂಟೆ ಕಳೆದೇ ಹೋಯಿತು. ನಾವು ಸೇರಬೇಕಾದ ಜಾಗ Frederikshavn  ಬಂದೆ ಬಿಟ್ಟಿತು.  

ಇನ್ನೊಂದು ವಿಚಾರ ಹೇಳಲೇಬೇಕು, ಇಷ್ಟೆಲ್ಲಾ ವ್ಯವಸ್ಥೆ ನೀಡುವ ಹಡಗಿನ ಟಿಕೆಟ್ ಬೆಲೆ ಕೇವಲ ೬೫೦ ರೂಪಾಯಿಗಳು. ಇಲ್ಲಿನ ಹಣಕ್ಕೆ ಹೋಲಿಸದರೆ ಇದು ತುಂಬಾ ತುಂಬಾ ಕಡಿಮೆ. ಕೇವಲ ಹಣದ ಆಸೆಗೊಂದೆ ಹಡಗು ಇರದೇ ಇಲ್ಲಿನ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿಯೂ ಅದರ ಪಾತ್ರ ಬಹಳ ದೊಡ್ಡದು. ಹಾಗಾಗಿ ಇಲ್ಲಿಗೆ ಬಂದ ಎಲ್ಲರೂ ಹಡಗಿನ ಪ್ರಯಾಣ ಮಾಡಿಯೇ ಹೋಗುತ್ತಾರೆ. ಪ್ರಕ್ರತಿ ವಿಕೋಪ ಎದುರಾದರೆ ನಿಮ್ಮನ್ನು ರಕ್ಷಿಸಲು ಪರ್ಯಾಯ ವ್ಯವಸ್ಥೆಯೂ ಇದೆ.

                                        

Frederikshavn ದಲ್ಲಿ ಇಳಿದ ಮೇಲೆ ಅಲ್ಲಿಂದ ನೇರ ರೈಲು ನಿಲ್ದಾಣಕ್ಕೆ ನಡೆದವು. ಅಲ್ಲಿಂದ ಸುಮಾರು ೨೦ ನಿಮಿಷಗಳು ಕಾಲ ನಡೆದರೆ ರೈಲು ನಿಲ್ದಾಣ ಬರುತ್ತದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿದ ಸುಂದರ ಹೂಗಳು ಮನಸೂರೆಗೊಂಡವು. 
                                        

ಹಾಗೆಯೇ ನಡೆಯುತ್ತಿರಬೇಕಾದರೆ ಅಲ್ಲಿನ ೧೨೫ ವರ್ಷಗಳಷ್ಟು ಹಳೆಯದಾದ ಚರ್ಚ್ ಗೋಚರಿಸಿತು. ಇದನ್ನು ೧೮೯೨ ರಲ್ಲಿ ಖ್ಯಾತ ಶಿಲ್ಪಿ (Architect) ವಿ.ಅಹ್ಲ್ಮಂನ್ ಎಂಬಾತ ಸಂಪೂರ್ಣ ರೋಮನ್ ಶೈಲಿಯಲ್ಲಿ  ಕೇವಲ Lime Stone ಗಳನ್ನು ಉಪಯೋಗಿಸಿ ಕಟ್ಟಿದ್ದಾನಂತೆ. ಇಲ್ಲಿಯೇ ಸ್ವಲ್ಪ ಹೊತ್ತು ನಿಂತು ಕೆಲವು ಫೋಟೋ ತೆಗೆದುಕೊಂಡು ರೈಲು ನಿಲ್ದಾಣದ ಬಳಿಗೆ ಹೆಜ್ಜೆ ಹಾಕಿದೆವು.


                                                       

ರೈಲು ನಿಲ್ದಾಣ ತಲುಪುವಷ್ಟರಲ್ಲಿ ನಮ್ಮ ಅದೃಷ್ಟಕ್ಕೆ ರೈಲು ಹೊರತು ಹೋಗಿತ್ತು . ಮುಂದಿನ ರೈಲು ಬರಲು ೧ ಘಂಟೆ ಕಾಯಬೇಕು ಎಂದು ತಿಳಿಯಿತು. ರೈಲಿನ ಟಿಕೆಟ್ ತೆಗೆದುಕೊಂಡು ಅಲ್ಲಿಯೇ ನಿಲ್ದಾಣದ ಹೊರಗಿನ ಪಾರ್ಕಿನಲ್ಲಿ ಕುಳಿತು ಊಟ ಮಾಡಿದೆವು. ಊಟ ಮಾಡಿ ಬರುವಷ್ಟರಲ್ಲಿ ರೈಲು ನಮಗಾಗಿ ಕಾದು ನಿಂತಿತ್ತು. 


                                     

ಇಲ್ಲಿಂದ ನಮ್ಮ ಪ್ರಯಾಣ ಡೆನ್ಮಾರ್ಕಿನ ಉತ್ತರ ಭಾಗದ ತುತ್ತತುದಿಯ ನಗರ Skagen ಎಂಬ ನಗರಕ್ಕೆ. ಸುಮಾರು 40 ನಿಮಿಷ ನಿಸರ್ಗದ ಸೌಂದರ್ಯ ಸವಿಯುತ್ತಾ Skagen ತಲುಪಿದಾಗ ಮಧ್ಯಾನ್ಹ 3  ಘಂಟೆ ಆಗಿತ್ತು. 


                                              
Skagen ನಗರಕ್ಕೆ  ಅದರದೇ  ಆದ  ಭವ್ಯ  ಇತಿಹಾಸವಿದೆ, ಸುಮಾರು 1870 ಮತ್ತು 1880 ರ ಸಮಯದಲ್ಲಿ ಯೂರೋಪಿನ ಹಲವಾರು ಚಿತ್ರಕಾರರಿಗೆ ಇದೊಂದು ಸ್ವರ್ಗವಾಗಿತ್ತು. ಇಲ್ಲಿಂದ ಸುಮಾರು 5  km ನಡೆದರೆ ಸಿಗುವುದೇ Grenen ಎಂಬ ತುತ್ತ ತುದಿ. Kattegatt ಮತ್ತು 
  Skagerrak ಎಂಬ ಎರಡು ಸಮುದ್ರಗಳು ಸೇರುವ ಮನಮೋಹಕ ಪ್ರದೇಶವಿದು. ವಿಶಾಲವಾದ ಸಮುದ್ರ, ಸುಂದರ ಬೀಚ್, ಮನಮೋಹಕ ಪರಿಸರ, ಸೃಷ್ಟಿಯೇ ಇಲ್ಲಿ ಹುಟ್ಟಿತೆ ಎಂಬಂತೆ ಭಾಸವಾಯಿತು. ಇಲ್ಲಿನ ಚಿತ್ರ ವಿಚಿತ್ರ ವಾದ ಆಕಾಶದ ಬಣ್ಣಗಳು ನಮಗೆ ಇಷ್ಟೊಂದು ಮುದ ನೀಡಬೇಕಾದರೆ ಎಂಥಹುದೇ ಕಲಾಕಾರನಿಗೂ ಸಹಜವಾಗಿ ಚಿತ್ರ ಬಿಡಿಸಲು ಉತ್ತೇಜನ ನೀಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇದರ ಬಗ್ಗೆ ಎಷ್ಟು ಹೇಳಿದರೂ ತೀರದು. ಹೇಳಿದಷ್ಟು ಇನ್ನಷ್ಟು ಹೇಳಬೇಕೆನಿಸುವ ಪ್ರದೇಶವಿದು. ಇಲ್ಲಿನ ಸುಂದರ ಸಮುದ್ರ ತೀರ, ಅವುಗಳ ಹಿಂದಿನ ಕಥೆ, ಇವೆಲ್ಲವುಗಳೊಂದಿಗೆ ಮುಂದಿನ ವಾರ ಮತ್ತೆ ಸಿಗುತ್ತೇನೆ. ಅಲ್ಲಿಯವರೆಗೆ ಕಾಯುತ್ತಿರಲ್ಲ?

ನಿಮ್ಮವ ಗುರು


Sunday, April 11, 2010

Grenen- - ಡೆನ್ಮಾರ್ಕ್ ದೇಶದ ಉತ್ತರಭಾಗದ ತುತ್ತ ತುದಿ

ಐರೋಪ್ಯ ದೇಶಗಳಲ್ಲಿ ಇರುವಾಗ ರಜಾ ದಿನಗಳಲ್ಲಿ ಏನು ಮಾಡುವುದು ಎಂದು ವಿಚಾರಿಸುವ ಅಗತ್ಯವಿಲ್ಲ, ಆದರೆ ಎಲ್ಲಿಗೆ ಹೋಗುವುದು ಎಂಬುದೇ ಸಮಸ್ಯೆ ಆಗುತ್ತದೆ. ಕಾರಣ ಇಲ್ಲಿನ ಪ್ರತಿಯೊಂದು ಪ್ರದೇಶವೂ ರಮಣೀಯ, ಸುಮನೋಹರ. ಪ್ರಕ್ರತಿಯೇ ಮೈ ವೆತ್ತಂತೆ ಇರುವ ಇಲ್ಲಿನ ನಿಸರ್ಗ ಎಂಥವರನ್ನೂ ಮಂತ್ರ ಮುಗ್ಧಗೊಳಿಸುತ್ತದೆ. ಅದರಲ್ಲೂ ನಿಸರ್ಗವನ್ನು ದೇವರಂತೆ ಪೂಜಿಸುವ Scandinavian ದೇಶಗಳ ಸೌಂದರ್ಯ ಹೇಳಲಸದಳ. ಇವರು ಪ್ರಕ್ರತಿಗೆ ನೀಡುವ ಬೆಲೆ ನಿಜಕ್ಕೂ ಸೋಜಿಗಗೊಳಿಸುತ್ತದೆ. ಅದಕ್ಕಾಗಿಯೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ. ಇಂಥಹ ಒಂದು ಅದ್ಭುತ ಪ್ರದೇಶ ಗ್ರೆನೇನ್. ಡೆನ್ಮಾರ್ಕ್ ಎಂಬ ಸಂಪಧ್ಬರಿತ ದೇಶದ ಉತ್ತರಭಾಗದ ತುತ್ತ ತುದಿಯೇ ಗ್ರೆನೇನ್.
ಚಿತ್ರವನ್ನು ನೋಡಿ, ಎರಡೂ ಸಮುದ್ರಗಳು ಸಂಧಿಸುವ ಜಾಗವಿದು. ಸುಮಾರು 5 km ಗಳಿಗಿಂತ ಉದ್ದದ ವಿಶಾಲ್ ಬೀಚ್ ಎಂಥವರನ್ನೂ ಮಂತ್ರ ಮುಗ್ಧ   ಗೊಳಿಸುತ್ತದೆ. ಇಂಥಹ ಅದ್ಭುತ ಪ್ರದೇಶಕ್ಕೆ ನಾವು 5 ಜನ ಸ್ನೇಹಿತರು  ಸೇರಿ ಪ್ರವಾಸ ಹೊರಟೆವು. ಪ್ರವಾಸದ ಒಂದೊಂದು ಕ್ಷಣವೂ ರೋಮಾಂಚನೀಯ ವಾಗಿತ್ತು.  Gothenburg ನಿಂದ  ಬೆಳಿಗ್ಗೆ 9 ಘಂಟೆಗೆ ಬ್ರಹದಾಕಾರದ ಹಡಗಿನಲ್ಲಿ ಹೊರಟ ನಾವು ಅದೇ ದಿನ ರಾತ್ರಿ  12 ಘಂಟೆಗೆ ಪುನಃ ಬಂದು Gothenburg ಸೇರಿದೆವು. ಒಂದು ದಿನದ ಪ್ರವಾಸ ಕೇವಲ ಮನಸ್ಸಿಗೆ ನೆಮ್ಮದಿ ಅಷ್ಟೇ ಅಲ್ಲ ನಿಸರ್ಗದ ಬಗೆಗೆ ವಿಶೇಷ ಗೌರವವನ್ನೂ ನೀಡಿತು. ಮಾನವ ಎಷ್ಟೇ ದೊಡ್ಡವನಾದರೂ ನಿಸರ್ಗದ ಮುಂದೆ ತುಂಬಾ ಕುಬ್ಜ ವ್ಯಕ್ತಿ ಅನ್ನುವುದು ಸುಳ್ಳಲ್ಲ. ವಿಶಾಲ ಸಮುದ್ರದ ಮುಂದೆ ನಿಂತಾಗ ನಮ್ಮಲ್ಲಿನ ಅಹಂಕಾರ, ಸಿಟ್ಟು, ಕೋಪ ಎಲ್ಲವೂ ಮಾಯವಾಗುತ್ತದೆ. ನಮ್ಮ ಬಗ್ಗೆ ನಮಗೆ ಇರುವ ಪೊಳ್ಳು ಪ್ರತಿಷ್ಠೆ ಎಲ್ಲ ಮಾಯವಾಗುತ್ತದೆ. ಎರಡು ಸಮುದ್ರಗಳು ಸಂಧಿಸುವ ಆ ಜಾಗ ಐತಿಹಾಸಿಕವಾಗಿಯೂ ತುಂಬಾ ಮಹತ್ವಪೂರ್ಣ ವಂತೆ.

ಒಮ್ಮೆಲೇ ಆ ಜಾಗದ ಬಗೆಗೆ ತಿಳಿಸುವ ಬದಲಿಗೆ ನಿಮ್ಮನ್ನೂ ನನ್ನೊಂದಿಗೆ ಹಡಗಿನಲ್ಲಿ ಕರೆದೊಯ್ಯುತ್ತೇನೆ. ನನ್ನ ಅನುಭವಗಳೊಂದಿಗೆ ನಿಮ್ಮನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ರಮಣೀಯ ಸ್ಥಳಗಳ ಪರಿಚಯದ ಪ್ರಯತ್ನ ವಿದು.
ಬೆಳಿಗ್ಗೆ ೯ ಘಂಟೆಗೆ ನಾವು 5 ಜನ (ನಾನು, ನನ್ನ ಹೆಂಡತಿ, ಮತ್ತು ಮೂವರು ನನ್ನ ಮಿತ್ರರು) ಸೇರಿ Gothenburg ನಿಂದ ಪ್ರಯಾಣ ಹೊರಟೆವು. ಇಲ್ಲಿಂದ ರೈಲಿನಲ್ಲಿ ಹೋದರೆ ಬಹುಷ: 10 ತಾಸುಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು. ಆದರೆ ಪ್ರತಿದಿನ ಇಲ್ಲಿಂದ ಹಡಗು ಡೆನ್ಮಾರ್ಕಿನ ಫ್ರೆಡ್ರಿಕ್ ಶಾವ್ನ್  ಎಂಬ ಜಾಗಕ್ಕೆ ಹೋಗುತ್ತದೆ. ಇದು ತೆಗೆದುಕೊಳ್ಳುವ ಸಮಯ ಕೇವಲ 3 ಘಂಟೆ. ಆದರೆ ಹಡಗಿನ ಪ್ರಯಾಣ ಮಾತ್ರ ಜೀವನದಲ್ಲೇ ಮರೆಯಲಾರದ್ದು. ಆ ಬ್ರಹದಾಕಾರದ ಹಡಗು, ಅದರಲ್ಲಿನ ವ್ಯವಸ್ಥೆ ಎಲ್ಲವೂ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ.




ಇಲ್ಲಿನ ಹಡಗಿನ ಒಳಗೆ ಒಂದು ಅದ್ಭತ ಮಾಯಾ ಲೋಕವಿದೆ, ಓದಲು ಪುಸ್ತಕವಿದೆ, ಆಡಲು ನೂರಾರು ಆಟಗಳಿವೆ, ಹಣ ಮಾಡಲು, ಕಳೆಯಲು ಜೂಜು ಕೇಂದ್ರಗಳಿವೆ, ತಿನ್ನಲು ರುಚಿ ರುಚಿಯಾದ ತಿಂಡಿ ತಿನಿಸುಗಳಿವೆ, ಕುಡಿಯಲು ನೂರಾರು ಬಗೆಯೇ ಪಾನೀಯಗಳಿವೆ, ವಿರಮಿಸಲು ರೂಂ ಗಳಿವೆ.



 ಕಣ್ಣಿಗೆ ಸೌಂದರ್ಯ ನೀಡಲು ವಿಶಾಲ ಸಮುದ್ರ ಸುತ್ತಲೂ ಇದ್ದೇ ಇರುತ್ತದೆ. 



ಒಟ್ಟಿನಲ್ಲಿ ಇದೊಂದು ವಿಭಿನ್ನ ಅನುಭವದ ಪ್ರಯಾಣ.

ಹಡಗಿನ ಬಗೆಗೆ, ಅಲ್ಲಿನ ಅನುಭವಗಳ ಬಗೆಗೆ, ಗ್ರೆನೇನ್ ಎಂಬ ಮಾಯಾ ಜಾಗದ ಬಗೆಗೆ ಇನ್ನೂ ಹೆಚ್ಚಿನ ವಿವರಣೆಯೊಂದಿಗೆ  ಮುಂದಿನ ವಾರ ಬರುತ್ತೇನೆ. ಅಲ್ಲಿಯವರೆಗೆ ನೀವು ಕಾಯಲೇಬೇಕು, ನಾನು ಕಾಯಿಸಲೇಬೇಕು :)